ಗುರುವಾರ, ಜುಲೈ 28, 2011

ಹೈಕಮಾಂಡ್!!! ಹೈಕಮಾಂಡ್!!!


ಕರ್ನಾಟದಲ್ಲಿ ಕಳೆದೆರೆಡು ವಾರಗಳಿಂದ ನಡೆಯುತ್ತಿರುವ ಈ ರಾಜಕೀಯ ದೊಂಬರಾಟ ದೇಶದ ಗಮನವನ್ನ ತನ್ನತ ಸೆಳೆದಿದೆ. ಅಕ್ರಮ ಗಣಿಗಾರಿಕೆಯ ಬಗ್ಗೆ ಲೋಕಾಯುಕ್ತರು ನೀಡಿರುವ ವರದಿ ರಾಜಕೀಯ ಪಕ್ಷಗಳು ಹಾಗೂ ಅವರ ನಾಯಕರುಗಳಲ್ಲಿ ಆತಂಕ ಹುಟ್ಟಿಸಿದೆ. ಮುಂದೆ ಈ ರಾಜಕೀಯ ದೊಂಬರಾಟ ಹೇಗೆ ತಿರುವುಗಳನ್ನು ಪಡೆಯುತ್ತದೋ ಕಾದು ನೋಡೋಣ.

ಆದರೆ ಈ ಪ್ರಕರಣ ಹೊರಬಿದ್ದಾಗಿನಿಂದ ಹೈಕಮಾಂಡಿನ ಹೆಸರು ಎಂದಿಗಿಂತ ಹೆಚ್ಚು ಪದೇ ಪದೇ ಕಿವಿಯ ಮೇಲೆ ಬೀಳುತ್ತಲೇ ಇದೆ. ನಮ್ಮ ರಾಜ್ಯದ ರಾಷ್ಟ್ರೀಯ ಪಕ್ಷಗಳ ನಾಯಕರು ಎದ್ದರೂ ಹೈಕಮಾಂಡ್, ಬಿದ್ದರೂ ಹೈಕಮಾಂಡ್, ಕನಸಿನಲ್ಲೂ ಹೈಕಮಾಂಡ್ ಎಂದು ಕನವರಿಸುತ್ತಾ ಇರುತ್ತಾರೆ. ಕಾಂಗ್ರೆಸ್, ಬಿಜೆಪಿ ಎಂದು ಪಕ್ಷ ಭೇದ ಮರೆತು ನಮ್ಮ ರಾಜ್ಯದ ನಾಯಕರುಗಳು ಹೈಕಮಾಂಡಿನ ದಾಸ್ಯಕ್ಕೆ ಒಗ್ಗಿಹೋಗಿದ್ದಾರೆ ಎಂದೆನಿಸುತ್ತದೆ. ಹೈಕಮಾಂಡಿನ ಕರೆ ಬಂದ ಕೂಡಲೇ ಉಟ್ಟ ಬಟ್ಟೆಯಲ್ಲಿ ದೆಹಲಿಗೆ ಓಡಿ ಹೋಗುವ ಚಾಳಿ ನಮ್ಮ ರಾಜ್ಯದ ನಾಯಕರುಗಳಿಗೆ ಅಭ್ಯಾಸ ಆಗಿ ಹೋಗಿದೆ. ನಮ್ಮ ರಾಜ್ಯದ ಯಾವುದೇ ಪ್ರಮುಖ ವಿಷಯಗಳಲ್ಲಿ ತೀರ್ಮಾನವಾಗಬೇಕಾದರೂ ದೆಹಲಿಯಲ್ಲಿ ಗಂಟೆಗಟ್ಟಲೆ ಕೈಕಟ್ಟಿಕೊಂಡು ನಿಲ್ಲಬೇಕಾದ ಪರಿಸ್ಥಿತಿ ನಮ್ಮ ಜನಪ್ರತಿನಿಧಿಗಳದು. ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರನ್ನು ಭೇಟಿ ಮಾಡಲು ಹಲವಾರೂ ದಿನಗಳು ಕಳೆದರೂ ಭೇಟಿ ಮಾಡಲು ಸಾಧ್ಯವಾಗದೆ ವಾಪಸ್ ಬಂದಿರುವ ಅನೇಕ ಸುದ್ದಿಗಳನ್ನು ಪತ್ರಿಕೆಗಳಲ್ಲಿ ನೋಡಿರುತ್ತೇವೆ... ತೀರಾ ಇತ್ತೀಚಿಗಿನ ಬೆಳವಣಿಗೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಹೊಸ ಮುಖ್ಯಮಂತ್ರಿಗಳನ್ನೂ ಆರಿಸಲು ಸಹ ನಮ್ಮ ರಾಜ್ಯದ ಬಿಜೆಪಿ ನಾಯಕರು ಹೈಕಮಾಂಡಿನತ್ತ ಮುಖಮಾಡಿರುವುದು ನಮ್ಮ ರಾಜ್ಯದ ೬ ಕೋಟಿ ಜನರ ವಿಶ್ವಾಸಕ್ಕೆ ದ್ರೋಹ ಮಾಡಿತಂತಾಗಿದೆ? ರಾಜ್ಯದ ಹಿತಕ್ಕಾಗಿ ಸ್ವಂತ ನಿರ್ಧಾರಗಳನ್ನು ತಗೆದುಕೊಳ್ಳಲು ಸಾಧ್ಯವಿಲ್ಲವೆಂದಾದರೆ ಅವರುಗಳು ನಾಯಕರಾಗಿ ಮುಂದುವರೆಯುತ್ತಿರುವುದಾದರೂ ಏಕೆ?

ನಮ್ಮ ರಾಜ್ಯದ ಒಳಿತನ್ನು ನಿರ್ಧರಿಸಲು ಹೈಕಮಾಂಡ್ ಬೇಕೆ?
ನಾಯಕತ್ವ ಬದಲಾವಣೆಯ ಈ ಸಮಯದಲ್ಲಿ ಮುಂದಿನ ಮುಖ್ಯಮಂತ್ರಿಯಾರಗಬೇಕು ಎನ್ನುವ ತೀರ್ಮಾನವನ್ನು ಹೈಕಮಾಂಡ್ ತಗೆದುಕೊಳ್ಳಲು ಹೊರಟಿದೆ ಎನ್ನುವು ಸುದ್ದಿ ಬರುತ್ತಿದೆ. ಇಷ್ಟಕ್ಕೂ ನಮ್ಮ ರಾಜ್ಯದಲ್ಲಿ ಯಾರು ಮುಖ್ಯಮಂತ್ರಿಯಾರಾಗಬೇಕು ಎನ್ನುವ ನಿರ್ಧಾರವನ್ನು ತೀರ್ಮಾನ ಮಾಡಲು ಹೈಕಮಾಂಡ್ ಬೇಕೆ? ಅಸಲಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಮುಖ್ಯಮಂತ್ರಿ ಯಾರಾಗಿರಬೇಕು ಎನ್ನುವ ನಿರ್ಧಾರವನ್ನು ಮಾಡಬೇಕಾಗಿರುವವರು ನಮ್ಮ ಪ್ರತಿನಿಧಿಗಳಾದ ಶಾಸಕರು ಅಲ್ಲವೇ? ಇದನ್ನೆಲ್ಲ ಮೀರಿ ನಾಯಕತ್ವ ತೀರ್ಮಾನಿಸೋಕೆ ಹೈಕಮಾಂಡ್ ಗೆ ಇಲ್ಲಿನ ಯಾವ ಪರಿಸ್ಥಿತಿಯ ಅರಿವಿರುತ್ತದೆ? ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ಮಾರಕಾವಾಗಿರುವ ಈ ಹೈಕಮಾಂಡ್ ದಾಸ್ಯದಿಂದ ನಮ್ಮ ರಾಷ್ಟ್ರೀಯ ರಾಜಕೀಯ ಪಕ್ಷಗಳು ಎಂದು ಹೊರಗೆ ಬರುತ್ತವೆ? ಒಂದು ರಾಷ್ಟ್ರೀಯ ಪಕ್ಷ ಎಂದಾಕ್ಷಣ ಎಲ್ಲಾ ನಿರ್ಧಾರಗಳು ಮೇಲಿಂದಲೇ ಬರಬೇಕೆಂದೇನಿಲ್ಲ ಅಲ್ಲವೇ?. ಆದಷ್ಟು ಬೇಗ ಈ ಪರಿಸ್ಥಿತಿಯಿಂದ ನಮ್ಮ ರಾಜಕೀಯ ಪಕ್ಷಗಳು ಹೊರಬರಲಿ, ಹೈಕಮಾಂಡ್ ದಾಸ್ಯದಿಂದ ಮುಕ್ತವಾಗಲಿ ಎಂದು ಆಶಿಸೋಣ. ಕನ್ನಡಿಗರಲ್ಲಿ ಈ ಕುರಿತು ಜಾಗೃತಿಯಾಗಬೇಕು, ನಮ್ಮ ನಿರ್ಧಾರಗಳನ್ನು ನಾವೇ ತಗೆದುಕೊಳ್ಳುವಂತಾಗಬೇಕು.

ಶುಕ್ರವಾರ, ಜುಲೈ 22, 2011

ಕರ್ನಾಟಕದವರು ಬಿಟ್ಟಿ ಬಿದ್ದಿದ್ದಾರಾ?


ಬಹುಷಃ ಕರ್ನಾಟಕದವರ ಮೇಲೆ ಆಗುತ್ತಿರುವ ದೌರ್ಜನ್ಯದ ಸರಮಾಲೆಗೆ ಹೊಸದೊಂದು ನೋವುಂಟು ಮಾಡುವ ವಿಚಾರ ಸೇರಿಕೊಂಡಿದೆ. ನಿನ್ನೆಯಿಂದ ಪ್ರದರ್ಶನ ಕಾಣುತ್ತಿರುವ ತಮಿಳಿನ ರೀಮೇಕ್ ಚಿತ್ರವಾದ ಸಿಂಗಂ ಅನ್ನೋ ಹಿಂದಿ ಸಿನೇಮಾದಲ್ಲಿ ನಾಯಕ ಹಾಗೂ ಖಳನಾಯಕನ ಪಾತ್ರದ ನಡುವೆ ನಡೆಯುವ ಸಂಭಾಷಣೆಯಲ್ಲಿ ಖಳನಾಯಕ “ನಾನು ಕರ್ನಾಟಕದ ಗಡಿಯಿಂದ ೧೦೦೦ ಜನರನ್ನು ಕರೆತರುತ್ತೇನೆ ಎಂದು ಹೇಳಿದಾಗ ಅದಕ್ಕೆ ಪ್ರತಿಯಾಗಿ ನಾಯಕ ನಿನ್ನಂತ ೧೦೦೦ ನಾಯಿಗಳನ್ನು ಬೇಟೆಯಾಡಲು ನನ್ನಂತ ಒಂದು ಸಿಂಹ ಸಾಕು ಎಂದು ಹೇಳುತ್ತಾನೆ”, ಅಲ್ಲಿಗೆ ಚಿತ್ರದ ಪ್ರಕಾರ ಕರ್ನಾಟಕದ ಗಡಿ ಭಾಗಗಳಲ್ಲಿ ವಾಸಿಸುವ ಜನರು ನಾಯಿಗಳಂತೆ? ಇನ್ನೊಂದು ವಿಶೇಷ ಅಂದ್ರ ಈ ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ ಹಾಗೂ ಖಳನಾಯಕನ ಪಾತ್ರದಲ್ಲಿ ನಟಿಸಿರುವ ಪ್ರಕಾಶ್ ರೈ ಇಬ್ಬರೂ ಕರ್ನಾಟಕದವರೇ (?) ಆಗಿದ್ದರೂ ಒಂದು ರಾಜ್ಯದ ಜನರಿಗೆ ನೋವುಂಟು ಮಾಡುವಂತಹ ಸಂಭಾಷಣೆಯನ್ನ ಬಳಲಸೇಬಾರದಿತ್ತು ಅನ್ನೋ ಪರಿಜ್ಞಾನ ಕೂಡ ಅವರಲ್ಲಿ ಇರಲಿಲ್ವೇ?

ಆದರೆ ನಿಜಕ್ಕೂ ಗಡಿ ಭಾಗವಾದ ಬೆಳಗಾವಿಯಲ್ಲಿ ಕಷ್ಟ ಅನುಭವಿಸುತ್ತಿರುವುದು ಕನ್ನಡದ ಜನರೇ ಅನ್ನೋದು ನಮಗೆಲ್ಲಾ ಗೊತ್ತಿರುವುದೇ. ಎಂ.ಇ. ಎಸ್ ನಂತಹ ಒಂದು ಸಂಘಟನೆ ಹುಟ್ಟಿಕೊಂಡಾಗಿನಿಂದ ಕನ್ನಡಿಗರ ಪಾಡು ನೆಲಕಚ್ಚಿತ್ತು. ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳೋಕೆ ಒಂದಾಗಿ ಬಾಳುತ್ತಿದ್ದ ಕನ್ನಡ ಹಾಗೂ ಮರಾಠಿ ಭಾಷಿಕರ ನಡುವೆ ಕಂದಕ ಸೃಷ್ಠಿಸಿದ ಜನರಿವರು. ಕನ್ನಡಿಗರ ವಿರುದ್ಧ ಎಂತಹ ಹೀನ ಕೆಲಸಕ್ಕಾದರೂ ತಯಾರಾಗಿರುವ ಜನರಿವರು. ಸುಮಾರು ೩೦-೪೦ ವರ್ಷಗಳಿಂದ ಇವರ ದಬ್ಬಾಳಿಕೆಯಿಂದ ಬೇಸತ್ತಿದ್ದ ಜನರಿಗೆ ಕರವೇ ಯಂತಹ ಕನ್ನಡ ಪರ ಸಂಘಟನೆ ದುಡಿದ ಪರಿಣಾಮ ಇಂದು ಕನ್ನಡಿಗರು ಕೊಂಚ ಉಸಿರಾಡುವಂತಹ ಪರಿಸ್ಥಿತಿ ಇದೆ. ಆದರೆ ಇನ್ನೊಬ್ಬರ ನೋವಿನಲ್ಲೂ ಸುಖಪಡುವ ಎಂ.ಇ.ಎಸ್ ನಂತಹ ಸಂಘಟನೆಯ ಜನರ ತೆವಲಿಗಾಗಿ ಇಂತಹ ಸಂಭಾಷಣೆಗಳನ್ನು ಸೇರಿಸಿ ಕರ್ನಾಟಕದ ಜನರಿಗೆ ಅವಮಾನವೆಸಗುವುದೆ ಎಷ್ಟರ ಮಟ್ಟಿಗೆ ಸರಿ?

ಕನ್ನಡಿಗರ ವಿಶ್ವಮಾನವತೆ!!
ಇಂದು ಬೆಳಗ್ಗೆ ಸುವರ್ಣ ವಾಹಿನಿಯಲ್ಲಿ ಕರವೇ ಅಧ್ಯಕ್ಷ ಶ್ರೀ ಟಿ.ಎ. ನಾರಾಯಣಗೌಡರ ಸಂದರ್ಶನದಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿದ ಕರ್ನಾಟಕದ ಪ್ರಜೆಗಳೊಬ್ಬರು ಚಿತ್ರದ ಸಂಭಾಷಣೆಯಲ್ಲಿ ಯಾವುದೇ ತಪ್ಪಿಲ್ಲ, ಅದು ಕನ್ನಡಿಗರ ಪರವಾಗಿದೆ ಹಾಗಾಗಿ ಅದಕ್ಕೆ ಅಡ್ಡಿಪಡೆಸಬೇಡಿ ಅಂತ ಸಲಹೇ ನೀಡಿದರು. ಬಹುಷಃ ಅವರು ನಿಜಕ್ಕೂ ವಿಶ್ವಮಾನವರೇ ಇರಬೇಕು. ಹೀಗೆ ಕನ್ನಡಿಗರು ತಮ್ಮತನವನ್ನ ಮರೆತು ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಸಹಿಸಿಕೊಂಡು ಬದುಕಬೇಕಾದ ಹೀನ ಪರಿಸ್ಥಿತಿಗೆ ಇಂಥವರೆ ಕಾರಣ. ನಮ್ಮ ಹೇಡಿತನಕ್ಕೆ, ನಮ್ಮ ಅಭಿಮಾನ ಶ್ಯೂನ್ಯತೆಗೆ ನಾವು ಕೊಟ್ಟಿರುವ ಹೆಸರು ವಿಶ್ವಮಾನವತೆಯೇ? ಕರ್ನಾಟಕದವರನ್ನು ಅವಹೇಳಿಸಿ ಮಾತನಾಡಿರುವುದು ಇದೇ ಮೊದಲ್ಲಲ, ಹಾಗೆಯೇ ಇದೇ ಕೊನೆಯಾಗುತ್ತದೆಂಬ ನಂಬಿಕೆ ಕೂಡ ಇಲ್ಲಾ. ಒಂದು ಒಕ್ಕೂಟದ ವ್ಯವಸ್ಥೆಯಲ್ಲಿ ಬದುಕುತ್ತಿರುವ ವಿವಿಧ ರಾಜ್ಯಗಳ ಜನರ ನಡುವೆ ಒಡಕು ತರಬಹುದಾದಂತಹ ಇಂತಹ ಕೆಲಸಗಳನ್ನ ತಡೆಯುವುದಕ್ಕೆ ಅಲ್ಲಿಯ ಜನರಿಂದ ಮಾತ್ರ ಸಾಧ್ಯ, ಜನ ಎಚ್ಚೆತುಕೊಳ್ಳಬೇಕು, ನಾವು, ನಮ್ಮತನ ಅನ್ನೋ ಜಾಗೃತಿ ಅವರಲ್ಲಾಗಬೇಕು. ಯಾವುದೇ ಭಾಗದ ಜನರನ್ನ ಕೀಳಾಗಿ ಕಾಣುವ ಇಂತಹ ಹೀನ ಚಾಳಿಗೆ ವಿರುದ್ಧವಾಗಿ ಧ್ವನಿ ಎತ್ತಿ ನಿಲ್ಲಬೇಕು.
ಚಿತ್ರ ಕೃಪೆ: Pics4news