ಮಂಗಳವಾರ, ಫೆಬ್ರವರಿ 15, 2011

ಜನರ ಹಿತವನ್ನೇ ಮರೆತಿರುವ ಜನಪ್ರತಿನಿಧಿಗಳು


ನಮ್ಮ ರಾಜ್ಯದ ಸದ್ಯದ ಭವಿಷ್ಯವನ್ನು ನೆನೆಸಿಕೊಂಡರೆ ಭಯವಾಗಿ ಹೋಗುತ್ತದೆ. ಕಳೆದ ವರ್ಷದ ಅಂತ್ಯದಲ್ಲಿ ಬಂದ ಎರಡನೇ ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಅನ್ನುವುದನ್ನ ನಿಮಗೆ ಈಗಾಗಲೇ ತಿಳಿಸಲಾಗಿದೆ. ಹಾಗೆಯೇ ಈ ತೀರ್ಪು ಐತಿಹಾಸಿಕ ಅಂತ ಬಣ್ಣಿಸಿ ನಮ್ಮ ರಾಜ್ಯಸರ್ಕಾರ ಹಾಗು ಇತರೇ ರಾಜಕೀಯ ಪಕ್ಷಗಳು ಸುಮ್ಮನಾಗಿ ಹೋಗಿದ್ದವು. ತೀರ್ಪಿನ ವಿರುದ್ಧವಾಗಿ ಧ್ವನಿ ಎತ್ತಿದವರು ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ತೀರ್ಪನ್ನು ವಿಮರ್ಶಿಸುವುದಾಗಿ ಹೇಳಿಕೆ ನೀಡಿತು. ರಾಜ್ಯ ಸರ್ಕಾರದ ಈ ನಿಲುವು ಸ್ವಾಗತಾರ್ಹವೇ.

ಜನಪ್ರತಿನಿಧಿಗಳ ಸಭೆಯನ್ನು ಕರೆದ ಸರ್ಕಾರ:
ಕೃಷ್ಣಾ ನ್ಯಾಯಾಧಿಕರಣ ಆಲಮಟ್ಟಿ ಜಲಾಶಯದ ಎತ್ತರ, ರಾಜ್ಯಕ್ಕೆ ಹಂಚಿರುವ ನೀರಿನ ಪಾಲು, ಇದರ ಬಳಕೆಗೆ ಅನುಸರಿಸಬೇಕಾದ ವಿಧಾನಗಳ ಕುರಿತು ಕೃಷ್ಣಾ ಕಣಿವೆಯ 17 ಜಿಲ್ಲೆಗಳ ಜನಪ್ರತಿನಿಧಗಳ ಅಭಿಪ್ರಾಯ ಸಂಗ್ರಹಿಸಲು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಫೆಬ್ರವರಿ 14ರಂದು ಜನಪ್ರತಿನಿಧಗಳ ಸಭೆ ಕರೆದಿದ್ದರು. ಈ ಸಭೆಯ ಮತ್ತೊಂದು ಮುಖ್ಯವಾದ ಅಂಶವೇನೆಂದರೆ, ಇದರಲ್ಲಿ ಜನಪ್ರತಿನಿಧಿಗಳು ಕೇವಲ ಹಾಜರಿರದೆ ಚರ್ಚೆಯಲ್ಲಿ ಪಾಲ್ಗೊಂಡು ಜನರ ನಿಲುವನ್ನು ರೂಪಿಸುವ ಉದ್ದೇಶವನ್ನು ಹೊಂದಿತ್ತು.

ಸಭೆಗೆ ಬಾರದ ಜನಪ್ರತಿನಿಧಿಗಳು:
ರಾಜ್ಯದ ಬಹುಪಾಲು ಜಿಲ್ಲೆಗಳನ್ನು ಹಸನುಗೊಳಿಸುವ ಶಕ್ತಿ ಇರುವ ಕೃಷ್ಣಾ ನದಿಯ ತೀರ್ಪಿನಲ್ಲಿ ಸುಮಾರು 100 ಟಿಎಂಸಿ ಅಡಿ ನೀರು ಕಡಿಮೆ ಸಿಕ್ಕಿದ್ದರೂ ಈ ಭಾಗದ ಜನಪ್ರತಿನಿಧಿಗಳು ತೀರ್ಪಿನ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ರಾಜ್ಯದ ರೈತರ, ಕೃಷಿಯ ಹಾಗೂ ಜನರ ಭವಿಷ್ಯವನ್ನ ನಿರ್ಧರಿಸುವ ಇಂತಹ ಜವಾಬ್ದಾರಿಯುತ ಸಭೆಗಳಿಗೆ ಜನಪ್ರತಿನಿಧಿಗಳು ಹಾಜರಾಗದೆ ಇರುವಂತೆ ಇವರುಗಳು ಮಾಡುವ ಘನಂದಾರಿ ಕೆಲಸಗಳಾದರು ಏನು? ಇದರಲ್ಲಿ ನಾಡಿನ ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಸೇರಿದ್ದಾರೆ. ಕೆಲವೇ ಶಾಸಕರನ್ನ ಬಿಟ್ಟರೆ ಉಳಿದ ಶಾಸಕರು, ಸಚಿವರುಗಳು ಹಾಗು ಸಂಸದರು ಈ ಸಭೆ ಹಾಜರಾಗಲೇ ಇಲ್ಲ. ಆಯಾ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಬೇಕಾಗಿರುವುದು ಆಯಾ ಪ್ರದೇಶದ ಶಾಸಕರ, ಸಂಸದರ ಹಾಗೂ ಅಲ್ಲಿನ ಜನಪ್ರತಿನಿಧಿಗಳ ಕರ್ತವ್ಯ, ಅದೊಂದನ್ನು ಬಿಟ್ಟು ಅವರಿಗೆ ಬೇರೆ ಯಾವುದೇ ಕೆಲಸವಿಲ್ಲ. ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯ ಮೂಲಕ ಕರ್ನಾಟಕದ ಅಭಿವೃದ್ಧಿ ಕಾಣಬಹುದು, ಕರ್ನಾಟಕದ ಅಭಿವೃದ್ಧಿಯ ಮೂಲಕ ದೇಶದ ಅಭಿವೃದ್ಧಿಯನ್ನು ಕಾಣಬಹುದು. ಆದರೆ ಕೊಟ್ಟ ಮಾತಿನಂತೆ ನಮ್ಮ ಜನಪ್ರತಿನಿಧಿಗಳು ನಡೆದು ಕೊಳ್ಳುತ್ತಿದ್ದಾರೆಯೇ? ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆಯೇ?

1 ಕಾಮೆಂಟ್‌: