ಸೋಮವಾರ, ಅಕ್ಟೋಬರ್ 10, 2011

ಅನಿಯಂತ್ರಿತ ವಲಸೆ ಮತ್ತು ಅದರ ದುಷ್ಪರಿಣಾಮಗಳು

ಕಳೆದ ವಾರ ಬೆಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣ ಮತ್ತು ಕಳೆದ ತಿಂಗಳಷ್ಟೇ ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ಕೇವಲ 50 ಪೈಸೆಗೆ ನಡೆದ ಶೂಟ್ ಔಟ್ ನಂತಹ ಪ್ರಕರಣಗಳು ಒಂದು ನಾಡಿನಲ್ಲಿ ಅನಿಯಂತ್ರಿತ ವಲಸೆಯಿಂದ ಆಗಬಹುದಾದ ದುಷ್ಪರಿಣಾಮಗಳ ಚಿತ್ರಣವನ್ನು ಬಯಲುಮಾಡಿದಂತಿವೆ. ಜೊತೆಗೇ, ಕರ್ನಾಟಕದಲ್ಲಿ ಎಡೆಯಿರದೆ ನಡೆಯುತ್ತಿರುವ ಅನಿಯಂತ್ರಿತ ವಲಸೆಯಿಂದ ಕನ್ನಡಿಗರ ಉದ್ಯೋಗಕ್ಕೆ ಬಂದಿರುವ ಕುತ್ತು, ಕನ್ನಡಿಗರ ಮೇಲೆ ಆಗುತ್ತಿರುವ ದಾಳಿ ಸಾಮಾಜಿಕ ಭದ್ರತೆಯ ಬುನಾದಿಯನ್ನೇ ಅಲುಗಾಡಿಸಿದಂತಾಗಿದೆ. ಅಷ್ಟೇ ಅಲ್ಲದೆ, ಕಮ್ಮಿ ಕೂಲಿಗೆ ಸಿಗುತ್ತಾರೆಂಬ ನೆಪವೊಡ್ಡಿ ವಲಸಿಗರನ್ನು ಶೋಷಿಸುವ ಸೆಕ್ಯುರಿಟಿ ಏಜೆನ್ಸಿಗಳ ಒಂದು ವರ್ಗವೇ ಸೃಷ್ಟಿ ಆಗುತ್ತಿದ್ದು, ಕನ್ನಡಿಗರು ಮತ್ತು ಪರಭಾಷಿಕರ ಮಧ್ಯೆ ಸಾಮಾಜಿಕ ಘರ್ಷಣೆ, ತಿಕ್ಕಾಟಕ್ಕೂ ಇದು ಕಾರಣವಾಗುತ್ತಿದೆ.

ಇಷ್ಟೆಲ್ಲಾ ಗಂಭೀರ ಬೆಳವಣಿಗೆಗಳಾಗುತ್ತಿದ್ದರೂ, ನಮ್ಮ ಘನ ಸರ್ಕಾರ ಮಾತ್ರ, ಅನಿಯಂತ್ರಿತ ವಲಸೆಗೆ ಕಡಿವಾಣ ಹಾಕುವ ಯಾವ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಅದರ ಬಗ್ಗೆ ಯೋಚಿಸುತ್ತಲೂ ಇಲ್ಲ. ಅದಕ್ಕೆ ವಿರುದ್ಧವಾಗಿ, ಕಡಿವಾಣವೇ ಇಲ್ಲದ ಸೆಕ್ಯುರಿಟಿ ಏಜೆನ್ಸಿಗಳನ್ನು ಬೆಳೆಯಲು ಬಿಟ್ಟು, ಅಲ್ಲಿ ನೇಮಕವಾಗುವ ಸೆಕ್ಯುರಿಟಿ ಗಾರ್ಡ್ ಗಳನ್ನಾಗಲೀ, ಅವರೊಡನೆಯೇ ಬರುವವರನ್ನಾಗಲೀ ಗೊತ್ತು ಗುರಿಯಿಲ್ಲದೆ ನಮ್ಮ ನಾಡಿನಲ್ಲಿ ಬೀಡು ಬಿಡಲು ಅನುಕೂಲ ಮಾಡಿಕೊಡುವ ವ್ಯವಸ್ಥೆಗೆ ಪ್ರೋತ್ಸಾಹ ನೀಡುತ್ತಿದೆ. ಕಂತೆಗೆ ತಕ್ಕ ಬೊಂತೆ ಎಂಬಂತೆ, ಸೆಕ್ಯುರಿಟಿ ಏಜೆನ್ಸಿಗಳೂ ಕೂಡ, ಕಮ್ಮಿ ಕೂಲಿಗೆ ಸಿಕ್ಕರೆಂಬ ಭರದಲ್ಲಿ ಇದಾವುದನ್ನೂ ಗಂಭೀರವಾಗಿ ಪರಿಗಣಿಸದೆ, ತಮ್ಮ ಲಾಭಕ್ಕೋಸ್ಕರ ವಲಸಿಗರನ್ನೂ ಶೋಷಣೆ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಜೊತೆಗೆ, ತಾವು ನೇಮಿಸಿಕೊಂಡ ವಲಸಿಗರು ಯಾರು, ಅವರ ಮೂಲ, ಇಲ್ಲಿಗೆ ಬಂದಿರುವ ಉದ್ದೇಶ, ಅವರ ವ್ಯಕ್ತಿಗತ ಹಿನ್ನೆಲೆ - ಇದಾವುದನ್ನೂ ಕಲೆ ಹಾಕುತ್ತಿಲ್ಲ ಮತ್ತು ಹೆಚ್ಚು ವಿದ್ಯಾರ್ಹತೆ ಬೇಕಿಲ್ಲದ ಇಂತಹ ಕೆಲಸಗಳಿಗೂ ಸ್ಥಳೀಯರಾದ ಕನ್ನಡಿಗರನ್ನೇ ನೇಮಿಸುವ ಕೆಲಸ ಮಾಡುತ್ತಿಲ್ಲ. ಕೆಲವೊಮ್ಮೆ ಬೇಕೆಂದೇ ಪರಭಾಷಿಕರನ್ನು ಈ ಕೆಲಸಗಳಿಗೆ ನೇಮಿಸಿಕೊಂಡು, ಕನ್ನಡಿಗರ ಉದ್ಯೋಗಕ್ಕೆ ಕಲ್ಲು ಹಾಕುತ್ತಿದ್ದಾರೆ. ನಮ್ಮ ಸರ್ಕಾರ ಈ ಕೂಡಲೆ ಇದರ ಬಗ್ಗೆ ಎಚ್ಚೆತ್ತುಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ, ಅತಿಬೇಗ ಈ ಸಮಸ್ಯೆಗಳು ದೊಡ್ಡ ಸಾಮಾಜಿಕ ಪಿಡುಗುಗಳಾಗಿ ಮಾರ್ಪಾಡಾಗುವ ದಿನಗಳು ದೂರವಿಲ್ಲ. ಅನಿಯಂತ್ರಿತ ವಲಸೆಯ ಕಡಿವಾಣವೇ ಇವೆಲ್ಲಕ್ಕೂ ಸೂಕ್ತ ಪರಿಹಾರವೆನಿಸುತ್ತದೆ.