ಗುರುವಾರ, ಜನವರಿ 12, 2012

“ಮೊಬೈಲ್ ಆಡಳಿತ” ಜನರನ್ನ ತಲುಪುತ್ತಾ???


(ಚಿತ್ರ ಕೃಪೆ: ಅಂತರ್ಜಾಲ)
ನಿನ್ನೆಯ ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ “ಮೊಬೈಲ್ ಆಡಳಿತ” ವನ್ನು ಜಾರಿಗೆ ತರುವುದರ ಬಗ್ಗೆ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀ ಎಂ. ಎನ್. ವಿದ್ಯಾಶಂಕರ್ ಅವರು ಮಾತನಾಡಿದ್ದಾರೆ. “ಇ-ಆಡಳಿತ ಎನ್ನುವುದು ಈಗ ೧೦ ವರ್ಷಗಳಷ್ಟು ಹಳೆಯದಾಗಿದ್ದು, ಈಗ ಮೊಬೈಲ್ ಸೇವೆ ಮೂಲಕ ಆಡಳಿತವನ್ನು ಇನ್ನಷ್ಟು ವೇಗಗೊಳಿಸಲು ಪ್ರಯತ್ನಿಸಲಾಗುತ್ತಿದೆ...” ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ಹಿಂದಿನಿಂದಲೂ ತಂತ್ರಜ್ಞಾನವನ್ನು ತನ್ನ ಆಡಳಿತದಲ್ಲಿ ಅಳವಡಿಸಿಕೊಳ್ಳುವಲ್ಲಿ ಸದಾ ಮುಂದಿದೆ ಹಾಗೂ ಅದರಲ್ಲಿ ತಕ್ಕ ಮಟ್ಟಿಗೆ ಯಶಸ್ಸು ಸಹ ಪಡೆದಿದೆ. ಹೊಸ ಹೊಸ ತಂತ್ರಜ್ಞಾನಗಳನ್ನ ಬಳಸಿಕೊಂಡು ಆಡಳಿತವನ್ನು ಜನರ ಬಳಿಗೆ ಒಯ್ಯುವ ಸರ್ಕಾರದ ಈ ಕ್ರಮವನ್ನು ನಾವೆಲ್ಲ ತುಂಬು ಹೃದಯದಿಂದ ಸ್ವಾಗತಿಸೋಣ, ಜನರ ಮನೆಗೆ ಆಡಳಿತ ಮುಟ್ಟಬೇಕಾಗಿರುವುದು ಸರಿಯಾದ ದಾರಿಯು ಹೌದು.

ಆದರೆ ಯಾವುದೇ ಯೋಜನೆಯನ್ನು ಜಾರಿಗೆ ತರುವುದಕ್ಕಿಂತ ಮುಂಚೆ ಆ ಯೋಜನೆಯನ್ನ ಜನರಿಗೆ ಸರಿಯಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪಿಸಲು ಬೇಕಾಗಿರುವ ಸಿದ್ಧತೆಗಳ್ಳನ್ನು ಮಾಡಿಕೊಳ್ಳಲಾಗಿದೆಯೇ ಎನ್ನುವುದನ್ನು ಅಧಿಕಾರಿಗಳು ಮೊದಲು ಪರೀಕ್ಷಿಸಬೇಕು. ಅಲ್ಲವೇ? ಹಾಗಿದ್ರೆ ನಮ್ಮ ರಾಜ್ಯ ಮೊಬೈಲ್ ಆಡಳಿತಕ್ಕೆ ಸಜ್ಜಾಗಿದೆಯೇ?

ಪರಿಣಾಮಕಾರಿ ಆಡಳಿತಕ್ಕೆ ಬೇಕು ಕನ್ನಡ ತಂತ್ರಜ್ಞಾನ
ಅಡಳಿತದಲ್ಲಿ ಜನರ ಭಾಷೆ ನೆಲೆಗೊಳ್ಳದೇ ಹೋದಲ್ಲಿ ಎಂತಹುದೇ ತಂತ್ರಜ್ಞಾನದ ಏಳಿಗೆ ಆಡಳಿತವನ್ನು ಜನರ ಬಳಿಗೆ ಪರಿಣಾಮಕಾರಿಯಾಗಿ ಕೊಂಡೊಯ್ಯಲಾರದು ಅನ್ನುವುದು ನಮ್ಮ ಸಮಾಜವನ್ನು ಕಂಡರೆ ಅತ್ಯಂತ ಸ್ಪಷ್ಟವಾಗುವುದು. ಆಡಳಿತಕ್ಕೆ ಚುರುಕು ತರಲೆಂದು ಅಳವಡಿಸಿಕೊಂಡ ಹೆಚ್ಚಿನ ತಂತ್ರಜ್ಞಾನದ ಪರಿಕರಗಳು ಇಂಗ್ಲಿಷಿನಲ್ಲಿದ್ದು, ಜನ ಸಾಮಾನ್ಯರ ನುಡಿಯಾದ ಕನ್ನಡದಿಂದ ದೂರವೇ ಉಳಿದಿವೆ. ಇಂಗ್ಲಿಷ್ ಅನ್ನುವ ತಡೆಗೋಡೆ ತಂತ್ರಜ್ಞಾನದ ಪೂರ್ತಿ ಪ್ರಯೋಜನವನ್ನು ಜನರಿಗೆ ತಲುಪಲಾರದಂತೆ ಮಾಡಿದೆ. ರಾಜ್ಯದ ೬ ಕೋಟಿ ಜನರಲ್ಲಿ ಒಂದು ೭-೮% ಜನರಿಗಷ್ಟೇ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಬಳಸುವ, ಅದರ ಲಾಭ ಪಡೆದುಕೊಳ್ಳಲು ಆಗುತ್ತಿದೆಯೇ ಹೊರತು ಉಳಿದ ೯೨% ಜನರು ಈ ಹೊಸ ವ್ಯವಸ್ಥೆಯ ಕಲ್ಪನೆಯಿಂದ ಆಚೆಯೇ ಉಳಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈ ಆಡಳಿತ ವ್ಯವಸ್ಥೆಯು ಜನರ ಭಾಷೆಯಾದ ಕನ್ನಡದಲ್ಲಿ ಇಲ್ಲದಿರುವುದೇ ಆಗಿದೆ.

ಮೊಬೈಲ್ ಆಡಳಿತ ಜನರನ್ನ ತಲುಪುತ್ತಾ???
ಇತ್ತೀಚಿನ ಒಂದು ಉದಾಹರಣೆಯ ಬಗ್ಗೆ ನಿಮ್ಮ ಗಮನ ಸೆಳೆಯಲು ಇಚ್ಚಿಸುತ್ತೇನೆ. ಟ್ರಾಫಿಕ್ ಪೋಲಿಸರು ಉಪಯೋಗಿಸುವ ಬ್ಲ್ಯಾಕ್ ಬೆರ್ರಿ ಮೊಬೈಲ್ . ಸಂಚಾರ ನಿಯಮ ಉಲ್ಲಂಘನೆ ಅಥವಾ ಇನ್ನಿತರ ತಪ್ಪುಗಳನ್ನು ಮಾಡಿದಾಗ ಪೋಲಿಸರು ನೀಡುವ ರಸೀತಿಗಳು ಇಂಗ್ಲಿಷಿನಲ್ಲಿ ಇರುತ್ತವೆ. ಇದರ ಬಗ್ಗೆ ನನ್ನ ಗೆಳೆಯನೊಬ್ಬ ಹಿರಿಯ ಅಧಿಕಾರಿಗಳ ಗಮನ ಸೆಳೆದಾಗ ಅವರು  ನೀಡಿದ ಉತ್ತರ “ ಸೇವೆ ನೀಡುತ್ತಿರುವ ಖಾಸಗಿ ಸಂಸ್ಥೆ ಪೂರೈಸುವ ಉಪಕರಣ ಹಾಗೂ ತಂತ್ರಾಂಶಗಳು ಕನ್ನಡವನ್ನು ಬೆಂಬಲಿಸುವುದಿಲ್ಲ ಹಾಗಾಗಿ ಕನ್ನಡದಲ್ಲಿ ರಸೀತಿ ನೀಡಲು ಸಾಧ್ಯವಾಗುತ್ತಿಲ್ಲ”.

ಜನರ ಒಳಿತಿಗಾಗಿ ಸರ್ಕಾರ ಮಾಡಿತ್ತಿರುವ ಯೋಜನೆಗಳಿಗೆ ಖರ್ಚಾಗುವುದು ಸಹ ನಮ್ಮ ತರಿಗೆ ಹಣ, ಆದರೂ ಸಹ ನಮ್ಮ ಸರ್ಕಾರಕ್ಕೆ ತನಗೆ ಯಾವ ಭಾಷೆಯಲ್ಲಿ ತಂತ್ರಾಂಶ ಅಥವಾ ಉಪಕರಣಗಳು ಬೇಕು ಎಂದು ಕೇಳಿ ಪಡೆಯುವ ಹೊಣೆಗಾರಿಕೆಯನ್ನು ತೋರಿಸದೇ ಇರುವುದು ಶೋಚನೀಯ. ಮೇಲಿನದು ಕೇವಲ ಒಂದು ಉದಾಹರಣೆ ಯಷ್ಟೇ, ಕೆ. ಎಸ್. ಆರ್. ಟಿ. ಸಿ ಸಂಸ್ಥೆಯಲ್ಲಿ ನೀವು ಟಿಕೆಟ್ ಕಾಯ್ದಿರಿಸದರೆ ನಿಮ್ಮ ಮೊಬೈಲಿಗೆ ಇಂಗ್ಲೀಷಿನಲ್ಲಿ ಮಾಹಿತಿ ಸಿಗುತ್ತದೆ, ರೈಲ್ವೆ ಇಲಾಖೆಯದೂ ಇದೇ ಕತೆ... ಇಂತಹ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ.

ಮೇಲೆ ಹೇಳಿದಂತೆ ಪರಿಣಾಮಕಾರಿ ಆಡಳಿತಕ್ಕಾಗಿ ನಾವು ಯಾವುದೇ ತಂತ್ರಜ್ಞಾನ ಅಳವಡಿಸಿಕೊಂಡರೂ ಸಹ ಜನರ ಭಾಷೆಯಲ್ಲಿ ಸೇವೆ ದೊರೆಯದ ಹೊರತು ಆ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ. ಇಂದಿನ ಬಹುತೇಕ ಮೊಬೈಲುಗಳಲ್ಲಿ ಕನ್ನಡ ಭಾಷೆಯನ್ನ ಓದಲು ಹಾಗೂ ಬರೆಯಲು ಬೇಕಾಗಿರುವ ತಂತ್ರಾಂಶಗಳಾಗಲಿ, ಕೀಲಿಮಣೆಗಳಾಗಲಿ ದೊರಕುವುದಿಲ್ಲ. ಇದರ ಬಗ್ಗೆ ಆಸಕ್ತಿ ವಹಿಸಿ ಕೆಲಸ ಮಾಡಬೇಕಾಗಿದ್ದ ಸರ್ಕಾರವೂ ಸಹ ಇಂಗ್ಲೀಷಿಗೆ ಮಣೆ ಹಾಕಿ ಕುಳಿತಿದೆ, ಸಾಮಾನ್ಯ ನಾಗರೀಕರ ಉಪಯೋಗಕ್ಕಾಗಿ ಆಡಳಿತದಲ್ಲಿ ಕನ್ನಡ ಬಳಸಬೇಕೆಂಬ ಕನಿಷ್ಠ ಪ್ರಜ್ಞೆಯನ್ನ ಸಹ ಮರೆತಿದೆ. ನಮ್ಮ ಭಾಷೆಯಲ್ಲಿ ನಮಗೆ ಸೇವೆ ಸಿಗದ ಹೊರತು ಆಡಳಿತ ಪರಿಣಾಮಕಾರಿಯಾಗಿರಲು ಸಾಧ್ಯವಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ