ಮಂಗಳವಾರ, ಮಾರ್ಚ್ 6, 2012

ಅನಿಯಂತ್ರಿತ ವಲಸೆ ಕಡಿವಾಣಕ್ಕೆ ಬೇಕು ಕಾನೂನು


ತಮಿಳುನಾಡು ರಾಜ್ಯದಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಪಾತಕ ಕೃತ್ಯಗಳ ಕಡಿವಾಣಕ್ಕಾಗಿ ಅಲ್ಲಿನ ಸರ್ಕಾರ ಹೊರ ರಾಜ್ಯದಿಂದ ತಮಿಳುನಾಡಿಗೆ ವಲಸೆ ಬಂದಿರುವ ಜನರ ಮಾಹಿತಿಯನ್ನು ಕಲೆ ಹಾಕಲು ತೀರ್ಮಾನಿಸಿದೆ ಹಾಗೂ ಈ ಕಾರ್ಯಕ್ಕೆ ಚಾಲನೆ ನೀಡಿದೆ. ಮಾಹಿತಿ ಕಲೆ ಹಾಕುವಲ್ಲಿ ಮುಖ್ಯವಾಗಿ ಕಟ್ಟಡ ಕಾಮಗಾರಿ, ಗಾರ್ಮೆಂಟ್ಸ್ ಹಾಗೂ ಹೋಟೆಲ್ ಉದ್ಯಮದಂಥಹ ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಈ ಮಾಹಿತಿ ಕಲೆ ಹಾಕುವಿಕೆಯ ಮುಖ್ಯ ಉದ್ದೇಶ ಕೆಲಸ ಅರಸಿ ಬಂದಿರುವ ವಲಸಿಗರನ್ನು ಪಾತಕಿಗಳಿಂದ ಬೇರ್ಪಡಿಸಿ ನೋಡುವುದಕ್ಕೆ ಸುಲಭವಾಗುತ್ತದೆ ಅನ್ನುವ ಕಾರಣಕ್ಕೆ.

ನಮ್ಮ ರಾಜ್ಯದಲ್ಲೂ ಯೋಜನೆ ಜಾರಿಗೆ ಬರಲಿ:

ಈ ಯೋಜನೆ ಕಾನೂನು ವ್ಯವಸ್ಥೆಯನ್ನು ಕಾಪಡುವಲ್ಲಿ ನಿಜಕ್ಕೂ ಒಳ್ಳೆಯ ಹೆಜ್ಜೆಯಾಗಿದೆ. ಬೆಂಗಳೂರು ಸೇರಿದಂತೆ ಹೊರ ರಾಜ್ಯದಿಂದ ಹೆಚ್ಚಾಗಿ ವಲಸೆಯಾಗುತ್ತಿರುವ ನಮ್ಮ ನಗರಗಳಲ್ಲಿ ಈ ಯೋಜನೆ ಜಾರಿಯಾಗಬೇಕಾಗಿರುವುದು ಅವಶ್ಯಕವಾಗಿದೆ. ನಮ್ಮ ಊರುಗಳಿಗೆ ಯಾರು ಬರುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಹಾಗೂ ಅವರ ಪೂರ್ವಾಪರವೇನು ಅನ್ನೋ ಮಾಹಿತಿಗಳು ನಮಗೆ ಗೊತ್ತಿದ್ದರೆ ಒಳ್ಳೆಯದಲ್ಲವೇ? ಬೆಂಗಳೂರಿನಲ್ಲಿ ನಡೆದಿರುವ ಹಲವಾರುಅಪರಾಧ ಪ್ರಕರಣಗಳಲ್ಲಿ ಹೊರ ರಾಜ್ಯದ ಪಾತಕಿಗಳು ಭಾಗಿಯಾಗಿರುವುದು ಕಂಡುಬಂದಿದೆ. ವಲಸೆ ಬಂದಿರುವ ಜನರ ಅಂಕೆ ಸಂಖ್ಯೆಗಳನ್ನು ಹೊಂದಿರುವುದು ಸರ್ಕಾರಕ್ಕೆ ಮುಖ್ಯವಾಗುತ್ತದೆ. ಅನಿಯಂತ್ರಿತ ವಲಸೆಯಿಂದಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿ ಘರ್ಷಣೆಗೆ ಕಾರಣವಾಗಬಹುದು. ಇದಕ್ಕೆ ಸ್ಪಷ್ಟ ಉದಾಹರಣೆ ಮುಂಬೈ ನಗರ.

ಅನಿಯಂತ್ರಿತ ವಲಸೆಯಿಂದಾಗಿ ಒಂದು ರಾಜ್ಯದ Demography ಯೇ ಬದಲಾಗಿ ಹೋಗುವ ಅಪಾಯಕಾರಿ ಪರಿಣಾಮಗಳನ್ನು ಹಲವಾರು ರಾಜ್ಯಗಳು ಇಂದು ಅನುಭವಿಸುತ್ತಿವೆ. ಬೇರೆಲ್ಲೋ ಪಾತಕ ಕೃತ್ಯಗಳಲ್ಲಿ ಭಾಗಿಯಾಗಿರುವ ಜನರು ತಲೆತಪ್ಪಿಸಿಕೊಂಡು ನಮ್ಮ ರಾಜ್ಯಗಳಿಗೆ ಬಂದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸಗಳು ಆಗಬಹುದು. ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾರೆ ಅನ್ನೋ ಕಾರಣಕ್ಕೆ ಹಿಂದಿನ ಪೂರ್ವಾಪರ ತಿಳಿಯದೇ ಕರೆದುಕೊಂಡು ಬರಲಾಗುವ ಇಂತಹ ಜನರನ್ನು ಒಂದೆಡೆ ಮಧ್ಯವರ್ತಿಗಳು ಶೋಷಿಸಿದರೆ, ಇನ್ನೊಂದೆಡೆ ಇಲ್ಲಿಗೆ ವಲಸೆ ಬರುವ ಜನರು ನಮ್ಮ ಸಮಾಜದ ಜೊತೆ ಬೆರೆಯದೇ ತಮ್ಮದೇ ಒಂದು ದ್ವೀಪ ಕಟ್ಟಿಕೊಂಡು ಸಮಾಜದಲ್ಲಿ ಒಡಕು ತರುವ ಕೆಲಸಗಳಿಗೂ ಕಾರಣವಾಗಬಹುದು. ಕಡಿಮೆ ಸಂಬಳದ ನೆಪವೊಡ್ಡಿ ನಮ್ಮ ಕನ್ನಡಿಗರಿಗೆ ಕೆಲಸಗಳು ದೊರಕದಂತಹ ಪರಿಸ್ಥಿತಿ ನಿರ್ಮಾಣವಾದರೆ, ಇಂತಹ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯ ಅಭಿವೃದ್ಧಿ ಕಾಣುತ್ತಿದೆಯಾದರೆ. ನಮ್ಮ ಜನರಿಗೆ ಸರಿಯಾದ ವ್ಯವಸ್ಥೆಯಿಲ್ಲದ, ನಮ್ಮ ಜನರಿಗೆ ಕೆಲಸ ಸಿಗದ ಇಂತಹ ಅಭಿವೃದ್ಧಿ ನಮಗೆ ಬೇಕೆ ಎನ್ನೋ ಪ್ರಶ್ನೆಯನ್ನ ನಾವುಗಳು ಕೇಳಿಕೊಳ್ಳಬೇಕಾಗಿದೆ?

ವಲಸೆಗೆ ಕಾನೂನು ಜಾರಿಯಾಗಬೇಕು:

ಇಂದು ವಲಸೆ ಕೇವಲ ಸಣ್ಣ ಪ್ರಮಾಣದಲ್ಲಿ ಆಗುತ್ತಿಲ್ಲ, ಬದಲಾಗಿ ದಿನದಿಂದ ದಿನಕ್ಕೆ ಇದರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ವಲಸೆಯ ಕಾರಣದಿಂದಾಗಿ ನಮ್ಮ ಜನರೂ ಸಹ ತಮ್ಮ ಕೆಲಸಗಳನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದೊದಗಿದ್ದಾರೆ, ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲೂ ಸಹ ಪೋಲಿಸ್ ಇಲಾಖೆಗೆ ತೊಂದರೆಯಾಗುತ್ತಿದೆ. ಮೂಲ ನಿವಾಸಿಗಳು ಹಾಗೂ ವಲಸಿಗರ ನಡುವೆ ಕಂದಕ ಏರ್ಪಡುತ್ತಿದೆ. ನಮ್ಮ ರಾಜ್ಯಕ್ಕೆ ಎಷ್ಟು ಜನರು ವಲಸೆ ಬರಬೇಕು ಅನ್ನೋ ನೀತಿಯನ್ನ ರೂಪಿಸಲು ನಮ್ಮ ರಾಜ್ಯಕ್ಕೆ ಹಕ್ಕಿರಬೇಕು. ಬಿಹಾರದಿಂದ, ಪಶ್ಚಿಮ ಬಂಗಾಳದಿಂದ ನಮ್ಮ ರಾಜ್ಯಕ್ಕೆ ಎಷ್ಟು ಜನರು ವಲಸೆ ಬರಬೇಕು ಅನ್ನೋ ನಿರ್ಧಾರ ನಮ್ಮ ರಾಜ್ಯಕ್ಕಿದ್ದರೆ, ನಮ್ಮ ರಾಜ್ಯದಿಂದ ಅಥವಾ ಬೇರೆ ರಾಜ್ಯದಿಂದ ಬಿಹಾರಕ್ಕೆ ಎಷ್ಟು ಜನರು ವಲಸೆ ಹೋಗಬೇಕು ಅನ್ನೋ ನಿರ್ಧಾರವನ್ನು ಬಿಹಾರ ಸರಕಾರಕ್ಕೆ ಬಿಡಬೇಕು, ಇದು ಸರಿಯಾದ ದಾರಿ ಕೂಡ.

ಇಂದು ಸಂವಿಧಾನದಲ್ಲಿ ಈ ತರಹದ ಕಾನೂನಿಗೆ ಅವಕಾಶವಿಲ್ಲವಾದರೆ, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಸಲಹೆ ಪಡೆದು ವಲಸೆ ನಿಯಂತ್ರಣದ ಬಗ್ಗೆ ಸಂವಿಧಾನದಲ್ಲಿ ತಿದ್ದುಪಡಿ ತರಬೇಕಾಗಿದೆ. ವಲಸೆಗೆ ಬರುವ ಜನರಿಗೆ ರಾಜ್ಯ ಸರ್ಕಾರದಿಂದ ಪರ್ಮಿಟ್ ಪಡೆದುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಿದೆ. ಇದರ ಮೂಲಕ ವಲಸಿಗರ ಸ್ಥಿತಿಗತಿ, ಅಂಕೆ ಸಂಖ್ಯೆ, ಹಾಗೂ ಇತರೇ ವಿಷಯದಲ್ಲಿ ಸರ್ಕಾರಕ್ಕೆ ತೀರ್ಮಾನ ಕೈಗೊಳ್ಳಲು ಸುಲಭವಾಗುತ್ತದೆ. ವಲಸೆಯನ್ನು ನಿಯಂತ್ರಿಸುವ ಸಲುವಾಗಿ ಆಯಾ ರಾಜ್ಯದಲ್ಲಿ ಹೆಚ್ಚಿನ  ಉದ್ಯೋಗಗಳನ್ನು ಸೃಷ್ಠಿ ಮಾಡಬೇಕಾದ ಅನಿವಾರ್ಯತೆ ಇಂದು ಎಲ್ಲಾ ರಾಜ್ಯಗಳ ಮೇಲಿದೆ. ನಮ್ಮ ರಾಜ್ಯದಲ್ಲೂ ಕೂಡ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ