ಸೋಮವಾರ, ಡಿಸೆಂಬರ್ 12, 2011

ಪರಿಣಾಮಕಾರಿ ಆಡಳಿತಕ್ಕಾಗಿ ಕನ್ನಡದಲ್ಲಿ ತಂತ್ರಜ್ಞಾನ

ಆತ್ಮೀಯ ಗೆಳೆಯರೇ,

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನೆರೆವೇರಿದೆ. ಅಲ್ಲಿ ಕಳೆದ ಮೂರು ದಿನಗಳಲ್ಲಿ ಅಲ್ಲಿಯ ಜನರೊಂದಿಗೆ ಹೆಚ್ಚು ಬೆರೆಯಲು ಸಾಧ್ಯವಾಯಿತು. ಇದ್ದಷ್ಟು ದಿನ ಅಲ್ಲಿನ ಜನರ ಜೊತೆ ಬೆರೆತು ಅಲ್ಲಿಯ ಸಾಮಾಜಿಕ ಒಳನೋಟ ಪಡೆಯಲು ಸ್ವಲ್ಪ ಮಟ್ಟಿಗೆ ಸಾಧ್ಯವಾಗಿದೆ. ಇದರ ಜೊತೆಗೆ ಈ ಮೊದಲೇ ತಿಳಿಸಿದಂತೆ “ಆಧುನಿಕ ಜಗತ್ತು ಮತ್ತು ಕನ್ನಡ” ಅನ್ನುವ ವಿಚಾರ ಗೋಷ್ಠಿಯಲ್ಲಿ “ಪರಿಣಾಮಕಾರಿ ಆಡಳಿತಕ್ಕಾಗಿ ಕನ್ನಡ ತಂತ್ರಜ್ಞಾನ” ಅನ್ನುವ ವಿಷಯದ ಕುರಿತು ನನ್ನ ಅನಿಸಿಕೆಗಳನ್ನು ಹಂಚಿಕೊಂಡೆ, ಈ ವಿಷಯಕ್ಕೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು. ನನ್ನ ಭಾಷಣದ ಸಾರಾಂಶವನ್ನು ನಿಮ್ಮ ಜೊತೆಗೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನಾನು ಮಾತನಾಡಿದ್ದು ನನ್ನದೇ ಊರಿನ (ಉತ್ತರ ಕರ್ನಾಟಕ) ಶೈಲಿಯಲ್ಲಿದ್ದರೂ, ಬರಹವನ್ನು ಎಲ್ಲರ ಕನ್ನಡದಲ್ಲಿ ಬರೆದಿದ್ದೇನೆ. ಇದನ್ನ ಓದಿ, ಖಂಡಿತವಾಗಿಯೂ ನಿಮ್ಮ ಅಭಿಪ್ರಾಯವನ್ನು ತಿಳಿಸಿ...












ಆಡಳಿತ ಅಂದರೇನು?

ಒಬ್ಬ ಸಾಮಾನ್ಯ ಮನುಷ್ಯನಿಗೆ ಅವನ ದಿನ ನಿತ್ಯದ ಬದುಕಿನಲ್ಲಿ ಜೀವನದ ಬೇರೆ ಬೇರೆ ಅಗತ್ಯಗಳ ಈಡೇರಿಕೆಗಾಗಿ ಅವನು ಒಡನಾಡುವ ಸರ್ಕಾರಿ ವ್ಯವಸ್ಥೆಗಳು ಆತನ ಬೇಡಿಕೆಗಳನ್ನು ಸಮರ್ಪಕವಾಗಿ ಪೂರೈಸುವಂತಾಗುವುದನ್ನೇ  ಆಡಳಿತ ಎಂದು ಕರೆಯಬಹುದು. ಒಂದು ಚಿಕ್ಕ ಉದಾಹರಣೆಗೆ ಕೊಪ್ಪಳ ಪಕ್ಕದ ಹಳ್ಳಿಯೊಂದರ ಮಲ್ಕಪ್ಪ ಎಂಬ ಸಾಮಾನ್ಯ ರೈತ ಒಂದು ಸಾಮಾನ್ಯ ದಿನದಲ್ಲಿ ವ್ಯವಸ್ಥೆಯ ಜೊತೆ ಹೇಗೆಲ್ಲ ಒಡನಾಡಬಹುದು? ಆತ ಬೆಳಿಗ್ಗೆ ಎದ್ದು ಪಟ್ಟಣಕ್ಕೆ ಬರಲು ಬೇಕಿರುವ ಬಸ್ಸು, ಅಂಚೆ ಇಲ್ಲವೇ ಬ್ಯಾಂಕಿನಲ್ಲಿ ಅವನ ಬೆಳೆಗೆ ಬೇಕಿರುವ ಹಣಕಾಸಿನ ಸೌಲಭ್ಯ, ತಹಶಿಲ್ದಾರ ಕಚೇರಿಯಲ್ಲಿ ಅವನಿಗೆ ಬೇಕಿರುವ ತನ್ನ ಆಸ್ತಿಯ ಖಾತಾ, ಪಡಿತರ ಅಂಗಡಿಯಲ್ಲಿ ಸಿಗಬೇಕಿರುವ ಸೀಮೆ ಎಣ್ಣೆ, ಅಕ್ಕಿ, ಗೋಧಿ, ಕೃಷಿ ಮಾರುಕಟ್ಟೆಯಲ್ಲಿ ಬೆಳೆದ ಬೆಳೆ ಮಾರಲು ಬೇಕಿರುವ ಸಹಾಯ ಹೀಗೆ ಒಂದು ಸಾಮಾನ್ಯ ದಿನದ ಬೇಡಿಕೆಗಳೆಲ್ಲವನ್ನೂ ಅವನಿಗೆ ಸಮಾಧಾನ ತರುವಂತೆ ಪೂರೈಸುವಂತಹ ವ್ಯವಸ್ಥೆಯನ್ನು ಕಟ್ಟುವುದು ಮತ್ತು ಆ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುವಂತೆ ನಿಗಾ ವಹಿಸುವುದನ್ನೇ ಆಡಳಿತ ಎಂದು ಕರೆಯಬಹುದು.

ಪರಿಣಾಮಕಾರಿ ಆಡಳಿತ ಎಂದರೇನು?

ಒಬ್ಬ ಸಾಮಾನ್ಯ ನಾಗರೀಕನ ಬೇಕು ಬೇಡಗಳನ್ನು ಯಾವುದೇ ತಾರತಮ್ಯವಿಲ್ಲದೇ, ಗೊಂದಲಗಳಿಲ್ಲದೇ, ಸರಿಯಾದ ಸಮಯಕ್ಕೆ, ಒಳ್ಳೆಯ ಗುಣಮಟ್ಟ ಮತ್ತು ಹೊಣೆಗಾರಿಕೆಯೊಂದಿಗೆ ಪೂರೈಸುವುದನ್ನೇ ಪರಿಣಾಮಕಾರಿ ಆಡಳಿತ ಅನ್ನಬಹುದು. ಪರಿಣಾಮಕಾರಿ ಆಡಳಿತದಲ್ಲಿ ಜನರೇ ಕೇಂದ್ರ ಬಿಂದು, ಅವರ ಬೇಕು-ಬೇಡಗಳ ಸುತ್ತಲೇ ವ್ಯವಸ್ಥೆಯ ಎಲ್ಲ ಅಂಗಗಳು ರೂಪುಗೊಂಡಿರುತ್ತವೆ. ಆಡಳಿತ ವ್ಯವಸ್ಥೆಯು ನಾಗರೀಕರ ಅನುಕೂಲಕ್ಕಾಗಿ ತನ್ನ ಸೇವೆಗಳನ್ನು ಹಾಗೂ ಸೌಲಭ್ಯಗಳನ್ನು ರೂಪಿಸುವ, ಬದಲಾಯಿಸುವ ಹಾಗೂ ಒದಗಿಸುವ ಪ್ರಾಮಾಣಿಕ ಕೆಲಸ ಮಾಡುತ್ತದೆ. ಈ ಸಂಬಂಧದಲ್ಲಿ ಜನರ ಅಪೇಕ್ಷೆಗಳು ದೃಷ್ಟಿಕೋನಗಳಿಗೆ ಅತೀ ಹೆಚ್ಚಿನ ಮಾನ್ಯತೆಯಿರುತ್ತೆ.  ಸಂಕ್ಷಿಪ್ತವಾಗಿ ಹೇಳುವುದಾದರೆ ಪರಿಣಾಮಕಾರಿ ಆಡಳಿತದ ಮುಖ್ಯ ಗುಣಲಕ್ಷಣಗಳು:
  • ಜನರ ಅಪೇಕ್ಷೆಗಳಿಗೆ ಸ್ಪಂದಿಸುವಂತದ್ದು.
  • ಜನರೆಡೆಗೆ ಉತ್ತರದಾಯಿತ್ವ ಹೊಂದಿರುವಂತದ್ದು
  • ಅತ್ಯಂತ ಚುರುಕಾಗಿ, ಕಡಿಮೆ ಸಮಯಯಲ್ಲಿ ಯಾವುದೇ ಬೇಡಿಕೆಯನ್ನು ಈಡೇರಿಸುವಂತದ್ದು
  • ಎಲ್ಲ ಹಂತದಲ್ಲೂ ಪಾರದರ್ಶಕತೆಯನ್ನು ಕಾಯ್ದುಕೊಂಡಿರುವಂತದ್ದು
  • ವ್ಯವಸ್ಥೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು, ಸಮ ನೆಲೆಯ ಸಂಬಂಧವನ್ನು ಉತ್ತೇಜಿಸುವಂತದ್ದು
  • ಭ್ರಷ್ಟಾಚಾರಕ್ಕೆ ಎಡೆಯಿರದ್ದು
ಮೇಲಿನ ಉದಾಹರಣೆಯಲ್ಲಿ ಹೇಳಿದ ರೈತ ಮಲ್ಕಪ್ಪನಿಗೆ ತನ್ನೆಲ್ಲ ಅಗತ್ಯಗಳನ್ನು ಕಡಿಮೆ ಸಮಯದಲ್ಲಿ, ಪಾರದರ್ಶಕವಾಗಿ, ಒಳ್ಳೆಯ ಗುಣಮಟ್ಟದಲ್ಲಿ ಪಡೆಯುವಂತಾದರೆ ಅಂತಹ ವ್ಯವಸ್ಥೆ ಪರಿಣಾಮಕಾರಿಯಾದ ಆಡಳಿತ ನೀಡುತ್ತಿದೆ ಅನ್ನಬಹುದು. ಯಾವ ವ್ಯವಸ್ಥೆಯ ಸೇವೆಗಳಿಂದ ಒಬ್ಬ ನಾಗರೀಕನಾಗಿ ಆತನಿಗೆ ತನ್ನೆಲ್ಲ ಬದುಕಿನ ಅಗತ್ಯಗಳನ್ನು ಅತ್ಯಂತ ಸುಲಭವಾಗಿ, ತಡೆಯಿಲ್ಲದೇ, ಗೊಂದಲವಿಲ್ಲದೇ ಪೂರೈಸಿಕೊಳ್ಳಲು ಆಗುತ್ತಿದೆಯೋ ಮತ್ತು ಅಂತಹ ವ್ಯವಸ್ಥೆ ಆತನಲ್ಲಿ ತಾನೂ ಕೂಡ ಈ ವ್ಯವಸ್ಥೆಯ ಭಾಗವೆಂಬ ಭಾವವನ್ನು ತುಂಬುತ್ತದೆಯೋ ಅಂತಹ ವ್ಯವಸ್ಥೆ ನಿಜಕ್ಕೂ ಪರಿಣಾಮಕಾರಿಯಾದ ಆಡಳಿತ ನೀಡುತ್ತಿದೆ ಅನ್ನಬಹುದು.

ಪರಿಣಾಮಕಾರಿ ಆಡಳಿತಕ್ಕೆ ತಂತ್ರಜ್ಞಾನ ಹೇಗೆ ಸಹಾಯಕ?(-ಆಡಳಿತ)

ಮೇಲೆ ತಿಳಿಸಿದ ಹಲ ಮಾನದಂಡಗಳ ಅನುಸಾರ ಆಡಳಿತ ನಡೆಸುವಂತಾಗಲು ತಂತ್ರಜ್ಞಾನದಲ್ಲಾಗಿರುವ ಬದಲಾವಣೆಗಳನ್ನು ಅತ್ಯಂತ ಸಮರ್ಥವಾಗಿ ಜಗತ್ತಿನ ಹಲವಾರು ದೇಶಗಳು ಬಳಸಿಕೊಳ್ಳುತ್ತಿವೆ. ನಮ್ಮ ನಾಡಿನ ಉದಾಹರಣೆಯನ್ನೇ ತೆಗೆದುಕೊಂಡರೆ ಸುಮಾರು ೧೦-೧೫ ವರ್ಷಗಳ ಹಿಂದಿನ ಆಡಳಿತ ಯಂತ್ರದೊಡನೆ ಜನರ ಒಡನಾಟದ ಅನುಭವಕ್ಕೂ ತಂತ್ರಜ್ಞಾನದ ಬಳಕೆಯ ಇವತ್ತಿನ ದಿನದ ಅನುಭವಕ್ಕೂ ಗೋಚರಿಸುವಂತಹ ಬದಲಾವಣೆಗಳಿವೆ. ಹಿಂದೆ ಒಂದು ಚಿಕ್ಕ ಕೆಲಸವಾಗಬೇಕಾದರೂ ವಾರಗಟ್ಟಲೆ ಕಾಯುವ ಪ್ರಸಂಗವಿತ್ತು. ಕಳಪೆ ಸೇವೆ, ಭ್ರಷ್ಟಾಚಾರ, ಹೀಗೆ ಸಾಲು ಸಾಲು ಸಮಸ್ಯೆಗಳ ಮಧ್ಯೆ ಆಡಳಿತ ಅನ್ನುವುದು ಜನರನ್ನು ಬಿಟ್ಟು ಕಟ್ಟಿಕೊಂಡ ಕೋಟೆ ಎಂಬಂತಿತ್ತು. ಇದು ಸಂಪೂರ್ಣವಾಗಿ ಬದಲಾಗದಿದ್ದರೂ ೧೦-೧೫ ವರ್ಷಗಳ ಹಿಂದಿಗಿಂತ ಸಾಕಷ್ಟು ಸಹನೀಯವಾಗಿದೆ ಮತ್ತು ಇಂತಹದೊಂದು ಬದಲಾವಣೆಯಲ್ಲಿ ತಂತ್ರಜ್ಞಾನದ ಪಾತ್ರ ಹಿರಿದಿದೆ. ಒಂದಿಷ್ಟು ಉದಾಹರಣೆಯೊಂದಿಗೆ ಇದನ್ನು ನೋಡೊಣ.
  • ಸರ್ಕಾರಿ ಕಚೇರಿಯಿಂದ ರೈತನೊಬ್ಬ ತನ್ನ ಭೂಮಿಗೆ ಸಂಬಂಧಿಸಿದ ಪಹಣಿ ಪತ್ರ ಪಡೆಯಲು ಕಾಯಬೇಕಾದ ಸ್ಥಿತಿ ಇತ್ತು. ಸರ್ಕಾರದ ಭೂಮಿ ಯೋಜನೆಯಿಂದ ಪಹಣಿ ಪತ್ರ ಪಡೆಯುವ ವ್ಯವಸ್ಥೆಯನ್ನು ಗಣಕೀಕರಣ ಮಾಡುವುದರೊಂದಿಗೆ ಎಲ್ಲೆಡೆ ನಿಮಿಷಗಳಲ್ಲೇ ರೈತ ಪಹಣಿ ಪತ್ರ ಪಡೆಯುವಂತಾಗಿದೆ. 
  • ರೇಶನ್ ಕಾರ್ಡ್, ಪಾಸ್-ಪೋರ್ಟ್ ಮುಂತಾದ ಗುರುತಿನ ಪತ್ರಕ್ಕೆ ಅರ್ಜಿ ಸಲ್ಲಿಸಲು ಕಛೇರಿಗಳಿಗೆ ಅಲೆಯಬೇಕಾಗಿದ್ದ ದಿನಗಳಿಂದ ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸುವ ಅನುಕೂಲ ಸಾಧ್ಯವಾಗಿದೆ. 
  • ರೈತ ತನ್ನ ಬೆಳೆಗೆ ಸರಿಯಾದ ಬೆಲೆ ಕಲ್ಪಿಸಿಕೊಳ್ಳಲು ದಲ್ಲಾಳಿಗಳ, ಮಧ್ಯವರ್ತಿಗಳ ಮೊರೆ ಹೋಗಬೇಕಾದ ದಿನಗಳಿಂದ ಕೂತಲ್ಲಿಯೇ ಮೊಬೈಲ್ ಮೂಲಕ ತನ್ನ ಬೆಳೆಗಳಿಗೆ ವಿವಿಧ ಮಾರುಕಟ್ಟೆಯಲ್ಲಿರುವ ಬೆಲೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುವಂತಹ ಬದಲಾವಣೆಯತ್ತ ಸಾಗಿದ್ದೇವೆ.
  • ಈ ಹಿಂದೆ ಬ್ಯಾಂಕೊಂದರಿಂದ ಹಣ ಪಡೆಯಲು, ಹಣ ಹೂಡಲು, ಅಥವಾ ಯಾವುದೇ ಹಣಕಾಸಿಗೆ ಸಂಬಂಧಿಸಿದ ವ್ಯವಹಾರ ಮಾಡಲು ಬ್ಯಾಂಕಿನಲ್ಲಿ ಸಾಲಿನಲ್ಲಿ ನಿಲ್ಲದೇ ವಿಧಿಯಿಲ್ಲ ಅನ್ನುವಂತಿತ್ತು. ಆನ್ ಲೈನ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಎಟಿಎಮ್, ಫೋನ್ ಬ್ಯಾಂಕಿಂಗ್ ನಂತಹ ಸೌಲಭ್ಯಗಳು ಬಂದ ಮೇಲೆ ಯಾವುದೇ ಹೊತ್ತಿನಲ್ಲಿ, ಯಾವುದೇ ತಡೆಯಿಲ್ಲದೇ, ಕಿರಿಕಿರಿಯಿಲ್ಲದೇ ಹಣಕಾಸಿನ ವ್ಯವಹಾರಗಳನ್ನು ಮಾಡುವಂತಾಗಿದೆ. 
  • ಎಸ್.ಎಸ್.ಎಲ್.ಸಿ, ಪಿ.ಯು.ಸಿ  ಮುಂತಾದ ಪರೀಕ್ಷೆಗಳ ಫಲಿತಾಂಶ ಪ್ರಕಟವಾದಾಗ ದೂರದ ಹಳ್ಳಿಯ ವಿಧ್ಯಾರ್ಥಿಗಳು, ಪಾಲಕರು ಫಲಿತಾಂಶಕ್ಕಾಗಿ ಮರುದಿನದವರೆಗೂ ಕಾತರದಿಂದ ಕಾಯುವಂತಹ ದಿನಗಳಿದ್ದವು. ಇವತ್ತು ಮೊಬೈಲಿನಲ್ಲಿ ಒಂದು ಸಂದೇಶದ ಮೂಲಕ ಇಲ್ಲವೇ ಅಂತರ್ಜಾಲ ತಾಣದ ಮೂಲಕ ಫಲಿತಾಂಶ ಪ್ರಕಟಗೊಂಡ ಕೆಲವೇ ನಿಮಿಷಗಳಲ್ಲಿ ತಿಳಿಯುವಂತಹ ಬದಲಾವಣೆ ಸಾಧ್ಯವಾಗಿದೆ.
  • ರೈಲು, ಬಸ್ಸಿನಲ್ಲಿ ಮುಂಗಡ ಟಿಕೇಟ್ ಕಾಯ್ದಿರಿಸಲು ನಿಲ್ದಾಣಕ್ಕೆ ಹೋಗಿ, ಸಾಲಿನಲ್ಲಿ ನಿಂತು ಟಿಕೇಟ್ ಕೊಳ್ಳಬೇಕಾದ ದಿನಗಳಿಂದ ಮೊಬೈಲ್, ಕಂಪ್ಯೂಟರ್, ಇಲ್ಲವೇ ಮನೆಯ ಹತ್ತಿರದ ಕಾಯ್ದಿರಿಸುವ ಅಂಗಡಿಯೊಂದರಿಂದ ಟಿಕೇಟ್ ಕೊಳ್ಳುವ ಆರಾಮದಾಯಕ ಅನುಭವದತ್ತ ಸಾಗಿದ್ದೇವೆ.
  • ಇಂದಿನ ಚುನಾವಣೆಗಳಲ್ಲಿ ಮತಯಂತ್ರಗಳು ಬಳಕೆಗೆ ಬಂದ ನಂತರ ಚುನಾವಣೆಯಲ್ಲಿ ಸುಧಾರಣೆಗಳನ್ನು ಕಾಣಲು ಸಾಧ್ಯವಾಗಿದೆ. ಹಿಂದಿನಂತೆ ಮತದಾನದಲ್ಲಿ ಆಗುತ್ತಿದ್ದ ಮೋಸವನ್ನು ಕಡಿಮೆಗೊಳಿಸಲು ಸಾಧ್ಯವಾಗಿದೆ, ಎಣಿಕೆ ಕಾರ್ಯ ಸುಲಭವಾಗಿದೆ, ಫಲಿತಾಂಶವನ್ನು ಬೇಗನೆ ಜನರಿಗೆ ನೀಡಲು ಸಾಧ್ಯವಾಗಿದೆ.
ತಂತ್ರಜ್ಞಾನದ ಬಳಕೆಯೆನ್ನುವುದು ಮೇಲಿನ ಎಲ್ಲ ಉದಾಹರಣೆಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಆಡಳಿತ ಯಂತ್ರವನ್ನು ಜನರ ಮನೆ, ಮನದತ್ತ ಕೊಂಡೊಯ್ಯುವಲ್ಲಿ ಸಾಕಷ್ಟು ಯಶಸ್ವಿಯಾಗಿವೆ. ಈ ಪ್ರಕ್ರಿಯೆಯಲ್ಲಿ ಸೋರಿಕೆ ಕಡಿಮೆಯಾಗಿದೆ, ಜನರ ಬೇಡಿಕೆಗಳು ಸಾಕಷ್ಟು ವೇಗವಾಗಿ ಪೂರೈಕೆಯಾಗುತ್ತಿವೆ, ಆಡಳಿತ ಅನ್ನುವುದು ಜನರಿಂದ ಬೇರ್ಪಟ್ಟ ವ್ಯವಸ್ಥೆ ಅಂತಾಗದೇ ಜನರ ಸುತ್ತಲೇ, ಜನರಿಗಾಗಿಯೇ ಕಟ್ಟಿಕೊಳ್ಳಬೇಕಾದ ವ್ಯವಸ್ಥೆ ಮತ್ತು ತಂತ್ರಜ್ಞಾನದ ಸರಿಯಾದ ಬಳಕೆಯ ಮೂಲಕ ಆ ಗುರಿಯನ್ನು ಸಾಧಿಸಲುಬಹುದು ಅನ್ನುವುದು ಇತ್ತಿಚಿನ ದಿನಗಳಲ್ಲಿ ತಕ್ಕ ಮಟ್ಟಿಗೆ ಸಾಬೀತಾಗಿದೆ ಒಟ್ಟಾರೆಯಾಗಿ, ಆಡಳಿತದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಆಗುವ ಉಪಯೋಗಗಳನ್ನು ಪಟ್ಟಿ ಮಾಡುವುದಾದರೆ, ಮುಖ್ಯವಾದವು ಇಂತಿವೆ.
  • ದಿನದ ೨೪ ಗಂಟೆಗಳು ಸಹ ಜನರಿಗೆ ತಮಗೆ ಬೇಕಾಗಿರುವ ಮಾಹಿತಿ ಹಾಗೂ ಸೇವೆಗಳು ಬೆರಳ ತುದಿಯಲ್ಲಿ ಲಭ್ಯ
  • ಆಡಳಿತದಲ್ಲಿ ಚುರುಕುತನ
  • ಗುಣಮಟ್ಟದ ಸೇವೆ
  • ಹೆಚ್ಚಿನ ಪಾರದರ್ಶಕತೆ ಮತ್ತು ಉತ್ತರದಾಯಿತ್ವ
ತಂತ್ರಜ್ಞಾನವನ್ನು ಆಡಳಿತದಲ್ಲಿ ಸರಿಯಾಗಿ ತಂದಾಗ ಮೇಲಿನ ಉದಾಹರಣೆಯ ನಮ್ಮ ರೈತ ಮಲ್ಕಪ್ಪ ತನಗೆ ಬೇಕಾಗಿರುವ ಹಲವಾರು ಸೇವೆಗಳನ್ನು ಪಾರದರ್ಶಕವಾಗಿ, ಕಡಿಮೆ ಖರ್ಚಿನಲ್ಲಿ, ಕಡಿಮೆ ಸಮಯದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಉದಾ: ತನ್ನ ಹೊಲದ ಪಹಣಿಯನ್ನು ನಿಮಿಷಗಳಲ್ಲೇ ಪಡೆಯಬಲ್ಲ, ತನ್ನ ಬ್ಯಾಂಕಿನ ವ್ಯವಹಾರವನ್ನ ನಿಮಿಷಗಳಲ್ಲೇ ಮುಗಿಸಿಕೊಳ್ಳಬಲ್ಲ, ವಿದೇಶದಿಂದ ಅವನ ಮಗ ಕಳಿಸುವ ಹಣವನ್ನ ನಿಮಷಗಳಲ್ಲೇ ಪಡೆಯಬಲ್ಲ. ತನ್ನ ಬೆಳೆಗಳನ್ನು ಮಾರಲು ಇರುವ ಒಳ್ಳೆಯ ಬೆಲೆಯ ಬಗ್ಗೆ ಇದ್ದಲೇ ಮಾಹಿತಿ ಪಡೆಯಬಲ್ಲ. ಹೀಗೆ ತಂತ್ರಜ್ಞಾನ ಅವನ ಬದುಕನ್ನು ಸುಲಭವಾಗಿಸಬಲ್ಲದು.

ಪರಿಣಾಮಕಾರಿ ಆಡಳಿತ ನೀಡುವಲ್ಲಿ ಕನ್ನಡ ತಂತ್ರಜ್ಞಾನ ಹೇಗೆ ಸಹಾಯಕ:

ಆಡಳಿತವನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು ತಂತ್ರಜ್ಞಾನ ಹೇಗೆ ಮಹತ್ತರ ಪಾತ್ರವಹಿಸುತ್ತದೆ ಎನ್ನುವುದನ್ನು ತಕ್ಕ ಮಟ್ಟಿಗೆ ಅರಿತುಕೊಂಡ ಮೇಲೆ ಹುಟ್ಟುವ ಪ್ರಶ್ನೆ ಏನೆಂದರೆ “ ಇಷ್ಟೆಲ್ಲ ಅನುಕೂಲಗಳು ತಂತ್ರಜ್ಞಾನದಿಂದ ದೊರಕುತ್ತಿದ್ದರೂ ಯಾಕೆ ಆಡಳಿತ ಯಂತ್ರ ಅಂದುಕೊಂಡ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ, ಯಾಕೆ ಜನರು ತಂತ್ರಜ್ಞಾನ ಕೊಡಮಾಡಿರುವ ಅನುಕೂಲಗಳನ್ನು ವ್ಯಾಪಕವಾಗಿ ಬಳಸುತ್ತಿಲ್ಲ” ಅನ್ನುವುದು. ಇದಕ್ಕೆ ಉತ್ತರ ಅತ್ಯಂತ ಸುಲಭವಾಗಿದೆ. ಅದೇನೆಂದರೆ “ತಂತ್ರಜ್ಞಾನದ ಈ ಬದಲಾವಣೆಗಳು ಆಡಳಿತದಲ್ಲಿ ಜನರ ನುಡಿಯ ಪಾತ್ರವೇನು ಅನ್ನುವುದನ್ನು ಕಡೆಗಣಿಸಿರುವುದು” ಅಡಳಿತದಲ್ಲಿ ಜನರ ಭಾಷೆ ನೆಲೆಗೊಳ್ಳದೇ ಹೋದಲ್ಲಿ ಎಂತಹುದೇ ತಂತ್ರಜ್ಞಾನದ ಏಳಿಗೆ ಆಡಳಿತವನ್ನು ಜನರ ಬಳಿಗೆ ಪರಿಣಾಮಕಾರಿಯಾಗಿ ಕೊಂಡೊಯ್ಯಲಾರದು ಅನ್ನುವುದು ನಮ್ಮ ಸಮಾಜವನ್ನು ಕಂಡರೆ ಅತ್ಯಂತ ಸ್ಪಷ್ಟವಾಗುವುದು. ಆಡಳಿತಕ್ಕೆ ಚುರುಕು ತರಲೆಂದು ಅಳವಡಿಸಿಕೊಂಡ ಹೆಚ್ಚಿನ ತಂತ್ರಜ್ಞಾನದ ಪರಿಕರಗಳು ಇಂಗ್ಲಿಷಿನಲ್ಲಿದ್ದು, ಜನ ಸಾಮಾನ್ಯರ ನುಡಿಯಾದ ಕನ್ನಡದಿಂದ ದೂರವೇ ಉಳಿದಿವೆ. ಇಂಗ್ಲಿಷ್ ಅನ್ನುವ ತಡೆಗೋಡೆ ತಂತ್ರಜ್ಞಾನದ ಪೂರ್ತಿ ಪ್ರಯೋಜನವನ್ನು ಜನರಿಗೆ ತಲುಪಲಾರದಂತೆ ಮಾಡಿದೆ. ಭಾರತದ ಜನಸಂಖ್ಯೆಯಲ್ಲಿ ಇಂಗ್ಲಿಷ್ ಬಲ್ಲವರ ಸಂಖ್ಯೆ ಸುಮಾರು ೧೦ ಕೋಟಿ ಅನ್ನುತ್ತವೆ ಅಂಕಿಅಂಶಗಳು. ಅದರಲ್ಲಿ ಕರ್ನಾಟಕದ ಪಾಲು ೫% ಅಂದರೆ ಸುಮಾರು ೫೦ ಲಕ್ಷ ಅನ್ನಬಹುದು. ಇದರಲ್ಲೂ ಇಂಗ್ಲಿಷ್ ಅನ್ನು ಚೆನ್ನಾಗಿ ತಿಳಿದು, ಇಂಗ್ಲಿಷಿನಲ್ಲಿ ಬರುವ ಎಲ್ಲ ತಂತ್ರಜ್ಞಾನದ ಅನುಕೂಲಗಳನ್ನು ಚೆನ್ನಾಗಿ ಬಳಸಬಲ್ಲಂತವರು ಎಲ್ಲೋ ಕೆಲವರು ಮಾತ್ರ. ರಾಜ್ಯದ ೬ ಕೋಟಿ ಜನರಲ್ಲಿ ಒಂದು ೭-೮% ಜನರಿಗಷ್ಟೇ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಬಳಸುವ, ಅದರ ಲಾಭ ಪಡೆದುಕೊಳ್ಳಲು ಆಗುತ್ತಿದೆಯೇ ಹೊರತು ಉಳಿದ ೯೨% ಜನರು ಈ ಹೊಸ ವ್ಯವಸ್ಥೆಯ ಕಲ್ಪನೆಯಿಂದ ಆಚೆಯೇ ಉಳಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈ ಆಡಳಿತ ವ್ಯವಸ್ಥೆಯು ಜನರ ಭಾಷೆಯಾದ ಕನ್ನಡದಲ್ಲಿ ಇಲ್ಲದಿರುವುದೇ ಆಗಿದೆ.

ನನ್ನ ಗೆಳಯನೊಬ್ಬ ಕೊರಿಯಾ ದೇಶಕ್ಕೆ ಕೆಲಸದ ಮೇಲೆ ಹೋಗಿದ್ದ. ಒಂದು ದಿನ ಅವನು ಯಾವುದೋ ಜಾಗಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಸರಿಯಾದ ಮಾಹಿತಿ ಇರದ ಕಾರಣ ದಾರಿ ತಪ್ಪಿಸಿಕೊಂಡು ಬಿಟ್ಟಿದ್ದ, ಆಗ ದಾರಿಯಲ್ಲಿ ಸಿಕ್ಕ ಅಲ್ಲಿನ ಸ್ಥಳೀಯರೊಬ್ಬರಿಗೆ ತಾನು ಹೋಗಬೇಕಾಗಿರುವ ಜಾಗಕ್ಕೆ ದಾರಿ ಹೇಳಿ ಎಂದು ಕೇಳಿಕೊಂಡಾಗ, ಅವರು ತಮ್ಮಲ್ಲಿದ್ದ ಮೊಬೈಲ್ ನಲ್ಲಿ ಅಂತರ್ಜಾಲ ಬಳಸಿ ಅವನು ಹೋಗಬೇಕಾಗಿದ್ದ ದಾರಿಯನ್ನು ಹುಡುಕಿ, ಹೇಗೆ ಹೋಗಬೇಕೆಂಬ ನಕಾಶೆಯನ್ನು ತೋರಿಸಿದರು. ನನ್ನ ಸ್ನೇಹಿತ ಅವರಿಗೆ ಧನ್ಯವಾದ ಹೇಳಿ ಹೊರಟ, ಅವನು ಗಮನಿಸಿದ ಮುಖ್ಯ ಸಂಗತಿ ಅಲ್ಲಿಯ ಜನರು ಯಾರ ಸಹಾಯವಿಲ್ಲದೇ ತಂತ್ರಜ್ಞಾನದ ಬಳಕೆಯನ್ನು ಸುಲಭವಾಗಿ ಉಪಯೋಗಿಸಲು ಶಕ್ತವಾಗಿದ್ದರು, ಇದಕ್ಕೆ ಕಾರಣ ಆ ತಂತ್ರಜ್ಞಾನವು ಅವರ ನುಡಿಯಾದ ಕೋರಿಯನ್ ಭಾಷೆಯಲ್ಲಿತ್ತು ಎಂಬುದು. ನಮ್ಮ ನಾಡಿನಲ್ಲಿ ಇಂತಹದೊಂದು ಸಾಧ್ಯತೆಯನ್ನು ನಿರೀಕ್ಷಿಸಲೂ ಸಾಧ್ಯವೇ?

ಅದಕ್ಕೆ ಹೋಲುವಂತೆ ನನ್ನ ಮನೆಯಲ್ಲಾದ ಒಂದು ಉದಾಹರಣೆಯನ್ನು ನಿಮ್ಮ ಮುಂದಿಡುತ್ತೇನೆ. ನನ್ನ ಹತ್ತಿರದ ಸಂಬಂಧಿಯೊಬ್ಬರು ತಮ್ಮ ಮೊಬೈಲ್ ಫೋನಿನಲ್ಲಿ ಹಾಕುತ್ತಿದ್ದ ಕರೆನ್ಸಿ ಕರೆ ಮಾಡದಿದ್ದರೂ ಅದು ಹೇಗೊ ಖಾಲಿಯಾಗುತ್ತಿದೆ , ಸ್ವಲ್ಪ ನೋಡು ಎಂದು ನನ್ನ ಕೈಗಿತ್ತರು. ಅದನ್ನು ನೋಡಿದಾಗ ಕಾಣಿಸಿದ್ದು ಅಂದರೆ ಕಾಲರ್ ಟ್ಯೂನ್, ಜೋಕ್ಸ್ ಅದು ಇದು ಅಂತ ಇವರಿಗೆ ಕಳಿಸಿದ್ದ ಸಂದೇಶವಕ್ಕೆಲ್ಲ ಇವರು ತಿಳಿಯದೇ ಏನೋ ಒಂದು ಒತ್ತಿ ಅದಕ್ಕೆಲ್ಲ ಒಪ್ಪಿ ತಮ್ಮ ಹಣ ಕಳೆದುಕೊಳ್ಳುತ್ತಾ ಇದ್ದರು. ಇದನ್ನು ಸರಿ ಪಡಿಸಿಕೊಳ್ಳಲು ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿದರೆ ಅಲ್ಲಿ ಕನ್ನಡವಿಲ್ಲ. ಈ ರಗಳೆ ಬೇಡವೆಂದು ಮೊಬೈಲ್ ಬಳಕೆಯನ್ನೇ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದರು. ದೇವರು ಕೊಟ್ಟರೂ ಪೂಜಾರಿ ಕೊಡ ಅನ್ನುವಂತೆ ತಂತ್ರಜ್ಞಾನ ಅನುಕೂಲಗಳನ್ನು ತಂದರೂ ಇಂಗ್ಲಿಷ್ ಅನ್ನುವ ಭಾಷೆಯ ತಡೆಗೋಡೆ ಈ ಲಾಭ ಜನರಿಗೆ ದೊರಕದಂತೆ ಮಾಡಿದೆ ಅನ್ನಬಹುದು.
    
ಮೇಲಿನ ಎರಡು ಉದಾಹರಣೆಗಳು ಪರಿಣಾಮಕಾರಿ ಆಡಳಿತಕ್ಕೆ ಬಳಸುವ ತಂತ್ರಜ್ಞಾನದಲ್ಲಿ ಭಾಷೆಯ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿಸುತ್ತವೆ. ಇಂತಹ ಸಾವಿರಾರು ಪ್ರಕರಣಗಳು ನಮ್ಮ ಕಣ್ಣ ಮುಂದೆ ನಡೆಯುತ್ತಲೇ ಇರುತ್ತವೆ. ಇದಕ್ಕೆ ಪರಿಹಾರವೆಂದರೆ ಜನಸಾಮಾನ್ಯರಿಗೆ ಎಲ್ಲಾ ಸೇವೆ/ಸೌಲಭ್ಯಗಳು ಕನ್ನಡದಲ್ಲಿ ದೊರೆಯಬೇಕು. ಇದಕ್ಕಾಗಿ ತಂತ್ರಜ್ಞಾನವನ್ನು ಕನ್ನಡದಲ್ಲಿ ತರುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಹಾಗಿದ್ದರೆ ಇವತ್ತಿನ ಸ್ಥಿತಿಗತಿಯೇನು ಅನ್ನುವುದನ್ನು ಕೊಂಚ ನೋಡಬೇಕಿದೆ.

ನಮ್ಮ ಸರ್ಕಾರ ಆಡಳಿತವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ತಂತ್ರಜ್ಞಾನದ ಸಹಾಯದಿಂದ ಕೆಲವು ಯೋಜನೆಗಳನ್ನು ಹೊರತಂದಿದೆ. ಇದರಲ್ಲಿ ಪ್ರಮುಖವಾಗಿ ಭೂಮಿ, ನೆಮ್ಮದಿ, ಈ-ಪ್ರಕ್ಯೂರ್ಮೆಂಟ್, ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್ವರ್ಕ್, ಹ್ಯೂಮನ್ ರಿಸೋರ್ಸ್ ಮ್ಯಾನೇಜ್ ಮೆಂಟ್ ಸಿಸ್ಟಮ್, ಬ್ಯಾಂಗಲೋರ್-ಒನ್, ಕರ್ನಾಟಕ-ಒನ್ ಯೋಜನೆಗಳನ್ನು ಇ-ಆಡಳಿತಕ್ಕೆ ತಂದಿವೆ. ಆದರೆ ಇದರಿಂದ ನಮ್ಮ ರಾಜ್ಯದ ಎಷ್ಟು ಜನರಿಗೆ ಉಪಯೋಗವಾಗುತ್ತಿದೆ?
ಈ ಯೋಜನೆಗಳ ಪಟ್ಟಿಯಲ್ಲಿ ಭೂಮಿಯಂತಹ ಕೆಲವು ಯೋಜನೆಗಳು ಜನರಿಗೆ ಸೇವೆಯನ್ನು ಕನ್ನಡದಲ್ಲಿ ಒದಗಿಸುತ್ತಿವೆ. ಆದರೆ ಮೇಲೆ ಹೇಳಿರುವ ಹೆಚ್ಚಿನ ಯೋಜನೆಗಳ ಅಂತರ್ಜಾಲ ತಾಣಗಳಲ್ಲಿ ಅಥವಾ ಅದರ ತಂತ್ರಾಂಶಗಳಲ್ಲಿ ಕನ್ನಡದ ಬಳಕೆ  ಕಾಣಸಿಗುವುದಿಲ್ಲ.

ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳನ್ನು ಜನರಿಗೆ ತಲುಪಿಸಲೆಂದೇ ಇರುವ ಸರ್ಕಾರದ ಅಧಿಕೃತ ಅಂತರ್ಜಾಲ ತಾಣದಲ್ಲಿ ಕಣ್ಣಾಡಿಸಿದರೆ ಕನ್ನಡದಲ್ಲಿ ತೆರೆದುಕೊಳ್ಳಬೇಕಾಗಿದ್ದ ತಾಣ ಮೊದಲಿಗೆ ಇಂಗ್ಲೀಷಿನಲ್ಲಿ ತೆರೆದುಕೊಳ್ಳುತ್ತದೆ. ಅಲ್ಲಲ್ಲಿ ಕಣ್ಣೊರೆಸಲು ಎಂಬಂತೆ ಕನ್ನಡದಲ್ಲೂ ಚೂರು ಪಾರು ಮಾಹಿತಿ ಇದ್ದರೂ ಆ ಕನ್ನಡ ಪುಟಗಳಿಗೆ ಹೋಗುವುದು ಹೇಗೆ ಎಂದು ತಿಳಿಯಲು ಕೂಡ ನಿಮಗೆ ಇಂಗ್ಲಿಶ್ ಗೊತ್ತಿರಬೇಕು, ಪಡಿತರ ಚೀಟಿ ವಿತರಣೆ ಯೋಜನೆ, ಮುಖ್ಯಮಂತ್ರಿಗಳ ದಿನವಹಿ ಆಡಳಿತವನ್ನು ಜನರಿಗೆ ತೋರಿಸುವ ಯೋಜನೆ, ಶಿಕ್ಷಣ ಕ್ಷೇತ್ರದ ವಿವಿಧ ಇಲಾಖೆಗಳ ತಾಣಗಳು, ಉದ್ಯೋಗಾವಕಾಶಗಳನ್ನು ಒದಗಿಸುವ ಉದ್ಯೋಗ ಹಾಗೂ ತರಬೇತಿ ಕೇಂದ್ರದ ತಾಣ, ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಅಂತರ್ಜಾಲ ತಾಣ, ಪೋಲಿಸ್ ಇಲಾಖೆಯ ತಾಣ, ಕೇಂದ್ರ ಸರ್ಕಾರ ಅಧೀನದಲ್ಲಿರುವ ಅಂಚೆ ಕಛೇರಿ, ವಿಮೆ, ತೆರಿಗೆ ಪಾವತಿ, ರೈಲ್ವೆ ಇಲಾಖೆಯ ತಾಣ ಹೀಗೆ ಜನಸಾಮಾನ್ಯ ದಿನ ನಿತ್ಯ ಒಡನಾಡುವ ಎಲ್ಲ ಸರ್ಕಾರಿ ವ್ಯವಸ್ಥೆಗಳಲ್ಲೂ ಕನ್ನಡ ಸಲ್ಲದಿರುವ ನುಡಿಯಾಗಿದೆ. ಜನಸಾಮಾನ್ಯರು ಪ್ರತಿದಿನ ನೇರವಾಗಿ ಮುಖಾಮುಖಿಯಾಗುವ ಫೋನ್ ಬಿಲ್, ವಿಮೆ, ಅಂಚೆ, ಬ್ಯಾಂಕ್ ಅರ್ಜಿ, ಫಾರ್ಮ್, ಚೆಕ್ಕುಗಳು ಕನ್ನಡದಲ್ಲಿ ಸಿಗುತ್ತಿಲ್ಲ, ಗ್ರಾಹಕ ಸೇವಾ ಕೇಂದ್ರಗಳಲ್ಲಿ ಕನ್ನಡದ ಆಯ್ಕೆಗಳು ಸಿಗುವುದಿಲ್ಲ, ವಿವಿಧ ಬ್ಯಾಂಕ್ ಗಳ ಎಟಿಎಂಗಳಲ್ಲಿ ಕನ್ನಡದ ಆಯ್ಕೆ ಸಮರ್ಪಕವಾಗಿ ಇಲ್ಲ, ಹಾಗೆಯೇ ಸರ್ಕಾರಿ ಕಚೇರಿಯ ಒಳಗಡೆ ಬಳಕೆ ಮಾಡುವಂತಹ ಹೆಚ್ಚಿನ ತಂತ್ರಾಂಶಗಳೆಲ್ಲದರ ಇಂಟರ್ ಫೇಸ್ (ಉಪಯೋಗಿಸುವ ಪರದೆ) ಮತ್ತು ಅದರಿಂದ ಹೊರ ಬರುವ ಔಟ್ ಪುಟ್ (ಕಾರ್ಡು, ಅರ್ಜಿ, ಫಾರಂ) ಹೀಗೆ ಹೆಚ್ಚಿನೆಡೆ ಇಂಗ್ಲಿಷಿಗೆ ಮಣೆ. ಹೀಗಿರುವಾಗ ೯೨% ಕನ್ನಡವೊಂದನ್ನೇ ನೆಚ್ಚಿಕೊಂಡಿರುವ ಜನರಿಗೆ ಪರಿಣಾಮಕಾರಿ ಆಡಳಿತದ ಅನುಭವ ಸಿಗುವುದಾದರೂ ಹೇಗೆ?

ಇನ್ನೂ ಖಾಸಗಿ ವ್ಯವಸ್ಥೆಯನ್ನು ಗಮನಿಸಿದರೆ, ಗ್ರಾಹಕ ಸೇವೆಯಲ್ಲಿ ಭಾಷೆಯ ಮಹತ್ವವನ್ನೇ ಅರಿಯದೇ ಮಾಡಿಕೊಳ್ಳುತ್ತಿರುವ ತಪ್ಪುಗಳಿಂದ ಖಾಸಗಿ ವ್ಯವಸ್ಥೆಯಿಂದ ಪಡೆಯುವ ಸೇವೆಗಳ ವಿಷಯದಲ್ಲೂ ಜನಸಾಮಾನ್ಯರ ಅನುಭವ ಸರ್ಕಾರಿ ವ್ಯವಸ್ಥೆಗಿಂತ ಹೆಚ್ಚೇನು ಬೇರೆಯಾಗಿಲ್ಲ. ಜನರ ನುಡಿಯಲ್ಲಿ ತಮ್ಮೆಲ್ಲ ಸೇವೆಗಳನ್ನು ಕೊಡಿ ಎಂದು ಇವರಿಗೆ ಹೇಳಬೇಕಿದ್ದ ಸರ್ಕಾರವೂ ಈ ಬಗ್ಗೆ ಹೆಚ್ಚು ಗಮನ ಹರಿಸದೇ ಇರುವುದರಿಂದ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಭಾಷೆಯ ತಡೆಗೋಡೆ ದಾಟಿ ಸಾಮಾನ್ಯ ಮನುಷ್ಯನನ್ನು ತಲುಪುವುದು ಮರಿಚೀಕೆಯೇ ಸರಿ ಅಂಬಂತಾಗಿದೆ. ಆದರೆ ಪಕ್ಕದ ತಮಿಳುನಾಡು, ಮಹಾರಾಷ್ಟ್ರದಂತಹ ರಾಜ್ಯಗಳು ಈ ನಿಟ್ಟಿನಲ್ಲಿ ನಮಗಿಂತ ಮುಂದಿದ್ದಾರೆ. ಜಪಾನ್, ಜರ್ಮನಿ, ಕೊರಿಯಾ, ಫ್ರಾನ್ಸ್ ನಂತಹ ಮುಂದುವರಿದ ದೇಶಗಳು ಈ ನಿಟ್ಟಿನಲ್ಲಿ ನಮಗೆ ಆದರ್ಶಪ್ರಾಯರಾಗುವಂತಿವೆ.

ತಂತ್ರಜ್ಞಾನದ ಫಲ ನಮ್ಮ ಭಾಷೆಯಲ್ಲೇ ನಮ್ಮ ಜನರಿಗೆ ದೊರಕದಿದ್ದರೆ ಇವುಗಳಿಂದ ಆಗುವ ಪ್ರಯೋಜನ ಶೂನ್ಯ. ಹಾಗಾಗಿ ಸರ್ಕಾರ ತನ್ನ ಕಾರ್ಯಯೋಜನೆಯಲ್ಲಿ ಸಮಗ್ರವಾದ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ. ಜನರಿಗೆ ನಾವು ಉಪಕಾರ ಮಾಡುತ್ತಿದ್ದೇವೆ ಅನ್ನೋ ಮನೋಭಾವ ಹೋಗಿ ಜನರ ಉಪಯೋಗಕ್ಕಾಗಿ ನಮ್ಮನ್ನು ಇಲ್ಲಿ ಕೂರಿಸಲಾಗಿದೆ ಅನ್ನುವ ಭಾವನೆ ನಮ್ಮ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಬರಬೇಕಾಗಿದೆ.

ಇದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಆಡಳಿತವನ್ನು ಜನರಿಗೆ ಮುಟ್ಟಿಸಲು ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ತಂತ್ರಾಂಶಗಳನ್ನು ಬಳಸುವುದರ ಮೂಲಕ ಗಣಕೀಕರಣಗೊಳಿಸಿ ಕನ್ನಡಿಗರಿಗೆ ಕೊಡುವ ಎಲ್ಲಾ ಸೇವೆಗಳನ್ನು ಕನ್ನಡದಲ್ಲಿ ಸಿಗುವಂತೆ ಮಾಡಬೇಕು. ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಎಲ್ಲ ಅಂತರ್ಜಾಲ ತಾಣಗಳು ಕನ್ನಡದಲ್ಲಿ ದೊರಕುವಂತೆ ಮಾಡಬೇಕು. ಇದಲ್ಲದೇ ಇಂತಹುದೇ ಹತ್ತಾರು ಸೇವೆಗಳನ್ನು ಕೊಡುತ್ತಿರುವ ಖಾಸಗಿ ಸಂಸ್ಥೆಗಳು ಸಹ ಇಂತಹ ತಂತ್ರಜ್ಞಾನದ ಅನುಕೂಲಗಳನ್ನು ಜನರಿಗೆ ಕಲ್ಪಿಸುವಂತೆ ನೀತಿ ನಿಯಮಗಳನ್ನು ಸರ್ಕಾರ ರೂಪಿಸಬೇಕು ಹಾಗೂ ಕನ್ನಡದಲ್ಲಿ ಸೇವೆ ನೀಡದಿರುವುದು ಗ್ರಾಹಕ ಹಕ್ಕುಗಳ ಉಲ್ಲಂಘನೆಯಂತಹ ಕಾನೂನು ಜಾರಿಗೆ ತರಬೇಕು. ಆಡಳಿತದ ಪ್ರತಿಯೊಂದು ಹಂತದಲ್ಲೂ, ಜನರ ಜೊತೆ ವ್ಯವಹರಿಸುವಾಗ, ಪತ್ರ ವ್ಯವಹಾರ ನಡೆಸುವಾಗ, ತಂತ್ರಾಂಶಗಳು ಹಾಗೂ ಅಂತರ್ಜಾಲದಲ್ಲಿ ಕನ್ನಡವನ್ನು ಬಳಸುವ ಬಗ್ಗೆ ಒಂದು ಭಾಷಾನೀತಿಯನ್ನು ಜಾರಿಗೆ ತರಬೇಕು. ಜನರಿಗೆ ಈ ತಂತ್ರಜ್ಞಾನದ ಉಪಯೋಗವನ್ನು ತಿಳಿಸಲು ಕೈಪಿಡಿಗಳನ್ನು, ಸಹಾಯ ಸಾಮಾಗ್ರಿಗಳನ್ನು, ಪ್ರತಿ ಹಳ್ಳಿಗೊಂದರಂತೆ ಕಂಪ್ಯೂಟರ್ ಕೇಂದ್ರ ತೆರೆದು ಶಿಕ್ಷಣ ನೀಡಬೇಕು ಹಾಗೂ ಸಹಾಯಕರನ್ನು ನೇಮಿಸಬೇಕು. ಇವುಗಳ ಜೊತೆಗೆ ನಮ್ಮ ಜನರೂ ಸಹ ತಾವು ಉಪಯೋಗಿಸುವ ಎಲ್ಲಾ ಸೇವೆಗಳನ್ನು ಕನ್ನಡದಲ್ಲೇ ನೀಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಆಗ್ರಹಿಸಬೇಕು.

ಈ ನಾಡಿನ ಆಡಳಿತ ಭಾಷೆಯಾಗಿರುವ ಕನ್ನಡವನ್ನ ಸಂಪೂರ್ಣವಾಗಿ ಆಡಳಿತದಲ್ಲಿ ಹಾಗೂ ತಂತ್ರಜ್ಞಾನದಲ್ಲಿ ಜಾರಿಗೆ ತರದೇ ಹೋದರೆ ಪರಿಣಾಮಕಾರಿಯಾದ ಆಡಳಿತವನ್ನು ಸರ್ಕರಕ್ಕೆ ನೀಡಲು ಸಾಧ್ಯವಿಲ್ಲ ಅನ್ನೋ ಮಾತನ್ನ ಮತ್ತೊಮ್ಮೆ ನೆನಪಿಸಲು ಇಚ್ಚಿಸುತ್ತೇನೆ.

ಮಂಗಳವಾರ, ಡಿಸೆಂಬರ್ 6, 2011

ಸಮ್ಮೇಳನದಲ್ಲಿ ಭೇಟಿಯಾಗೋಣ...

ಗೆಳೆಯರೇ, ಇದೇ ಡಿಸೆಂಬರ್ ೯, ೧೦ ಹಾಗೂ ೧೧ನೇ ತಾರೀಖಿನಂದು ಗಂಗಾವತಿಯಲ್ಲಿ ನಡೆಯುತ್ತಿರುವ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂದಿನ ಅವಶ್ಯಕತೆಯಾಗಿರುವ ತಂತ್ರಜ್ಞಾನ ಹಾಗೂ ಅದರಲ್ಲಿ ಕನ್ನಡದ ಇಂದಿನ ಸ್ಥಿತಿ, ಬಳಕೆ ಹಾಗೂ ಮುಂದಿರುವ ದಾರಿಯ ಬಗ್ಗೆ “ಆಧುನಿಕ ಜಗತ್ತು ಮತ್ತು ಕನ್ನಡ” ಎನ್ನುವ ವಿಚಾರ ಘೋಷ್ಠಿಯೊಂದನ್ನು ೧೦ನೇ ಡಿಸೆಂಬರ್ ಸಂಜೆ ೪.೩೦ ಕ್ಕೆ ಏರ್ಪಡಿಸಲಾಗಿದೆ.

ಈ ಗೋಷ್ಠಿಯಲ್ಲಿ ನಾನು “ಪರಿಣಾಮಕಾರಿ ಆಡಳಿತಕ್ಕಾಗಿ ಕನ್ನಡದಲ್ಲಿ ತಂತ್ರಜ್ಞಾನ” ಅನ್ನುವ ವಿಷಯದ ಕುರಿತು ಮಾತನಾಡುತ್ತಿದ್ದೇನೆ. ಇದರಲ್ಲಿ ಮುಖ್ಯವಾಗಿ ಆಡಳಿತದ ಅಂದರೆ ಏನು? ಪರಿಣಾಮಕಾರಿ ಆಡಳಿತ ಗುಣ ಲಕ್ಷಣಗಳೇನು? ಆಡಳಿತವನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ತಂತ್ರಜ್ಞಾನ ಪಾತ್ರವೇನು? ಹಾಗೂ ಆಡಳಿತವನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ಭಾಷೆಯ ಪ್ರಾಮುಖ್ಯತೆ ಹಾಗೂ ಇದರಿಂದ ನಮ್ಮ ಸಮಾಜದಲ್ಲಿ ತರಬಹುದಾದ ಬದಲಾವಣೆಗಳ ಬಗ್ಗೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ನನ್ನ ಜೊತೆಗೆ ಗೆಳೆಯರಾದ ಓಂಶಿವಪ್ರಕಾಶ್ ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಇಂದು - ಮುಂದು ಅನ್ನೋ ವಿಷಯದ ಕುರಿತು ಮಾತನಾಡಲಿದ್ದಾರೆ, ಶ್ರೀನಿಧಿ ಟಿ.ಜಿ ಅವರು ಆಧುನಿಕ ಜಗತ್ತಿನ ಬೇಡಿಕೆಗಳು ಮತ್ತು ಕನ್ನಡ ತಂತ್ರಜ್ಞಾನ ಅನ್ನೋ ವಿಷಯದ ಕುರಿತು ತನ್ನ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.
ನೀವು ಅಲ್ಲಿಗೆ ಬಂದಿದ್ದರೆ ಖಂಡಿತವಾಗಿ ಈ ಗೋಷ್ಠಿಯಲ್ಲಿ ಭಾಗವಹಿಸಿ ಹಾಗು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

ಗುರುವಾರ, ನವೆಂಬರ್ 17, 2011

ನಮ್ಮ ಸರ್ಕಾರಕ್ಕಿರುವ ಕನ್ನಡ ಕಾಳಜಿ ಎಷ್ಟು???

ಸುಮಾರು ೩.೫ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಹೊಸತರಲ್ಲಿ ಬಿಜೆಪಿ ಸರ್ಕಾರ ತಾನು ರೈತ ಪರ, ಕನ್ನಡ ಪರ, ನಾಡು-ನುಡಿಗೆ ಧಕ್ಕೆಯಾದಲ್ಲಿ ಅದರ ಪರವಾಗಿ ತಾನೆಂದಿಗೂ ಮುಂದೆ ಅನ್ನುವ ರೀತಿಯಲ್ಲಿ ಹೇಳೀಕೆಗಳನ್ನು ನೀಡಿತ್ತು, ಹೊಸ ಸರ್ಕಾರದ ಈ ಮಾತನ್ನ ಜನರು ಸಹ ನಂಬಿದ್ದರು. ಆದರೆ ಅದಾದ ಸ್ವಲ್ಪ ದಿನದಲ್ಲಿಯೇ ಅದು ತನ್ನ ನಿಜವಾದ ಬಣ್ಣವನ್ನು ಬಯಲು ಮಾಡುತ್ತ ಹೊರಟಿತು. ಸರ್ಕಾರ ಮೊದಲಿಗೆ ರೈತರ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಇದಾದ ನಂತರ ಹಲವಾರು ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ತನ್ನ ಬೇಳೆಕಾಳು ಬೇಯಿಸಿಕೊಳ್ಳಲು ಭಾಷಾ ಅಲ್ಪಸಂಖ್ಯಾತರನ್ನು ಓಲೈಸುತ್ತಾ ತನ್ನ ವೋಟ್ ಬ್ಯಾಂಕ್ ರಾಜಕಾರಣವನ್ನು ತೋರಿಸಿತು, ಕನ್ನಡ ಪರ ಸಂಘಟನೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಿತು, ಹೀಗೆ ಹಲವಾರು ವಿಷಯಗಳಲ್ಲಿ ಜನವಿರೋಧಿತನ ತೋರಿಸುತ್ತಲೇ ಬಂದಿರುವ ಬಿಜೆಪಿ ಸರ್ಕಾರ ನಮ್ಮನ್ನು ಆಳುತ್ತಿರುವ ಸರ್ಕಾರ ನಜಕ್ಕೂ ನಮ್ಮದೇ? ಅನ್ನುವ ಪ್ರಶ್ನೆಯನ್ನು ನಮ್ಮಲ್ಲಿ ಹುಟ್ಟು ಹಾಕಿದೆ.

ಇದಕ್ಕೆ ಇತ್ತೀಚಿನ ಉದಾಹರಣೆಯಾಗಿ ನಮ್ಮ ಕಣ್ಣ ಮುಂದಿರುವ ಬೆಳಗಾವಿಯ ಘಟನೆ. ಕರ್ನಾಟಕ ರಾಜ್ಯೋತ್ಸವದ ದಿನದಂದು ನಮ್ಮ ರಾಜ್ಯದ ಬೆಳಗಾವಿ ಜೆಲ್ಲೆಯ ಮಹಾಪೌರರಾಗಿರುವ ಶ್ರೀಮತಿ ಮಂದಾ ಬಾಳೆಕುಂದ್ರಿ ಅವರು ಎಂಇಎಸ್ ನಂತಹ ಪುಂಡ ಸಂಘಟನೆ ಜೊತೆ ಸೇರಿ ನಾಡವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಇದರ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದ ನಂತರವೂ ಸಹ ಸರ್ಕಾರ ಇನ್ನು ತನಿಖೆ ನಡೆಸುತ್ತಲೇ ಇದೆ. ಆದರೆ ಇದನ್ನ ವಿರೋಧಿಸಿ ಕರವೇಯಂತಹ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಇಳಿದರೆ ತಕ್ಷಣವೇ ಬಂಧಿಸಿ ಹಲವಾರು ಆಪಾದನೆಗಳನ್ನು ಹಾಕಿ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತದೆ. ಇದು ನಮ್ಮ ಸರ್ಕಾರದ ಕನ್ನಡ ಪರ ನೀತಿ. ಕೇವಲ ಇದೊಂದೆ ಅಲ್ಲ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ಅಧಿಕಾರಕ್ಕೆ ಬರಲು ನಮ್ಮ ಬಿಜೆಪಿ ಪಕ್ಷ ಎಂಇಎಸ್ ನಂತಹ ಸಂಘಟನೆ ಜೊತೆ ಕೈಜೋಡಿಸಿ ಅಧಿಕಾರಕ್ಕೆ ಬರುತ್ತದೆ. ಒಂದು ಕಡೆಯಲ್ಲಿ ಎಂಇಎಸ್ ಅನ್ನು ವಿರೋಧಿಸುವ ನಾಟಕವಾಡುತ್ತ ಇನ್ನೊಂದು ಕಡೆ ಸಾಮರಸ್ಯದಿಂದ ಬದುಕುತ್ತಿರುವ ಕನ್ನಡ ಹಾಗೂ ಮರಾಠಿಗರ ನಡುವೆ ಹುಳಿ ಹಿಂಡುತ್ತಿರುವ ಎಂಇಎಸ್ ನಂತಹ ಸಂಘಟನೆಯೊಂದಿಗೆ ಜೊತೆ ಕೈಜೋಡಿಸುವ ಬಿಜೆಪಿ ಪಕ್ಷ ಯಾವ ನೈತಿಕತೆಯನ್ನು ಉಳಿಸಿಕೊಂಡಿದೆ? ಕೆಲವು ಸಾವಿರ ಮರಾಠಿ ಮೂಲಭೂತವಾಗಳ ಓಟಿಗಾಗಿ ಕೋಟ್ಯಾಂತರ ಕನ್ನಡಿಗರ ಭಾವನೆಗೆ ಬೆಂಕಿ ಇಡುತ್ತಿರುವ ಬಿಜೆಪಿ ಪಕ್ಷಕ್ಕೆ ಕನ್ನಡಿಗರೆಂದರೆ ಅಸಡ್ಡೆಯೇ?

ಮಹಾರಾಷ್ಟ್ರದಲ್ಲಿ “ಕರ್ನಾಟಕ ರಾಜ್ಯ” ಫಲಕ ಹಾಕಿ:
ಹೀಗೆ ಹೇಳಿದವರು ಬೇರಾರು ಅಲ್ಲ ಸ್ವತ: ಬೆಳಗಾವಿಯನ್ನು ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿರುವ ಬಿಜೆಪಿ ಪಕ್ಷದ ಸಂಸದ ಶ್ರೀ ಸುರೇಶ್ ಅಂಗಡಿಯವರು. ಇಂದಿನ ಕನ್ನಡ ಪ್ರಭದಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಕನ್ನಡ ಪರ ಸಂಘಟನೆಯೊಂದು ಬೆಳಗಾವಿ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿರು ಮಹಾರಾಷ್ಟ್ರ ರಾಜ್ಯ ಅನ್ನುವ ಫಲಕವನ್ನು ತಗೆಸಿ ಎಂದು ಜಿಲ್ಲಾಧಿಕಾರಿಗೆ ಮನವಿ ಕೊಡಲು ಹೋದಾಗ ಅಲ್ಲಿದ್ದ ನಮ್ಮ ಸಂಸದರಿಂದ ಬಂದ ಉತ್ತರ
ನಿಮಗೆ ಧೈರ್ಯವಿದ್ದರೆ ಮಹಾರಾಷ್ಟ್ರಕ್ಕೆ ಹೋಗಿ “ಕರ್ನಾಟಕ ರಾಜ್ಯ” ಎಂಬ ನಾಮ ಫಲಕ ಹಾಕಿರಿ. ಕನ್ನಡಿಗರು ಇಲ್ಲಿ ಗಲಾಟೆ ಮಾಡಿದರೆ ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ತೊಂದರೆ ಆಗುತ್ತಿದೆ. ಮಹಾನಗರ ಪಾಲಿಕೆ ಸೂಪರ್ ಸೀಡ್ ಮಾಡಿದರೆ ಅವರು ಕೋರ್ಟ್ ಗೆ ಹೋಗುತ್ತಾರೆ

ಹಾಗಾದರೆ ನಮ್ಮ ಮಾನ್ಯ ಸಂಸದರಿಗೆ ಎಂಇಎಸ್ ಮಾಡಿದ್ದು ತಪ್ಪಾಗಿ ಕಂಡಿಲ್ಲವೇ? “ಕರ್ನಾಟಕ ರಾಜ್ಯ” ಅನ್ನೋ ನಾಮ ಫಲಕ ಕರ್ನಾಟಕದಲ್ಲಿ ಬಿಟ್ಟು ಮಹಾರಾಷ್ಟ್ರದಲ್ಲಿ ಹಾಕಿದರೆ ಆಗುವ ಉಪಯೋಗವೇನು? ನಮ್ಮ ರಾಜ್ಯದಲ್ಲಿ ಬೇರೆ ರಾಜ್ಯದ ಹೆಸರಿನ ನಾಮ ಫಲಕಗಳಿದ್ದರೆ ಅದನ್ನು ತಗೆಯದೇ ಬಿಡಬೇಕೆ? ಅವರು ಕೋರ್ಟ್ ಗೆ ಹೋಗುತ್ತಾರೆ ಅನ್ನೋ ಕಾರಣಕ್ಕೆ ನಾವು ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದೇ? ಈ ರೀತಿಯ ಉದ್ಧಟತನದ ಕೆಲಸಗಳು ಪದೇ ಪದೇ ಬೆಳಗಾವಿಯಲ್ಲಿ ಆಗುತ್ತಿದ್ದರು ಸಹ ನಮ್ಮ ಸರ್ಕಾರ ಏನು ಕ್ರಮ ಕೈಗೊಂಡಿದೆ? ನಮ್ಮ ಕನ್ನಡ ಪರ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲು ತೋರಿಸುವ ತರಾತುರಿಯನ್ನು ಸರ್ಕಾರ ಈ ನಾಡವಿರೋಧಿಗಳ ಮೇಲೆ ಕ್ರಮಕೈಗೊಳ್ಳಲು ಯಾಕೆ ಮುಂದಾಗುತ್ತಿಲ್ಲ?

ಹುಸಿ ರಾಷ್ಟ್ರೀಯತೆಯ ಸೋಗಿನಲ್ಲಿ ಜನರನ್ನು ಭಾಷೆಯ ಹೆಸರಿನಲ್ಲಿ ಒಡೆದು ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ಈ ರಾಷ್ಟ್ರೀಯ ಪಕ್ಷಗಳಿಂದ ನಮ್ಮ ನಾಡಿಗಾಗುತ್ತಿರುವ ಅವಮಾನ, ನಮ್ಮ ಜನರಿಗೆ ಆಗುತ್ತಿರುವ ನೋವು, ಹಿಂಸೆಗೆ ಕಡಿವಾಣ ಬೀಳಬೇಕಾದಲ್ಲಿ ನಮ್ಮ ನಾಡು-ನುಡಿ-ನಾಡಿಗರನ್ನು ರಕ್ಷಿಸುವಂತಹ ಒಂದು ಪ್ರಾದೇಶಿಕ ಪಕ್ಷ ನಿಜವಾಗಲೂ ಬೇಕು ಅನ್ನುವ ನಮ್ಮ ಆಸೆ ಇಂತಹ ಘಟನೆಗಳಿಂದ ಗಟ್ಟಿಯಾಗುತ್ತಲೇ ಹೋಗುತ್ತಿದೆ.

ಬುಧವಾರ, ನವೆಂಬರ್ 2, 2011

ಮೆಟ್ರೋದಲ್ಲಿ ಸಿಗದ ಉದ್ಯೋಗ – ಕನ್ನಡಿಗರಿಗೆ ಏನ್ ಬಂತು ಉಪಯೋಗ??

ಕನ್ನಡದ ನನ್ನೆಲ್ಲ ಬಂಧುಗಳಿಗೆ ಐವತ್ತಾರನೇ ಕರ್ನಾಟಕ ರಾಜ್ಯೋತ್ಸವದ ಸವಿ ಹಾರೈಕೆಗಳು. ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಕವಿವಾಣಿಯಂತೆ ನಡೆದುಕೊಳ್ಳಬೇಕಾಗಿರುವ ಸಂದರ್ಭ ಹಿಂದೆಂದಿಗಿಂತ ಹೆಚ್ಚು ಪ್ರಸ್ತುತವೆನ್ನಿಸುತ್ತದೆ. ೩ ಪ್ರಾಂತಗಳು ಹಾಗೂ ೧೬ ವಿವಿಧ ಸಂಸ್ಥಾನಗಳಲ್ಲಿ ಹಂಚಿ ಹೋಗಿತ್ತು ನಮ್ಮ ಕನ್ನಡ ನಾಡು, ನಮ್ಮ ನಾಡಿನ ಹಿರಿಯರ ಅವಿರತ ಶ್ರಮ, ತ್ಯಾಗ, ಬಲಿದಾನದ ಫಲವಾಗಿ ಏಕೀಕೃತ ಕರ್ನಾಟಕ ಸ್ಥಾಪಿತವಾಯಿತು. ನಮ್ಮ ಹಿರಿಯರು ಕಂಡ ಸುವರ್ಣ ಕರ್ನಾಟಕದ ಕನಸು ಇನ್ನೂ ನನಸಾಗಿದೆಯೇ? ಖಂಡಿತವಾಗಿಯೂ ಇಲ್ಲಾ. ಈ ಕನಸು ಈಡೇರಬೇಕಾದರೆ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಬೇಕಾಗಿದೆ ಹಾಗೂ ಅದು ಅಗತ್ಯವೂ ಕೂಡ.

ಕಳೆದೆರೆಡು ದಶಕದಲ್ಲಿ ಜಾಗತೀಕರಣದ ಪ್ರಭಾವದಿಂದಾಗಿ ನಮ್ಮ ನಾಡಿಗೆ ಹಲವಾರು ಬೃಹತ್ ಉದ್ಯಮಗಳು ಬಂದವು, ಅದರ ಜೊತೆ ಜೊತೆಗೆ ಹೊರ ರಾಜ್ಯಗಳಿಂದ ವಲಸೆ ಬರುವವರ ಸಂಖ್ಯೆ ಸಹ ಜಾಸ್ತಿಯಾಗುತ್ತಾ ಬಂತು ಹಾಗೂ ಇಂದು ಸಹ ಅದು ಅನಿಯಮಿತವಾಗಿ ನಡೆಯುತ್ತಲೇ ಇದೆ. ಇದರಿಂದಾಗಿ ನಮ್ಮ ನಾಡಿನ ಜನರಿಗೆ ಕೆಲಸಗಳು ದೊರಕದಂತಾಗಿವೆ. ಆದರೆ ಇಂತಹ ಒಂದು ಅನಿಯಮಿತ ವಲಸೆಯಿಂದಾಗಿ ಒಂದು ರಾಜ್ಯದ ಮೇಲೆ ಬೀರಬಹುದಾದ ಪರಿಣಾಮ ಮಾತ್ರ ಭಯಂಕರ. ಇದಕ್ಕೆ ಉದಾಹರಣೆಯಂದರೆ ವಾಣಿಜ್ಯ ನಗರಿ ಮುಂಬಯಿ. ಇಂದು ಅಲ್ಲಿ ವಲಸೆಯಿಂದಾಗಿ ತಮ್ಮ ತಾಯಿನುಡಿಯ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಜನರಿಗೆ ಇಂದು ಇದರ ಪರಿಣಾಮ ಅರ್ಥವಾಗುತ್ತಿದೆ. ಇಂದು ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ಮಹಾರಾಷ್ಟ್ರದಲ್ಲಿ ಅಗಿರುವಂತಹ ಅನಾಹುತ ಆಗಿಲ್ಲ. ಆದರೆ ಸುಮ್ಮನೆ ಇದ್ದರೆ ಇಂತಹ ಅನಾಹುತ ಕಟ್ಟಿಟ್ಟ ಬುತ್ತಿ.

ಮಣ್ಣಿನ ಮಕ್ಕಳಿಗೆ ಹೆಚ್ಚಿನ ಒತ್ತು ಸಿಗಲಿ:


ವಲಸಿಯಿಂದ ಆಗಬಹುದಾದ ಪರಿಣಾಮಕ್ಕೆ ಇತ್ತೀಚಿನ ಉದಾಹರಣೆಯಾಗಿ “ನಮ್ಮ ಮೆಟ್ರೋ”ದಲ್ಲಿ ಆಗಿರುವ ಈ ಪ್ರಕರಣವೇ ಸಾಕ್ಷಿ. ಜನರ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಈ ಮನುಷ್ಯ ಮಾತನಾಡುವ ಧಾಟಿ ನೋಡಿ.... “ಇದು ಹಿಂದುಸ್ಥಾನ, ಹಿಂದುಸ್ಥಾನದ ಭಾಷೆ ಹಿಂದಿಯಾಗಿದೆ, ಅದು ಗೊತ್ತಿದ್ದ ಮೇಲೆ ಕನ್ನಡ ಯಾಕೆ ಕಲಿಯಬೇಕು? ಕನ್ನಡ ಕಲಿಯಲು ನನಗೆ ಇಷ್ಟವಿಲ್ಲ ಯಾಕಂದರೆ ಕನ್ನಡ ಚೆನ್ನಾಗಿಲ್ಲ” ಅಂತ ಹಲ್ಲು ಕಿರಿಯುತ್ತಾ ಹೇಳುತ್ತಿದ್ದಾನೆ. ಇಂತವರಿಂದ ಸಾಮಾನ್ಯ ಜನರಿಗೆ ಯಾವ ತರಹದ ಮಾಹಿತಿ ಸಿಗಲು ಸಾಧ್ಯ? ಯಾವ ರೀತಿಯಿಂದ ಇವನು ಜನರನ್ನು ಸುರಕ್ಷಿತವಾಗಿರಿ ಅಂತ ಹೇಳುತ್ತಾನೆ? ವಲಸೆಯಿಂದ ಆಗಬಹುದಾದ ಪರಿಣಾಮದ ಮೊದಲನೆ ಹೆಜ್ಜೆ ಇದು. ಇದು ಕೇವಲ ಇವನೊಬ್ಬನ ಮಾತಲ್ಲ. ಕೂಲಿ ಮಾಡುವ ಕಾರ್ಮಿಕನಿಂದ ಹಿಡಿದು ದೊಡ್ಡ ದೊಡ್ಡ ಹುದ್ದೆಗಳಲ್ಲಿರುವ ಹೊರ ರಾಜ್ಯದ ಜನರ ಪ್ರತೀಕವಾಗಿ ಇವನು ಕಾಣುತ್ತಾನೆ.

ಬೆಂಗಳೂರಿನ ಹೆಮ್ಮೆಯಾಗಿರುವ ನಮ್ಮ ಮೆಟ್ರೋ ಸಲುವಾಗಿ ಎಷ್ಟೋ ಕುಟುಂಬಗಳು ಇಂದು ಬೀದಿ ಪಾಲಾಗಿವೆ? ದಶಕಗಳಿಂದ ಬಾಳುತ್ತಿದ್ದ ಜನರನ್ನ ಒಕ್ಕಲೆಬ್ಬಿಸಿ ಬೃಹತ್ ಕಟ್ಟಡಗಳನ್ನು ಕಟ್ಟಿರುವ ನಮ್ಮ ಮೆಟ್ರೋ ಸಂಸ್ಥೆಯವರು ಎಷ್ಟು ಕುಟುಂಬಗಳಿಗೆ ಉದ್ಯೋಗಗಳನ್ನು ನೀಡಿದ್ದಾರೆ? ಇಂತವರಿಗೆ ಕೆಲಸ ಕೊಡಬೇಕಾಗಿರುವುದು ಸಂಸ್ಥೆಯ ಕರ್ತವ್ಯವಲ್ಲವೇ? ಒಂದು ಗಾರ್ಡ್ ಕೆಲಸಕ್ಕೂ ಸಹ ನಮ್ಮ ಕನ್ನಡಿಗರು ಅರ್ಹರಲ್ಲವೇ? ನಮ್ಮ ಮೆಟ್ರೋನಲ್ಲಿರುವ ಸುಮಾರು ೮೪೦ ಕೆಲಸಗಳಲ್ಲಿ ಕೇವಲ ೩೨೦ ಹುದ್ದೆಗಳಿಗೆ ಮಾತ್ರ ಕನ್ನಡಿಗರನ್ನ ನೇಮಿಸಲಾಗಿದೆ, ಉಳಿದದ್ದೆಲ್ಲ ಪರಭಾಷಿಕರ ಪಾಲು. ಇದು ಯಾವ ಸೀಮೆಯ ನ್ಯಾಯ? ನಿಜಕ್ಕೂ ನಮ್ಮ ಸರ್ಕಾರಕ್ಕೆ ರಾಜ್ಯದಲ್ಲಿ ಆಗುತ್ತಿರುವ ವಿದ್ಯಮಾನಗಳ ಬಗ್ಗೆ ಗಮನ ಹರಿಸಲು ಸಮಯವಿದೆಯೋ ಇಲ್ಲವೇ ಗೊತ್ತಾಗುತಿಲ್ಲ. ತ್ರಿಭಾಷೆಯ ಮೂಲಕ ಭಾರತದ ಒಗ್ಗೂಡಿಸುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಮೆಟ್ರೋ ಸಂಸ್ಥೆ ನಿಜಕ್ಕೂ ನಮ್ಮದೇ ಅನ್ನುವ ಅನುಮಾನ ಕಾಡಲು ಶುರುವಾಗಿದೆ.

ಸುಮಾರು ದಶಕಗಳಿಂದ ಜಾರಿಗೆ ಬರದೆ ಧೂಳು ಹಿಡಿದು ಕೂತಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತನ್ನಿ ಎಂದು ಪ್ರತಿ ಬಾರಿಯೂ ಬೀದಿಗಿಳಿಯುವ ಕನ್ನಡ ಪರ ಸಂಘಟನೆಗಳ ಆಗ್ರಹಕ್ಕೆ ಸರ್ಕಾರ ಕೊಡುತ್ತಿರುವ ಕಿಮ್ಮತಾದರೂ ಏನು? ಒಂದು ಬಾಗಿಲು ಕಾಯುವ ಕೆಲಸಕ್ಕೂ ಹೊರಗಿನವರನ್ನು ತಂದು ತುಂಬಿದರೆ ಇಲ್ಲಿನ ಮಕ್ಕಳಿಗೆ ಇಲ್ಲಿ ಕೆಲಸ ಸಿಗದೇ ಬೇರೆಲ್ಲಿ ಸಾಧ್ಯ? ಇದಕೆಲ್ಲ ಪರಿಹಾರವೆಂದರೆ ಮೊದಲನೆಯದಾಗಿ ಸರೋಜಿನಿ ಮಹಿಷಿ ವರದಿ ಜಾರಿಗೆ ಬರಬೇಕು. ಮಣ್ಣಿನ ಮಕ್ಕಳಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎನ್ನುವ ನಿಯಮವನ್ನು ಸರ್ಕಾರ ಜಾರಿಗೆ ತರಬೇಕು. ಈಗಾಗಲೇ ಇಂತಹ ವ್ಯವಸ್ಥೆಯನ್ನು ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಒರಿಸ್ಸಾ ಹಾಗೂ ಗುರಜಾತ ದಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಇದರ ಜೊತೆಜೊತೆಗೆ ಉದ್ಯಮಗಳಿಗೆ ತಮ್ಮ ಹೊಲ-ಮನೆಗಳನ್ನು ಕಳೆದುಕೊಳ್ಳುವ ಕುಟುಂಬಗಳಿಗೆ ಸರಿಯಾದ ಪರಿಹಾರದ ಜೊತೆಗೆ ಸ್ಥಾಪಿಸಲಾಗುವ ಉದ್ಯಮದಲ್ಲಿ ಅವರ ವಿಧ್ಯಾರ್ಹತೆಗೆ ತಕ್ಕಂತೆ ಕೆಲಸಗಳನ್ನು ನೀಡಬೇಕು. ರಾಜ್ಯದಲ್ಲಿ ಹೊಸದಾಗಿ ಶುರುವಾಗುವ ಯಾವುದೇ ಉದ್ಯಮವಿದ್ದರೂ ಮೊದಲಿಗ ಇಲ್ಲಿಯ ಜನರಿಗೆ ಕೆಲಸಗಳನ್ನು ನೀಡಬೇಕು ಎಂದು ಸರ್ಕಾರ ಒಪ್ಪಂದ ಮಾಡಿಕೊಳ್ಳಬೇಕು ಹಾಗೂ ಅನಿಯಮಿತವಾಗಿ ಆಗುತ್ತಿರುವ ವಲಸೆಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು.

ಇದೆಲ್ಲಾ ಆಗಬೇಕೆಂದರೆ ನಮ್ಮ ರಾಜಕೀಯ ಪಕ್ಷಗಳಿಗೆ ನಾಡಿಗೆ ಒಳಿತನ್ನು ಮಾಡುವ ಇಚ್ಛಾಶಕ್ತಿ ಇರಬೇಕು. ಆದರೆ ನಿಜಕ್ಕೂ ಈ ಕಾಳಜಿ ಇಂದು ಅಸ್ತಿತ್ವದಲ್ಲಿರುವ ಯಾವುದೇ ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಖಂಡಿತಾ ಇಲ್ಲ. ಕನ್ನಡ, ಕನ್ನಡಿಗ ಹಾಗೂ ಕರ್ನಾಟಕಗಳ ಬಗ್ಗೆ ಕಾಳಜಿ ಇರುವ ಒಂದು ನಿಜವಾದ ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ ಬರಬೇಕು. ಕನ್ನಡಿಗರ ಏಳಿಗೆಯನ್ನೇ ಮೂಲಮಂತ್ರವನ್ನಾಗಿ ಇಟ್ಟುಕೊಂಡು ಕೆಲಸ ಮಾಡುವ ಪಕ್ಷ ನಮಗೆ ಬೇಕು. ಆಗ ಮಾತ್ರ ನಮ್ಮ ಹಿರಿಯರು ನಮಗಾಗಿ ಮಾಡಿರುವ ತ್ಯಾಗ, ಬಲಿದಾನ ಹೋರಾಟ ಸಾರ್ಥಕವಾದಂತೆ. ಏನಂತೀರಿ ಗೆಳೆಯರೇ?

ಸೋಮವಾರ, ಅಕ್ಟೋಬರ್ 10, 2011

ಅನಿಯಂತ್ರಿತ ವಲಸೆ ಮತ್ತು ಅದರ ದುಷ್ಪರಿಣಾಮಗಳು

ಕಳೆದ ವಾರ ಬೆಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣ ಮತ್ತು ಕಳೆದ ತಿಂಗಳಷ್ಟೇ ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ಕೇವಲ 50 ಪೈಸೆಗೆ ನಡೆದ ಶೂಟ್ ಔಟ್ ನಂತಹ ಪ್ರಕರಣಗಳು ಒಂದು ನಾಡಿನಲ್ಲಿ ಅನಿಯಂತ್ರಿತ ವಲಸೆಯಿಂದ ಆಗಬಹುದಾದ ದುಷ್ಪರಿಣಾಮಗಳ ಚಿತ್ರಣವನ್ನು ಬಯಲುಮಾಡಿದಂತಿವೆ. ಜೊತೆಗೇ, ಕರ್ನಾಟಕದಲ್ಲಿ ಎಡೆಯಿರದೆ ನಡೆಯುತ್ತಿರುವ ಅನಿಯಂತ್ರಿತ ವಲಸೆಯಿಂದ ಕನ್ನಡಿಗರ ಉದ್ಯೋಗಕ್ಕೆ ಬಂದಿರುವ ಕುತ್ತು, ಕನ್ನಡಿಗರ ಮೇಲೆ ಆಗುತ್ತಿರುವ ದಾಳಿ ಸಾಮಾಜಿಕ ಭದ್ರತೆಯ ಬುನಾದಿಯನ್ನೇ ಅಲುಗಾಡಿಸಿದಂತಾಗಿದೆ. ಅಷ್ಟೇ ಅಲ್ಲದೆ, ಕಮ್ಮಿ ಕೂಲಿಗೆ ಸಿಗುತ್ತಾರೆಂಬ ನೆಪವೊಡ್ಡಿ ವಲಸಿಗರನ್ನು ಶೋಷಿಸುವ ಸೆಕ್ಯುರಿಟಿ ಏಜೆನ್ಸಿಗಳ ಒಂದು ವರ್ಗವೇ ಸೃಷ್ಟಿ ಆಗುತ್ತಿದ್ದು, ಕನ್ನಡಿಗರು ಮತ್ತು ಪರಭಾಷಿಕರ ಮಧ್ಯೆ ಸಾಮಾಜಿಕ ಘರ್ಷಣೆ, ತಿಕ್ಕಾಟಕ್ಕೂ ಇದು ಕಾರಣವಾಗುತ್ತಿದೆ.

ಇಷ್ಟೆಲ್ಲಾ ಗಂಭೀರ ಬೆಳವಣಿಗೆಗಳಾಗುತ್ತಿದ್ದರೂ, ನಮ್ಮ ಘನ ಸರ್ಕಾರ ಮಾತ್ರ, ಅನಿಯಂತ್ರಿತ ವಲಸೆಗೆ ಕಡಿವಾಣ ಹಾಕುವ ಯಾವ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಅದರ ಬಗ್ಗೆ ಯೋಚಿಸುತ್ತಲೂ ಇಲ್ಲ. ಅದಕ್ಕೆ ವಿರುದ್ಧವಾಗಿ, ಕಡಿವಾಣವೇ ಇಲ್ಲದ ಸೆಕ್ಯುರಿಟಿ ಏಜೆನ್ಸಿಗಳನ್ನು ಬೆಳೆಯಲು ಬಿಟ್ಟು, ಅಲ್ಲಿ ನೇಮಕವಾಗುವ ಸೆಕ್ಯುರಿಟಿ ಗಾರ್ಡ್ ಗಳನ್ನಾಗಲೀ, ಅವರೊಡನೆಯೇ ಬರುವವರನ್ನಾಗಲೀ ಗೊತ್ತು ಗುರಿಯಿಲ್ಲದೆ ನಮ್ಮ ನಾಡಿನಲ್ಲಿ ಬೀಡು ಬಿಡಲು ಅನುಕೂಲ ಮಾಡಿಕೊಡುವ ವ್ಯವಸ್ಥೆಗೆ ಪ್ರೋತ್ಸಾಹ ನೀಡುತ್ತಿದೆ. ಕಂತೆಗೆ ತಕ್ಕ ಬೊಂತೆ ಎಂಬಂತೆ, ಸೆಕ್ಯುರಿಟಿ ಏಜೆನ್ಸಿಗಳೂ ಕೂಡ, ಕಮ್ಮಿ ಕೂಲಿಗೆ ಸಿಕ್ಕರೆಂಬ ಭರದಲ್ಲಿ ಇದಾವುದನ್ನೂ ಗಂಭೀರವಾಗಿ ಪರಿಗಣಿಸದೆ, ತಮ್ಮ ಲಾಭಕ್ಕೋಸ್ಕರ ವಲಸಿಗರನ್ನೂ ಶೋಷಣೆ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಜೊತೆಗೆ, ತಾವು ನೇಮಿಸಿಕೊಂಡ ವಲಸಿಗರು ಯಾರು, ಅವರ ಮೂಲ, ಇಲ್ಲಿಗೆ ಬಂದಿರುವ ಉದ್ದೇಶ, ಅವರ ವ್ಯಕ್ತಿಗತ ಹಿನ್ನೆಲೆ - ಇದಾವುದನ್ನೂ ಕಲೆ ಹಾಕುತ್ತಿಲ್ಲ ಮತ್ತು ಹೆಚ್ಚು ವಿದ್ಯಾರ್ಹತೆ ಬೇಕಿಲ್ಲದ ಇಂತಹ ಕೆಲಸಗಳಿಗೂ ಸ್ಥಳೀಯರಾದ ಕನ್ನಡಿಗರನ್ನೇ ನೇಮಿಸುವ ಕೆಲಸ ಮಾಡುತ್ತಿಲ್ಲ. ಕೆಲವೊಮ್ಮೆ ಬೇಕೆಂದೇ ಪರಭಾಷಿಕರನ್ನು ಈ ಕೆಲಸಗಳಿಗೆ ನೇಮಿಸಿಕೊಂಡು, ಕನ್ನಡಿಗರ ಉದ್ಯೋಗಕ್ಕೆ ಕಲ್ಲು ಹಾಕುತ್ತಿದ್ದಾರೆ. ನಮ್ಮ ಸರ್ಕಾರ ಈ ಕೂಡಲೆ ಇದರ ಬಗ್ಗೆ ಎಚ್ಚೆತ್ತುಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ, ಅತಿಬೇಗ ಈ ಸಮಸ್ಯೆಗಳು ದೊಡ್ಡ ಸಾಮಾಜಿಕ ಪಿಡುಗುಗಳಾಗಿ ಮಾರ್ಪಾಡಾಗುವ ದಿನಗಳು ದೂರವಿಲ್ಲ. ಅನಿಯಂತ್ರಿತ ವಲಸೆಯ ಕಡಿವಾಣವೇ ಇವೆಲ್ಲಕ್ಕೂ ಸೂಕ್ತ ಪರಿಹಾರವೆನಿಸುತ್ತದೆ.

ಸೋಮವಾರ, ಸೆಪ್ಟೆಂಬರ್ 26, 2011

ಮುಖ್ಯಮಂತ್ರಿಗಳೇ ಇದು ಸರಿಯೇ?

ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾಗಿರುವ ಶ್ರೀ ಸದಾನಂದಗೌಡರು ನೆನ್ನೆ ಬೆಂಗಳೂರಿನಲ್ಲಿ ಮಲೆಯಾಳಿಗಳು ಏರ್ಪಡಿಸಿದ್ದ ಪೊನ್ನಂ ೨೦೧೧ ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಷಯ ಇಷ್ಟೇ ಇದ್ದಿದ್ದರೆ ಸಮಸ್ಯೆ ಏನು ಇರುತ್ತಿರಲಿಲ್ಲ. ಆದರೆ ಅವರು ಭಾಗವಹಿಸಿದ್ದ ಕಾರ್ಯಕ್ರಮದ ತುಂಬ ಅವರು ಮಾತನಾಡಿದ್ದು ಮಲೆಯಾಳಿಯಲ್ಲಿಯೇ ಎಂದು ಪತ್ರಿಕಾ ವರದಿಯೊಂದು ಹೇಳಿತ್ತಿದೆ!!!!
ಹಲವಾರು ದಶಕಗಳಿಂದ ನಮ್ಮ ರಾಜ್ಯದಲ್ಲಿಯೇ ವಾಸಿಸುತ್ತಿರುವ ಮಲೆಯಾಳಿಗಳು, ಕನ್ನಡವನ್ನ ಕಲಿತು ಕನ್ನಡಿಗರ ಜೊತೆ ಸಾಮರಸ್ಯದಿಂದ ಬದುಕುತ್ತಿರುವ ಹಾಗೂ ಬದಲಾವಣೆಯಲ್ಲಿ ಪಾಲ್ಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ನೀವು ಕನ್ನಡಿಗರಲ್ಲ ಎನ್ನೋ ಬಹುದೊಡ್ಡ ತಪ್ಪು ಸಂದೇಶವನ್ನು ನಮ್ಮ ಮುಖ್ಯಮಂತ್ರಿಗಳು ನೀಡುತ್ತಿರುವುದು ಸರಿಯೇ? ಭಾಷೆಯ ಮೂಲಕವೇ ಉತ್ತಮ ಸಮಾಜವನ್ನ ಕಟ್ಟಬೇಕಾಗಿರುವುದು ಇಂದಿನ ಅವಶ್ಯಕತೆ ಹಾಗೂ ಇದೇ ಸರಿಯಾದ ದಾರಿ ಕೂಡ. ಆದರೆ ಸದಾನಂದಗೌಡರ ನಡೆ ಪರಭಾಷಿಕರನ್ನು ಹೊರಗಿನವರಾಗಿಯೇ ಇಡುವ ಪ್ರಯತ್ನವಾಗಿ ಕಾಣುತ್ತಿದೆ. ತಮಗಿರುವ ಮಲೆಯಾಳಿ ಪಾಂಡಿತ್ಯವನ್ನು ಅವರು ಕೇರಳಕ್ಕೆ ಹೋದಾಗ ತೋರಿಸಿದರೆ ಅವರ ನಡೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಅದರೆ ನೆನ್ನೆಯ ಘಟನೆ ಭಾಷಾ ಅಲ್ಪಸಂಖ್ಯಾತರ ಓಲೈಕೆಯಂತೆಯೇ ಮೇಲ್ನೋಟಕ್ಕೆ ಕಾಣಿಸುತ್ತಿದೆ. ನಾಳೆ ಮತ್ಯಾವುದೋ ಭಾಷಿಕ ಸಮುದಾಯ ಅವರನ್ನ ಕಾರ್ಯಕ್ರಮಕ್ಕೆ ಅಹ್ವಾನಿಸಿದರೆ, ಅಲ್ಲೂ ಇದೇ ತರಹದ ಘಟನೆ ಪುನರಾವರ್ತನೆಯಾದರೆ? ಇಂತಹ ಹೆಜ್ಜೆಗಳು ನಾಡಿನ ಒಡಕಿಗೆ ಕಾರಣವಾಗುವದಿಲ್ಲವೇ?

ಈ ಹಿಂದೆಯು ಸಹ ಚುನಾವಣೆ ಸಮಯದಲ್ಲಿ ಬಿ.ಜೆ.ಪಿ ಪಕ್ಷ ಇಂತಹ ಭಾಷ ಅಲ್ಪಸಂಖ್ಯಾತರನ್ನು ಓಲೈಸಲು ನಡೆಸಿದ ಕಸರತ್ತುಗಳನ್ನು ಹಾಗೂ ಅದರ ವಿರುದ್ಧ ಕರವೇ ನಡೆಸಿದ್ದ ಪ್ರತಿಭಟನೆಗಳನ್ನು ನಾವುಗಳು ಕಂಡಿದ್ದೇವೆ. ಭಾಷಾ ಅಲ್ಪಸಂಖ್ಯಾತರನ್ನು ಓಟಿಗಾಗಿ ಓಲೈಸುವ ಭರದಲ್ಲಿ, ಇದರಿಂದ ನಾಡಿನ ಸಮಾಜದಲ್ಲಿ ಭಾಷೆಯ ಆಧಾರದ ಮೇಲೆ ಉಂಟಾಗುವ ಒಡಕಿನ ಬಗ್ಗೆ ನಮ್ಮ ರಾಜಕೀಯ ಪಕ್ಷಗಳು ಖಂಡಿತವಾಗಿ ಗಮನ ಹರಿಸಲೇ ಬೇಕು. ಆಯಾ ನಾಡಿನಲ್ಲಿ ಅಲ್ಲಿಯ ಭಾಷೆಗೆ ಆದ್ಯತೆ ನೀಡಬೇಕು. ಹೊರಗಿನಿಂದ ಬಂದವರು ಇಲ್ಲಿನವರಾಗಿ ಬಾಳಲು ಅವಕಾಶ ಮಾಡಿಕೊಡಬೇಕು. ಏನಂತೀರಿ?

ಗುರುವಾರ, ಜುಲೈ 28, 2011

ಹೈಕಮಾಂಡ್!!! ಹೈಕಮಾಂಡ್!!!


ಕರ್ನಾಟದಲ್ಲಿ ಕಳೆದೆರೆಡು ವಾರಗಳಿಂದ ನಡೆಯುತ್ತಿರುವ ಈ ರಾಜಕೀಯ ದೊಂಬರಾಟ ದೇಶದ ಗಮನವನ್ನ ತನ್ನತ ಸೆಳೆದಿದೆ. ಅಕ್ರಮ ಗಣಿಗಾರಿಕೆಯ ಬಗ್ಗೆ ಲೋಕಾಯುಕ್ತರು ನೀಡಿರುವ ವರದಿ ರಾಜಕೀಯ ಪಕ್ಷಗಳು ಹಾಗೂ ಅವರ ನಾಯಕರುಗಳಲ್ಲಿ ಆತಂಕ ಹುಟ್ಟಿಸಿದೆ. ಮುಂದೆ ಈ ರಾಜಕೀಯ ದೊಂಬರಾಟ ಹೇಗೆ ತಿರುವುಗಳನ್ನು ಪಡೆಯುತ್ತದೋ ಕಾದು ನೋಡೋಣ.

ಆದರೆ ಈ ಪ್ರಕರಣ ಹೊರಬಿದ್ದಾಗಿನಿಂದ ಹೈಕಮಾಂಡಿನ ಹೆಸರು ಎಂದಿಗಿಂತ ಹೆಚ್ಚು ಪದೇ ಪದೇ ಕಿವಿಯ ಮೇಲೆ ಬೀಳುತ್ತಲೇ ಇದೆ. ನಮ್ಮ ರಾಜ್ಯದ ರಾಷ್ಟ್ರೀಯ ಪಕ್ಷಗಳ ನಾಯಕರು ಎದ್ದರೂ ಹೈಕಮಾಂಡ್, ಬಿದ್ದರೂ ಹೈಕಮಾಂಡ್, ಕನಸಿನಲ್ಲೂ ಹೈಕಮಾಂಡ್ ಎಂದು ಕನವರಿಸುತ್ತಾ ಇರುತ್ತಾರೆ. ಕಾಂಗ್ರೆಸ್, ಬಿಜೆಪಿ ಎಂದು ಪಕ್ಷ ಭೇದ ಮರೆತು ನಮ್ಮ ರಾಜ್ಯದ ನಾಯಕರುಗಳು ಹೈಕಮಾಂಡಿನ ದಾಸ್ಯಕ್ಕೆ ಒಗ್ಗಿಹೋಗಿದ್ದಾರೆ ಎಂದೆನಿಸುತ್ತದೆ. ಹೈಕಮಾಂಡಿನ ಕರೆ ಬಂದ ಕೂಡಲೇ ಉಟ್ಟ ಬಟ್ಟೆಯಲ್ಲಿ ದೆಹಲಿಗೆ ಓಡಿ ಹೋಗುವ ಚಾಳಿ ನಮ್ಮ ರಾಜ್ಯದ ನಾಯಕರುಗಳಿಗೆ ಅಭ್ಯಾಸ ಆಗಿ ಹೋಗಿದೆ. ನಮ್ಮ ರಾಜ್ಯದ ಯಾವುದೇ ಪ್ರಮುಖ ವಿಷಯಗಳಲ್ಲಿ ತೀರ್ಮಾನವಾಗಬೇಕಾದರೂ ದೆಹಲಿಯಲ್ಲಿ ಗಂಟೆಗಟ್ಟಲೆ ಕೈಕಟ್ಟಿಕೊಂಡು ನಿಲ್ಲಬೇಕಾದ ಪರಿಸ್ಥಿತಿ ನಮ್ಮ ಜನಪ್ರತಿನಿಧಿಗಳದು. ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರನ್ನು ಭೇಟಿ ಮಾಡಲು ಹಲವಾರೂ ದಿನಗಳು ಕಳೆದರೂ ಭೇಟಿ ಮಾಡಲು ಸಾಧ್ಯವಾಗದೆ ವಾಪಸ್ ಬಂದಿರುವ ಅನೇಕ ಸುದ್ದಿಗಳನ್ನು ಪತ್ರಿಕೆಗಳಲ್ಲಿ ನೋಡಿರುತ್ತೇವೆ... ತೀರಾ ಇತ್ತೀಚಿಗಿನ ಬೆಳವಣಿಗೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಹೊಸ ಮುಖ್ಯಮಂತ್ರಿಗಳನ್ನೂ ಆರಿಸಲು ಸಹ ನಮ್ಮ ರಾಜ್ಯದ ಬಿಜೆಪಿ ನಾಯಕರು ಹೈಕಮಾಂಡಿನತ್ತ ಮುಖಮಾಡಿರುವುದು ನಮ್ಮ ರಾಜ್ಯದ ೬ ಕೋಟಿ ಜನರ ವಿಶ್ವಾಸಕ್ಕೆ ದ್ರೋಹ ಮಾಡಿತಂತಾಗಿದೆ? ರಾಜ್ಯದ ಹಿತಕ್ಕಾಗಿ ಸ್ವಂತ ನಿರ್ಧಾರಗಳನ್ನು ತಗೆದುಕೊಳ್ಳಲು ಸಾಧ್ಯವಿಲ್ಲವೆಂದಾದರೆ ಅವರುಗಳು ನಾಯಕರಾಗಿ ಮುಂದುವರೆಯುತ್ತಿರುವುದಾದರೂ ಏಕೆ?

ನಮ್ಮ ರಾಜ್ಯದ ಒಳಿತನ್ನು ನಿರ್ಧರಿಸಲು ಹೈಕಮಾಂಡ್ ಬೇಕೆ?
ನಾಯಕತ್ವ ಬದಲಾವಣೆಯ ಈ ಸಮಯದಲ್ಲಿ ಮುಂದಿನ ಮುಖ್ಯಮಂತ್ರಿಯಾರಗಬೇಕು ಎನ್ನುವ ತೀರ್ಮಾನವನ್ನು ಹೈಕಮಾಂಡ್ ತಗೆದುಕೊಳ್ಳಲು ಹೊರಟಿದೆ ಎನ್ನುವು ಸುದ್ದಿ ಬರುತ್ತಿದೆ. ಇಷ್ಟಕ್ಕೂ ನಮ್ಮ ರಾಜ್ಯದಲ್ಲಿ ಯಾರು ಮುಖ್ಯಮಂತ್ರಿಯಾರಾಗಬೇಕು ಎನ್ನುವ ನಿರ್ಧಾರವನ್ನು ತೀರ್ಮಾನ ಮಾಡಲು ಹೈಕಮಾಂಡ್ ಬೇಕೆ? ಅಸಲಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಮುಖ್ಯಮಂತ್ರಿ ಯಾರಾಗಿರಬೇಕು ಎನ್ನುವ ನಿರ್ಧಾರವನ್ನು ಮಾಡಬೇಕಾಗಿರುವವರು ನಮ್ಮ ಪ್ರತಿನಿಧಿಗಳಾದ ಶಾಸಕರು ಅಲ್ಲವೇ? ಇದನ್ನೆಲ್ಲ ಮೀರಿ ನಾಯಕತ್ವ ತೀರ್ಮಾನಿಸೋಕೆ ಹೈಕಮಾಂಡ್ ಗೆ ಇಲ್ಲಿನ ಯಾವ ಪರಿಸ್ಥಿತಿಯ ಅರಿವಿರುತ್ತದೆ? ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ಮಾರಕಾವಾಗಿರುವ ಈ ಹೈಕಮಾಂಡ್ ದಾಸ್ಯದಿಂದ ನಮ್ಮ ರಾಷ್ಟ್ರೀಯ ರಾಜಕೀಯ ಪಕ್ಷಗಳು ಎಂದು ಹೊರಗೆ ಬರುತ್ತವೆ? ಒಂದು ರಾಷ್ಟ್ರೀಯ ಪಕ್ಷ ಎಂದಾಕ್ಷಣ ಎಲ್ಲಾ ನಿರ್ಧಾರಗಳು ಮೇಲಿಂದಲೇ ಬರಬೇಕೆಂದೇನಿಲ್ಲ ಅಲ್ಲವೇ?. ಆದಷ್ಟು ಬೇಗ ಈ ಪರಿಸ್ಥಿತಿಯಿಂದ ನಮ್ಮ ರಾಜಕೀಯ ಪಕ್ಷಗಳು ಹೊರಬರಲಿ, ಹೈಕಮಾಂಡ್ ದಾಸ್ಯದಿಂದ ಮುಕ್ತವಾಗಲಿ ಎಂದು ಆಶಿಸೋಣ. ಕನ್ನಡಿಗರಲ್ಲಿ ಈ ಕುರಿತು ಜಾಗೃತಿಯಾಗಬೇಕು, ನಮ್ಮ ನಿರ್ಧಾರಗಳನ್ನು ನಾವೇ ತಗೆದುಕೊಳ್ಳುವಂತಾಗಬೇಕು.

ಶುಕ್ರವಾರ, ಜುಲೈ 22, 2011

ಕರ್ನಾಟಕದವರು ಬಿಟ್ಟಿ ಬಿದ್ದಿದ್ದಾರಾ?


ಬಹುಷಃ ಕರ್ನಾಟಕದವರ ಮೇಲೆ ಆಗುತ್ತಿರುವ ದೌರ್ಜನ್ಯದ ಸರಮಾಲೆಗೆ ಹೊಸದೊಂದು ನೋವುಂಟು ಮಾಡುವ ವಿಚಾರ ಸೇರಿಕೊಂಡಿದೆ. ನಿನ್ನೆಯಿಂದ ಪ್ರದರ್ಶನ ಕಾಣುತ್ತಿರುವ ತಮಿಳಿನ ರೀಮೇಕ್ ಚಿತ್ರವಾದ ಸಿಂಗಂ ಅನ್ನೋ ಹಿಂದಿ ಸಿನೇಮಾದಲ್ಲಿ ನಾಯಕ ಹಾಗೂ ಖಳನಾಯಕನ ಪಾತ್ರದ ನಡುವೆ ನಡೆಯುವ ಸಂಭಾಷಣೆಯಲ್ಲಿ ಖಳನಾಯಕ “ನಾನು ಕರ್ನಾಟಕದ ಗಡಿಯಿಂದ ೧೦೦೦ ಜನರನ್ನು ಕರೆತರುತ್ತೇನೆ ಎಂದು ಹೇಳಿದಾಗ ಅದಕ್ಕೆ ಪ್ರತಿಯಾಗಿ ನಾಯಕ ನಿನ್ನಂತ ೧೦೦೦ ನಾಯಿಗಳನ್ನು ಬೇಟೆಯಾಡಲು ನನ್ನಂತ ಒಂದು ಸಿಂಹ ಸಾಕು ಎಂದು ಹೇಳುತ್ತಾನೆ”, ಅಲ್ಲಿಗೆ ಚಿತ್ರದ ಪ್ರಕಾರ ಕರ್ನಾಟಕದ ಗಡಿ ಭಾಗಗಳಲ್ಲಿ ವಾಸಿಸುವ ಜನರು ನಾಯಿಗಳಂತೆ? ಇನ್ನೊಂದು ವಿಶೇಷ ಅಂದ್ರ ಈ ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ ಹಾಗೂ ಖಳನಾಯಕನ ಪಾತ್ರದಲ್ಲಿ ನಟಿಸಿರುವ ಪ್ರಕಾಶ್ ರೈ ಇಬ್ಬರೂ ಕರ್ನಾಟಕದವರೇ (?) ಆಗಿದ್ದರೂ ಒಂದು ರಾಜ್ಯದ ಜನರಿಗೆ ನೋವುಂಟು ಮಾಡುವಂತಹ ಸಂಭಾಷಣೆಯನ್ನ ಬಳಲಸೇಬಾರದಿತ್ತು ಅನ್ನೋ ಪರಿಜ್ಞಾನ ಕೂಡ ಅವರಲ್ಲಿ ಇರಲಿಲ್ವೇ?

ಆದರೆ ನಿಜಕ್ಕೂ ಗಡಿ ಭಾಗವಾದ ಬೆಳಗಾವಿಯಲ್ಲಿ ಕಷ್ಟ ಅನುಭವಿಸುತ್ತಿರುವುದು ಕನ್ನಡದ ಜನರೇ ಅನ್ನೋದು ನಮಗೆಲ್ಲಾ ಗೊತ್ತಿರುವುದೇ. ಎಂ.ಇ. ಎಸ್ ನಂತಹ ಒಂದು ಸಂಘಟನೆ ಹುಟ್ಟಿಕೊಂಡಾಗಿನಿಂದ ಕನ್ನಡಿಗರ ಪಾಡು ನೆಲಕಚ್ಚಿತ್ತು. ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳೋಕೆ ಒಂದಾಗಿ ಬಾಳುತ್ತಿದ್ದ ಕನ್ನಡ ಹಾಗೂ ಮರಾಠಿ ಭಾಷಿಕರ ನಡುವೆ ಕಂದಕ ಸೃಷ್ಠಿಸಿದ ಜನರಿವರು. ಕನ್ನಡಿಗರ ವಿರುದ್ಧ ಎಂತಹ ಹೀನ ಕೆಲಸಕ್ಕಾದರೂ ತಯಾರಾಗಿರುವ ಜನರಿವರು. ಸುಮಾರು ೩೦-೪೦ ವರ್ಷಗಳಿಂದ ಇವರ ದಬ್ಬಾಳಿಕೆಯಿಂದ ಬೇಸತ್ತಿದ್ದ ಜನರಿಗೆ ಕರವೇ ಯಂತಹ ಕನ್ನಡ ಪರ ಸಂಘಟನೆ ದುಡಿದ ಪರಿಣಾಮ ಇಂದು ಕನ್ನಡಿಗರು ಕೊಂಚ ಉಸಿರಾಡುವಂತಹ ಪರಿಸ್ಥಿತಿ ಇದೆ. ಆದರೆ ಇನ್ನೊಬ್ಬರ ನೋವಿನಲ್ಲೂ ಸುಖಪಡುವ ಎಂ.ಇ.ಎಸ್ ನಂತಹ ಸಂಘಟನೆಯ ಜನರ ತೆವಲಿಗಾಗಿ ಇಂತಹ ಸಂಭಾಷಣೆಗಳನ್ನು ಸೇರಿಸಿ ಕರ್ನಾಟಕದ ಜನರಿಗೆ ಅವಮಾನವೆಸಗುವುದೆ ಎಷ್ಟರ ಮಟ್ಟಿಗೆ ಸರಿ?

ಕನ್ನಡಿಗರ ವಿಶ್ವಮಾನವತೆ!!
ಇಂದು ಬೆಳಗ್ಗೆ ಸುವರ್ಣ ವಾಹಿನಿಯಲ್ಲಿ ಕರವೇ ಅಧ್ಯಕ್ಷ ಶ್ರೀ ಟಿ.ಎ. ನಾರಾಯಣಗೌಡರ ಸಂದರ್ಶನದಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿದ ಕರ್ನಾಟಕದ ಪ್ರಜೆಗಳೊಬ್ಬರು ಚಿತ್ರದ ಸಂಭಾಷಣೆಯಲ್ಲಿ ಯಾವುದೇ ತಪ್ಪಿಲ್ಲ, ಅದು ಕನ್ನಡಿಗರ ಪರವಾಗಿದೆ ಹಾಗಾಗಿ ಅದಕ್ಕೆ ಅಡ್ಡಿಪಡೆಸಬೇಡಿ ಅಂತ ಸಲಹೇ ನೀಡಿದರು. ಬಹುಷಃ ಅವರು ನಿಜಕ್ಕೂ ವಿಶ್ವಮಾನವರೇ ಇರಬೇಕು. ಹೀಗೆ ಕನ್ನಡಿಗರು ತಮ್ಮತನವನ್ನ ಮರೆತು ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಸಹಿಸಿಕೊಂಡು ಬದುಕಬೇಕಾದ ಹೀನ ಪರಿಸ್ಥಿತಿಗೆ ಇಂಥವರೆ ಕಾರಣ. ನಮ್ಮ ಹೇಡಿತನಕ್ಕೆ, ನಮ್ಮ ಅಭಿಮಾನ ಶ್ಯೂನ್ಯತೆಗೆ ನಾವು ಕೊಟ್ಟಿರುವ ಹೆಸರು ವಿಶ್ವಮಾನವತೆಯೇ? ಕರ್ನಾಟಕದವರನ್ನು ಅವಹೇಳಿಸಿ ಮಾತನಾಡಿರುವುದು ಇದೇ ಮೊದಲ್ಲಲ, ಹಾಗೆಯೇ ಇದೇ ಕೊನೆಯಾಗುತ್ತದೆಂಬ ನಂಬಿಕೆ ಕೂಡ ಇಲ್ಲಾ. ಒಂದು ಒಕ್ಕೂಟದ ವ್ಯವಸ್ಥೆಯಲ್ಲಿ ಬದುಕುತ್ತಿರುವ ವಿವಿಧ ರಾಜ್ಯಗಳ ಜನರ ನಡುವೆ ಒಡಕು ತರಬಹುದಾದಂತಹ ಇಂತಹ ಕೆಲಸಗಳನ್ನ ತಡೆಯುವುದಕ್ಕೆ ಅಲ್ಲಿಯ ಜನರಿಂದ ಮಾತ್ರ ಸಾಧ್ಯ, ಜನ ಎಚ್ಚೆತುಕೊಳ್ಳಬೇಕು, ನಾವು, ನಮ್ಮತನ ಅನ್ನೋ ಜಾಗೃತಿ ಅವರಲ್ಲಾಗಬೇಕು. ಯಾವುದೇ ಭಾಗದ ಜನರನ್ನ ಕೀಳಾಗಿ ಕಾಣುವ ಇಂತಹ ಹೀನ ಚಾಳಿಗೆ ವಿರುದ್ಧವಾಗಿ ಧ್ವನಿ ಎತ್ತಿ ನಿಲ್ಲಬೇಕು.
ಚಿತ್ರ ಕೃಪೆ: Pics4news

ಭಾನುವಾರ, ಮೇ 29, 2011

ಬೆಂಗಳೂರಿನಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನ

ಬಹುಷಃ ಕಳೆದ ಕೆಲವು ತಿಂಗಳಿಂದ ದೇಶದ ಪ್ರತಿಯೊಬ್ಬ ಪ್ರಜೆಯು ಮಾತನಾಡುತ್ತಿರುವುದು ದೇಶದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರದ ಬಗ್ಗೆ. ಈ ಭ್ರಷ್ಟಾಚಾರ ಅನ್ನೋ ಮಹಾಮಾರಿ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಕರಾಳ ಬಾಹುವನ್ನು ಚಾಚಿದೆ. ಭ್ರಷ್ಟಾಚಾರ ಸಮಾಜದ ನೈತಿಕತೆಯ ಜೊತೆಗೆ , ಇಡೀ ನಾಡನ್ನೇ ಅಧೋಗತಿಯತ್ತ ಕೊಂಡ್ಯೊಯುತ್ತದೆ. ಇಂದು ಭ್ರಷ್ಟಾಚಾರ ಅನ್ನುವುದು ಜಾತಿ, ಮತ, ಧರ್ಮ, ಭಾಷೆ ಹೀಗೆ ಎಲ್ಲವನ್ನು ಮೀರಿ ಬೆಳೆದು ನಿಂತು ನಮ್ಮ ನಾಡಿನ ಏಳಿಗೆಗೆ ಮಾರಕವಾಗಿ ಪರಿಣಮಿಸಿದೆ. ಕೇಂದ್ರ ಹಾಗೂ ರಾಜ್ಯ ಅನ್ನೋ ಭೇದವಿಲ್ಲದೇ ಭ್ರಷ್ಟಾಚಾರ ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ನೆಲೆಗೊಂಡಿದೆ. ಭ್ರಷ್ಟಾಚಾರ ಅಳಿಯದ ಹೊರತು ನಮ್ಮ ರಾಜ್ಯ ಏಳಿಗೆ ಕಾಣುವುದಕ್ಕೆ ಸಾಧ್ಯವೇ ಇಲ್ಲಾ. ಈ ಭ್ರಷ್ಟಾಚಾರ ಎಂಬ ರಕ್ಷಸವನ್ನು ನಾವೆಲ್ಲಾ ಸೇರಿ ಹೊಡೆದು ಹಾಕಲೇ ಬೇಕು.

ಕಳೆದ ಕೆಲವು ತಿಂಗಳುಗಳಿಂದ ಅಣ್ಣಾ ಹಜಾರೆ ಅವರ ನೇತ್ರತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ಅಸ್ತ್ರವಾಗಿ ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತರಬೇಕು ಎಂದು ದೇಶಾದ್ಯಂತ ಹೋರಾಟಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಸಿದ್ಧ ಪಡಿಸಿದ್ದ ಲೋಕಪಾಲ್ ಮಸೂದೆ ಭ್ರಷ್ಟರನ್ನು ಶಿಕ್ಷಿಸುವ ಶಕ್ತಿಯನ್ನು ಹೊಂದಿರದ ಕಾನೂನು ಎಂದು ಆರೋಪಿಸುತ್ತಾ ಬಂದಿರುವ ಅಣ್ಣಾ ಹಜಾರೆ ಮತ್ತು ಅವರ ತಂಡ, ಜನರನ್ನು ಒಳಗೊಂಡ ಒಂದು ಲೋಕಪಾಲ್ ಸಂಸ್ಥೆ ಬರಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಾ ಬಂದಿದ್ದಾರೆ. ಮುಖ್ಯವಾದ ಅಂಶವೆಂದರೆ ಭ್ರಷ್ಟಾಚಾರ ನಿಗ್ರಹಕ್ಕೆ ಹಲವು ಆಯಾಮಗಳಿವೆ. ವಿವಿಧ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನೋಡುವುದಾದರೆ ಭ್ರಷ್ಟಾಚಾರವನ್ನು ಹತ್ತಿಕ್ಕಲು ವಿವಿಧ ಮಾರ್ಗಗಳು ಕಾಣಸಿಗುತ್ತವೆ. ಹಲವು ಸೈದ್ಧಾಂತಿಕ ಹಿನ್ನೆಲೆಯಲ್ಲಿ ಜನಲೋಕಪಾಲ್ ಕರಡನ್ನು ನೋಡುವುದಾದರೆ ಸಂಪೂರ್ಣವಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಈ ಮಸೂದೆ ಎಷ್ಟು ಸಹಕಾರಿ? ಈ ಮಸೂದೆಯೇ ಅಂತಿಮವೇ ಅನ್ನೋ ತೀರ್ಮಾನಕ್ಕೆ ಜನರು ಇನ್ನೂ ಬರಬೇಕಿದೆ. ಜನರಲ್ಲಿ ಜಾಗೃತಿ ಮೂಡದ ಹೊರತು ಯಾವುದೇ ಕಾನೂನುಗಳು ಸಮಾಜದ ಸ್ವಾಸ್ಥ್ಯವನ್ನು ಸರಿಪಡಿಸಲಾರವು ಎನ್ನುವುದು ನನ್ನ ನಂಬಿಕೆ.

ಮೊನ್ನೆ 28 ನೇ ತಾರೀಕು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಕೇವಲ ನಗರದ ಸುಶಿಕ್ಷಿತ ಜನರನ್ನ ದೃಷ್ಠಿಯಲ್ಲಿ ಇಟ್ಟುಕೊಂಡು ನಡೆಸಿದ ಕಾರ್ಯಕ್ರಮವಾಗಿತ್ತು ಅನ್ನೋದು ನನ್ನ ಅಭಿಪ್ರಾಯ. ಬೆಂಗಳೂರಿನ ಹಿರಿಯರು, ವಿಧ್ಯಾರ್ಥಿಗಳು, ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಹೊರತುಪಡಿಸಿದರೆ ಸಾಮಾನ್ಯ ಜನರು ಕೆಲವೇ ಕೆಲವು ಸಂಖ್ಯೆಯಲ್ಲಿ ಕಂಡುಬಂದರು. ಈ ಮಾತು ಯಾಕೆ ಮುಖ್ಯವೆಂದರೆ ಇಂದು ಭ್ರಷ್ಟಾಚಾರದ ಕರಾಳ ಹಿಡಿತಕ್ಕೆ ಸಿಕ್ಕಿ ನರಳುತ್ತಿರುವವರು ಬಡವರ್ಗದ ಜನರೇ. ಭ್ರಷ್ಟಾಚಾರದ ಕಾರಣದಿಂದಾಗಿ ತಮಗೆ ನ್ಯಾಯವಾಗಿ ಸಿಗಬೇಕಾಗಿದ್ದ ಸವಲತ್ತುಗಳನ್ನು ಸಹ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾವುಗಳು ಸಾಮಾನ್ಯ ಜನರನ್ನು ಕಡೆಗಣಿಸಿ ಈ ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ಯಶಸ್ವಿಗೊಳಿಸಲು ಸಾಧ್ಯವಿಲ್ಲಾ. ನಿಜಕ್ಕೂ ಈ ಕಾರ್ಯಕ್ರಮದ ವಿವರಗಳು ಸಾಮಾನ್ಯ ಜನರನ್ನು ತಲುಪಿತೇ ಅನ್ನುವುದು ನನ್ನ ಪ್ರಶ್ನೆ?

28 ನೇ ತಾರೀಕು ನಡೆದ ಕಾರ್ಯಕ್ರಮದಲ್ಲಿ ಎದ್ದು ಕಂಡ ಕೊರತೆಯೆಂದರೆ ಕನ್ನಡವನ್ನು ಕಡೆಗಣಿಸಿದ್ದು. ಎಲ್ಲೋ ಕೆಲವು ಬೆರೆಳೆಣಿಕೆಯಷ್ಟು ಕನ್ನಡದ ಗೆಳೆಯರನ್ನು ಬಿಟ್ಟರೆ ಮಿಕ್ಕಿದ್ದೆಲ್ಲಾ ಆಂಗ್ಲ ಹಾಗೂ ಹಿಂದಿಮಯವಾಗಿತ್ತು. ಆಯೋಜಕರು ಹಾಗೂ ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು ಮರೆತು ಹೋದ ಒಂದು ಪ್ರಮುಖ ವಿಷಯವೆಂದರೆ ಆಯಾ ಪ್ರದೇಶದ ಭಾಷೆಯನ್ನ ಕಡೆಗಣಿಸಿ ಹೋರಾಟ ಅಥವಾ ಆಂದೋಲನವನ್ನ ಯಶಸ್ವಿಗೊಳಿಸಲು ಸಾಧ್ಯವಿಲ್ಲಾ. ಭಾರತದಂತಹ ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ದೇಶದಲ್ಲಿ ಭಾಷೆ ತುಂಬ ಪ್ರಮುಖ ಹಾಗೂ ಪರಿಣಾಮಕಾರಿ ಸಾಧನವಾಗಿದೆ. ಆದರೆ ಯಾಕೋ ನಮ್ಮ ಆಯೋಜಕರು ಇದನ್ನ ಮರೆತಂತಿದ್ದರು. ಕಾರಣ ಬಂದಿದ್ದ ಅನೇಕ ಜನರಿಗೆ ಕಾರ್ಯಕ್ರಮದ ಗಣ್ಯರು ಮಾಡಿದ ಹಿಂದಿ ಭಾಷಣಗಳು ಅರ್ಥವಾಗಲೇ ಇಲ್ಲಾ. ಶಾಲೆಯಲ್ಲಿ ಹಿಂದಿಯನ್ನು ಒಂದು ಭಾಷೆಯನ್ನಾಗಿ ಕಲಿತಿರುವ ನನಗೇ ಗಣ್ಯರ ಎಲ್ಲಾ ಮಾತುಗಳನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ, ಅಂತಹುದರಲ್ಲಿ ಅನೇಕರಿಗೆ ಭಾಷಣಕಾರರ ಭಾಷಣಗಳು ಅರ್ಥವೇ ಆಗಲಿಲ್ಲ ಅನ್ನೋದು ನೋವಿನ ಸಂಗತಿ. ಕಡೇ ಪಕ್ಷ ಆಯೋಜಕರು ವೇದಿಕೆಯ ಮೇಲೆ ಮಾತನಾಡಿದ ಗಣ್ಯರ ಮಾತುಗಳನ್ನು ಕನ್ನಡಕ್ಕೆ ಅನುವಾದಿಸಿ ಕರಪತ್ರಗಳನ್ನು ಹಂಚಿದ್ದರೆ ಒಳ್ಳೆಯದಿತ್ತೇನೊ ಎಂದು ಅನ್ನಿಸಿತು. ಒಟ್ಟಿನಲ್ಲಿ ನಡೆದ ಕಾರ್ಯಕ್ರಮದ ಉದ್ದೇಶ ಒಳ್ಳೆಯದೇ ಇದ್ದರು ಅದರ ಸಫಲತೆ ಇರುವುದು ಅದನ್ನು ಜನರಿಗೆ ತಲುಪಿಸುವ ಬಗೆಯಲ್ಲಿ. ಈ ನಿಟ್ಟಿನಲ್ಲಿ ಮುಂದೆ ನಡೆಯುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಜನ ಸಾಮಾನ್ಯರನ್ನು ತಲುಪುವಂತಾಗಲಿ ಅನ್ನುವುದು ನನ್ನ ಆಶಯ.

ಸೋಮವಾರ, ಏಪ್ರಿಲ್ 18, 2011

ಸೀಟ್ ಬೇಕು ಆದ್ರೆ ರಾಜ್ಯ ಬೇಡಾ....

ಡಾ. ಬಿ. ಆರ್. ಅಂಬೇಡ್ಕರ್ ಅವರ ಜನುಮ ದಿನದಂದು ಒಂದು ಸೋಜಿಗದ ವಿಷಯ ಹೊರಬಿದ್ದಿದೆ. ಪತ್ರಿಕೆಗಳಲ್ಲಿ ಇದರ ಬಗ್ಗೆ ವರದಿಯಾದರು ಸಹ, ಇದನ್ನ ಪತ್ರಿಕೆಗಳು ಗಂಭೀರವಾಗಿ ಪರಿಗಣಿಸಿದಂತೆ ಕಾಣಲಿಲ್ಲ. ವಿಷಯ ಏನಪ್ಪ ಅಂದರೆ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ ಸಿಂಗ್ ಅವರು, ಸದ್ಯಕ್ಕೆ ಅಸ್ಸಾಂ ರಾಜ್ಯದಲ್ಲಿ ನೆಲೆಸುತ್ತಿದ್ದಾರೆ ಅನ್ನೋದನ್ನ ದಾಖಲೆಗಳು ಹೇಳುತ್ತಿವೆ. ಮನಮೋಹನ್ ಸಿಂಗ್ ಹಾಗೂ ಅವರ ಪತ್ನಿ ದಿಸ್ಪುರ್ ಕ್ಷೇತ್ರದ ಮತದಾರರಾಗಿದ್ದು, ಈ ಸಾರಿಯ ಚುನಾವಣೆಯಲ್ಲಿ ಮತದಾನ ಮಾಡಿಲ್ಲ ಅಂತ ಪತ್ರಿಕೆಗಳಲ್ಲಿ ವರದಿಯಾಗಿದೆ ಹಾಗೂ ಇದನ್ನ ಆ ಕ್ಷೇತ್ರದ ಉಸ್ತುವಾರಿ ವಹಿಸಿದ್ದ ಚುನಾವಣಾ ಅಧಿಕಾರಿ ಸಹ ನಿಜವೆಂದು ಹೇಳಿದ್ದಾರೆ.

ಮುಖ್ಯವಾದ ವಿಷ್ಯ ಏನಪ್ಪಾ ಅಂದ್ರೆ ಡಾ. ಮನಮೋಹನ್ ಸಿಂಗ್, ಅಸ್ಸಾಂನಿಂದ ರಾಜ್ಯ ಸಭೆಗೆ ಆಯ್ಕೆಯಾಗಿ ಬಂದಿದ್ದಾರೆ ಹಾಗೂ ಹಿಂದೆಯೂ ಆಯ್ಕೆಯಾಗಿದ್ದರು. ಮತದಾನ ಪ್ರತಿಯೊಬ್ಬ ನಾಗರೀಕನ ಮೂಲ ಕರ್ತವ್ಯ ಎಂದು ನಮ್ಮ ಸಂವಿಧಾನದಲ್ಲಿ ಹೇಳಲಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಒಂದು ಜನಪ್ರಿಯ ಸರ್ಕಾರವನ್ನು ಆರಿಸಲು ಪ್ರತಿಯೊಬ್ಬ ಪ್ರಜೆಗೂ ನೀಡಲಾಗಿರುವ ಪವಿತ್ರ ಹಕ್ಕು ಅನ್ನೋದನ್ನ ನಮ್ಮ ದೇಶದ ಪ್ರಧಾನ ಮಂತ್ರಿಗಳು ಮರೆತು ಬಿಟ್ಟಿದ್ದಾರೆಯೇ?? ಪ್ರಜ್ಞಾವಂತ ಜನರು ಚುನಾವಣೆಯಿಂದ ವಿಮುಖರಾಗುತ್ತಿದ್ದಾರೆ ಎಂದು ಹೇಳುತ್ತಿರವ ಈ ಸಮಯದಲ್ಲಿ ಒಬ್ಬ ರಾಜಕಾರಣಿ ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಮನಮೋಹನ್ ಸಿಂಗ್ ಅವರಿಂದ ಇಂತಹ ನಡೆ ಸರಿಯಾದುದಲ್ಲ.

ರಾಜ್ಯಸಭೆ ಸೀಟ್ ಬೇಕು ಆದರೆ ರಾಜ್ಯ ಬೇಡಾ:
ಇಲ್ಲಿ ಮನಮೋಹನ್ ಸಿಂಗ್ ಮತದಾನ ಮಾಡಿಲ್ಲ ಅನ್ನೋದು ಒಂದು ಕಡೆಯಾದರೆ, ವಿವಿಧ ರಾಜ್ಯಗಳ ರಾಜ್ಯಸಭಾ ಸೀಟುಗಳು ಹೊರ ರಾಜ್ಯದವರನ್ನು ಹಿಂಬಾಗಿಲ ಮೂಲಕ ರಾಜ್ಯಸಭೆಗೆ ಕಳಿಸುತ್ತಿರುವ ಕ್ರಿಯೆ ಗಾಬರಿ ಹುಟ್ಟಿಸುವಂತಹುದು. ರಾಷ್ಟ್ರೀಯ ರಾಜಕೀಯ ಪಕ್ಷಗಳು ತಮ್ಮ ನಾಯಕರನ್ನು ಓಲೈಸಲೋ ಅಥವಾ ಬೇಕಾದವರನ್ನು ಮೇಲ್ಮನೆಗೆ ಕಳುಹಿಸಲು ಅಮೂಲ್ಯವಾದ ರಾಜ್ಯಸಭಾ ಸೀಟುಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ರಾಜ್ಯಸಭೆಗೆ ಕಳುಹಿಸುವ ಪ್ರತಿನಿಧಿಗಳಿಗೆ ರಾಜ್ಯದ ಬಗ್ಗೆ ಏನೆಂದರೇ ಎನೂ ಗೊತ್ತಿರುವುದಿಲ್ಲಾ ಅಥವಾ ರಾಜ್ಯದ ಬಗ್ಗೆ ಕಾಳಜಿವಹಿಸಬೇಕೆಂದು ಅನ್ನಿಸದವರನ್ನು ಆರಿಸಿ ಕಳುಹಿಸುತ್ತಾರೆ. ಈ ಮೂಲಕ ರಾಜ್ಯಸಭೆಯ ಮೂಲ ಉದ್ದೇಶವನ್ನೇ ಹಾಳುಮಾಡುತ್ತಿದ್ದಾರೆ. ಇದಕ್ಕೆ ಉದಾಹರಣೆಯಾಗಿ ನಮ್ಮ ರಾಜ್ಯದಲ್ಲೇ ಬಿಜೆಪಿಯಿಂದ ವೆಂಕಯ್ಯ ನಾಯ್ಡು, ಉದ್ಯಮಿ ರಾಜೀವ್ ಚಂದ್ರಶೇಖರ್, ಚಿತ್ರನಟಿ ಹೇಮಾ ಮಾಲಿನಿಯನ್ನು ಆರಿಸಿ ಕಳುಹಿಸಿದರೆ, ಜೆಡಿಎಸ್ ಪಕ್ಷ ಎಂ.ಎಂ. ರಾಮಸ್ವಾಮಿ ಎಂಬ ಹೊರನಾಡಿನ ಉದ್ಯಮಿಯನ್ನು ರಾಜ್ಯಸಭೆಗೆ ಆರಿಸಿ ಕಳುಹಿಸಿದೆ.

ಇಲ್ಲಿಂದ ಆರಿಸಿ ಹೋಗುವ ಯಾವ ಹೊರ ರಾಜ್ಯದ ರಾಜ್ಯಸಭಾ ಸದಸ್ಯರು ನಮ್ಮ ನಾಡಿಗಾಗಿ ದುಡಿದಿದ್ದಾರೆ? ನಾಡಿನ ಯಾವ ಸಮಸ್ಯೆಗೆ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ? ಯಾವ ಅಂತರ್ ರಾಜ್ಯ ಸಮಸ್ಯೆಗಳನ್ನು ಪರಿಹರಿಸಿದ್ದಾರೆ? ಎಷ್ಟು ಸರ್ತಿ ನಾಡಿನ ಪರವಾಗಿ ರಾಜ್ಯ ಸಭೆಯಲ್ಲಿ ಧ್ವನಿ ಎತ್ತಿದ್ದಾರೆ? ಇವಕೆಲ್ಲ ಬಹುಷಃ ಇಲ್ಲಾ ಅನ್ನುವ ಉತ್ತರವೇ ದೊರೆಯುತ್ತದೆ. ಹೈಕಮಾಂಡಿನ ಧಣಿಗಳನ್ನು ತಣಿಸುವಲ್ಲೇ ನಿರತರಾಗಿರುವ ಜನರಿಂದ ನಮ್ಮ ನಾಡಿಗೆ ಆಗಿರುವ ಉಪಯೋಗವಾದರು ಏನು???? ಇದಕೆಲ್ಲ ಪರಿಹಾರ ನಮ್ಮ ಜನರ ಕೈಯಲ್ಲೇ ಇದೇ ಅನ್ನೋದನ್ನ ಮತ್ತೆ ಹೇಳಬೇಕಾಗಿಲ್ಲ ಅಲ್ವೆ?

ಸೋಮವಾರ, ಏಪ್ರಿಲ್ 11, 2011

ರಾಷ್ಟ್ರೀಯ ಪಕ್ಷಗಳ ಒಡೆದು ಆಳುವ ನೀತಿ

ಕಳೆದ ಎರಡು ವಾರಗಳಲ್ಲಿ ನಡೆದಿರುವ ಸುದ್ದಿಗಳ ಬಗ್ಗೆ ನಿಮ್ಮ ಗಮನ ಹರಿಸಲು ಇಷ್ಟಪಡುತ್ತೇನೆ. ಪತ್ರಿಕೆಗಳಲ್ಲಿ ಕೇವಲ ಸುದ್ದಿ ಎನ್ನುವಂತೆ ಇವುಗಳನ್ನು ಬಿತ್ತರಿಸಲಾಯಿತು, ಆದರೆ ಇವುಗಳ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ.

ಮರುಚುನಾವಣೆ ಹಾಗೂ ತೆಲುಗಿನಲ್ಲಿ ಭಾಷಣ:
ಮೊನ್ನೆ ನಡೆದ ಮರುಚುನಾವಣೆಯ ಪ್ರಚಾರಕ್ಕಾಗಿ ನಮ್ಮ ರಾಜ್ಯದ ರಾಷ್ಟ್ರೀಯ ಪಕ್ಷಗಳು ಭರ್ಜರಿ ಪ್ರಚಾರ ಕೈಗೊಂಡವು, ಅದಕ್ಕಾಗಿಯೇ ಹೊರರಾಜ್ಯದ ಚಲನಚಿತ್ರ ನಟ/ನಟಿಯರನ್ನು ಕರೆಸಿದ್ದವು. ಮತದಾರನನ್ನು ಓಲೈಸುವ ಭರದಲ್ಲಿ ನಮ್ಮ ರಾಜಕೀಯ ಪಕ್ಷಗಳು ಮಾಡುತ್ತಿರುವ ತಪ್ಪುಗಳು ಮಾತ್ರ ಬಹಳ ದೊಡ್ಡದಾಗಿವೆ. ಬಂಗಾರ ಪೇಟೆಯಲ್ಲಿ ನಡೆದ ಉಪಚುನಾವಣೆಗಾಗಿ ನಡೆಸಿದ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷ ತೆಲಗು ಚಿತ್ರನಟ ಚಿರಂಜೀವಿಯನ್ನು ಬಳಸಿಕೊಂಡಿತ್ತು. ಅವರು ಸಹ ಭರ್ಜರಿಯಾಗಿ ತೆಲುಗಿನಲ್ಲಿ ಭಾಷಣ ಮಾಡಿ ಹೊರಟು ಹೋದರು. ಇದರಲ್ಲಿ ತಪ್ಪೇನು ಅಂತೀರಾ? ಮತದಾರನನ್ನು ಓಲೈಸುವ ಭರದಲ್ಲಿ ಕರ್ನಾಟಕದ ವಿವಿಧ ಭಾಷಿಕರಲ್ಲಿ ಒಡಕುಂಟು ಮಾಡಲಾಗುತ್ತಿದೆ. ಮೊನ್ನೆ ನಡೆದಿದ್ದು ಸಹ ಅದೇ, ಹಲವು ಶತಮಾನ ಅಥವಾ ಹಲವು ದಶಕಗಳಿಂದ ಇಲ್ಲಿ ನೆಲೆಸಿರುವ ತೆಲುಗು ಭಾಷಿಕರು ಕನ್ನಡದವರೇ ಆಗಿಹೋಗಿದ್ದಾರೆ. ಆದರೆ ನೀವು ತೆಲುಗರು ನೀವು ಕನ್ನಡಿಗರಲ್ಲಾ ಅಂತಾ ತೋರಿಸೋ ಪ್ರಯತ್ನಗಳೇ ಚಿರಂಜೀವಿ ಯಂತಹ ತೆಲುಗು ನಟರನ್ನು ಕರೆದುಕೊಂಡು ಬಂದು ಕರ್ನಾಟಕದಲ್ಲಿ ಭಾಷಣ ಮಾಡಿಸುವುದು. ಕರ್ನಾಟಕದ ಜನರನ್ನ ಓಲೈಸಲು ಆಂಧ್ರಪ್ರದೇಶದ ಕರಾವಳಿ ತೀರದ ಒಬ್ಬ ನಟ ಬಂದು ನೀವು ಕನ್ನಡಿಗರಲ್ಲಾ ಎಂದು ಸಂದೇಶ ನೀಡಿಸುವ ಕೆಲಸ ಮಾಡುತ್ತಿರುವ ಪಕ್ಷಗಳು ಮಾಡುತ್ತಿರುವುದಾದರು ಏನು ಅನ್ನೋದನ್ನ ತಾವೇ ಪ್ರಶ್ನಿಸಿಕೊಳ್ಳಲಿ.

ಹಾಗಂತ ಮತದಾರರೇನು ದಡ್ಡರಲ್ಲ, ಚಿರಂಜೀವಿ ಕೇವಲ ಒಬ್ಬ ನಟ ಅನ್ನೋ ಕಾರಣಕ್ಕೆ ಬಂದು ಸೇರುತ್ತಾರೆಯೇ ಹೊರತು, ಆವರು ಮಾಡುವ ತೆಲುಗು ಭಾಷಣ ಕೇಳಿ, ಕಾಂಗ್ರೆಸ್ ಪಕ್ಷಕ್ಕೆ ಓಟ್ ನೀಡುತ್ತಾರೆ ಅನ್ನೋದು ಹಾಸ್ಯಾಸ್ಪದ ಅನ್ನಿಸುತ್ತೆ. ನಮ್ಮ ರಾಜ್ಯದ ಏಳಿಗೆಯನ್ನೇ ಮರೆತಿರುವ ರಾಷ್ಟ್ರೀಯ ಪಕ್ಷಗಳು ಕನಿಷ್ಠ ಪಕ್ಷ ಸಾಮರಸ್ಯದಿಂದ ಬದುಕುತ್ತಿರುವ ಜನರನ್ನು ಭಾಷೆಯ ಹೆಸರಲ್ಲಿ ಒಡೆದು ಓಟ್ ಬ್ಯಾಂಕ್ ಗಳನ್ನಾಗಿ ಮಾಡದಿದ್ದರೆ ಅಷ್ಟರ ಮಟ್ಟಿಗೆ ಜನರಿಗೆ ಒಳಿತನ್ನ ಮಾಡುತ್ತಿದ್ದಾರೆ ಎಂದು ಅಂದುಕೊಳ್ಳೋಣ.

ಕನ್ನಡಿಗ ಮೇಯರ್ ಗೆ ಚಪ್ಪಲಿ ತೋರಿಸಿದ್ದ ಮಹಿಳೆ ಈಗ ಬೆಳಗಾವಿ ಮೇಯರ್:

ಬಹುಷಃ ಇಂತಹ ಘಟನೆಗಳು ಕರ್ನಾಟಕದಲ್ಲಿ ಮಾತ್ರ ನಡೆಯುವುದಕ್ಕೆ ಸಾಧ್ಯ ಅನ್ನಿಸುತ್ತೆ. ಎಂಇಎಸ್ ನಂತಹ ಕೆಟ್ಟ ಸಂಘಟನೆ ಹಲವಾರು ದಶಕಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ತನ್ನ ಹಿತಾಸಕ್ತಿಗಾಗಿ ಕನ್ನಡ ಹಾಗೂ ಮರಾಠಿಗರಲ್ಲಿ ವಿಷದ ಬೀಜ ಬಿತ್ತುತ್ತಾ ಬಂದಿದೆ, ಇದರ ಜೊತೆ ಜೊತೆಗೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ತರಲೆ ಮಾಡುತ್ತಾ ತನ್ನ ಅಸ್ತಿತ್ವ ಕಾಪಾಡಿಕೊಂಡು ಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರೇ ಸಂಘಟನೆಗಳು ನಡೆಸಿದ ನಿರಂತರ ಹೋರಾಟದಿಂದಾಗಿ ಎಂಇಎಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತಕ್ಕೆ ಬಂದಿದೆ. ಈ ಸಂಘಟನೆಗೆ ಸೇರಿದ ಕೆಲವು ಸದಸ್ಯರು ಈ ಸರ್ತಿಯ ಮಹಾನಗರ ಪಾಲಿಕೆಯಲ್ಲಿ ಗೆದ್ದು ಬಂದಿದೆ, ಗಮನಾರ್ಹ ಸಂಗತಿ ಎಂದರೆ ಈ ಸಂಖ್ಯೆ ತನ್ನ ಪಕ್ಷದ ಅಭ್ಯರ್ಥಿಯನ್ನು ಮೇಯರ್ ನನ್ನಾಗಿ ಮಾಡುವಷ್ಟು ದೊಡ್ಡದಲ್ಲ.

ಈ ಎಂಇಎಸ್ ಸಂಘಟನೆಯ ಮಹಿಳೆ ಈಗಾ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಆಗಿ ವಿರೋಧವಿಲ್ಲದೆ ಆಯ್ಕೆಯಾಗಿದ್ದಾರೆ. ದುರಂತವೆಂದರೆ ಈ ಮಹಿಳೆ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನದ ತಯಾರಿಯ ಸಭೆಯಲ್ಲಿ ಆಗಿನ ಮೇಯರ್ ಗೆ ಚಪ್ಪಲಿ ತೋರಿಸಿ, ಸಮ್ಮೇಳನ ನಡೆಸಬಾರದು ಎಂದು ತರಲೆ ಮಾಡಿದ್ದರು. ಎಂಇಎಸ್ ಸಂಘಟನೆಯ ಈ ಮಹಿಳೆ ಈಗ ಮೇಯರ್ ಆಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಾರಣ ಎಂಇಎಸ್ ಗೆ ತನ್ನ ಅಭ್ಯರ್ಥಿಯನ್ನು ಮೇಯರ್ ಮಾಡುವಷ್ಟು ಸಂಖ್ಯಾಬಲವಿಲ್ಲ, ಹಾಗಾಗಿ ನಮ್ಮ ರಾಜ್ಯದ ರಾಜಕೀಯ ಪಕ್ಷಗಳ ಬೆಂಬಲವಿಲ್ಲದೆ ಅಥವಾ ಅಲ್ಲಿನ ರಾಜಕೀಯ ನಾಯಕರ ಬೆಂಬಲವಿಲ್ಲದೆ ಮೇಯರ್ ಆಗೋದಕ್ಕೆ ಸಾಧ್ಯವಾ??? ಇದು ಬೆಳಗಾವಿ ಜಿಲ್ಲೆಯಲ್ಲಿ ಇರುವ ತಾಲುಕೂ ಹಾಗೂ ಜಿಲ್ಲಾ ಪಂಚಾಯತ್ ಗಳಲ್ಲಿ ಅಧಿಕಾರ ಸ್ಥಾಪಿಸಲು ರಾಜಕೀಯ ಪಕ್ಷಗಳು ಸಹಾಯ ಮಾಡಿರಬಹುದಾ ಅನ್ನೋದು ಪ್ರಶ್ನೆ?

ಇದೇ ಎಂಇಎಸ್ ಸಂಘಟನೆಯ ಬಗ್ಗೆ ಏಪ್ರಿಲ್ ೧೦ನೇ ತಾರೀಕು ವಿ.ಕ ದಲ್ಲಿ ಒಂದು ವರದಿ ಪ್ರಕಟವಾಗಿದೆ. ವರದಿಯ ಸಾರಾಂಶವೆಂದರೆ ಬೆಳಗಾವಿ ಜಿಲ್ಲೆಯಲ್ಲಿ ಮಾಡಲಾಗುತ್ತಿರುವ ಕಳಸಾ ನಾಲಾ ಯೋಜನೆಯ ಬಗ್ಗೆ ವರದಿ ತಯಾರಿಸಿ, ಗೋವಾ ಸರ್ಕಾರಕ್ಕೆ ನೀಡಿ ಯೋಜನೆ ಜಾರಿಗೆ ಬರದಂತೆ ತಡೆಯುವುದು. ಇಂತ ಹೀನ ಕೆಲಸಗಳಲ್ಲಿ ತೊಡಗಿರುವ ಎಂಇಎಸ್ ಸಂಘಟನೆಯಿಂದ ನಮ್ಮ ನಾಡಿಗೆ ಮಾರಕ. ಇಂತಹ ಸಂಘಟನೆಗಳೊಂದಿಗೆ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಹಾಗೂ ಮಹಾನಗರ ಪಾಲಿಕೆಯಲ್ಲಿ(??) ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ನಮ್ಮ ರಾಜ್ಯದ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥವನ್ನಲ್ಲದೇ ರಾಜ್ಯದ ಬಗ್ಗೆಯೂ ಒಂದಷ್ಟೂ ಕಾಳಜಿ ತೋರಿಸಬೇಕು. ಇಲ್ಲದಿದ್ದರೆ ಜನರೇ ಇವರಿಗೆಲ್ಲಾ ಸರಿಯಾಗಿ ಪಾಠ ಕಲಿಸುತ್ತಾರೆ ಅನ್ನೋದು ನಮ್ಮ ರಾಜಕೀಯ ಪಕ್ಷಗಳು ಅರಿತುಕೊಳ್ಳಬೇಕು.

ಶನಿವಾರ, ಮಾರ್ಚ್ 12, 2011

ನಾನು ಕಂಡಂತೆ ನಮ್ಮ ಬೆಳಗಾವಿ


ಉತ್ತರ ಕರ್ನಾಟಕದವನಾದ ನನಗೆ, ಬೆಳಗಾವಿ ನನ್ನ ಬೆಳವಣಿಗೆಯ ಒಂದು ಭಾಗವೇ ಅಂದರೆ ತಪ್ಪಲ್ಲ. ವರ್ಷಗಳು ಕಳೆದಂತೆ ನನ್ನ ಜೊತೆಯೇ ಬೆಳಗಾವಿಯ ಸ್ವರೂಪ ಬದಲಾಗುತ್ತಾ ಬಂತು. ಉತ್ತರ ಕರ್ನಾಟಕದ ಜಿಲ್ಲೆಗಳು ಶೈಕ್ಷಣಿಕವಾಗಿ ಬಹಳ ಹಿಂದುಳಿದಿವೆ. ಒಳ್ಳೆಯ ಓದು ಅಥವಾ ಉನ್ನತ ಶಿಕ್ಷಣ ಪಡೆಯಬೇಕೆಂದರೆ ನಾವು ಹುಬ್ಬಳ್ಳಿ, ಧಾರವಾಡ ಇಲ್ಲವೆಂದರೇ ಬೆಳಗಾವಿಗೆ ಹೋಗಿ ಓದಬೇಕು. ಪಿಯುಸಿ ಮುಗಿಸಿದ ಮೇಲೆ ಇಂಜಿನಿಯರಿಂಗ್ ಒದಲು ನನಗೆ ಸಿಕ್ಕಿದ್ದು ಬೆಳಗಾವಿಯ ಒಂದು ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ. ಅದು 2003-04ರ ಸಮಯ, ಕಾಲೇಜಿಗೆ ಸೇರಿಕೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಇದ್ದವು, ಆಗ ಒಂದು ಕಡೆ ಖುಷಿಯಾಗುತ್ತಿದ್ದರೆ ಮತ್ತೊಂದು ಕಡೆ ಭಯ ಕಾಡುತ್ತಿತ್ತು ಕಾರಣ ನಾನು ಹೋಗುತ್ತಿರುವುದು ಬೆಳಗಾವಿ ಅನ್ನೋ ಊರಿಗೆ. ಜೊತೆಗೆ ಹಿಂದೆ ನನ್ನ ತಂದೆ ಇಲ್ಲಿ ಓದುತ್ತಿದ್ದಾಗ ಅವರಿಗೆ ಆಗಿದ್ದ ಅನೇಕ ಕಹಿ ಘಟನೆಗಳು. ಹೆದರಿಕೆಗೆ ಕಾರಣವಿದ್ದದ್ದು ಬೆಳಗಾವಿಯಲ್ಲಿ ಮರಾಠಿಗರು ಹೆಚ್ಚು, ಅಲ್ಲಿ ಕನ್ನಡ ಮಾತನಾಡುವವರನ್ನು ಹೊಡೆಯುತ್ತಾರೆ ಅನ್ನೋ ಭಯ, ಕಾರಣ ನನ್ನ ತಂದೆ 70ರ ದಶಕದಲ್ಲಿ ಇಲ್ಲಿ ಓದುತ್ತಿದ್ದಾಗ ಕನ್ನಡ ಮಾತನಾಡಿದ್ದಕ್ಕಾಗಿ ಮರಾಠಿಗರು ನನ್ನ ತಂದೆ ಜೊತೆ ಜಗಳವಾಡಿ ಅವರನ್ನ ಹೊಡೆದಿದ್ದರು ಕೂಡ.

ಬೆಳಗಾವಿಯಲ್ಲಿ ನನ್ನ ಅನುಭವ:
ಮೊದಲಬಾರಿಗೆ ಬೆಳಗಾವಿಯಲ್ಲಿ ಬಂದಿಳಿದಾಗ ನನಗೆ ಕಂಡಿದ್ದು ಅಲ್ಲಿದ್ದ ಮರಾಠಿಮಯ ವಾತಾವರಣ. ದಿನಸಿ ಅಂಗಡಿ, ಹೊಟೇಲ್ (ಉಡುಪಿ ಹೊಟೇಲ್ ಗಳನ್ನು ಹೊರತುಪಡಿಸಿ), ಆಟೋ ಓಡಿಸುವವರು ಹೀಗೆ ಎಲ್ಲಾ ಕಡೆ ಮರಾಠಿಯ ಪ್ರಭಾವ ಢಾಳಾಗಿ ಕಾಣಸಿಗುತ್ತಿತ್ತು. ಅಲ್ಲಿಗೆ ಹೋದ ಹೊಸದರಲ್ಲಿ ಈ ವಾತಾವರಣ ಬಹಳ ಇಕ್ಕಟ್ಟು ಅನ್ನಿಸುತ್ತಿತ್ತು. ಅನೇಕರಿಗೆ ಅಲ್ಲಿ ಕನ್ನಡ ಬಂದರೂ ಮಾತನಾಡುವುದಿಲ್ಲ, ಅವರಿಗೆ ಕನ್ನಡವೆಂದರೆ ಅಸಡ್ಡೆ, ಇನ್ನೂ ಸ್ವಲ್ಪ ಜನ ಕನ್ನಡವನ್ನು ಕಲಿಯುವದಕ್ಕೇ ಹೋಗಿರಲಿಲ್ಲ, ಕೆಲವು ಕನ್ನಡಿಗರು ಮರಾಠಿ ಮಾತನಾಡುವ ಪರಿಸ್ಥಿತಿ ಇತ್ತು. ಎಲ್ಲಾದಕ್ಕಿಂತ ಘೋರವೆಂದರೇ ನಮ್ಮ ರಾಜ್ಯೋತ್ಸವದ ದಿನ ಬೆಳಗಾವಿಯಲ್ಲಿ ಎಂಇಎಸ್ ನಂತಹ ಸಂಘಟನೆ ಕರಾಳ ದಿನವನ್ನ ಆಚರಿಸುತ್ತಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುತ್ತಿತ್ತು. ನನ್ನ ಮುಂದೆಯೇ ಅನೇಕ ಅಂಗಡಿಗಳ ಮಾಲೀಕರು ಎಂಇಎಸ್ ನವರನ್ನ ಬೈದದ್ದಿದೆ. ಬೆಳಗಾವಿಯಿಂದ ಆರಿಸಿ ಬಂದಿದ್ದ ಎಂಇಎಸ್ ಶಾಸಕರು ನಮ್ಮ ವಿಧಾನಸಭೆಯಲ್ಲಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಕೂಗಾಡುತ್ತಿದ್ದರು, ನಮ್ಮ ರಾಜ್ಯದ ಉಳಿದ ಪ್ರತಿನಿಧಿಗಳು ನೋಡಿಕೊಂಡು ಸುಮ್ಮನಿರುತ್ತಿದ್ದರು. ಎಂಇಎಸ್ ಪ್ರಾಬಲ್ಯದ ನಗರಸಭೆ, ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿ ಸಭೆಗಳಲ್ಲಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ನಿರ್ಣಯಗಳನ್ನು ತಗೆದುಕೊಳ್ಳುತ್ತಿದ್ದುದ್ದನ್ನು ಪತ್ರಿಕೆಗಳಲ್ಲಿ ಓದುತ್ತಿದ್ದೆ. ಯಾಕೆ ಸರ್ಕಾರ ಅಥವಾ ಬೆಳಗಾವಿ ಜಿಲ್ಲೆಯ ಇತರೆ ಪಕ್ಷದ ಜನಪ್ರತಿನಿಧಿಗಳು ಇದರ ವಿರುದ್ಧ ಧ್ವನಿ ಎತ್ತುತ್ತಿಲ್ಲಾ ಎಂದು ಸಿಟ್ಟು ಮಾಡಿಕೊಂಡಿದ್ದು ಇದೆ.....

ಬದಲಾದ ಬೆಳಗಾವಿಯ ವಾತಾವರಣ:
ಇವತ್ತು ನಾವುಗಳು ಬೆಳಗಾವಿಯಲ್ಲಿ ಕನ್ನಡ ವಾತಾವರಣ ನಿರ್ಮಾಣವಾಗಿರುವುದನ್ನು ಕಾಣುತ್ತಿದ್ದರೆ, ಅದಕ್ಕೆ ಮುಖ್ಯ ಕಾರಣ ಸರ್ಕಾರಕ್ಕಿಂತ ಹೆಚ್ಚಾಗಿ ದುಡಿದ್ದದ್ದು ಕನ್ನಡ ಪರ ಸಂಘಟನೆಗಳು, ಅದರಲ್ಲೂ ಮುಖ್ಯವಾಗಿ ಹೆಸರಿಸಬೇಕಾಗಿರುವಂತಹುದು ಕರ್ನಾಟಕ ರಕ್ಷಣಾ ವೇದಿಕೆ. ಸುಮಾರು 2005 ರಿಂದ ಬೆಳಗಾವಿಯಲ್ಲಿ ಕನ್ನಡದ ವಾತಾವರಣ ನಿರ್ಮಾಣ ಮಾಡಲು, ನಮ್ಮನ್ನು ಕಡೆಗಣಿಸಲಾಗಿದೆ ಅನ್ನೋ ಕೊರಗು ಇಟ್ಟುಕೊಂಡಿದ್ದಂತಹ ಕನ್ನಡಿಗರಿಗೆ ಮನಸ್ಥೈರ್ಯ ತುಂಬಿದ್ದು ಕರ್ನಾಟಕ ರಕ್ಷಣಾ ವೇದಿಕೆ ಮಾಡಿದ ಕೆಲಸಗಳಿಂದಾಗಿ. ಬೆಳಗಾವಿಯ ಮಹಾಪೌರರಾಗಿದ್ದ ವಿಜಯ್ ಮೋರೆ ಅವರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಗೊತ್ತುವಳಿ ಮಂಡಿಸಿ ದೊಡ್ಡ ಗಲಾಟೆಗೆ ಕಾರಣವಾಗಿದ್ದರು. ಇದೇ ಸಮಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ವಿಜಯ್ ಮೋರೆ ಬೆಂಗಳೂರಿಗೆ ಬಂದಿದ್ದಾಗ ಅವರ ಮುಖಕ್ಕೆ ಮಸಿ ಬಳಿದು ಎಂಇಎಸ್ ನ ನಾಡವಿರೋಧಿ ನಿಲುವಿಗೆ ಪ್ರತಿಭಟನೆ ಸೂಚಿಸಿದ್ದರು. ಇದೇ ವಿಷಯ ಮುಂದೆ ಬೆಳಗಾವಿಯಲ್ಲಿ ಅನೇಕ ಬದಲಾವಣೆಗಳಿಗೆ ನಾಂದಿ ಹಾಡಿತು. ವಿಜಯ್ ಮೋರೆ ಪ್ರಕರಣದಲ್ಲಿ ಧರಂಸಿಂಗ್ ಸರ್ಕಾರದ ಮೇಲೆ ಒತ್ತಡ ತಂದ ಕರವೇ ಹೋರಾಟ ನಡೆಸಿ ಮಹಾನಗರ ಪಾಲಿಕೆ ವಿಸರ್ಜನೆಗೊಳ್ಳುವಂತೆ ಮಾಡಿತು. ಇದಾದ ನಂತರ ಬೆಳಗಾವಿಯಲ್ಲಿ ದಿವಂಗತ ಶ್ರೀ ಸಿ. ಅಶ್ವಥ್ ಅವರ ಸಾರಥ್ಯದಲ್ಲಿ ನಡೆದ "ಕನ್ನಡವೇ ಸತ್ಯ" ಕಾರ್ಯಕ್ರಮ ಕನ್ನಡಿಗರಲ್ಲಿ ಹೊಸ ಸಂಚಲನ ಮೂಡಿಸಿದ್ದು ಸುಳ್ಳಲ್ಲ. ಇದೇ ಸಮಯದಲ್ಲಿ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಒತ್ತು ಕೊಡುವಂತೆ ಆಗ್ರಹಿಸಿ ಎರಡು ಬಾರಿ ಬೆಳಗಾವಿಯಿಂದ ಬೆಂಗಳೂರಿನ ತನಕ ಸಾವಿರಾರು ಕಾರ್ಯಕರ್ತರನ್ನು ಕರೆದುಕೊಂಡು ಹೋದ ಕರವೇ ಆಗಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿ, ಒತ್ತಡ ಹೇರಿತ್ತು. ಕರ್ನಾಟಕ ರಕ್ಷಣಾ ವೇದಿಕೆಯ ನಿರಂತರ ಕೆಲಸದಿಂದಾಗಿ ಬೆಳಗಾವಿ ರಾಜಕೀಯ ವಿಷಯವಾಗಿ ಹಾಗೂ ರಾಜ್ಯದ ಎಲ್ಲಾ ಜನರ ಗಮನಕ್ಕೆ ಬರತೊಡಗಿದಾಗ, 50 ವರ್ಷಗಳಿಂದ ನಿದ್ದೆ ಮಾಡುತ್ತಿದ್ದ ರಾಜಕೀಯ ಪಕ್ಷಗಳು ಎಚ್ಚಿತ್ತು ಬೆಳಗಾವಿಯಲ್ಲಿ ೨೦೦ ಕೋಟಿ ರೂ ವೆಚ್ಚದಲ್ಲಿ ಸುವರ್ಣಸೌಧ ನಿರ್ಮಾಣಕ್ಕೆ ಚಾಲನೆ ನೀಡಿತು ಇದರ ಜೊತೆಗೆ 2 ಬಾರಿ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ನಡೆಸಿತು. ಸರ್ಕಾರ ತಗೆದುಕೊಂಡ ಈ ನಿರ್ಧಾರಗಳಿಗೆ ಕರವೇಯ ಹೋರಾಟಗಳೇ ಕಾರಣವೆಂದರೆ ತಪ್ಪಲ್ಲ. ಇದಲ್ಲದೇ ಎಂಇಎಸ್ ಸಂಘಟನೆಯ ಬಲ ಮುರಿಯಲು ಪಣ ತೊಟ್ಟು ಕೆಲಸ ಮಾಡಿದ ಕರವೇ 17 ವರ್ಷಗಳ ನಂತರ ಕನ್ನಡದ ಮಹಿಳೆಯೊಬ್ಬರು ಬೆಳಗಾವಿಯ ಮಹಾಪೌರರಾಗಿ ಆಯ್ಕೆಯಾಗಲು ಕಾರಣವಾಯಿತು. ಇವತ್ತು ಎಂಇಎಸ್ ಬೆಳಗಾವಿಯ ಭಾಗದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದೆ.

ಮಾಡಿದವರನ್ನೇ ಮರೆತಿರುವ ರಾಜ್ಯ ಸರ್ಕಾರ:
ಬೇಸರದ ಸಂಗತಿಯೆಂದರೆ, ಕಳೆದ 50 ವರ್ಷಗಳಿಂದ ರಾಜ್ಯ ಸರ್ಕಾರದ ಕಡಗಣನೆಗೆ ಒಳಗಾಗಿದ್ದ, ಇನ್ನೇನು ಬೆಳಗಾವಿ ನಮ್ಮ ಕೈ ತಪ್ಪಿ ಹೋಯಿತು ಅನ್ನೋ ಮಟ್ಟಕ್ಕೆ ಹೋಗಿದ್ದಾಗ, ಗಡಿಭಾಗದ ನಾಯಕರು ಸೇರಿದಂತೆ, ಕನ್ನಡಿಗರಲ್ಲಿ ಧ್ಯೈರ್ಯ ತುಂಬುವ ಕೆಲಸ ಮಾಡಿದ್ದು ಕನ್ನಡಪರ ಸಂಘಟನೆಗಳೇ. ಆದರೆ ಈ ವಿಶ್ವ ಕನ್ನಡ ಸಮ್ಮೇಳನದಲ್ಲಿ ನಾಡಿನ ಯಾವುದೆ ಕನ್ನಡ ಪರ ಸಂಘಟನೆಗಳಿಗೆ ಆಹ್ವಾನವನ್ನೂ ನೀಡಿಲ್ಲ, ಅದು ಬಿಡಿ ಸರ್ಕಾರದ ಒಂದು ಭಾಗವಾಗಿ ಕೆಲಸ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಹ್ವಾನ ನೀಡಲಾಗಿಲ್ಲ. ದೌರ್ಭಾಗ್ಯವೆಂದರೇ ಐಶ್ವರ್ಯ ರೈ ನಂಥ ಹಿಂದಿ ಚಿತ್ರನಟಿಯನ್ನ ಆಹ್ವಾನಿಸುವಲ್ಲಿ ಕಾಳಜಿ ಹೊಂದಿರುವ ಸರ್ಕಾರ, ಶಿಲ್ಪಾ ಶೆಟ್ಟಿಯನ್ನು ಕರೆಸಬೇಕೋ ಅಥವಾ ಬೇಡವೋ ಎಂದು ನಿರ್ಧರಿಸಲು ಸಭೆ ಸೇರುವ ಸರ್ಕಾರ, ಪ್ರತಿ ದಿನ ನಾಡಿಗೆ, ಭಾಷೆಗೆ, ನಾಡಿಗರ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿರುವ ಕನ್ನಡ ಪರ ಸಂಘಟೆನೆಗಳಿಗೆ ಸಮ್ಮೇಳನಕ್ಕೆ ಆಹ್ವಾನ ನೀಡಿಲ್ಲ. ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಬೆಂಬಲ ನೀಡುತ್ತಾ ಬಂದಿದ್ದ ಮಾಧ್ಯಮಗಳು ಸಹ ಯಾಕೋ ಈ ವಿಷಯದ ಬಗ್ಗೆ ಗಮನಹರಿಸಿಲ್ಲ.

ಸೋಮವಾರ, ಫೆಬ್ರವರಿ 28, 2011

2011-2012ರ ಕೇಂದ್ರ ರೈಲ್ವೆ ಬಜೆಟ್: ಒಂದು ವಿಶ್ಲೇಷಣೆ


25ನೇ ತಾರೀಖಿನಂದು 2011-2012ರ ಕೇಂದ್ರ ಸರ್ಕಾರದ ರೈಲ್ವೇ ಬಜೆಟ್ ಮಂಡಿಸಲಾಗಿದೆ. ನಮ್ಮ ರಾಜ್ಯಕ್ಕೆ ಬಹಳಷ್ಟು ಒಳ್ಳೆಯ ಯೋಜನೆಗಳನ್ನು ಈ ಬಾರಿ ಬಜೆಟ್ಟಿನಲ್ಲಿ ಘೋಷಿಸಲಾಗಿದೆ ಎಂದು ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷ ತನ್ನ ಬೆನ್ನು ತಟ್ಟಿಕೊಂಡಿದೆ. ಈ ಬಾರಿಯ ರೈಲ್ವೇ ಬಜೆಟ್ ನಮ್ಮ ರಾಜ್ಯಕ್ಕೆ ಐತಿಹಾಸಿಕ ಎಂದು ಹೇಳಿಕೆ ನೀಡಿದ್ದ ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ರಾತ್ರೋರಾತಿ ಜ್ಞಾನೋದಯವಾಗಿ ಮರುದಿನವೇ ರಾಜ್ಯಕ್ಕೆ ರೈಲ್ವೇ ಬಜೆಟ್ಟಿನಲ್ಲಿ ಅನ್ಯಾಯವಾಗಿದೆ ಎಂದು ಪತ್ರಿಕೆಗಳಿಗೆ ಹೇಳಿಕೆ ನೀಡಿದರು.

ಈ ಬಜೆಟ್ಟಿನಲ್ಲಿ ನಮ್ಮ ರಾಜ್ಯಕ್ಕೆ ಏನೇನು ಸಿಕ್ಕಿದೆ ಅನ್ನೋದನ್ನ ನೋಡುವುದಕ್ಕಿಂತಲೂ, ನಿಜಕ್ಕೂ ನಮ್ಮ ನಾಡಿಗೆ ಎಂಥ ರೈಲ್ವೇ ವ್ಯವಸ್ಥೆ ಬೇಕು ಎನ್ನೋದನ್ನ ನೋಡೋಣ. ಇದರ ಜೊತೆಜೊತೆಗೆ ನಮ್ಮ ಈ ಸರ್ತಿಯ ಬಜೆಟ್ಟಿನಲ್ಲಿ ಏನು ಸಿಕ್ಕಿದೆ ಅನ್ನೋದನ್ನ ಸಹ ನೋಡೋಣ.

ನಾಡಿನ ಪ್ರಮುಖ ನಗರಗಳ ನಡುವೆ ಸಂಪರ್ಕ ಜಾಲ:
ಕರ್ನಾಟಕ ರಾಜ್ಯದ ಎಲ್ಲಾ ಪ್ರಮುಖ ಕೈಗಾರಿಕಾ ನಗರಗಳನ್ನು, ಬಂದರುಗಳನ್ನು, ಪ್ರವಾಸಿ ತಾಣಗಳನ್ನು, ಎಲ್ಲಾ ಜಿಲ್ಲಾಕೇಂದ್ರಗಳನ್ನು ಜೋಡಿಸುವಂತಹ ಯೋಜನೆಗಳು ನಮ್ಮ ನಾಡಿಗೆ ಬೇಕಾಗಿವೆ. ಮಂಗಳೂರು, ಪಡುಬಿದ್ರಿ, ಮಲ್ಪೆ, ಭಟ್ಕಳ, ಹೊನ್ನಾವರ ಮೊದಲಾದ ಬಂದರುಗಳಿಗೆ ರೈಲು ಸಂಚಾರ ಕಲ್ಪಿಸಬೇಕಾಗಿತ್ತು, ಆದರೆ ಈ ಯೋಜನೆಗಳಿಗೆ ಕೇಂದ್ರ ಸರ್ಕಾರ ಯಾವುದೇ ಗಮನ ಹರಿಸಿಲ್ಲ. ಹಾಗೆಯೇ ರಾಜ್ಯದ ಯಾವುದೇ ಪ್ರವಾಸಿ ತಾಣಗಳಿಗೆ ಈ ಬಜೆಟ್ಟಿನಲ್ಲಿ ರೈಲು ಸಂಪರ್ಕ ಕಲ್ಪಿಸಲಾಗಿಲ್ಲ. ಈ ಬಜೆಟ್ಟಿನಲ್ಲಿ ಕೆಲವು ರೈಲ್ವೆ ಯೋಜನೆಗಳು ಮಂಜೂರಾಗಿದ್ದರು ಸಹ, ಕೆಲವು ರೈಲುಗಳ ಓಡಾಡುವ ದಾರಿ ತುಂಬಾ ಚಿಕ್ಕದು ಅಥವಾ ಈ ಮುಂಚೆಯೇ ಆ ನಗರಗಳಿಗೆ ಹಲವಾರು ರೈಲುಗಳು ಓಡಾಡುತ್ತಿವೆ. ಆದರೆ ಪ್ರಮುಖವಾಗಿ ಒಳನಾಡನ್ನು ಸಂಪರ್ಕಿಸಬೇಕಾಗಿದ್ದ ಹಲವು ಯೋಜನೆಗಳನ್ನು ಈ ಬಜೆಟ್ಟಿನಲ್ಲಿ ಪರಿಗಣಿಸಲಾಗಿಲ್ಲ. ಅಂತರ ರಾಜ್ಯ ರೈಲುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ, ಇದರಿಂದ ವಲಸೆಗೆ ಉತ್ತೇಜನ ನೀಡಿದಂತಾಗಬಹುದು. ಹೊಸ ಮಾರ್ಗ, ಗೇಜ್ ಪರಿವರ್ತನೆ ಸೇರಿದಂತೆ ಮತ್ತಿತರ ಪ್ರಗತಿಯಲ್ಲಿರುವ ಯೋಜನೆಗಳಿಗೆ ಅನುದಾನ ಸಿಕ್ಕಿಲ್ಲ.

ಉದಾ: ಬೆಂಗಳೂರು - ಬೆಳಗಾವಿ, ಬೀದರ್ - ಬೆಂಗಳೂರು, ಮೈಸೂರು - ಬಿಜಾಪುರ, ಹೊಸಪೇಟೆ - ಬೆಂಗಳೂರು, ಹುಬ್ಬಳ್ಳಿ - ಗುಲ್ಬರ್ಗ, ಬೆಂಗಳೂರು - ಚಾಮರಾಜನಗರ, ಅರಸೀಕೆರೆ - ಬೆಂಗಳೂರು, ಬಂಗಾರಪೇಟೆ - ರಾಮನಗರ, ತುಮಕೂರು - ಚನ್ನಪಟ್ಟಣ, ಬೆಂಗಳೂರು - ದಾವಣಗೆರೆ - ಹುಬ್ಬಳ್ಳಿ - ಲೋಂಡಾ, ವಾಸ್ಕೋ - ಕಾರವಾರ - ಮಂಗಳೂರು - ಹಾಸನ ಮುಂತಾದ ಒಳನಾಡಿಗೆ ಸಂಪರ್ಕ ಕಲ್ಪಿಸುವ ಯೋಜನೆಗಳು ಜಾರಿಯಾಗಿಲ್ಲ.

ಇದರ ಜೊತೆಗೆ ಪ್ರಗತಿಯಲ್ಲಿರುವ ಮುನಿರಾಬಾದ್ - ಮೆಹಬೂಬನಗರ, ಕಡೂರು - ಚಿಕ್ಕಮಗಳೂರು - ಸಕಲೇಶಪುರ, ಬೀದರ್ - ಗುಲ್ಬರ್ಗ , ಚಿಕ್ಕಬಳ್ಳಾಪುರ - ಕೋಲಾರ, ನೆಲಮಂಗಲ - ಶ್ರವಣಬೆಳಗೊಳ, ಶ್ರೀನಿವಾಸಪುರ - ಮದನಪಲ್ಲಿ ಯೋಜನೆಗಳ ಬಗ್ಗೆ ಯಾವುದೇ ಪ್ರಸ್ತಾಪವಾಗಿಲ್ಲ.

ಉತ್ತರ ಕರ್ನಾಟಕ, ಮಲೆನಾಡು, ಕೋಲಾರ ಜಿಲ್ಲೆ ಮತ್ತು ಕೊಂಕಣ ಭಾಗಕ್ಕೆ ಸಂಪರ್ಕ ಕಲ್ಪಿಸುವ 7 ಯೋಜನೆಗಳ ಬಗ್ಗೆ ಈ ಬಜೆಟ್ಟಿನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಈ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ 50 ರಷ್ಟು ಹಣವನ್ನು ನೀಡುವುದಾಗಿ ಹೇಳಿತ್ತು. ಈ 7 ಯೋಜನೆಗಳು ಈ ರೀತಿ ಇವೆ: ಶಿವಮೊಗ್ಗ - ಹರಿಹರ, ವೈಟ್ ಫೀಲ್ಡ್ - ಕೋಲಾರ, ತುಮಕೂರು - ದಾವಣಗೆರೆ, ಗದಗ - ಹಾವೇರಿ, ಬಿಜಾಪುರ - ಶಹಾಬಾದ್, ಧಾರವಾಡ - ಬೆಳಗಾವಿ ಹಾಗೂ ತಾಳಗುಪ್ಪ - ಹೊನ್ನಾವರ.

ರೈಲುಮಾರ್ಗಗಳ ವಿದ್ಯುದೀಕರಣ:
ಇಡೀ ಕರ್ನಾಟಕದ ಶೇಕಡಾ 5%ಕ್ಕಿಂತ ಕಡಿಮೆ ರೈಲುಮಾರ್ಗ ವಿದ್ಯುದೀಕರಣವಾಗಿದ್ದು ಅದೂ ಕೂಡಾ ಅಂತರರಾಜ್ಯ ರೈಲುಮಾರ್ಗಗಳು ಮಾತ್ರವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ವಿದ್ಯುತ್ ಮಾರ್ಗಗಳು ಭಾಗಷಃ ಇಲ್ಲವೆಂದೇ ಹೇಳಬೇಕಾಗಿದೆ. ಈ ಬಜೆಟ್ಟಿನಲ್ಲಿ ರೈಲು ವಿದ್ಯುದೀಕರಣಕ್ಕೆ ಒತ್ತು ನೀಡಲಾಗಿಲ್ಲ.

ಪೂರಕ ಉದ್ದಿಮೆಗಳು:
ಈ ಸರತಿಯ ಬಜೆಟ್ಟಿನಲ್ಲಿ ರಾಜ್ಯಕ್ಕೆ ಹೆಚ್ಚು ಉಪಯೋಗವಾಗುವಂತಹ ಅಥವಾ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವಂತಹ ಪೂರಕ ಯೋಜನೆಗಳನು ಜಾರಿ ಮಾಡಲಾಗಿಲ್ಲ. ವಿವಿಧೋದ್ದೇಶ ತರಬೇತಿ ಕೇಂದ್ರ ಧಾರವಾಡದಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ, ಹುಬ್ಬಳ್ಳಿ-ಧಾರವಾಡದಲ್ಲಿ ಪಾಲಿಟೆಕ್ನಿಕ್ ಶುರು ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ ರೈಲ್ವೆ ಕೋಚ್ ಕಾರ್ಖಾನೆ, ರೈಲುಗಳಲ್ಲಿ ಮಾರಲಾಗುವ ಊಟ, ನೀರು ಮೊದಲಾದ ಪ್ಯಾಕೆಜಿಂಗ್ ಕಾರ್ಖಾನೆಗಳನ್ನು ಕರ್ನಾಟಕಕ್ಕೇ ನೀಡಲಾಗಿಲ್ಲ. ಕೇವಲ ಹುಬ್ಬಳ್ಳಿ, ಚಿಂತಾಮಣಿ, ಶಿಡ್ಲಘಟ್ಟ ಮತ್ತು ಶ್ರೀನಿವಾಸಪುರಗಳ ರೈಲ್ವೆ ನಿಲ್ದಾಣಗಳನ್ನು ಆದರ್ಶ ನಿಲ್ದಾಣಗಳನ್ನಾಗಿ ಮಾಡುವುದಾಗಿ ಘೋಷಿಸಲಾಗಿದೆ, ಆದರೆ ನಮ್ಮ ರಾಜ್ಯದ ಅನೇಕ ಜಿಲ್ಲಾ ಕೇಂದ್ರಗಳ ರೈಲ್ವೆ ನಿಲ್ದಾಣಗಳೇ ಮೂಕಭೂತ ಸೌಕರ್ಯದಿಂದ ವಂಚಿತವಾಗಿವೆ, ಇಂತಹ ನಿಲ್ದಾನಗಳತ್ತ ಗಮನ ಹರಿಸಲಾಗಿಲ್ಲ.

ಪ್ರತ್ಯೇಕ ವಿಭಾಗಗಳಿಗೆ ಬೇಡಿಕೆ:
ಕಳೆದ ಎರೆಡು ದಶಕಗಳಿಂದ ಗುಲ್ಬರ್ಗಾ ಮತ್ತು ಮಂಗಳೂರು ವಿಭಾಗಗಳ ವಿಚಾರ ನೆನೆಗುದಿಗೆ ಬಿದ್ದಿದೆ. ಈ ವಿಭಾಗಗಳಾದರೆ ಪ್ರಸ್ತಾವಿತ ಯೋಜನೆಗಳ ನಿರ್ವಹಣೆ, ರೈಲ್ವೆ ಸೇವೆಗಳ ಉಸ್ತುವಾರಿ ಹಾಗು ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇದರಿಂದ ಕನ್ನಡಿಗರಿಗೆ ಗ್ರಾಹಕ ಸೇವೆಯ ಜೊತೆಗೆ ನಾಡಿನ ಅನೇಕ ಯುವಕರಿಗೆ ಉದ್ಯೋಗಾವಕಾಶ ದೊರಕಿದಂತಾಗುತ್ತದೆ.

ಅರ್ಧದಷ್ಟು ತಾಲೂಕುಗಳಿಗೆ ರೈಲೇ ಇಲ್ಲಾ:
ರಾಜ್ಯದ 176 ತಾಲೂಕುಗಳ ಪೈಕಿ ಅರ್ಧದಷ್ಟು ತಾಲೂಕುಗಳು ಅಂದರೆ 86 ತಾಲೂಕುಗಳಿಗೆ ರೈಲಿನ ಸಂಪರ್ಕವೇ ಇಲ್ಲ. ಜಿಲ್ಲಾ ಕೇಂದ್ರಗಳಾದ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳು ಸಹ ರೈಲಿನ ಸಂಪರ್ಕದಿಂದ ದೂರ ಉಳಿದಿವೆ. ಕೊಡಗು ಜಿಲ್ಲೆಯಲ್ಲಿರುವ ಮೂರು ತಾಲೂಕುಗಳಲ್ಲಿಯೂ ರೈಲು ಇಲ್ಲಾ.

ಬಹುಶಃ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಹಾಗೂ ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡಬೇಕಾದ ಅಗತ್ಯತೆ ಇದೆ. ಜೊತೆಜೊತೆಗೆ ನಮ್ಮ ರಾಜ್ಯ ಸರ್ಕಾರ ಕೂಡ ನಮ್ಮ ನಾಡಿಗೆ ಬೇಕಾಗಿರುವ ಯೋಜನೆಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನಕ್ಕೆ ತರಲು ಕೆಲಸ ಮಾಡಬೇಕು ಹಾಗೂ ಕೇಂದ್ರದ ಮೇಲೆ ಒತ್ತಡ ಹೇರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು.

ಶುಕ್ರವಾರ, ಫೆಬ್ರವರಿ 18, 2011

ನಮ್ಮ ರಾಜ್ಯವನ್ನು ಪ್ರತಿನಿಧಿಸಲು ಜನರಿಲ್ಲವೇ???

ಇದು ಖಂಡಿತಾ ಕರ್ನಾಟಕದ ದೌರ್ಭಾಗ್ಯದ ಪರಮಾವಧಿ. ಹೈಕಮಾಂಡ್ ದಾಸ್ಯಕ್ಕೆ ಸಿಲುಕಿರುವ ಬಿಜೆಪಿ ಪಕ್ಷ ಮತ್ತೊಂದು ಎಡವಟ್ಟು ತೀರ್ಮಾನ ಕೈಗೊಂಡಿದೆ. ಹಿರಿಯ ರಾಜಕಾರಣಿ ಶ್ರೀ ರಾಜಶೇಖರ ರ್ಮೂರ್ತಿಯವರ ನಿಧನದಿಂದ ತೆರವಾಗಿದ್ದ ರಾಜ್ಯಸಭಾ ಸ್ಥಾನಕ್ಕೆ ಹಿಂದಿ ಚಲನಚಿತ್ರ ನಟಿ ಶ್ರೀಮತಿ ಹೇಮಾ ಮಾಲಿನಿ ಅವರನ್ನ ರಾಜ್ಯದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ.

ರಾಜ್ಯಸಭಾ ಸದಸ್ಯತ್ವ ಅಂದರೇನು?
ಒಬ್ಬ ರಾಜ್ಯಸಭಾ ಸದಸ್ಯ ಮುಖ್ಯವಾಗಿ ಆಯಾ ರಾಜ್ಯದ ಪ್ರತಿನಿಧಿಯಾಗಿ ಸಂಸತ್ತಿನ ಮೇಲ್ಮನೆಯಲ್ಲಿ ಕೆಲಸಮಾಡುತ್ತಾರೆ. ರಾಜ್ಯಸಭೆ ಅನ್ನುವುದು ಒಕ್ಕೂಟ ವ್ಯವಸ್ಥೆಯ ಒಂದು ಮುಖ್ಯ ಭಾಗ. ಕೇಂದ್ರದಲ್ಲಿ ಲೋಕಸಭೆಗಿರುವಷ್ಟೇ ಪ್ರಾಮುಖ್ಯತೆ ರಾಜ್ಯಸಭೆಗೂ ಇದೆ. ರಾಜ್ಯಸಭಾ ಸದಸ್ಯರನ್ನು ಆಯಾ ರಾಜ್ಯದ ಶಾಸಕರು ಆಯ್ಕೆ ಮಾಡುತ್ತಾರೆ.

ನಮ್ಮ ರಾಜ್ಯವನ್ನೂ ಪ್ರತಿನಿಧಿಸಲು ಅರ್ಹ ಜನಪ್ರತಿನಿಧಿಗಳು ಇಲ್ಲವೇ?
ಇಷ್ಟಕ್ಕೂ ರಾಜ್ಯಸಭೆ ಸ್ಥಾನಕ್ಕೆ ಹೇಮಾ ಮಾಲಿನಿಯವರನ್ನು ಕಣಕ್ಕಿಳಿಸಲು ಇರುವ ಅರ್ಹತೆಯಾದರೂ ಏನು? ಮೊದಲನೆಯದಾಗಿ ಹೇಮಾ ಮಾಲಿನಿ ನಮ್ಮ ನಾಡಿನವರಲ್ಲ, ಹೋಗಲಿ ಆ ಕಾರಣವನ್ನು ಬದಿಗಿಟ್ಟು ನೋಡೋಣವೆಂದರೆ ಅವರಿಂದ ನಮ್ಮ ರಾಜ್ಯಕ್ಕೆ ಆಗಿರುವ ಉಪಯೋಗವಾದರೂ ಏನು? ನಮ್ಮ ನಾಡಿನ ಯಾವ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ರಾಜ್ಯ ಮಟ್ಟದಲ್ಲಾಗಲಿ ಅಥವಾ ಕೇಂದ್ರ ಮಟ್ಟದಲ್ಲಾಗಲಿ ಪ್ರಯತ್ನಿಸಿದ್ದಾರೆ? ನಮ್ಮ ನೆಲ, ಜಲ, ಭಾಷೆ, ಉದ್ಯೋಗ, ಉದ್ದಿಮೆ ಹೀಗೆ ಯಾವ ಕಾರಣಕ್ಕಾಗಿ ನಮ್ಮ ನಾಡಿಗಾಗಿ ಕೆಲಸ ಮಾಡಿದ್ದಾರೆ? ಯಾವುದೇ ದೃಷ್ಠಿಯಿಂದ ನೋಡಿದರೂ ಸಹ ಹೇಮಾ ಮಾಲಿನಿ ನಮ್ಮ ರಾಜ್ಯದ ಪ್ರತಿನಿಧಿಯಾಗಿ ರಾಜ್ಯಸಭೆ ಪ್ರವೇಶಿಸಲು ಅರ್ಹರಲ್ಲ. ಇಂತಹುದೇ ತಪ್ಪನ್ನು ಹಿಂದೆ ಬಿಜೆಪಿ ಹೈಕಮಾಂಡ್ ವೆಂಕಯ್ಯ ನಾಯ್ಡು ಅವರನ್ನ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿವಾಗ ಮಾಡಿತ್ತು. ಕಾಂಗ್ರೆಸ್ ಹಾಗೂ ಜನತಾದಳ ಪಕ್ಷಗಳು ಸಹಿತ ಇಂತಹುದೇ ತಪ್ಪನ್ನು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ.

ಗಮನಿಸಬೇಕಾದ ಅಂಶವೆಂದರೆ ನಮ್ಮ ನಾಡಿನಲ್ಲಿ ರಾಜ್ಯಸಭೆಗೆ ಅರ್ಹರಾಗಿರುವ ಯಾವುದೇ ನಾಯಕರು ಬಿಜೆಪಿ ಹೈಕಮಾಂಡಿಗೆ ಕಾಣಸಿಗಲಿಲ್ಲವೇ? ನಮ್ಮ ನಾಡನ್ನ ಉದ್ಧಾರ ಮಾಡೋದಕ್ಕೆ ಬೇರೆ ರಾಜ್ಯದ ಜನರನ್ನ ಕರೆದುಕೊಂಡು ಬರಬೇಕಾದ ಪರಿಸ್ಥಿತಿ ಬಂದಿದೆಯೇ? ನಮ್ಮ ನಾಡಿನ ರಾಜಕೀಯ ನಾಯಕರು ಆಗುತ್ತಿರುವ ತಪ್ಪನ್ನು ನೋಡಿಕೊಂಡು ಸುಮ್ಮನಿದ್ದಾರೆಯೇ? ಸುಮಾರು ಮೂರ್ನಾಲ್ಕು ದಶಕಗಳಿಂದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ದುಡಿದಿರುವಂತಹ ಬಿಜೆಪಿಯ ಕಾರ್ಯಕರ್ತರೆಲ್ಲಾ ಹೈಕಮಾಂಡ್ ಕಣ್ಣಿಗೆ ಕಾಣಿಸುತ್ತಿಲ್ಲವೇ? ಈ ಸರ್ತಿಯಾದರು ಬಿಜೆಪಿ ಪಕ್ಷ ತನ್ನ ತಪ್ಪನ್ನು ತಿದ್ದಿಕೊಳ್ಳುತ್ತಾ? ಕಾದು ನೋಡಬೇಕು.........

ಮಂಗಳವಾರ, ಫೆಬ್ರವರಿ 15, 2011

ಜನರ ಹಿತವನ್ನೇ ಮರೆತಿರುವ ಜನಪ್ರತಿನಿಧಿಗಳು


ನಮ್ಮ ರಾಜ್ಯದ ಸದ್ಯದ ಭವಿಷ್ಯವನ್ನು ನೆನೆಸಿಕೊಂಡರೆ ಭಯವಾಗಿ ಹೋಗುತ್ತದೆ. ಕಳೆದ ವರ್ಷದ ಅಂತ್ಯದಲ್ಲಿ ಬಂದ ಎರಡನೇ ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಅನ್ನುವುದನ್ನ ನಿಮಗೆ ಈಗಾಗಲೇ ತಿಳಿಸಲಾಗಿದೆ. ಹಾಗೆಯೇ ಈ ತೀರ್ಪು ಐತಿಹಾಸಿಕ ಅಂತ ಬಣ್ಣಿಸಿ ನಮ್ಮ ರಾಜ್ಯಸರ್ಕಾರ ಹಾಗು ಇತರೇ ರಾಜಕೀಯ ಪಕ್ಷಗಳು ಸುಮ್ಮನಾಗಿ ಹೋಗಿದ್ದವು. ತೀರ್ಪಿನ ವಿರುದ್ಧವಾಗಿ ಧ್ವನಿ ಎತ್ತಿದವರು ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ತೀರ್ಪನ್ನು ವಿಮರ್ಶಿಸುವುದಾಗಿ ಹೇಳಿಕೆ ನೀಡಿತು. ರಾಜ್ಯ ಸರ್ಕಾರದ ಈ ನಿಲುವು ಸ್ವಾಗತಾರ್ಹವೇ.

ಜನಪ್ರತಿನಿಧಿಗಳ ಸಭೆಯನ್ನು ಕರೆದ ಸರ್ಕಾರ:
ಕೃಷ್ಣಾ ನ್ಯಾಯಾಧಿಕರಣ ಆಲಮಟ್ಟಿ ಜಲಾಶಯದ ಎತ್ತರ, ರಾಜ್ಯಕ್ಕೆ ಹಂಚಿರುವ ನೀರಿನ ಪಾಲು, ಇದರ ಬಳಕೆಗೆ ಅನುಸರಿಸಬೇಕಾದ ವಿಧಾನಗಳ ಕುರಿತು ಕೃಷ್ಣಾ ಕಣಿವೆಯ 17 ಜಿಲ್ಲೆಗಳ ಜನಪ್ರತಿನಿಧಗಳ ಅಭಿಪ್ರಾಯ ಸಂಗ್ರಹಿಸಲು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಫೆಬ್ರವರಿ 14ರಂದು ಜನಪ್ರತಿನಿಧಗಳ ಸಭೆ ಕರೆದಿದ್ದರು. ಈ ಸಭೆಯ ಮತ್ತೊಂದು ಮುಖ್ಯವಾದ ಅಂಶವೇನೆಂದರೆ, ಇದರಲ್ಲಿ ಜನಪ್ರತಿನಿಧಿಗಳು ಕೇವಲ ಹಾಜರಿರದೆ ಚರ್ಚೆಯಲ್ಲಿ ಪಾಲ್ಗೊಂಡು ಜನರ ನಿಲುವನ್ನು ರೂಪಿಸುವ ಉದ್ದೇಶವನ್ನು ಹೊಂದಿತ್ತು.

ಸಭೆಗೆ ಬಾರದ ಜನಪ್ರತಿನಿಧಿಗಳು:
ರಾಜ್ಯದ ಬಹುಪಾಲು ಜಿಲ್ಲೆಗಳನ್ನು ಹಸನುಗೊಳಿಸುವ ಶಕ್ತಿ ಇರುವ ಕೃಷ್ಣಾ ನದಿಯ ತೀರ್ಪಿನಲ್ಲಿ ಸುಮಾರು 100 ಟಿಎಂಸಿ ಅಡಿ ನೀರು ಕಡಿಮೆ ಸಿಕ್ಕಿದ್ದರೂ ಈ ಭಾಗದ ಜನಪ್ರತಿನಿಧಿಗಳು ತೀರ್ಪಿನ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ರಾಜ್ಯದ ರೈತರ, ಕೃಷಿಯ ಹಾಗೂ ಜನರ ಭವಿಷ್ಯವನ್ನ ನಿರ್ಧರಿಸುವ ಇಂತಹ ಜವಾಬ್ದಾರಿಯುತ ಸಭೆಗಳಿಗೆ ಜನಪ್ರತಿನಿಧಿಗಳು ಹಾಜರಾಗದೆ ಇರುವಂತೆ ಇವರುಗಳು ಮಾಡುವ ಘನಂದಾರಿ ಕೆಲಸಗಳಾದರು ಏನು? ಇದರಲ್ಲಿ ನಾಡಿನ ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಸೇರಿದ್ದಾರೆ. ಕೆಲವೇ ಶಾಸಕರನ್ನ ಬಿಟ್ಟರೆ ಉಳಿದ ಶಾಸಕರು, ಸಚಿವರುಗಳು ಹಾಗು ಸಂಸದರು ಈ ಸಭೆ ಹಾಜರಾಗಲೇ ಇಲ್ಲ. ಆಯಾ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಬೇಕಾಗಿರುವುದು ಆಯಾ ಪ್ರದೇಶದ ಶಾಸಕರ, ಸಂಸದರ ಹಾಗೂ ಅಲ್ಲಿನ ಜನಪ್ರತಿನಿಧಿಗಳ ಕರ್ತವ್ಯ, ಅದೊಂದನ್ನು ಬಿಟ್ಟು ಅವರಿಗೆ ಬೇರೆ ಯಾವುದೇ ಕೆಲಸವಿಲ್ಲ. ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯ ಮೂಲಕ ಕರ್ನಾಟಕದ ಅಭಿವೃದ್ಧಿ ಕಾಣಬಹುದು, ಕರ್ನಾಟಕದ ಅಭಿವೃದ್ಧಿಯ ಮೂಲಕ ದೇಶದ ಅಭಿವೃದ್ಧಿಯನ್ನು ಕಾಣಬಹುದು. ಆದರೆ ಕೊಟ್ಟ ಮಾತಿನಂತೆ ನಮ್ಮ ಜನಪ್ರತಿನಿಧಿಗಳು ನಡೆದು ಕೊಳ್ಳುತ್ತಿದ್ದಾರೆಯೇ? ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆಯೇ?

ಬುಧವಾರ, ಜನವರಿ 19, 2011

ಕೃಷ್ಣಾ ನದಿ ನೀರು ಹಂಚಿಕೆ: ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾಗಿರುವ ನೀರಿನ ಬಗ್ಗೆ ಧ್ವನಿ ಎತ್ತೋಣ

2ನೇ ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಬಂದಾಗಿನಿಂದಲೂ ರಾಜ್ಯಕ್ಕೆ ಅನ್ಯಾಯವಾಗಿದೆಯೇ ಅಥವಾ ನ್ಯಾಯ ಸಿಕ್ಕಿದೆಯೇ ಅನ್ನುವ ವಾದಗಳು ಎಲ್ಲಾ ಕಡೆ ನಡೆಯುತ್ತಲಿವೆ. ಇದೇ ವಿಷಯವಾಗಿ ಜನವರಿ 14 ರಂದು ಕನ್ನಡಪ್ರಭ ದಿನಪತ್ರಿಕೆಯಲ್ಲಿ ಹಿರಿಯ ಪತ್ರಕರ್ತರಾಗಿರುವ ಶ್ರೀ ಮತ್ತೀಹಳ್ಳಿ ಮದನ ಮೋಹನ ಅವರು ಕೃಷ್ಣಾ ತೀರ್ಪಿನ ಬಗ್ಗೆ “ರಾಜ್ಯದ ಹಿತ ಕಾಪಾಡಿದ ಕೃಷ್ಣಾ ತೀರ್ಪು” ಎಂಬ ಲೇಖನದಲ್ಲಿ ತಮ್ಮ ವಿಶ್ಲೇಷಣೆ ನೀಡಿದ್ದಾರೆ. ಹಾಗೆಯೇ ಜನವರಿ 19 ರಂದು ವಿಜಯ ಕರ್ನಾಟಕದಲ್ಲಿ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರು “ಕೃಷ್ಣಾ ಐತೀರ್ಪು: ಕರ್ನಾಟಕಕ್ಕೆ ಲಾಭವಾಗಿದೆಯೇ?” ಎಂಬ ತಮ್ಮ ಲೇಖನದಲ್ಲಿ ಕೃಷ್ಣಾ ನ್ಯಾಯಾಧಿಕರಣ ತೀರ್ಪಿನ ಕುರಿತು ತಮ್ಮ ವಿಶ್ಲೇಷಣೆ ನೀಡಿದ್ದಾರೆ. ಇವರಿಬ್ಬರ ಲೇಖನದ ಸಾರಾಂಶವೆಂದರೆ ರಾಜ್ಯಕ್ಕೆ ಕೃಷ್ಣಾ ತೀರ್ಪಿನಲ್ಲಿ ಅನ್ಯಾಯ ಆಗಿಲ್ಲ ಹಾಗೂ ರಾಜ್ಯಕ್ಕೆ ಸಿಗದಿರುವ ನೀರಿನ ಬಗ್ಗೆ ಮರಗುವುದನ್ನು ಬಿಟ್ಟು, ಸಿಕ್ಕಿರುವ ನೀರನ್ನ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಇಬ್ಬರು ಲೇಖಕರು ತೀರ್ಪು ರಾಜ್ಯದ ಪರವಾಗಿದೆ ಅನ್ನುವ ವಾದದಲ್ಲಿ ಕೆಲವು ವಿಷಯಗಳಲ್ಲಿ ಜಾಣ ಮೌನ ಪ್ರದರ್ಶಿಸಿದ್ದಾರೆ. ಈ ಎರೆಡೂ ಲೇಖನಗಳಲ್ಲಿ ಮಾಜಿ ನೀರಾವರಿ ಸಚಿವ ಶ್ರೀ ಎಚ್. ಕೆ. ಪಾಟೀಲ್ ಅವರನ್ನ ಗುರಿಯಾಗಿಸಿ ಉತ್ತರ ನೀಡಿರುವುದು, ರಾಜಕೀಯ ಪ್ರೇರಿತ ಬರಹಗಳಾಗಿ ಕಾಣಿಸಿಕೊಳ್ಳುವ ಅನುಮಾನ ಮೂಡುತ್ತದೆ.

ಈ ಇಬ್ಬರು ಅಂಕಣಕಾರರು ಹೇಳುವುದೇನೆಂದರೆ ಹಿಂದೆ ಬಚಾವತ್ ಆಯೋಗ ನೀಡಿದ್ದ ತೀರ್ಪಿನಲ್ಲಿ ರಾಜ್ಯಕ್ಕೆ ಸಿಕ್ಕಿದ್ದ 734 ಟಿಎಂಸಿ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ, ಹಾಗಾಗಿ ಈಗ ನಮಗೆ ನ್ಯಾಯವಾಗಿ ಸಿಗಬೇಕಾಗಿದ್ದ 101 ಟಿಎಂಸಿ ನೀರು ಕಡಿಮೆ ಕೊಟ್ಟರೂ ಇದರ ಬಗ್ಗೆ ತಕರಾರು ಎತ್ತಬೇಕಾಗಿಲ್ಲ!!. ಈ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರಲಾಗದಿದ್ದದ್ದು, ನಮ್ಮ ರಾಜ್ಯವನ್ನು ಆಳಿರುವ ಎಲ್ಲಾ ರಾಜಕೀಯ ಪಕ್ಷದ ಸರ್ಕಾರಗಳ ವೈಫಲ್ಯ, ಅದಕ್ಕಾಗಿ ನಮಗೆ ನ್ಯಾಯವಾಗಿ ಸಿಗಬೇಕಾಗಿರುವ ನೀರು ಬಿಟ್ಟುಕೊಡುವುದು ಎಷ್ಟು ಸರಿ? ಇಲ್ಲಿ ರಾಜ್ಯ ಸರ್ಕಾರದ ಯೋಜನಾ ಅನುಷ್ಠಾನ ವೈಫಲ್ಯ ಒಂದು ಕಡೆಯಾದರೆ, ನದಿ ನೀರು ಹಂಚಿಕೆಯಲ್ಲಿ ನಮಗೆ ಸಿಗಬೇಕಾಗಿದ್ದಕ್ಕಿಂತ ಕಡಿಮೆ ನೀರು ಸಿಕ್ಕಿರುವುದು ಇನ್ನೊಂದು ಕಡೆ. ಈ ಇಬ್ಬರು ಅಂಕಣಕಾರರು ಹೇಳಿರುವಂತೆ ನಮ್ಮ ರಾಜ್ಯ ಸರ್ಕಾರ ಈ ಕೂಡಲೇ ಆದ್ಯತೆಯ ಮೇರೆಗೆ ಕೃಷ್ಣಾ ನದಿ ಯೋಜನೆಗಳನ್ನು ತ್ವರಿತವಾಗಿ ಹಾಗೂ ಜವಾಬ್ದಾರಿಯುತವಾಗಿ ಅನುಷ್ಠಾನಕ್ಕೆ ತರಬೇಕು. ಯೋಜನೆಗಳು ಅನುಷ್ಠಾನಕ್ಕೆ ಬಂದಿಲ್ಲವೆಂದ ಮಾತ್ರಕ್ಕೆ, ನಮ್ಮ ಪಾಲಿನ ನೀರನ್ನು ಬೇರೆಯವರಿಗೆ ಬಿಟ್ಟಿಕೊಡುವುದು ನಮಗೆ ನಾವೇ ಮಾಡಿಕೊಂಡ ದ್ರೋಹವಾಗುತ್ತದೆ. ಮುಂದುವರೆಯುತ್ತಾ 2ನೇ ನ್ಯಾಯಾಧಿಕರಣ ಕರ್ನಾಟಕ ತನ್ನ ಪಾಲಿಗೆ ದೊರಕಿದ್ದ 734 ಟಿಎಂಸಿ ನೀರಿನಲ್ಲಿ ರಾಜ್ಯ ಬಳಸದೇ ಉಳಿಸಿದ್ದ 230 ಟಿಎಂಸಿ ನೀರನ್ನು ಪರಿಗಣಿಸದೇ ಇದದ್ದು ರಾಜ್ಯದ ಪುಣ್ಯ, ಇಲ್ಲದಿದ್ದರೆ ರಾಜ್ಯಕ್ಕೆ ಹೆಚ್ಚುವರಿ ನೀರಿನಲ್ಲಿ ಯಾವುದೇ ಪಾಲು ಸಿಗದೇ ನಮ್ಮದೇ ನೀರು ಹೋಗುತಿತ್ತು ಎಂದು ಗುಮ್ಮ ತೋರಿಸುವ ಪ್ರಯತ್ನ ಮಾಡಿದ್ದಾರೆ. ಬಚಾವತ್ ಆಯೋಗ ಮಾಡಿದ್ದ ನದಿ ನೀರು ಹಂಚಿಕೆ ಸಮಂಜಸವಾಗಿ ಕಂಡಿದ್ದರಿಂದ ಹಾಗೂ ರಾಜ್ಯಕ್ಕೆ ನ್ಯಾಯಯುತವಾಗಿ ಆ ನೀರು ಸಿಗಬೇಕಾಗಿದ್ದರಿಂದ, 2ನೇ ನ್ಯಾಯಧಿಕರಣ ಉಳಿದ ನೀರನ್ನ ಹೆಚ್ಚುವರಿ ನೀರಿಗೆ ಸೇರಿಸಿಲ್ಲ.

ಇನ್ನೂ ಆಂಧ್ರ ಪ್ರದೇಶದಲ್ಲಿ ನೀರಾವರಿ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿಕೊಂಡಿರುವುದರಿಂದ ಹೆಚ್ಚಿನ ನೀರನ್ನ ಕೊಟ್ಟಿರುವುದು ನ್ಯಾಯವಾಗಿದೇ ಅನ್ನುವುದು ಎರೆಡೂ ಲೇಖನಗಳಲ್ಲಿ ವ್ಯಕ್ತವಾಗಿದೆ. ಆದರೆ ಆಂಧ್ರಪ್ರದೇಶ ಕೇಂದ್ರ ಸರ್ಕಾರದ ಅಥವಾ ನ್ಯಾಯಧಿಕರಣದ ಒಪ್ಪಿಗೆ ಪಡೆಯದೆ ಅಕ್ರಮವಾಗಿ ನಿರ್ಮಿಸಿರುವ 11 ಯೋಜನೆಗಳ ಬಗ್ಗೆ ಎಲ್ಲೂ ಅಪಸ್ವರ ಎತ್ತಿಲ್ಲ. ಆದರೆ ಇದೇ ಆಂಧ್ರಪ್ರದೇಶ ರಾಜ್ಯ ಸರ್ಕಾರ ನಿರ್ಮಿಸುತ್ತಿದ್ದ ಚಿಕ್ಕ ಪ್ರಮಾಣದ, ಕೇವಲ 1.3 ಟಿಎಂಸಿ ನೀರಿನ ದಂಡಾವತಿಯ ಯೋಜನೆಗೆ ಅಡ್ಡಗಾಲು ಹಾಕಿತ್ತು ಹಾಗೂ ಆಣೆಕಟ್ಟಿನ ಎತ್ತರವನ್ನು 524.26 ಮೀಟರ್ ಎತ್ತರಕ್ಕೆ ಏರಿಸುವುದನ್ನು ವಿರೋಧಿಸಿತ್ತು ಆನೋದನ್ನ ಅಂಕಣಕಾರರು ಮರೆತಿರುವಂತಿದೆ.

ಕೊನೆಯದಾಗಿ ರಾಜ್ಯಕ್ಕೆ ಸುಮಾರು 101 ಟಿಎಂಸಿ ನೀರು ಕಡಿಮೆ ಸಿಕ್ಕಿದೆ ಅನ್ನುವುದನ್ನ ಇಬ್ಬರೂ ಅಂಕಣಕಾರರು ಒಪ್ಪುತ್ತಾರೆ, ಆದರೆ ಕಳೆದುಕೊಂಡಿರುವ ನೀರಿನ ಬಗ್ಗೆ ಯೋಚಿಸದೆ ಸಿಕ್ಕಿರುವ ನೀರನ್ನು ಉಪಯೋಗಿಸಬೇಕು ಎಂದು ಹೇಳಿದ್ದಾರೆ. ಇದೇ ಅಲ್ಪತೃಪ್ತಿಯ ಆಧಾರದ ಮೇಲೆ ನಾವು 101 ಟಿಎಂಸಿ ಅಡಿಗಳಷ್ಟು ನೀರನ್ನ ಬಿಟ್ಟುಕೊಟ್ಟರೆ ತೊಂದರೆಗೊಳಗಾಗುವವರು ನಮ್ಮ ರಾಜ್ಯದ ಜನರೇ ಅಲ್ಲವೇ? ಮೂಲ ಯೋಜನೆಯ ಪ್ರಕಾರ ಕೃಷ್ಣಾ ನದಿ ನೀರಿನಿಂದ ಫಲಾನುಭವಿಗಳಾಗಲಿರುವ ಜಿಲ್ಲೆಗಳ ಸಂಖ್ಯೆ 16. ಇಷ್ಟು ಬೃಹತ್ ಪ್ರಮಾಣದ ನೀರನ್ನ ಬಿಟ್ಟುಕೊಟ್ಟರೆ ನಷ್ಟ ಅನುಭವಿಸುವವರು ನಮ್ಮ ನೆಲದ ಜನರೇ ಅನ್ನುವುದನ್ನ ಈ ಇಬ್ಬರು ಹಿರಿಯರು ಮರೆತಿದ್ದಾದರೂ ಹೇಗೆ?? ನಾಡು, ನುಡಿ ಹಾಗೂ ನಾಡಿಗರಿಗೆ ಅನ್ಯಾಯವಾದಗ, ನಮ್ಮ ನಾಡಿನ ಪ್ರಜ್ಞಾವಂತರು ನ್ಯಾಯ ದೊರಕಿಸಿಕೊಡುವವರೆಗೂ ನಾಡಿನ ಪರ ಧ್ವನಿ ಎತ್ತಬೇಕಾಗಿರುವುದು ಇಂದಿನ ಅವಶ್ಯಕತೆ ಆಗಿದೆ ಅನ್ನುವುದನ್ನ ನಾವುಗಳು ಮರೆಯಬಾರದು.

ಕೃಷ್ಣಾ ನ್ಯಾಯಾಧಿಕರಣದ ತೀರ್ಪುನ ಕುರಿತು ನನ್ನ ಅನಿಸಿಕೆಗಳನ್ನು ಇಲ್ಲಿ ನೋಡಿ

ಶನಿವಾರ, ಜನವರಿ 15, 2011

ತಿರುವಳ್ಳುವರ್ ಜಯಂತಿ ಆಚರಣೆ ಕೇವಲ ಭಾಷಾ ಅಲ್ಪಸಂಖ್ಯಾತರ ಓಲೈಕೆ


ಸರಕಾರದ ಅನುಮತಿ ಅಥವಾ ಪಾಲಿಕೆಯ ಕೌನ್ಸಿಲ್ ನಲ್ಲಿ ತೀರ್ಮಾನಿಸದೆ ಬಿಬಿಎಂಪಿ ತಿರುವಳ್ಳವರ್ ಜಯಂತಿ ಆಚರಣೆಗೆ ಮುಂದಾಗಿರುವ ವಿಷಯ ನಾಡಿನ ಎಲ್ಲಾ ದಿನಪತ್ರಿಕೆಗಳಲ್ಲಿ ಬಂದಿರುವುದನ್ನ ನೀವುಗಳು ಗಮನಿಸಿರುತ್ತೀರಿ. ಜನವರಿ 16 ರಂದು ತಿರುವಳ್ಳವರ್ ಜಯಂತಿ ಇದೆ, ಅದನ್ನು ಬಿಬಿಎಂಪಿ ವತಿಯಿಂದ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಿಕೊಡಬೇಕೆಂದು ಕರ್ನಾಟಕ ತಮಿಳು ಫೆಡೆರೇಷನ್ ಮನವಿಯನ್ನು ಮಾಡಿದ್ದು, ಇದಕ್ಕೆ ಮಹಾನಗರ ಪಾಲಿಕೆಯ ಕೆಲವು ಸದಸ್ಯರು ದನಿಗೂಡಿಸಿರುವುದು ಕಾಣಿಸುತ್ತಿದೆ.

ಈ ತೀರ್ಮಾನದ ಹಿಂದೆ ಮುಖ್ಯವಾಗಿ ಎರಡು ಸಮಸ್ಯೆಗಳು ಕಾಣಿಸತ್ತಿವೆ. ಮೊದಲನೆಯದಾಗಿ ಕೆಲವು ತಮಿಳರ ಮೂಲಭೂತವಾದಿತನ. ಹಲವು ದಶಕಗಳಿಂದ ಇರುವ ತಮಿಳರು ಇಂದಿಗೂ ತಮ್ಮನ್ನು ತಾವು ಕನ್ನಡಿಗರೆಂದೇ ಹೇಳಿಕೊಳ್ಳುತ್ತಾರೆ. ಆದರೆ ಇದಕ್ಕೆ ಅಪವಾದವೆನ್ನುವಂತೆ ಕೆಲವು ತಮಿಳು ಸಂಘಟನೆಗಳು ತಾವು ಯಾವದೇ ಕಾರಣಕ್ಕೂ ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯುವುದಿಲ್ಲ ಹಾಗೂ ಬೇರೆಯವರು ಬೆರೆಯುವುದನ್ನು ತಡೆಯುತ್ತಿವೆ. ಇದನ್ನೇ 2009ರಲ್ಲಿ ತಿರುವಳ್ಳುವರ್ ಪ್ರತಿಮೆ ಅನುಷ್ಠಾನದ ಸಮಯದಲ್ಲಿ ನೋಡಿದ್ದು. ಈ ತಮಿಳು ಮೂಲಭೂತವಾದಿತನವನ್ನು ಪ್ರಶ್ನಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಜೈಲಿಗೆ ತಳ್ಳಿ ಪ್ರತಿಮೆ ಅನಾವರಣೆಗೆ ಸರ್ಕಾರ ದಾರಿಮಾಡಿಕೊಟ್ಟಿತು.

ಎರಡನೆಯ ಸಮಸ್ಯೆ ರಾಜಕೀಯ ಪಕ್ಷಗಳ ಓಟಿನ ರಾಜಕಾರಣ. ಈ ತೀರ್ಮಾನದ ಹಿಂದೆ ರಾಷ್ಟ್ರೀಯ ಪಕ್ಷಗಳ ಭಾಷಾ ಅಲ್ಪಸಂಖ್ಯಾತರ ಓಲೈಕೆಯೊಂದನ್ನು ಬಿಟ್ಟರೆ ಬೇರೆ ಯಾವುದೇ ಉದ್ದೇಶ ಕಾಣುತ್ತಿಲ್ಲ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 500ನೇ ಜಯಂತಿಯನ್ನು ವರ್ಷಾಂತರಗಳಿಂದ ನೆಪಗಳನ್ನು ಹೇಳುತ್ತಾ ಮೂಂದುಡುತ್ತಿರುವ ಸರ್ಕಾರ ಹಾಗೂ ಬಿಬಿಎಂಪಿ, ಈಗ ಧಿಡೀರನೆ ತಿರುವಳ್ಳವರ್ ಜಯಂತಿ ಆಚರಿಸುವುದಕ್ಕೆ ಹೊರಟಿರುವುದು ಮತಗಳ ಒಲೈಕೆ ಅಲ್ಲದೇ ಮತ್ತೇನು? ನಮ್ಮ ನಾಡಿನಲ್ಲಿರುವ ಅನೇಕ ಮಹಾನ ಚೇತನಗಳ ನೆನಪಿಗಾಗಿ ಜಯಂತಿ, ಸ್ಮಾರಕಗಳು, ಸಂಗ್ರಹಾಲಯಗಳು ಹೀಗೆ ಅನೇಕ ಕೆಲಸಗಳು ನೆನೆಗುದಿಗೆ ಬಿದ್ದಿರುವಾಗ ಈ ಮತಬ್ಯಾಂಕ್ ರಾಜಕಾರಣ, ಅಲ್ಪಸಂಖ್ಯಾತರ ಓಲೈಕೆ ಎಷ್ಟರ ಮಟ್ಟಿಗೆ ಸಮಂಜಸ? ಇಂತಹುದೇ ಕೆಲಸವನ್ನು ನಾವು ಚನ್ನೈ ಮಹಾನಗರ ಪಾಲಿಕೆ ಅಥವಾ ತಮಿಳುನಾಡು ಸರ್ಕಾರದಿಂದ ಸರ್ವಜ್ಞ ಮೂರ್ತಿಯ ಜಯಂತಿ ಆಚರಿಸುವುದನ್ನು ಕಾಣಲು ಸಾಧ್ಯವಿಲ್ಲಾ. ಅಲ್ಲವೇ????