ಕರ್ನಾಟಕ ರಕ್ಷಣಾ ವೇದಿಕೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕರ್ನಾಟಕ ರಕ್ಷಣಾ ವೇದಿಕೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮೇ 20, 2012

ಮುಖ್ಯಮಂತ್ರಿಗಳೇ, ಯಳ್ಳೂರು ಇರೋದು ಮಹಾರಾಷ್ಟ್ರದಲ್ಲಾ?


ಇಷ್ಟಕ್ಕೂ ಈಗ ನಾನು ಹೇಳಲು ಹೊರಟಿರುವ ಊರು ಹೆಚ್ಚು ಜನರಿಗೆ ಪರಿಚಿತವಿಲ್ಲದೇ ಇರಬಹುದು. ಯಳ್ಳೂರು ಅನ್ನೋ ಗ್ರಾಮ ಇರುವುದು ಬೆಳಗಾವಿ ನಗರದಿಂದ ಕೆಲವೇ ಕಿಲೋಮೀಟರ್ ಗಳ ದೂರದಲ್ಲಿ. ಯಳ್ಳೂರಿಗೆ ಬೆಳಗಾವಿಯಿಂದ ಹತ್ತಾರು ಬಸ್ಸುಗಳು ಬೆಳಗ್ಗೆಯಿಂದ ರಾತ್ರಿಯವರಿಗೂ ಓಡಾಡುತ್ತವೆ. ಯಳ್ಳೂರಿನಲ್ಲಿ ಒಂದು ಗ್ರಾಮ ಪಂಚಾಯಿತಿ ಸಹ ಇದೆ. ಯಳ್ಳೂರು ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರಕ್ಕೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. ಸರಿ ಇದರಲ್ಲೇನು ವಿಶೇಷ ಅಂತೀರ?? ಒಂದು ವಿಶೇಷ ಇದೆ ಅದೇನೆಂದರೆ ಯಳ್ಳೂರು ಮಹಾರಾಷ್ಟ್ರದಲ್ಲಿದೆ!!!! ಹೌದು ಸರಿಯಾಗಿ ಓದಿಕೊಳ್ಳಿ, ಯಳ್ಳೂರು ಇರುವುದು ಮಹಾರಾಷ್ಟ್ರದಲ್ಲಿ. ಹಾಗಂತ ನಾನು ಹೇಳುತ್ತಿಲ್ಲ ಬದಲಾಗಿ ಯಳ್ಳೂರಿನಲ್ಲಿರುವ ಬೋರ್ಡ್ ಹೇಳುತ್ತದೆ. ಹಾಗೂ ಈ ಬೋರ್ಡ್ ಹಾಕಿರುವುದು ಎಂ.ಇ.ಎಸ್ ನವರು.

(ಚಿತ್ರಕೃಪೆ: ಅಂತರ್ಜಾಲ)

ಬೋರ್ಡ್ ತಗೆಯೋದಿಲ್ಲ ಅಂದ ಸರ್ಕಾರ

ಹಲವು ಶತಮಾನಗಳಿಂದ ಇಲ್ಲಿ ಪರಸ್ಪರವಾಗಿ ಸಾಮರಸ್ಯದಿಂದ ಬದುಕುತ್ತಿರುವ ಜನರ ಮಧ್ಯ ಭಾಷಾ ವೈಷ್ಯಮ್ಯವನ್ನು ಬೆಳಸಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವ ಎಂ.ಇ.ಎಸ್ ನಂತಹ ನಾಡದ್ರೋಹಿ ಸಂಘಟನೆಯೊಂದು ಹಲವು ದಶಕಗಳಿಂದ ಜನರ ನಡುವೆ ಭಾಷಾ ವೈಷಮ್ಯದ ಬೀಜವನ್ನು ಬಿತ್ತಿ ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳುತ್ತ, ಕರಗಿ ಹೋಗುತ್ತಿರುವ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಆದರೆ ರಾಜ್ಯದ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿರುವ ಇಂತಹ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದ್ದ ನಮ್ಮ ಸರ್ಕಾರ ಕೈಕಟ್ಟಿಕೊಂಡು ಸುಮ್ಮನೇ ಕುಳಿತಿದೆ. ಇದಲ್ಲದೇ ಮಹಾ ಮೇಳಾವದ ಹೆಸರಿನಲ್ಲಿ ಮಹಾರಾಷ್ಟ್ರದ ರಾಜಕಾರಣಿಗಳನ್ನು ಇಲ್ಲಿಗೆ ಕರೆಸಿ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವಂತಹ ಉದ್ಧಟತನದ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಇದೆಲ್ಲ ಗೊತ್ತಿದ್ದರೂ ಸಹ ನಮ್ಮ ಸರ್ಕಾರ ಹಾಗೂ ಅಧಿಕಾರಿಗಳು ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡುತ್ತಲೇ ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಕನ್ನಡ ಪರ ಸಂಘಟನೆಗಳು, ಅದರಲ್ಲೂ ಪ್ರಮುಖವಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಾನೂನು ಬಾಹಿರವಾಗಿ ಹಾಕಲಾಗಿರುವ ಮಹಾರಾಷ್ಟ್ರ ಬೋರ್ಡನ್ನು ಹಾಗೂ ಜನರಲ್ಲಿ ವೈಮನಸ್ಯ ಬಿತ್ತುತ್ತಿರುವ ಎಂ.ಇ.ಎಸ್ ನಂತಹ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಹೋರಾಟ ಮಾಡಿದರೆ, ಅವರನ್ನು ಸರ್ಕಾರ ಜೈಲಿಗೆ ಅಟ್ಟುತ್ತದೆ ಹಾಗೂ ಇವರನ್ನು ಮಾಧ್ಯಮಗಳಲ್ಲಿ ಕಿಡಿಗೇಡಿಗಳು ಅನ್ನೋ ಹೆಸರಿನಲ್ಲಿ ಲೇವಡಿ ಮಾಡಲಾಗುತ್ತಿದೆ. ಬೋರ್ಡ್ ತೆಗೆದು ಹಾಕಿ ಎಂದು ಆಗ್ರಹಿಸಿದರೆ, ಇದು ಭಾಷಾ ಸೂಕ್ಷವಾಗಿರುವ ಪ್ರದೇಶ ಹಾಗಾಗಿ ಬೋರ್ಡ್ ತಗೆಯಲು ಸಾಧ್ಯವಿಲ್ಲ ಎಂದು ಹೇಳಿ ಅಲ್ಲಿನ ಅಧಿಕಾರಿಗಳು ಹಾಗೂ ಸರ್ಕಾರ ಅಸಾಹಾಯಕತೆ ತೋರಿಸುತ್ತಿದೆ.

ನಮ್ಮ ಹಿಂದಿನ ಯಾವುದೇ ಸರ್ಕಾರಗಳಾಗಲಿ, ಅಧಿಕಾರಸ್ಥ ರಾಜಕಾರಣಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಗಟ್ಟಿಯಾಗಿ ನಿಂತು ಇಂತಹ ಕಿಡಿಗೇಡಿ ಜನರನ್ನು, ನಾಡಿನ ಸಾಮರಸ್ಯ ಕದಡುವಂತಹ ಕಾರ್ಯಕ್ರಮಗಳನ್ನು ತಡೆಯುವ ಪ್ರಯತ್ನವನ್ನೇ ಮಾಡಿಲ್ಲ. ಅವರೇನಾದರು ಅವರ ಕೆಲಸಗಳನ್ನು ಸರಿಯಾಗಿ ಮಾಡಿದ್ದರೆ. ಯಾಕೆ ಕರವೇಯ ನೂರಾರು ಕಾರ್ಯಕರ್ತರು ಜೈಲಿನ ವಾಸ ಅನುಭವಿಸಬೇಕಾಗುತ್ತಿತ್ತು? ಅನ್ಯಾಯವನ್ನು ಪ್ರಶ್ನಿಸಿದರೆ ಅವರಿಗೆ ಕಿಡಿಗೇಡಿಗಳು ಅನ್ನೋ ಹಣೆಪಟ್ಟಿ ಬೇರೆ. ಈ ಕೂಡಲೇ ಸರ್ಕಾರ ಭಾಷಾ ಅಲ್ಪಸಂಖ್ಯತರನ್ನು ಓಲೈಸುವ ಓಟ್ ಬ್ಯಾಂಕ್ ರಾಜಕಾರಣದ ಕೆಲಸ ಬಿಟ್ಟು, ನಾಡು, ನೆಲ. ಜಲಕ್ಕೆ ಬದ್ಧ ಎಂಬ ತಮ್ಮ ಮಾತನ್ನು ಕಾರ್ಯರೂಪಕ್ಕೆ ತರಬೇಕು.

ಕೊನೆಯದಾಗಿ: ನಾಡು, ನುಡಿ, ನೆಲ ಹಾಗೂ ಜಲದ ವಿಷಯದಲ್ಲಿ ನಮ್ಮ ನಾಡಿಗೆ ಅನ್ಯಾಯವಾದರೆ ತಾವು ಜೀವ ಕೊಡಲು ಸಿದ್ಧ ಅನ್ನುವ ನಮ್ಮ ಚಿತ್ರರಂಗದ ಗಣ್ಯರು ಎಲ್ಲಿದ್ದಾರೆ? ಬೆಳಗ್ಗೆಯಿಂದ ಟಿವಿಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆಗಳನ್ನು ನಡೆಸುತ್ತಿದ್ದದ್ದನ್ನು ನೋಡಿದೆ, ಆದ್ರೆ ಯಾಕೋ ನಮ್ಮ ಚಿತ್ರರಂಗದವರು ಮಾತ್ರ ಯಾರೂ ಕಣ್ಣಿಗೆ ಕಾಣಲೇ ಇಲ್ಲಾ!!!

ಶುಕ್ರವಾರ, ಜುಲೈ 22, 2011

ಕರ್ನಾಟಕದವರು ಬಿಟ್ಟಿ ಬಿದ್ದಿದ್ದಾರಾ?


ಬಹುಷಃ ಕರ್ನಾಟಕದವರ ಮೇಲೆ ಆಗುತ್ತಿರುವ ದೌರ್ಜನ್ಯದ ಸರಮಾಲೆಗೆ ಹೊಸದೊಂದು ನೋವುಂಟು ಮಾಡುವ ವಿಚಾರ ಸೇರಿಕೊಂಡಿದೆ. ನಿನ್ನೆಯಿಂದ ಪ್ರದರ್ಶನ ಕಾಣುತ್ತಿರುವ ತಮಿಳಿನ ರೀಮೇಕ್ ಚಿತ್ರವಾದ ಸಿಂಗಂ ಅನ್ನೋ ಹಿಂದಿ ಸಿನೇಮಾದಲ್ಲಿ ನಾಯಕ ಹಾಗೂ ಖಳನಾಯಕನ ಪಾತ್ರದ ನಡುವೆ ನಡೆಯುವ ಸಂಭಾಷಣೆಯಲ್ಲಿ ಖಳನಾಯಕ “ನಾನು ಕರ್ನಾಟಕದ ಗಡಿಯಿಂದ ೧೦೦೦ ಜನರನ್ನು ಕರೆತರುತ್ತೇನೆ ಎಂದು ಹೇಳಿದಾಗ ಅದಕ್ಕೆ ಪ್ರತಿಯಾಗಿ ನಾಯಕ ನಿನ್ನಂತ ೧೦೦೦ ನಾಯಿಗಳನ್ನು ಬೇಟೆಯಾಡಲು ನನ್ನಂತ ಒಂದು ಸಿಂಹ ಸಾಕು ಎಂದು ಹೇಳುತ್ತಾನೆ”, ಅಲ್ಲಿಗೆ ಚಿತ್ರದ ಪ್ರಕಾರ ಕರ್ನಾಟಕದ ಗಡಿ ಭಾಗಗಳಲ್ಲಿ ವಾಸಿಸುವ ಜನರು ನಾಯಿಗಳಂತೆ? ಇನ್ನೊಂದು ವಿಶೇಷ ಅಂದ್ರ ಈ ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ ಹಾಗೂ ಖಳನಾಯಕನ ಪಾತ್ರದಲ್ಲಿ ನಟಿಸಿರುವ ಪ್ರಕಾಶ್ ರೈ ಇಬ್ಬರೂ ಕರ್ನಾಟಕದವರೇ (?) ಆಗಿದ್ದರೂ ಒಂದು ರಾಜ್ಯದ ಜನರಿಗೆ ನೋವುಂಟು ಮಾಡುವಂತಹ ಸಂಭಾಷಣೆಯನ್ನ ಬಳಲಸೇಬಾರದಿತ್ತು ಅನ್ನೋ ಪರಿಜ್ಞಾನ ಕೂಡ ಅವರಲ್ಲಿ ಇರಲಿಲ್ವೇ?

ಆದರೆ ನಿಜಕ್ಕೂ ಗಡಿ ಭಾಗವಾದ ಬೆಳಗಾವಿಯಲ್ಲಿ ಕಷ್ಟ ಅನುಭವಿಸುತ್ತಿರುವುದು ಕನ್ನಡದ ಜನರೇ ಅನ್ನೋದು ನಮಗೆಲ್ಲಾ ಗೊತ್ತಿರುವುದೇ. ಎಂ.ಇ. ಎಸ್ ನಂತಹ ಒಂದು ಸಂಘಟನೆ ಹುಟ್ಟಿಕೊಂಡಾಗಿನಿಂದ ಕನ್ನಡಿಗರ ಪಾಡು ನೆಲಕಚ್ಚಿತ್ತು. ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳೋಕೆ ಒಂದಾಗಿ ಬಾಳುತ್ತಿದ್ದ ಕನ್ನಡ ಹಾಗೂ ಮರಾಠಿ ಭಾಷಿಕರ ನಡುವೆ ಕಂದಕ ಸೃಷ್ಠಿಸಿದ ಜನರಿವರು. ಕನ್ನಡಿಗರ ವಿರುದ್ಧ ಎಂತಹ ಹೀನ ಕೆಲಸಕ್ಕಾದರೂ ತಯಾರಾಗಿರುವ ಜನರಿವರು. ಸುಮಾರು ೩೦-೪೦ ವರ್ಷಗಳಿಂದ ಇವರ ದಬ್ಬಾಳಿಕೆಯಿಂದ ಬೇಸತ್ತಿದ್ದ ಜನರಿಗೆ ಕರವೇ ಯಂತಹ ಕನ್ನಡ ಪರ ಸಂಘಟನೆ ದುಡಿದ ಪರಿಣಾಮ ಇಂದು ಕನ್ನಡಿಗರು ಕೊಂಚ ಉಸಿರಾಡುವಂತಹ ಪರಿಸ್ಥಿತಿ ಇದೆ. ಆದರೆ ಇನ್ನೊಬ್ಬರ ನೋವಿನಲ್ಲೂ ಸುಖಪಡುವ ಎಂ.ಇ.ಎಸ್ ನಂತಹ ಸಂಘಟನೆಯ ಜನರ ತೆವಲಿಗಾಗಿ ಇಂತಹ ಸಂಭಾಷಣೆಗಳನ್ನು ಸೇರಿಸಿ ಕರ್ನಾಟಕದ ಜನರಿಗೆ ಅವಮಾನವೆಸಗುವುದೆ ಎಷ್ಟರ ಮಟ್ಟಿಗೆ ಸರಿ?

ಕನ್ನಡಿಗರ ವಿಶ್ವಮಾನವತೆ!!
ಇಂದು ಬೆಳಗ್ಗೆ ಸುವರ್ಣ ವಾಹಿನಿಯಲ್ಲಿ ಕರವೇ ಅಧ್ಯಕ್ಷ ಶ್ರೀ ಟಿ.ಎ. ನಾರಾಯಣಗೌಡರ ಸಂದರ್ಶನದಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿದ ಕರ್ನಾಟಕದ ಪ್ರಜೆಗಳೊಬ್ಬರು ಚಿತ್ರದ ಸಂಭಾಷಣೆಯಲ್ಲಿ ಯಾವುದೇ ತಪ್ಪಿಲ್ಲ, ಅದು ಕನ್ನಡಿಗರ ಪರವಾಗಿದೆ ಹಾಗಾಗಿ ಅದಕ್ಕೆ ಅಡ್ಡಿಪಡೆಸಬೇಡಿ ಅಂತ ಸಲಹೇ ನೀಡಿದರು. ಬಹುಷಃ ಅವರು ನಿಜಕ್ಕೂ ವಿಶ್ವಮಾನವರೇ ಇರಬೇಕು. ಹೀಗೆ ಕನ್ನಡಿಗರು ತಮ್ಮತನವನ್ನ ಮರೆತು ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಸಹಿಸಿಕೊಂಡು ಬದುಕಬೇಕಾದ ಹೀನ ಪರಿಸ್ಥಿತಿಗೆ ಇಂಥವರೆ ಕಾರಣ. ನಮ್ಮ ಹೇಡಿತನಕ್ಕೆ, ನಮ್ಮ ಅಭಿಮಾನ ಶ್ಯೂನ್ಯತೆಗೆ ನಾವು ಕೊಟ್ಟಿರುವ ಹೆಸರು ವಿಶ್ವಮಾನವತೆಯೇ? ಕರ್ನಾಟಕದವರನ್ನು ಅವಹೇಳಿಸಿ ಮಾತನಾಡಿರುವುದು ಇದೇ ಮೊದಲ್ಲಲ, ಹಾಗೆಯೇ ಇದೇ ಕೊನೆಯಾಗುತ್ತದೆಂಬ ನಂಬಿಕೆ ಕೂಡ ಇಲ್ಲಾ. ಒಂದು ಒಕ್ಕೂಟದ ವ್ಯವಸ್ಥೆಯಲ್ಲಿ ಬದುಕುತ್ತಿರುವ ವಿವಿಧ ರಾಜ್ಯಗಳ ಜನರ ನಡುವೆ ಒಡಕು ತರಬಹುದಾದಂತಹ ಇಂತಹ ಕೆಲಸಗಳನ್ನ ತಡೆಯುವುದಕ್ಕೆ ಅಲ್ಲಿಯ ಜನರಿಂದ ಮಾತ್ರ ಸಾಧ್ಯ, ಜನ ಎಚ್ಚೆತುಕೊಳ್ಳಬೇಕು, ನಾವು, ನಮ್ಮತನ ಅನ್ನೋ ಜಾಗೃತಿ ಅವರಲ್ಲಾಗಬೇಕು. ಯಾವುದೇ ಭಾಗದ ಜನರನ್ನ ಕೀಳಾಗಿ ಕಾಣುವ ಇಂತಹ ಹೀನ ಚಾಳಿಗೆ ವಿರುದ್ಧವಾಗಿ ಧ್ವನಿ ಎತ್ತಿ ನಿಲ್ಲಬೇಕು.
ಚಿತ್ರ ಕೃಪೆ: Pics4news

ಶನಿವಾರ, ಮಾರ್ಚ್ 12, 2011

ನಾನು ಕಂಡಂತೆ ನಮ್ಮ ಬೆಳಗಾವಿ


ಉತ್ತರ ಕರ್ನಾಟಕದವನಾದ ನನಗೆ, ಬೆಳಗಾವಿ ನನ್ನ ಬೆಳವಣಿಗೆಯ ಒಂದು ಭಾಗವೇ ಅಂದರೆ ತಪ್ಪಲ್ಲ. ವರ್ಷಗಳು ಕಳೆದಂತೆ ನನ್ನ ಜೊತೆಯೇ ಬೆಳಗಾವಿಯ ಸ್ವರೂಪ ಬದಲಾಗುತ್ತಾ ಬಂತು. ಉತ್ತರ ಕರ್ನಾಟಕದ ಜಿಲ್ಲೆಗಳು ಶೈಕ್ಷಣಿಕವಾಗಿ ಬಹಳ ಹಿಂದುಳಿದಿವೆ. ಒಳ್ಳೆಯ ಓದು ಅಥವಾ ಉನ್ನತ ಶಿಕ್ಷಣ ಪಡೆಯಬೇಕೆಂದರೆ ನಾವು ಹುಬ್ಬಳ್ಳಿ, ಧಾರವಾಡ ಇಲ್ಲವೆಂದರೇ ಬೆಳಗಾವಿಗೆ ಹೋಗಿ ಓದಬೇಕು. ಪಿಯುಸಿ ಮುಗಿಸಿದ ಮೇಲೆ ಇಂಜಿನಿಯರಿಂಗ್ ಒದಲು ನನಗೆ ಸಿಕ್ಕಿದ್ದು ಬೆಳಗಾವಿಯ ಒಂದು ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ. ಅದು 2003-04ರ ಸಮಯ, ಕಾಲೇಜಿಗೆ ಸೇರಿಕೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಇದ್ದವು, ಆಗ ಒಂದು ಕಡೆ ಖುಷಿಯಾಗುತ್ತಿದ್ದರೆ ಮತ್ತೊಂದು ಕಡೆ ಭಯ ಕಾಡುತ್ತಿತ್ತು ಕಾರಣ ನಾನು ಹೋಗುತ್ತಿರುವುದು ಬೆಳಗಾವಿ ಅನ್ನೋ ಊರಿಗೆ. ಜೊತೆಗೆ ಹಿಂದೆ ನನ್ನ ತಂದೆ ಇಲ್ಲಿ ಓದುತ್ತಿದ್ದಾಗ ಅವರಿಗೆ ಆಗಿದ್ದ ಅನೇಕ ಕಹಿ ಘಟನೆಗಳು. ಹೆದರಿಕೆಗೆ ಕಾರಣವಿದ್ದದ್ದು ಬೆಳಗಾವಿಯಲ್ಲಿ ಮರಾಠಿಗರು ಹೆಚ್ಚು, ಅಲ್ಲಿ ಕನ್ನಡ ಮಾತನಾಡುವವರನ್ನು ಹೊಡೆಯುತ್ತಾರೆ ಅನ್ನೋ ಭಯ, ಕಾರಣ ನನ್ನ ತಂದೆ 70ರ ದಶಕದಲ್ಲಿ ಇಲ್ಲಿ ಓದುತ್ತಿದ್ದಾಗ ಕನ್ನಡ ಮಾತನಾಡಿದ್ದಕ್ಕಾಗಿ ಮರಾಠಿಗರು ನನ್ನ ತಂದೆ ಜೊತೆ ಜಗಳವಾಡಿ ಅವರನ್ನ ಹೊಡೆದಿದ್ದರು ಕೂಡ.

ಬೆಳಗಾವಿಯಲ್ಲಿ ನನ್ನ ಅನುಭವ:
ಮೊದಲಬಾರಿಗೆ ಬೆಳಗಾವಿಯಲ್ಲಿ ಬಂದಿಳಿದಾಗ ನನಗೆ ಕಂಡಿದ್ದು ಅಲ್ಲಿದ್ದ ಮರಾಠಿಮಯ ವಾತಾವರಣ. ದಿನಸಿ ಅಂಗಡಿ, ಹೊಟೇಲ್ (ಉಡುಪಿ ಹೊಟೇಲ್ ಗಳನ್ನು ಹೊರತುಪಡಿಸಿ), ಆಟೋ ಓಡಿಸುವವರು ಹೀಗೆ ಎಲ್ಲಾ ಕಡೆ ಮರಾಠಿಯ ಪ್ರಭಾವ ಢಾಳಾಗಿ ಕಾಣಸಿಗುತ್ತಿತ್ತು. ಅಲ್ಲಿಗೆ ಹೋದ ಹೊಸದರಲ್ಲಿ ಈ ವಾತಾವರಣ ಬಹಳ ಇಕ್ಕಟ್ಟು ಅನ್ನಿಸುತ್ತಿತ್ತು. ಅನೇಕರಿಗೆ ಅಲ್ಲಿ ಕನ್ನಡ ಬಂದರೂ ಮಾತನಾಡುವುದಿಲ್ಲ, ಅವರಿಗೆ ಕನ್ನಡವೆಂದರೆ ಅಸಡ್ಡೆ, ಇನ್ನೂ ಸ್ವಲ್ಪ ಜನ ಕನ್ನಡವನ್ನು ಕಲಿಯುವದಕ್ಕೇ ಹೋಗಿರಲಿಲ್ಲ, ಕೆಲವು ಕನ್ನಡಿಗರು ಮರಾಠಿ ಮಾತನಾಡುವ ಪರಿಸ್ಥಿತಿ ಇತ್ತು. ಎಲ್ಲಾದಕ್ಕಿಂತ ಘೋರವೆಂದರೇ ನಮ್ಮ ರಾಜ್ಯೋತ್ಸವದ ದಿನ ಬೆಳಗಾವಿಯಲ್ಲಿ ಎಂಇಎಸ್ ನಂತಹ ಸಂಘಟನೆ ಕರಾಳ ದಿನವನ್ನ ಆಚರಿಸುತ್ತಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುತ್ತಿತ್ತು. ನನ್ನ ಮುಂದೆಯೇ ಅನೇಕ ಅಂಗಡಿಗಳ ಮಾಲೀಕರು ಎಂಇಎಸ್ ನವರನ್ನ ಬೈದದ್ದಿದೆ. ಬೆಳಗಾವಿಯಿಂದ ಆರಿಸಿ ಬಂದಿದ್ದ ಎಂಇಎಸ್ ಶಾಸಕರು ನಮ್ಮ ವಿಧಾನಸಭೆಯಲ್ಲಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಕೂಗಾಡುತ್ತಿದ್ದರು, ನಮ್ಮ ರಾಜ್ಯದ ಉಳಿದ ಪ್ರತಿನಿಧಿಗಳು ನೋಡಿಕೊಂಡು ಸುಮ್ಮನಿರುತ್ತಿದ್ದರು. ಎಂಇಎಸ್ ಪ್ರಾಬಲ್ಯದ ನಗರಸಭೆ, ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿ ಸಭೆಗಳಲ್ಲಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ನಿರ್ಣಯಗಳನ್ನು ತಗೆದುಕೊಳ್ಳುತ್ತಿದ್ದುದ್ದನ್ನು ಪತ್ರಿಕೆಗಳಲ್ಲಿ ಓದುತ್ತಿದ್ದೆ. ಯಾಕೆ ಸರ್ಕಾರ ಅಥವಾ ಬೆಳಗಾವಿ ಜಿಲ್ಲೆಯ ಇತರೆ ಪಕ್ಷದ ಜನಪ್ರತಿನಿಧಿಗಳು ಇದರ ವಿರುದ್ಧ ಧ್ವನಿ ಎತ್ತುತ್ತಿಲ್ಲಾ ಎಂದು ಸಿಟ್ಟು ಮಾಡಿಕೊಂಡಿದ್ದು ಇದೆ.....

ಬದಲಾದ ಬೆಳಗಾವಿಯ ವಾತಾವರಣ:
ಇವತ್ತು ನಾವುಗಳು ಬೆಳಗಾವಿಯಲ್ಲಿ ಕನ್ನಡ ವಾತಾವರಣ ನಿರ್ಮಾಣವಾಗಿರುವುದನ್ನು ಕಾಣುತ್ತಿದ್ದರೆ, ಅದಕ್ಕೆ ಮುಖ್ಯ ಕಾರಣ ಸರ್ಕಾರಕ್ಕಿಂತ ಹೆಚ್ಚಾಗಿ ದುಡಿದ್ದದ್ದು ಕನ್ನಡ ಪರ ಸಂಘಟನೆಗಳು, ಅದರಲ್ಲೂ ಮುಖ್ಯವಾಗಿ ಹೆಸರಿಸಬೇಕಾಗಿರುವಂತಹುದು ಕರ್ನಾಟಕ ರಕ್ಷಣಾ ವೇದಿಕೆ. ಸುಮಾರು 2005 ರಿಂದ ಬೆಳಗಾವಿಯಲ್ಲಿ ಕನ್ನಡದ ವಾತಾವರಣ ನಿರ್ಮಾಣ ಮಾಡಲು, ನಮ್ಮನ್ನು ಕಡೆಗಣಿಸಲಾಗಿದೆ ಅನ್ನೋ ಕೊರಗು ಇಟ್ಟುಕೊಂಡಿದ್ದಂತಹ ಕನ್ನಡಿಗರಿಗೆ ಮನಸ್ಥೈರ್ಯ ತುಂಬಿದ್ದು ಕರ್ನಾಟಕ ರಕ್ಷಣಾ ವೇದಿಕೆ ಮಾಡಿದ ಕೆಲಸಗಳಿಂದಾಗಿ. ಬೆಳಗಾವಿಯ ಮಹಾಪೌರರಾಗಿದ್ದ ವಿಜಯ್ ಮೋರೆ ಅವರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಗೊತ್ತುವಳಿ ಮಂಡಿಸಿ ದೊಡ್ಡ ಗಲಾಟೆಗೆ ಕಾರಣವಾಗಿದ್ದರು. ಇದೇ ಸಮಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ವಿಜಯ್ ಮೋರೆ ಬೆಂಗಳೂರಿಗೆ ಬಂದಿದ್ದಾಗ ಅವರ ಮುಖಕ್ಕೆ ಮಸಿ ಬಳಿದು ಎಂಇಎಸ್ ನ ನಾಡವಿರೋಧಿ ನಿಲುವಿಗೆ ಪ್ರತಿಭಟನೆ ಸೂಚಿಸಿದ್ದರು. ಇದೇ ವಿಷಯ ಮುಂದೆ ಬೆಳಗಾವಿಯಲ್ಲಿ ಅನೇಕ ಬದಲಾವಣೆಗಳಿಗೆ ನಾಂದಿ ಹಾಡಿತು. ವಿಜಯ್ ಮೋರೆ ಪ್ರಕರಣದಲ್ಲಿ ಧರಂಸಿಂಗ್ ಸರ್ಕಾರದ ಮೇಲೆ ಒತ್ತಡ ತಂದ ಕರವೇ ಹೋರಾಟ ನಡೆಸಿ ಮಹಾನಗರ ಪಾಲಿಕೆ ವಿಸರ್ಜನೆಗೊಳ್ಳುವಂತೆ ಮಾಡಿತು. ಇದಾದ ನಂತರ ಬೆಳಗಾವಿಯಲ್ಲಿ ದಿವಂಗತ ಶ್ರೀ ಸಿ. ಅಶ್ವಥ್ ಅವರ ಸಾರಥ್ಯದಲ್ಲಿ ನಡೆದ "ಕನ್ನಡವೇ ಸತ್ಯ" ಕಾರ್ಯಕ್ರಮ ಕನ್ನಡಿಗರಲ್ಲಿ ಹೊಸ ಸಂಚಲನ ಮೂಡಿಸಿದ್ದು ಸುಳ್ಳಲ್ಲ. ಇದೇ ಸಮಯದಲ್ಲಿ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಒತ್ತು ಕೊಡುವಂತೆ ಆಗ್ರಹಿಸಿ ಎರಡು ಬಾರಿ ಬೆಳಗಾವಿಯಿಂದ ಬೆಂಗಳೂರಿನ ತನಕ ಸಾವಿರಾರು ಕಾರ್ಯಕರ್ತರನ್ನು ಕರೆದುಕೊಂಡು ಹೋದ ಕರವೇ ಆಗಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿ, ಒತ್ತಡ ಹೇರಿತ್ತು. ಕರ್ನಾಟಕ ರಕ್ಷಣಾ ವೇದಿಕೆಯ ನಿರಂತರ ಕೆಲಸದಿಂದಾಗಿ ಬೆಳಗಾವಿ ರಾಜಕೀಯ ವಿಷಯವಾಗಿ ಹಾಗೂ ರಾಜ್ಯದ ಎಲ್ಲಾ ಜನರ ಗಮನಕ್ಕೆ ಬರತೊಡಗಿದಾಗ, 50 ವರ್ಷಗಳಿಂದ ನಿದ್ದೆ ಮಾಡುತ್ತಿದ್ದ ರಾಜಕೀಯ ಪಕ್ಷಗಳು ಎಚ್ಚಿತ್ತು ಬೆಳಗಾವಿಯಲ್ಲಿ ೨೦೦ ಕೋಟಿ ರೂ ವೆಚ್ಚದಲ್ಲಿ ಸುವರ್ಣಸೌಧ ನಿರ್ಮಾಣಕ್ಕೆ ಚಾಲನೆ ನೀಡಿತು ಇದರ ಜೊತೆಗೆ 2 ಬಾರಿ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ನಡೆಸಿತು. ಸರ್ಕಾರ ತಗೆದುಕೊಂಡ ಈ ನಿರ್ಧಾರಗಳಿಗೆ ಕರವೇಯ ಹೋರಾಟಗಳೇ ಕಾರಣವೆಂದರೆ ತಪ್ಪಲ್ಲ. ಇದಲ್ಲದೇ ಎಂಇಎಸ್ ಸಂಘಟನೆಯ ಬಲ ಮುರಿಯಲು ಪಣ ತೊಟ್ಟು ಕೆಲಸ ಮಾಡಿದ ಕರವೇ 17 ವರ್ಷಗಳ ನಂತರ ಕನ್ನಡದ ಮಹಿಳೆಯೊಬ್ಬರು ಬೆಳಗಾವಿಯ ಮಹಾಪೌರರಾಗಿ ಆಯ್ಕೆಯಾಗಲು ಕಾರಣವಾಯಿತು. ಇವತ್ತು ಎಂಇಎಸ್ ಬೆಳಗಾವಿಯ ಭಾಗದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದೆ.

ಮಾಡಿದವರನ್ನೇ ಮರೆತಿರುವ ರಾಜ್ಯ ಸರ್ಕಾರ:
ಬೇಸರದ ಸಂಗತಿಯೆಂದರೆ, ಕಳೆದ 50 ವರ್ಷಗಳಿಂದ ರಾಜ್ಯ ಸರ್ಕಾರದ ಕಡಗಣನೆಗೆ ಒಳಗಾಗಿದ್ದ, ಇನ್ನೇನು ಬೆಳಗಾವಿ ನಮ್ಮ ಕೈ ತಪ್ಪಿ ಹೋಯಿತು ಅನ್ನೋ ಮಟ್ಟಕ್ಕೆ ಹೋಗಿದ್ದಾಗ, ಗಡಿಭಾಗದ ನಾಯಕರು ಸೇರಿದಂತೆ, ಕನ್ನಡಿಗರಲ್ಲಿ ಧ್ಯೈರ್ಯ ತುಂಬುವ ಕೆಲಸ ಮಾಡಿದ್ದು ಕನ್ನಡಪರ ಸಂಘಟನೆಗಳೇ. ಆದರೆ ಈ ವಿಶ್ವ ಕನ್ನಡ ಸಮ್ಮೇಳನದಲ್ಲಿ ನಾಡಿನ ಯಾವುದೆ ಕನ್ನಡ ಪರ ಸಂಘಟನೆಗಳಿಗೆ ಆಹ್ವಾನವನ್ನೂ ನೀಡಿಲ್ಲ, ಅದು ಬಿಡಿ ಸರ್ಕಾರದ ಒಂದು ಭಾಗವಾಗಿ ಕೆಲಸ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಹ್ವಾನ ನೀಡಲಾಗಿಲ್ಲ. ದೌರ್ಭಾಗ್ಯವೆಂದರೇ ಐಶ್ವರ್ಯ ರೈ ನಂಥ ಹಿಂದಿ ಚಿತ್ರನಟಿಯನ್ನ ಆಹ್ವಾನಿಸುವಲ್ಲಿ ಕಾಳಜಿ ಹೊಂದಿರುವ ಸರ್ಕಾರ, ಶಿಲ್ಪಾ ಶೆಟ್ಟಿಯನ್ನು ಕರೆಸಬೇಕೋ ಅಥವಾ ಬೇಡವೋ ಎಂದು ನಿರ್ಧರಿಸಲು ಸಭೆ ಸೇರುವ ಸರ್ಕಾರ, ಪ್ರತಿ ದಿನ ನಾಡಿಗೆ, ಭಾಷೆಗೆ, ನಾಡಿಗರ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿರುವ ಕನ್ನಡ ಪರ ಸಂಘಟೆನೆಗಳಿಗೆ ಸಮ್ಮೇಳನಕ್ಕೆ ಆಹ್ವಾನ ನೀಡಿಲ್ಲ. ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಬೆಂಬಲ ನೀಡುತ್ತಾ ಬಂದಿದ್ದ ಮಾಧ್ಯಮಗಳು ಸಹ ಯಾಕೋ ಈ ವಿಷಯದ ಬಗ್ಗೆ ಗಮನಹರಿಸಿಲ್ಲ.