ರಾಜಕೀಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ರಾಜಕೀಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಮಾರ್ಚ್ 14, 2012

ತಮಿಳುನಾಡು ಜನರ ಒಗ್ಗಟ್ಟು ನೋಡಿ


ಇಂದು ಬೆಳಗ್ಗೆ ಪತ್ರಿಕೆಗಳಲ್ಲಿ ಬಂದ ಸುದ್ದಿಯೊಂದು ನನ್ನ ಗಮನ ಸೆಳೆಯಿತು. ಅದೇನೆಂದರೆ ಶ್ರೀಲಂಕಾದಲ್ಲಿರುವ ತಮಿಳರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ತಮಿಳುನಾಡಿನ ಎಲ್ಲಾ ಪಕ್ಷದ ನಾಯಕರುಗಳು ನಿನ್ನೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕೋಲಾಹಲ ಎಬ್ಬಿಸಿ, ಭಾರತ ಸರ್ಕಾರ ಈ ಕ್ರಮವನ್ನು ಖಂಡಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಮುಂದೆ ನಡೆಯಲಿರುವ ಯು.ಎನ್ ಮಾನವ ಹಕ್ಕುಗಳ ಸಮ್ಮೇಳನದಲ್ಲಿ ಶ್ರೀಲಂಕಾದ ವಿರುದ್ಧ ಮತ ಚಲಾಯಿಸಬೇಕು ಎಂದು ತಮಿಳುನಾಡಿನ ನಾಯಕರು ಭಾರತ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅವರ ಈ ಒತ್ತಾಯಕ್ಕೆ ಮಣಿದಿರುವ ಕೇಂದ್ರ ಸರ್ಕಾರ, ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವುದುದಾಗಿ ಭರವಸೆ ನೀಡಿದೆ.

ಕನ್ನಡಿಗರು ಕಲಿಯಬೇಕಿರುವ ಪಾಠ:
ಮೊದಲಿನಿಂದಲೂ ತಮಿಳುನಾಡಿನ ಸರ್ಕಾರ ತಮ್ಮ ಜನರು ಯಾವುದೇ ರಾಜ್ಯ, ದೇಶದಲ್ಲಿರಲಿ ಅವರ ಯೋಗ ಕ್ಷೇಮದ ಬಗ್ಗೆ ತೀವ್ರವಾದ ಕಾಳಜಿಯನ್ನು ತೋರಿಸುತ್ತಲೇ ಬಂದಿದೆ. ಅದು ಶ್ರೀಲಂಕಾದಲ್ಲಿರುವ ತಮಿಳರ ಬಗ್ಗೆ ಇರಬಹುದು ಅಥವಾ ಬೇರಿನ್ನಾವುದೇ ಪ್ರದೇಶದಲ್ಲಿರಬಹುದು. ತಮ್ಮ ಜನರಿಗೆ ಒಳಿತಾಗಬೇಕೆಂದರೆ ಎಲ್ಲಾ ಪಕ್ಷಗಳ ನಾಯಕರು ತಮ್ಮ ಭಿನಾಭಿಪ್ರಾಯವನ್ನು ಮರೆತು ಅವರ ಒಳಿತಿಗೆ ಟೊಂಕ ಕಟ್ಟಿ ನಿಲ್ಲುತ್ತಾರೆ.

ಆದರೆ ಇದೇ ಪರಿಸ್ಥಿತಿ ನಮ್ಮ ರಾಜ್ಯದ ನಾಯಕರುಗಳಿಂದ ನಿರೀಕ್ಷಿಸಲು ಸಾಧ್ಯವೇ? ಇವತ್ತಿನ ಮಟ್ಟಿಗೆ ಖಂಡಿತವಾಗಿಯೂ ಸಾಧ್ಯವಿಲ್ಲ. ನಮ್ಮದೇ ರಾಜ್ಯದ ನೆಲದಲ್ಲಿ ಮಹಾರಾಷ್ಟ್ರದ ನೆಲ ಅಂತ ಬರೆದಿರೋ ಬೋರ್ಡ್ ತೆಗೆಸಲು ಮೀನಾಮೇಷ ಎಣಿಸುತ್ತದೆ ನಮ್ಮ ಸರ್ಕಾರ, ಗೋವಾದಲ್ಲಿರುವ ಕನ್ನಡಿಗರ ಮೇಲೆ ದೌರ್ಜನ್ಯ ನಡೆದಾಗಿ ಎಲ್ಲಾ ಮುಗಿದ ಮೇಲೆ ತೇಪೆ ಸಾರಿಸುವ ಕೆಲಸಕ್ಕೆ ಬರುತ್ತದೆ, ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳ ಕುಡಿಯುವ ನೀರಿನ ಬವಣೆಯನ್ನು ತೀರಿಸಲು ಇರುವ ಕಳಸಾ-ಭಂಡೂರ ನಾಲಾ ಯೋಜನೆಯನ್ನು ಇನ್ನೂ ದಶಕಗಳಿಂದ ಜಾರಿಗೆ ತರದೇ ಹಾಗೆ ಮುಂದೆ ತಳ್ಳುತ್ತಿದೆ, ಇದರ ಅನುಷ್ಠಾನಕ್ಕೆ ಇರುವ ತೊಡರನ್ನು ಬಗೆಹರಿಸಲು ನಮ್ಮ ರಾಜ್ಯದ ರಾಜಕೀಯ ಪಕ್ಷಗಳು ಒಟ್ಟಾಗಿ ಎಂದು ಕೆಲಸ ಮಾಡಲೇ ಇಲ್ಲ, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡಲು ಸಿದ್ಧ ಮಾಡಲಾಗಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರದೇ ೩ ದಶಕಗಳು ಕಳೆದು ಹೋಗಿವೆ... ಹೀಗೆ ಈ ಪಟ್ಟಿ ಹನುಮಪ್ಪನ ಬಾಲದಂತೆ ದೊಡ್ಡದಿದೆ.

ಇದಕೆಲ್ಲ ಮೂಲ ಹುಡುಕ ಹೊರಟರೆ ನಮ್ಮ ರಾಜ್ಯದಲ್ಲಿರುವ ರಾಜಕೀಯ ಪಕ್ಷಗಳು, ಮುನ್ನುಗ್ಗಿ ರಾಜ್ಯಕ್ಕೆ ಯೋಜನೆಗಳನ್ನು ತರಬೇಕು ಎನ್ನುವ ಛಲದ ಕೊರತೆ, ಆ ಪಕ್ಷದಲ್ಲಿರುವ ನಾಯಕರುಗಳ ಹೈಕಮಾಂಡ್ ಗುಲಾಮಗಿರಿ, ತಮ್ಮ ರಾಜ್ಯಕ್ಕೆ ಅನ್ಯಾಯವಾದರೂ ಪರವಾಗಿಲ್ಲ ಹೈಕಮಾಂಡ್ ಹೇಳಿದಂತೆ ಕೇಳಬೇಕು ಎನ್ನುವ ಶಿಸ್ತಿನ ಪಕ್ಷಗಳು!!! ಇವುಗಳು ಎಂದಿಗೂ ನಮ್ಮ ಪಕ್ಷಗಳು ಅನ್ನಿಸಿಯೇ ಇಲ್ಲ! ಇದರ ಜೊತೆಜೊತೆಗೆ ನಮ್ಮ ಕನ್ನಡಿಗರಲ್ಲಿ ಜಾಗೃತಿಯ ಕೊರತೆ... ಇವುಗಳನ್ನೆಲ್ಲ ಒಟ್ಟಾಗಿ ಎದುರಿಸೋಕೆ ನಮ್ಮ ರಾಜ್ಯದಲ್ಲಿ ನಮ್ಮದೇ ಒಂದು ಪ್ರಾದೇಶಿಕ ಪಕ್ಷ ಬೇಕಾಗಿದೆ.

ಸೋಮವಾರ, ಸೆಪ್ಟೆಂಬರ್ 26, 2011

ಮುಖ್ಯಮಂತ್ರಿಗಳೇ ಇದು ಸರಿಯೇ?

ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾಗಿರುವ ಶ್ರೀ ಸದಾನಂದಗೌಡರು ನೆನ್ನೆ ಬೆಂಗಳೂರಿನಲ್ಲಿ ಮಲೆಯಾಳಿಗಳು ಏರ್ಪಡಿಸಿದ್ದ ಪೊನ್ನಂ ೨೦೧೧ ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಷಯ ಇಷ್ಟೇ ಇದ್ದಿದ್ದರೆ ಸಮಸ್ಯೆ ಏನು ಇರುತ್ತಿರಲಿಲ್ಲ. ಆದರೆ ಅವರು ಭಾಗವಹಿಸಿದ್ದ ಕಾರ್ಯಕ್ರಮದ ತುಂಬ ಅವರು ಮಾತನಾಡಿದ್ದು ಮಲೆಯಾಳಿಯಲ್ಲಿಯೇ ಎಂದು ಪತ್ರಿಕಾ ವರದಿಯೊಂದು ಹೇಳಿತ್ತಿದೆ!!!!
ಹಲವಾರು ದಶಕಗಳಿಂದ ನಮ್ಮ ರಾಜ್ಯದಲ್ಲಿಯೇ ವಾಸಿಸುತ್ತಿರುವ ಮಲೆಯಾಳಿಗಳು, ಕನ್ನಡವನ್ನ ಕಲಿತು ಕನ್ನಡಿಗರ ಜೊತೆ ಸಾಮರಸ್ಯದಿಂದ ಬದುಕುತ್ತಿರುವ ಹಾಗೂ ಬದಲಾವಣೆಯಲ್ಲಿ ಪಾಲ್ಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ನೀವು ಕನ್ನಡಿಗರಲ್ಲ ಎನ್ನೋ ಬಹುದೊಡ್ಡ ತಪ್ಪು ಸಂದೇಶವನ್ನು ನಮ್ಮ ಮುಖ್ಯಮಂತ್ರಿಗಳು ನೀಡುತ್ತಿರುವುದು ಸರಿಯೇ? ಭಾಷೆಯ ಮೂಲಕವೇ ಉತ್ತಮ ಸಮಾಜವನ್ನ ಕಟ್ಟಬೇಕಾಗಿರುವುದು ಇಂದಿನ ಅವಶ್ಯಕತೆ ಹಾಗೂ ಇದೇ ಸರಿಯಾದ ದಾರಿ ಕೂಡ. ಆದರೆ ಸದಾನಂದಗೌಡರ ನಡೆ ಪರಭಾಷಿಕರನ್ನು ಹೊರಗಿನವರಾಗಿಯೇ ಇಡುವ ಪ್ರಯತ್ನವಾಗಿ ಕಾಣುತ್ತಿದೆ. ತಮಗಿರುವ ಮಲೆಯಾಳಿ ಪಾಂಡಿತ್ಯವನ್ನು ಅವರು ಕೇರಳಕ್ಕೆ ಹೋದಾಗ ತೋರಿಸಿದರೆ ಅವರ ನಡೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಅದರೆ ನೆನ್ನೆಯ ಘಟನೆ ಭಾಷಾ ಅಲ್ಪಸಂಖ್ಯಾತರ ಓಲೈಕೆಯಂತೆಯೇ ಮೇಲ್ನೋಟಕ್ಕೆ ಕಾಣಿಸುತ್ತಿದೆ. ನಾಳೆ ಮತ್ಯಾವುದೋ ಭಾಷಿಕ ಸಮುದಾಯ ಅವರನ್ನ ಕಾರ್ಯಕ್ರಮಕ್ಕೆ ಅಹ್ವಾನಿಸಿದರೆ, ಅಲ್ಲೂ ಇದೇ ತರಹದ ಘಟನೆ ಪುನರಾವರ್ತನೆಯಾದರೆ? ಇಂತಹ ಹೆಜ್ಜೆಗಳು ನಾಡಿನ ಒಡಕಿಗೆ ಕಾರಣವಾಗುವದಿಲ್ಲವೇ?

ಈ ಹಿಂದೆಯು ಸಹ ಚುನಾವಣೆ ಸಮಯದಲ್ಲಿ ಬಿ.ಜೆ.ಪಿ ಪಕ್ಷ ಇಂತಹ ಭಾಷ ಅಲ್ಪಸಂಖ್ಯಾತರನ್ನು ಓಲೈಸಲು ನಡೆಸಿದ ಕಸರತ್ತುಗಳನ್ನು ಹಾಗೂ ಅದರ ವಿರುದ್ಧ ಕರವೇ ನಡೆಸಿದ್ದ ಪ್ರತಿಭಟನೆಗಳನ್ನು ನಾವುಗಳು ಕಂಡಿದ್ದೇವೆ. ಭಾಷಾ ಅಲ್ಪಸಂಖ್ಯಾತರನ್ನು ಓಟಿಗಾಗಿ ಓಲೈಸುವ ಭರದಲ್ಲಿ, ಇದರಿಂದ ನಾಡಿನ ಸಮಾಜದಲ್ಲಿ ಭಾಷೆಯ ಆಧಾರದ ಮೇಲೆ ಉಂಟಾಗುವ ಒಡಕಿನ ಬಗ್ಗೆ ನಮ್ಮ ರಾಜಕೀಯ ಪಕ್ಷಗಳು ಖಂಡಿತವಾಗಿ ಗಮನ ಹರಿಸಲೇ ಬೇಕು. ಆಯಾ ನಾಡಿನಲ್ಲಿ ಅಲ್ಲಿಯ ಭಾಷೆಗೆ ಆದ್ಯತೆ ನೀಡಬೇಕು. ಹೊರಗಿನಿಂದ ಬಂದವರು ಇಲ್ಲಿನವರಾಗಿ ಬಾಳಲು ಅವಕಾಶ ಮಾಡಿಕೊಡಬೇಕು. ಏನಂತೀರಿ?

ಶನಿವಾರ, ಜನವರಿ 15, 2011

ತಿರುವಳ್ಳುವರ್ ಜಯಂತಿ ಆಚರಣೆ ಕೇವಲ ಭಾಷಾ ಅಲ್ಪಸಂಖ್ಯಾತರ ಓಲೈಕೆ


ಸರಕಾರದ ಅನುಮತಿ ಅಥವಾ ಪಾಲಿಕೆಯ ಕೌನ್ಸಿಲ್ ನಲ್ಲಿ ತೀರ್ಮಾನಿಸದೆ ಬಿಬಿಎಂಪಿ ತಿರುವಳ್ಳವರ್ ಜಯಂತಿ ಆಚರಣೆಗೆ ಮುಂದಾಗಿರುವ ವಿಷಯ ನಾಡಿನ ಎಲ್ಲಾ ದಿನಪತ್ರಿಕೆಗಳಲ್ಲಿ ಬಂದಿರುವುದನ್ನ ನೀವುಗಳು ಗಮನಿಸಿರುತ್ತೀರಿ. ಜನವರಿ 16 ರಂದು ತಿರುವಳ್ಳವರ್ ಜಯಂತಿ ಇದೆ, ಅದನ್ನು ಬಿಬಿಎಂಪಿ ವತಿಯಿಂದ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಿಕೊಡಬೇಕೆಂದು ಕರ್ನಾಟಕ ತಮಿಳು ಫೆಡೆರೇಷನ್ ಮನವಿಯನ್ನು ಮಾಡಿದ್ದು, ಇದಕ್ಕೆ ಮಹಾನಗರ ಪಾಲಿಕೆಯ ಕೆಲವು ಸದಸ್ಯರು ದನಿಗೂಡಿಸಿರುವುದು ಕಾಣಿಸುತ್ತಿದೆ.

ಈ ತೀರ್ಮಾನದ ಹಿಂದೆ ಮುಖ್ಯವಾಗಿ ಎರಡು ಸಮಸ್ಯೆಗಳು ಕಾಣಿಸತ್ತಿವೆ. ಮೊದಲನೆಯದಾಗಿ ಕೆಲವು ತಮಿಳರ ಮೂಲಭೂತವಾದಿತನ. ಹಲವು ದಶಕಗಳಿಂದ ಇರುವ ತಮಿಳರು ಇಂದಿಗೂ ತಮ್ಮನ್ನು ತಾವು ಕನ್ನಡಿಗರೆಂದೇ ಹೇಳಿಕೊಳ್ಳುತ್ತಾರೆ. ಆದರೆ ಇದಕ್ಕೆ ಅಪವಾದವೆನ್ನುವಂತೆ ಕೆಲವು ತಮಿಳು ಸಂಘಟನೆಗಳು ತಾವು ಯಾವದೇ ಕಾರಣಕ್ಕೂ ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯುವುದಿಲ್ಲ ಹಾಗೂ ಬೇರೆಯವರು ಬೆರೆಯುವುದನ್ನು ತಡೆಯುತ್ತಿವೆ. ಇದನ್ನೇ 2009ರಲ್ಲಿ ತಿರುವಳ್ಳುವರ್ ಪ್ರತಿಮೆ ಅನುಷ್ಠಾನದ ಸಮಯದಲ್ಲಿ ನೋಡಿದ್ದು. ಈ ತಮಿಳು ಮೂಲಭೂತವಾದಿತನವನ್ನು ಪ್ರಶ್ನಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಜೈಲಿಗೆ ತಳ್ಳಿ ಪ್ರತಿಮೆ ಅನಾವರಣೆಗೆ ಸರ್ಕಾರ ದಾರಿಮಾಡಿಕೊಟ್ಟಿತು.

ಎರಡನೆಯ ಸಮಸ್ಯೆ ರಾಜಕೀಯ ಪಕ್ಷಗಳ ಓಟಿನ ರಾಜಕಾರಣ. ಈ ತೀರ್ಮಾನದ ಹಿಂದೆ ರಾಷ್ಟ್ರೀಯ ಪಕ್ಷಗಳ ಭಾಷಾ ಅಲ್ಪಸಂಖ್ಯಾತರ ಓಲೈಕೆಯೊಂದನ್ನು ಬಿಟ್ಟರೆ ಬೇರೆ ಯಾವುದೇ ಉದ್ದೇಶ ಕಾಣುತ್ತಿಲ್ಲ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 500ನೇ ಜಯಂತಿಯನ್ನು ವರ್ಷಾಂತರಗಳಿಂದ ನೆಪಗಳನ್ನು ಹೇಳುತ್ತಾ ಮೂಂದುಡುತ್ತಿರುವ ಸರ್ಕಾರ ಹಾಗೂ ಬಿಬಿಎಂಪಿ, ಈಗ ಧಿಡೀರನೆ ತಿರುವಳ್ಳವರ್ ಜಯಂತಿ ಆಚರಿಸುವುದಕ್ಕೆ ಹೊರಟಿರುವುದು ಮತಗಳ ಒಲೈಕೆ ಅಲ್ಲದೇ ಮತ್ತೇನು? ನಮ್ಮ ನಾಡಿನಲ್ಲಿರುವ ಅನೇಕ ಮಹಾನ ಚೇತನಗಳ ನೆನಪಿಗಾಗಿ ಜಯಂತಿ, ಸ್ಮಾರಕಗಳು, ಸಂಗ್ರಹಾಲಯಗಳು ಹೀಗೆ ಅನೇಕ ಕೆಲಸಗಳು ನೆನೆಗುದಿಗೆ ಬಿದ್ದಿರುವಾಗ ಈ ಮತಬ್ಯಾಂಕ್ ರಾಜಕಾರಣ, ಅಲ್ಪಸಂಖ್ಯಾತರ ಓಲೈಕೆ ಎಷ್ಟರ ಮಟ್ಟಿಗೆ ಸಮಂಜಸ? ಇಂತಹುದೇ ಕೆಲಸವನ್ನು ನಾವು ಚನ್ನೈ ಮಹಾನಗರ ಪಾಲಿಕೆ ಅಥವಾ ತಮಿಳುನಾಡು ಸರ್ಕಾರದಿಂದ ಸರ್ವಜ್ಞ ಮೂರ್ತಿಯ ಜಯಂತಿ ಆಚರಿಸುವುದನ್ನು ಕಾಣಲು ಸಾಧ್ಯವಿಲ್ಲಾ. ಅಲ್ಲವೇ????

ಬುಧವಾರ, ನವೆಂಬರ್ 10, 2010

ಕರ್ನಾಟಕದ ಊರಿನ ಹೆಸರುಗಳ ಬದಲಾವಣೆ ಯಾವಾಗ?

ನಿನ್ನೆ ಅಂದರೆ ೦೯ನೇ ನವಂಬರ್ ಅಂದು ಒರಿಸ್ಸಾ ಅಂತ ಕರೆಯಲ್ಪಡುತ್ತಿದ್ದ ರಾಜ್ಯಕ್ಕೆ ಸಂತೋಷಪಡುವ ದಿನ ಒದಗಿ ಬಂದಿದೆ, ಕಾರಣ ಅವರು ಬ್ರಿಟೀಷರು ಇಟ್ಟಿದ್ದ ಒರಿಸ್ಸಾ ಅನ್ನುವ ಬದಲು ತಮ್ಮ ರಾಜ್ಯಕ್ಕೆ ಮೂಲ ಹೆಸರಾದ ಒಡಿಶಾ ಅನ್ನುವ ಹೆಸರನ್ನು ಪಡೆದುಕೊಂಡಿದ್ದಾರೆ. ಹಾಗಯೇ ತಮ್ಮ ನಾಡಿನ ಭಾಷೆಯಾದ ಒರಿಯಾ ಅಂತ ಕರೆಯಲ್ಪಡುತ್ತಿದ್ದ ಭಾಷೆಯನ್ನ ಇನ್ನು ಮುಂದೆ ಒಡಿಯಾ ಅಂತ ಕರೆದುಕೊಳ್ಳುತ್ತಾರೆ. ಇದು ಬಹುಷಃ ಸಾಧ್ಯವಾಗಿದ್ದಕ್ಕೆ ಕಾರಣ ಅಲ್ಲಿ ಈಗ ಆಳುತ್ತಿರುವುದು ಪ್ರಾದೇಶಿಕ ಪಕ್ಷವಾದ ಬಿಜು ಜನತಾದಳದಿಂದ.

ತಮ್ಮ ರಾಜ್ಯದ ಹಾಗೂ ಭಾಷೆಯ ಅಧಿಕೃತ ಹೆಸರಿನ ಬದಲಾವಣೆಗಾಗಿ ೨೦೦೮ರಲ್ಲಿ ಪ್ರಸ್ತಾವನೆಯನ್ನ ಸಲ್ಲಿಸಿದ್ದ ಒಡಿಯಾ ಸರಕಾರ, ಲೋಕಸಭೆ ಅಧಿವೇಶನ ಮೊದಲನೇ ದಿನವೇ ಒಪ್ಪಿಗೆ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಲೋಕಸಭೆಯಲ್ಲಿ ಒಂದು ವಿಷಯ ಚರ್ಚೆಗೆ ಬರಬೇಕೆಂದರೆ, ಎಷ್ಟೋ ಮಜಲುಗಳನ್ನು, ಅಧಿಕಾರಿಗಳ ಕೈಗಳನ್ನು ದಾಟಿ ಬರಬೇಕು. ಇದನ್ನ ಸಾಧಿಸುವಲ್ಲಿ ಒಡಿಶಾ ರಾಜ್ಯದಿಂದ ಆರಿಸಿ ಬಂದಿರುವ ಸಂಸದರು ಮಹತ್ತರ ಪಾತ್ರವಹಿಸಿರುತ್ತಾರೆ. ತಮ್ಮ ಭಾಷೆಯ ಹಾಗೂ ನಾಡಿನ ಮೂಲ ಹೆಸರನ್ನು ಪಡೆದುಕೊಂಡಿರುವ ಒಡಿಶಾ ಜನರಿಗೆ ಅಭಿನಂದನೆಗಳು.

ನಮ್ಮ ನಾಡಿನ ಊರುಗಳ ಹೆಸರುಗಳು ಯಾವಾಗ ಬದಲಾಗೋದು?
ಒಡಿಶಾನಂತಹ ರಾಜ್ಯದ ಸರಕಾರ ಹಾಗೂ ಅಲ್ಲಿನ ಜನಪ್ರತಿನಿಧಿಗಳು ಒಟ್ಟಾಗಿ ತಮ್ಮ ಕೆಲಸವನ್ನ ಮಾಡಿಸಿಕೊಂಡಿದ್ದಾರೆ. ಅಲ್ಲಿನ ವಿಧಾನಸಭಾ ಸೀಟುಗಳ ಸಂಖ್ಯೆ ೧೪೭ ಹಾಗೂ ಲೋಕಸಭಾ ಸೀಟುಗಳ ಸಂಖ್ಯೆ ೨೧. ಆದರೆ ಇದಕ್ಕಿಂತ ದೊಡ್ಡದಾಗಿರುವ ನಮ್ಮ ರಾಜ್ಯದಲ್ಲಿ ಒಟ್ಟು ೨೨೪ ವಿಧಾನಸಭೆ ಸೀಟುಗಳು ಹಾಗೂ ೨೮ ಲೋಕಸಭಾ ಸೀಟುಗಳಿವೆ, ಒಡಿಶಾ ರಾಜ್ಯಕ್ಕಿಂತ ಬಲಶಾಲಿ ರಾಜ್ಯ ನಮ್ಮದು. ಆದರೂ ೨೦೦೬ರಲ್ಲಿ ಹಲವು ಊರುಗಳ ಹೆಸರುಗಳ ಬದಲಾವಣೆಗೆ ಸಲ್ಲಿಸಿದ್ದ ಪ್ರಸ್ತಾವನೆಯನ್ನ ಕೇಂದ್ರ ಸರಕಾರ ಇನ್ನೂ ಅನುಮೋದಿಸಿಲ್ಲಾ. ಬಹುಷಃ ಇದರ ಬಗ್ಗೆ ಚಕಾರ ಎತ್ತಬೇಕಾಗಿದ್ದ ನಮ್ಮ ಸಂಸದರು ಈ ವಿಷಯವನ್ನೇ ಮರೆತಂತಿದೆ. ರಾಜ್ಯ ಸರಕಾರಕ್ಕೂ ಕೂಡ ಇದರ ಬಗ್ಗೆ ಕಾಳಜಿಯಿಲ್ಲದಿರುವುದು ತಿಳಿಯುತ್ತದೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ ನಮ್ಮನ್ನು ಆಳುತ್ತಿರುವ ರಾಷ್ಟ್ರೀಯ ಪಕ್ಷಗಳಿಗೆ ನಾಡಿನ ಬಗ್ಗೆ ಕಾಳಜಿ ಇಲ್ಲಾ, ಕಾಳಜಿ ಇದ್ದ ನಾಯಕರಿದ್ದರೂ ಹೈಕಮಾಂಡ್ ಮುಂದೆ ಕೈಯುಡ್ದಿ ನಿಲ್ಲುವ ಪರಿಸ್ಥಿತಿ ಇದೆ. ಇಲ್ಲಿಂದ ಆರಿಸಿ ಹೋಗುವ ಸಂಸದರು ಸದನದಲ್ಲಿ ನಾಡಿನ ಬಗ್ಗೆ ದನಿ ಎತ್ತಿರುವುದು ವಿರಳ, ಇತ್ತೀಚಿನ ವರ್ಷಗಳಲ್ಲಿ ಇಲ್ಲ ಎನ್ನಬಹುದು. ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ನಾಡಿಗೆ ದೊರಕಬೇಕಾಗಿರುವ ಸೌಲಭ್ಯಗಳನ್ನು ಒದಗಿಸಿಕೊಡುವಷ್ಟು ಇಚ್ಚಾಶಕ್ತಿ ನಮ್ಮ ನಾಯಕರುಗಳಿಗೆ ಇಲ್ಲಾ.

ನಮ್ಮ ರಾಜ್ಯಕ್ಕೂ ಒಂದು ಪ್ರಾದೇಶಿಕ ರಾಜಕೀಯ ಪಕ್ಷ ಬೇಕು:
ನಮ್ಮ ನಾಡು-ನುಡಿ-ನಾಡಿಗರಿಗಾಗಿ ಪ್ರಾಮಾಣಿಕವಾಗಿ ದುಡಿಯುವಂತಹ ಒಂದು ರಾಜಕೀಯ ಪಕ್ಷ ನಮಗೆ ಬೇಕು, ಕಳೆದ ೬ ದಶಕಗಳಿಂದ ಇಲ್ಲಿರುವ ರಾಜಕೀಯ ಪಕ್ಷಗಳು ಇದರಲ್ಲಿ ವೈಫಲ್ಯ ಕಂಡಿವೆ, ಇದಕ್ಕೆ ಪರಿಹಾರ ನಮ್ಮ ರಾಜ್ಯಕ್ಕೆ ಒಂದು ಪ್ರಾದೇಶಿಕ ಪಕ್ಷ ಬೇಕು. ಪ್ರದೇಶಿಕ ಪಕ್ಷಗಳು ದೇಶದ ಅನೇಕ ರಾಜ್ಯಗಳಲ್ಲಿ ಆಡಳಿತ ಮಾಡುತ್ತಿದ್ದು, ತಮ್ಮ ರಾಜ್ಯಗಳ ಏಳಿಗೆಗೆ ದುಡಿಯುತ್ತಿವೆ, ಅಂತಹುದೆ ಒಂದು ರಾಜಕೀಯ ಪಕ್ಷ ಕರ್ನಾಟಕಕ್ಕೆ ಅವಶ್ಯಕತೆ ಇದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ನಾವುಗಳು ಪ್ರಾದೇಶಿಕತೆಯ ಮೂಲಕ ದೇಶದ ಅಭಿವೃದ್ಧಿಯನ್ನು ಕಾಣಬಹುದು.