ಕೃಷ್ಣಾ ನದಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕೃಷ್ಣಾ ನದಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಫೆಬ್ರವರಿ 15, 2011

ಜನರ ಹಿತವನ್ನೇ ಮರೆತಿರುವ ಜನಪ್ರತಿನಿಧಿಗಳು


ನಮ್ಮ ರಾಜ್ಯದ ಸದ್ಯದ ಭವಿಷ್ಯವನ್ನು ನೆನೆಸಿಕೊಂಡರೆ ಭಯವಾಗಿ ಹೋಗುತ್ತದೆ. ಕಳೆದ ವರ್ಷದ ಅಂತ್ಯದಲ್ಲಿ ಬಂದ ಎರಡನೇ ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಅನ್ನುವುದನ್ನ ನಿಮಗೆ ಈಗಾಗಲೇ ತಿಳಿಸಲಾಗಿದೆ. ಹಾಗೆಯೇ ಈ ತೀರ್ಪು ಐತಿಹಾಸಿಕ ಅಂತ ಬಣ್ಣಿಸಿ ನಮ್ಮ ರಾಜ್ಯಸರ್ಕಾರ ಹಾಗು ಇತರೇ ರಾಜಕೀಯ ಪಕ್ಷಗಳು ಸುಮ್ಮನಾಗಿ ಹೋಗಿದ್ದವು. ತೀರ್ಪಿನ ವಿರುದ್ಧವಾಗಿ ಧ್ವನಿ ಎತ್ತಿದವರು ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ತೀರ್ಪನ್ನು ವಿಮರ್ಶಿಸುವುದಾಗಿ ಹೇಳಿಕೆ ನೀಡಿತು. ರಾಜ್ಯ ಸರ್ಕಾರದ ಈ ನಿಲುವು ಸ್ವಾಗತಾರ್ಹವೇ.

ಜನಪ್ರತಿನಿಧಿಗಳ ಸಭೆಯನ್ನು ಕರೆದ ಸರ್ಕಾರ:
ಕೃಷ್ಣಾ ನ್ಯಾಯಾಧಿಕರಣ ಆಲಮಟ್ಟಿ ಜಲಾಶಯದ ಎತ್ತರ, ರಾಜ್ಯಕ್ಕೆ ಹಂಚಿರುವ ನೀರಿನ ಪಾಲು, ಇದರ ಬಳಕೆಗೆ ಅನುಸರಿಸಬೇಕಾದ ವಿಧಾನಗಳ ಕುರಿತು ಕೃಷ್ಣಾ ಕಣಿವೆಯ 17 ಜಿಲ್ಲೆಗಳ ಜನಪ್ರತಿನಿಧಗಳ ಅಭಿಪ್ರಾಯ ಸಂಗ್ರಹಿಸಲು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಫೆಬ್ರವರಿ 14ರಂದು ಜನಪ್ರತಿನಿಧಗಳ ಸಭೆ ಕರೆದಿದ್ದರು. ಈ ಸಭೆಯ ಮತ್ತೊಂದು ಮುಖ್ಯವಾದ ಅಂಶವೇನೆಂದರೆ, ಇದರಲ್ಲಿ ಜನಪ್ರತಿನಿಧಿಗಳು ಕೇವಲ ಹಾಜರಿರದೆ ಚರ್ಚೆಯಲ್ಲಿ ಪಾಲ್ಗೊಂಡು ಜನರ ನಿಲುವನ್ನು ರೂಪಿಸುವ ಉದ್ದೇಶವನ್ನು ಹೊಂದಿತ್ತು.

ಸಭೆಗೆ ಬಾರದ ಜನಪ್ರತಿನಿಧಿಗಳು:
ರಾಜ್ಯದ ಬಹುಪಾಲು ಜಿಲ್ಲೆಗಳನ್ನು ಹಸನುಗೊಳಿಸುವ ಶಕ್ತಿ ಇರುವ ಕೃಷ್ಣಾ ನದಿಯ ತೀರ್ಪಿನಲ್ಲಿ ಸುಮಾರು 100 ಟಿಎಂಸಿ ಅಡಿ ನೀರು ಕಡಿಮೆ ಸಿಕ್ಕಿದ್ದರೂ ಈ ಭಾಗದ ಜನಪ್ರತಿನಿಧಿಗಳು ತೀರ್ಪಿನ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ರಾಜ್ಯದ ರೈತರ, ಕೃಷಿಯ ಹಾಗೂ ಜನರ ಭವಿಷ್ಯವನ್ನ ನಿರ್ಧರಿಸುವ ಇಂತಹ ಜವಾಬ್ದಾರಿಯುತ ಸಭೆಗಳಿಗೆ ಜನಪ್ರತಿನಿಧಿಗಳು ಹಾಜರಾಗದೆ ಇರುವಂತೆ ಇವರುಗಳು ಮಾಡುವ ಘನಂದಾರಿ ಕೆಲಸಗಳಾದರು ಏನು? ಇದರಲ್ಲಿ ನಾಡಿನ ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಸೇರಿದ್ದಾರೆ. ಕೆಲವೇ ಶಾಸಕರನ್ನ ಬಿಟ್ಟರೆ ಉಳಿದ ಶಾಸಕರು, ಸಚಿವರುಗಳು ಹಾಗು ಸಂಸದರು ಈ ಸಭೆ ಹಾಜರಾಗಲೇ ಇಲ್ಲ. ಆಯಾ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಬೇಕಾಗಿರುವುದು ಆಯಾ ಪ್ರದೇಶದ ಶಾಸಕರ, ಸಂಸದರ ಹಾಗೂ ಅಲ್ಲಿನ ಜನಪ್ರತಿನಿಧಿಗಳ ಕರ್ತವ್ಯ, ಅದೊಂದನ್ನು ಬಿಟ್ಟು ಅವರಿಗೆ ಬೇರೆ ಯಾವುದೇ ಕೆಲಸವಿಲ್ಲ. ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯ ಮೂಲಕ ಕರ್ನಾಟಕದ ಅಭಿವೃದ್ಧಿ ಕಾಣಬಹುದು, ಕರ್ನಾಟಕದ ಅಭಿವೃದ್ಧಿಯ ಮೂಲಕ ದೇಶದ ಅಭಿವೃದ್ಧಿಯನ್ನು ಕಾಣಬಹುದು. ಆದರೆ ಕೊಟ್ಟ ಮಾತಿನಂತೆ ನಮ್ಮ ಜನಪ್ರತಿನಿಧಿಗಳು ನಡೆದು ಕೊಳ್ಳುತ್ತಿದ್ದಾರೆಯೇ? ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆಯೇ?

ಬುಧವಾರ, ಜನವರಿ 19, 2011

ಕೃಷ್ಣಾ ನದಿ ನೀರು ಹಂಚಿಕೆ: ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾಗಿರುವ ನೀರಿನ ಬಗ್ಗೆ ಧ್ವನಿ ಎತ್ತೋಣ

2ನೇ ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಬಂದಾಗಿನಿಂದಲೂ ರಾಜ್ಯಕ್ಕೆ ಅನ್ಯಾಯವಾಗಿದೆಯೇ ಅಥವಾ ನ್ಯಾಯ ಸಿಕ್ಕಿದೆಯೇ ಅನ್ನುವ ವಾದಗಳು ಎಲ್ಲಾ ಕಡೆ ನಡೆಯುತ್ತಲಿವೆ. ಇದೇ ವಿಷಯವಾಗಿ ಜನವರಿ 14 ರಂದು ಕನ್ನಡಪ್ರಭ ದಿನಪತ್ರಿಕೆಯಲ್ಲಿ ಹಿರಿಯ ಪತ್ರಕರ್ತರಾಗಿರುವ ಶ್ರೀ ಮತ್ತೀಹಳ್ಳಿ ಮದನ ಮೋಹನ ಅವರು ಕೃಷ್ಣಾ ತೀರ್ಪಿನ ಬಗ್ಗೆ “ರಾಜ್ಯದ ಹಿತ ಕಾಪಾಡಿದ ಕೃಷ್ಣಾ ತೀರ್ಪು” ಎಂಬ ಲೇಖನದಲ್ಲಿ ತಮ್ಮ ವಿಶ್ಲೇಷಣೆ ನೀಡಿದ್ದಾರೆ. ಹಾಗೆಯೇ ಜನವರಿ 19 ರಂದು ವಿಜಯ ಕರ್ನಾಟಕದಲ್ಲಿ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರು “ಕೃಷ್ಣಾ ಐತೀರ್ಪು: ಕರ್ನಾಟಕಕ್ಕೆ ಲಾಭವಾಗಿದೆಯೇ?” ಎಂಬ ತಮ್ಮ ಲೇಖನದಲ್ಲಿ ಕೃಷ್ಣಾ ನ್ಯಾಯಾಧಿಕರಣ ತೀರ್ಪಿನ ಕುರಿತು ತಮ್ಮ ವಿಶ್ಲೇಷಣೆ ನೀಡಿದ್ದಾರೆ. ಇವರಿಬ್ಬರ ಲೇಖನದ ಸಾರಾಂಶವೆಂದರೆ ರಾಜ್ಯಕ್ಕೆ ಕೃಷ್ಣಾ ತೀರ್ಪಿನಲ್ಲಿ ಅನ್ಯಾಯ ಆಗಿಲ್ಲ ಹಾಗೂ ರಾಜ್ಯಕ್ಕೆ ಸಿಗದಿರುವ ನೀರಿನ ಬಗ್ಗೆ ಮರಗುವುದನ್ನು ಬಿಟ್ಟು, ಸಿಕ್ಕಿರುವ ನೀರನ್ನ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಇಬ್ಬರು ಲೇಖಕರು ತೀರ್ಪು ರಾಜ್ಯದ ಪರವಾಗಿದೆ ಅನ್ನುವ ವಾದದಲ್ಲಿ ಕೆಲವು ವಿಷಯಗಳಲ್ಲಿ ಜಾಣ ಮೌನ ಪ್ರದರ್ಶಿಸಿದ್ದಾರೆ. ಈ ಎರೆಡೂ ಲೇಖನಗಳಲ್ಲಿ ಮಾಜಿ ನೀರಾವರಿ ಸಚಿವ ಶ್ರೀ ಎಚ್. ಕೆ. ಪಾಟೀಲ್ ಅವರನ್ನ ಗುರಿಯಾಗಿಸಿ ಉತ್ತರ ನೀಡಿರುವುದು, ರಾಜಕೀಯ ಪ್ರೇರಿತ ಬರಹಗಳಾಗಿ ಕಾಣಿಸಿಕೊಳ್ಳುವ ಅನುಮಾನ ಮೂಡುತ್ತದೆ.

ಈ ಇಬ್ಬರು ಅಂಕಣಕಾರರು ಹೇಳುವುದೇನೆಂದರೆ ಹಿಂದೆ ಬಚಾವತ್ ಆಯೋಗ ನೀಡಿದ್ದ ತೀರ್ಪಿನಲ್ಲಿ ರಾಜ್ಯಕ್ಕೆ ಸಿಕ್ಕಿದ್ದ 734 ಟಿಎಂಸಿ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ, ಹಾಗಾಗಿ ಈಗ ನಮಗೆ ನ್ಯಾಯವಾಗಿ ಸಿಗಬೇಕಾಗಿದ್ದ 101 ಟಿಎಂಸಿ ನೀರು ಕಡಿಮೆ ಕೊಟ್ಟರೂ ಇದರ ಬಗ್ಗೆ ತಕರಾರು ಎತ್ತಬೇಕಾಗಿಲ್ಲ!!. ಈ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರಲಾಗದಿದ್ದದ್ದು, ನಮ್ಮ ರಾಜ್ಯವನ್ನು ಆಳಿರುವ ಎಲ್ಲಾ ರಾಜಕೀಯ ಪಕ್ಷದ ಸರ್ಕಾರಗಳ ವೈಫಲ್ಯ, ಅದಕ್ಕಾಗಿ ನಮಗೆ ನ್ಯಾಯವಾಗಿ ಸಿಗಬೇಕಾಗಿರುವ ನೀರು ಬಿಟ್ಟುಕೊಡುವುದು ಎಷ್ಟು ಸರಿ? ಇಲ್ಲಿ ರಾಜ್ಯ ಸರ್ಕಾರದ ಯೋಜನಾ ಅನುಷ್ಠಾನ ವೈಫಲ್ಯ ಒಂದು ಕಡೆಯಾದರೆ, ನದಿ ನೀರು ಹಂಚಿಕೆಯಲ್ಲಿ ನಮಗೆ ಸಿಗಬೇಕಾಗಿದ್ದಕ್ಕಿಂತ ಕಡಿಮೆ ನೀರು ಸಿಕ್ಕಿರುವುದು ಇನ್ನೊಂದು ಕಡೆ. ಈ ಇಬ್ಬರು ಅಂಕಣಕಾರರು ಹೇಳಿರುವಂತೆ ನಮ್ಮ ರಾಜ್ಯ ಸರ್ಕಾರ ಈ ಕೂಡಲೇ ಆದ್ಯತೆಯ ಮೇರೆಗೆ ಕೃಷ್ಣಾ ನದಿ ಯೋಜನೆಗಳನ್ನು ತ್ವರಿತವಾಗಿ ಹಾಗೂ ಜವಾಬ್ದಾರಿಯುತವಾಗಿ ಅನುಷ್ಠಾನಕ್ಕೆ ತರಬೇಕು. ಯೋಜನೆಗಳು ಅನುಷ್ಠಾನಕ್ಕೆ ಬಂದಿಲ್ಲವೆಂದ ಮಾತ್ರಕ್ಕೆ, ನಮ್ಮ ಪಾಲಿನ ನೀರನ್ನು ಬೇರೆಯವರಿಗೆ ಬಿಟ್ಟಿಕೊಡುವುದು ನಮಗೆ ನಾವೇ ಮಾಡಿಕೊಂಡ ದ್ರೋಹವಾಗುತ್ತದೆ. ಮುಂದುವರೆಯುತ್ತಾ 2ನೇ ನ್ಯಾಯಾಧಿಕರಣ ಕರ್ನಾಟಕ ತನ್ನ ಪಾಲಿಗೆ ದೊರಕಿದ್ದ 734 ಟಿಎಂಸಿ ನೀರಿನಲ್ಲಿ ರಾಜ್ಯ ಬಳಸದೇ ಉಳಿಸಿದ್ದ 230 ಟಿಎಂಸಿ ನೀರನ್ನು ಪರಿಗಣಿಸದೇ ಇದದ್ದು ರಾಜ್ಯದ ಪುಣ್ಯ, ಇಲ್ಲದಿದ್ದರೆ ರಾಜ್ಯಕ್ಕೆ ಹೆಚ್ಚುವರಿ ನೀರಿನಲ್ಲಿ ಯಾವುದೇ ಪಾಲು ಸಿಗದೇ ನಮ್ಮದೇ ನೀರು ಹೋಗುತಿತ್ತು ಎಂದು ಗುಮ್ಮ ತೋರಿಸುವ ಪ್ರಯತ್ನ ಮಾಡಿದ್ದಾರೆ. ಬಚಾವತ್ ಆಯೋಗ ಮಾಡಿದ್ದ ನದಿ ನೀರು ಹಂಚಿಕೆ ಸಮಂಜಸವಾಗಿ ಕಂಡಿದ್ದರಿಂದ ಹಾಗೂ ರಾಜ್ಯಕ್ಕೆ ನ್ಯಾಯಯುತವಾಗಿ ಆ ನೀರು ಸಿಗಬೇಕಾಗಿದ್ದರಿಂದ, 2ನೇ ನ್ಯಾಯಧಿಕರಣ ಉಳಿದ ನೀರನ್ನ ಹೆಚ್ಚುವರಿ ನೀರಿಗೆ ಸೇರಿಸಿಲ್ಲ.

ಇನ್ನೂ ಆಂಧ್ರ ಪ್ರದೇಶದಲ್ಲಿ ನೀರಾವರಿ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿಕೊಂಡಿರುವುದರಿಂದ ಹೆಚ್ಚಿನ ನೀರನ್ನ ಕೊಟ್ಟಿರುವುದು ನ್ಯಾಯವಾಗಿದೇ ಅನ್ನುವುದು ಎರೆಡೂ ಲೇಖನಗಳಲ್ಲಿ ವ್ಯಕ್ತವಾಗಿದೆ. ಆದರೆ ಆಂಧ್ರಪ್ರದೇಶ ಕೇಂದ್ರ ಸರ್ಕಾರದ ಅಥವಾ ನ್ಯಾಯಧಿಕರಣದ ಒಪ್ಪಿಗೆ ಪಡೆಯದೆ ಅಕ್ರಮವಾಗಿ ನಿರ್ಮಿಸಿರುವ 11 ಯೋಜನೆಗಳ ಬಗ್ಗೆ ಎಲ್ಲೂ ಅಪಸ್ವರ ಎತ್ತಿಲ್ಲ. ಆದರೆ ಇದೇ ಆಂಧ್ರಪ್ರದೇಶ ರಾಜ್ಯ ಸರ್ಕಾರ ನಿರ್ಮಿಸುತ್ತಿದ್ದ ಚಿಕ್ಕ ಪ್ರಮಾಣದ, ಕೇವಲ 1.3 ಟಿಎಂಸಿ ನೀರಿನ ದಂಡಾವತಿಯ ಯೋಜನೆಗೆ ಅಡ್ಡಗಾಲು ಹಾಕಿತ್ತು ಹಾಗೂ ಆಣೆಕಟ್ಟಿನ ಎತ್ತರವನ್ನು 524.26 ಮೀಟರ್ ಎತ್ತರಕ್ಕೆ ಏರಿಸುವುದನ್ನು ವಿರೋಧಿಸಿತ್ತು ಆನೋದನ್ನ ಅಂಕಣಕಾರರು ಮರೆತಿರುವಂತಿದೆ.

ಕೊನೆಯದಾಗಿ ರಾಜ್ಯಕ್ಕೆ ಸುಮಾರು 101 ಟಿಎಂಸಿ ನೀರು ಕಡಿಮೆ ಸಿಕ್ಕಿದೆ ಅನ್ನುವುದನ್ನ ಇಬ್ಬರೂ ಅಂಕಣಕಾರರು ಒಪ್ಪುತ್ತಾರೆ, ಆದರೆ ಕಳೆದುಕೊಂಡಿರುವ ನೀರಿನ ಬಗ್ಗೆ ಯೋಚಿಸದೆ ಸಿಕ್ಕಿರುವ ನೀರನ್ನು ಉಪಯೋಗಿಸಬೇಕು ಎಂದು ಹೇಳಿದ್ದಾರೆ. ಇದೇ ಅಲ್ಪತೃಪ್ತಿಯ ಆಧಾರದ ಮೇಲೆ ನಾವು 101 ಟಿಎಂಸಿ ಅಡಿಗಳಷ್ಟು ನೀರನ್ನ ಬಿಟ್ಟುಕೊಟ್ಟರೆ ತೊಂದರೆಗೊಳಗಾಗುವವರು ನಮ್ಮ ರಾಜ್ಯದ ಜನರೇ ಅಲ್ಲವೇ? ಮೂಲ ಯೋಜನೆಯ ಪ್ರಕಾರ ಕೃಷ್ಣಾ ನದಿ ನೀರಿನಿಂದ ಫಲಾನುಭವಿಗಳಾಗಲಿರುವ ಜಿಲ್ಲೆಗಳ ಸಂಖ್ಯೆ 16. ಇಷ್ಟು ಬೃಹತ್ ಪ್ರಮಾಣದ ನೀರನ್ನ ಬಿಟ್ಟುಕೊಟ್ಟರೆ ನಷ್ಟ ಅನುಭವಿಸುವವರು ನಮ್ಮ ನೆಲದ ಜನರೇ ಅನ್ನುವುದನ್ನ ಈ ಇಬ್ಬರು ಹಿರಿಯರು ಮರೆತಿದ್ದಾದರೂ ಹೇಗೆ?? ನಾಡು, ನುಡಿ ಹಾಗೂ ನಾಡಿಗರಿಗೆ ಅನ್ಯಾಯವಾದಗ, ನಮ್ಮ ನಾಡಿನ ಪ್ರಜ್ಞಾವಂತರು ನ್ಯಾಯ ದೊರಕಿಸಿಕೊಡುವವರೆಗೂ ನಾಡಿನ ಪರ ಧ್ವನಿ ಎತ್ತಬೇಕಾಗಿರುವುದು ಇಂದಿನ ಅವಶ್ಯಕತೆ ಆಗಿದೆ ಅನ್ನುವುದನ್ನ ನಾವುಗಳು ಮರೆಯಬಾರದು.

ಕೃಷ್ಣಾ ನ್ಯಾಯಾಧಿಕರಣದ ತೀರ್ಪುನ ಕುರಿತು ನನ್ನ ಅನಿಸಿಕೆಗಳನ್ನು ಇಲ್ಲಿ ನೋಡಿ

ಗುರುವಾರ, ಡಿಸೆಂಬರ್ 30, 2010

ಕೃಷ್ಣಾ ನ್ಯಾಯಾಧಿಕರಣದ ತೀರ್ಪು :: ನನ್ನ ಅನಿಸಿಕೆ


ನಾಲ್ಕು ದಶಕಗಳ ಸುಧೀರ್ಘ ಹೋರಾಟದ ನಂತರ ಕೃಷ್ಣ ನದಿ ನೀರು ಹಂಚಿಕೆಯ ತೀರ್ಪು ಹೊರಬಿದ್ದಿದೆ. ಮೇಲ್ನೋಟಕ್ಕೆ ನಮಗೆ ಸಂಪೂರ್ಣ ನ್ಯಾಯ ದಕ್ಕಿದೆ ಅಂತ ಅನ್ನಿಸಿದರೂ ಸಹ ಕೆಲವು ಪ್ರಮುಖ ವಿಷಯಗಳಲ್ಲಿ ನಮಗೆ ನ್ಯಾಯ ಸಿಕ್ಕಿಲ್ಲವೇನೋ ಅನ್ನಿಸುತ್ತದೆ. ಇದುವರೆಗೂ ಮಾಧ್ಯಮಗಳು ಹಾಗೂ ಅಂತರ್ಜಾಲದಲ್ಲಿ ದೊರಕಿರುವ ಮಾಹಿತಿಯ ಪ್ರಕಾರ,ಸ್ಕೀಮ್ ಬಿಯಲ್ಲಿ ಒಟ್ಟು ಲಭ್ಯವಿರುವ 448 ಟಿ.ಎಂ.ಸಿ ನೀರಿನ ಹಂಚಿಕೆಯ ವಿವರಗಳು ಇಂತಿದೆ: ಮಹಾರಾಷ್ಟ್ರಕ್ಕೆ 81 ಟಿ.ಎಂ.ಸಿ ಯಷ್ಟು ನೀರನ್ನು ಹಂಚಲಾಗಿದೆ, ಕರ್ನಾಟಕಕ್ಕೆ 177 ಟಿ.ಎಂ.ಸಿ ಯಷ್ಟು ನೀರನ್ನು ಹಂಚಲಾಗಿದೆ ಹಾಗೂ ಆಂಧ್ರ ಪ್ರದೇಶಕ್ಕೆ 190 ಟಿ.ಎಂ.ಸಿ ಯಷ್ಟು ನೀರನ್ನು ಹಂಚಲಾಗಿದೆ.
ಇದರ ಜೊತೆಗೆ ರಾಜ್ಯದ ದಶಕಗಳ ಬೇಡಿಕೆಯಾಗಿದ್ದ ಆಲಮಟ್ಟಿ ಆಣೆಕಟ್ಟಿನ ಎತ್ತರವನ್ನು 519 ಮೀಟರ್ ನಿಂದ 524.26 ಮೀಟರ್ ವರೆಗೆ ಏರಿಸಲು ಇದ್ದ ಅಡಚಣೆಯನ್ನು ನಿವಾರಿಸಿ ನ್ಯಾಯಾಧಿಕರಣ ಅವಕಾಶ ನೀಡಿದೆ. ಕೃಷ್ಣ ನದಿಯ ಒಟ್ಟು ನೀರು ಹಂಚಿಕೆಯಲ್ಲಿ ಕರ್ನಾಟಕದ ಪಾಲಿಗೆ 911 ಟಿ.ಎಂ.ಸಿ ನೀರು ಸಿಕ್ಕಿದೆ, ಮಹಾರಾಷ್ಟ್ರದ ಪಾಲಿಗೆ 666 ಟಿ.ಎಂ.ಸಿ ಹಾಗೂ ಆಂಧ್ರ ಪ್ರದೇಶಕ್ಕೆ 1001 ಟಿ.ಎಂ.ಸಿ ನೀರು ಸಿಕ್ಕಿದೆ. ಇದರ ಜೊತೆಗೆ ಕರ್ನಾಟಕ ಪ್ರತಿ ವರ್ಷ ಜೂನ್-ಜುಲೈ ತಿಂಗಳಿನಲ್ಲಿ 8-10 ಟಿ.ಎಂ.ಸಿ ನೀರು ಆಂಧ್ರಕ್ಕೆ ಬಿಡಬೇಕು ಎಂದು ತೀರ್ಪು ನೀಡಿದೆ. ಹಾಗದರೆ ರಾಜ್ಯಕ್ಕೆ ಅನ್ಯಾಯವಾಗಿರುವುದೆಲ್ಲಿ???

ರಾಜ್ಯಕ್ಕೆ ಅನ್ಯಾಯವಾಗಿರುವುದೆಲ್ಲಿ?
ಮೊದಲನೆಯದಾಗಿ ಬಚಾವತ್ ಆಯೋಗ ತನ್ನ ತೀರ್ಪಿನಲ್ಲಿ ಕೃಷ್ಣಾ ನದಿಯ ಕೊಳ್ಳದಲ್ಲಿ ಲಭ್ಯವಿರುವ ಹೆಚ್ಚುವರಿ ನೀರನ್ನು ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಕ್ಕೆ ಕ್ರಮವಾಗಿ 50%, 25% ಹಾಗೂ 25% ಹಂಚಬೇಕು ಎಂದು ತೀರ್ಪು ನೀಡಿತ್ತು. ಆದರೆ ಬಂದಿರುವ ತೀರ್ಪಿನಲ್ಲಿ ಕರ್ನಾಟಕಕ್ಕೆ ಬರಬೇಕಾಗಿದ್ದ 50% ನೀರಿನ ಬದಲು ಸಿಕ್ಕಿರುವುದು ಕೇವಲ 39.5% ನಷ್ಟು ಮಾತ್ರ. ಆಂಧ್ರಕ್ಕೆ ಸಿಗಬೇಕಾಗಿದ್ದ 25% ಬದಲು ಇಂದು ಸಿಕ್ಕಿರುವುದು 42.41% ಹಾಗೂ ಮಹಾರಾಷ್ಟ್ರಕ್ಕೆ ಸಿಗಬೇಕಾಗಿದ್ದ 25% ನಲ್ಲಿ ಸಿಕ್ಕಿರುವುದು ಕೇವಲ 18.08% ಮಾತ್ರ. ಕರ್ನಾಟಕ ತನ್ನ ಪಾಲಿಗೆ ಬರಬೇಕಾಗಿದ್ದ ಸುಮಾರು 100 ಟಿ.ಎಂ.ಸಿ ಯಷ್ಟು ನೀರನ್ನು ಕಳೆದುಕೊಂಡಿದೆ. ಆದರೆ ಇದರ ಬಗ್ಗೆ ಧ್ವನಿ ಎತ್ತಬೇಕಾಗಿದ್ದ ಸರ್ಕಾರ ಹಾಗೂ ನಮ್ಮ ರಾಜಕೀಯ ಪಕ್ಷಗಳು, ನಮ್ಮ ರಾಜ್ಯಕ್ಕೆ ನ್ಯಾಯಾಧಿಕರಣ ವರ ಕೊಟ್ಟಿರುವಂತೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿವೆ. ನಮ್ಮ ರಾಜಕೀಯ ನಾಯಕರು 100 ಟಿ.ಎಂ.ಸಿ ನೀರು ಬಿಟ್ಟುಕೊಟ್ಟು ಧಾರಾಳತೆ ಮೆರೆಯುತ್ತಿದ್ದಾರಾ? ಹಾಗೆ ಸುಮ್ಮನೆ ಬಿಟ್ಟು ಬಿಡುವುದಕ್ಕೆ ಅದೇನು 100 ಬಕೆಟ್ ನೀರಲ್ಲ. 100 ಟಿ.ಎಂ.ಸಿ ನೀರಿನ ಅಗಾಧತೆ ಅರಿಯಲು ಅದನ್ನ ಸರಳೀಕರಿಸಿ ನೋಡೋಣ. 23000 ಎಕರೆ ವಿಸ್ತಾರದಲ್ಲಿ ಒಂದು ಅಡಿ ನೀರು ನಿಂತರೆ ಅದು 1 ಟಿ.ಎಂ.ಸಿ ಅಡಿಗೆ ಸಮ, ಹಾಗಾಗಿ 100 ಟಿ.ಎಂ.ಸಿ ನೀರು ಎಂದರೆ 23000 ಎಕರೆ ವಿಸ್ತಾರದಲ್ಲಿ 100 ಅಡಿ ನೀರು. ಅಂದರೆ ನಮ್ಮ ಕೈತಪ್ಪಿ ಹೋಗಿರುವ ನೀರಿನ ಅಗಾಧತೆಯನ್ನು ಗಮನಿಸಿ. ಈ 100 ಟಿ.ಎಂ.ಸಿ ನೀರನ್ನ ಸುಮಾರು 3 ಜಿಲ್ಲೆಗಳಿಗೆ ವರ್ಷಪೂರ್ತಿ ನೀರನ್ನು ಒದಗಿಸಬಹುದು. ಈ ಅನ್ಯಾಯವನ್ನು ಎತ್ತಿ ತೋರಿಸಬೇಕಾಗಿದ್ದ ನಮ್ಮ ರಾಜಕೀಯ ಪಕ್ಷಗಳು ಹಾಗೂ ಸರ್ಕಾರ ತಮಗೆ ಯಾವುದೋ ನಿಧಿ ಸಿಕ್ಕಂತೆ ಖುಷಿ ಪಡುತ್ತಿವೆ.
ಆಂಧ್ರಪ್ರದೇಶ ಅಕ್ರಮವಾಗಿ ನಿರ್ಮಾಣ ಮಾಡಿರುವ ಯೋಜನೆಗಳ ಬಗ್ಗೆ ತೀರ್ಪಿನಲ್ಲಿ ಯಾವುದೇ ಪ್ರಸ್ತಾಪ ಇರುವುದರ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿಲ್ಲ.

ನಮ್ಮ ಪಾಲಿನ ನೀರನ್ನು ಆಂಧ್ರಕ್ಕೆ ಯಾಕೆ ಕೊಡಬೇಕು?
ಬಂದಿರುವ ತೀರ್ಪಿನಲ್ಲಿ ಇನ್ನೊಂದು ಮಾರಕವಾದ ಅಂಶವೆಂದರೆ ಪ್ರತಿ ವರ್ಷ ಕರ್ನಾಟಕ ಬೇಸಿಗೆಯ ಸಮಯದಲ್ಲಿ ಆಂಧ್ರಪ್ರದೇಶಕ್ಕೆ 8-10 ಟಿ.ಎಂ.ಸಿ ಯಷ್ಟು ನೀರು ಹರಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಹರಿಸಬೇಕಾಗಿರುವ ನೀರಿನ ಪ್ರಮಾಣವೇನು ಕಡಿಮೆಯದ್ದಲ್ಲ. ಬೇಸಿಗೆಯ ಸಮಯದಲ್ಲಿ ಎಲ್ಲಾ ರಾಜ್ಯಗಳು ತಮ್ಮ ಆಣೆಕಟ್ಟಿನಲ್ಲಿ ತಳಮಟ್ಟದಲ್ಲಿ ಸ್ವಲ್ಪ ನೀರನ್ನು ಮೂಲಭೂತ ಅವಶ್ಯಕತೆಗಳಿಗಾಗಿ ಶೇಖರಿಸಿಕೊಂಡಿರುತ್ತವೆ, ಇರೋ ನೀರನೆಲ್ಲಾ ಅಂಧ್ರಕ್ಕೆ ಹರಿಸಿದರೆ ನಮ್ಮ ರಾಜ್ಯದ ಜನರಿಗೆ ಕುಡಿಯಲು ನೀರು, ರೈತರಿಗೆ ತಮ್ಮ ಬೆಳಗಳಿಗೆ ನೀರು ಒದಗಿಸುವವರಾರು?

ನ್ಯಾಯಾಧಿಕರಣದ ಪ್ರಕ್ರಿಯೆ ಬಲು ನಿಧಾನ!!
ಹೌದು, ಇಂದಿನ ನ್ಯಾಯಾಧಿಕರಣಗಳ ಪ್ರಕ್ರಿಯೆಯ ವೇಗ ಅಮೆನಡಿಗೆಯಂತಿದೆ. ನ್ಯಾಯಾಧಿಕರಣದ ಈ ನಿಧಾನ ಪ್ರಕ್ರಿಯೆಯಿಂದಾಗಿ ರಾಜ್ಯಗಳು ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರಲು ದಶಕಗಳವರೆಗೆ ತೀರ್ಪಿಗಾಗಿ ಕಾಯುತ್ತಾ ಕುಳಿತಿರಬೇಕು, ಇದರಿಂದಾಗಿ ಯೋಜನೆಯ ಸಮಯ ಹಾಗೂ ಅದಕ್ಕೆ ಬೇಕಾಗಿರುವ ಸಂಪನ್ಮೂಲ ಶುರುವಾಗಿದ್ದಕ್ಕಿಂತ ನೂರು ಮಡಿ ಹೆಚ್ಚಾಗಿರುತ್ತದೆ. ಇದರ ಫಲಾನುಭವಿಗಳಾಬೇಕಾದ್ದ ಜನರು ಸಂಕಷ್ಟದಲ್ಲೇ ಇರಬೇಕಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಕಳಸಾ-ಬಂಡೂರ ಕುಡಿಯುವ ನೀರಿನ ಯೋಜನೆ, ನಮ್ಮ ಪಾಲಿಗೆ ಬರಬೇಕಾಗಿರುವ ನೀರಿನಲ್ಲಿ ಕೇವಲ 7 ಟಿ.ಎಂ.ಸಿ ಯಷ್ಟು ನೀರನ್ನು ಬಳಸಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಈಗ ಅಡ್ಡಗಾಲು ಹಾಕಿರುವ ಗೋವಾ ಸರ್ಕಾರ ಸಮಸ್ಯೆಯಲ್ಲದ ಸಮಸ್ಯೆಯನ್ನು ಬಗೆಹರಿಸಲು ನ್ಯಾಯಾಧಿಕರಣಕ್ಕೆ ಆಗ್ರಹಿಸಿದೆ, ಈ ಹುಚ್ಚುತನಕ್ಕೆ ಕೇಂದ್ರ ಸಹ ಒಪ್ಪಿಗೆ ಸೂಚಿಸಿದೆ. ಇದರಿಂದ ತೊಂದರೆಗೊಳಪಡುವ ಉತ್ತರ ಕರ್ನಾಟಕದ ಜನತೆ ಇನ್ನೂ ದಶಕಗಳವರೆಗೂ ನೀರಿಗಾಗಿ ಬಾಯಿಬಿಡುತ್ತಾ ಕುಳಿತುಕೊಳ್ಳಬೇಕು. ಪ್ರತಿಯೊಂದು ಅಂತರ್ ರಾಜ್ಯ ಸಮಸ್ಯೆಯನ್ನು ಬಗೆಹರಿಸಲು ನ್ಯಾಯಾಧಿಕರಣಗಳನ್ನು ರಚಿಸುವ ಬದಲು ದೇಶಕ್ಕೆ ಅನ್ವಯವಾಗುವಂತಹ ಒಂದು ಶಾಶ್ವತ ಜಲ ನೀತಿ ಅವಶ್ಯಕ. ಇಂಥ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಒಂದು ನಿರ್ದಿಷ್ಟ ಮಾರ್ಗಸೂಚಿ (ರಾಷ್ಟ್ರೀಯ ಜಲನೀತಿ) ಇರಬೇಕಾಗಿರುವುದು ಒಕ್ಕೂಟ ವ್ಯವಸ್ಥೆಯ ಮೂಲಭೂತ ಅವಶ್ಯಕತೆ.

ನಿಜವಾದ ಒಕ್ಕೂಟ ವ್ಯವಸ್ಥೆ ಜಾರಿಗೆ ಬರುವುದು ಯಾವಾಗ??
ಒಂದು ನಿಮಿಷದ ಮಟ್ಟಿಗೆ ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯಗಳನ್ನು ಬದಿಗಿಟ್ಟು ನೋಡೋಣ. ರಾಜ್ಯದ ಹತ್ತಿರ ಇರುವ ನೀರನ್ನ ಸರಿಯಾದ ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ತುರ್ತಾಗಿ ಜಾರಿಗೆ ತರಬೇಕು. ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಬೇಕಾಗುವ ಮೊತ್ತ ಸಾವಿರಾರೂ ಕೋಟಿ ರೂಪಾಯಿಗಳು. ಈ ಭಾರಿ ಹಣವನ್ನು ಹೊಂದಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮುಂದೆ ಕೈಯೊಡ್ಡಲೇ ಬೇಕು. ನಮ್ಮ ರಾಜ್ಯ ದೇಶದ ಅತಿ ಹೆಚ್ಚು ತೆರೆಗೆ ಕಟ್ಟುವ ರಾಜ್ಯಗಳಲ್ಲಿ ಒಂದು. ಈಗಿರುವ ಹಣಕಾಸು ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳು ಕಟ್ಟುವ ತೆರಿಗೆ ಹಣವನ್ನು ಪಡೆಯುವ ಕೇಂದ್ರ ಸರ್ಕಾರ, ಆ ಒಟ್ಟು ಹಣದಲ್ಲಿ ಒಂದು ಭಾಗವನ್ನ ಎಲ್ಲಾ ರಾಜ್ಯಗಳ ನಡುವೆ ಹಂಚುತ್ತದೆ, ಈ ವ್ಯವಸ್ಥೆಯಿಂದಾಗಿ ಹೆಚ್ಚು ಕಷ್ಟಪಟ್ಟು ದುಡಿಯುವ ರಾಜ್ಯಗಳಿಗೆ ತಾನು ನೀಡಿದ ಅನುಪಾತದಲ್ಲಿ ವಾಪಸ್ ಕೇಂದ್ರದಿಂದ ಹಣ ಬರುವುದಿಲ್ಲ. ಇನ್ನೂ ದುಖಃದ ವಿಷಯವೆಂದರೆ ಕೇಂದ್ರ ನೀಡುವ ಹಣವನ್ನು ಕೇಂದ್ರ ಸರ್ಕಾರ ಹೇಳಿದ ಯೋಜನೆಗಳಿಗೆ ಮಾತ್ರ ಉಪಯೋಗಿಸಬೇಕು ಎಂದು ತಾಕೀತು ಮಾಡುತ್ತದೆ, ಬದಲಾಗಿ ಆ ಹಣವನ್ನು ರಾಜ್ಯಗಳು ಬೇರೆ ಅವಶ್ಯಕ ಯೋಜನೆಗಳಿಗೆ ಬಳಸಿಕೊಳ್ಳಲು ಅವಕಾಶ ಕೊಡುವುದಿಲ್ಲಾ. ಹೀಗೆ ನಾವು ಕಟ್ಟುವ ತೆರಿಗೆಯ ಹಣವನ್ನು ನಮ್ಮ ರಾಜ್ಯಕ್ಕೆ ಅವಶ್ಯಕವಾದ ಯೋಜನೆಗಳಿಗೆ ಉಪಯೋಗಿಸಿಕೊಳ್ಳಲು ನಾವು ಮತ್ತಾರದೋ ಒಪ್ಪಿಗೆಗಾಗಿ ಕಾಯುವುದು ಎಲ್ಲಿಯ ಪ್ರಜಾಪ್ರಭುತ್ವ ವ್ಯವಸ್ಥೆ??? ಎಲ್ಲಿಯ ಒಕ್ಕೂಟ ವ್ಯವಸ್ಥೆ?? ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಪಾತ್ರ ಹೇಗೆ ಕಡಿಮೆಯಾಗಿರುತ್ತದೋ, ನಿಜವಾದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಪಾತ್ರ ಬಹಳ ಕಡಿಮೆ ಅಥವಾ ಬೇಕಾದಾಗ ಮಾತ್ರ ಅನ್ನುವಷ್ಟು ಇರುತ್ತದೆ. ಆದರೆ ಇವತ್ತಿನ ಪರಿಸ್ಥಿಯಲ್ಲಿ ಒಕ್ಕೂಟ ವ್ಯವಸ್ಥೆ ಕೇವಲ ಹೆಸರಿಗೆ ಮಾತ್ರ, ಅದು ಆಚರಣೆಗೆ ಇನ್ನೂ ಬಂದೇ ಇಲ್ಲಾ. ಇವತ್ತಿಗೂ ಸಹ ಎಲ್ಲಾ ಅಧಿಕಾರಗಳು ಕೇಂದ್ರ ಸರ್ಕಾರದ ಅಡಿಯಲ್ಲೇ ಕೊಳೆಯುತ್ತಾ ಬಿದ್ದಿವೆ.

ಜನ ಜಾಗೃತಿಯಿಂದ ಮಾತ್ರ ನಿಜವಾದ ಪ್ರಜಾಪ್ರಭುತ್ವ, ನಿಜವಾದ ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ನಾಡು, ದೇಶವನ್ನು ಕಟ್ಟಲು ಸಾಧ್ಯ. ಇಂಥ ವ್ಯವಸ್ಥೆ ನಮ್ಮದಾಗಲಿ ಅಂತ ಆಶಿಸುತ್ತಾ, ನ್ಯಾಯಾಧಿಕರಣದ ತೀರ್ಪಿನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯಗಳನ್ನು ನಮ್ಮ ಜನಪ್ರತಿನಿಧಿಗಳು ಮನಗಂಡು ಅದರತ್ತ ಗಮನ ಹರಿಸಿ ನಮ್ಮ ಪಾಲಿಗೆ ದಕ್ಕಬೇಕಾಗಿರುವ ನೀರನ್ನು ಪಡೆಯುವಂತಾಗಲಿ....