ಪ್ರಾದೇಶಿಕ ಪಕ್ಷ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪ್ರಾದೇಶಿಕ ಪಕ್ಷ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಏಪ್ರಿಲ್ 5, 2012

ಕಾವೇರಿ ನದಿ ವಿವಾದ: ಒಂದು ನೋಟ

ದಕ್ಷಿಣ ಭಾರತದ ಬಹು ದೊಡ್ಡ ನದಿಯಾದ ಕಾವೇರಿಯು ಕೊಡಗು ಜಿಲ್ಲೆಯ ಮಡಿಕೇರಿ ಸಮೀಪ ಸಮುದ್ರ ಮಟ್ಟದಿಂದ ಸುಮಾರು ೧೩೪೧ ಮೀ ಎತ್ತರದಲ್ಲಿ ಪಶ್ಚಿಮ ಘಟ್ಟದಲ್ಲಿ ಉಗಮಿಸಿ, ಪೂರ್ವಾಭಿಮುಖಿಯಾಗಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಕರ್ನಾಟಕದಲ್ಲಿ ಕಾವೇರಿಗೆ ಸೇರಿಕೊಳ್ಳುವ ಪ್ರಮುಖ ಉಪನದಿಗಳು ಹೀಗಿವೆ: ಕಬಿನಿ, ಹಾರಂಗಿ, ಕಕ್ಕಬೆ, ಕದಮುರ್, ಕಮ್ಮನಹೊಳೆ, ಹೇಮಾವತಿ, ಲಕ್ಷ್ಮಣತೀರ್ಥ, ಸುವರ್ಣವತಿ, ಶಿಂಷಾ ಹಾಗು ಅರ್ಕಾವತಿ. ಕಾವೇರಿ ನದಿಯು ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಸುಮಾರು ೬೪ ಕಿ.ಮೀ ಗಳಷ್ಟು ಉದ್ದ ಗಡಿಯಾಗಿ ರೂಪಗೊಳ್ಳುತ್ತದೆ. ಇದಾದ ನಂತರ ಹೊಗೇನಕಲ್ ಜಲಪಾತದಲ್ಲಿ ನದಿಯು ತನ್ನ ಪಾತ್ರವನ್ನು ದಕ್ಷಿಣಕ್ಕೆ ತಿರುಗಿಸಿ ತಮಿಳುನಾಡಿನ ಮೆಟ್ಟೂರು ಜಲಾಶಯವನ್ನು ಸೇರುತ್ತದೆ.

ಚಿತ್ರ ಕೃಪೆ: ರೆಡ್ಡಿಫ್ ತಾಣ

ಕಾವೇರಿ ನದಿಯು ಹುಟ್ಟಿ ಸಮುದ್ರ ಸೇರುವವರೆಗಿನ ಅದರ ಒಟ್ಟು ಉದ್ದದ ರಾಜ್ಯವಾರು ಹಂಚಿಕೆಯು ಕರ್ನಾಟಕ ರಾಜ್ಯದಲ್ಲಿ ಸುಮಾರು ೩೨೦ ಕಿ.ಮೀ, ತಮಿಳುನಾಡಿನಲ್ಲಿ ೪೧೬ ಕಿ.ಮೀ ನಷ್ಟಿದ್ದು ಉಳಿದ ೬೪ ಕಿ.ಮೀ ಎರೆಡು ರಾಜ್ಯಗಳ ನಡುವೆ ಗಡಿಯನ್ನು ರೂಪಿಸುತ್ತದೆ. ಕಾವೇರಿಯ ಒಟ್ಟು ಜಲಾನಯನ ಪ್ರದೇಶ ೮೧,೧೫೫ ಚ.ಕಿ.ಮೀ ಗಳಾಗಿದ್ದು ವಿವಿಧ ರಾಜ್ಯಗಳ ಪಾಲು ಈ ರೀತಿ ಇದೆ:
ರಾಜ್ಯ
ಜಲಾನಯನ ಪ್ರದೇಶ ಚ.ಕಿ.ಮೀ ಗಳಲ್ಲಿ
ಕರ್ನಾಟಕ
೩೪,೨೭೩
ಕೇರಳ
೨,೮೬೬
ತಮಿಳುನಾಡು
೪೪,೦೧೬

1892 ಹಾಗೂ 1924 ಮದ್ರಾಸ್ – ಮೈಸೂರು ಒಪ್ಪಂದಗಳು:

1982 ರ ಮದ್ರಾಸ್ – ಮೈಸೂರು ಒಪ್ಪಂದದ ಮುಖ್ಯ ಅಂಶವೆಂದರೆ ಅಂದಿನ ಮೈಸೂರು ರಾಜ್ಯ ಸರ್ಕಾರ ಕಾವೇರಿ ನದಿ ಪಾತ್ರದಲ್ಲಿ ಹರಿಯುವ ಪ್ರಮುಖ ನದಿಗಳಲ್ಲಿ ಮೈಸೂರು ಸರ್ಕಾರವು ಈಗ ಅಸ್ತಿತ್ವದಲ್ಲಿರುವ ಕಾಮಗಾರಿಗಳನ್ನು ಹೊರತು ಪಡಿಸಿ ಹೊಸ ನೀರಾವರಿ ಜಲಾಶಯಗಳನ್ನು ನಿರ್ಮಿಸತಕ್ಕದ್ದಲ್ಲ. ಒಂದು ವೇಳೆ ನಿರ್ಮಿಸಬೇಕಾದ ಸಂಧರ್ಭದಲ್ಲಿ ಕಾಮಗಾರಿಯ ಪೂರ್ಣ ಮಾಹಿತಿಯನ್ನು ಮದ್ರಾಸ್ ಸರ್ಕಾರಕ್ಕೆ ಕಳುಹಿಸಬೇಕು. ಮದ್ರಾಸ್ ಸರ್ಕಾರ ಒಪ್ಪಿಗೆ ಪಡೆದು ಹೊಸ ಜಲಾಶಯಗಳನ್ನು ಮೈಸೂರು ರಾಜ್ಯ ನಿರ್ಮಿಸಬೇಕು.

1910ರಲ್ಲಿ ಮೈಸೂರು ಸರ್ಕಾರವು ಕನ್ನಂಬಾಡಿಯಲ್ಲಿ ಕಾವೇರಿ ನದಿ ಮೇಲೆ ಜಲಾಶಯವನ್ನು ನಿರ್ಮಿಸುವ ಪ್ರಸ್ತಾವವನ್ನು ರೂಪಿಸಿ 1892ರ ಒಪ್ಪಂದದ ಅನ್ವಯ ಮದ್ರಾಸ್ ಸರ್ಕಾರದ ಒಪ್ಪಿಗೆಯನ್ನು ಕೋರಿತು. ಆದರೆ ಈ ಯೋಜನೆಗೆ ಮದ್ರಾಸ್ ರಾಜ್ಯವು ಒಪ್ಪಿಗೆ ನೀಡಲಿಲ್ಲ. ಪಟ್ಟು ಬಿಡದ ಮೈಸೂರು ರಾಜ್ಯ, ಆಣೆಕಟ್ಟಿನ ಅವಶ್ಯಕತೆಯನ್ನು ಮನವರಿಕೆ ಮಾಡಿದ ಮೇಲೆ, ನ್ಯಾಯಾಧಿಶರ ಮಧ್ಯಸ್ತಿಕೆಯಲ್ಲಿ ಮೈಸೂರು ಹಾಗೂ ಮದ್ರಾಸ್ ಸರ್ಕಾರಗಳ ನಡುವೆ ಮತ್ತೊಂದು ಒಪ್ಪಂದಕ್ಕೆ ದಿನಾಂಕ 18ನೇ ಫೆಬ್ರವರಿ 1924 ರಂದು ಸಹಿ ಹಾಕಲಾಯಿತು. ಈ ಆದೇಶದ ಪ್ರಕಾರ ಮೈಸೂರು ಸರ್ಕಾರ ಆಣೆಕಟ್ಟು ನಿರ್ಮಿಸಲು ಮದ್ರಾಸ್ ಸರ್ಕಾರ ಒಪ್ಪಿತು ಹಾಗೂ ಈ ಆಣೆಕಟ್ಟಿನ ಮೂಲಕ ಜೂನ್ – ಜನವರಿ ತಿಂಗಳವರೆಗೂ ಬಿಡುಗಡೆ ಮಾಡಬೇಕಾಗಿರುವ ನೀರಿನ ಮೊತ್ತವನ್ನು ಸೂಚಿಸಲಾಯಿತು.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಮದ್ರಾಸ್ ಪ್ರಾಂತ್ಯವು ಬ್ರಿಟಿಷರ ಆಳ್ವಿಕೆಯಲ್ಲಿದ್ದ ಕಾರಣ, ಅವರಿಗೆ ಅನುಕೂಲ ಆಗುವ ಹಾಗೆ ಯೋಜನೆಗಳು ಹಾಗೂ ನೀರಿನ ಹಂಚಿಕೆ ಮಾಡಲಾಯಿತು. ಮೈಸೂರು ಸರ್ಕಾರವು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಹಚ್ಚಿನ ವಿರೋಧ ತೋರಿಸುವ ಶಕ್ತಿಯನ್ನು ಹೊಂದಿರಲಿಲ್ಲ.

1956ರಲ್ಲಿ ರಾಜ್ಯಗಳು ಪುನರ್ ವಿಂಗಡಣೆಯಾದಾಗ ಕರ್ನಾಟಕ ಸರ್ಕಾರವು ಕಾವೇರಿ ನದಿಯ ಉಪನದಿಗಳಾದ ಕಬಿನಿ, ಹೇಮಾವತಿ, ಹಾರಂಗಿ ಹಾಗೂ ಸುವರ್ಣಾವತಿ ಜಲಾಶಯ ಯೋಜನೆಗಳನ್ನು ಪ್ರಾರಂಭಿಸಿದಾಗ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿತು. ಸ್ವಾಂತಂತ್ರ್ಯ ಪೂರ್ವ ಮಾಡಿಕೊಂಡಿರುವ ಒಪ್ಪಂದಕ್ಕೆ ವಿರುದ್ಧವಾಗಿದೆ ಅನ್ನೋ ಕಾರಣಕ್ಕೆ ತಮಿಳುನಾಡು ವಿರೋಧ ವ್ಯಕ್ತಪಡಿಸಿತು.  ಸ್ವಾಂತಂತ್ರ್ಯದ ನಂತರ ಮತ್ತೊಮ್ಮೆ ವೈಜ್ಞಾನಿಕವಾಗಿ ಎರಡು ರಾಜ್ಯಗಳಿಗೆ ಒಪ್ಪಿಗೆಯಾಗುವಂತೆ ನದಿ ನೀರು ಹಂಚಿಕೆಯಾಗಬೇಕಾಗಿತ್ತು. ಆದ್ರೆ ಇದರ ಬಗ್ಗೆ ನಮ್ಮ ಕೇಂದ್ರ ಸರ್ಕಾರ ತಲೆಕೆಡಿಸಿಕೊಳ್ಳಲ್ಲಿಲ್ಲ.

ಗಮನಿಸಬೇಕಾದ ಅಂಶವೆಂದರೆ ಕಾವೇರಿ ನದಿಪಾತ್ರದಲ್ಲಿ ವಿವಿಧ ರಾಜ್ಯಗಳ ನದಿ ನೀರಿನ ಬಳಕೆಯನ್ನು ತಿಳಿಯಲು ಕೇಂದ್ರ ಸರ್ಕಾರ 1972ರಲ್ಲಿ ಕಾವೇರಿ ಸತ್ಯಶೋಧನಾ ಸಮಿತಿಯನ್ನು ಸ್ಥಾಪಿಸಿತು. ತನ್ನ ವರದಿಯನ್ನು ಸಲ್ಲಿಸಿದಾಗ ತಮಿಳುನಾಡಿನಲ್ಲಿ ನೀರಾವರಿಗೊಳಪಟ್ಟ ಪ್ರದೇಶ ಸುಮಾರು 1,440,000 ಎಕರೆಗಳಿಂದ 2,580,000 ಎಕರೆಗಳಿಗೆ ಹೆಚ್ಚಿಗೆಯಾಗಿತ್ತು. ಆದರೆ ಕರ್ನಾಟಕದಲ್ಲಿ ನೀರಾವರಿಗೊಳಪಟ್ಟ ಪ್ರದೇಶ 6,80,000 ಎಕರೆಗಳಷ್ಟಿತ್ತು. ತಮಿಳುನಾಡು ಸರ್ಕಾರ ಅದರ ಇಚ್ಚೆಯಂತೆ ಆಗಿದ್ದ ಸ್ವಾತಂತ್ರ್ಯಪೂರ್ವ ನಿಯಮಗಳನ್ನು ಮೀರಿತ್ತು.

ಕರ್ನಾಟಕ ಸರ್ಕಾರ ಕೈಗೊಳ್ಳುತ್ತಿರುವ ಯೋಜನೆಯಿಂದ ತಮಗೆ ಅನ್ಯಾಯವಾಗುತ್ತಿದೆ ಎಂದು ತಮಿಳುನಾಡಿನ ರೈತರು  ಅಂತರ್ ರಾಜ್ಯ ಜಲ ವಿವಾದ ಅಧಿನಿಯಮ, 1956 ರ ಪ್ರಕರ ನ್ಯಾಯ ಮಂಡಳಿ ರಚಿಸಬೇಕು ಎಂದು ಕೇಳಿ ಸುಪ್ರೀಂ ಕೋರ್ಟ್ ಮೊರೆಹೋದರು. ಇದರ ಪ್ರಕರವಾಗಿ ಸುಪ್ರೀಂ ಕೋರ್ಟ್ 4ನೇ ಮೇ 1990 ರಂದು ಜಲವಿವಾದ ನ್ಯಾಯ ನಿರ್ಣಯಕ್ಕಾಗಿ ಒಂದು ಸೂಕ್ತ ನ್ಯಾಯಮಂಡಳಿ ರಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತು.

ನ್ಯಾಯಮಂಡಳಿ ರಚನೆ ಹಾಗೂ ಕರ್ನಾಟಕದ ಪಾಲಿಗೆ ಶಾಪ:

ಚಿತ್ತತೋಷ್ ಮುಖರ್ಜಿ ಅವರ ನೇತ್ರತ್ವದಲ್ಲಿ ರಚನೆಯಾದ ನ್ಯಾಯಮಂಡಳಿ 2 ಜೂನ್ 1990  ರಂದು ತನ್ನ ಕಾರ್ಯ ಆರಂಭಿಸಿತು. ನ್ಯಾಯಮಂಡಳಿಯ ಮುಂದೆ ಕೆಳಕಂಡ ರಾಜ್ಯಗಳು ಈ ರೀತಿ ಬೇಡಿಕೆ ಇಟ್ಟವು
  • ಕರ್ನಾಟಕ ತನಗೆ 465 ಟಿಎಂಸಿ ನೀರು ಬೇಕು ಎಂದು ಹೇಳಿತು
  • ಕೇರಳ ತನಗೆ 99.8 ಟಿಎಂಸಿ ನೀರು ಬೇಕು ಎಂದು ಹೇಳಿತು
  • ಪಾಂಡಿಚೇರಿ ತನಗೆ 9.3 ಟಿಎಂಸಿ ಬೇಕು ಎಂದು ಹೇಳಿತು
  • ಆದ್ರೆ ತಮಿಳುನಾಡು ಮಾತ್ರ ಈ ಹಿಂದಿನಂತೆ ಇದ್ದ ಒಪ್ಪಂದದಂತೆ ತನಗೆ ಹಾಗೂ ಪಾಂಡಿಚೇರಿಗೆ 566 ಟಿಎಂಸಿ, 177 ಟಿಎಂಸಿ ಕರ್ನಾಟಕಕ್ಕೆ ಹಾಗೂ 5 ಟಿಎಂಸಿ ಕೇರಳಕ್ಕೆ ನೀಡಬೇಕು ಎಂದು ಕೇಳಿತು

ಇದಾದ ನಂತರ ತಮಿಳುನಾಡು ಸರ್ಕಾರ ನ್ಯಾಯಮಂಡಳಿಯ ಮುಂದೆ ಈ ಕೂಡಲೇ ಮಧ್ಯಂತರವಾಗಿ ತನಗೆ ನೀರು ಬಿಡಲು ಕಾರ್ಯಸೂಚಿ ರೂಪಿಸಬೇಕು ಎಂದು ನ್ಯಾಯಮಂಡಳಿಯ ಮುಂದೆ ಹೋಯಿತು. ಆಗ ಕಳೆದ ಹತ್ತು ವರ್ಷಗಳ ಮಾಹಿತಿಯನ್ನು ಕಲೆಹಾಕಿದ ನ್ಯಾಯಮಂಡಳಿ ತಮಿಳುನಾಡಿಗೆ ಪ್ರತಿ ವರ್ಷ 205 ಟಿಎಂಸಿ ನೀರು ಬಿಡಬೇಕು ಹಾಗೂ ಕರ್ನಾಟಕ ತನ್ನ ನೀರಾವರಿ ಪ್ರದೇಶವನ್ನು 1,120,000 ಎಕರೆಗಿಂತ ಹೆಚ್ಚಿಗೆ ಮಾಡಿಕೊಳ್ಳಬಾರದು ಎಂದು ಆದೇಶ ನೀಡಿತು. ಇದರಿಂದ ಕೋಪಗೊಂಡ ಕರ್ನಾಟಕದ ಇದಕ್ಕೆ ತಮಗೆ ಒಪ್ಪಿಗೆಯಿಲ್ಲ, ಅಂತಿಮ ತೀರ್ಪು ನೀಡಿ ಎಂದು ನ್ಯಾಯಮಂಡಳಿಯ ಮುಂದೆ ಹೇಳಿತು. ಆದರೆ ತಮಿಳುನಾಡು ಸರ್ಕಾರ ರಾಷ್ಟ್ರಪತಿಗಳ ಮೂಲಕ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಹೇಳಿಸಿ, ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ಈ ತೀರ್ಪನ್ನು ಒಪ್ಪಿಕೊಳ್ಳಬೇಕಾಯಿತು ಹಾಗೂ ಈ ಮಧ್ಯಂತರ ಅದೇಶವನ್ನು ಕೇಂದ್ರ ಸರ್ಕಾರದ ಗೆಜೆಟ್ ನಲ್ಲಿ ದಾಖಲಾಗುವಂತೆ ತಮಿಳುನಾಡು ಸರ್ಕಾರ ನೋಡಿಕೊಂಡಿತು.
ಇದರಿಂದ ಸಿಟ್ಟಿಗೆದ್ದ ಕರ್ನಾಟಕದ ಜನತೆ ರಾಜ್ಯಾದ್ಯಂತ ತೀರ್ಪಿನ ವಿರುದ್ಧ ಹೋರಾಟಗಳನ್ನು ಶುರು ಮಾಡಿದರು. ಇದೇ ರೀತಿ ತಮಿಳುನಾಡಿನಲ್ಲೂ ದಂಗೆಗಳು ಶುರುವಾದವು. ತಿಂಗಳುಗಳ ಕಾಲ ಬೆಂಗಳೂರಿನಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

1995-1996 ರಲ್ಲಿ ಕರ್ನಾಟಕದಲ್ಲಿ ಮಳೆಯ ಅಭಾವ ಕಾಣಿಸಿದ್ದರಿಂದ ತಮಿಳುನಾಡಿಗೆ ಮಧ್ಯಂತರ ಆದೇಶದಂತೆ ನೀರು ಹರಿಸಲು ಸಾಧ್ಯವಾಗಿರಲಿಲ್ಲ. ಇದು ಗೊತ್ತಿದ್ದರೂ ಸಹ ತಮಿಳುನಾಡು ಮಧ್ಯಂತರ ಆದೇಶದಂತೆ ಕರ್ನಾಟಕ ತನಗೆ ನೀರು ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಮುಂದೆ ಹೋಯಿತು. ಆದರೆ ಇದನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್ ನ್ಯಾಯಮಂಡಳಿಗೆ ಈ ಕೇಸನ್ನು ವರ್ಗಾಯಿಸುತು. ಅಲ್ಲಿ ತನ್ನ ಪ್ರಭಾವ ಬೀರಿದ ತಮಿಳುನಾಡು 11 ಟಿಎಂಸಿ ನೀರನ್ನು ಬಿಡಲು ಆದೇಶ ನೀಡಿತು. ಆ ಕಾಲದಲ್ಲಿ ಅದು ಕರ್ನಾಟಕದ ಪಾಲಿಗೆ ಅಸಾಧ್ಯವಾಗಿತ್ತು. ನಂತರ ಪ್ರಧಾನ ಮಂತ್ರಿಗಳ ಮಧ್ಯಸ್ತಿಕೆಯಲ್ಲಿ 6 ಟಿಎಂಸಿ ನೀರನ್ನು ಪಡೆಯುವಲ್ಲಿ ತಮಿಳುನಾಡು ಸಫಲವಾಯಿತು.

ಸಿ.ಆರ್. ಎಂಬ ಒಕ್ಕೂಟ ವಿರೋಧಿ ಮಂಡಳಿ

1997 ರಲ್ಲಿ ಕೇಂದ್ರ ಸರ್ಕಾರವು ಮಧ್ಯಂತರ ಆದೇಶವನ್ನು ಸಮರ್ಪಕವಾಗಿ ಜಾರಿಗೆ ತರಲು ಸಿ.ಆರ್.ಎ ಎಂಬ ಮಂಡಳಿಯೊಂದನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಎರಡು ರಾಜ್ಯಗಳ ಮುಂದೆ ಇಟ್ಟಿತು. ಇದರ ಅನ್ವಯ ಈ ಮಂಡಳಿಗೆ ಮದ್ಯಂತರ ಆದೇಶವನ್ನು ಜಾರಿಗೆ ತರಲು ಆಣೆಕಟ್ಟುಗಳನ್ನು ತನ್ನ ವಶಕ್ಕೆ ತಗೆದುಕೊಳ್ಳುವ ಹಕ್ಕನ್ನು ನೀಡಿತ್ತು. ಆದರೆ ಕರ್ನಾಟಕ ಸರ್ಕಾರ ಇಂತಹ ಒಕ್ಕೂಟ ವಿರೋಧಿ ಮಂಡಳಿಯನ್ನು ಸಾರಸಗಟಾಗಿ ತಿರಸ್ಕರಿಸಿತು. ಇದಾದ ನಂತರ ಕೇಂದ್ರ ಇಂತಹ ಅವೈಜ್ಞಾನಿಕ ಹಕ್ಕುಗಳನ್ನು ತಗೆದು ಹಾಕಿ ಕೊನೆಗೆ ಕಾವೇರಿ ರಿವರ್ ಅಥಾರಿಟಿ ಹಾಗೂ ಕಾವೇರಿ ಮಾನಿಟರಿಂಗ್ ಕಮಿಟಿಯಂಬ ಎರೆಡು ಸಮಿತಿಗಳನ್ನು ಸ್ಥಾಪಿಸಿತು.

2002ರಲ್ಲಿ ಕಾವೇರಿದ ಕಾವೇರಿ ಹೋರಾಟ

2002ರಲ್ಲಿ ಹಿಂದೆ 1995ರಲ್ಲಿ ಕಾಣಿಸಿಕೊಂಡ ಬರಗಾಲದ ಪರಿಸ್ಥಿತಿ ಮತ್ತೊಮೆ ಎದುರಾಯಿತು. ರಾಜ್ಯದ ಯಾವುದೇ ಜಲಾಶಯದಲ್ಲೂ ತನ್ನ ಬಳಕೆಗೆ ಬೇಕಾಗುವಷ್ಟು ನೀರು ಸಹ ಇರಲಿಲ್ಲ ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡು ಸರ್ಕಾರ ತನ್ನ ಜನರಿಗಾಗಿ ನೀರನ್ನು ಬಿಡುವಂತೆ ಆಗ್ರಹಿಸಿ ನ್ಯಾಯಮಂಡಳಿಯ ಮುಂದೆ ಹೋಯಿತು. ಆದರೆ ನ್ಯಾಯಮಂಡಳಿ ತನ್ನ ಮಧ್ಯಂತರ ತೀರ್ಪಿನಲ್ಲಿ ಬರಗಾಲದ ಪರಿಸ್ಥಿತಿಯಲ್ಲಿರಬೇಕಾದ ಹಂಚಿಕೆ ಸೂತ್ರವನ್ನು ಹೇಳಿರಲಿಲ್ಲ. ಹಾಗಾಗಿ ತಮಿಳುನಾಡು ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಯಿತು. ಈ ಸಾರಿ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಕಾವೇರಿ ರಿವರ್ ಅಥಾರಿಟಿ ಬದಲಾವಣೆ ಮಾಡುವ ತನಕ ಪ್ರತಿ ದಿನ 1.25 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಹೇಳಿತು. ಸರ್ಕಾರ ಇದೇ ಹೊತ್ತಿನಲ್ಲಿ ಸಿ.ಆರ್.ಎ ಮತ್ತೊಂದು ಸಭೆಯನ್ನು ಕರೆಯಬೇಕು ಎಂದು ಹೇಳಿತು. ಸಿ.ಆರ್.ಎ ಪ್ರಕಾರ ಕರ್ನಾಟಕ ಪ್ರತಿದಿನ ತಮಿಳುನಾಡಿಗೆ 0.8 ಟಿಎಂಸಿ ನೀರನ್ನು ಬಿಡಬೇಕು ಎಂದು ಹೇಳಿತು.

ಆದರೆ ಅದಾಗಲೇ ಕರ್ನಾಟಕದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ ಕರ್ನಾಟಕದಲ್ಲಿ ಮತ್ತೊಮ್ಮೆ ದೊಡ್ಡ ಹೋರಾಟ ಶುರುವಾಯಿತು. ಜನರ ಹೋರಾಟಕ್ಕೆ ಮಣಿದ ಸರ್ಕಾರ ತಮಿಳುನಾಡಿಗೆ ಬಿಡುತ್ತಿದ್ದ ನೀರನ್ನು ನಿಲ್ಲಿಸಿತು. ಆದರೆ ಕೆಲವೇ ದಿನಗಳಲ್ಲಿ ಮತ್ತೆ ನೀರು ಬಿಡಲು ಶುರುಮಾಡಿದಾಗ ಕರ್ನಾಟಕದ ರೈತರೊಬ್ಬರು ಸೆಪ್ಟಂಬರ್ 18ರಂದು ನದಿಗೆ ಹಾರಿ ಪ್ರಾಣ ಬಿಟ್ಟರು. ಇದರಿಂದಾಗಿ ಪರಿಸ್ಥಿತಿ ಇನ್ನೂ ಕೆಟ್ಟಿತು. ಕಾವೇರಿ ನದಿ ಪಾತ್ರದ ಜಿಲ್ಲೆಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆದರೂ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕರ್ನಾಟಕ ಸರ್ಕಾರ ನೀರು ಬಿಡಲು ಒಪ್ಪಲಿಲ್ಲ. ಇದಕ್ಕೆ ಪ್ರತಿಯಾಗಿ ತಮಿಳುನಾಡು ಮತ್ತೆ ಕೋರ್ಟ್ ಮೆಟ್ಟಿಲೇರಿತು. ನಂತರ ಈ ಸಂಬಂಧ ಕರ್ನಾಟಕ ಸರ್ಕಾರ ಕೋರ್ಟ್ ಆದೇಶ ಪಾಲಿಸದಿರುವ ಸಲುವಾಗಿ ಕೋರ್ಟ್ ಮುಂದೆ ಬೇಷರತ್ ಕ್ಷಮೆ ಯಾಚಿಸಿತ್ತು.

2007ರಲ್ಲಿ ಬಂದ ನ್ಯಾಯಮಂಡಳಿಯ ಅನ್ಯಾಯದ ತೀರ್ಪು

ಫೆಬ್ರವರಿ 5 2007 ರಲ್ಲಿ ಕಾವೇರಿ ನ್ಯಾಯಮಂಡಳಿಯು ತನ್ನ ತೀರ್ಪನ್ನು ಪ್ರಕಟಿಸಿತು. ತೀರ್ಪಿನ ಪ್ರಕಾರ ತಮಿಳುನಾಡಿಗೆ 419 ಟಿಎಂಸಿ ನೀರು, ಕರ್ನಾಟಕಕ್ಕೆ 270ಟಿಎಂಸಿ ನೀರು, ಪ್ರತಿ ವರ್ಷ ಕರ್ನಾಟಕ ತಮಿಳುನಾಡಿಗೆ 192 ಟಿಎಂಸಿ ನೀರನ್ನು ಹರಿಸಬೇಕು ಎಂದು ಆದೇಶ ನೀಡಿತ್ತು. ಕೇರಳ ರಾಜ್ಯಕ್ಕೆ 30 ಟಿಎಂಸಿ ಹಾಗೂ ಪಾಂಡಿಚೇರಿ ಗೆ 7 ಟಿಎಂಸಿ ನೀರನ್ನು ನ್ಯಾಯ ಮಂಡಳಿ ತನ್ನ ತೀರ್ಪಿನಲ್ಲಿ ಹಂಚಿಕೆ ಮಾಡಿತ್ತು. ತೀರ್ಪನ್ನು ತಮಿಳುನಾಡು ಸ್ವಾಗತಿಸಿದರೆ ಕರ್ನಾಟಕ ಸರ್ಕಾರ ತೀರ್ಪನ್ನು ವಿರೋಧಿಸಿ ನ್ಯಾಯಮಂಡಳಿಯ ಮುಂದೆ ಮೇಲ್ಮನವಿ ಸಲ್ಲಿಸಿತು. ಈ ತೀರ್ಪನ್ನು ನೀಡುವಾಗ ತಮಿಳುನಾಡು ಸರ್ಕಾರ ತನ್ನ ಪ್ರಭಾವವನ್ನು ನ್ಯಾಯಮಂಡಳಿಯ ಮೇಲೆ ಬೀರುರುವ ಶಂಕೆ ಉಂಟಾಗುತ್ತದೆ. ಕಾರಣ:
  • ಮೊದಲಿನಿಂದಲೂ ಕರ್ನಾಟಕದಲ್ಲಿ ನೀರಾವರಿಗೆ ನೀರು ದೊರಕದಂತೆ ಮಾಡಿ ತನ್ನ ನೀರಾವರಿ ಪ್ರದೇಶವನ್ನು ಹೆಚ್ಚಿಸಿಕೊಂಡ ತಮಿಳುನಾಡು ನಂತರ ಅದು ತನಗೆ ಹೆಚ್ಚಿನ ಪಾಲಿನ ನೀರು ಬರಬೇಕಿರುವುದು ತನ್ನ ಹಕ್ಕು ಎನ್ನುವಂತೆ ನ್ಯಾಯಧಿಕರಣದ ಮುಂದೆ ವಾದ ಮಾಡಿ ಹೆಚ್ಚಿನ ಪಾಲನ್ನು ಪಡೆಯಿತು.
  • ಕರ್ನಾಟಕ ಹಾಗೂ ತಮಿಳುನಾಡಿನ ನಡುವ ಹರಿದ ನೀರನ್ನು ಮಾಪನ ಮಾಡಲು ಮೆಟ್ಟೂರಿನಲ್ಲಿ ಅಳೆಯಲಾಗುತ್ತಿತ್ತು, ಆದರೆ ಈ ತೀರ್ಪಿನಲ್ಲಿ ಅದನ್ನು ಕರ್ನಾಟಕದ ಬಿಳಿಗುಂಡ್ಲುವಿನಲ್ಲಿ ಅಳೆಯಲು ತೀರ್ಪು ನೀಡಲಾಯಿತು. ಗಮನಿಸಬೇಕಾದ ಅಂಶವೆಂದರೆ ಬಿಳಿಗುಂಡ್ಲುವಿನಿಂದ ಮೆಟ್ಟೂರಿಗೆ ಸುಮಾರು 25 ಟಿಎಂಸಿ ನೀರು ಹರಿದು ಹೋಗುತ್ತದೆ, ಆದರೆ ಇದರ ಲೆಕ್ಕವನ್ನು ಕರ್ನಾಟಕ ಬಿಡುವ ನೀರಿಗೆ ಸೇರಿಸುವ ಹಾಗಿಲ್ಲ.
  • ಕೇರಳಕ್ಕೆ ಕರ್ನಾಟಕದಿಂದ 21 ಟಿಎಂಸಿ ಹಾಗೂ ತಮಿಳುನಾಡಿನಿಂದ 9 ಟಿಎಂಸಿ ನೀರು ಬಿಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಕೇರಳ ಈ ನೀರನ್ನು ಉಪಯೋಗಿಸದ ಕಾರಣ ತಮಿಳುನಾಡು ತನ್ನ 9 ಟಿಎಂಸಿ ನೀರನ್ನು ಉಪಯೋಗಿಸಲು ನ್ಯಾಯಾಧಿಕರಣ ಅವಕಾಶ ನೀಡಿತು. ಆದರೆ ಕರ್ನಾಟಕಕ್ಕೆ ಮಾತ್ರ 21 ಟಿಎಂಸಿ ನೀರನ್ನು ಬಳಕೆ ಮಾಡಲು ಅವಕಾಶ ಕೊಡದೆ ತಮಿಳುನಾಡಿಗೆ ಹರಿಸಲು ಆದೇಶ ನೀಡಿತು ಹಾಗೂ ಬೇಕಾದಲ್ಲಿ ತಮಿಳುನಾಡು ಈ ನೀರನ್ನು ಬಳಸಲು ಅವಕಾಶ ನೀಡಿತು.
  • ಪರಿಸರ ರಕ್ಷಣೆಗಾಗಿ ಕರ್ನಾಟಕ 10 ಟಿಎಂಸಿ ನೀರು ಬಿಡಬೇಕು, ಆದರೆ ತಮಿಳುನಾಡಿಗೆ ಯಾವುದೇ ನೀರು ಬಿಡಲು ಆದೇಶದಲ್ಲಿ ತಿಳಿಸಲಾಗಿಲ್ಲ. ಪರಿಸರ ರಕ್ಷಣೆ ಕೇವಲ ಕರ್ನಾಟಕದ ಜವಾಬ್ದಾರಿಯಾಗಿದೆಯೇ?
  • ನ್ಯಾಯಾಧಿಕರಣ ಕರ್ನಾಟಕಕ್ಕೆ ಕುಡಿಯುವ ನೀರಿನ ಸಲುವಾಗಿ ತಗೆದಿಟ್ಟಿರುವ ಪಾಲು ಕೇವಲ 2 ಟಿಎಂಸಿ. ಬೆಂಗಳೂರು, ಚಾಮರಾಜನಗರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳನೆಲ್ಲ ಒಟ್ಟಾಗಿ ಸೇರಿಸಿದರೆ ಬೇಕಾಗುವ ನೀರಿನ ಮೊತ್ತ 60 ಟಿಎಂಸಿ.
  • ನ್ಯಾಯಧಿಕರಣದ ತಜ್ಞರ ವರದಿಯ ಪ್ರಕಾರ ತಮಿಳುನಾಡಿಗೆ 395 ಟಿಎಂಸಿ ನೀರು ಅಗತ್ಯವಿತ್ತೆಂದು ಹೇಳಲಾಗಿತ್ತು, ಆದರೆ ನ್ಯಾಯಧಿಕರಣದಲ್ಲಿ ಅದಕ್ಕೆ ಬರೋಬ್ಬರಿ 458 ಟಿಎಂಸಿ ನೀರನ್ನು ನೀಡಲಾಗಿದೆ!!

ಕರ್ನಾಟಕದಲ್ಲಿ ನಡೆದ ಹೋರಾಟಗಳು

ಕರ್ನಾಟಕದ ಪಾಲಿಗೆ ಮರಣ ಮೃದಂಗದಂತಿದ್ದ ಈ ತೀರ್ಪನ್ನು ವಿರೋಧಿಸಿ ರಾಜ್ಯದ ಎಲ್ಲಾ ವರ್ಗಗಳು ಬೀದಿಗೆ ಇಳಿದವು, ರೈತ ಸಂಘ, ಸಾಹಿತಿ ವಲಯ, ರಾಜಕೀಯ ವಲಯ, ಕನ್ನಡಪರ ಸಂಘಟನೆಗಳೆಲ್ಲ ಒಂದಾಗಿ ಈ ತೀರ್ಪನ್ನು ವಿರೋಧಿಸಿದವು. ಕರ್ನಾಟಕ ರಕ್ಷಣಾ ವೇದಿಕೆ ಈ ತೀರ್ಪು ಹೊರಬಂದ ಕೆಲವೇ ನಿಮಿಷಗಳಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಹೋರಾಟಗಳನ್ನು ಶುರುಮಾಡಿತು. ಇದರ ಜೊತೆಗೆ ತಲಕಾವೇರಿಯಿಂದ ಬೆಂಗಳೂರಿನ ವರೆಗೂ ಪಾದಯಾತ್ರೆಯನ್ನು ಮಾಡಿ ತೀರ್ಪಿನ ವಿರುದ್ಧ ಜನರನ್ನು ಸಂಘಟಿಸುವ ಕೆಲಸ ಮಾಡಿತು. ರಾಜ್ಯದ ಇತಿಹಾಸದಲ್ಲೇ ಸುಮಾರು 25000 ಜನರನ್ನು ದೆಹಲಿಗೆ ಕರೆದುಕೊಂಡು ಹೋಗಿ ಜಂತರ್ ಮಂತರ್ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಸರಿಯಾದ ಎಚ್ಚರಿಕೆಯನ್ನೇ ನೀಡಿತು. ಇದಾದ ನಂತರ ಎಚ್ಚೆತ್ತುಕೊಂಡ ನಮ್ಮ ಸರ್ಕಾರ ಹಾಗೂ ಪ್ರತಿಪಕ್ಷಗಳು ಪ್ರಧಾನಮಂತ್ರಿಗಳ ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯಾದರು. 

ನಮ್ಮ ರಾಜ್ಯ ಸರ್ಕಾರಗಳ ನಿಷ್ಕ್ರಿಯತೆ ಹಾಗೂ ಪ್ರಾದೇಶಿಕ ಪಕ್ಷದ ಅವಶ್ಯಕತೆ

ಕಾವೇರಿಯ ನದಿ ನೀರು ಹಂಚೆಕೆಯ ವಿವಾದವು ಉಲ್ಬಣಿಸಿದಾಗಲೆಲ್ಲ, ನಮ್ಮ ಸರ್ಕಾರಗಳಿಗಿಂತ ಮೊದಲು ಪ್ರತಿಭಟನೆ ಹಾಗೂ ಜಾಗೃತಿಗೆ ಮುಂದಾಗಿರುವುದು ರೈತ ಸಂಘ, ಕನ್ನಡ ಪರ ಸಂಘಟನೆಗಳು. ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಅನ್ನೋ ಹಾಗೆ ನಮ್ಮ ರಾಜ್ಯ ಸರ್ಕಾರ ಹಾಗೂ ರಾಜಕಾರಣಿಗಳು ಎಚ್ಚೆತ್ತುಕೊಂಡಿದ್ದಾರೆ.

ಇತ್ತೀಚಿಗೆ ಮತ್ತೆ ಈ ವಿಷಯವಾಗಿ ತಮಿಳುನಾಡು ಸರ್ಕಾರ ಮತ್ತೆ ತನ್ನ ಹೆಳೆ ವರಸೆಯನ್ನು ಶುರುಮಾಡಿದೆ. ಕರ್ನಾಟಕ ಸರ್ಕಾರ ಮೇಕೆದಾಟುವಿನ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟಿ ರಾಜ್ಯದ ಜನರ ಹಾಗೂ ರೈತರ ಒಳಿತಿಗಾಗಿ ನೀರನ್ನು ಸಂಗ್ರಹಿಸುವ ಯೋಜನೆಯನ್ನು ಹಾಕಿಕೊಂಡಿತ್ತು. ಆದರೆ ಇದಕ್ಕೆ ಕ್ಯಾತೆ ತಗೆದಿರುವ ಜಯಲಲಿತಾ ಅವರ ಸರ್ಕಾರ ಯಾವುದೇ ಕಾರಣಕ್ಕೂ ಕರ್ನಾಟಕ ಆಣೆಕಟ್ಟು ಕಟ್ಟಬಾರದು ಹಾಗೂ ಅದು ಸಂಗ್ರಹಿಸುವ ನೀರನ್ನು ಬೇಸಿಗೆಯ ಬೆಳೆಗೆ ಉಪಯೋಗಿಸಬಾರದು ಎಂಬ ಬೇಡಿಕೆಯನ್ನು ಇಟ್ಟುಕೊಂಡು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ನಮ್ಮ ರಾಜ್ಯಕ್ಕೆ ತನ್ನ ಪಾಲಿಗೆ ನ್ಯಾಯವಾಗಿ ದಕ್ಕಬೇಕಾಗಿದ್ದ ನೀರನ್ನು ಬಳಸಿಕೊಳ್ಳಲು ಹಕ್ಕಿಲ್ಲವೇ? ಯಾವುದೋ ಓಬಿರಾಯನ ಕಾಲದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದ ನಿಯಮಗಳನ್ನು ಇನ್ನೂ ಮುಂದುವರೆಸಿಕೊಂಡು ಹೋಗಬೇಕೆ? ಕಾವೇರಿ ನದಿಯ ನೀರು ಕೇವಲ ತನ್ನ ಸ್ವತ್ತು ಅನ್ನುವ ಹಾಗೆ ವರ್ತಿಸುತ್ತಿರುವ ತಮಿಳುನಾಡಿನ ದರ್ಪವನ್ನು ಸಹಿಸಿಕೊಂಡು ಸುಮ್ಮನಿರಬೇಕೆ?

ಇಲ್ಲಿ ನಮ್ಮ ರಾಜ್ಯ ಸರ್ಕಾರದ ನಿಷ್ಕ್ರಿಯತೆ ಎದ್ದು ಕಾಣಿಸುತ್ತದೆ. ಇದಕ್ಕೆ ಈ ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್ ಗುಲಾಮಗಿರಿ ಕಾರಣ. ಪ್ರತಿಯೊಂದಕ್ಕು ದೆಹಲಿಯತ್ತ ಮುಖಮಾಡುವ ನಮ್ಮ ನಾಯಕರಿಂದ ಹೆಚ್ಚಿನದೇನು ನಿರೀಕ್ಷಿಸಲು ಸಾಧ್ಯ? ಕೇಂದ್ರದಲ್ಲಿ ಒಂದಲ್ಲಾ ಒಂದು ಸರ್ಕಾರದ ಜೊತೆ ಮೈತ್ರಿ ಹೊಂದಿರುವ ತಮಿಳುನಾಡಿನ ರಾಜಕೀಯ ಪಕ್ಷಗಳು ತಮಗೆ ಅನುಕೂಲವಾಗುವಂತೆ ಹಿಂದಿನಿಂದಲು ನಡೆದುಕೊಂಡು ಬಂದಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಆ ಪರಿಸ್ಥಿತಿ ಇಲ್ಲ. ಬಹುಷ: ನಮಗೂ ತಮಿಳುನಾಡಿನಲ್ಲಿರುವಂತೆ ಕರ್ನಾಟಕದ ನೆಲ, ಜಲ ಹಾಗೂ ಜನರ ಹಿತವನ್ನು ಕಾಪಾಡುವ ಒಂದು ರಾಜಕೀಯ ಪಕ್ಷದ ಅವಶ್ಯಕತೆ ಪದೇ ಪದೇ ಎದ್ದು ಕಾಣುತ್ತಿದೆ. 

ಬುಧವಾರ, ಮಾರ್ಚ್ 14, 2012

ತಮಿಳುನಾಡು ಜನರ ಒಗ್ಗಟ್ಟು ನೋಡಿ


ಇಂದು ಬೆಳಗ್ಗೆ ಪತ್ರಿಕೆಗಳಲ್ಲಿ ಬಂದ ಸುದ್ದಿಯೊಂದು ನನ್ನ ಗಮನ ಸೆಳೆಯಿತು. ಅದೇನೆಂದರೆ ಶ್ರೀಲಂಕಾದಲ್ಲಿರುವ ತಮಿಳರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ತಮಿಳುನಾಡಿನ ಎಲ್ಲಾ ಪಕ್ಷದ ನಾಯಕರುಗಳು ನಿನ್ನೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕೋಲಾಹಲ ಎಬ್ಬಿಸಿ, ಭಾರತ ಸರ್ಕಾರ ಈ ಕ್ರಮವನ್ನು ಖಂಡಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಮುಂದೆ ನಡೆಯಲಿರುವ ಯು.ಎನ್ ಮಾನವ ಹಕ್ಕುಗಳ ಸಮ್ಮೇಳನದಲ್ಲಿ ಶ್ರೀಲಂಕಾದ ವಿರುದ್ಧ ಮತ ಚಲಾಯಿಸಬೇಕು ಎಂದು ತಮಿಳುನಾಡಿನ ನಾಯಕರು ಭಾರತ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅವರ ಈ ಒತ್ತಾಯಕ್ಕೆ ಮಣಿದಿರುವ ಕೇಂದ್ರ ಸರ್ಕಾರ, ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವುದುದಾಗಿ ಭರವಸೆ ನೀಡಿದೆ.

ಕನ್ನಡಿಗರು ಕಲಿಯಬೇಕಿರುವ ಪಾಠ:
ಮೊದಲಿನಿಂದಲೂ ತಮಿಳುನಾಡಿನ ಸರ್ಕಾರ ತಮ್ಮ ಜನರು ಯಾವುದೇ ರಾಜ್ಯ, ದೇಶದಲ್ಲಿರಲಿ ಅವರ ಯೋಗ ಕ್ಷೇಮದ ಬಗ್ಗೆ ತೀವ್ರವಾದ ಕಾಳಜಿಯನ್ನು ತೋರಿಸುತ್ತಲೇ ಬಂದಿದೆ. ಅದು ಶ್ರೀಲಂಕಾದಲ್ಲಿರುವ ತಮಿಳರ ಬಗ್ಗೆ ಇರಬಹುದು ಅಥವಾ ಬೇರಿನ್ನಾವುದೇ ಪ್ರದೇಶದಲ್ಲಿರಬಹುದು. ತಮ್ಮ ಜನರಿಗೆ ಒಳಿತಾಗಬೇಕೆಂದರೆ ಎಲ್ಲಾ ಪಕ್ಷಗಳ ನಾಯಕರು ತಮ್ಮ ಭಿನಾಭಿಪ್ರಾಯವನ್ನು ಮರೆತು ಅವರ ಒಳಿತಿಗೆ ಟೊಂಕ ಕಟ್ಟಿ ನಿಲ್ಲುತ್ತಾರೆ.

ಆದರೆ ಇದೇ ಪರಿಸ್ಥಿತಿ ನಮ್ಮ ರಾಜ್ಯದ ನಾಯಕರುಗಳಿಂದ ನಿರೀಕ್ಷಿಸಲು ಸಾಧ್ಯವೇ? ಇವತ್ತಿನ ಮಟ್ಟಿಗೆ ಖಂಡಿತವಾಗಿಯೂ ಸಾಧ್ಯವಿಲ್ಲ. ನಮ್ಮದೇ ರಾಜ್ಯದ ನೆಲದಲ್ಲಿ ಮಹಾರಾಷ್ಟ್ರದ ನೆಲ ಅಂತ ಬರೆದಿರೋ ಬೋರ್ಡ್ ತೆಗೆಸಲು ಮೀನಾಮೇಷ ಎಣಿಸುತ್ತದೆ ನಮ್ಮ ಸರ್ಕಾರ, ಗೋವಾದಲ್ಲಿರುವ ಕನ್ನಡಿಗರ ಮೇಲೆ ದೌರ್ಜನ್ಯ ನಡೆದಾಗಿ ಎಲ್ಲಾ ಮುಗಿದ ಮೇಲೆ ತೇಪೆ ಸಾರಿಸುವ ಕೆಲಸಕ್ಕೆ ಬರುತ್ತದೆ, ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳ ಕುಡಿಯುವ ನೀರಿನ ಬವಣೆಯನ್ನು ತೀರಿಸಲು ಇರುವ ಕಳಸಾ-ಭಂಡೂರ ನಾಲಾ ಯೋಜನೆಯನ್ನು ಇನ್ನೂ ದಶಕಗಳಿಂದ ಜಾರಿಗೆ ತರದೇ ಹಾಗೆ ಮುಂದೆ ತಳ್ಳುತ್ತಿದೆ, ಇದರ ಅನುಷ್ಠಾನಕ್ಕೆ ಇರುವ ತೊಡರನ್ನು ಬಗೆಹರಿಸಲು ನಮ್ಮ ರಾಜ್ಯದ ರಾಜಕೀಯ ಪಕ್ಷಗಳು ಒಟ್ಟಾಗಿ ಎಂದು ಕೆಲಸ ಮಾಡಲೇ ಇಲ್ಲ, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡಲು ಸಿದ್ಧ ಮಾಡಲಾಗಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರದೇ ೩ ದಶಕಗಳು ಕಳೆದು ಹೋಗಿವೆ... ಹೀಗೆ ಈ ಪಟ್ಟಿ ಹನುಮಪ್ಪನ ಬಾಲದಂತೆ ದೊಡ್ಡದಿದೆ.

ಇದಕೆಲ್ಲ ಮೂಲ ಹುಡುಕ ಹೊರಟರೆ ನಮ್ಮ ರಾಜ್ಯದಲ್ಲಿರುವ ರಾಜಕೀಯ ಪಕ್ಷಗಳು, ಮುನ್ನುಗ್ಗಿ ರಾಜ್ಯಕ್ಕೆ ಯೋಜನೆಗಳನ್ನು ತರಬೇಕು ಎನ್ನುವ ಛಲದ ಕೊರತೆ, ಆ ಪಕ್ಷದಲ್ಲಿರುವ ನಾಯಕರುಗಳ ಹೈಕಮಾಂಡ್ ಗುಲಾಮಗಿರಿ, ತಮ್ಮ ರಾಜ್ಯಕ್ಕೆ ಅನ್ಯಾಯವಾದರೂ ಪರವಾಗಿಲ್ಲ ಹೈಕಮಾಂಡ್ ಹೇಳಿದಂತೆ ಕೇಳಬೇಕು ಎನ್ನುವ ಶಿಸ್ತಿನ ಪಕ್ಷಗಳು!!! ಇವುಗಳು ಎಂದಿಗೂ ನಮ್ಮ ಪಕ್ಷಗಳು ಅನ್ನಿಸಿಯೇ ಇಲ್ಲ! ಇದರ ಜೊತೆಜೊತೆಗೆ ನಮ್ಮ ಕನ್ನಡಿಗರಲ್ಲಿ ಜಾಗೃತಿಯ ಕೊರತೆ... ಇವುಗಳನ್ನೆಲ್ಲ ಒಟ್ಟಾಗಿ ಎದುರಿಸೋಕೆ ನಮ್ಮ ರಾಜ್ಯದಲ್ಲಿ ನಮ್ಮದೇ ಒಂದು ಪ್ರಾದೇಶಿಕ ಪಕ್ಷ ಬೇಕಾಗಿದೆ.

ಗುರುವಾರ, ನವೆಂಬರ್ 17, 2011

ನಮ್ಮ ಸರ್ಕಾರಕ್ಕಿರುವ ಕನ್ನಡ ಕಾಳಜಿ ಎಷ್ಟು???

ಸುಮಾರು ೩.೫ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಹೊಸತರಲ್ಲಿ ಬಿಜೆಪಿ ಸರ್ಕಾರ ತಾನು ರೈತ ಪರ, ಕನ್ನಡ ಪರ, ನಾಡು-ನುಡಿಗೆ ಧಕ್ಕೆಯಾದಲ್ಲಿ ಅದರ ಪರವಾಗಿ ತಾನೆಂದಿಗೂ ಮುಂದೆ ಅನ್ನುವ ರೀತಿಯಲ್ಲಿ ಹೇಳೀಕೆಗಳನ್ನು ನೀಡಿತ್ತು, ಹೊಸ ಸರ್ಕಾರದ ಈ ಮಾತನ್ನ ಜನರು ಸಹ ನಂಬಿದ್ದರು. ಆದರೆ ಅದಾದ ಸ್ವಲ್ಪ ದಿನದಲ್ಲಿಯೇ ಅದು ತನ್ನ ನಿಜವಾದ ಬಣ್ಣವನ್ನು ಬಯಲು ಮಾಡುತ್ತ ಹೊರಟಿತು. ಸರ್ಕಾರ ಮೊದಲಿಗೆ ರೈತರ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಇದಾದ ನಂತರ ಹಲವಾರು ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ತನ್ನ ಬೇಳೆಕಾಳು ಬೇಯಿಸಿಕೊಳ್ಳಲು ಭಾಷಾ ಅಲ್ಪಸಂಖ್ಯಾತರನ್ನು ಓಲೈಸುತ್ತಾ ತನ್ನ ವೋಟ್ ಬ್ಯಾಂಕ್ ರಾಜಕಾರಣವನ್ನು ತೋರಿಸಿತು, ಕನ್ನಡ ಪರ ಸಂಘಟನೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಿತು, ಹೀಗೆ ಹಲವಾರು ವಿಷಯಗಳಲ್ಲಿ ಜನವಿರೋಧಿತನ ತೋರಿಸುತ್ತಲೇ ಬಂದಿರುವ ಬಿಜೆಪಿ ಸರ್ಕಾರ ನಮ್ಮನ್ನು ಆಳುತ್ತಿರುವ ಸರ್ಕಾರ ನಜಕ್ಕೂ ನಮ್ಮದೇ? ಅನ್ನುವ ಪ್ರಶ್ನೆಯನ್ನು ನಮ್ಮಲ್ಲಿ ಹುಟ್ಟು ಹಾಕಿದೆ.

ಇದಕ್ಕೆ ಇತ್ತೀಚಿನ ಉದಾಹರಣೆಯಾಗಿ ನಮ್ಮ ಕಣ್ಣ ಮುಂದಿರುವ ಬೆಳಗಾವಿಯ ಘಟನೆ. ಕರ್ನಾಟಕ ರಾಜ್ಯೋತ್ಸವದ ದಿನದಂದು ನಮ್ಮ ರಾಜ್ಯದ ಬೆಳಗಾವಿ ಜೆಲ್ಲೆಯ ಮಹಾಪೌರರಾಗಿರುವ ಶ್ರೀಮತಿ ಮಂದಾ ಬಾಳೆಕುಂದ್ರಿ ಅವರು ಎಂಇಎಸ್ ನಂತಹ ಪುಂಡ ಸಂಘಟನೆ ಜೊತೆ ಸೇರಿ ನಾಡವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಇದರ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದ ನಂತರವೂ ಸಹ ಸರ್ಕಾರ ಇನ್ನು ತನಿಖೆ ನಡೆಸುತ್ತಲೇ ಇದೆ. ಆದರೆ ಇದನ್ನ ವಿರೋಧಿಸಿ ಕರವೇಯಂತಹ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಇಳಿದರೆ ತಕ್ಷಣವೇ ಬಂಧಿಸಿ ಹಲವಾರು ಆಪಾದನೆಗಳನ್ನು ಹಾಕಿ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತದೆ. ಇದು ನಮ್ಮ ಸರ್ಕಾರದ ಕನ್ನಡ ಪರ ನೀತಿ. ಕೇವಲ ಇದೊಂದೆ ಅಲ್ಲ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ಅಧಿಕಾರಕ್ಕೆ ಬರಲು ನಮ್ಮ ಬಿಜೆಪಿ ಪಕ್ಷ ಎಂಇಎಸ್ ನಂತಹ ಸಂಘಟನೆ ಜೊತೆ ಕೈಜೋಡಿಸಿ ಅಧಿಕಾರಕ್ಕೆ ಬರುತ್ತದೆ. ಒಂದು ಕಡೆಯಲ್ಲಿ ಎಂಇಎಸ್ ಅನ್ನು ವಿರೋಧಿಸುವ ನಾಟಕವಾಡುತ್ತ ಇನ್ನೊಂದು ಕಡೆ ಸಾಮರಸ್ಯದಿಂದ ಬದುಕುತ್ತಿರುವ ಕನ್ನಡ ಹಾಗೂ ಮರಾಠಿಗರ ನಡುವೆ ಹುಳಿ ಹಿಂಡುತ್ತಿರುವ ಎಂಇಎಸ್ ನಂತಹ ಸಂಘಟನೆಯೊಂದಿಗೆ ಜೊತೆ ಕೈಜೋಡಿಸುವ ಬಿಜೆಪಿ ಪಕ್ಷ ಯಾವ ನೈತಿಕತೆಯನ್ನು ಉಳಿಸಿಕೊಂಡಿದೆ? ಕೆಲವು ಸಾವಿರ ಮರಾಠಿ ಮೂಲಭೂತವಾಗಳ ಓಟಿಗಾಗಿ ಕೋಟ್ಯಾಂತರ ಕನ್ನಡಿಗರ ಭಾವನೆಗೆ ಬೆಂಕಿ ಇಡುತ್ತಿರುವ ಬಿಜೆಪಿ ಪಕ್ಷಕ್ಕೆ ಕನ್ನಡಿಗರೆಂದರೆ ಅಸಡ್ಡೆಯೇ?

ಮಹಾರಾಷ್ಟ್ರದಲ್ಲಿ “ಕರ್ನಾಟಕ ರಾಜ್ಯ” ಫಲಕ ಹಾಕಿ:
ಹೀಗೆ ಹೇಳಿದವರು ಬೇರಾರು ಅಲ್ಲ ಸ್ವತ: ಬೆಳಗಾವಿಯನ್ನು ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿರುವ ಬಿಜೆಪಿ ಪಕ್ಷದ ಸಂಸದ ಶ್ರೀ ಸುರೇಶ್ ಅಂಗಡಿಯವರು. ಇಂದಿನ ಕನ್ನಡ ಪ್ರಭದಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಕನ್ನಡ ಪರ ಸಂಘಟನೆಯೊಂದು ಬೆಳಗಾವಿ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿರು ಮಹಾರಾಷ್ಟ್ರ ರಾಜ್ಯ ಅನ್ನುವ ಫಲಕವನ್ನು ತಗೆಸಿ ಎಂದು ಜಿಲ್ಲಾಧಿಕಾರಿಗೆ ಮನವಿ ಕೊಡಲು ಹೋದಾಗ ಅಲ್ಲಿದ್ದ ನಮ್ಮ ಸಂಸದರಿಂದ ಬಂದ ಉತ್ತರ
ನಿಮಗೆ ಧೈರ್ಯವಿದ್ದರೆ ಮಹಾರಾಷ್ಟ್ರಕ್ಕೆ ಹೋಗಿ “ಕರ್ನಾಟಕ ರಾಜ್ಯ” ಎಂಬ ನಾಮ ಫಲಕ ಹಾಕಿರಿ. ಕನ್ನಡಿಗರು ಇಲ್ಲಿ ಗಲಾಟೆ ಮಾಡಿದರೆ ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ತೊಂದರೆ ಆಗುತ್ತಿದೆ. ಮಹಾನಗರ ಪಾಲಿಕೆ ಸೂಪರ್ ಸೀಡ್ ಮಾಡಿದರೆ ಅವರು ಕೋರ್ಟ್ ಗೆ ಹೋಗುತ್ತಾರೆ

ಹಾಗಾದರೆ ನಮ್ಮ ಮಾನ್ಯ ಸಂಸದರಿಗೆ ಎಂಇಎಸ್ ಮಾಡಿದ್ದು ತಪ್ಪಾಗಿ ಕಂಡಿಲ್ಲವೇ? “ಕರ್ನಾಟಕ ರಾಜ್ಯ” ಅನ್ನೋ ನಾಮ ಫಲಕ ಕರ್ನಾಟಕದಲ್ಲಿ ಬಿಟ್ಟು ಮಹಾರಾಷ್ಟ್ರದಲ್ಲಿ ಹಾಕಿದರೆ ಆಗುವ ಉಪಯೋಗವೇನು? ನಮ್ಮ ರಾಜ್ಯದಲ್ಲಿ ಬೇರೆ ರಾಜ್ಯದ ಹೆಸರಿನ ನಾಮ ಫಲಕಗಳಿದ್ದರೆ ಅದನ್ನು ತಗೆಯದೇ ಬಿಡಬೇಕೆ? ಅವರು ಕೋರ್ಟ್ ಗೆ ಹೋಗುತ್ತಾರೆ ಅನ್ನೋ ಕಾರಣಕ್ಕೆ ನಾವು ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದೇ? ಈ ರೀತಿಯ ಉದ್ಧಟತನದ ಕೆಲಸಗಳು ಪದೇ ಪದೇ ಬೆಳಗಾವಿಯಲ್ಲಿ ಆಗುತ್ತಿದ್ದರು ಸಹ ನಮ್ಮ ಸರ್ಕಾರ ಏನು ಕ್ರಮ ಕೈಗೊಂಡಿದೆ? ನಮ್ಮ ಕನ್ನಡ ಪರ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲು ತೋರಿಸುವ ತರಾತುರಿಯನ್ನು ಸರ್ಕಾರ ಈ ನಾಡವಿರೋಧಿಗಳ ಮೇಲೆ ಕ್ರಮಕೈಗೊಳ್ಳಲು ಯಾಕೆ ಮುಂದಾಗುತ್ತಿಲ್ಲ?

ಹುಸಿ ರಾಷ್ಟ್ರೀಯತೆಯ ಸೋಗಿನಲ್ಲಿ ಜನರನ್ನು ಭಾಷೆಯ ಹೆಸರಿನಲ್ಲಿ ಒಡೆದು ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ಈ ರಾಷ್ಟ್ರೀಯ ಪಕ್ಷಗಳಿಂದ ನಮ್ಮ ನಾಡಿಗಾಗುತ್ತಿರುವ ಅವಮಾನ, ನಮ್ಮ ಜನರಿಗೆ ಆಗುತ್ತಿರುವ ನೋವು, ಹಿಂಸೆಗೆ ಕಡಿವಾಣ ಬೀಳಬೇಕಾದಲ್ಲಿ ನಮ್ಮ ನಾಡು-ನುಡಿ-ನಾಡಿಗರನ್ನು ರಕ್ಷಿಸುವಂತಹ ಒಂದು ಪ್ರಾದೇಶಿಕ ಪಕ್ಷ ನಿಜವಾಗಲೂ ಬೇಕು ಅನ್ನುವ ನಮ್ಮ ಆಸೆ ಇಂತಹ ಘಟನೆಗಳಿಂದ ಗಟ್ಟಿಯಾಗುತ್ತಲೇ ಹೋಗುತ್ತಿದೆ.

ಬುಧವಾರ, ನವೆಂಬರ್ 2, 2011

ಮೆಟ್ರೋದಲ್ಲಿ ಸಿಗದ ಉದ್ಯೋಗ – ಕನ್ನಡಿಗರಿಗೆ ಏನ್ ಬಂತು ಉಪಯೋಗ??

ಕನ್ನಡದ ನನ್ನೆಲ್ಲ ಬಂಧುಗಳಿಗೆ ಐವತ್ತಾರನೇ ಕರ್ನಾಟಕ ರಾಜ್ಯೋತ್ಸವದ ಸವಿ ಹಾರೈಕೆಗಳು. ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಕವಿವಾಣಿಯಂತೆ ನಡೆದುಕೊಳ್ಳಬೇಕಾಗಿರುವ ಸಂದರ್ಭ ಹಿಂದೆಂದಿಗಿಂತ ಹೆಚ್ಚು ಪ್ರಸ್ತುತವೆನ್ನಿಸುತ್ತದೆ. ೩ ಪ್ರಾಂತಗಳು ಹಾಗೂ ೧೬ ವಿವಿಧ ಸಂಸ್ಥಾನಗಳಲ್ಲಿ ಹಂಚಿ ಹೋಗಿತ್ತು ನಮ್ಮ ಕನ್ನಡ ನಾಡು, ನಮ್ಮ ನಾಡಿನ ಹಿರಿಯರ ಅವಿರತ ಶ್ರಮ, ತ್ಯಾಗ, ಬಲಿದಾನದ ಫಲವಾಗಿ ಏಕೀಕೃತ ಕರ್ನಾಟಕ ಸ್ಥಾಪಿತವಾಯಿತು. ನಮ್ಮ ಹಿರಿಯರು ಕಂಡ ಸುವರ್ಣ ಕರ್ನಾಟಕದ ಕನಸು ಇನ್ನೂ ನನಸಾಗಿದೆಯೇ? ಖಂಡಿತವಾಗಿಯೂ ಇಲ್ಲಾ. ಈ ಕನಸು ಈಡೇರಬೇಕಾದರೆ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಬೇಕಾಗಿದೆ ಹಾಗೂ ಅದು ಅಗತ್ಯವೂ ಕೂಡ.

ಕಳೆದೆರೆಡು ದಶಕದಲ್ಲಿ ಜಾಗತೀಕರಣದ ಪ್ರಭಾವದಿಂದಾಗಿ ನಮ್ಮ ನಾಡಿಗೆ ಹಲವಾರು ಬೃಹತ್ ಉದ್ಯಮಗಳು ಬಂದವು, ಅದರ ಜೊತೆ ಜೊತೆಗೆ ಹೊರ ರಾಜ್ಯಗಳಿಂದ ವಲಸೆ ಬರುವವರ ಸಂಖ್ಯೆ ಸಹ ಜಾಸ್ತಿಯಾಗುತ್ತಾ ಬಂತು ಹಾಗೂ ಇಂದು ಸಹ ಅದು ಅನಿಯಮಿತವಾಗಿ ನಡೆಯುತ್ತಲೇ ಇದೆ. ಇದರಿಂದಾಗಿ ನಮ್ಮ ನಾಡಿನ ಜನರಿಗೆ ಕೆಲಸಗಳು ದೊರಕದಂತಾಗಿವೆ. ಆದರೆ ಇಂತಹ ಒಂದು ಅನಿಯಮಿತ ವಲಸೆಯಿಂದಾಗಿ ಒಂದು ರಾಜ್ಯದ ಮೇಲೆ ಬೀರಬಹುದಾದ ಪರಿಣಾಮ ಮಾತ್ರ ಭಯಂಕರ. ಇದಕ್ಕೆ ಉದಾಹರಣೆಯಂದರೆ ವಾಣಿಜ್ಯ ನಗರಿ ಮುಂಬಯಿ. ಇಂದು ಅಲ್ಲಿ ವಲಸೆಯಿಂದಾಗಿ ತಮ್ಮ ತಾಯಿನುಡಿಯ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಜನರಿಗೆ ಇಂದು ಇದರ ಪರಿಣಾಮ ಅರ್ಥವಾಗುತ್ತಿದೆ. ಇಂದು ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ಮಹಾರಾಷ್ಟ್ರದಲ್ಲಿ ಅಗಿರುವಂತಹ ಅನಾಹುತ ಆಗಿಲ್ಲ. ಆದರೆ ಸುಮ್ಮನೆ ಇದ್ದರೆ ಇಂತಹ ಅನಾಹುತ ಕಟ್ಟಿಟ್ಟ ಬುತ್ತಿ.

ಮಣ್ಣಿನ ಮಕ್ಕಳಿಗೆ ಹೆಚ್ಚಿನ ಒತ್ತು ಸಿಗಲಿ:


ವಲಸಿಯಿಂದ ಆಗಬಹುದಾದ ಪರಿಣಾಮಕ್ಕೆ ಇತ್ತೀಚಿನ ಉದಾಹರಣೆಯಾಗಿ “ನಮ್ಮ ಮೆಟ್ರೋ”ದಲ್ಲಿ ಆಗಿರುವ ಈ ಪ್ರಕರಣವೇ ಸಾಕ್ಷಿ. ಜನರ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಈ ಮನುಷ್ಯ ಮಾತನಾಡುವ ಧಾಟಿ ನೋಡಿ.... “ಇದು ಹಿಂದುಸ್ಥಾನ, ಹಿಂದುಸ್ಥಾನದ ಭಾಷೆ ಹಿಂದಿಯಾಗಿದೆ, ಅದು ಗೊತ್ತಿದ್ದ ಮೇಲೆ ಕನ್ನಡ ಯಾಕೆ ಕಲಿಯಬೇಕು? ಕನ್ನಡ ಕಲಿಯಲು ನನಗೆ ಇಷ್ಟವಿಲ್ಲ ಯಾಕಂದರೆ ಕನ್ನಡ ಚೆನ್ನಾಗಿಲ್ಲ” ಅಂತ ಹಲ್ಲು ಕಿರಿಯುತ್ತಾ ಹೇಳುತ್ತಿದ್ದಾನೆ. ಇಂತವರಿಂದ ಸಾಮಾನ್ಯ ಜನರಿಗೆ ಯಾವ ತರಹದ ಮಾಹಿತಿ ಸಿಗಲು ಸಾಧ್ಯ? ಯಾವ ರೀತಿಯಿಂದ ಇವನು ಜನರನ್ನು ಸುರಕ್ಷಿತವಾಗಿರಿ ಅಂತ ಹೇಳುತ್ತಾನೆ? ವಲಸೆಯಿಂದ ಆಗಬಹುದಾದ ಪರಿಣಾಮದ ಮೊದಲನೆ ಹೆಜ್ಜೆ ಇದು. ಇದು ಕೇವಲ ಇವನೊಬ್ಬನ ಮಾತಲ್ಲ. ಕೂಲಿ ಮಾಡುವ ಕಾರ್ಮಿಕನಿಂದ ಹಿಡಿದು ದೊಡ್ಡ ದೊಡ್ಡ ಹುದ್ದೆಗಳಲ್ಲಿರುವ ಹೊರ ರಾಜ್ಯದ ಜನರ ಪ್ರತೀಕವಾಗಿ ಇವನು ಕಾಣುತ್ತಾನೆ.

ಬೆಂಗಳೂರಿನ ಹೆಮ್ಮೆಯಾಗಿರುವ ನಮ್ಮ ಮೆಟ್ರೋ ಸಲುವಾಗಿ ಎಷ್ಟೋ ಕುಟುಂಬಗಳು ಇಂದು ಬೀದಿ ಪಾಲಾಗಿವೆ? ದಶಕಗಳಿಂದ ಬಾಳುತ್ತಿದ್ದ ಜನರನ್ನ ಒಕ್ಕಲೆಬ್ಬಿಸಿ ಬೃಹತ್ ಕಟ್ಟಡಗಳನ್ನು ಕಟ್ಟಿರುವ ನಮ್ಮ ಮೆಟ್ರೋ ಸಂಸ್ಥೆಯವರು ಎಷ್ಟು ಕುಟುಂಬಗಳಿಗೆ ಉದ್ಯೋಗಗಳನ್ನು ನೀಡಿದ್ದಾರೆ? ಇಂತವರಿಗೆ ಕೆಲಸ ಕೊಡಬೇಕಾಗಿರುವುದು ಸಂಸ್ಥೆಯ ಕರ್ತವ್ಯವಲ್ಲವೇ? ಒಂದು ಗಾರ್ಡ್ ಕೆಲಸಕ್ಕೂ ಸಹ ನಮ್ಮ ಕನ್ನಡಿಗರು ಅರ್ಹರಲ್ಲವೇ? ನಮ್ಮ ಮೆಟ್ರೋನಲ್ಲಿರುವ ಸುಮಾರು ೮೪೦ ಕೆಲಸಗಳಲ್ಲಿ ಕೇವಲ ೩೨೦ ಹುದ್ದೆಗಳಿಗೆ ಮಾತ್ರ ಕನ್ನಡಿಗರನ್ನ ನೇಮಿಸಲಾಗಿದೆ, ಉಳಿದದ್ದೆಲ್ಲ ಪರಭಾಷಿಕರ ಪಾಲು. ಇದು ಯಾವ ಸೀಮೆಯ ನ್ಯಾಯ? ನಿಜಕ್ಕೂ ನಮ್ಮ ಸರ್ಕಾರಕ್ಕೆ ರಾಜ್ಯದಲ್ಲಿ ಆಗುತ್ತಿರುವ ವಿದ್ಯಮಾನಗಳ ಬಗ್ಗೆ ಗಮನ ಹರಿಸಲು ಸಮಯವಿದೆಯೋ ಇಲ್ಲವೇ ಗೊತ್ತಾಗುತಿಲ್ಲ. ತ್ರಿಭಾಷೆಯ ಮೂಲಕ ಭಾರತದ ಒಗ್ಗೂಡಿಸುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಮೆಟ್ರೋ ಸಂಸ್ಥೆ ನಿಜಕ್ಕೂ ನಮ್ಮದೇ ಅನ್ನುವ ಅನುಮಾನ ಕಾಡಲು ಶುರುವಾಗಿದೆ.

ಸುಮಾರು ದಶಕಗಳಿಂದ ಜಾರಿಗೆ ಬರದೆ ಧೂಳು ಹಿಡಿದು ಕೂತಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತನ್ನಿ ಎಂದು ಪ್ರತಿ ಬಾರಿಯೂ ಬೀದಿಗಿಳಿಯುವ ಕನ್ನಡ ಪರ ಸಂಘಟನೆಗಳ ಆಗ್ರಹಕ್ಕೆ ಸರ್ಕಾರ ಕೊಡುತ್ತಿರುವ ಕಿಮ್ಮತಾದರೂ ಏನು? ಒಂದು ಬಾಗಿಲು ಕಾಯುವ ಕೆಲಸಕ್ಕೂ ಹೊರಗಿನವರನ್ನು ತಂದು ತುಂಬಿದರೆ ಇಲ್ಲಿನ ಮಕ್ಕಳಿಗೆ ಇಲ್ಲಿ ಕೆಲಸ ಸಿಗದೇ ಬೇರೆಲ್ಲಿ ಸಾಧ್ಯ? ಇದಕೆಲ್ಲ ಪರಿಹಾರವೆಂದರೆ ಮೊದಲನೆಯದಾಗಿ ಸರೋಜಿನಿ ಮಹಿಷಿ ವರದಿ ಜಾರಿಗೆ ಬರಬೇಕು. ಮಣ್ಣಿನ ಮಕ್ಕಳಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎನ್ನುವ ನಿಯಮವನ್ನು ಸರ್ಕಾರ ಜಾರಿಗೆ ತರಬೇಕು. ಈಗಾಗಲೇ ಇಂತಹ ವ್ಯವಸ್ಥೆಯನ್ನು ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಒರಿಸ್ಸಾ ಹಾಗೂ ಗುರಜಾತ ದಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಇದರ ಜೊತೆಜೊತೆಗೆ ಉದ್ಯಮಗಳಿಗೆ ತಮ್ಮ ಹೊಲ-ಮನೆಗಳನ್ನು ಕಳೆದುಕೊಳ್ಳುವ ಕುಟುಂಬಗಳಿಗೆ ಸರಿಯಾದ ಪರಿಹಾರದ ಜೊತೆಗೆ ಸ್ಥಾಪಿಸಲಾಗುವ ಉದ್ಯಮದಲ್ಲಿ ಅವರ ವಿಧ್ಯಾರ್ಹತೆಗೆ ತಕ್ಕಂತೆ ಕೆಲಸಗಳನ್ನು ನೀಡಬೇಕು. ರಾಜ್ಯದಲ್ಲಿ ಹೊಸದಾಗಿ ಶುರುವಾಗುವ ಯಾವುದೇ ಉದ್ಯಮವಿದ್ದರೂ ಮೊದಲಿಗ ಇಲ್ಲಿಯ ಜನರಿಗೆ ಕೆಲಸಗಳನ್ನು ನೀಡಬೇಕು ಎಂದು ಸರ್ಕಾರ ಒಪ್ಪಂದ ಮಾಡಿಕೊಳ್ಳಬೇಕು ಹಾಗೂ ಅನಿಯಮಿತವಾಗಿ ಆಗುತ್ತಿರುವ ವಲಸೆಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು.

ಇದೆಲ್ಲಾ ಆಗಬೇಕೆಂದರೆ ನಮ್ಮ ರಾಜಕೀಯ ಪಕ್ಷಗಳಿಗೆ ನಾಡಿಗೆ ಒಳಿತನ್ನು ಮಾಡುವ ಇಚ್ಛಾಶಕ್ತಿ ಇರಬೇಕು. ಆದರೆ ನಿಜಕ್ಕೂ ಈ ಕಾಳಜಿ ಇಂದು ಅಸ್ತಿತ್ವದಲ್ಲಿರುವ ಯಾವುದೇ ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಖಂಡಿತಾ ಇಲ್ಲ. ಕನ್ನಡ, ಕನ್ನಡಿಗ ಹಾಗೂ ಕರ್ನಾಟಕಗಳ ಬಗ್ಗೆ ಕಾಳಜಿ ಇರುವ ಒಂದು ನಿಜವಾದ ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ ಬರಬೇಕು. ಕನ್ನಡಿಗರ ಏಳಿಗೆಯನ್ನೇ ಮೂಲಮಂತ್ರವನ್ನಾಗಿ ಇಟ್ಟುಕೊಂಡು ಕೆಲಸ ಮಾಡುವ ಪಕ್ಷ ನಮಗೆ ಬೇಕು. ಆಗ ಮಾತ್ರ ನಮ್ಮ ಹಿರಿಯರು ನಮಗಾಗಿ ಮಾಡಿರುವ ತ್ಯಾಗ, ಬಲಿದಾನ ಹೋರಾಟ ಸಾರ್ಥಕವಾದಂತೆ. ಏನಂತೀರಿ ಗೆಳೆಯರೇ?

ಗುರುವಾರ, ನವೆಂಬರ್ 25, 2010

ನಮ್ಮ ನಾಡಿನಲ್ಲಿ ಕೇವಲ ರಾಷ್ಟ್ರೀಯ ಪಕ್ಷಗಳು ಮಾತ್ರ ಇರಬೇಕೆ?

ಕಳೆದ ಕೆಲವು ತಿಂಗಳುಗಳಿಂದ ಕರ್ನಾಟಕದ ರಾಜಕಾರಣ ಅವನ್ನತಿಯ ಹಾದಿ ಹಿಡಿದಿರುವುದು ನಿಮ್ಮ ಗಮನಕ್ಕೂ ಬಂದಿದೆ. ಈ ಸನ್ನಿವೇಶದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಯಡ್ಯೂರಪ್ಪನವರು, ರಾಜ್ಯದಲ್ಲಿ ಕೇವಲ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿ.ಜೆ.ಪಿ ಮಾತ್ರ ಇರಬೇಕು, ಇನ್ನಿತರ ಯಾವುದೇ ಪಕ್ಷಗಳು ಇರಬಾರದು ಅನ್ನುವ ಹೇಳಿಕೆಯನ್ನ ನೀಡಿದ್ದಾರೆ. ಇದು ಪತ್ರಿಕೆ ಹಾಗೂ ಟಿವಿಗಳಲ್ಲಿ ಸುದ್ದಿಯಾಗಿತ್ತು.

ನಮ್ಮ ನಾಡಿನಲ್ಲಿ ಕೇವಲ ರಾಷ್ಟ್ರೀಯ ಪಕ್ಷಗಳು ಮಾತ್ರ ಇರಬೇಕೆ?
ನಮ್ಮ ನಾಡಿನಲ್ಲಿ ಕೇವಲ ಬಿಜೆಪಿ ಹಾಗೂ ಕಾಂಗ್ರೆಸ್ ಮಾತ್ರ ಇರಬೇಕು ಅಂತ ಯಡ್ಯೂರಪ್ಪನವರು ಹೇಳಿದ್ದಾರೆ, ಇದರರ್ಥ ಕರ್ನಾಟಕದಲ್ಲಿ ಇವುಗಳನ್ನು ಹೊರತುಪಡಿಸಿ ಬೇರಾವುದೇ ಪ್ರಾದೇಶಿಕ ಪಕ್ಷಗಳು ಇರಬಾರದು ಅನ್ನುವುದು. ಈ ಮಾತು ಸಂವಿಧಾನ ಮೂಲ ಆಶಯಕ್ಕೆ ಧಕ್ಕೆ ತರುವಂತಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯಬ್ಬ ಪ್ರಜೆಗೂ ತನ್ನ ರಾಜಕೀಯ ನಿಲುವುಗಳನ್ನು ವ್ಯಕ್ತಪಡಿಸುವ ಹಕ್ಕಿದೆ, ಕೇವಲ ರಾಷ್ಟ್ರೀಯ ರಾಜಕೀಯ ಪಕ್ಷಗಳು ಇರಬೇಕು ಅನ್ನುವುದು, ಜನರ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿದಂತೆ.

ರಾಷ್ಟ್ರೀಯ ಪಕ್ಷಗಳಿಂದ ನಮ್ಮ ನಾಡಿಗೆ ನ್ಯಾಯ ಸಿಕ್ಕಿಲ್ಲ
ಕಳೆದ ಆರು ದಶಕಗಳಿಂದ ನಮ್ಮ ನಾಡಿನಲ್ಲಿ ಆಡಳಿತ ನಡೆಸುತ್ತಿರುವ ರಾಷ್ಟ್ರೀಯ ಪಕ್ಷಗಳಿಂದ ನಾಡಿನ ಯಾವುದೇ ಸಮಸ್ಯಗಳಿಗೆ ಸಂಪೂರ್ಣ ಪರಿಹಾರ ನೀಡಲು ಅಥವಾ ಕೊಡಿಸಲು ಸಾಧ್ಯವಾಗಿಲ್ಲ. ಅಂತರ್ ರಾಜ್ಯ ವಿವಾದಗಳಿದ್ದಾಗ, ರಾಜ್ಯ-ಕೇಂದ್ರ ಸರಕಾರದ ವ್ಯವಹಾರಗಳಲ್ಲಿ ಅನ್ಯಾಯವಾದಾಗ, ರಾಷ್ಟ್ರೀಯ ಪಕ್ಷಗಳಿಂದ ನ್ಯಾಯ ಸಿಗುವುದು ಕಷ್ಟ ಸಾಧ್ಯ, ಕಾರಣ ಇವರುಗಳು ತಮ್ಮ ಹೈಕಮಾಂಡಿನ ಆದೇಶದಂತೆ ನಡೆಯಬೇಕು. ಆದರೆ ಈ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಲು ಪ್ರಾದೇಶಿಕ ಪಕ್ಷಗಳು ಸಮರ್ಥವಾಗಿರುತ್ತವೆ, ಅವುಗಳು ಯಾವುದೇ ಹೈಕಮಾಂಡಿನ ಮರ್ಜಿಗಾಗಿ ಕಾಯಬೇಕಾಗಿಲ್ಲ. ಪ್ರಾದೇಶಿಕ ಪಕ್ಷಗಳು ಒಳ್ಳೆಯ ಆಡಳಿತ ನೀಡಲು ಸಾಧ್ಯ ಅನ್ನುವುದನ್ನು ನೆರೆಯ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ತೋರಿಸಿಕೊಟ್ಟಿವೆ. ಈ ನಾಡಿಗೆ ಬೇಕಾಗಿರುವುದು ಸರಿಯಾದ ನಾಯಕತ್ವ ಇರುವ, ನಾಡನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಂತಹ ಪಕ್ಷಗಳು.

ಬುಧವಾರ, ನವೆಂಬರ್ 10, 2010

ಕರ್ನಾಟಕದ ಊರಿನ ಹೆಸರುಗಳ ಬದಲಾವಣೆ ಯಾವಾಗ?

ನಿನ್ನೆ ಅಂದರೆ ೦೯ನೇ ನವಂಬರ್ ಅಂದು ಒರಿಸ್ಸಾ ಅಂತ ಕರೆಯಲ್ಪಡುತ್ತಿದ್ದ ರಾಜ್ಯಕ್ಕೆ ಸಂತೋಷಪಡುವ ದಿನ ಒದಗಿ ಬಂದಿದೆ, ಕಾರಣ ಅವರು ಬ್ರಿಟೀಷರು ಇಟ್ಟಿದ್ದ ಒರಿಸ್ಸಾ ಅನ್ನುವ ಬದಲು ತಮ್ಮ ರಾಜ್ಯಕ್ಕೆ ಮೂಲ ಹೆಸರಾದ ಒಡಿಶಾ ಅನ್ನುವ ಹೆಸರನ್ನು ಪಡೆದುಕೊಂಡಿದ್ದಾರೆ. ಹಾಗಯೇ ತಮ್ಮ ನಾಡಿನ ಭಾಷೆಯಾದ ಒರಿಯಾ ಅಂತ ಕರೆಯಲ್ಪಡುತ್ತಿದ್ದ ಭಾಷೆಯನ್ನ ಇನ್ನು ಮುಂದೆ ಒಡಿಯಾ ಅಂತ ಕರೆದುಕೊಳ್ಳುತ್ತಾರೆ. ಇದು ಬಹುಷಃ ಸಾಧ್ಯವಾಗಿದ್ದಕ್ಕೆ ಕಾರಣ ಅಲ್ಲಿ ಈಗ ಆಳುತ್ತಿರುವುದು ಪ್ರಾದೇಶಿಕ ಪಕ್ಷವಾದ ಬಿಜು ಜನತಾದಳದಿಂದ.

ತಮ್ಮ ರಾಜ್ಯದ ಹಾಗೂ ಭಾಷೆಯ ಅಧಿಕೃತ ಹೆಸರಿನ ಬದಲಾವಣೆಗಾಗಿ ೨೦೦೮ರಲ್ಲಿ ಪ್ರಸ್ತಾವನೆಯನ್ನ ಸಲ್ಲಿಸಿದ್ದ ಒಡಿಯಾ ಸರಕಾರ, ಲೋಕಸಭೆ ಅಧಿವೇಶನ ಮೊದಲನೇ ದಿನವೇ ಒಪ್ಪಿಗೆ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಲೋಕಸಭೆಯಲ್ಲಿ ಒಂದು ವಿಷಯ ಚರ್ಚೆಗೆ ಬರಬೇಕೆಂದರೆ, ಎಷ್ಟೋ ಮಜಲುಗಳನ್ನು, ಅಧಿಕಾರಿಗಳ ಕೈಗಳನ್ನು ದಾಟಿ ಬರಬೇಕು. ಇದನ್ನ ಸಾಧಿಸುವಲ್ಲಿ ಒಡಿಶಾ ರಾಜ್ಯದಿಂದ ಆರಿಸಿ ಬಂದಿರುವ ಸಂಸದರು ಮಹತ್ತರ ಪಾತ್ರವಹಿಸಿರುತ್ತಾರೆ. ತಮ್ಮ ಭಾಷೆಯ ಹಾಗೂ ನಾಡಿನ ಮೂಲ ಹೆಸರನ್ನು ಪಡೆದುಕೊಂಡಿರುವ ಒಡಿಶಾ ಜನರಿಗೆ ಅಭಿನಂದನೆಗಳು.

ನಮ್ಮ ನಾಡಿನ ಊರುಗಳ ಹೆಸರುಗಳು ಯಾವಾಗ ಬದಲಾಗೋದು?
ಒಡಿಶಾನಂತಹ ರಾಜ್ಯದ ಸರಕಾರ ಹಾಗೂ ಅಲ್ಲಿನ ಜನಪ್ರತಿನಿಧಿಗಳು ಒಟ್ಟಾಗಿ ತಮ್ಮ ಕೆಲಸವನ್ನ ಮಾಡಿಸಿಕೊಂಡಿದ್ದಾರೆ. ಅಲ್ಲಿನ ವಿಧಾನಸಭಾ ಸೀಟುಗಳ ಸಂಖ್ಯೆ ೧೪೭ ಹಾಗೂ ಲೋಕಸಭಾ ಸೀಟುಗಳ ಸಂಖ್ಯೆ ೨೧. ಆದರೆ ಇದಕ್ಕಿಂತ ದೊಡ್ಡದಾಗಿರುವ ನಮ್ಮ ರಾಜ್ಯದಲ್ಲಿ ಒಟ್ಟು ೨೨೪ ವಿಧಾನಸಭೆ ಸೀಟುಗಳು ಹಾಗೂ ೨೮ ಲೋಕಸಭಾ ಸೀಟುಗಳಿವೆ, ಒಡಿಶಾ ರಾಜ್ಯಕ್ಕಿಂತ ಬಲಶಾಲಿ ರಾಜ್ಯ ನಮ್ಮದು. ಆದರೂ ೨೦೦೬ರಲ್ಲಿ ಹಲವು ಊರುಗಳ ಹೆಸರುಗಳ ಬದಲಾವಣೆಗೆ ಸಲ್ಲಿಸಿದ್ದ ಪ್ರಸ್ತಾವನೆಯನ್ನ ಕೇಂದ್ರ ಸರಕಾರ ಇನ್ನೂ ಅನುಮೋದಿಸಿಲ್ಲಾ. ಬಹುಷಃ ಇದರ ಬಗ್ಗೆ ಚಕಾರ ಎತ್ತಬೇಕಾಗಿದ್ದ ನಮ್ಮ ಸಂಸದರು ಈ ವಿಷಯವನ್ನೇ ಮರೆತಂತಿದೆ. ರಾಜ್ಯ ಸರಕಾರಕ್ಕೂ ಕೂಡ ಇದರ ಬಗ್ಗೆ ಕಾಳಜಿಯಿಲ್ಲದಿರುವುದು ತಿಳಿಯುತ್ತದೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ ನಮ್ಮನ್ನು ಆಳುತ್ತಿರುವ ರಾಷ್ಟ್ರೀಯ ಪಕ್ಷಗಳಿಗೆ ನಾಡಿನ ಬಗ್ಗೆ ಕಾಳಜಿ ಇಲ್ಲಾ, ಕಾಳಜಿ ಇದ್ದ ನಾಯಕರಿದ್ದರೂ ಹೈಕಮಾಂಡ್ ಮುಂದೆ ಕೈಯುಡ್ದಿ ನಿಲ್ಲುವ ಪರಿಸ್ಥಿತಿ ಇದೆ. ಇಲ್ಲಿಂದ ಆರಿಸಿ ಹೋಗುವ ಸಂಸದರು ಸದನದಲ್ಲಿ ನಾಡಿನ ಬಗ್ಗೆ ದನಿ ಎತ್ತಿರುವುದು ವಿರಳ, ಇತ್ತೀಚಿನ ವರ್ಷಗಳಲ್ಲಿ ಇಲ್ಲ ಎನ್ನಬಹುದು. ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ನಾಡಿಗೆ ದೊರಕಬೇಕಾಗಿರುವ ಸೌಲಭ್ಯಗಳನ್ನು ಒದಗಿಸಿಕೊಡುವಷ್ಟು ಇಚ್ಚಾಶಕ್ತಿ ನಮ್ಮ ನಾಯಕರುಗಳಿಗೆ ಇಲ್ಲಾ.

ನಮ್ಮ ರಾಜ್ಯಕ್ಕೂ ಒಂದು ಪ್ರಾದೇಶಿಕ ರಾಜಕೀಯ ಪಕ್ಷ ಬೇಕು:
ನಮ್ಮ ನಾಡು-ನುಡಿ-ನಾಡಿಗರಿಗಾಗಿ ಪ್ರಾಮಾಣಿಕವಾಗಿ ದುಡಿಯುವಂತಹ ಒಂದು ರಾಜಕೀಯ ಪಕ್ಷ ನಮಗೆ ಬೇಕು, ಕಳೆದ ೬ ದಶಕಗಳಿಂದ ಇಲ್ಲಿರುವ ರಾಜಕೀಯ ಪಕ್ಷಗಳು ಇದರಲ್ಲಿ ವೈಫಲ್ಯ ಕಂಡಿವೆ, ಇದಕ್ಕೆ ಪರಿಹಾರ ನಮ್ಮ ರಾಜ್ಯಕ್ಕೆ ಒಂದು ಪ್ರಾದೇಶಿಕ ಪಕ್ಷ ಬೇಕು. ಪ್ರದೇಶಿಕ ಪಕ್ಷಗಳು ದೇಶದ ಅನೇಕ ರಾಜ್ಯಗಳಲ್ಲಿ ಆಡಳಿತ ಮಾಡುತ್ತಿದ್ದು, ತಮ್ಮ ರಾಜ್ಯಗಳ ಏಳಿಗೆಗೆ ದುಡಿಯುತ್ತಿವೆ, ಅಂತಹುದೆ ಒಂದು ರಾಜಕೀಯ ಪಕ್ಷ ಕರ್ನಾಟಕಕ್ಕೆ ಅವಶ್ಯಕತೆ ಇದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ನಾವುಗಳು ಪ್ರಾದೇಶಿಕತೆಯ ಮೂಲಕ ದೇಶದ ಅಭಿವೃದ್ಧಿಯನ್ನು ಕಾಣಬಹುದು.