ಸ್ವಾಭಿಮಾನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸ್ವಾಭಿಮಾನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಅಕ್ಟೋಬರ್ 22, 2012

ಒಂದೇ ನಾಡು... ಒಂದೇ ಕುಲವು...

ಇನ್ನೇನು ನವಂಬರ್ ೧ ಬಂದೇ ಬಿಟ್ಟಿತು, ಕನ್ನಡಿಗರ ಪಾಲಿಗೆ ಮನೆ ಹಬ್ಬದ ತರಹ ಇರುವ “ಕನ್ನಡ ರಾಜ್ಯೋತ್ಸವ” ಎಲ್ಲಡೆ ಆಚರಿಸಲ್ಪಡುತ್ತದೆ. ಸುಮಾರು ೨೦ ವಿವಿಧ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷೆ ಮಾತನಾಡುವ ಪ್ರಾಂತ್ಯಗಳೆಲ್ಲ ಒಂದಾಗಿ “ಕನ್ನಡ ನಾಡು” ಕರ್ನಾಟಕ ರಾಜ್ಯ ಸ್ಥಾಪನೆಯಾದ ದಿನವಿದು. ನಮ್ಮ ಈ ರಾಜ್ಯೋತ್ಸವದ ಹಿಂದೆ ಹಲವು ದಶಕಗಳ ಕಡು ಹೋರಾಟದ ಕಥೆಯಿದೆ. ಈ ಏಕೀಕರಣದ ಹೋರಾಟದಲ್ಲಿ ಹಲವಾರು ಮಹನೀಯರು ತಮ್ಮ ಜೀವನವನ್ನೇ ಇದಕ್ಕಾಗಿ ಮುಡಿಪಾಗಿಟ್ಟಿದ್ದರು. ಹಾಗಿದ್ರೆ ಈ ಏಕೀಕರಣದ ಕಥೆ ಏನು ಅನ್ನೋದನ್ನ ನೋಡೋಣ..

ವಿಜಯನಗರ ಸಾಮ್ರಾಜ್ಯದ ಪತನವಾದ ನಂತರ, ಕನ್ನಡ ದೇಶವು ಹಲವು ಸಾಮಂತರ ಹಾಗೂ ರಾಜರುಗಳ ನಡುವೆ ಹಂಚಿಹೋಗಿತ್ತು. ಇದಾದ ನಂತರ ಭಾರತಕ್ಕೆ ಬಂದ ಬ್ರಿಟೀಷರ ಕಾಲದಲ್ಲಿ ಆಡಳಿತದ ಅನುಕೂಲಕ್ಕಾಗಿ ೨೦ ವಿವಿಧ ಸಂಸ್ಥಾನಗಳಲ್ಲಿ ಹಂಚಿಹೋಗಿತ್ತು. ಇದರಲ್ಲಿ ಪ್ರಮುಖವಾಗಿ ಮೈಸೂರು ಸಂಸ್ಥಾನ, ನಿಜಾಮನ ಸಂಸ್ಥಾನ, ಬಾಂಬೆ ಪ್ರಾಂತ್ಯ, ಮದ್ರಾಸ್ ಪ್ರಾಂತ್ಯ ಹಾಗೂ ಕೊಡಗು ಪ್ರಾಂತ್ಯಗಳು ಪ್ರಮುಖವಾಗಿದ್ದವು. ಗಮನಿಸಬೇಕಾದ ಅಂಶವೆಂದರೆ ೨/೩ ನೇ ಭಾಗದಷ್ಟು ಕನ್ನಡಿಗರು ಮೈಸೂರು ಪ್ರಾಂತ್ಯದಿಂದ ಹೊರಗಿದ್ದರು. ಬಾಂಬೆ ಪ್ರಾಂತ್ಯದಲ್ಲಿ ಮರಾಠಿ ಆಡಳಿತ ಭಾಷೆಯಾಗಿತ್ತು, ಮದ್ರಾಸ್ ಪ್ರಾಂತ್ಯದಲ್ಲಿ ತಮಿಳು ಆಡಳಿತ ಭಾಷೆಯಾಗಿತ್ತು, ನಿಜಾಮರ ಆಡಳಿತದಲ್ಲಿ ಉರ್ದು ಭಾಷೆ. ಹೀಗಾಗಿ ಕನ್ನಡಿಗರಿಗೆ ತಾವು ಅನಾಥರಾಗಿದ್ದೇವೆ, ತಮ್ಮ ಮೇಲೆ ಹೇರಿಕೆಯಾಗುತ್ತಿದೆ ಅನ್ನೋ ಭಾವನೆ ಜಾಗೃತವಾಗ ತೊಡಗಿತು. ಬೇರೆಯವರ ಹಂಗಿನಲ್ಲಿ ಪರಕೀಯರಂತೆ ಬಾಳುತ್ತಿದ್ದೇವೆ ಅನ್ನೋ ಭಾವನೆ ಮನೆಮಾಡಿತು. ಕನ್ನಡಿಗರಿಗೆ ತಮ್ಮದೇ ಆದ ಒಂದು ರಾಜ್ಯವಿರಬೇಕು, ಅಲ್ಲಿ ಕನ್ನಡಿಗರಿಗೆ ಎಲ್ಲಾ ಹಕ್ಕುಗಳು ದೊರೆಯುವಂತಿರಬೇಕು ಅನ್ನೋ ಚರ್ಚೆಗಳು ನಡೆಯತೊಡಗಿದವು. ಇದುವೇ ಮುಂದೆ ಅಖಂಡ ಕರ್ನಾಟಕದ ಏಕೀಕರಣದ ಹೋರಾಟಕ್ಕೆ ನಾಂದಿಯಾಯಿತು. ನಾಡಿನ ಹಿರಿಯ ಸಾಹಿತಿಗಳು, ಪತ್ರಕರ್ತರು, ಹಾಗೂ ಅನೇಕ ಮಹನೀಯರು ಈ ಚಳುವಳಿಗೆ ಹೆಗಲುಕೊಟ್ಟರು.

(ಚಿತ್ರ ಕೃಪೆ: http://www.kamat.com/kalranga/kar/)

೧೮೫೬ರಲ್ಲಿ ಕರ್ನಾಟಕ ಏಕೀಕರಣದ ಮಾತುಗಳು ಕೇಳಿಬರಲು ಶುರುವಾದವು, ಆದರೆ ಇದಕ್ಕೆ ಬಲ ಬಂದಿದ್ದು ೧೮೯೦ ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಅಸ್ತಿತ್ವಕ್ಕೆ ಬಂದ ನಂತರ. ೧೯೦೩ ರಲ್ಲಿ ಸಂಘದಲ್ಲಿ ಭಾಷಣ ಮಾಡಿದ ಬೆನಗಲ್ ರಾಮರಾಯರು ಮೈಸೂರು ಸಂಸ್ಥಾನ, ಮದ್ರಾಸ್ ಪ್ರಾಂತ್ಯದ ಹಾಗೂ ಮುಂಬೈ ಪ್ರಾಂತ್ಯದ ಕನ್ನಡ ಭಾಗಗಳನ್ನು ಕೂಡಿಸಿ ಅಖಂಡ ಕರ್ನಾಟಕವನ್ನು ಕಟ್ಟುವ ಯೋಚನೆಯನ್ನು ಸಂಘದ ಮುಂದಿಟ್ಟರು. ನಂತರ ಚಳುವಳಿಗೆ ಒಂದು ಮೂರ್ತ ರೂಪ ಕೊಟ್ಟಿದ್ದು ಕರ್ನಾಟಕದ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರು. ಇದೇ ಸಮಯದಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ನವರು ೧೯೧೫ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಇದಾದ ನಂತರ ಪರಿಷತ್ತಿನ ಆಶ್ರಯದಲ್ಲಿ ಪ್ರತಿ ವರ್ಷ ಸಾಹಿತ್ಯ ಸಮ್ಮೇಳನ ನಡೆಸಿ ಏಕೀಕರಣದ ಬೇಡಿಕೆಯನ್ನು ಒತ್ತಾಯಿಸಲಾಗುತ್ತಿತ್ತು. ಸಾಹಿತ್ಯ ಪರಿಷತ್ತಿನ ಸಭೆಗಳು ರಾಜಕಾರಣಿಗಳ ಗಮನ ಸೆಳೆಯುವಲ್ಲಿ ಸಫಲವಾಯಿತು. ೧೯೨೦ರಲ್ಲಿ ಧಾರವಾಡದಲ್ಲಿ ಪ್ರಥಮ ಕರ್ನಾಟಕ ರಾಜಕೀಯ ಪರಿಷತ್ತು ನಡೆಸಿ ದೇಶಮಟ್ಟದ ಗಮನ ಸೆಳೆಯಲಾಯಿತು. ೧೯೨೪ರಲ್ಲಿ ಬೆಳಗಾವಿಯ ಕಾಂಗ್ರೆಸ್ ಕಾಲದಲ್ಲೇ ಸರ್. ಸಿದ್ದಪ್ಪಾ ಕಂಬಳಿಯವರ ಅಧ್ಯಕ್ಷತೆಯಲ್ಲಿ ಪ್ರಥಮ ಏಕೀಕರಣ ಸಮ್ಮೇಳನವನ್ನು ಸೇರಿತು. ಇದೇ ಸಮ್ಮೇಳನದಲ್ಲಿ ಹುಯಿಲುಗೋಳ ನಾರಾಯಣರಾಯರ “ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು” ಗೀತೆಯನ್ನು ಹಾಡಲಾಯಿತು. ಇದಾದ ನಂತರ ೧೯೪೬ ರ ವರೆಗೆ ಈ ಸಮ್ಮೇಳನಗಳನ್ನು ವಿವಿಧ ಗಣ್ಯರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ೧೯೨೬ರಲ್ಲಿ ಹಿಂದುಸ್ಥಾನೀ ಸೇವಾದಳವು ಸಹಿ ಸಂಗ್ರಹ ಚಳುವಳಿಯನ್ನು ಮಾಡಿ ಏಕೀಕರಣದ ಪರ ೩೬,೦೦೦ ಜನರ ಸಹಿ ಪಡೆಯಿತು. ಇದರ ಪರಿಣಾಮವಾಗಿ ಏಕೀಕರಣ ರಾಜಕೀಯ ವಿಷಯವಾಯಿತು. ೧೯೩೭ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಏಕೀಕರಣ ತನ್ನ ಗುರಿಯಂದು ಹೇಳಿತ್ತು. ಪ್ರಜಾ ಸಂಯುಕ್ತ ಪಕ್ಷವೂ ಸಹ ೧೯೩೭ರಲ್ಲಿ ಏಕೀಕರಣವನ್ನು ಬೆಂಬಲಿಸಿ ಠರಾವು ಮಾಡಿತು. ೧೯೪೭ರಲ್ಲಿ ಮುಂಬೈ ಹಾಗೂ ಮದ್ರಾಸ್ ವಿಧಾನಸಭೆಗಳು ಏಕೀಕರಣವನ್ನು ಬೆಂಬಲಿಸಿ ಠರಾವು ಮಾಡಿದವು. ೧೯೪೭ರ ಡಿಸೆಂಬರ್ ನಲ್ಲಿ ಕಾಸರಗೋಡಿನಲ್ಲಿ ಡಾ| ದಿವಾಕರರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಏಕೀಕರಣ ಸಮ್ಮೇಳನವು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಕರ್ನಾಟಕ ಏಕೀಕರಣವಾಗದ ಬಗ್ಗೆ ಅಸಮಾಧಾನ ಸೂಚಿಸಿತು. 


ಆದರೆ ಕೇಂದ್ರ ಸರ್ಕರಾ ನೇಮಿಸಿದ್ದ ಧಾರ್ ಆಯೋಗವು ಭಾಷಾವಾರು ಪ್ರಾಂತ್ಯದ ರಚನೆಯನ್ನು ವಿರೋಧಿಸಿತು. ಆಗ ಕಾಂಗ್ರೆಸ್ ಧಾರ್ ವರದಿಯ ಬಗ್ಗೆ ಪರಿಶೀಲನೆಗಾಗಿ ಜವಾಹರ್ ಲಾಲ್ ನೆಹರು, ವಲ್ಲಭಭಾಯಿ ಪಟೇಲ್ ಹಾಗೂ ಪಟ್ಟಾಭಿ ಅವರ ಸಮಿತಿಯೊಂದನ್ನು ರಚಿಸಿತು. ಆದರೆ ಈ ಸಮಿತಿಯು ಸಹ ಅಂಧ್ರಪ್ರದೇಶವನ್ನು ಹೊರತು ಪಡಿಸಿ ಬೇರೆ ಭಾಷಾವಾರು ಪ್ರಾಂತಗಳ ಬೇಡಿಕೆಯನ್ನು ಬೆಂಬಲಿಸಲಿಲ್ಲ. ಸ್ವಾಂತಂತ್ಯಕ್ಕಿಂತ ಮುಂಚೆ ೨೦ ಆಡಳಿತಕ್ಕೆ ಸೇರಿದ್ದ ಕರ್ನಾಟಕ ಸ್ವಾತಂತ್ರ್ಯದ ನಂತರ ೫ ಪ್ರಮುಖ ಆಡಳಿತಕ್ಕೆ ಬಂತು. ಆಗ ಮೈಸೂರು ಸಂಸ್ಥಾನದ ಜೊತೆ ಇತರೆ ಭಾಗಗಳನ್ನು ಸೇರಿಸಲು ಮೈಸೂರು ಹಾಗೂ ಕೊಡಗಿನ ಕೆಲವರು ಅಕ್ಷೇಪವೆತ್ತಿದರು. ಆಗ ಗೊರೂರು ರಾಮಸ್ವಾಮಯ್ಯಂಗಾರ್, ಕುವೆಂಪು, ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಮುಂತಾದ ನಾಯಕರುಗಳು ಜನಾಭಿಪ್ರಾಯದ ಪರಿವರ್ತನೆಗೆ ಕಾರಣರಾದರು.

೧೯೫೩ರಲ್ಲಿ ಏಕೀಕರಣಕ್ಕಾಗಿ ಸತ್ಯಾಗ್ರಹ ನಡೆಸಿ ೫೦೦೦ ಜನ ಬಂಧಿತರಾದರು. ಅದೇ ವರ್ಷ ಪೊಟ್ಟಿ ಶ್ರೀರಾಮುಲು ಉಪವಾಸ ನಡೆಸಿ ತೀರಿಕೊಂಡಾಗ ಆಂಧ್ರ ಪ್ರಾಂತ ರಚನೆಯಾಗಿ, ಬಳ್ಳಾರಿ ಜಿಲ್ಲೆಯ ಏಳು ತಾಲೂಕುಗಳು ಮೈಸೂರು ರಾಜ್ಯಕ್ಕೆ ಸೇರಿತು. ಇಷ್ಟಾದರೂ ಕರ್ನಾಟಕ ಒಂದಾಗುವ ಲಕ್ಷಣಗಳು ಕಾಣಿಸುತ್ತಿದ್ದಿಲ್ಲ, ಆಗ ಜನರ ಸಿಟ್ಟು ಎಷ್ಟರ ಮಟ್ಟಿಗೆ ಇತ್ತೆಂದರೆ ಧಾರವಾಡ ಹಾಗೂ ಹುಬ್ಬಳ್ಳಿಗಳಲ್ಲಿ ವಿಧಾನಸಭೆಗೆ ಉಪಚುನಾವಣೆಗಳಾದಾಗ ಕಾಂಗ್ರೆಸ್ ಸೋತು ಏಕೀಕರಣದ ಪರ ಅಭ್ಯರ್ಥಿಗಳು ಗೆದ್ದರು. ಇದೇ ಸಮಯದಲ್ಲಿ ಹುಬ್ಬಳ್ಳಿಯ ಬಳಿ ಅದರಗುಂಚಿಯಲ್ಲಿ ಶಂಕರಗೌಡ ಪಾಟೀಲರು ಅಖಂಡ ಕರ್ನಾಟಕಕ್ಕೆ ಆಗ್ರಹಿಸಿ ಆಮರಣ ಉಪವಾಸ ಕೈಗೊಂಡರು. ಅದೇ ಸಮಯದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕೆ.ಪಿ.ಸಿ.ಸಿ ಸಭೆಯ ವೇಳೆ ಏಕೀಕರಣಕ್ಕೆ ಆಗ್ರಹಿಸಿ ಜನರು ಕಲ್ಲು ತೂರಿ ಪ್ರತಿಭಟಿಸಿದರು. ಇದಾದ ನಂತರ ಫಜಲ್ ಅಲಿ ಅವರ ಅಧ್ಯಕ್ಷತೆಯಲ್ಲಿ ಭಾರತ ಸರ್ಕಾರ ರಾಜ್ಯ ಪುನರ್ಘಟನಾ ಅಯೋಗವನ್ನು ನೇಮಿಸಿತು. ಈ ಆಯೋಗ ಸಲ್ಲಿಸಿದ ವರದಿಯ ಪ್ರಕಾರ ಏಕೀಕೃತ ಕರ್ನಾಟಕ ೧೯೫೬ರ ನವಂಬರ್ ೧ಕ್ಕೆ ಅಸ್ತಿತ್ವಕ್ಕೆ ಬಂತು. ಮೈಸೂರ ಎಂಬ ಹೆಸರಿದ್ದ ರಾಜ್ಯಕ್ಕೆ ೧೯೭೩ರ ನವೆಂಬರ್ ೧ರಂದು “ಕರ್ನಾಟಕ” ಎಂದು ಹೆಸರಿಡಲಾಯಿತು. ಈ ಸಂಧರ್ಭದಲ್ಲಿ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರಿಗೆ ನಮ್ಮೆಲ್ಲರ ನಮನ ಸಲ್ಲಲೇಬೇಕು. ಈ ಮಹನೀಯರು ನಮಗೆ ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆದುಕೊಂಡು ಹೋಗಬೇಕು ಹಾಗೂ ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಕಡೆಗೆ ನಮ್ಮ ನಡೆ ಇರಬೇಕು.

ಗುರುವಾರ, ನವೆಂಬರ್ 17, 2011

ನಮ್ಮ ಸರ್ಕಾರಕ್ಕಿರುವ ಕನ್ನಡ ಕಾಳಜಿ ಎಷ್ಟು???

ಸುಮಾರು ೩.೫ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಹೊಸತರಲ್ಲಿ ಬಿಜೆಪಿ ಸರ್ಕಾರ ತಾನು ರೈತ ಪರ, ಕನ್ನಡ ಪರ, ನಾಡು-ನುಡಿಗೆ ಧಕ್ಕೆಯಾದಲ್ಲಿ ಅದರ ಪರವಾಗಿ ತಾನೆಂದಿಗೂ ಮುಂದೆ ಅನ್ನುವ ರೀತಿಯಲ್ಲಿ ಹೇಳೀಕೆಗಳನ್ನು ನೀಡಿತ್ತು, ಹೊಸ ಸರ್ಕಾರದ ಈ ಮಾತನ್ನ ಜನರು ಸಹ ನಂಬಿದ್ದರು. ಆದರೆ ಅದಾದ ಸ್ವಲ್ಪ ದಿನದಲ್ಲಿಯೇ ಅದು ತನ್ನ ನಿಜವಾದ ಬಣ್ಣವನ್ನು ಬಯಲು ಮಾಡುತ್ತ ಹೊರಟಿತು. ಸರ್ಕಾರ ಮೊದಲಿಗೆ ರೈತರ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಇದಾದ ನಂತರ ಹಲವಾರು ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ತನ್ನ ಬೇಳೆಕಾಳು ಬೇಯಿಸಿಕೊಳ್ಳಲು ಭಾಷಾ ಅಲ್ಪಸಂಖ್ಯಾತರನ್ನು ಓಲೈಸುತ್ತಾ ತನ್ನ ವೋಟ್ ಬ್ಯಾಂಕ್ ರಾಜಕಾರಣವನ್ನು ತೋರಿಸಿತು, ಕನ್ನಡ ಪರ ಸಂಘಟನೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಿತು, ಹೀಗೆ ಹಲವಾರು ವಿಷಯಗಳಲ್ಲಿ ಜನವಿರೋಧಿತನ ತೋರಿಸುತ್ತಲೇ ಬಂದಿರುವ ಬಿಜೆಪಿ ಸರ್ಕಾರ ನಮ್ಮನ್ನು ಆಳುತ್ತಿರುವ ಸರ್ಕಾರ ನಜಕ್ಕೂ ನಮ್ಮದೇ? ಅನ್ನುವ ಪ್ರಶ್ನೆಯನ್ನು ನಮ್ಮಲ್ಲಿ ಹುಟ್ಟು ಹಾಕಿದೆ.

ಇದಕ್ಕೆ ಇತ್ತೀಚಿನ ಉದಾಹರಣೆಯಾಗಿ ನಮ್ಮ ಕಣ್ಣ ಮುಂದಿರುವ ಬೆಳಗಾವಿಯ ಘಟನೆ. ಕರ್ನಾಟಕ ರಾಜ್ಯೋತ್ಸವದ ದಿನದಂದು ನಮ್ಮ ರಾಜ್ಯದ ಬೆಳಗಾವಿ ಜೆಲ್ಲೆಯ ಮಹಾಪೌರರಾಗಿರುವ ಶ್ರೀಮತಿ ಮಂದಾ ಬಾಳೆಕುಂದ್ರಿ ಅವರು ಎಂಇಎಸ್ ನಂತಹ ಪುಂಡ ಸಂಘಟನೆ ಜೊತೆ ಸೇರಿ ನಾಡವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಇದರ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದ ನಂತರವೂ ಸಹ ಸರ್ಕಾರ ಇನ್ನು ತನಿಖೆ ನಡೆಸುತ್ತಲೇ ಇದೆ. ಆದರೆ ಇದನ್ನ ವಿರೋಧಿಸಿ ಕರವೇಯಂತಹ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಇಳಿದರೆ ತಕ್ಷಣವೇ ಬಂಧಿಸಿ ಹಲವಾರು ಆಪಾದನೆಗಳನ್ನು ಹಾಕಿ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತದೆ. ಇದು ನಮ್ಮ ಸರ್ಕಾರದ ಕನ್ನಡ ಪರ ನೀತಿ. ಕೇವಲ ಇದೊಂದೆ ಅಲ್ಲ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ಅಧಿಕಾರಕ್ಕೆ ಬರಲು ನಮ್ಮ ಬಿಜೆಪಿ ಪಕ್ಷ ಎಂಇಎಸ್ ನಂತಹ ಸಂಘಟನೆ ಜೊತೆ ಕೈಜೋಡಿಸಿ ಅಧಿಕಾರಕ್ಕೆ ಬರುತ್ತದೆ. ಒಂದು ಕಡೆಯಲ್ಲಿ ಎಂಇಎಸ್ ಅನ್ನು ವಿರೋಧಿಸುವ ನಾಟಕವಾಡುತ್ತ ಇನ್ನೊಂದು ಕಡೆ ಸಾಮರಸ್ಯದಿಂದ ಬದುಕುತ್ತಿರುವ ಕನ್ನಡ ಹಾಗೂ ಮರಾಠಿಗರ ನಡುವೆ ಹುಳಿ ಹಿಂಡುತ್ತಿರುವ ಎಂಇಎಸ್ ನಂತಹ ಸಂಘಟನೆಯೊಂದಿಗೆ ಜೊತೆ ಕೈಜೋಡಿಸುವ ಬಿಜೆಪಿ ಪಕ್ಷ ಯಾವ ನೈತಿಕತೆಯನ್ನು ಉಳಿಸಿಕೊಂಡಿದೆ? ಕೆಲವು ಸಾವಿರ ಮರಾಠಿ ಮೂಲಭೂತವಾಗಳ ಓಟಿಗಾಗಿ ಕೋಟ್ಯಾಂತರ ಕನ್ನಡಿಗರ ಭಾವನೆಗೆ ಬೆಂಕಿ ಇಡುತ್ತಿರುವ ಬಿಜೆಪಿ ಪಕ್ಷಕ್ಕೆ ಕನ್ನಡಿಗರೆಂದರೆ ಅಸಡ್ಡೆಯೇ?

ಮಹಾರಾಷ್ಟ್ರದಲ್ಲಿ “ಕರ್ನಾಟಕ ರಾಜ್ಯ” ಫಲಕ ಹಾಕಿ:
ಹೀಗೆ ಹೇಳಿದವರು ಬೇರಾರು ಅಲ್ಲ ಸ್ವತ: ಬೆಳಗಾವಿಯನ್ನು ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿರುವ ಬಿಜೆಪಿ ಪಕ್ಷದ ಸಂಸದ ಶ್ರೀ ಸುರೇಶ್ ಅಂಗಡಿಯವರು. ಇಂದಿನ ಕನ್ನಡ ಪ್ರಭದಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಕನ್ನಡ ಪರ ಸಂಘಟನೆಯೊಂದು ಬೆಳಗಾವಿ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿರು ಮಹಾರಾಷ್ಟ್ರ ರಾಜ್ಯ ಅನ್ನುವ ಫಲಕವನ್ನು ತಗೆಸಿ ಎಂದು ಜಿಲ್ಲಾಧಿಕಾರಿಗೆ ಮನವಿ ಕೊಡಲು ಹೋದಾಗ ಅಲ್ಲಿದ್ದ ನಮ್ಮ ಸಂಸದರಿಂದ ಬಂದ ಉತ್ತರ
ನಿಮಗೆ ಧೈರ್ಯವಿದ್ದರೆ ಮಹಾರಾಷ್ಟ್ರಕ್ಕೆ ಹೋಗಿ “ಕರ್ನಾಟಕ ರಾಜ್ಯ” ಎಂಬ ನಾಮ ಫಲಕ ಹಾಕಿರಿ. ಕನ್ನಡಿಗರು ಇಲ್ಲಿ ಗಲಾಟೆ ಮಾಡಿದರೆ ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ತೊಂದರೆ ಆಗುತ್ತಿದೆ. ಮಹಾನಗರ ಪಾಲಿಕೆ ಸೂಪರ್ ಸೀಡ್ ಮಾಡಿದರೆ ಅವರು ಕೋರ್ಟ್ ಗೆ ಹೋಗುತ್ತಾರೆ

ಹಾಗಾದರೆ ನಮ್ಮ ಮಾನ್ಯ ಸಂಸದರಿಗೆ ಎಂಇಎಸ್ ಮಾಡಿದ್ದು ತಪ್ಪಾಗಿ ಕಂಡಿಲ್ಲವೇ? “ಕರ್ನಾಟಕ ರಾಜ್ಯ” ಅನ್ನೋ ನಾಮ ಫಲಕ ಕರ್ನಾಟಕದಲ್ಲಿ ಬಿಟ್ಟು ಮಹಾರಾಷ್ಟ್ರದಲ್ಲಿ ಹಾಕಿದರೆ ಆಗುವ ಉಪಯೋಗವೇನು? ನಮ್ಮ ರಾಜ್ಯದಲ್ಲಿ ಬೇರೆ ರಾಜ್ಯದ ಹೆಸರಿನ ನಾಮ ಫಲಕಗಳಿದ್ದರೆ ಅದನ್ನು ತಗೆಯದೇ ಬಿಡಬೇಕೆ? ಅವರು ಕೋರ್ಟ್ ಗೆ ಹೋಗುತ್ತಾರೆ ಅನ್ನೋ ಕಾರಣಕ್ಕೆ ನಾವು ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದೇ? ಈ ರೀತಿಯ ಉದ್ಧಟತನದ ಕೆಲಸಗಳು ಪದೇ ಪದೇ ಬೆಳಗಾವಿಯಲ್ಲಿ ಆಗುತ್ತಿದ್ದರು ಸಹ ನಮ್ಮ ಸರ್ಕಾರ ಏನು ಕ್ರಮ ಕೈಗೊಂಡಿದೆ? ನಮ್ಮ ಕನ್ನಡ ಪರ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲು ತೋರಿಸುವ ತರಾತುರಿಯನ್ನು ಸರ್ಕಾರ ಈ ನಾಡವಿರೋಧಿಗಳ ಮೇಲೆ ಕ್ರಮಕೈಗೊಳ್ಳಲು ಯಾಕೆ ಮುಂದಾಗುತ್ತಿಲ್ಲ?

ಹುಸಿ ರಾಷ್ಟ್ರೀಯತೆಯ ಸೋಗಿನಲ್ಲಿ ಜನರನ್ನು ಭಾಷೆಯ ಹೆಸರಿನಲ್ಲಿ ಒಡೆದು ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ಈ ರಾಷ್ಟ್ರೀಯ ಪಕ್ಷಗಳಿಂದ ನಮ್ಮ ನಾಡಿಗಾಗುತ್ತಿರುವ ಅವಮಾನ, ನಮ್ಮ ಜನರಿಗೆ ಆಗುತ್ತಿರುವ ನೋವು, ಹಿಂಸೆಗೆ ಕಡಿವಾಣ ಬೀಳಬೇಕಾದಲ್ಲಿ ನಮ್ಮ ನಾಡು-ನುಡಿ-ನಾಡಿಗರನ್ನು ರಕ್ಷಿಸುವಂತಹ ಒಂದು ಪ್ರಾದೇಶಿಕ ಪಕ್ಷ ನಿಜವಾಗಲೂ ಬೇಕು ಅನ್ನುವ ನಮ್ಮ ಆಸೆ ಇಂತಹ ಘಟನೆಗಳಿಂದ ಗಟ್ಟಿಯಾಗುತ್ತಲೇ ಹೋಗುತ್ತಿದೆ.

ಶುಕ್ರವಾರ, ಜುಲೈ 22, 2011

ಕರ್ನಾಟಕದವರು ಬಿಟ್ಟಿ ಬಿದ್ದಿದ್ದಾರಾ?


ಬಹುಷಃ ಕರ್ನಾಟಕದವರ ಮೇಲೆ ಆಗುತ್ತಿರುವ ದೌರ್ಜನ್ಯದ ಸರಮಾಲೆಗೆ ಹೊಸದೊಂದು ನೋವುಂಟು ಮಾಡುವ ವಿಚಾರ ಸೇರಿಕೊಂಡಿದೆ. ನಿನ್ನೆಯಿಂದ ಪ್ರದರ್ಶನ ಕಾಣುತ್ತಿರುವ ತಮಿಳಿನ ರೀಮೇಕ್ ಚಿತ್ರವಾದ ಸಿಂಗಂ ಅನ್ನೋ ಹಿಂದಿ ಸಿನೇಮಾದಲ್ಲಿ ನಾಯಕ ಹಾಗೂ ಖಳನಾಯಕನ ಪಾತ್ರದ ನಡುವೆ ನಡೆಯುವ ಸಂಭಾಷಣೆಯಲ್ಲಿ ಖಳನಾಯಕ “ನಾನು ಕರ್ನಾಟಕದ ಗಡಿಯಿಂದ ೧೦೦೦ ಜನರನ್ನು ಕರೆತರುತ್ತೇನೆ ಎಂದು ಹೇಳಿದಾಗ ಅದಕ್ಕೆ ಪ್ರತಿಯಾಗಿ ನಾಯಕ ನಿನ್ನಂತ ೧೦೦೦ ನಾಯಿಗಳನ್ನು ಬೇಟೆಯಾಡಲು ನನ್ನಂತ ಒಂದು ಸಿಂಹ ಸಾಕು ಎಂದು ಹೇಳುತ್ತಾನೆ”, ಅಲ್ಲಿಗೆ ಚಿತ್ರದ ಪ್ರಕಾರ ಕರ್ನಾಟಕದ ಗಡಿ ಭಾಗಗಳಲ್ಲಿ ವಾಸಿಸುವ ಜನರು ನಾಯಿಗಳಂತೆ? ಇನ್ನೊಂದು ವಿಶೇಷ ಅಂದ್ರ ಈ ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ ಹಾಗೂ ಖಳನಾಯಕನ ಪಾತ್ರದಲ್ಲಿ ನಟಿಸಿರುವ ಪ್ರಕಾಶ್ ರೈ ಇಬ್ಬರೂ ಕರ್ನಾಟಕದವರೇ (?) ಆಗಿದ್ದರೂ ಒಂದು ರಾಜ್ಯದ ಜನರಿಗೆ ನೋವುಂಟು ಮಾಡುವಂತಹ ಸಂಭಾಷಣೆಯನ್ನ ಬಳಲಸೇಬಾರದಿತ್ತು ಅನ್ನೋ ಪರಿಜ್ಞಾನ ಕೂಡ ಅವರಲ್ಲಿ ಇರಲಿಲ್ವೇ?

ಆದರೆ ನಿಜಕ್ಕೂ ಗಡಿ ಭಾಗವಾದ ಬೆಳಗಾವಿಯಲ್ಲಿ ಕಷ್ಟ ಅನುಭವಿಸುತ್ತಿರುವುದು ಕನ್ನಡದ ಜನರೇ ಅನ್ನೋದು ನಮಗೆಲ್ಲಾ ಗೊತ್ತಿರುವುದೇ. ಎಂ.ಇ. ಎಸ್ ನಂತಹ ಒಂದು ಸಂಘಟನೆ ಹುಟ್ಟಿಕೊಂಡಾಗಿನಿಂದ ಕನ್ನಡಿಗರ ಪಾಡು ನೆಲಕಚ್ಚಿತ್ತು. ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳೋಕೆ ಒಂದಾಗಿ ಬಾಳುತ್ತಿದ್ದ ಕನ್ನಡ ಹಾಗೂ ಮರಾಠಿ ಭಾಷಿಕರ ನಡುವೆ ಕಂದಕ ಸೃಷ್ಠಿಸಿದ ಜನರಿವರು. ಕನ್ನಡಿಗರ ವಿರುದ್ಧ ಎಂತಹ ಹೀನ ಕೆಲಸಕ್ಕಾದರೂ ತಯಾರಾಗಿರುವ ಜನರಿವರು. ಸುಮಾರು ೩೦-೪೦ ವರ್ಷಗಳಿಂದ ಇವರ ದಬ್ಬಾಳಿಕೆಯಿಂದ ಬೇಸತ್ತಿದ್ದ ಜನರಿಗೆ ಕರವೇ ಯಂತಹ ಕನ್ನಡ ಪರ ಸಂಘಟನೆ ದುಡಿದ ಪರಿಣಾಮ ಇಂದು ಕನ್ನಡಿಗರು ಕೊಂಚ ಉಸಿರಾಡುವಂತಹ ಪರಿಸ್ಥಿತಿ ಇದೆ. ಆದರೆ ಇನ್ನೊಬ್ಬರ ನೋವಿನಲ್ಲೂ ಸುಖಪಡುವ ಎಂ.ಇ.ಎಸ್ ನಂತಹ ಸಂಘಟನೆಯ ಜನರ ತೆವಲಿಗಾಗಿ ಇಂತಹ ಸಂಭಾಷಣೆಗಳನ್ನು ಸೇರಿಸಿ ಕರ್ನಾಟಕದ ಜನರಿಗೆ ಅವಮಾನವೆಸಗುವುದೆ ಎಷ್ಟರ ಮಟ್ಟಿಗೆ ಸರಿ?

ಕನ್ನಡಿಗರ ವಿಶ್ವಮಾನವತೆ!!
ಇಂದು ಬೆಳಗ್ಗೆ ಸುವರ್ಣ ವಾಹಿನಿಯಲ್ಲಿ ಕರವೇ ಅಧ್ಯಕ್ಷ ಶ್ರೀ ಟಿ.ಎ. ನಾರಾಯಣಗೌಡರ ಸಂದರ್ಶನದಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿದ ಕರ್ನಾಟಕದ ಪ್ರಜೆಗಳೊಬ್ಬರು ಚಿತ್ರದ ಸಂಭಾಷಣೆಯಲ್ಲಿ ಯಾವುದೇ ತಪ್ಪಿಲ್ಲ, ಅದು ಕನ್ನಡಿಗರ ಪರವಾಗಿದೆ ಹಾಗಾಗಿ ಅದಕ್ಕೆ ಅಡ್ಡಿಪಡೆಸಬೇಡಿ ಅಂತ ಸಲಹೇ ನೀಡಿದರು. ಬಹುಷಃ ಅವರು ನಿಜಕ್ಕೂ ವಿಶ್ವಮಾನವರೇ ಇರಬೇಕು. ಹೀಗೆ ಕನ್ನಡಿಗರು ತಮ್ಮತನವನ್ನ ಮರೆತು ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಸಹಿಸಿಕೊಂಡು ಬದುಕಬೇಕಾದ ಹೀನ ಪರಿಸ್ಥಿತಿಗೆ ಇಂಥವರೆ ಕಾರಣ. ನಮ್ಮ ಹೇಡಿತನಕ್ಕೆ, ನಮ್ಮ ಅಭಿಮಾನ ಶ್ಯೂನ್ಯತೆಗೆ ನಾವು ಕೊಟ್ಟಿರುವ ಹೆಸರು ವಿಶ್ವಮಾನವತೆಯೇ? ಕರ್ನಾಟಕದವರನ್ನು ಅವಹೇಳಿಸಿ ಮಾತನಾಡಿರುವುದು ಇದೇ ಮೊದಲ್ಲಲ, ಹಾಗೆಯೇ ಇದೇ ಕೊನೆಯಾಗುತ್ತದೆಂಬ ನಂಬಿಕೆ ಕೂಡ ಇಲ್ಲಾ. ಒಂದು ಒಕ್ಕೂಟದ ವ್ಯವಸ್ಥೆಯಲ್ಲಿ ಬದುಕುತ್ತಿರುವ ವಿವಿಧ ರಾಜ್ಯಗಳ ಜನರ ನಡುವೆ ಒಡಕು ತರಬಹುದಾದಂತಹ ಇಂತಹ ಕೆಲಸಗಳನ್ನ ತಡೆಯುವುದಕ್ಕೆ ಅಲ್ಲಿಯ ಜನರಿಂದ ಮಾತ್ರ ಸಾಧ್ಯ, ಜನ ಎಚ್ಚೆತುಕೊಳ್ಳಬೇಕು, ನಾವು, ನಮ್ಮತನ ಅನ್ನೋ ಜಾಗೃತಿ ಅವರಲ್ಲಾಗಬೇಕು. ಯಾವುದೇ ಭಾಗದ ಜನರನ್ನ ಕೀಳಾಗಿ ಕಾಣುವ ಇಂತಹ ಹೀನ ಚಾಳಿಗೆ ವಿರುದ್ಧವಾಗಿ ಧ್ವನಿ ಎತ್ತಿ ನಿಲ್ಲಬೇಕು.
ಚಿತ್ರ ಕೃಪೆ: Pics4news