ಮಂಗಳವಾರ, ಮೇ 1, 2012

ಕನ್ನಡ ಚಿತ್ರರಂಗ ಹಾಗೂ ಟಿವಿ ಮಾಧ್ಯಮಗಳ ತಾಲೀಬಾನಿಕರಣ

ಇತ್ತೀಚಿಗೆ ಡಬ್ಬಿಂಗ್ ವಿರುದ್ಧ ಹಾಗೂ ಅದರಿಂದ ಕನ್ನಡದ ಮೇಲೆ ಆಗುವ ಪರಿಣಾಮಗಳ ಕುರಿತು ಹಲವಾರು ಚರ್ಚೆಗಳು ನಡೆಯುತ್ತಿವೆ. ಈ ಸಂಧರ್ಭದಲ್ಲಿ ಗೆಳಯ ವಸಂತ್ ಶೆಟ್ಟಿ ಅವರು ಬರಿದ್ದಿದ್ದ ಈ ಲೇಖನ ಚುರುಮುರಿ ಬ್ಲಾಗ್ ನಲ್ಲಿ ಪ್ರಕಟವಾಗಿತ್ತು. ಈ ಲೇಖನವನ್ನು ಅವರ ಅನುಮತಿಯೊಂದಿಗೆ ಕನ್ನಡಕ್ಕೆ ಅನುವಾದಿಸಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ. ನಿಮ್ಮ ಅಭಿಪ್ರಾಯವನ್ನು ತಿಳಿಸಿ.






ಹಿಂದಿ ನಟ ಅಮೀರ್ ಖಾನ್ "ಸತ್ಯ ಮೇವ ಜಯತೇ" ಅನ್ನುವ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಅಡಿಯಿಡುವುದನ್ನು ಪ್ರಕಟಿಸಿದರು. ಈ ಕಾರ್ಯಕ್ರಮವನ್ನು ಸ್ಟಾರ್ ಸಮೂಹದ ಚಾನೆಲ್ ಗಳ ಮೂಲಕ ಭಾರತದ ವಿವಿಧ ಭಾಷೆಗಳಲ್ಲಿ ಪ್ರಸಾರ ಮಾಡಲು ಯೋಜಿಸಲಾಗಿತ್ತು. ಕನ್ನಡದಲ್ಲಿ, ಸುವರ್ಣ ವಾಹಿನಿಯಲ್ಲಿ ಈ ಕಾರ್ಯಕ್ರಮ ಮೇ ೬ ರಿಂದ ಕನ್ನಡದಲ್ಲಿ ಪ್ರಸಾರವಾಗಬೇಕಿತ್ತು. ಆದ್ರೆ ಈಗ ಕನ್ನಡ ಸಂಸ್ಕೃತಿ, ಭಾಷೆಯ ರಕ್ಷಣೆಯ ನೆಪದಲ್ಲಿ ಕೆಲವು ಖಾಸಗಿ ಸಂಸ್ಥೆಗಳು ಹೇರಿರುವ ಡಬ್ಬಿಂಗ್ ಮೇಲಿನ ನಿಷೇಧದಿಂದಾಗಿ ಈ ಕಾರ್ಯಕ್ರಮ ಕನ್ನಡದಲ್ಲಿ ಪ್ರಸಾರವಾಗುತ್ತಿಲ್ಲ.

ಕಳೆದ ವರ್ಷ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಬಗೆಗಿನ ಕಾರ್ಯಕ್ರಮವೊಂದನ್ನು ಡಬ್ ಮಾಡಿ ಪ್ರಸಾರ ಮಾಡಲು ಮುಂದಾದ ಜೀ ಕನ್ನಡ ವಾಹಿನಿಯ ಮೇಲೆ ದಾಳಿ ನಡೆಸಿದ ಗುಂಪುಗಳೇ ಈ ಬಾರಿಯೂ ಇಂತಹ ಕೆಲಸಕ್ಕೆ ಮುಂದಾಗಿವೆ ಅನ್ನಲಾಗಿದೆ. ಪುಣ್ಯಕ್ಕೆ, ಈ ಸಂಘಟನೆಗಳು ಕಾನೂನು ಕೈಗೆತ್ತಿಕೊಳ್ಳುವ ಮೊದಲೇ ಸುವರ್ಣ ವಾಹಿನಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

ಈ ಘಟನೆಗಳು ನಮ್ಮ ಮುಂದೆ ಒಂದು ದೊಡ್ಡ ಪ್ರಶ್ನೆಯನ್ನು ಎತ್ತುತ್ತವೆ: ಒಂದು ಸಂವಿಧಾನಿಕ ಪ್ರಜಾತಂತ್ರದಲ್ಲಿ ಬ್ಯಾನ್ ಮಾಡುವ ಅಧಿಕಾರವನ್ನು ಈ ಸಂಸ್ಥೆಗಳಿಗೆ ನೀಡಿದ್ದು ಯಾರು?

ಯಾವುದೇ ನಾಗರೀಕ ಪ್ರಜಾಪ್ರಭುತ್ವ ಅನುಸರಿಸುವ ಸಮಾಜದಲ್ಲಿ, ಸರ್ಕಾರವೇ ವಿಧಿಸಿದ ಬ್ಯಾನ್ ಆದರೂ ಸಹ ಅಂತವುಗಳಿಗೆ ಯಾವುದೇ ಜಾಗವಿಲ್ಲ. ಪ್ರಜಾಪ್ರಭುತ್ವದಲ್ಲಿ, ಎಲ್ಲಿಯವರೆಗೆ ನನ್ನ ಬೇಡಿಕೆಗಳು ಕಾನೂನು ಬದ್ಧವಾಗಿದೆಯೋ ಅಲ್ಲಿಯವರೆಗೂ ನಾನೊಬ್ಬ ಗ್ರಾಹಕನಾಗಿ ನನಗೆ ಬೇಕಿರುವ ಎಲ್ಲ ಮಾಹಿತಿ, ಜ್ಞಾನ ಮತ್ತು ಮನರಂಜನೆಯ ಅಗತ್ಯಗಳನ್ನು ನನ್ನ ಇಷ್ಟದ ಭಾಷೆಯಲ್ಲಿ ಪಡೆಯುವ ಎಲ್ಲ ಹಕ್ಕು ನನಗಿದೆ.

ನನ್ನಂತೆಯೇ ಲಕ್ಷಾಂತರ ಕನ್ನಡಿಗರಿಗೂ ಮಕ್ಕಳ ಮನತಣಿಸುವ ಡಿಸ್ನಿಯ ಯಾವುದೋ ಒಂದು ಪಾತ್ರ ಕನ್ನಡದಲ್ಲಿ ಮಾತನಾಡುವುದನ್ನು ನೋಡುವ ಆಸೆಯಿರಬಹುದು, ಇಲ್ಲವೇ,ಡಿಸ್ಕವರಿ, ಅನಿಮಲ್ ಪ್ಲಾನೆಟಿನಲ್ಲಿ ಬರುವ ಅಮೇಜಾನ್ ಕಾಡಿನ ಬಗೆಗಿನ ಕಾರ್ಯಕ್ರಮವನ್ನು ಕನ್ನಡದಲ್ಲೇ ನೋಡುವ ಬಯಕೆಯಿರಬಹುದು, ಅಥವಾ ಅವತಾರ್ ೩ಡಿ ತರಹದ ಸಿನೆಮಾವನ್ನು ಕನ್ನಡದಲ್ಲೇ ನೋಡಿ ಆನಂದಿಸುವ ಮನಸ್ಸಿರಬಹುದು. ನನ್ನ ನುಡಿಯಲ್ಲೇ ಇದೆಲ್ಲವನ್ನು ನೋಡಬೇಕು ಅನ್ನುವ ನನ್ನ ನ್ಯಾಯಯುತ ಬೇಡಿಕೆಯನ್ನು ಯಾಕೆ ನಿರಾಕರಿಸಲಾಗುತ್ತಿದೆ?
  • ಪ್ರಜಾಪ್ರಭುತ್ವವಿರುವ ರಾಜ್ಯವಾಗಿ ಕರ್ನಾಟಕ ಉಳಿದಿಲ್ಲವೇ? 
  • ಪ್ರಜೆಗಳಿಂದ ಆಯ್ಕೆಯಾಗದ ಕೆಲವೇ ಕೆಲವು ದಬ್ಬಾಳಿಕೆಯ ಜನರ ಆಳ್ವಿಕೆ ನಡೆಯುತ್ತಿರುವ ಡಮ್ಮಿ ಪ್ರಜಾಪ್ರಭುತ್ವವಾಗಿ ಕರ್ನಾಟಕ ಬದಲಾಗಿದೆಯೇ? 
  • ಇಂತಹ ನಡೆಯನ್ನು ನೀವು ಬೇರಾವುದಾದರೂ ಚಿತ್ರೋದ್ಯಮದಲ್ಲಿ ಕಂಡಿದ್ದೀರಾ? 
ಬೇರೆ ಯಾವುದೇ ವ್ಯಾಪಾರದಂತೆ ಸಿನೆಮಾ ಉದ್ಯಮ ಕೂಡಾ ಬೇಡಿಕೆ ಮತ್ತು ಪೂರೈಕೆ ಮೇಲೆಯೇ ನಡೆಯುತ್ತೆ. ಯಾವ ವಸ್ತು ಇಲ್ಲವೇ ಸೇವೆಗೆ ಬೇಡಿಕೆ ಇದೆಯೋ ಅದನ್ನು ಲಾಭದ ಜೊತೆ ಪೂರೈಸುವ ಪೂರೈಕೆದಾರರಿರುತ್ತಾರೆ. ಸರಿ ತಾನೇ?

ದುಃಖದ ವಿಚಾರ ಅಂದರೆ ಕನ್ನಡ ಚಿತ್ರೋದ್ಯಮ ಮತ್ತು ಟಿವಿ ಉದ್ಯಮಕ್ಕೆ ಈ ಸೂತ್ರ ಅನ್ವಯಿಸಲ್ಲ.

ಮಾರುಕಟ್ಟೆಯಲ್ಲಿ ಡಬ್ ಆದ ಕಂಟೆಂಟ್ ನ ಸಾಧಕ/ಬಾಧಕಗಳೇನು ಅನ್ನುವುದರ ಆಧಾರದ ಮೇಲೆ ನಡೆಯದೇ ಕನ್ನಡ ಉದ್ಯಮ ಏನಿದ್ದರೂ ತಾಲಿಬಾನ್ ಮಾದರಿಯಲ್ಲಿ ಟಿವಿ ವಾಹಿನಿಗಳಿಗೆ ಡಬ್ ಆದ ಕಾರ್ಯಕ್ರಮ ಪ್ರಸಾರ ಮಾಡದಂತೆ ಫತ್ವಾ ಹೊರಡಿಸುವುದರ ಮೇಲೆ ನಡೆಯುತ್ತೆ. ಮಾರುಕಟ್ಟೆಯಲ್ಲಿ ಸ್ಪರ್ಧೆ ಎದುರಿಸಿ ಗೆಲ್ಲುವ ಛಲದ ಮೇಲೆ ನಡೆಯದೇ ಏನಿದ್ದರೂ ಸಬ್ಸಿಡಿ ರೂಪದಲ್ಲಿ ೬೦% ಗೂ ಹೆಚ್ಚು ಚಿತ್ರಗಳಿಗೆ ಜನರ ತೆರಿಗೆ ಹಣವನ್ನು ಹೀರುವುದರ ಬಲದ ಮೇಲೆ ನಡೆಯುತ್ತೆ. ತನ್ನ ವೈಫಲ್ಯಕ್ಕೆ ಹಗಲು ರಾತ್ರಿ ಸರ್ಕಾರವನ್ನು,ಗ್ರಾಹಕರನ್ನು ಹೊಣೆಯಾಗಿಸುವುದರ ಮೇಲೆ ನಡೆಯುತ್ತೆ.


ಕನ್ನಡ ಚಿತ್ರ ಮತ್ತು ಟಿವಿ ಉದ್ಯಮ ಖಾಸಗಿ ವ್ಯಕ್ತಿಗಳಿಂದ ಲಾಭಕ್ಕಾಗಿ ನಡೆಯುವ ಉದ್ಯಮವೇ ಹೊರತು ಸರ್ಕಾರಿ ಪ್ರಾಯೋಜಿತ ಸಾರ್ವಜನಿಕರ ಸೇವೆಗಾಗಿ ಮುಡಿಪಿಟ್ಟ ಉದ್ಯಮವಲ್ಲ ಅನ್ನುವುದೇ ಅವರಿಗೆ ಮರೆತು ಹೋದ ಹಾಗಿದೆ.

ಕನ್ನಡ ಚಿತ್ರೋದ್ಯಮ ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಒಂದು ಲಿಂಗ್ವಿಸ್ಟಿಕ್ ರೆಜಿಸ್ಟರ್ ಆಗಿ ಅದರ ಸಾಮಾಜಿಕ ಪರಿಣಾಮ ದೊಡ್ಡದಿದೆ. ಯುವ ಕನ್ನಡಿಗರ ನಾಲಿಗೆಯ ಮೇಲೆ ಕನ್ನಡ ಉಳಿಸುವಲ್ಲಿ ಅದರ ಪಾತ್ರ ನಿರ್ಣಾಯಕವೂ ಹೌದು. ಜಾಗತೀಕರಣದ ಈ ದಿನಗಳಲ್ಲಿ ಪ್ರಜಾಸತ್ತಾತ್ಮಕವಲ್ಲದ ಮತ್ತು ಸಂವಿಧಾನ ಬಾಹಿರವಾದ ಈ ಬ್ಯಾನ್ ನಿಂದಾಗಿ ಕನ್ನಡದಲ್ಲೇ ಜ್ಞಾನ ಮತ್ತು ಮನರಂಜನೆ ಪಡೆಯುವ ವಿಷಯದಲ್ಲಿ ಕನ್ನಡಿಗರು ಹೆಚ್ಚಿನ ಆಯ್ಕೆಗಳೇ ಇಲ್ಲದ ಸ್ಥಿತಿ ತಲುಪಿದ್ದಾರೆ. ಅದೇ ಕುಯ್ಯುವ ಧಾರಾವಾಹಿಗಳು, ಕಿತ್ತಾಡುವ ಸುದ್ದಿವಾಹಿನಿಗಳು ಮತ್ತು ಮಚ್ಚು-ಕೊಚ್ಚು ಚಿತ್ರಗಳನ್ನು ಬಿಟ್ಟರೆ ನನ್ನ ಬುದ್ದಿ ಶಕ್ತಿಗೆ ಚುರುಕು ಮುಟ್ಟಿಸುವ ಯಾವ ಅಂಶವೂ ಕನ್ನಡದಲ್ಲಿ ನನಗೆ ಸಿಗುತ್ತಿಲ್ಲ.

ಇಂತಹ ಯಾವುದೇ ಬ್ಯಾನ್ ಇಲ್ಲದ ತೆಲುಗು, ತಮಿಳು ಮತ್ತು ಹಿಂದಿ ಉದ್ಯಮಗಳು ಟಿವಿ ಮತ್ತು ಸಿನೆಮಾ ಎರಡರಲ್ಲೂ ನಮಗಿಂತಲೂ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವುದು ಇಂತಹ ಅಸಂವಿಧಾನಿಕ ಬ್ಯಾನ್ ಗಳನ್ನು ಆದಷ್ಟು ಬೇಗ ಆಚೆ ಸರಿಸಬೇಕು ಅನ್ನುವ ಸ್ಪಷ್ಟ ಸಂದೇಶವನ್ನು ನಮಗೆ ಕೊಡುತ್ತಿವೆ.

ಈ ನಿಟ್ಟಿನಲ್ಲಿ ಕರ್ನಾಟಕದ ಮಾಧ್ಯಮಗಳ ಪಾತ್ರ ದೊಡ್ಡದಿದೆ. ಡಬ್ಬಿಂಗ್ ನಿಷೇಧ ಹೇಗೆ ಕನ್ನಡದ ಭವಿಷ್ಯಕ್ಕೆ ಹೊಡೆತ ಕೊಡುತ್ತಿದೆ ಅನ್ನುವ ಅಂಶವನ್ನು ಜನಸಮುದಾಯಕ್ಕೆ,ಸರ್ಕಾರಕ್ಕೆ ತಲುಪಿಸುವ ಕೆಲಸಕ್ಕೆ ಮಾಧ್ಯಮಗಳು ಮುಂದಾಗಬೇಕಿವೆ. ಈ ಬಗ್ಗೆ ಹೆಚ್ಚೆಚ್ಚು ಚರ್ಚೆ, ಮಾತುಕತೆಗಳನ್ನು ನಡೆಸುವಂತೆ ಮಾಧ್ಯಮಗಳು ಈ ವಿಷಯವನ್ನು ಎತ್ತಿ ಹಿಡಿಯಬೇಕಿದೆ ಮತ್ತು ಈ ಎಲ್ಲ ಚರ್ಚೆಗಳಲ್ಲಿ ಎಲ್ಲರಿಗಿಂತ ಪ್ರಮುಖವಾಗಿ ಈ ಉದ್ಯಮಗಳ ಅಸ್ತಿತ್ವಕ್ಕೆ ಬೆನ್ನೆಲುಬಾಗಿರುವ ಗ್ರಾಹಕನಿಗೆ ತನ್ನ ಧ್ವನಿ ತಿಳಿಸಲು ಅವಕಾಶ ಮಾಡಿಕೊಡಬೇಕಾಗಿದೆ. ಗ್ರಾಹಕನಿಂದಲೇ ನಡೆಯುವ ಈ ಉದ್ಯಮಗಳು ಗ್ರಾಹಕನ ಬೇಕು,ಬೇಡಗಳೇನು ಅನ್ನುವುದನ್ನು ಗಮನಿಸುವ ಒತ್ತಡ ಈ ಚರ್ಚೆಗಳಿಂದಾಗಬೇಕಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ