ಗುರುವಾರ, ಮಾರ್ಚ್ 15, 2012

ರೈಲ್ವೆ ಯೋಜನೆಗಳು ಮತ್ತು ಕರ್ನಾಟಕಕ್ಕೆ ವಲಸೆ

ಚಿತ್ರ ಕೃಪೆ: ಅಂತರ್ಜಾಲ

ನಿನ್ನೆ ಲೋಕಸಭೆಯಲ್ಲಿ ಮಂಡಿಸಲಾದ 2012-2013 ನೇ ಸಾಲಿನ ರೈಲ್ವೆ ಬಜೆಟ್ ಕರ್ನಾಟಕದ ಪಾಲಿಗೆ ನಿರಾಸೆ ಮೂಡಿಸಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ರೈಲ್ವೆ ಬಜೆಟ್ಟಿನಲ್ಲಿ ಕರ್ನಾಟಕಕ್ಕೆ ಉಪಯೋಗವಾಗುವಂತಹ ಬೆರೆಳೆಣಿಕೆಯಷ್ಟು ಯೋಜನೆಗಳನ್ನು ಬಿಟ್ಟರೆ ಉಳಿದೆಲ್ಲಾ ಯೋಜನೆಗಳು ಹೊರ ರಾಜ್ಯದ ಜನರಿಗೆ ನಮ್ಮ ರಾಜ್ಯಕ್ಕೆ ವಲಸೆ ಬರಲು ಸುಲಭ ಮಾಡಿಕೊಡಲು ಯೋಚಿಸಿದಂತಿದೆ!! ಕೆಳಗಿರುವ ಈ ಪಟ್ಟಿಗಳನ್ನು ನೋಡಿ ೨೦೧೧ ನೇ ಸಾಲಿನ ಹಾಗೂ ೨೦೧೨ ನೇ ಸಾಲಿನಲ್ಲಿ ರಾಜ್ಯಕ್ಕೆ ನೀಡಲಾಗಿರುವ ಹೊಸ ರೈಲುಗಳ ಸಂಚರಿಸುವ ಮಾರ್ಗವನ್ನು ನೀಡಲಾಗಿದೆ.

2011 ರಲ್ಲಿ ಕರ್ನಾಟಕಕಕ್ಕೆ ನೀಡಲಾಗಿರುವ ರೈಲುಗಳು
2012 ರಲ್ಲಿ ಕರ್ನಾಟಕಕಕ್ಕೆ ನೀಡಲಾಗಿರುವ ರೈಲುಗಳು
ಹೌರಾ – ಮೈಸೂರು ಎಕ್ಸ್‘ಪ್ರೆಸ್
ಯಶವಂತಪುರ – ಕುಚುವೇಲಿ
ಮೈಸೂರು – ಚನ್ನೈ ಎಕ್ಸ್‘ಪ್ರೆಸ್
ಚನ್ನೈ – ಬೆಂಗಳೂರು
ಅಹಮದಾಬಾದ್ – ಯಶವಂತಪುರ ಎಕ್ಸ್‘ಪ್ರೆಸ್
ಇಂದೂರ್ – ಯಶವಂತಪುರ
ಗೋರಕ್ಪುರ – ಯಶವಂತಪುರ ಎಕ್ಸ್‘ಪ್ರೆಸ್
ಮೈಸೂರು – ಸಾಯಿನಗರ
ವಾಸ್ಕೋ – ವೆಲಂಕಣಿ ಎಕ್ಸ್‘ಪ್ರೆಸ್
ಸೊಲ್ಲಾಪುರ – ಯಶವಂತಪುರ
ಎರ್ನಾಕುಲಂ – ಬೆಂಗಳೂರು ಎಕ್ಸ್‘ಪ್ರೆಸ್
ಬೀದರ್ – ಸಿಕಂದರಾಬಾದ್
ಹೌರಾ – ಮಂಗಳೂರು ವಿವೇಕ ಎಕ್ಸ್‘ಪ್ರೆಸ್


2012  ರಲ್ಲಿ ಮಾರ್ಗ ವಿಸ್ತರಣೆಯ ರೈಲುಗಳು
ಪಾಲಕ್ಕಾಡ್ – ಮಂಗಳೂರು ಎಕ್ಸ್‘ಪ್ರೆಸ್ ಕೊಯಮುತ್ತೂರುವರೆಗೆ
ದಾದರ್ – ಯಶವಂತಪುರ ಎಕ್ಸ್‘ಪ್ರೆಸ್ – ಪುದುಚೇರಿವರೆಗೂ
ಮಂಗಳೂರು – ತಿರುವನಂತಪುರ ಎಕ್ಸ್‘ಪ್ರೆಸ್ – ನಾಗರಕೊಯಿಲ್ ವರೆಗೂ

ಈ ಹೊಸ ರೈಲು ಯೋಜನೆಗಳು, ವಿಸ್ತರಣೆಗಳು ಎಲ್ಲವೂ ನಮ್ಮ ರಾಜ್ಯದ ಜನರ ಓಡಾಟವನ್ನು ಸುಲಭಗೊಳಿಸುವ ಬದಲು ಹೊರ ರಾಜ್ಯದ ಜನರನ್ನು ನಮ್ಮ ರಾಜ್ಯದ ರಾಜಧಾನಿಗೆ ತಂದಿಳಿಸುವ ಯೋಜನೆಗಳಾಗಿ ಕಾಣುತ್ತವೆ. ಇನ್ನು ನಮ್ಮ ರಾಜ್ಯದ ಯೋಜನೆಗಳ ಪಟ್ಟಿ ನೋಡಿದರೆ ಅಲ್ಲಿ ಇನ್ನು ಗೇಜ್ ಪರಿವರ್ತನೆ, ಮಾರ್ಗಗಳ ಸರ್ವೆ, ಮೇಲ್ಸೇತುವ, ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವಿಕೆ ಯಂತಹ ಸಣ್ಣ ಯೋಜನೆಗಳು ಕಾಣಸುಗುತ್ತವೇ ಹೊರತು ನಮ್ಮ ಜನರ ಸಂಚಾರವನ್ನು ಸುಲಭಗೊಳಿಸುವ ಯೋಜನೆಗಳು ಕಾಣಸಿಗುವುದಿಲ್ಲ. ಈ ಹಿಂದೆ ೨೦೧೧ ನೇ ಸಾಲಿನ ರೈಲ್ವೆ ಬಜೆಟ್ ಸಮಯದಲ್ಲಿ ನಾನು ಮಾಡಿದ್ದ ವಿಶ್ಲೇಷಣೆ ಈ ವರ್ಷಕ್ಕೂ ಅನ್ವಯಿಸಬಹುದು.

ಜನಸಾಂದ್ರತೆ:
ಜನರು ಬೇರೆಡೆಗೆ ವಲಸೆ ಹೋಗಲು ಆಯಾ ರಾಜ್ಯದಲ್ಲಿರುವ ಜನಸಾಂದ್ರತೆಯು ಕಾರಣವಾಗಿರಬಹುದು. ಆಯಾ ರಾಜ್ಯಗಳಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆಯಿಂದಾಗಿ, ಆಲ್ಲಿ ಏರ್ಪಡುವ ಪೈಪೋಟಿಯಿಂದಾಗಿ, ಬದುಕು ಕಂಡುಕೊಳ್ಳಲು ಜನರು ಹೊರ ರಾಜ್ಯಗಳಿಗೆ ವಲಸೆ ಹೋಗುವುದಕ್ಕೆ ಶುರು ಮಾಡುತ್ತಾರೆ. ರೈಲ್ವೆ ಇಲಾಖೆ ತಯಾರಿಸುವ ಇಂತಹ ಯೋಜನೆಗಳು ಜನರಿಗೆ ಕರ್ನಾಟಕದಂತಹ ಕಡಿಮೆ ಜನಸಾಂದ್ರತೆ ಹೊಂದಿರುವ ರಾಜ್ಯಗಳಿಗೆ ವಲಸೆ ಬರಲು ಉತ್ತೇಜನ ನೀಡುವಂತೆ ಕಾಣಿಸುತ್ತವೆ. ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ವಿವಿಧ ರಾಜ್ಯಗಳಲ್ಲಿರುವ ಜನಸಾಂದ್ರತೆಯನ್ನು ನೋಡಿ:

ರಾಜ್ಯ
ಪ್ರತಿ ಚದುರ ಕಿಮಿಗೆ ಇರುವ ಜನಸಾಂದ್ರತೆ
ಬಿಹಾರ್
1102
ಉತ್ತರ ಪ್ರದೇಶ
828
ಪಶ್ಚಿಮ ಬಂಗಾಳ
1030
ತಮಿಳುನಾಡು
555
ಕೇರಳ
859
ಕರ್ನಾಟಕ
319
ಮಾಹಿತಿ: ಮ್ಯಾಪ್ಸ್ ಆಫ್ ಇಂಡಿಯಾ

ರೈಲ್ವೆ ಇಲಾಖೆಯನ್ನು ರಾಜ್ಯಗಳ ಕೈಗೆ ಒಪಿಸಬೇಕು:

ನಮ್ಮ ರಾಜ್ಯದಲ್ಲಿ ಯಾವ ಊರಿಂದ ಊರಿಗೆ ರೈಲುಗಳಿರಬೇಕು, ಎಷ್ಟು ರೈಲುಗಳನ್ನು ಓಡಿಸಬೇಕು ಎಂದು ಈಗ ಕೇಂದ್ರದಲ್ಲಿ ಕುಳಿತಿರುವ ರೈಲ್ವೆ ಮಂಡಳಿ ನಿರ್ಧರಿಸುತ್ತದೆ. ಹಲವು ದಶಕಗಳಿಂದ ಹಲವಾರು ಅವಶ್ಯಕ ಯೋಜನೆಗಳ ಬಗ್ಗೆ ಇಲಾಖೆಗೆ ನಮ್ಮ ಶಾಸಕರು, ಸಂಸದರು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಅವಿನ್ನೂ ಧೂಳು ಹಿಡಿದು ಕೂತಿವೆ. ಯಾವ ಊರಿಂದ ಯಾವ ಊರಿಗೆ ರೈಲು ಮಾರ್ಗ ಇರಬೇಕು, ಇದರ ಒಳಿತು ಕೆಡಕೇನು ಅನ್ನುವುದು ಅವರಿಗಿಂತ ನಮಗೆ ಚೆನ್ನಾಗಿ ಗೊತ್ತಿರುತ್ತದೆ ಅಲ್ಲವೇ? ಆದ್ದರಿಂದ ರೈಲ್ವೆ ಇಲಾಖೆಯನ್ನು ರಾಜ್ಯಗಳ ಕೈಗೆ ಕೇಂದ್ರ ಸರ್ಕಾರ ಒಪ್ಪಿಸಬೇಕು ಇದರಿಂದ ಆಯಾ ರಾಜ್ಯಕ್ಕೆ ಬೇಕಾಗಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಯಾರದೋ ಮರ್ಜಿಗೆ ಕಾಯುವ ಅವಶ್ಯಕತೆ ಇರುವುದಿಲ್ಲ.

ಬುಧವಾರ, ಮಾರ್ಚ್ 14, 2012

ತಮಿಳುನಾಡು ಜನರ ಒಗ್ಗಟ್ಟು ನೋಡಿ


ಇಂದು ಬೆಳಗ್ಗೆ ಪತ್ರಿಕೆಗಳಲ್ಲಿ ಬಂದ ಸುದ್ದಿಯೊಂದು ನನ್ನ ಗಮನ ಸೆಳೆಯಿತು. ಅದೇನೆಂದರೆ ಶ್ರೀಲಂಕಾದಲ್ಲಿರುವ ತಮಿಳರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ತಮಿಳುನಾಡಿನ ಎಲ್ಲಾ ಪಕ್ಷದ ನಾಯಕರುಗಳು ನಿನ್ನೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕೋಲಾಹಲ ಎಬ್ಬಿಸಿ, ಭಾರತ ಸರ್ಕಾರ ಈ ಕ್ರಮವನ್ನು ಖಂಡಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಮುಂದೆ ನಡೆಯಲಿರುವ ಯು.ಎನ್ ಮಾನವ ಹಕ್ಕುಗಳ ಸಮ್ಮೇಳನದಲ್ಲಿ ಶ್ರೀಲಂಕಾದ ವಿರುದ್ಧ ಮತ ಚಲಾಯಿಸಬೇಕು ಎಂದು ತಮಿಳುನಾಡಿನ ನಾಯಕರು ಭಾರತ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅವರ ಈ ಒತ್ತಾಯಕ್ಕೆ ಮಣಿದಿರುವ ಕೇಂದ್ರ ಸರ್ಕಾರ, ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವುದುದಾಗಿ ಭರವಸೆ ನೀಡಿದೆ.

ಕನ್ನಡಿಗರು ಕಲಿಯಬೇಕಿರುವ ಪಾಠ:
ಮೊದಲಿನಿಂದಲೂ ತಮಿಳುನಾಡಿನ ಸರ್ಕಾರ ತಮ್ಮ ಜನರು ಯಾವುದೇ ರಾಜ್ಯ, ದೇಶದಲ್ಲಿರಲಿ ಅವರ ಯೋಗ ಕ್ಷೇಮದ ಬಗ್ಗೆ ತೀವ್ರವಾದ ಕಾಳಜಿಯನ್ನು ತೋರಿಸುತ್ತಲೇ ಬಂದಿದೆ. ಅದು ಶ್ರೀಲಂಕಾದಲ್ಲಿರುವ ತಮಿಳರ ಬಗ್ಗೆ ಇರಬಹುದು ಅಥವಾ ಬೇರಿನ್ನಾವುದೇ ಪ್ರದೇಶದಲ್ಲಿರಬಹುದು. ತಮ್ಮ ಜನರಿಗೆ ಒಳಿತಾಗಬೇಕೆಂದರೆ ಎಲ್ಲಾ ಪಕ್ಷಗಳ ನಾಯಕರು ತಮ್ಮ ಭಿನಾಭಿಪ್ರಾಯವನ್ನು ಮರೆತು ಅವರ ಒಳಿತಿಗೆ ಟೊಂಕ ಕಟ್ಟಿ ನಿಲ್ಲುತ್ತಾರೆ.

ಆದರೆ ಇದೇ ಪರಿಸ್ಥಿತಿ ನಮ್ಮ ರಾಜ್ಯದ ನಾಯಕರುಗಳಿಂದ ನಿರೀಕ್ಷಿಸಲು ಸಾಧ್ಯವೇ? ಇವತ್ತಿನ ಮಟ್ಟಿಗೆ ಖಂಡಿತವಾಗಿಯೂ ಸಾಧ್ಯವಿಲ್ಲ. ನಮ್ಮದೇ ರಾಜ್ಯದ ನೆಲದಲ್ಲಿ ಮಹಾರಾಷ್ಟ್ರದ ನೆಲ ಅಂತ ಬರೆದಿರೋ ಬೋರ್ಡ್ ತೆಗೆಸಲು ಮೀನಾಮೇಷ ಎಣಿಸುತ್ತದೆ ನಮ್ಮ ಸರ್ಕಾರ, ಗೋವಾದಲ್ಲಿರುವ ಕನ್ನಡಿಗರ ಮೇಲೆ ದೌರ್ಜನ್ಯ ನಡೆದಾಗಿ ಎಲ್ಲಾ ಮುಗಿದ ಮೇಲೆ ತೇಪೆ ಸಾರಿಸುವ ಕೆಲಸಕ್ಕೆ ಬರುತ್ತದೆ, ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳ ಕುಡಿಯುವ ನೀರಿನ ಬವಣೆಯನ್ನು ತೀರಿಸಲು ಇರುವ ಕಳಸಾ-ಭಂಡೂರ ನಾಲಾ ಯೋಜನೆಯನ್ನು ಇನ್ನೂ ದಶಕಗಳಿಂದ ಜಾರಿಗೆ ತರದೇ ಹಾಗೆ ಮುಂದೆ ತಳ್ಳುತ್ತಿದೆ, ಇದರ ಅನುಷ್ಠಾನಕ್ಕೆ ಇರುವ ತೊಡರನ್ನು ಬಗೆಹರಿಸಲು ನಮ್ಮ ರಾಜ್ಯದ ರಾಜಕೀಯ ಪಕ್ಷಗಳು ಒಟ್ಟಾಗಿ ಎಂದು ಕೆಲಸ ಮಾಡಲೇ ಇಲ್ಲ, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡಲು ಸಿದ್ಧ ಮಾಡಲಾಗಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರದೇ ೩ ದಶಕಗಳು ಕಳೆದು ಹೋಗಿವೆ... ಹೀಗೆ ಈ ಪಟ್ಟಿ ಹನುಮಪ್ಪನ ಬಾಲದಂತೆ ದೊಡ್ಡದಿದೆ.

ಇದಕೆಲ್ಲ ಮೂಲ ಹುಡುಕ ಹೊರಟರೆ ನಮ್ಮ ರಾಜ್ಯದಲ್ಲಿರುವ ರಾಜಕೀಯ ಪಕ್ಷಗಳು, ಮುನ್ನುಗ್ಗಿ ರಾಜ್ಯಕ್ಕೆ ಯೋಜನೆಗಳನ್ನು ತರಬೇಕು ಎನ್ನುವ ಛಲದ ಕೊರತೆ, ಆ ಪಕ್ಷದಲ್ಲಿರುವ ನಾಯಕರುಗಳ ಹೈಕಮಾಂಡ್ ಗುಲಾಮಗಿರಿ, ತಮ್ಮ ರಾಜ್ಯಕ್ಕೆ ಅನ್ಯಾಯವಾದರೂ ಪರವಾಗಿಲ್ಲ ಹೈಕಮಾಂಡ್ ಹೇಳಿದಂತೆ ಕೇಳಬೇಕು ಎನ್ನುವ ಶಿಸ್ತಿನ ಪಕ್ಷಗಳು!!! ಇವುಗಳು ಎಂದಿಗೂ ನಮ್ಮ ಪಕ್ಷಗಳು ಅನ್ನಿಸಿಯೇ ಇಲ್ಲ! ಇದರ ಜೊತೆಜೊತೆಗೆ ನಮ್ಮ ಕನ್ನಡಿಗರಲ್ಲಿ ಜಾಗೃತಿಯ ಕೊರತೆ... ಇವುಗಳನ್ನೆಲ್ಲ ಒಟ್ಟಾಗಿ ಎದುರಿಸೋಕೆ ನಮ್ಮ ರಾಜ್ಯದಲ್ಲಿ ನಮ್ಮದೇ ಒಂದು ಪ್ರಾದೇಶಿಕ ಪಕ್ಷ ಬೇಕಾಗಿದೆ.

ಮಂಗಳವಾರ, ಮಾರ್ಚ್ 6, 2012

ಅನಿಯಂತ್ರಿತ ವಲಸೆ ಕಡಿವಾಣಕ್ಕೆ ಬೇಕು ಕಾನೂನು


ತಮಿಳುನಾಡು ರಾಜ್ಯದಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಪಾತಕ ಕೃತ್ಯಗಳ ಕಡಿವಾಣಕ್ಕಾಗಿ ಅಲ್ಲಿನ ಸರ್ಕಾರ ಹೊರ ರಾಜ್ಯದಿಂದ ತಮಿಳುನಾಡಿಗೆ ವಲಸೆ ಬಂದಿರುವ ಜನರ ಮಾಹಿತಿಯನ್ನು ಕಲೆ ಹಾಕಲು ತೀರ್ಮಾನಿಸಿದೆ ಹಾಗೂ ಈ ಕಾರ್ಯಕ್ಕೆ ಚಾಲನೆ ನೀಡಿದೆ. ಮಾಹಿತಿ ಕಲೆ ಹಾಕುವಲ್ಲಿ ಮುಖ್ಯವಾಗಿ ಕಟ್ಟಡ ಕಾಮಗಾರಿ, ಗಾರ್ಮೆಂಟ್ಸ್ ಹಾಗೂ ಹೋಟೆಲ್ ಉದ್ಯಮದಂಥಹ ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಈ ಮಾಹಿತಿ ಕಲೆ ಹಾಕುವಿಕೆಯ ಮುಖ್ಯ ಉದ್ದೇಶ ಕೆಲಸ ಅರಸಿ ಬಂದಿರುವ ವಲಸಿಗರನ್ನು ಪಾತಕಿಗಳಿಂದ ಬೇರ್ಪಡಿಸಿ ನೋಡುವುದಕ್ಕೆ ಸುಲಭವಾಗುತ್ತದೆ ಅನ್ನುವ ಕಾರಣಕ್ಕೆ.

ನಮ್ಮ ರಾಜ್ಯದಲ್ಲೂ ಯೋಜನೆ ಜಾರಿಗೆ ಬರಲಿ:

ಈ ಯೋಜನೆ ಕಾನೂನು ವ್ಯವಸ್ಥೆಯನ್ನು ಕಾಪಡುವಲ್ಲಿ ನಿಜಕ್ಕೂ ಒಳ್ಳೆಯ ಹೆಜ್ಜೆಯಾಗಿದೆ. ಬೆಂಗಳೂರು ಸೇರಿದಂತೆ ಹೊರ ರಾಜ್ಯದಿಂದ ಹೆಚ್ಚಾಗಿ ವಲಸೆಯಾಗುತ್ತಿರುವ ನಮ್ಮ ನಗರಗಳಲ್ಲಿ ಈ ಯೋಜನೆ ಜಾರಿಯಾಗಬೇಕಾಗಿರುವುದು ಅವಶ್ಯಕವಾಗಿದೆ. ನಮ್ಮ ಊರುಗಳಿಗೆ ಯಾರು ಬರುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಹಾಗೂ ಅವರ ಪೂರ್ವಾಪರವೇನು ಅನ್ನೋ ಮಾಹಿತಿಗಳು ನಮಗೆ ಗೊತ್ತಿದ್ದರೆ ಒಳ್ಳೆಯದಲ್ಲವೇ? ಬೆಂಗಳೂರಿನಲ್ಲಿ ನಡೆದಿರುವ ಹಲವಾರುಅಪರಾಧ ಪ್ರಕರಣಗಳಲ್ಲಿ ಹೊರ ರಾಜ್ಯದ ಪಾತಕಿಗಳು ಭಾಗಿಯಾಗಿರುವುದು ಕಂಡುಬಂದಿದೆ. ವಲಸೆ ಬಂದಿರುವ ಜನರ ಅಂಕೆ ಸಂಖ್ಯೆಗಳನ್ನು ಹೊಂದಿರುವುದು ಸರ್ಕಾರಕ್ಕೆ ಮುಖ್ಯವಾಗುತ್ತದೆ. ಅನಿಯಂತ್ರಿತ ವಲಸೆಯಿಂದಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿ ಘರ್ಷಣೆಗೆ ಕಾರಣವಾಗಬಹುದು. ಇದಕ್ಕೆ ಸ್ಪಷ್ಟ ಉದಾಹರಣೆ ಮುಂಬೈ ನಗರ.

ಅನಿಯಂತ್ರಿತ ವಲಸೆಯಿಂದಾಗಿ ಒಂದು ರಾಜ್ಯದ Demography ಯೇ ಬದಲಾಗಿ ಹೋಗುವ ಅಪಾಯಕಾರಿ ಪರಿಣಾಮಗಳನ್ನು ಹಲವಾರು ರಾಜ್ಯಗಳು ಇಂದು ಅನುಭವಿಸುತ್ತಿವೆ. ಬೇರೆಲ್ಲೋ ಪಾತಕ ಕೃತ್ಯಗಳಲ್ಲಿ ಭಾಗಿಯಾಗಿರುವ ಜನರು ತಲೆತಪ್ಪಿಸಿಕೊಂಡು ನಮ್ಮ ರಾಜ್ಯಗಳಿಗೆ ಬಂದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸಗಳು ಆಗಬಹುದು. ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾರೆ ಅನ್ನೋ ಕಾರಣಕ್ಕೆ ಹಿಂದಿನ ಪೂರ್ವಾಪರ ತಿಳಿಯದೇ ಕರೆದುಕೊಂಡು ಬರಲಾಗುವ ಇಂತಹ ಜನರನ್ನು ಒಂದೆಡೆ ಮಧ್ಯವರ್ತಿಗಳು ಶೋಷಿಸಿದರೆ, ಇನ್ನೊಂದೆಡೆ ಇಲ್ಲಿಗೆ ವಲಸೆ ಬರುವ ಜನರು ನಮ್ಮ ಸಮಾಜದ ಜೊತೆ ಬೆರೆಯದೇ ತಮ್ಮದೇ ಒಂದು ದ್ವೀಪ ಕಟ್ಟಿಕೊಂಡು ಸಮಾಜದಲ್ಲಿ ಒಡಕು ತರುವ ಕೆಲಸಗಳಿಗೂ ಕಾರಣವಾಗಬಹುದು. ಕಡಿಮೆ ಸಂಬಳದ ನೆಪವೊಡ್ಡಿ ನಮ್ಮ ಕನ್ನಡಿಗರಿಗೆ ಕೆಲಸಗಳು ದೊರಕದಂತಹ ಪರಿಸ್ಥಿತಿ ನಿರ್ಮಾಣವಾದರೆ, ಇಂತಹ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯ ಅಭಿವೃದ್ಧಿ ಕಾಣುತ್ತಿದೆಯಾದರೆ. ನಮ್ಮ ಜನರಿಗೆ ಸರಿಯಾದ ವ್ಯವಸ್ಥೆಯಿಲ್ಲದ, ನಮ್ಮ ಜನರಿಗೆ ಕೆಲಸ ಸಿಗದ ಇಂತಹ ಅಭಿವೃದ್ಧಿ ನಮಗೆ ಬೇಕೆ ಎನ್ನೋ ಪ್ರಶ್ನೆಯನ್ನ ನಾವುಗಳು ಕೇಳಿಕೊಳ್ಳಬೇಕಾಗಿದೆ?

ವಲಸೆಗೆ ಕಾನೂನು ಜಾರಿಯಾಗಬೇಕು:

ಇಂದು ವಲಸೆ ಕೇವಲ ಸಣ್ಣ ಪ್ರಮಾಣದಲ್ಲಿ ಆಗುತ್ತಿಲ್ಲ, ಬದಲಾಗಿ ದಿನದಿಂದ ದಿನಕ್ಕೆ ಇದರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ವಲಸೆಯ ಕಾರಣದಿಂದಾಗಿ ನಮ್ಮ ಜನರೂ ಸಹ ತಮ್ಮ ಕೆಲಸಗಳನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದೊದಗಿದ್ದಾರೆ, ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲೂ ಸಹ ಪೋಲಿಸ್ ಇಲಾಖೆಗೆ ತೊಂದರೆಯಾಗುತ್ತಿದೆ. ಮೂಲ ನಿವಾಸಿಗಳು ಹಾಗೂ ವಲಸಿಗರ ನಡುವೆ ಕಂದಕ ಏರ್ಪಡುತ್ತಿದೆ. ನಮ್ಮ ರಾಜ್ಯಕ್ಕೆ ಎಷ್ಟು ಜನರು ವಲಸೆ ಬರಬೇಕು ಅನ್ನೋ ನೀತಿಯನ್ನ ರೂಪಿಸಲು ನಮ್ಮ ರಾಜ್ಯಕ್ಕೆ ಹಕ್ಕಿರಬೇಕು. ಬಿಹಾರದಿಂದ, ಪಶ್ಚಿಮ ಬಂಗಾಳದಿಂದ ನಮ್ಮ ರಾಜ್ಯಕ್ಕೆ ಎಷ್ಟು ಜನರು ವಲಸೆ ಬರಬೇಕು ಅನ್ನೋ ನಿರ್ಧಾರ ನಮ್ಮ ರಾಜ್ಯಕ್ಕಿದ್ದರೆ, ನಮ್ಮ ರಾಜ್ಯದಿಂದ ಅಥವಾ ಬೇರೆ ರಾಜ್ಯದಿಂದ ಬಿಹಾರಕ್ಕೆ ಎಷ್ಟು ಜನರು ವಲಸೆ ಹೋಗಬೇಕು ಅನ್ನೋ ನಿರ್ಧಾರವನ್ನು ಬಿಹಾರ ಸರಕಾರಕ್ಕೆ ಬಿಡಬೇಕು, ಇದು ಸರಿಯಾದ ದಾರಿ ಕೂಡ.

ಇಂದು ಸಂವಿಧಾನದಲ್ಲಿ ಈ ತರಹದ ಕಾನೂನಿಗೆ ಅವಕಾಶವಿಲ್ಲವಾದರೆ, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಸಲಹೆ ಪಡೆದು ವಲಸೆ ನಿಯಂತ್ರಣದ ಬಗ್ಗೆ ಸಂವಿಧಾನದಲ್ಲಿ ತಿದ್ದುಪಡಿ ತರಬೇಕಾಗಿದೆ. ವಲಸೆಗೆ ಬರುವ ಜನರಿಗೆ ರಾಜ್ಯ ಸರ್ಕಾರದಿಂದ ಪರ್ಮಿಟ್ ಪಡೆದುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಿದೆ. ಇದರ ಮೂಲಕ ವಲಸಿಗರ ಸ್ಥಿತಿಗತಿ, ಅಂಕೆ ಸಂಖ್ಯೆ, ಹಾಗೂ ಇತರೇ ವಿಷಯದಲ್ಲಿ ಸರ್ಕಾರಕ್ಕೆ ತೀರ್ಮಾನ ಕೈಗೊಳ್ಳಲು ಸುಲಭವಾಗುತ್ತದೆ. ವಲಸೆಯನ್ನು ನಿಯಂತ್ರಿಸುವ ಸಲುವಾಗಿ ಆಯಾ ರಾಜ್ಯದಲ್ಲಿ ಹೆಚ್ಚಿನ  ಉದ್ಯೋಗಗಳನ್ನು ಸೃಷ್ಠಿ ಮಾಡಬೇಕಾದ ಅನಿವಾರ್ಯತೆ ಇಂದು ಎಲ್ಲಾ ರಾಜ್ಯಗಳ ಮೇಲಿದೆ. ನಮ್ಮ ರಾಜ್ಯದಲ್ಲೂ ಕೂಡ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ.