ಮಂಗಳವಾರ, ಜನವರಿ 24, 2012

ಇಲ್ಲಿ ಕನ್ನಡ ಗೊತ್ತಿಲ್ದಿದ್ರೂ ಕೆಲಸ ಸಿಗುತ್ತೆ!!!


ಜನವರಿ ೨೦ ೨೦೧೨ ರಂದು ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯಲ್ಲಿ ಅಸಂಘಟಿತ ಕೆಲಸಗಾರರ ಅನುಕೂಲಕ್ಕಾಗಿ ಜಾಲತಾಣವೊಂದನ್ನು ಹೊರತರಲಾಗಿದೆ ಎಂಬ ಸುದ್ದಿಯನ್ನು ವರದಿ ಮಾಡಿತ್ತು. ಈ ಯೋಜನೆಯನ್ನು ಕಾನ್ಫೆಡೆರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್(ಸಿ.ಐ.ಐ) ನ ಕರ್ನಾಟಕ ವಿಭಾಗವು ಜಾರಿಗೆ ತಂದಿದೆ, ಈ ಯೋಜನೆಗೆ ಸಿ.ಎಚ್.ಎಫ್ ಇಂಟರ್ ನ್ಯಾಷನಲ್ ಇಂಡಿಯಾ ಎಂಬ ಸಂಸ್ಥೆಯೊಂದು ಈ ಯೋಜನೆಗೆ ಹಣ ಹೂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಿಐಐ ನ ಈ ಚಿಂತನೆ ನಿಜಕ್ಕೂ ಉತ್ತಮವಾಗಿದೆ. ಇವತ್ತಿನ ದಿನಗಳಲ್ಲಿ ಕೆಲಸ ಹುಡುಕುವ ಕಷ್ಟ ಅನುಭವಿಸಿದವರಿಗೆ ಗೊತ್ತು. ಇಂತಹುದರಲ್ಲಿ ಅಂಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಉದ್ಯೋಗಾವಕಾಶಗಳ ಮಾಹಿತಿ ಸಿಗುವುದು ಒಂದು ಪತ್ರಿಕೆಗಳಲ್ಲಿ ಬರುವ ಜಾಹಿರಾತಿನಿಂದ ಅಥವಾ ಉದ್ಯೋಗ ಪತ್ರಿಕೆಗಳಿಂದ ಮಾತ್ರ. ಆದರೆ ಈ ಸಿಐಐ ನ ಯೋಜನೆಯಲ್ಲಿ ಕೆಲಸ ಕೊಡುವವರು ಹಾಗೂ ಕೆಲಸ ಬೇಡುವವರನ್ನು ಒಂದೇ ಸೂರಿನಡಿ ತರುವ ಪ್ರಯತ್ನ ಮಾಡಲಾಗಿದೆ. ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಸಿಗುವ ಭರವಸೆಯನ್ನು ಸಿಐಐ ನೀಡುತ್ತಿದೆ. ಇವರ ಜೊತೆಗೆ ರಾಜ್ಯ ಸರ್ಕಾರ ಕೂಡ ಕೈ ಜೋಡಿಸುವ ಬಗ್ಗೆ ಪತ್ರಿಕೆಯಲ್ಲಿ ಬರೆಯಲಾಗಿದೆ.



ಸಿಐಐ ಸಿದ್ಧಪಡಿಸಿರುವ ಜಾಲತಾಣವನ್ನು ಹೊಕ್ಕು ನೋಡಿದರೆ ಈ ಯೋಜನೆ ಮೊದಲ ಹೆಜ್ಜೆಯಲ್ಲಿಯೇ ಎಡವಿದೆಯೇ ಎಂದು ಅನ್ನಿಸುತ್ತದೆ, ಯಾರಿಗಾಗಿ ಈ ಯೋಜನೆಯನ್ನ ತಯಾರಿಸಲಾಗಿದೆ ಅನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ.

ಕನ್ನಡವೇ ಇಲ್ಲಾ!!!
ಸಿಐಐ ನ ತಾಣವನ್ನು ನಾವು ನೋಡಿದ ತಕ್ಷಣ ಕಣ್ಣಿಗೆ ಕಾಣುವುದು ಬರಿ ಇಂಗ್ಲೀಶ್. ಹೋಗಲಿ ಕನ್ನಡದಲ್ಲೂ ಈ ಜಾಲತಾಣವನ್ನು ತಯಾರು ಮಾಡಿದ್ದಾರೆಯೇ ಅಂತ ನೋಡಿದರೆ ಕನ್ನಡದ ಒಂದಕ್ಷರವೂ ಈ ಜಾಲತಾಣದಲ್ಲಿ ಇಲ್ಲ!!!. ನೋಂದಣಿ ಮಾಡಿಸಿಕೊಳ್ಳಲು ಹೋದರೆ ಅಲ್ಲೂ ಕೂಡ ಇಂಗ್ಲಿಶ್ ಮಾತ್ರ. ಪ್ರಾಥಮಿಕ, ಹೈಸ್ಕೂಲು, ಕಾಲೇಜು, ಏನು ಓದದೇ ಇರುವ ಹಾಗೂ ಬಿ.ಎ, ಬಿ.ಕಾಂ, ಬಿ.ಎಡ್ ಮತ್ತು ಬಿ.ಎಸ್ಸಿ ಪಧವಿಧರರಿಗೆ ಇಲ್ಲಿ ಕೆಲಸದ ಅವಕಾಶಗಳನ್ನು ನೀಡಲಾಗಿದೆ. ಆದ್ರೆ ಇಲ್ಲಿರುವ ಮುಖ್ಯ ಪ್ರಶ್ನೆ ಏನು ಓದದ ಅಥವಾ ಕಾಲೇಜು ಬಿಟ್ಟಿರುವ  ಅಥವಾ ಇಂಗ್ಲಿಶ್ ಅರಿವು ಇಲ್ಲದ ಜನರು ಇಲ್ಲಿ ಹೇಗೆ ನೋಂದಾಯಿಸಿಕೊಳ್ಳಬೇಕು? ಇಂಗ್ಲಿಶ್ ಗೊತ್ತಿದ್ದರೆ ಮಾತ್ರ ಸಿಐಐ ನವರು ಕೆಲಸ ಕೊಡಿಸುತ್ತಾರಾ?

ತರಬೇತಿ ಸಂಸ್ಥೆಗಳು ಇಂಗ್ಲಿಶ್ ಗೊತ್ತಿಲದವರಿಗೆ ಸಹಾಯ ಮಾಡುತ್ತವೆ ಎಂದು ಸಂಸ್ಥೆ ಹೇಳಿದ್ದರೂ ಸಹ ಇದು ಎಷ್ಟರ ಮಟ್ಟಿಗೆ ಪ್ರಯೋಜಕ ಅನ್ನುವ ಪ್ರಶ್ನೆ ಹುಟ್ಟುತ್ತದೆ? ಮುಂದೆ ಈ ಅಭ್ಯರ್ಥಿ ತನ್ನ ವಿವರಗಳನ್ನು ತುಂಬ ಬೇಕಾದಲ್ಲಿ ಅಥವಾ ಬದಲಾಯಿಸಬೇಕಾದಲ್ಲಿ ಯಾರ ಮುಂದೆ ಹೋಗಿ ಕೈಕಟ್ಟಿ ನಿಲ್ಲಬೇಕು? ಹೊಸ ಕೆಲಸದ ಮಾಹಿತಿ ಬೇಕಾದಲ್ಲಿ ಅಥವಾ ತನ್ನ ಊರಿನಲ್ಲಿರುವ ಕೆಲಸ ಹುಡುಕಬೇಕೆಂದಲ್ಲಿ ಯಾರನ್ನ ಕೇಳಿ ಮಾಹಿತಿ ಪಡೆಯಬೇಕು? ಹೀಗೆ ಮೂರನೆಯ ವ್ಯಕ್ತಿಯ ಮೇಲೆ ಅವಲಂಬಿತಾಗುವ ವ್ಯವಸ್ಥೆ ನಿಜಕ್ಕೂ ಪರಿಣಾಮಕಾರಿಯಾಗಲಾರದು. ಸಿಐಐ ನಂಥ ಸಂಸ್ಥೆಗೆ ಮಾರುಕಟ್ಟೆಯಲ್ಲಿ ಭಾಷೆಗಿರುವ ಆಯಾಮದ ಬಗ್ಗೆ ಅರ್ಥ ಆಗದಿರುವುದು ವಿಪರ್ಯಾಸವೇ ಸರಿ. ತನ್ನ ಬಳಿ ಇರುವ ಅಭ್ಯರ್ಥಿಗಳ ಮಾಹಿತಿಯನ್ನು ಹಂಚಿಕೊಳ್ಳುವ ಯೋಜನೆಯಲ್ಲಿರುವ ರಾಜ್ಯ ಸರ್ಕಾರವೂ ಸಹ ಈ ಯೋಜನೆ ಕನ್ನಡದಲ್ಲಿ ಇಲ್ಲದಿರುವ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ.

ಈ ಯೋಜನೆಯಿಂದ ನಮ್ಮ ರಾಜ್ಯಕ್ಕೆ ಆಗುವ ಉಪಯೋಗಕ್ಕಿಂತ ಹೊರಗಿನಿಂದ ವಲಸೆ ಬರುವ ಜನರಿಗೆ ಹೆಚ್ಚು ಉಪಯೋಗವಾಗುತ್ತದೆ ಎಂಬ ಅನುಮಾನ ಕಾಡಲು ಶುರುವಾಗುತ್ತದೆ ಯಾಕಂದ್ರೆ ಈ ತಾಣದಲ್ಲಿ ಕನ್ನಡ ಗೊತಿಲ್ಲದಿದ್ರೂ ನಿಮಗೆ ಕೆಲಸ ಸಿಗುತ್ತೆ. ದಶಕಗಳ ಹಿಂದೆಯೆ ಕನ್ನಡಿಗರಿಗೆ ಉದ್ಯೋಗದಲ್ಲಿ ಸಿಗಬೇಕಾಗಿರುವ ಸ್ಥಾನಮಾನದ ಬಗ್ಗೆ ಹೊರತರಲಾಗಿದ್ದ ಡಾ. ಸರೋಜಿನೆ ಮಹಿಷಿ ವರದಿಯನ್ನು ಇಂದಿಗೂ ಸರ್ಕಾರ ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ಆದರೆ ಸಿಐಐ ನಂತಹ ಸಂಸ್ಥೆಗಳ ಜೊತೆಗೆ ಕೆಲಸ ಮಾಡುವಾಗ ಕರ್ನಾಟಕದಲ್ಲಿನ ಕೆಲಸಗಳು ಕನ್ನಡಿಗರಿಗೆ ದೊರಕುವಂತೆ ಮಾಡಲು ಒಂದು ಸೂತ್ರವನ್ನು ಹೊರತರಬೇಕು. ಇದರ ಜೊತೆಗೆ ನಮ್ಮ ರಾಜ್ಯದಲ್ಲಿ ಸ್ಥಾಪಿಸಲಾಗುವ ಯಾವುದೇ ಉದ್ಯಮದಲ್ಲೂ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎನ್ನುವ ಒಂದು ಸರ್ಕಾರಿ ಆದೇಶವನ್ನು ಹೊರಡಿಸಬೇಕು. ನಮ್ಮ ನಾಡಿನ ಏಳಿಗೆಯಲ್ಲಿ ದುಡಿಮೆ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎನ್ನುವುದನ್ನು ಸರ್ಕಾರ ಮರೆಯಬಾರದು.

ಸಿಐಐ ಸಂಸ್ಥೆ ಮಾಡಿರುವ ತಪ್ಪನ್ನು ತಿದ್ದಿಕೊಂಡು ಈ ಜಾಲತಾಣವನ್ನು ಕನ್ನಡದಲ್ಲಿ ಅಭಿವೃದ್ಧಿ ಪಡಿಸಬೇಕು ಹಾಗೂ ಈ ಮೂಲಕ ಹೆಚ್ಚಿನ ಕನ್ನಡಿಗರಿಗೆ ತಲುಪುವಂತೆ ಮಾಡಬೇಕು. ಈ ಕುರಿತು ನಾವು response@skillconnect.in ಗೆ ಒಂದು ಮಿಂಚೆಯನ್ನು ಬರೆದು, ಕನ್ನಡದಲ್ಲಿ ಈ ಜಾಲಾತಾಣವನ್ನು ಹೊರತರಬೇಕು ಎಂದು ಒತ್ತಾಯಿಸೋಣ. 

ಗುರುವಾರ, ಜನವರಿ 12, 2012

“ಮೊಬೈಲ್ ಆಡಳಿತ” ಜನರನ್ನ ತಲುಪುತ್ತಾ???


(ಚಿತ್ರ ಕೃಪೆ: ಅಂತರ್ಜಾಲ)
ನಿನ್ನೆಯ ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ “ಮೊಬೈಲ್ ಆಡಳಿತ” ವನ್ನು ಜಾರಿಗೆ ತರುವುದರ ಬಗ್ಗೆ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀ ಎಂ. ಎನ್. ವಿದ್ಯಾಶಂಕರ್ ಅವರು ಮಾತನಾಡಿದ್ದಾರೆ. “ಇ-ಆಡಳಿತ ಎನ್ನುವುದು ಈಗ ೧೦ ವರ್ಷಗಳಷ್ಟು ಹಳೆಯದಾಗಿದ್ದು, ಈಗ ಮೊಬೈಲ್ ಸೇವೆ ಮೂಲಕ ಆಡಳಿತವನ್ನು ಇನ್ನಷ್ಟು ವೇಗಗೊಳಿಸಲು ಪ್ರಯತ್ನಿಸಲಾಗುತ್ತಿದೆ...” ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ಹಿಂದಿನಿಂದಲೂ ತಂತ್ರಜ್ಞಾನವನ್ನು ತನ್ನ ಆಡಳಿತದಲ್ಲಿ ಅಳವಡಿಸಿಕೊಳ್ಳುವಲ್ಲಿ ಸದಾ ಮುಂದಿದೆ ಹಾಗೂ ಅದರಲ್ಲಿ ತಕ್ಕ ಮಟ್ಟಿಗೆ ಯಶಸ್ಸು ಸಹ ಪಡೆದಿದೆ. ಹೊಸ ಹೊಸ ತಂತ್ರಜ್ಞಾನಗಳನ್ನ ಬಳಸಿಕೊಂಡು ಆಡಳಿತವನ್ನು ಜನರ ಬಳಿಗೆ ಒಯ್ಯುವ ಸರ್ಕಾರದ ಈ ಕ್ರಮವನ್ನು ನಾವೆಲ್ಲ ತುಂಬು ಹೃದಯದಿಂದ ಸ್ವಾಗತಿಸೋಣ, ಜನರ ಮನೆಗೆ ಆಡಳಿತ ಮುಟ್ಟಬೇಕಾಗಿರುವುದು ಸರಿಯಾದ ದಾರಿಯು ಹೌದು.

ಆದರೆ ಯಾವುದೇ ಯೋಜನೆಯನ್ನು ಜಾರಿಗೆ ತರುವುದಕ್ಕಿಂತ ಮುಂಚೆ ಆ ಯೋಜನೆಯನ್ನ ಜನರಿಗೆ ಸರಿಯಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪಿಸಲು ಬೇಕಾಗಿರುವ ಸಿದ್ಧತೆಗಳ್ಳನ್ನು ಮಾಡಿಕೊಳ್ಳಲಾಗಿದೆಯೇ ಎನ್ನುವುದನ್ನು ಅಧಿಕಾರಿಗಳು ಮೊದಲು ಪರೀಕ್ಷಿಸಬೇಕು. ಅಲ್ಲವೇ? ಹಾಗಿದ್ರೆ ನಮ್ಮ ರಾಜ್ಯ ಮೊಬೈಲ್ ಆಡಳಿತಕ್ಕೆ ಸಜ್ಜಾಗಿದೆಯೇ?

ಪರಿಣಾಮಕಾರಿ ಆಡಳಿತಕ್ಕೆ ಬೇಕು ಕನ್ನಡ ತಂತ್ರಜ್ಞಾನ
ಅಡಳಿತದಲ್ಲಿ ಜನರ ಭಾಷೆ ನೆಲೆಗೊಳ್ಳದೇ ಹೋದಲ್ಲಿ ಎಂತಹುದೇ ತಂತ್ರಜ್ಞಾನದ ಏಳಿಗೆ ಆಡಳಿತವನ್ನು ಜನರ ಬಳಿಗೆ ಪರಿಣಾಮಕಾರಿಯಾಗಿ ಕೊಂಡೊಯ್ಯಲಾರದು ಅನ್ನುವುದು ನಮ್ಮ ಸಮಾಜವನ್ನು ಕಂಡರೆ ಅತ್ಯಂತ ಸ್ಪಷ್ಟವಾಗುವುದು. ಆಡಳಿತಕ್ಕೆ ಚುರುಕು ತರಲೆಂದು ಅಳವಡಿಸಿಕೊಂಡ ಹೆಚ್ಚಿನ ತಂತ್ರಜ್ಞಾನದ ಪರಿಕರಗಳು ಇಂಗ್ಲಿಷಿನಲ್ಲಿದ್ದು, ಜನ ಸಾಮಾನ್ಯರ ನುಡಿಯಾದ ಕನ್ನಡದಿಂದ ದೂರವೇ ಉಳಿದಿವೆ. ಇಂಗ್ಲಿಷ್ ಅನ್ನುವ ತಡೆಗೋಡೆ ತಂತ್ರಜ್ಞಾನದ ಪೂರ್ತಿ ಪ್ರಯೋಜನವನ್ನು ಜನರಿಗೆ ತಲುಪಲಾರದಂತೆ ಮಾಡಿದೆ. ರಾಜ್ಯದ ೬ ಕೋಟಿ ಜನರಲ್ಲಿ ಒಂದು ೭-೮% ಜನರಿಗಷ್ಟೇ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಬಳಸುವ, ಅದರ ಲಾಭ ಪಡೆದುಕೊಳ್ಳಲು ಆಗುತ್ತಿದೆಯೇ ಹೊರತು ಉಳಿದ ೯೨% ಜನರು ಈ ಹೊಸ ವ್ಯವಸ್ಥೆಯ ಕಲ್ಪನೆಯಿಂದ ಆಚೆಯೇ ಉಳಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈ ಆಡಳಿತ ವ್ಯವಸ್ಥೆಯು ಜನರ ಭಾಷೆಯಾದ ಕನ್ನಡದಲ್ಲಿ ಇಲ್ಲದಿರುವುದೇ ಆಗಿದೆ.

ಮೊಬೈಲ್ ಆಡಳಿತ ಜನರನ್ನ ತಲುಪುತ್ತಾ???
ಇತ್ತೀಚಿನ ಒಂದು ಉದಾಹರಣೆಯ ಬಗ್ಗೆ ನಿಮ್ಮ ಗಮನ ಸೆಳೆಯಲು ಇಚ್ಚಿಸುತ್ತೇನೆ. ಟ್ರಾಫಿಕ್ ಪೋಲಿಸರು ಉಪಯೋಗಿಸುವ ಬ್ಲ್ಯಾಕ್ ಬೆರ್ರಿ ಮೊಬೈಲ್ . ಸಂಚಾರ ನಿಯಮ ಉಲ್ಲಂಘನೆ ಅಥವಾ ಇನ್ನಿತರ ತಪ್ಪುಗಳನ್ನು ಮಾಡಿದಾಗ ಪೋಲಿಸರು ನೀಡುವ ರಸೀತಿಗಳು ಇಂಗ್ಲಿಷಿನಲ್ಲಿ ಇರುತ್ತವೆ. ಇದರ ಬಗ್ಗೆ ನನ್ನ ಗೆಳೆಯನೊಬ್ಬ ಹಿರಿಯ ಅಧಿಕಾರಿಗಳ ಗಮನ ಸೆಳೆದಾಗ ಅವರು  ನೀಡಿದ ಉತ್ತರ “ ಸೇವೆ ನೀಡುತ್ತಿರುವ ಖಾಸಗಿ ಸಂಸ್ಥೆ ಪೂರೈಸುವ ಉಪಕರಣ ಹಾಗೂ ತಂತ್ರಾಂಶಗಳು ಕನ್ನಡವನ್ನು ಬೆಂಬಲಿಸುವುದಿಲ್ಲ ಹಾಗಾಗಿ ಕನ್ನಡದಲ್ಲಿ ರಸೀತಿ ನೀಡಲು ಸಾಧ್ಯವಾಗುತ್ತಿಲ್ಲ”.

ಜನರ ಒಳಿತಿಗಾಗಿ ಸರ್ಕಾರ ಮಾಡಿತ್ತಿರುವ ಯೋಜನೆಗಳಿಗೆ ಖರ್ಚಾಗುವುದು ಸಹ ನಮ್ಮ ತರಿಗೆ ಹಣ, ಆದರೂ ಸಹ ನಮ್ಮ ಸರ್ಕಾರಕ್ಕೆ ತನಗೆ ಯಾವ ಭಾಷೆಯಲ್ಲಿ ತಂತ್ರಾಂಶ ಅಥವಾ ಉಪಕರಣಗಳು ಬೇಕು ಎಂದು ಕೇಳಿ ಪಡೆಯುವ ಹೊಣೆಗಾರಿಕೆಯನ್ನು ತೋರಿಸದೇ ಇರುವುದು ಶೋಚನೀಯ. ಮೇಲಿನದು ಕೇವಲ ಒಂದು ಉದಾಹರಣೆ ಯಷ್ಟೇ, ಕೆ. ಎಸ್. ಆರ್. ಟಿ. ಸಿ ಸಂಸ್ಥೆಯಲ್ಲಿ ನೀವು ಟಿಕೆಟ್ ಕಾಯ್ದಿರಿಸದರೆ ನಿಮ್ಮ ಮೊಬೈಲಿಗೆ ಇಂಗ್ಲೀಷಿನಲ್ಲಿ ಮಾಹಿತಿ ಸಿಗುತ್ತದೆ, ರೈಲ್ವೆ ಇಲಾಖೆಯದೂ ಇದೇ ಕತೆ... ಇಂತಹ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ.

ಮೇಲೆ ಹೇಳಿದಂತೆ ಪರಿಣಾಮಕಾರಿ ಆಡಳಿತಕ್ಕಾಗಿ ನಾವು ಯಾವುದೇ ತಂತ್ರಜ್ಞಾನ ಅಳವಡಿಸಿಕೊಂಡರೂ ಸಹ ಜನರ ಭಾಷೆಯಲ್ಲಿ ಸೇವೆ ದೊರೆಯದ ಹೊರತು ಆ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ. ಇಂದಿನ ಬಹುತೇಕ ಮೊಬೈಲುಗಳಲ್ಲಿ ಕನ್ನಡ ಭಾಷೆಯನ್ನ ಓದಲು ಹಾಗೂ ಬರೆಯಲು ಬೇಕಾಗಿರುವ ತಂತ್ರಾಂಶಗಳಾಗಲಿ, ಕೀಲಿಮಣೆಗಳಾಗಲಿ ದೊರಕುವುದಿಲ್ಲ. ಇದರ ಬಗ್ಗೆ ಆಸಕ್ತಿ ವಹಿಸಿ ಕೆಲಸ ಮಾಡಬೇಕಾಗಿದ್ದ ಸರ್ಕಾರವೂ ಸಹ ಇಂಗ್ಲೀಷಿಗೆ ಮಣೆ ಹಾಕಿ ಕುಳಿತಿದೆ, ಸಾಮಾನ್ಯ ನಾಗರೀಕರ ಉಪಯೋಗಕ್ಕಾಗಿ ಆಡಳಿತದಲ್ಲಿ ಕನ್ನಡ ಬಳಸಬೇಕೆಂಬ ಕನಿಷ್ಠ ಪ್ರಜ್ಞೆಯನ್ನ ಸಹ ಮರೆತಿದೆ. ನಮ್ಮ ಭಾಷೆಯಲ್ಲಿ ನಮಗೆ ಸೇವೆ ಸಿಗದ ಹೊರತು ಆಡಳಿತ ಪರಿಣಾಮಕಾರಿಯಾಗಿರಲು ಸಾಧ್ಯವಿಲ್ಲ.