ಮಂಗಳವಾರ, ಜನವರಿ 24, 2012

ಇಲ್ಲಿ ಕನ್ನಡ ಗೊತ್ತಿಲ್ದಿದ್ರೂ ಕೆಲಸ ಸಿಗುತ್ತೆ!!!


ಜನವರಿ ೨೦ ೨೦೧೨ ರಂದು ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯಲ್ಲಿ ಅಸಂಘಟಿತ ಕೆಲಸಗಾರರ ಅನುಕೂಲಕ್ಕಾಗಿ ಜಾಲತಾಣವೊಂದನ್ನು ಹೊರತರಲಾಗಿದೆ ಎಂಬ ಸುದ್ದಿಯನ್ನು ವರದಿ ಮಾಡಿತ್ತು. ಈ ಯೋಜನೆಯನ್ನು ಕಾನ್ಫೆಡೆರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್(ಸಿ.ಐ.ಐ) ನ ಕರ್ನಾಟಕ ವಿಭಾಗವು ಜಾರಿಗೆ ತಂದಿದೆ, ಈ ಯೋಜನೆಗೆ ಸಿ.ಎಚ್.ಎಫ್ ಇಂಟರ್ ನ್ಯಾಷನಲ್ ಇಂಡಿಯಾ ಎಂಬ ಸಂಸ್ಥೆಯೊಂದು ಈ ಯೋಜನೆಗೆ ಹಣ ಹೂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಿಐಐ ನ ಈ ಚಿಂತನೆ ನಿಜಕ್ಕೂ ಉತ್ತಮವಾಗಿದೆ. ಇವತ್ತಿನ ದಿನಗಳಲ್ಲಿ ಕೆಲಸ ಹುಡುಕುವ ಕಷ್ಟ ಅನುಭವಿಸಿದವರಿಗೆ ಗೊತ್ತು. ಇಂತಹುದರಲ್ಲಿ ಅಂಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಉದ್ಯೋಗಾವಕಾಶಗಳ ಮಾಹಿತಿ ಸಿಗುವುದು ಒಂದು ಪತ್ರಿಕೆಗಳಲ್ಲಿ ಬರುವ ಜಾಹಿರಾತಿನಿಂದ ಅಥವಾ ಉದ್ಯೋಗ ಪತ್ರಿಕೆಗಳಿಂದ ಮಾತ್ರ. ಆದರೆ ಈ ಸಿಐಐ ನ ಯೋಜನೆಯಲ್ಲಿ ಕೆಲಸ ಕೊಡುವವರು ಹಾಗೂ ಕೆಲಸ ಬೇಡುವವರನ್ನು ಒಂದೇ ಸೂರಿನಡಿ ತರುವ ಪ್ರಯತ್ನ ಮಾಡಲಾಗಿದೆ. ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಸಿಗುವ ಭರವಸೆಯನ್ನು ಸಿಐಐ ನೀಡುತ್ತಿದೆ. ಇವರ ಜೊತೆಗೆ ರಾಜ್ಯ ಸರ್ಕಾರ ಕೂಡ ಕೈ ಜೋಡಿಸುವ ಬಗ್ಗೆ ಪತ್ರಿಕೆಯಲ್ಲಿ ಬರೆಯಲಾಗಿದೆ.



ಸಿಐಐ ಸಿದ್ಧಪಡಿಸಿರುವ ಜಾಲತಾಣವನ್ನು ಹೊಕ್ಕು ನೋಡಿದರೆ ಈ ಯೋಜನೆ ಮೊದಲ ಹೆಜ್ಜೆಯಲ್ಲಿಯೇ ಎಡವಿದೆಯೇ ಎಂದು ಅನ್ನಿಸುತ್ತದೆ, ಯಾರಿಗಾಗಿ ಈ ಯೋಜನೆಯನ್ನ ತಯಾರಿಸಲಾಗಿದೆ ಅನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ.

ಕನ್ನಡವೇ ಇಲ್ಲಾ!!!
ಸಿಐಐ ನ ತಾಣವನ್ನು ನಾವು ನೋಡಿದ ತಕ್ಷಣ ಕಣ್ಣಿಗೆ ಕಾಣುವುದು ಬರಿ ಇಂಗ್ಲೀಶ್. ಹೋಗಲಿ ಕನ್ನಡದಲ್ಲೂ ಈ ಜಾಲತಾಣವನ್ನು ತಯಾರು ಮಾಡಿದ್ದಾರೆಯೇ ಅಂತ ನೋಡಿದರೆ ಕನ್ನಡದ ಒಂದಕ್ಷರವೂ ಈ ಜಾಲತಾಣದಲ್ಲಿ ಇಲ್ಲ!!!. ನೋಂದಣಿ ಮಾಡಿಸಿಕೊಳ್ಳಲು ಹೋದರೆ ಅಲ್ಲೂ ಕೂಡ ಇಂಗ್ಲಿಶ್ ಮಾತ್ರ. ಪ್ರಾಥಮಿಕ, ಹೈಸ್ಕೂಲು, ಕಾಲೇಜು, ಏನು ಓದದೇ ಇರುವ ಹಾಗೂ ಬಿ.ಎ, ಬಿ.ಕಾಂ, ಬಿ.ಎಡ್ ಮತ್ತು ಬಿ.ಎಸ್ಸಿ ಪಧವಿಧರರಿಗೆ ಇಲ್ಲಿ ಕೆಲಸದ ಅವಕಾಶಗಳನ್ನು ನೀಡಲಾಗಿದೆ. ಆದ್ರೆ ಇಲ್ಲಿರುವ ಮುಖ್ಯ ಪ್ರಶ್ನೆ ಏನು ಓದದ ಅಥವಾ ಕಾಲೇಜು ಬಿಟ್ಟಿರುವ  ಅಥವಾ ಇಂಗ್ಲಿಶ್ ಅರಿವು ಇಲ್ಲದ ಜನರು ಇಲ್ಲಿ ಹೇಗೆ ನೋಂದಾಯಿಸಿಕೊಳ್ಳಬೇಕು? ಇಂಗ್ಲಿಶ್ ಗೊತ್ತಿದ್ದರೆ ಮಾತ್ರ ಸಿಐಐ ನವರು ಕೆಲಸ ಕೊಡಿಸುತ್ತಾರಾ?

ತರಬೇತಿ ಸಂಸ್ಥೆಗಳು ಇಂಗ್ಲಿಶ್ ಗೊತ್ತಿಲದವರಿಗೆ ಸಹಾಯ ಮಾಡುತ್ತವೆ ಎಂದು ಸಂಸ್ಥೆ ಹೇಳಿದ್ದರೂ ಸಹ ಇದು ಎಷ್ಟರ ಮಟ್ಟಿಗೆ ಪ್ರಯೋಜಕ ಅನ್ನುವ ಪ್ರಶ್ನೆ ಹುಟ್ಟುತ್ತದೆ? ಮುಂದೆ ಈ ಅಭ್ಯರ್ಥಿ ತನ್ನ ವಿವರಗಳನ್ನು ತುಂಬ ಬೇಕಾದಲ್ಲಿ ಅಥವಾ ಬದಲಾಯಿಸಬೇಕಾದಲ್ಲಿ ಯಾರ ಮುಂದೆ ಹೋಗಿ ಕೈಕಟ್ಟಿ ನಿಲ್ಲಬೇಕು? ಹೊಸ ಕೆಲಸದ ಮಾಹಿತಿ ಬೇಕಾದಲ್ಲಿ ಅಥವಾ ತನ್ನ ಊರಿನಲ್ಲಿರುವ ಕೆಲಸ ಹುಡುಕಬೇಕೆಂದಲ್ಲಿ ಯಾರನ್ನ ಕೇಳಿ ಮಾಹಿತಿ ಪಡೆಯಬೇಕು? ಹೀಗೆ ಮೂರನೆಯ ವ್ಯಕ್ತಿಯ ಮೇಲೆ ಅವಲಂಬಿತಾಗುವ ವ್ಯವಸ್ಥೆ ನಿಜಕ್ಕೂ ಪರಿಣಾಮಕಾರಿಯಾಗಲಾರದು. ಸಿಐಐ ನಂಥ ಸಂಸ್ಥೆಗೆ ಮಾರುಕಟ್ಟೆಯಲ್ಲಿ ಭಾಷೆಗಿರುವ ಆಯಾಮದ ಬಗ್ಗೆ ಅರ್ಥ ಆಗದಿರುವುದು ವಿಪರ್ಯಾಸವೇ ಸರಿ. ತನ್ನ ಬಳಿ ಇರುವ ಅಭ್ಯರ್ಥಿಗಳ ಮಾಹಿತಿಯನ್ನು ಹಂಚಿಕೊಳ್ಳುವ ಯೋಜನೆಯಲ್ಲಿರುವ ರಾಜ್ಯ ಸರ್ಕಾರವೂ ಸಹ ಈ ಯೋಜನೆ ಕನ್ನಡದಲ್ಲಿ ಇಲ್ಲದಿರುವ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ.

ಈ ಯೋಜನೆಯಿಂದ ನಮ್ಮ ರಾಜ್ಯಕ್ಕೆ ಆಗುವ ಉಪಯೋಗಕ್ಕಿಂತ ಹೊರಗಿನಿಂದ ವಲಸೆ ಬರುವ ಜನರಿಗೆ ಹೆಚ್ಚು ಉಪಯೋಗವಾಗುತ್ತದೆ ಎಂಬ ಅನುಮಾನ ಕಾಡಲು ಶುರುವಾಗುತ್ತದೆ ಯಾಕಂದ್ರೆ ಈ ತಾಣದಲ್ಲಿ ಕನ್ನಡ ಗೊತಿಲ್ಲದಿದ್ರೂ ನಿಮಗೆ ಕೆಲಸ ಸಿಗುತ್ತೆ. ದಶಕಗಳ ಹಿಂದೆಯೆ ಕನ್ನಡಿಗರಿಗೆ ಉದ್ಯೋಗದಲ್ಲಿ ಸಿಗಬೇಕಾಗಿರುವ ಸ್ಥಾನಮಾನದ ಬಗ್ಗೆ ಹೊರತರಲಾಗಿದ್ದ ಡಾ. ಸರೋಜಿನೆ ಮಹಿಷಿ ವರದಿಯನ್ನು ಇಂದಿಗೂ ಸರ್ಕಾರ ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ಆದರೆ ಸಿಐಐ ನಂತಹ ಸಂಸ್ಥೆಗಳ ಜೊತೆಗೆ ಕೆಲಸ ಮಾಡುವಾಗ ಕರ್ನಾಟಕದಲ್ಲಿನ ಕೆಲಸಗಳು ಕನ್ನಡಿಗರಿಗೆ ದೊರಕುವಂತೆ ಮಾಡಲು ಒಂದು ಸೂತ್ರವನ್ನು ಹೊರತರಬೇಕು. ಇದರ ಜೊತೆಗೆ ನಮ್ಮ ರಾಜ್ಯದಲ್ಲಿ ಸ್ಥಾಪಿಸಲಾಗುವ ಯಾವುದೇ ಉದ್ಯಮದಲ್ಲೂ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎನ್ನುವ ಒಂದು ಸರ್ಕಾರಿ ಆದೇಶವನ್ನು ಹೊರಡಿಸಬೇಕು. ನಮ್ಮ ನಾಡಿನ ಏಳಿಗೆಯಲ್ಲಿ ದುಡಿಮೆ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎನ್ನುವುದನ್ನು ಸರ್ಕಾರ ಮರೆಯಬಾರದು.

ಸಿಐಐ ಸಂಸ್ಥೆ ಮಾಡಿರುವ ತಪ್ಪನ್ನು ತಿದ್ದಿಕೊಂಡು ಈ ಜಾಲತಾಣವನ್ನು ಕನ್ನಡದಲ್ಲಿ ಅಭಿವೃದ್ಧಿ ಪಡಿಸಬೇಕು ಹಾಗೂ ಈ ಮೂಲಕ ಹೆಚ್ಚಿನ ಕನ್ನಡಿಗರಿಗೆ ತಲುಪುವಂತೆ ಮಾಡಬೇಕು. ಈ ಕುರಿತು ನಾವು response@skillconnect.in ಗೆ ಒಂದು ಮಿಂಚೆಯನ್ನು ಬರೆದು, ಕನ್ನಡದಲ್ಲಿ ಈ ಜಾಲಾತಾಣವನ್ನು ಹೊರತರಬೇಕು ಎಂದು ಒತ್ತಾಯಿಸೋಣ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ