ಗುರುವಾರ, ಡಿಸೆಂಬರ್ 30, 2010

ಕೃಷ್ಣಾ ನ್ಯಾಯಾಧಿಕರಣದ ತೀರ್ಪು :: ನನ್ನ ಅನಿಸಿಕೆ


ನಾಲ್ಕು ದಶಕಗಳ ಸುಧೀರ್ಘ ಹೋರಾಟದ ನಂತರ ಕೃಷ್ಣ ನದಿ ನೀರು ಹಂಚಿಕೆಯ ತೀರ್ಪು ಹೊರಬಿದ್ದಿದೆ. ಮೇಲ್ನೋಟಕ್ಕೆ ನಮಗೆ ಸಂಪೂರ್ಣ ನ್ಯಾಯ ದಕ್ಕಿದೆ ಅಂತ ಅನ್ನಿಸಿದರೂ ಸಹ ಕೆಲವು ಪ್ರಮುಖ ವಿಷಯಗಳಲ್ಲಿ ನಮಗೆ ನ್ಯಾಯ ಸಿಕ್ಕಿಲ್ಲವೇನೋ ಅನ್ನಿಸುತ್ತದೆ. ಇದುವರೆಗೂ ಮಾಧ್ಯಮಗಳು ಹಾಗೂ ಅಂತರ್ಜಾಲದಲ್ಲಿ ದೊರಕಿರುವ ಮಾಹಿತಿಯ ಪ್ರಕಾರ,ಸ್ಕೀಮ್ ಬಿಯಲ್ಲಿ ಒಟ್ಟು ಲಭ್ಯವಿರುವ 448 ಟಿ.ಎಂ.ಸಿ ನೀರಿನ ಹಂಚಿಕೆಯ ವಿವರಗಳು ಇಂತಿದೆ: ಮಹಾರಾಷ್ಟ್ರಕ್ಕೆ 81 ಟಿ.ಎಂ.ಸಿ ಯಷ್ಟು ನೀರನ್ನು ಹಂಚಲಾಗಿದೆ, ಕರ್ನಾಟಕಕ್ಕೆ 177 ಟಿ.ಎಂ.ಸಿ ಯಷ್ಟು ನೀರನ್ನು ಹಂಚಲಾಗಿದೆ ಹಾಗೂ ಆಂಧ್ರ ಪ್ರದೇಶಕ್ಕೆ 190 ಟಿ.ಎಂ.ಸಿ ಯಷ್ಟು ನೀರನ್ನು ಹಂಚಲಾಗಿದೆ.
ಇದರ ಜೊತೆಗೆ ರಾಜ್ಯದ ದಶಕಗಳ ಬೇಡಿಕೆಯಾಗಿದ್ದ ಆಲಮಟ್ಟಿ ಆಣೆಕಟ್ಟಿನ ಎತ್ತರವನ್ನು 519 ಮೀಟರ್ ನಿಂದ 524.26 ಮೀಟರ್ ವರೆಗೆ ಏರಿಸಲು ಇದ್ದ ಅಡಚಣೆಯನ್ನು ನಿವಾರಿಸಿ ನ್ಯಾಯಾಧಿಕರಣ ಅವಕಾಶ ನೀಡಿದೆ. ಕೃಷ್ಣ ನದಿಯ ಒಟ್ಟು ನೀರು ಹಂಚಿಕೆಯಲ್ಲಿ ಕರ್ನಾಟಕದ ಪಾಲಿಗೆ 911 ಟಿ.ಎಂ.ಸಿ ನೀರು ಸಿಕ್ಕಿದೆ, ಮಹಾರಾಷ್ಟ್ರದ ಪಾಲಿಗೆ 666 ಟಿ.ಎಂ.ಸಿ ಹಾಗೂ ಆಂಧ್ರ ಪ್ರದೇಶಕ್ಕೆ 1001 ಟಿ.ಎಂ.ಸಿ ನೀರು ಸಿಕ್ಕಿದೆ. ಇದರ ಜೊತೆಗೆ ಕರ್ನಾಟಕ ಪ್ರತಿ ವರ್ಷ ಜೂನ್-ಜುಲೈ ತಿಂಗಳಿನಲ್ಲಿ 8-10 ಟಿ.ಎಂ.ಸಿ ನೀರು ಆಂಧ್ರಕ್ಕೆ ಬಿಡಬೇಕು ಎಂದು ತೀರ್ಪು ನೀಡಿದೆ. ಹಾಗದರೆ ರಾಜ್ಯಕ್ಕೆ ಅನ್ಯಾಯವಾಗಿರುವುದೆಲ್ಲಿ???

ರಾಜ್ಯಕ್ಕೆ ಅನ್ಯಾಯವಾಗಿರುವುದೆಲ್ಲಿ?
ಮೊದಲನೆಯದಾಗಿ ಬಚಾವತ್ ಆಯೋಗ ತನ್ನ ತೀರ್ಪಿನಲ್ಲಿ ಕೃಷ್ಣಾ ನದಿಯ ಕೊಳ್ಳದಲ್ಲಿ ಲಭ್ಯವಿರುವ ಹೆಚ್ಚುವರಿ ನೀರನ್ನು ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಕ್ಕೆ ಕ್ರಮವಾಗಿ 50%, 25% ಹಾಗೂ 25% ಹಂಚಬೇಕು ಎಂದು ತೀರ್ಪು ನೀಡಿತ್ತು. ಆದರೆ ಬಂದಿರುವ ತೀರ್ಪಿನಲ್ಲಿ ಕರ್ನಾಟಕಕ್ಕೆ ಬರಬೇಕಾಗಿದ್ದ 50% ನೀರಿನ ಬದಲು ಸಿಕ್ಕಿರುವುದು ಕೇವಲ 39.5% ನಷ್ಟು ಮಾತ್ರ. ಆಂಧ್ರಕ್ಕೆ ಸಿಗಬೇಕಾಗಿದ್ದ 25% ಬದಲು ಇಂದು ಸಿಕ್ಕಿರುವುದು 42.41% ಹಾಗೂ ಮಹಾರಾಷ್ಟ್ರಕ್ಕೆ ಸಿಗಬೇಕಾಗಿದ್ದ 25% ನಲ್ಲಿ ಸಿಕ್ಕಿರುವುದು ಕೇವಲ 18.08% ಮಾತ್ರ. ಕರ್ನಾಟಕ ತನ್ನ ಪಾಲಿಗೆ ಬರಬೇಕಾಗಿದ್ದ ಸುಮಾರು 100 ಟಿ.ಎಂ.ಸಿ ಯಷ್ಟು ನೀರನ್ನು ಕಳೆದುಕೊಂಡಿದೆ. ಆದರೆ ಇದರ ಬಗ್ಗೆ ಧ್ವನಿ ಎತ್ತಬೇಕಾಗಿದ್ದ ಸರ್ಕಾರ ಹಾಗೂ ನಮ್ಮ ರಾಜಕೀಯ ಪಕ್ಷಗಳು, ನಮ್ಮ ರಾಜ್ಯಕ್ಕೆ ನ್ಯಾಯಾಧಿಕರಣ ವರ ಕೊಟ್ಟಿರುವಂತೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿವೆ. ನಮ್ಮ ರಾಜಕೀಯ ನಾಯಕರು 100 ಟಿ.ಎಂ.ಸಿ ನೀರು ಬಿಟ್ಟುಕೊಟ್ಟು ಧಾರಾಳತೆ ಮೆರೆಯುತ್ತಿದ್ದಾರಾ? ಹಾಗೆ ಸುಮ್ಮನೆ ಬಿಟ್ಟು ಬಿಡುವುದಕ್ಕೆ ಅದೇನು 100 ಬಕೆಟ್ ನೀರಲ್ಲ. 100 ಟಿ.ಎಂ.ಸಿ ನೀರಿನ ಅಗಾಧತೆ ಅರಿಯಲು ಅದನ್ನ ಸರಳೀಕರಿಸಿ ನೋಡೋಣ. 23000 ಎಕರೆ ವಿಸ್ತಾರದಲ್ಲಿ ಒಂದು ಅಡಿ ನೀರು ನಿಂತರೆ ಅದು 1 ಟಿ.ಎಂ.ಸಿ ಅಡಿಗೆ ಸಮ, ಹಾಗಾಗಿ 100 ಟಿ.ಎಂ.ಸಿ ನೀರು ಎಂದರೆ 23000 ಎಕರೆ ವಿಸ್ತಾರದಲ್ಲಿ 100 ಅಡಿ ನೀರು. ಅಂದರೆ ನಮ್ಮ ಕೈತಪ್ಪಿ ಹೋಗಿರುವ ನೀರಿನ ಅಗಾಧತೆಯನ್ನು ಗಮನಿಸಿ. ಈ 100 ಟಿ.ಎಂ.ಸಿ ನೀರನ್ನ ಸುಮಾರು 3 ಜಿಲ್ಲೆಗಳಿಗೆ ವರ್ಷಪೂರ್ತಿ ನೀರನ್ನು ಒದಗಿಸಬಹುದು. ಈ ಅನ್ಯಾಯವನ್ನು ಎತ್ತಿ ತೋರಿಸಬೇಕಾಗಿದ್ದ ನಮ್ಮ ರಾಜಕೀಯ ಪಕ್ಷಗಳು ಹಾಗೂ ಸರ್ಕಾರ ತಮಗೆ ಯಾವುದೋ ನಿಧಿ ಸಿಕ್ಕಂತೆ ಖುಷಿ ಪಡುತ್ತಿವೆ.
ಆಂಧ್ರಪ್ರದೇಶ ಅಕ್ರಮವಾಗಿ ನಿರ್ಮಾಣ ಮಾಡಿರುವ ಯೋಜನೆಗಳ ಬಗ್ಗೆ ತೀರ್ಪಿನಲ್ಲಿ ಯಾವುದೇ ಪ್ರಸ್ತಾಪ ಇರುವುದರ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿಲ್ಲ.

ನಮ್ಮ ಪಾಲಿನ ನೀರನ್ನು ಆಂಧ್ರಕ್ಕೆ ಯಾಕೆ ಕೊಡಬೇಕು?
ಬಂದಿರುವ ತೀರ್ಪಿನಲ್ಲಿ ಇನ್ನೊಂದು ಮಾರಕವಾದ ಅಂಶವೆಂದರೆ ಪ್ರತಿ ವರ್ಷ ಕರ್ನಾಟಕ ಬೇಸಿಗೆಯ ಸಮಯದಲ್ಲಿ ಆಂಧ್ರಪ್ರದೇಶಕ್ಕೆ 8-10 ಟಿ.ಎಂ.ಸಿ ಯಷ್ಟು ನೀರು ಹರಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಹರಿಸಬೇಕಾಗಿರುವ ನೀರಿನ ಪ್ರಮಾಣವೇನು ಕಡಿಮೆಯದ್ದಲ್ಲ. ಬೇಸಿಗೆಯ ಸಮಯದಲ್ಲಿ ಎಲ್ಲಾ ರಾಜ್ಯಗಳು ತಮ್ಮ ಆಣೆಕಟ್ಟಿನಲ್ಲಿ ತಳಮಟ್ಟದಲ್ಲಿ ಸ್ವಲ್ಪ ನೀರನ್ನು ಮೂಲಭೂತ ಅವಶ್ಯಕತೆಗಳಿಗಾಗಿ ಶೇಖರಿಸಿಕೊಂಡಿರುತ್ತವೆ, ಇರೋ ನೀರನೆಲ್ಲಾ ಅಂಧ್ರಕ್ಕೆ ಹರಿಸಿದರೆ ನಮ್ಮ ರಾಜ್ಯದ ಜನರಿಗೆ ಕುಡಿಯಲು ನೀರು, ರೈತರಿಗೆ ತಮ್ಮ ಬೆಳಗಳಿಗೆ ನೀರು ಒದಗಿಸುವವರಾರು?

ನ್ಯಾಯಾಧಿಕರಣದ ಪ್ರಕ್ರಿಯೆ ಬಲು ನಿಧಾನ!!
ಹೌದು, ಇಂದಿನ ನ್ಯಾಯಾಧಿಕರಣಗಳ ಪ್ರಕ್ರಿಯೆಯ ವೇಗ ಅಮೆನಡಿಗೆಯಂತಿದೆ. ನ್ಯಾಯಾಧಿಕರಣದ ಈ ನಿಧಾನ ಪ್ರಕ್ರಿಯೆಯಿಂದಾಗಿ ರಾಜ್ಯಗಳು ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರಲು ದಶಕಗಳವರೆಗೆ ತೀರ್ಪಿಗಾಗಿ ಕಾಯುತ್ತಾ ಕುಳಿತಿರಬೇಕು, ಇದರಿಂದಾಗಿ ಯೋಜನೆಯ ಸಮಯ ಹಾಗೂ ಅದಕ್ಕೆ ಬೇಕಾಗಿರುವ ಸಂಪನ್ಮೂಲ ಶುರುವಾಗಿದ್ದಕ್ಕಿಂತ ನೂರು ಮಡಿ ಹೆಚ್ಚಾಗಿರುತ್ತದೆ. ಇದರ ಫಲಾನುಭವಿಗಳಾಬೇಕಾದ್ದ ಜನರು ಸಂಕಷ್ಟದಲ್ಲೇ ಇರಬೇಕಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಕಳಸಾ-ಬಂಡೂರ ಕುಡಿಯುವ ನೀರಿನ ಯೋಜನೆ, ನಮ್ಮ ಪಾಲಿಗೆ ಬರಬೇಕಾಗಿರುವ ನೀರಿನಲ್ಲಿ ಕೇವಲ 7 ಟಿ.ಎಂ.ಸಿ ಯಷ್ಟು ನೀರನ್ನು ಬಳಸಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಈಗ ಅಡ್ಡಗಾಲು ಹಾಕಿರುವ ಗೋವಾ ಸರ್ಕಾರ ಸಮಸ್ಯೆಯಲ್ಲದ ಸಮಸ್ಯೆಯನ್ನು ಬಗೆಹರಿಸಲು ನ್ಯಾಯಾಧಿಕರಣಕ್ಕೆ ಆಗ್ರಹಿಸಿದೆ, ಈ ಹುಚ್ಚುತನಕ್ಕೆ ಕೇಂದ್ರ ಸಹ ಒಪ್ಪಿಗೆ ಸೂಚಿಸಿದೆ. ಇದರಿಂದ ತೊಂದರೆಗೊಳಪಡುವ ಉತ್ತರ ಕರ್ನಾಟಕದ ಜನತೆ ಇನ್ನೂ ದಶಕಗಳವರೆಗೂ ನೀರಿಗಾಗಿ ಬಾಯಿಬಿಡುತ್ತಾ ಕುಳಿತುಕೊಳ್ಳಬೇಕು. ಪ್ರತಿಯೊಂದು ಅಂತರ್ ರಾಜ್ಯ ಸಮಸ್ಯೆಯನ್ನು ಬಗೆಹರಿಸಲು ನ್ಯಾಯಾಧಿಕರಣಗಳನ್ನು ರಚಿಸುವ ಬದಲು ದೇಶಕ್ಕೆ ಅನ್ವಯವಾಗುವಂತಹ ಒಂದು ಶಾಶ್ವತ ಜಲ ನೀತಿ ಅವಶ್ಯಕ. ಇಂಥ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಒಂದು ನಿರ್ದಿಷ್ಟ ಮಾರ್ಗಸೂಚಿ (ರಾಷ್ಟ್ರೀಯ ಜಲನೀತಿ) ಇರಬೇಕಾಗಿರುವುದು ಒಕ್ಕೂಟ ವ್ಯವಸ್ಥೆಯ ಮೂಲಭೂತ ಅವಶ್ಯಕತೆ.

ನಿಜವಾದ ಒಕ್ಕೂಟ ವ್ಯವಸ್ಥೆ ಜಾರಿಗೆ ಬರುವುದು ಯಾವಾಗ??
ಒಂದು ನಿಮಿಷದ ಮಟ್ಟಿಗೆ ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯಗಳನ್ನು ಬದಿಗಿಟ್ಟು ನೋಡೋಣ. ರಾಜ್ಯದ ಹತ್ತಿರ ಇರುವ ನೀರನ್ನ ಸರಿಯಾದ ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ತುರ್ತಾಗಿ ಜಾರಿಗೆ ತರಬೇಕು. ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಬೇಕಾಗುವ ಮೊತ್ತ ಸಾವಿರಾರೂ ಕೋಟಿ ರೂಪಾಯಿಗಳು. ಈ ಭಾರಿ ಹಣವನ್ನು ಹೊಂದಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮುಂದೆ ಕೈಯೊಡ್ಡಲೇ ಬೇಕು. ನಮ್ಮ ರಾಜ್ಯ ದೇಶದ ಅತಿ ಹೆಚ್ಚು ತೆರೆಗೆ ಕಟ್ಟುವ ರಾಜ್ಯಗಳಲ್ಲಿ ಒಂದು. ಈಗಿರುವ ಹಣಕಾಸು ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳು ಕಟ್ಟುವ ತೆರಿಗೆ ಹಣವನ್ನು ಪಡೆಯುವ ಕೇಂದ್ರ ಸರ್ಕಾರ, ಆ ಒಟ್ಟು ಹಣದಲ್ಲಿ ಒಂದು ಭಾಗವನ್ನ ಎಲ್ಲಾ ರಾಜ್ಯಗಳ ನಡುವೆ ಹಂಚುತ್ತದೆ, ಈ ವ್ಯವಸ್ಥೆಯಿಂದಾಗಿ ಹೆಚ್ಚು ಕಷ್ಟಪಟ್ಟು ದುಡಿಯುವ ರಾಜ್ಯಗಳಿಗೆ ತಾನು ನೀಡಿದ ಅನುಪಾತದಲ್ಲಿ ವಾಪಸ್ ಕೇಂದ್ರದಿಂದ ಹಣ ಬರುವುದಿಲ್ಲ. ಇನ್ನೂ ದುಖಃದ ವಿಷಯವೆಂದರೆ ಕೇಂದ್ರ ನೀಡುವ ಹಣವನ್ನು ಕೇಂದ್ರ ಸರ್ಕಾರ ಹೇಳಿದ ಯೋಜನೆಗಳಿಗೆ ಮಾತ್ರ ಉಪಯೋಗಿಸಬೇಕು ಎಂದು ತಾಕೀತು ಮಾಡುತ್ತದೆ, ಬದಲಾಗಿ ಆ ಹಣವನ್ನು ರಾಜ್ಯಗಳು ಬೇರೆ ಅವಶ್ಯಕ ಯೋಜನೆಗಳಿಗೆ ಬಳಸಿಕೊಳ್ಳಲು ಅವಕಾಶ ಕೊಡುವುದಿಲ್ಲಾ. ಹೀಗೆ ನಾವು ಕಟ್ಟುವ ತೆರಿಗೆಯ ಹಣವನ್ನು ನಮ್ಮ ರಾಜ್ಯಕ್ಕೆ ಅವಶ್ಯಕವಾದ ಯೋಜನೆಗಳಿಗೆ ಉಪಯೋಗಿಸಿಕೊಳ್ಳಲು ನಾವು ಮತ್ತಾರದೋ ಒಪ್ಪಿಗೆಗಾಗಿ ಕಾಯುವುದು ಎಲ್ಲಿಯ ಪ್ರಜಾಪ್ರಭುತ್ವ ವ್ಯವಸ್ಥೆ??? ಎಲ್ಲಿಯ ಒಕ್ಕೂಟ ವ್ಯವಸ್ಥೆ?? ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಪಾತ್ರ ಹೇಗೆ ಕಡಿಮೆಯಾಗಿರುತ್ತದೋ, ನಿಜವಾದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಪಾತ್ರ ಬಹಳ ಕಡಿಮೆ ಅಥವಾ ಬೇಕಾದಾಗ ಮಾತ್ರ ಅನ್ನುವಷ್ಟು ಇರುತ್ತದೆ. ಆದರೆ ಇವತ್ತಿನ ಪರಿಸ್ಥಿಯಲ್ಲಿ ಒಕ್ಕೂಟ ವ್ಯವಸ್ಥೆ ಕೇವಲ ಹೆಸರಿಗೆ ಮಾತ್ರ, ಅದು ಆಚರಣೆಗೆ ಇನ್ನೂ ಬಂದೇ ಇಲ್ಲಾ. ಇವತ್ತಿಗೂ ಸಹ ಎಲ್ಲಾ ಅಧಿಕಾರಗಳು ಕೇಂದ್ರ ಸರ್ಕಾರದ ಅಡಿಯಲ್ಲೇ ಕೊಳೆಯುತ್ತಾ ಬಿದ್ದಿವೆ.

ಜನ ಜಾಗೃತಿಯಿಂದ ಮಾತ್ರ ನಿಜವಾದ ಪ್ರಜಾಪ್ರಭುತ್ವ, ನಿಜವಾದ ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ನಾಡು, ದೇಶವನ್ನು ಕಟ್ಟಲು ಸಾಧ್ಯ. ಇಂಥ ವ್ಯವಸ್ಥೆ ನಮ್ಮದಾಗಲಿ ಅಂತ ಆಶಿಸುತ್ತಾ, ನ್ಯಾಯಾಧಿಕರಣದ ತೀರ್ಪಿನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯಗಳನ್ನು ನಮ್ಮ ಜನಪ್ರತಿನಿಧಿಗಳು ಮನಗಂಡು ಅದರತ್ತ ಗಮನ ಹರಿಸಿ ನಮ್ಮ ಪಾಲಿಗೆ ದಕ್ಕಬೇಕಾಗಿರುವ ನೀರನ್ನು ಪಡೆಯುವಂತಾಗಲಿ....

7 ಕಾಮೆಂಟ್‌ಗಳು:

  1. illi karanataka ke agiruva anyaya da bagge janathe tilisabekada namma cm avaru idu hosa varshada koduge yathe bimbisidare, idu ondu thara janarige barabaudada kichanu nilisuva prayatna virabaudu.........

    innu namma mukyamantri yavare ege helidre yenu tiliyada jana sumanagutare...........

    che!..........

    ಪ್ರತ್ಯುತ್ತರಅಳಿಸಿ
  2. ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಬಗ್ಗೆ ಅಂತ್ಯಂತ ವಿವರವಾದ ಮಾಹಿತಿ ಕೊಟ್ಟ ತಮ್ಮ ಅನಿಸಿಕೆ ತುಂಬಾ ಮಹತ್ವವಾದುದ್ದು.ಈ ಬಗ್ಗೆ ಸರ್ಕಾರ್ ವಿಚಾರ ಮಾಡಬೇಕು

    ಪ್ರತ್ಯುತ್ತರಅಳಿಸಿ
  3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  4. ಗೆಳೆಯ ಮಾಹಿತಿಗಾಗಿ ಧನ್ಯವಾದಗಳು ,
    ಮಲಗಿರುವ ನಮ್ಮ ಜನರನ್ನ ಎಚ್ಚರಗೊಳಿಸುವ ಕೆಲಸ ಆಗಬೇಕಾಗಿದೆ .
    ರಾಜಕಾರಣಿಗಳಲ್ಲಿ ಇಚ್ಚಾಶಕ್ತಿಯ ಕೊರತೆ ಮತ್ತು ನಾವುಗಳು ರಾಜ್ಯದ ಯೋಜನೆಗಳ ಬಗ್ಗೆ ವಿಚಾರ ಮಾಡದಿರುವುದೇ ನಮ್ಮ ಈ ಶೋಚನಿಯ ಪರಿಸ್ಥಿತಿಗೆ ಕಾರಣ . ರೈತ ಚಳುವಳಿಗಳು ಹಾದಿ ತಪ್ಪುತಿರುವುದು ಒಂದೆಡೆ ಆದರೆ ಇನ್ನೊಂದೆಡೆ ಸಂಘಟನೆಗಳ ಸೈದ್ಧಾಂತಿಕ ಅದ್ಹಾಪತನ ,ಪ್ರಜ್ಞಾವಂತ ನಾಗರೀಕರ ಚಿರ ನಿದ್ರೆ ಸ್ವಸ್ಥ ಸಮಾಜದ ಬುಡವನ್ನ ಸಡಿಲಗೊಳಿಸುತ್ತಿದೆ .ನಾಡಿನ ಹಲವರು ಯೋಜನೆಗಳು ನಾನಾ ಕಾರಣಗಳಿಗಾಗಿ ಪೂರ್ಣಗೊಳ್ಳದೆ ರೈತರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ .ಇನ್ನಾದರೂ ನಮ್ಮ ಜನ ಪ್ರತಿನಿದಿಗಳು ಹೆಚ್ಚೆತ್ತುಕೊಳ್ಳಲಿ .

    ಪ್ರತ್ಯುತ್ತರಅಳಿಸಿ