ಗುರುವಾರ, ನವೆಂಬರ್ 17, 2011

ನಮ್ಮ ಸರ್ಕಾರಕ್ಕಿರುವ ಕನ್ನಡ ಕಾಳಜಿ ಎಷ್ಟು???

ಸುಮಾರು ೩.೫ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಹೊಸತರಲ್ಲಿ ಬಿಜೆಪಿ ಸರ್ಕಾರ ತಾನು ರೈತ ಪರ, ಕನ್ನಡ ಪರ, ನಾಡು-ನುಡಿಗೆ ಧಕ್ಕೆಯಾದಲ್ಲಿ ಅದರ ಪರವಾಗಿ ತಾನೆಂದಿಗೂ ಮುಂದೆ ಅನ್ನುವ ರೀತಿಯಲ್ಲಿ ಹೇಳೀಕೆಗಳನ್ನು ನೀಡಿತ್ತು, ಹೊಸ ಸರ್ಕಾರದ ಈ ಮಾತನ್ನ ಜನರು ಸಹ ನಂಬಿದ್ದರು. ಆದರೆ ಅದಾದ ಸ್ವಲ್ಪ ದಿನದಲ್ಲಿಯೇ ಅದು ತನ್ನ ನಿಜವಾದ ಬಣ್ಣವನ್ನು ಬಯಲು ಮಾಡುತ್ತ ಹೊರಟಿತು. ಸರ್ಕಾರ ಮೊದಲಿಗೆ ರೈತರ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಇದಾದ ನಂತರ ಹಲವಾರು ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ತನ್ನ ಬೇಳೆಕಾಳು ಬೇಯಿಸಿಕೊಳ್ಳಲು ಭಾಷಾ ಅಲ್ಪಸಂಖ್ಯಾತರನ್ನು ಓಲೈಸುತ್ತಾ ತನ್ನ ವೋಟ್ ಬ್ಯಾಂಕ್ ರಾಜಕಾರಣವನ್ನು ತೋರಿಸಿತು, ಕನ್ನಡ ಪರ ಸಂಘಟನೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಿತು, ಹೀಗೆ ಹಲವಾರು ವಿಷಯಗಳಲ್ಲಿ ಜನವಿರೋಧಿತನ ತೋರಿಸುತ್ತಲೇ ಬಂದಿರುವ ಬಿಜೆಪಿ ಸರ್ಕಾರ ನಮ್ಮನ್ನು ಆಳುತ್ತಿರುವ ಸರ್ಕಾರ ನಜಕ್ಕೂ ನಮ್ಮದೇ? ಅನ್ನುವ ಪ್ರಶ್ನೆಯನ್ನು ನಮ್ಮಲ್ಲಿ ಹುಟ್ಟು ಹಾಕಿದೆ.

ಇದಕ್ಕೆ ಇತ್ತೀಚಿನ ಉದಾಹರಣೆಯಾಗಿ ನಮ್ಮ ಕಣ್ಣ ಮುಂದಿರುವ ಬೆಳಗಾವಿಯ ಘಟನೆ. ಕರ್ನಾಟಕ ರಾಜ್ಯೋತ್ಸವದ ದಿನದಂದು ನಮ್ಮ ರಾಜ್ಯದ ಬೆಳಗಾವಿ ಜೆಲ್ಲೆಯ ಮಹಾಪೌರರಾಗಿರುವ ಶ್ರೀಮತಿ ಮಂದಾ ಬಾಳೆಕುಂದ್ರಿ ಅವರು ಎಂಇಎಸ್ ನಂತಹ ಪುಂಡ ಸಂಘಟನೆ ಜೊತೆ ಸೇರಿ ನಾಡವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಇದರ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದ ನಂತರವೂ ಸಹ ಸರ್ಕಾರ ಇನ್ನು ತನಿಖೆ ನಡೆಸುತ್ತಲೇ ಇದೆ. ಆದರೆ ಇದನ್ನ ವಿರೋಧಿಸಿ ಕರವೇಯಂತಹ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಇಳಿದರೆ ತಕ್ಷಣವೇ ಬಂಧಿಸಿ ಹಲವಾರು ಆಪಾದನೆಗಳನ್ನು ಹಾಕಿ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತದೆ. ಇದು ನಮ್ಮ ಸರ್ಕಾರದ ಕನ್ನಡ ಪರ ನೀತಿ. ಕೇವಲ ಇದೊಂದೆ ಅಲ್ಲ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ಅಧಿಕಾರಕ್ಕೆ ಬರಲು ನಮ್ಮ ಬಿಜೆಪಿ ಪಕ್ಷ ಎಂಇಎಸ್ ನಂತಹ ಸಂಘಟನೆ ಜೊತೆ ಕೈಜೋಡಿಸಿ ಅಧಿಕಾರಕ್ಕೆ ಬರುತ್ತದೆ. ಒಂದು ಕಡೆಯಲ್ಲಿ ಎಂಇಎಸ್ ಅನ್ನು ವಿರೋಧಿಸುವ ನಾಟಕವಾಡುತ್ತ ಇನ್ನೊಂದು ಕಡೆ ಸಾಮರಸ್ಯದಿಂದ ಬದುಕುತ್ತಿರುವ ಕನ್ನಡ ಹಾಗೂ ಮರಾಠಿಗರ ನಡುವೆ ಹುಳಿ ಹಿಂಡುತ್ತಿರುವ ಎಂಇಎಸ್ ನಂತಹ ಸಂಘಟನೆಯೊಂದಿಗೆ ಜೊತೆ ಕೈಜೋಡಿಸುವ ಬಿಜೆಪಿ ಪಕ್ಷ ಯಾವ ನೈತಿಕತೆಯನ್ನು ಉಳಿಸಿಕೊಂಡಿದೆ? ಕೆಲವು ಸಾವಿರ ಮರಾಠಿ ಮೂಲಭೂತವಾಗಳ ಓಟಿಗಾಗಿ ಕೋಟ್ಯಾಂತರ ಕನ್ನಡಿಗರ ಭಾವನೆಗೆ ಬೆಂಕಿ ಇಡುತ್ತಿರುವ ಬಿಜೆಪಿ ಪಕ್ಷಕ್ಕೆ ಕನ್ನಡಿಗರೆಂದರೆ ಅಸಡ್ಡೆಯೇ?

ಮಹಾರಾಷ್ಟ್ರದಲ್ಲಿ “ಕರ್ನಾಟಕ ರಾಜ್ಯ” ಫಲಕ ಹಾಕಿ:
ಹೀಗೆ ಹೇಳಿದವರು ಬೇರಾರು ಅಲ್ಲ ಸ್ವತ: ಬೆಳಗಾವಿಯನ್ನು ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿರುವ ಬಿಜೆಪಿ ಪಕ್ಷದ ಸಂಸದ ಶ್ರೀ ಸುರೇಶ್ ಅಂಗಡಿಯವರು. ಇಂದಿನ ಕನ್ನಡ ಪ್ರಭದಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಕನ್ನಡ ಪರ ಸಂಘಟನೆಯೊಂದು ಬೆಳಗಾವಿ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿರು ಮಹಾರಾಷ್ಟ್ರ ರಾಜ್ಯ ಅನ್ನುವ ಫಲಕವನ್ನು ತಗೆಸಿ ಎಂದು ಜಿಲ್ಲಾಧಿಕಾರಿಗೆ ಮನವಿ ಕೊಡಲು ಹೋದಾಗ ಅಲ್ಲಿದ್ದ ನಮ್ಮ ಸಂಸದರಿಂದ ಬಂದ ಉತ್ತರ
ನಿಮಗೆ ಧೈರ್ಯವಿದ್ದರೆ ಮಹಾರಾಷ್ಟ್ರಕ್ಕೆ ಹೋಗಿ “ಕರ್ನಾಟಕ ರಾಜ್ಯ” ಎಂಬ ನಾಮ ಫಲಕ ಹಾಕಿರಿ. ಕನ್ನಡಿಗರು ಇಲ್ಲಿ ಗಲಾಟೆ ಮಾಡಿದರೆ ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ತೊಂದರೆ ಆಗುತ್ತಿದೆ. ಮಹಾನಗರ ಪಾಲಿಕೆ ಸೂಪರ್ ಸೀಡ್ ಮಾಡಿದರೆ ಅವರು ಕೋರ್ಟ್ ಗೆ ಹೋಗುತ್ತಾರೆ

ಹಾಗಾದರೆ ನಮ್ಮ ಮಾನ್ಯ ಸಂಸದರಿಗೆ ಎಂಇಎಸ್ ಮಾಡಿದ್ದು ತಪ್ಪಾಗಿ ಕಂಡಿಲ್ಲವೇ? “ಕರ್ನಾಟಕ ರಾಜ್ಯ” ಅನ್ನೋ ನಾಮ ಫಲಕ ಕರ್ನಾಟಕದಲ್ಲಿ ಬಿಟ್ಟು ಮಹಾರಾಷ್ಟ್ರದಲ್ಲಿ ಹಾಕಿದರೆ ಆಗುವ ಉಪಯೋಗವೇನು? ನಮ್ಮ ರಾಜ್ಯದಲ್ಲಿ ಬೇರೆ ರಾಜ್ಯದ ಹೆಸರಿನ ನಾಮ ಫಲಕಗಳಿದ್ದರೆ ಅದನ್ನು ತಗೆಯದೇ ಬಿಡಬೇಕೆ? ಅವರು ಕೋರ್ಟ್ ಗೆ ಹೋಗುತ್ತಾರೆ ಅನ್ನೋ ಕಾರಣಕ್ಕೆ ನಾವು ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದೇ? ಈ ರೀತಿಯ ಉದ್ಧಟತನದ ಕೆಲಸಗಳು ಪದೇ ಪದೇ ಬೆಳಗಾವಿಯಲ್ಲಿ ಆಗುತ್ತಿದ್ದರು ಸಹ ನಮ್ಮ ಸರ್ಕಾರ ಏನು ಕ್ರಮ ಕೈಗೊಂಡಿದೆ? ನಮ್ಮ ಕನ್ನಡ ಪರ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲು ತೋರಿಸುವ ತರಾತುರಿಯನ್ನು ಸರ್ಕಾರ ಈ ನಾಡವಿರೋಧಿಗಳ ಮೇಲೆ ಕ್ರಮಕೈಗೊಳ್ಳಲು ಯಾಕೆ ಮುಂದಾಗುತ್ತಿಲ್ಲ?

ಹುಸಿ ರಾಷ್ಟ್ರೀಯತೆಯ ಸೋಗಿನಲ್ಲಿ ಜನರನ್ನು ಭಾಷೆಯ ಹೆಸರಿನಲ್ಲಿ ಒಡೆದು ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ಈ ರಾಷ್ಟ್ರೀಯ ಪಕ್ಷಗಳಿಂದ ನಮ್ಮ ನಾಡಿಗಾಗುತ್ತಿರುವ ಅವಮಾನ, ನಮ್ಮ ಜನರಿಗೆ ಆಗುತ್ತಿರುವ ನೋವು, ಹಿಂಸೆಗೆ ಕಡಿವಾಣ ಬೀಳಬೇಕಾದಲ್ಲಿ ನಮ್ಮ ನಾಡು-ನುಡಿ-ನಾಡಿಗರನ್ನು ರಕ್ಷಿಸುವಂತಹ ಒಂದು ಪ್ರಾದೇಶಿಕ ಪಕ್ಷ ನಿಜವಾಗಲೂ ಬೇಕು ಅನ್ನುವ ನಮ್ಮ ಆಸೆ ಇಂತಹ ಘಟನೆಗಳಿಂದ ಗಟ್ಟಿಯಾಗುತ್ತಲೇ ಹೋಗುತ್ತಿದೆ.

ಬುಧವಾರ, ನವೆಂಬರ್ 2, 2011

ಮೆಟ್ರೋದಲ್ಲಿ ಸಿಗದ ಉದ್ಯೋಗ – ಕನ್ನಡಿಗರಿಗೆ ಏನ್ ಬಂತು ಉಪಯೋಗ??

ಕನ್ನಡದ ನನ್ನೆಲ್ಲ ಬಂಧುಗಳಿಗೆ ಐವತ್ತಾರನೇ ಕರ್ನಾಟಕ ರಾಜ್ಯೋತ್ಸವದ ಸವಿ ಹಾರೈಕೆಗಳು. ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಕವಿವಾಣಿಯಂತೆ ನಡೆದುಕೊಳ್ಳಬೇಕಾಗಿರುವ ಸಂದರ್ಭ ಹಿಂದೆಂದಿಗಿಂತ ಹೆಚ್ಚು ಪ್ರಸ್ತುತವೆನ್ನಿಸುತ್ತದೆ. ೩ ಪ್ರಾಂತಗಳು ಹಾಗೂ ೧೬ ವಿವಿಧ ಸಂಸ್ಥಾನಗಳಲ್ಲಿ ಹಂಚಿ ಹೋಗಿತ್ತು ನಮ್ಮ ಕನ್ನಡ ನಾಡು, ನಮ್ಮ ನಾಡಿನ ಹಿರಿಯರ ಅವಿರತ ಶ್ರಮ, ತ್ಯಾಗ, ಬಲಿದಾನದ ಫಲವಾಗಿ ಏಕೀಕೃತ ಕರ್ನಾಟಕ ಸ್ಥಾಪಿತವಾಯಿತು. ನಮ್ಮ ಹಿರಿಯರು ಕಂಡ ಸುವರ್ಣ ಕರ್ನಾಟಕದ ಕನಸು ಇನ್ನೂ ನನಸಾಗಿದೆಯೇ? ಖಂಡಿತವಾಗಿಯೂ ಇಲ್ಲಾ. ಈ ಕನಸು ಈಡೇರಬೇಕಾದರೆ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಬೇಕಾಗಿದೆ ಹಾಗೂ ಅದು ಅಗತ್ಯವೂ ಕೂಡ.

ಕಳೆದೆರೆಡು ದಶಕದಲ್ಲಿ ಜಾಗತೀಕರಣದ ಪ್ರಭಾವದಿಂದಾಗಿ ನಮ್ಮ ನಾಡಿಗೆ ಹಲವಾರು ಬೃಹತ್ ಉದ್ಯಮಗಳು ಬಂದವು, ಅದರ ಜೊತೆ ಜೊತೆಗೆ ಹೊರ ರಾಜ್ಯಗಳಿಂದ ವಲಸೆ ಬರುವವರ ಸಂಖ್ಯೆ ಸಹ ಜಾಸ್ತಿಯಾಗುತ್ತಾ ಬಂತು ಹಾಗೂ ಇಂದು ಸಹ ಅದು ಅನಿಯಮಿತವಾಗಿ ನಡೆಯುತ್ತಲೇ ಇದೆ. ಇದರಿಂದಾಗಿ ನಮ್ಮ ನಾಡಿನ ಜನರಿಗೆ ಕೆಲಸಗಳು ದೊರಕದಂತಾಗಿವೆ. ಆದರೆ ಇಂತಹ ಒಂದು ಅನಿಯಮಿತ ವಲಸೆಯಿಂದಾಗಿ ಒಂದು ರಾಜ್ಯದ ಮೇಲೆ ಬೀರಬಹುದಾದ ಪರಿಣಾಮ ಮಾತ್ರ ಭಯಂಕರ. ಇದಕ್ಕೆ ಉದಾಹರಣೆಯಂದರೆ ವಾಣಿಜ್ಯ ನಗರಿ ಮುಂಬಯಿ. ಇಂದು ಅಲ್ಲಿ ವಲಸೆಯಿಂದಾಗಿ ತಮ್ಮ ತಾಯಿನುಡಿಯ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಜನರಿಗೆ ಇಂದು ಇದರ ಪರಿಣಾಮ ಅರ್ಥವಾಗುತ್ತಿದೆ. ಇಂದು ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ಮಹಾರಾಷ್ಟ್ರದಲ್ಲಿ ಅಗಿರುವಂತಹ ಅನಾಹುತ ಆಗಿಲ್ಲ. ಆದರೆ ಸುಮ್ಮನೆ ಇದ್ದರೆ ಇಂತಹ ಅನಾಹುತ ಕಟ್ಟಿಟ್ಟ ಬುತ್ತಿ.

ಮಣ್ಣಿನ ಮಕ್ಕಳಿಗೆ ಹೆಚ್ಚಿನ ಒತ್ತು ಸಿಗಲಿ:


ವಲಸಿಯಿಂದ ಆಗಬಹುದಾದ ಪರಿಣಾಮಕ್ಕೆ ಇತ್ತೀಚಿನ ಉದಾಹರಣೆಯಾಗಿ “ನಮ್ಮ ಮೆಟ್ರೋ”ದಲ್ಲಿ ಆಗಿರುವ ಈ ಪ್ರಕರಣವೇ ಸಾಕ್ಷಿ. ಜನರ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಈ ಮನುಷ್ಯ ಮಾತನಾಡುವ ಧಾಟಿ ನೋಡಿ.... “ಇದು ಹಿಂದುಸ್ಥಾನ, ಹಿಂದುಸ್ಥಾನದ ಭಾಷೆ ಹಿಂದಿಯಾಗಿದೆ, ಅದು ಗೊತ್ತಿದ್ದ ಮೇಲೆ ಕನ್ನಡ ಯಾಕೆ ಕಲಿಯಬೇಕು? ಕನ್ನಡ ಕಲಿಯಲು ನನಗೆ ಇಷ್ಟವಿಲ್ಲ ಯಾಕಂದರೆ ಕನ್ನಡ ಚೆನ್ನಾಗಿಲ್ಲ” ಅಂತ ಹಲ್ಲು ಕಿರಿಯುತ್ತಾ ಹೇಳುತ್ತಿದ್ದಾನೆ. ಇಂತವರಿಂದ ಸಾಮಾನ್ಯ ಜನರಿಗೆ ಯಾವ ತರಹದ ಮಾಹಿತಿ ಸಿಗಲು ಸಾಧ್ಯ? ಯಾವ ರೀತಿಯಿಂದ ಇವನು ಜನರನ್ನು ಸುರಕ್ಷಿತವಾಗಿರಿ ಅಂತ ಹೇಳುತ್ತಾನೆ? ವಲಸೆಯಿಂದ ಆಗಬಹುದಾದ ಪರಿಣಾಮದ ಮೊದಲನೆ ಹೆಜ್ಜೆ ಇದು. ಇದು ಕೇವಲ ಇವನೊಬ್ಬನ ಮಾತಲ್ಲ. ಕೂಲಿ ಮಾಡುವ ಕಾರ್ಮಿಕನಿಂದ ಹಿಡಿದು ದೊಡ್ಡ ದೊಡ್ಡ ಹುದ್ದೆಗಳಲ್ಲಿರುವ ಹೊರ ರಾಜ್ಯದ ಜನರ ಪ್ರತೀಕವಾಗಿ ಇವನು ಕಾಣುತ್ತಾನೆ.

ಬೆಂಗಳೂರಿನ ಹೆಮ್ಮೆಯಾಗಿರುವ ನಮ್ಮ ಮೆಟ್ರೋ ಸಲುವಾಗಿ ಎಷ್ಟೋ ಕುಟುಂಬಗಳು ಇಂದು ಬೀದಿ ಪಾಲಾಗಿವೆ? ದಶಕಗಳಿಂದ ಬಾಳುತ್ತಿದ್ದ ಜನರನ್ನ ಒಕ್ಕಲೆಬ್ಬಿಸಿ ಬೃಹತ್ ಕಟ್ಟಡಗಳನ್ನು ಕಟ್ಟಿರುವ ನಮ್ಮ ಮೆಟ್ರೋ ಸಂಸ್ಥೆಯವರು ಎಷ್ಟು ಕುಟುಂಬಗಳಿಗೆ ಉದ್ಯೋಗಗಳನ್ನು ನೀಡಿದ್ದಾರೆ? ಇಂತವರಿಗೆ ಕೆಲಸ ಕೊಡಬೇಕಾಗಿರುವುದು ಸಂಸ್ಥೆಯ ಕರ್ತವ್ಯವಲ್ಲವೇ? ಒಂದು ಗಾರ್ಡ್ ಕೆಲಸಕ್ಕೂ ಸಹ ನಮ್ಮ ಕನ್ನಡಿಗರು ಅರ್ಹರಲ್ಲವೇ? ನಮ್ಮ ಮೆಟ್ರೋನಲ್ಲಿರುವ ಸುಮಾರು ೮೪೦ ಕೆಲಸಗಳಲ್ಲಿ ಕೇವಲ ೩೨೦ ಹುದ್ದೆಗಳಿಗೆ ಮಾತ್ರ ಕನ್ನಡಿಗರನ್ನ ನೇಮಿಸಲಾಗಿದೆ, ಉಳಿದದ್ದೆಲ್ಲ ಪರಭಾಷಿಕರ ಪಾಲು. ಇದು ಯಾವ ಸೀಮೆಯ ನ್ಯಾಯ? ನಿಜಕ್ಕೂ ನಮ್ಮ ಸರ್ಕಾರಕ್ಕೆ ರಾಜ್ಯದಲ್ಲಿ ಆಗುತ್ತಿರುವ ವಿದ್ಯಮಾನಗಳ ಬಗ್ಗೆ ಗಮನ ಹರಿಸಲು ಸಮಯವಿದೆಯೋ ಇಲ್ಲವೇ ಗೊತ್ತಾಗುತಿಲ್ಲ. ತ್ರಿಭಾಷೆಯ ಮೂಲಕ ಭಾರತದ ಒಗ್ಗೂಡಿಸುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಮೆಟ್ರೋ ಸಂಸ್ಥೆ ನಿಜಕ್ಕೂ ನಮ್ಮದೇ ಅನ್ನುವ ಅನುಮಾನ ಕಾಡಲು ಶುರುವಾಗಿದೆ.

ಸುಮಾರು ದಶಕಗಳಿಂದ ಜಾರಿಗೆ ಬರದೆ ಧೂಳು ಹಿಡಿದು ಕೂತಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತನ್ನಿ ಎಂದು ಪ್ರತಿ ಬಾರಿಯೂ ಬೀದಿಗಿಳಿಯುವ ಕನ್ನಡ ಪರ ಸಂಘಟನೆಗಳ ಆಗ್ರಹಕ್ಕೆ ಸರ್ಕಾರ ಕೊಡುತ್ತಿರುವ ಕಿಮ್ಮತಾದರೂ ಏನು? ಒಂದು ಬಾಗಿಲು ಕಾಯುವ ಕೆಲಸಕ್ಕೂ ಹೊರಗಿನವರನ್ನು ತಂದು ತುಂಬಿದರೆ ಇಲ್ಲಿನ ಮಕ್ಕಳಿಗೆ ಇಲ್ಲಿ ಕೆಲಸ ಸಿಗದೇ ಬೇರೆಲ್ಲಿ ಸಾಧ್ಯ? ಇದಕೆಲ್ಲ ಪರಿಹಾರವೆಂದರೆ ಮೊದಲನೆಯದಾಗಿ ಸರೋಜಿನಿ ಮಹಿಷಿ ವರದಿ ಜಾರಿಗೆ ಬರಬೇಕು. ಮಣ್ಣಿನ ಮಕ್ಕಳಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎನ್ನುವ ನಿಯಮವನ್ನು ಸರ್ಕಾರ ಜಾರಿಗೆ ತರಬೇಕು. ಈಗಾಗಲೇ ಇಂತಹ ವ್ಯವಸ್ಥೆಯನ್ನು ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಒರಿಸ್ಸಾ ಹಾಗೂ ಗುರಜಾತ ದಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಇದರ ಜೊತೆಜೊತೆಗೆ ಉದ್ಯಮಗಳಿಗೆ ತಮ್ಮ ಹೊಲ-ಮನೆಗಳನ್ನು ಕಳೆದುಕೊಳ್ಳುವ ಕುಟುಂಬಗಳಿಗೆ ಸರಿಯಾದ ಪರಿಹಾರದ ಜೊತೆಗೆ ಸ್ಥಾಪಿಸಲಾಗುವ ಉದ್ಯಮದಲ್ಲಿ ಅವರ ವಿಧ್ಯಾರ್ಹತೆಗೆ ತಕ್ಕಂತೆ ಕೆಲಸಗಳನ್ನು ನೀಡಬೇಕು. ರಾಜ್ಯದಲ್ಲಿ ಹೊಸದಾಗಿ ಶುರುವಾಗುವ ಯಾವುದೇ ಉದ್ಯಮವಿದ್ದರೂ ಮೊದಲಿಗ ಇಲ್ಲಿಯ ಜನರಿಗೆ ಕೆಲಸಗಳನ್ನು ನೀಡಬೇಕು ಎಂದು ಸರ್ಕಾರ ಒಪ್ಪಂದ ಮಾಡಿಕೊಳ್ಳಬೇಕು ಹಾಗೂ ಅನಿಯಮಿತವಾಗಿ ಆಗುತ್ತಿರುವ ವಲಸೆಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು.

ಇದೆಲ್ಲಾ ಆಗಬೇಕೆಂದರೆ ನಮ್ಮ ರಾಜಕೀಯ ಪಕ್ಷಗಳಿಗೆ ನಾಡಿಗೆ ಒಳಿತನ್ನು ಮಾಡುವ ಇಚ್ಛಾಶಕ್ತಿ ಇರಬೇಕು. ಆದರೆ ನಿಜಕ್ಕೂ ಈ ಕಾಳಜಿ ಇಂದು ಅಸ್ತಿತ್ವದಲ್ಲಿರುವ ಯಾವುದೇ ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಖಂಡಿತಾ ಇಲ್ಲ. ಕನ್ನಡ, ಕನ್ನಡಿಗ ಹಾಗೂ ಕರ್ನಾಟಕಗಳ ಬಗ್ಗೆ ಕಾಳಜಿ ಇರುವ ಒಂದು ನಿಜವಾದ ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ ಬರಬೇಕು. ಕನ್ನಡಿಗರ ಏಳಿಗೆಯನ್ನೇ ಮೂಲಮಂತ್ರವನ್ನಾಗಿ ಇಟ್ಟುಕೊಂಡು ಕೆಲಸ ಮಾಡುವ ಪಕ್ಷ ನಮಗೆ ಬೇಕು. ಆಗ ಮಾತ್ರ ನಮ್ಮ ಹಿರಿಯರು ನಮಗಾಗಿ ಮಾಡಿರುವ ತ್ಯಾಗ, ಬಲಿದಾನ ಹೋರಾಟ ಸಾರ್ಥಕವಾದಂತೆ. ಏನಂತೀರಿ ಗೆಳೆಯರೇ?