ಶುಕ್ರವಾರ, ಫೆಬ್ರವರಿ 18, 2011

ನಮ್ಮ ರಾಜ್ಯವನ್ನು ಪ್ರತಿನಿಧಿಸಲು ಜನರಿಲ್ಲವೇ???

ಇದು ಖಂಡಿತಾ ಕರ್ನಾಟಕದ ದೌರ್ಭಾಗ್ಯದ ಪರಮಾವಧಿ. ಹೈಕಮಾಂಡ್ ದಾಸ್ಯಕ್ಕೆ ಸಿಲುಕಿರುವ ಬಿಜೆಪಿ ಪಕ್ಷ ಮತ್ತೊಂದು ಎಡವಟ್ಟು ತೀರ್ಮಾನ ಕೈಗೊಂಡಿದೆ. ಹಿರಿಯ ರಾಜಕಾರಣಿ ಶ್ರೀ ರಾಜಶೇಖರ ರ್ಮೂರ್ತಿಯವರ ನಿಧನದಿಂದ ತೆರವಾಗಿದ್ದ ರಾಜ್ಯಸಭಾ ಸ್ಥಾನಕ್ಕೆ ಹಿಂದಿ ಚಲನಚಿತ್ರ ನಟಿ ಶ್ರೀಮತಿ ಹೇಮಾ ಮಾಲಿನಿ ಅವರನ್ನ ರಾಜ್ಯದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ.

ರಾಜ್ಯಸಭಾ ಸದಸ್ಯತ್ವ ಅಂದರೇನು?
ಒಬ್ಬ ರಾಜ್ಯಸಭಾ ಸದಸ್ಯ ಮುಖ್ಯವಾಗಿ ಆಯಾ ರಾಜ್ಯದ ಪ್ರತಿನಿಧಿಯಾಗಿ ಸಂಸತ್ತಿನ ಮೇಲ್ಮನೆಯಲ್ಲಿ ಕೆಲಸಮಾಡುತ್ತಾರೆ. ರಾಜ್ಯಸಭೆ ಅನ್ನುವುದು ಒಕ್ಕೂಟ ವ್ಯವಸ್ಥೆಯ ಒಂದು ಮುಖ್ಯ ಭಾಗ. ಕೇಂದ್ರದಲ್ಲಿ ಲೋಕಸಭೆಗಿರುವಷ್ಟೇ ಪ್ರಾಮುಖ್ಯತೆ ರಾಜ್ಯಸಭೆಗೂ ಇದೆ. ರಾಜ್ಯಸಭಾ ಸದಸ್ಯರನ್ನು ಆಯಾ ರಾಜ್ಯದ ಶಾಸಕರು ಆಯ್ಕೆ ಮಾಡುತ್ತಾರೆ.

ನಮ್ಮ ರಾಜ್ಯವನ್ನೂ ಪ್ರತಿನಿಧಿಸಲು ಅರ್ಹ ಜನಪ್ರತಿನಿಧಿಗಳು ಇಲ್ಲವೇ?
ಇಷ್ಟಕ್ಕೂ ರಾಜ್ಯಸಭೆ ಸ್ಥಾನಕ್ಕೆ ಹೇಮಾ ಮಾಲಿನಿಯವರನ್ನು ಕಣಕ್ಕಿಳಿಸಲು ಇರುವ ಅರ್ಹತೆಯಾದರೂ ಏನು? ಮೊದಲನೆಯದಾಗಿ ಹೇಮಾ ಮಾಲಿನಿ ನಮ್ಮ ನಾಡಿನವರಲ್ಲ, ಹೋಗಲಿ ಆ ಕಾರಣವನ್ನು ಬದಿಗಿಟ್ಟು ನೋಡೋಣವೆಂದರೆ ಅವರಿಂದ ನಮ್ಮ ರಾಜ್ಯಕ್ಕೆ ಆಗಿರುವ ಉಪಯೋಗವಾದರೂ ಏನು? ನಮ್ಮ ನಾಡಿನ ಯಾವ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ರಾಜ್ಯ ಮಟ್ಟದಲ್ಲಾಗಲಿ ಅಥವಾ ಕೇಂದ್ರ ಮಟ್ಟದಲ್ಲಾಗಲಿ ಪ್ರಯತ್ನಿಸಿದ್ದಾರೆ? ನಮ್ಮ ನೆಲ, ಜಲ, ಭಾಷೆ, ಉದ್ಯೋಗ, ಉದ್ದಿಮೆ ಹೀಗೆ ಯಾವ ಕಾರಣಕ್ಕಾಗಿ ನಮ್ಮ ನಾಡಿಗಾಗಿ ಕೆಲಸ ಮಾಡಿದ್ದಾರೆ? ಯಾವುದೇ ದೃಷ್ಠಿಯಿಂದ ನೋಡಿದರೂ ಸಹ ಹೇಮಾ ಮಾಲಿನಿ ನಮ್ಮ ರಾಜ್ಯದ ಪ್ರತಿನಿಧಿಯಾಗಿ ರಾಜ್ಯಸಭೆ ಪ್ರವೇಶಿಸಲು ಅರ್ಹರಲ್ಲ. ಇಂತಹುದೇ ತಪ್ಪನ್ನು ಹಿಂದೆ ಬಿಜೆಪಿ ಹೈಕಮಾಂಡ್ ವೆಂಕಯ್ಯ ನಾಯ್ಡು ಅವರನ್ನ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿವಾಗ ಮಾಡಿತ್ತು. ಕಾಂಗ್ರೆಸ್ ಹಾಗೂ ಜನತಾದಳ ಪಕ್ಷಗಳು ಸಹಿತ ಇಂತಹುದೇ ತಪ್ಪನ್ನು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ.

ಗಮನಿಸಬೇಕಾದ ಅಂಶವೆಂದರೆ ನಮ್ಮ ನಾಡಿನಲ್ಲಿ ರಾಜ್ಯಸಭೆಗೆ ಅರ್ಹರಾಗಿರುವ ಯಾವುದೇ ನಾಯಕರು ಬಿಜೆಪಿ ಹೈಕಮಾಂಡಿಗೆ ಕಾಣಸಿಗಲಿಲ್ಲವೇ? ನಮ್ಮ ನಾಡನ್ನ ಉದ್ಧಾರ ಮಾಡೋದಕ್ಕೆ ಬೇರೆ ರಾಜ್ಯದ ಜನರನ್ನ ಕರೆದುಕೊಂಡು ಬರಬೇಕಾದ ಪರಿಸ್ಥಿತಿ ಬಂದಿದೆಯೇ? ನಮ್ಮ ನಾಡಿನ ರಾಜಕೀಯ ನಾಯಕರು ಆಗುತ್ತಿರುವ ತಪ್ಪನ್ನು ನೋಡಿಕೊಂಡು ಸುಮ್ಮನಿದ್ದಾರೆಯೇ? ಸುಮಾರು ಮೂರ್ನಾಲ್ಕು ದಶಕಗಳಿಂದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ದುಡಿದಿರುವಂತಹ ಬಿಜೆಪಿಯ ಕಾರ್ಯಕರ್ತರೆಲ್ಲಾ ಹೈಕಮಾಂಡ್ ಕಣ್ಣಿಗೆ ಕಾಣಿಸುತ್ತಿಲ್ಲವೇ? ಈ ಸರ್ತಿಯಾದರು ಬಿಜೆಪಿ ಪಕ್ಷ ತನ್ನ ತಪ್ಪನ್ನು ತಿದ್ದಿಕೊಳ್ಳುತ್ತಾ? ಕಾದು ನೋಡಬೇಕು.........

1 ಕಾಮೆಂಟ್‌: