ಪ್ರಜಾಪ್ರಭುತ್ವ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪ್ರಜಾಪ್ರಭುತ್ವ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಮೇ 1, 2012

ಕನ್ನಡ ಚಿತ್ರರಂಗ ಹಾಗೂ ಟಿವಿ ಮಾಧ್ಯಮಗಳ ತಾಲೀಬಾನಿಕರಣ

ಇತ್ತೀಚಿಗೆ ಡಬ್ಬಿಂಗ್ ವಿರುದ್ಧ ಹಾಗೂ ಅದರಿಂದ ಕನ್ನಡದ ಮೇಲೆ ಆಗುವ ಪರಿಣಾಮಗಳ ಕುರಿತು ಹಲವಾರು ಚರ್ಚೆಗಳು ನಡೆಯುತ್ತಿವೆ. ಈ ಸಂಧರ್ಭದಲ್ಲಿ ಗೆಳಯ ವಸಂತ್ ಶೆಟ್ಟಿ ಅವರು ಬರಿದ್ದಿದ್ದ ಈ ಲೇಖನ ಚುರುಮುರಿ ಬ್ಲಾಗ್ ನಲ್ಲಿ ಪ್ರಕಟವಾಗಿತ್ತು. ಈ ಲೇಖನವನ್ನು ಅವರ ಅನುಮತಿಯೊಂದಿಗೆ ಕನ್ನಡಕ್ಕೆ ಅನುವಾದಿಸಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ. ನಿಮ್ಮ ಅಭಿಪ್ರಾಯವನ್ನು ತಿಳಿಸಿ.






ಹಿಂದಿ ನಟ ಅಮೀರ್ ಖಾನ್ "ಸತ್ಯ ಮೇವ ಜಯತೇ" ಅನ್ನುವ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಅಡಿಯಿಡುವುದನ್ನು ಪ್ರಕಟಿಸಿದರು. ಈ ಕಾರ್ಯಕ್ರಮವನ್ನು ಸ್ಟಾರ್ ಸಮೂಹದ ಚಾನೆಲ್ ಗಳ ಮೂಲಕ ಭಾರತದ ವಿವಿಧ ಭಾಷೆಗಳಲ್ಲಿ ಪ್ರಸಾರ ಮಾಡಲು ಯೋಜಿಸಲಾಗಿತ್ತು. ಕನ್ನಡದಲ್ಲಿ, ಸುವರ್ಣ ವಾಹಿನಿಯಲ್ಲಿ ಈ ಕಾರ್ಯಕ್ರಮ ಮೇ ೬ ರಿಂದ ಕನ್ನಡದಲ್ಲಿ ಪ್ರಸಾರವಾಗಬೇಕಿತ್ತು. ಆದ್ರೆ ಈಗ ಕನ್ನಡ ಸಂಸ್ಕೃತಿ, ಭಾಷೆಯ ರಕ್ಷಣೆಯ ನೆಪದಲ್ಲಿ ಕೆಲವು ಖಾಸಗಿ ಸಂಸ್ಥೆಗಳು ಹೇರಿರುವ ಡಬ್ಬಿಂಗ್ ಮೇಲಿನ ನಿಷೇಧದಿಂದಾಗಿ ಈ ಕಾರ್ಯಕ್ರಮ ಕನ್ನಡದಲ್ಲಿ ಪ್ರಸಾರವಾಗುತ್ತಿಲ್ಲ.

ಕಳೆದ ವರ್ಷ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಬಗೆಗಿನ ಕಾರ್ಯಕ್ರಮವೊಂದನ್ನು ಡಬ್ ಮಾಡಿ ಪ್ರಸಾರ ಮಾಡಲು ಮುಂದಾದ ಜೀ ಕನ್ನಡ ವಾಹಿನಿಯ ಮೇಲೆ ದಾಳಿ ನಡೆಸಿದ ಗುಂಪುಗಳೇ ಈ ಬಾರಿಯೂ ಇಂತಹ ಕೆಲಸಕ್ಕೆ ಮುಂದಾಗಿವೆ ಅನ್ನಲಾಗಿದೆ. ಪುಣ್ಯಕ್ಕೆ, ಈ ಸಂಘಟನೆಗಳು ಕಾನೂನು ಕೈಗೆತ್ತಿಕೊಳ್ಳುವ ಮೊದಲೇ ಸುವರ್ಣ ವಾಹಿನಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

ಈ ಘಟನೆಗಳು ನಮ್ಮ ಮುಂದೆ ಒಂದು ದೊಡ್ಡ ಪ್ರಶ್ನೆಯನ್ನು ಎತ್ತುತ್ತವೆ: ಒಂದು ಸಂವಿಧಾನಿಕ ಪ್ರಜಾತಂತ್ರದಲ್ಲಿ ಬ್ಯಾನ್ ಮಾಡುವ ಅಧಿಕಾರವನ್ನು ಈ ಸಂಸ್ಥೆಗಳಿಗೆ ನೀಡಿದ್ದು ಯಾರು?

ಯಾವುದೇ ನಾಗರೀಕ ಪ್ರಜಾಪ್ರಭುತ್ವ ಅನುಸರಿಸುವ ಸಮಾಜದಲ್ಲಿ, ಸರ್ಕಾರವೇ ವಿಧಿಸಿದ ಬ್ಯಾನ್ ಆದರೂ ಸಹ ಅಂತವುಗಳಿಗೆ ಯಾವುದೇ ಜಾಗವಿಲ್ಲ. ಪ್ರಜಾಪ್ರಭುತ್ವದಲ್ಲಿ, ಎಲ್ಲಿಯವರೆಗೆ ನನ್ನ ಬೇಡಿಕೆಗಳು ಕಾನೂನು ಬದ್ಧವಾಗಿದೆಯೋ ಅಲ್ಲಿಯವರೆಗೂ ನಾನೊಬ್ಬ ಗ್ರಾಹಕನಾಗಿ ನನಗೆ ಬೇಕಿರುವ ಎಲ್ಲ ಮಾಹಿತಿ, ಜ್ಞಾನ ಮತ್ತು ಮನರಂಜನೆಯ ಅಗತ್ಯಗಳನ್ನು ನನ್ನ ಇಷ್ಟದ ಭಾಷೆಯಲ್ಲಿ ಪಡೆಯುವ ಎಲ್ಲ ಹಕ್ಕು ನನಗಿದೆ.

ನನ್ನಂತೆಯೇ ಲಕ್ಷಾಂತರ ಕನ್ನಡಿಗರಿಗೂ ಮಕ್ಕಳ ಮನತಣಿಸುವ ಡಿಸ್ನಿಯ ಯಾವುದೋ ಒಂದು ಪಾತ್ರ ಕನ್ನಡದಲ್ಲಿ ಮಾತನಾಡುವುದನ್ನು ನೋಡುವ ಆಸೆಯಿರಬಹುದು, ಇಲ್ಲವೇ,ಡಿಸ್ಕವರಿ, ಅನಿಮಲ್ ಪ್ಲಾನೆಟಿನಲ್ಲಿ ಬರುವ ಅಮೇಜಾನ್ ಕಾಡಿನ ಬಗೆಗಿನ ಕಾರ್ಯಕ್ರಮವನ್ನು ಕನ್ನಡದಲ್ಲೇ ನೋಡುವ ಬಯಕೆಯಿರಬಹುದು, ಅಥವಾ ಅವತಾರ್ ೩ಡಿ ತರಹದ ಸಿನೆಮಾವನ್ನು ಕನ್ನಡದಲ್ಲೇ ನೋಡಿ ಆನಂದಿಸುವ ಮನಸ್ಸಿರಬಹುದು. ನನ್ನ ನುಡಿಯಲ್ಲೇ ಇದೆಲ್ಲವನ್ನು ನೋಡಬೇಕು ಅನ್ನುವ ನನ್ನ ನ್ಯಾಯಯುತ ಬೇಡಿಕೆಯನ್ನು ಯಾಕೆ ನಿರಾಕರಿಸಲಾಗುತ್ತಿದೆ?
  • ಪ್ರಜಾಪ್ರಭುತ್ವವಿರುವ ರಾಜ್ಯವಾಗಿ ಕರ್ನಾಟಕ ಉಳಿದಿಲ್ಲವೇ? 
  • ಪ್ರಜೆಗಳಿಂದ ಆಯ್ಕೆಯಾಗದ ಕೆಲವೇ ಕೆಲವು ದಬ್ಬಾಳಿಕೆಯ ಜನರ ಆಳ್ವಿಕೆ ನಡೆಯುತ್ತಿರುವ ಡಮ್ಮಿ ಪ್ರಜಾಪ್ರಭುತ್ವವಾಗಿ ಕರ್ನಾಟಕ ಬದಲಾಗಿದೆಯೇ? 
  • ಇಂತಹ ನಡೆಯನ್ನು ನೀವು ಬೇರಾವುದಾದರೂ ಚಿತ್ರೋದ್ಯಮದಲ್ಲಿ ಕಂಡಿದ್ದೀರಾ? 
ಬೇರೆ ಯಾವುದೇ ವ್ಯಾಪಾರದಂತೆ ಸಿನೆಮಾ ಉದ್ಯಮ ಕೂಡಾ ಬೇಡಿಕೆ ಮತ್ತು ಪೂರೈಕೆ ಮೇಲೆಯೇ ನಡೆಯುತ್ತೆ. ಯಾವ ವಸ್ತು ಇಲ್ಲವೇ ಸೇವೆಗೆ ಬೇಡಿಕೆ ಇದೆಯೋ ಅದನ್ನು ಲಾಭದ ಜೊತೆ ಪೂರೈಸುವ ಪೂರೈಕೆದಾರರಿರುತ್ತಾರೆ. ಸರಿ ತಾನೇ?

ದುಃಖದ ವಿಚಾರ ಅಂದರೆ ಕನ್ನಡ ಚಿತ್ರೋದ್ಯಮ ಮತ್ತು ಟಿವಿ ಉದ್ಯಮಕ್ಕೆ ಈ ಸೂತ್ರ ಅನ್ವಯಿಸಲ್ಲ.

ಮಾರುಕಟ್ಟೆಯಲ್ಲಿ ಡಬ್ ಆದ ಕಂಟೆಂಟ್ ನ ಸಾಧಕ/ಬಾಧಕಗಳೇನು ಅನ್ನುವುದರ ಆಧಾರದ ಮೇಲೆ ನಡೆಯದೇ ಕನ್ನಡ ಉದ್ಯಮ ಏನಿದ್ದರೂ ತಾಲಿಬಾನ್ ಮಾದರಿಯಲ್ಲಿ ಟಿವಿ ವಾಹಿನಿಗಳಿಗೆ ಡಬ್ ಆದ ಕಾರ್ಯಕ್ರಮ ಪ್ರಸಾರ ಮಾಡದಂತೆ ಫತ್ವಾ ಹೊರಡಿಸುವುದರ ಮೇಲೆ ನಡೆಯುತ್ತೆ. ಮಾರುಕಟ್ಟೆಯಲ್ಲಿ ಸ್ಪರ್ಧೆ ಎದುರಿಸಿ ಗೆಲ್ಲುವ ಛಲದ ಮೇಲೆ ನಡೆಯದೇ ಏನಿದ್ದರೂ ಸಬ್ಸಿಡಿ ರೂಪದಲ್ಲಿ ೬೦% ಗೂ ಹೆಚ್ಚು ಚಿತ್ರಗಳಿಗೆ ಜನರ ತೆರಿಗೆ ಹಣವನ್ನು ಹೀರುವುದರ ಬಲದ ಮೇಲೆ ನಡೆಯುತ್ತೆ. ತನ್ನ ವೈಫಲ್ಯಕ್ಕೆ ಹಗಲು ರಾತ್ರಿ ಸರ್ಕಾರವನ್ನು,ಗ್ರಾಹಕರನ್ನು ಹೊಣೆಯಾಗಿಸುವುದರ ಮೇಲೆ ನಡೆಯುತ್ತೆ.


ಕನ್ನಡ ಚಿತ್ರ ಮತ್ತು ಟಿವಿ ಉದ್ಯಮ ಖಾಸಗಿ ವ್ಯಕ್ತಿಗಳಿಂದ ಲಾಭಕ್ಕಾಗಿ ನಡೆಯುವ ಉದ್ಯಮವೇ ಹೊರತು ಸರ್ಕಾರಿ ಪ್ರಾಯೋಜಿತ ಸಾರ್ವಜನಿಕರ ಸೇವೆಗಾಗಿ ಮುಡಿಪಿಟ್ಟ ಉದ್ಯಮವಲ್ಲ ಅನ್ನುವುದೇ ಅವರಿಗೆ ಮರೆತು ಹೋದ ಹಾಗಿದೆ.

ಕನ್ನಡ ಚಿತ್ರೋದ್ಯಮ ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಒಂದು ಲಿಂಗ್ವಿಸ್ಟಿಕ್ ರೆಜಿಸ್ಟರ್ ಆಗಿ ಅದರ ಸಾಮಾಜಿಕ ಪರಿಣಾಮ ದೊಡ್ಡದಿದೆ. ಯುವ ಕನ್ನಡಿಗರ ನಾಲಿಗೆಯ ಮೇಲೆ ಕನ್ನಡ ಉಳಿಸುವಲ್ಲಿ ಅದರ ಪಾತ್ರ ನಿರ್ಣಾಯಕವೂ ಹೌದು. ಜಾಗತೀಕರಣದ ಈ ದಿನಗಳಲ್ಲಿ ಪ್ರಜಾಸತ್ತಾತ್ಮಕವಲ್ಲದ ಮತ್ತು ಸಂವಿಧಾನ ಬಾಹಿರವಾದ ಈ ಬ್ಯಾನ್ ನಿಂದಾಗಿ ಕನ್ನಡದಲ್ಲೇ ಜ್ಞಾನ ಮತ್ತು ಮನರಂಜನೆ ಪಡೆಯುವ ವಿಷಯದಲ್ಲಿ ಕನ್ನಡಿಗರು ಹೆಚ್ಚಿನ ಆಯ್ಕೆಗಳೇ ಇಲ್ಲದ ಸ್ಥಿತಿ ತಲುಪಿದ್ದಾರೆ. ಅದೇ ಕುಯ್ಯುವ ಧಾರಾವಾಹಿಗಳು, ಕಿತ್ತಾಡುವ ಸುದ್ದಿವಾಹಿನಿಗಳು ಮತ್ತು ಮಚ್ಚು-ಕೊಚ್ಚು ಚಿತ್ರಗಳನ್ನು ಬಿಟ್ಟರೆ ನನ್ನ ಬುದ್ದಿ ಶಕ್ತಿಗೆ ಚುರುಕು ಮುಟ್ಟಿಸುವ ಯಾವ ಅಂಶವೂ ಕನ್ನಡದಲ್ಲಿ ನನಗೆ ಸಿಗುತ್ತಿಲ್ಲ.

ಇಂತಹ ಯಾವುದೇ ಬ್ಯಾನ್ ಇಲ್ಲದ ತೆಲುಗು, ತಮಿಳು ಮತ್ತು ಹಿಂದಿ ಉದ್ಯಮಗಳು ಟಿವಿ ಮತ್ತು ಸಿನೆಮಾ ಎರಡರಲ್ಲೂ ನಮಗಿಂತಲೂ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವುದು ಇಂತಹ ಅಸಂವಿಧಾನಿಕ ಬ್ಯಾನ್ ಗಳನ್ನು ಆದಷ್ಟು ಬೇಗ ಆಚೆ ಸರಿಸಬೇಕು ಅನ್ನುವ ಸ್ಪಷ್ಟ ಸಂದೇಶವನ್ನು ನಮಗೆ ಕೊಡುತ್ತಿವೆ.

ಈ ನಿಟ್ಟಿನಲ್ಲಿ ಕರ್ನಾಟಕದ ಮಾಧ್ಯಮಗಳ ಪಾತ್ರ ದೊಡ್ಡದಿದೆ. ಡಬ್ಬಿಂಗ್ ನಿಷೇಧ ಹೇಗೆ ಕನ್ನಡದ ಭವಿಷ್ಯಕ್ಕೆ ಹೊಡೆತ ಕೊಡುತ್ತಿದೆ ಅನ್ನುವ ಅಂಶವನ್ನು ಜನಸಮುದಾಯಕ್ಕೆ,ಸರ್ಕಾರಕ್ಕೆ ತಲುಪಿಸುವ ಕೆಲಸಕ್ಕೆ ಮಾಧ್ಯಮಗಳು ಮುಂದಾಗಬೇಕಿವೆ. ಈ ಬಗ್ಗೆ ಹೆಚ್ಚೆಚ್ಚು ಚರ್ಚೆ, ಮಾತುಕತೆಗಳನ್ನು ನಡೆಸುವಂತೆ ಮಾಧ್ಯಮಗಳು ಈ ವಿಷಯವನ್ನು ಎತ್ತಿ ಹಿಡಿಯಬೇಕಿದೆ ಮತ್ತು ಈ ಎಲ್ಲ ಚರ್ಚೆಗಳಲ್ಲಿ ಎಲ್ಲರಿಗಿಂತ ಪ್ರಮುಖವಾಗಿ ಈ ಉದ್ಯಮಗಳ ಅಸ್ತಿತ್ವಕ್ಕೆ ಬೆನ್ನೆಲುಬಾಗಿರುವ ಗ್ರಾಹಕನಿಗೆ ತನ್ನ ಧ್ವನಿ ತಿಳಿಸಲು ಅವಕಾಶ ಮಾಡಿಕೊಡಬೇಕಾಗಿದೆ. ಗ್ರಾಹಕನಿಂದಲೇ ನಡೆಯುವ ಈ ಉದ್ಯಮಗಳು ಗ್ರಾಹಕನ ಬೇಕು,ಬೇಡಗಳೇನು ಅನ್ನುವುದನ್ನು ಗಮನಿಸುವ ಒತ್ತಡ ಈ ಚರ್ಚೆಗಳಿಂದಾಗಬೇಕಿದೆ.

ಗುರುವಾರ, ಜುಲೈ 28, 2011

ಹೈಕಮಾಂಡ್!!! ಹೈಕಮಾಂಡ್!!!


ಕರ್ನಾಟದಲ್ಲಿ ಕಳೆದೆರೆಡು ವಾರಗಳಿಂದ ನಡೆಯುತ್ತಿರುವ ಈ ರಾಜಕೀಯ ದೊಂಬರಾಟ ದೇಶದ ಗಮನವನ್ನ ತನ್ನತ ಸೆಳೆದಿದೆ. ಅಕ್ರಮ ಗಣಿಗಾರಿಕೆಯ ಬಗ್ಗೆ ಲೋಕಾಯುಕ್ತರು ನೀಡಿರುವ ವರದಿ ರಾಜಕೀಯ ಪಕ್ಷಗಳು ಹಾಗೂ ಅವರ ನಾಯಕರುಗಳಲ್ಲಿ ಆತಂಕ ಹುಟ್ಟಿಸಿದೆ. ಮುಂದೆ ಈ ರಾಜಕೀಯ ದೊಂಬರಾಟ ಹೇಗೆ ತಿರುವುಗಳನ್ನು ಪಡೆಯುತ್ತದೋ ಕಾದು ನೋಡೋಣ.

ಆದರೆ ಈ ಪ್ರಕರಣ ಹೊರಬಿದ್ದಾಗಿನಿಂದ ಹೈಕಮಾಂಡಿನ ಹೆಸರು ಎಂದಿಗಿಂತ ಹೆಚ್ಚು ಪದೇ ಪದೇ ಕಿವಿಯ ಮೇಲೆ ಬೀಳುತ್ತಲೇ ಇದೆ. ನಮ್ಮ ರಾಜ್ಯದ ರಾಷ್ಟ್ರೀಯ ಪಕ್ಷಗಳ ನಾಯಕರು ಎದ್ದರೂ ಹೈಕಮಾಂಡ್, ಬಿದ್ದರೂ ಹೈಕಮಾಂಡ್, ಕನಸಿನಲ್ಲೂ ಹೈಕಮಾಂಡ್ ಎಂದು ಕನವರಿಸುತ್ತಾ ಇರುತ್ತಾರೆ. ಕಾಂಗ್ರೆಸ್, ಬಿಜೆಪಿ ಎಂದು ಪಕ್ಷ ಭೇದ ಮರೆತು ನಮ್ಮ ರಾಜ್ಯದ ನಾಯಕರುಗಳು ಹೈಕಮಾಂಡಿನ ದಾಸ್ಯಕ್ಕೆ ಒಗ್ಗಿಹೋಗಿದ್ದಾರೆ ಎಂದೆನಿಸುತ್ತದೆ. ಹೈಕಮಾಂಡಿನ ಕರೆ ಬಂದ ಕೂಡಲೇ ಉಟ್ಟ ಬಟ್ಟೆಯಲ್ಲಿ ದೆಹಲಿಗೆ ಓಡಿ ಹೋಗುವ ಚಾಳಿ ನಮ್ಮ ರಾಜ್ಯದ ನಾಯಕರುಗಳಿಗೆ ಅಭ್ಯಾಸ ಆಗಿ ಹೋಗಿದೆ. ನಮ್ಮ ರಾಜ್ಯದ ಯಾವುದೇ ಪ್ರಮುಖ ವಿಷಯಗಳಲ್ಲಿ ತೀರ್ಮಾನವಾಗಬೇಕಾದರೂ ದೆಹಲಿಯಲ್ಲಿ ಗಂಟೆಗಟ್ಟಲೆ ಕೈಕಟ್ಟಿಕೊಂಡು ನಿಲ್ಲಬೇಕಾದ ಪರಿಸ್ಥಿತಿ ನಮ್ಮ ಜನಪ್ರತಿನಿಧಿಗಳದು. ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರನ್ನು ಭೇಟಿ ಮಾಡಲು ಹಲವಾರೂ ದಿನಗಳು ಕಳೆದರೂ ಭೇಟಿ ಮಾಡಲು ಸಾಧ್ಯವಾಗದೆ ವಾಪಸ್ ಬಂದಿರುವ ಅನೇಕ ಸುದ್ದಿಗಳನ್ನು ಪತ್ರಿಕೆಗಳಲ್ಲಿ ನೋಡಿರುತ್ತೇವೆ... ತೀರಾ ಇತ್ತೀಚಿಗಿನ ಬೆಳವಣಿಗೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಹೊಸ ಮುಖ್ಯಮಂತ್ರಿಗಳನ್ನೂ ಆರಿಸಲು ಸಹ ನಮ್ಮ ರಾಜ್ಯದ ಬಿಜೆಪಿ ನಾಯಕರು ಹೈಕಮಾಂಡಿನತ್ತ ಮುಖಮಾಡಿರುವುದು ನಮ್ಮ ರಾಜ್ಯದ ೬ ಕೋಟಿ ಜನರ ವಿಶ್ವಾಸಕ್ಕೆ ದ್ರೋಹ ಮಾಡಿತಂತಾಗಿದೆ? ರಾಜ್ಯದ ಹಿತಕ್ಕಾಗಿ ಸ್ವಂತ ನಿರ್ಧಾರಗಳನ್ನು ತಗೆದುಕೊಳ್ಳಲು ಸಾಧ್ಯವಿಲ್ಲವೆಂದಾದರೆ ಅವರುಗಳು ನಾಯಕರಾಗಿ ಮುಂದುವರೆಯುತ್ತಿರುವುದಾದರೂ ಏಕೆ?

ನಮ್ಮ ರಾಜ್ಯದ ಒಳಿತನ್ನು ನಿರ್ಧರಿಸಲು ಹೈಕಮಾಂಡ್ ಬೇಕೆ?
ನಾಯಕತ್ವ ಬದಲಾವಣೆಯ ಈ ಸಮಯದಲ್ಲಿ ಮುಂದಿನ ಮುಖ್ಯಮಂತ್ರಿಯಾರಗಬೇಕು ಎನ್ನುವ ತೀರ್ಮಾನವನ್ನು ಹೈಕಮಾಂಡ್ ತಗೆದುಕೊಳ್ಳಲು ಹೊರಟಿದೆ ಎನ್ನುವು ಸುದ್ದಿ ಬರುತ್ತಿದೆ. ಇಷ್ಟಕ್ಕೂ ನಮ್ಮ ರಾಜ್ಯದಲ್ಲಿ ಯಾರು ಮುಖ್ಯಮಂತ್ರಿಯಾರಾಗಬೇಕು ಎನ್ನುವ ನಿರ್ಧಾರವನ್ನು ತೀರ್ಮಾನ ಮಾಡಲು ಹೈಕಮಾಂಡ್ ಬೇಕೆ? ಅಸಲಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಮುಖ್ಯಮಂತ್ರಿ ಯಾರಾಗಿರಬೇಕು ಎನ್ನುವ ನಿರ್ಧಾರವನ್ನು ಮಾಡಬೇಕಾಗಿರುವವರು ನಮ್ಮ ಪ್ರತಿನಿಧಿಗಳಾದ ಶಾಸಕರು ಅಲ್ಲವೇ? ಇದನ್ನೆಲ್ಲ ಮೀರಿ ನಾಯಕತ್ವ ತೀರ್ಮಾನಿಸೋಕೆ ಹೈಕಮಾಂಡ್ ಗೆ ಇಲ್ಲಿನ ಯಾವ ಪರಿಸ್ಥಿತಿಯ ಅರಿವಿರುತ್ತದೆ? ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ಮಾರಕಾವಾಗಿರುವ ಈ ಹೈಕಮಾಂಡ್ ದಾಸ್ಯದಿಂದ ನಮ್ಮ ರಾಷ್ಟ್ರೀಯ ರಾಜಕೀಯ ಪಕ್ಷಗಳು ಎಂದು ಹೊರಗೆ ಬರುತ್ತವೆ? ಒಂದು ರಾಷ್ಟ್ರೀಯ ಪಕ್ಷ ಎಂದಾಕ್ಷಣ ಎಲ್ಲಾ ನಿರ್ಧಾರಗಳು ಮೇಲಿಂದಲೇ ಬರಬೇಕೆಂದೇನಿಲ್ಲ ಅಲ್ಲವೇ?. ಆದಷ್ಟು ಬೇಗ ಈ ಪರಿಸ್ಥಿತಿಯಿಂದ ನಮ್ಮ ರಾಜಕೀಯ ಪಕ್ಷಗಳು ಹೊರಬರಲಿ, ಹೈಕಮಾಂಡ್ ದಾಸ್ಯದಿಂದ ಮುಕ್ತವಾಗಲಿ ಎಂದು ಆಶಿಸೋಣ. ಕನ್ನಡಿಗರಲ್ಲಿ ಈ ಕುರಿತು ಜಾಗೃತಿಯಾಗಬೇಕು, ನಮ್ಮ ನಿರ್ಧಾರಗಳನ್ನು ನಾವೇ ತಗೆದುಕೊಳ್ಳುವಂತಾಗಬೇಕು.

ಗುರುವಾರ, ಡಿಸೆಂಬರ್ 9, 2010

ನಿಜವಾದ ಪ್ರಜಾಪ್ರಭುತ್ವದ ವ್ಯವಸ್ಥೆ ನಮ್ಮದಾಗಲಿ

ಘಟನೆ ೧:
ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಯಡ್ಯುರಪ್ಪನವರು, ತಮಿಳುನಾಡಿನ ತಿರುಚಂದೂರು ದೇವಸ್ಥಾನದ ಅಭಿವೃದ್ಧಿಗಾಗಿ ೧ ಕೋಟಿ ರುಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಅವರು ನೀಡಿರುವುದು ತಮ್ಮ ಸ್ವಂತದ್ದಲ್ಲ ಎಂಬುದು ನಿಮ್ಮ ಗಮನಕ್ಕೆ, ಅವರು ನೀಡಿರುವುದು ರಾಜ್ಯದ ಬೊಕ್ಕಸದಿಂದ, ಅಂದರೆ ನಮ್ಮ ನಿಮ್ಮೆಲ್ಲರ ಶ್ರಮದ ತೆರಿಗೆಯ ಹಣದಿಂದ.

ಘಟನೆ ೨:
ನಿನ್ನೆ ಬೆಂಗಳೂರಿನಲ್ಲಿ ನಡೆದ "ಅಧಿಕೃತ ಭಾಷೆ ಅನುಷ್ಠಾನ" ಸಮಿತಿ ಸಭೆಯಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕೆ. ರಂಗನಾಥ ಅವರು ಎಲ್ಲಾ ಸಾರ್ವಜನಿಕ ಉದ್ದಿಮೆಗಳಲ್ಲಿ ಹಿಂದಿ ಆಡಳಿತ ಭಾಷೆಯನ್ನಾಗಿ ಬಳಸುವುದನ್ನ ಕಡ್ಡಾಯ ಮಾಡಬೇಕು, ಹಿಂದಿ ಉಪಯೋಗಿಸುವುದರ ಲಾಭ-ನಷ್ಟಗಳ ಲೆಕ್ಕಾಚಾರ ನೋಡಬಾರದು, ಹಿಂದಿ ಭಾಷೆ ಅನುಷ್ಠಾನವೇ ಮುಖ್ಯ ಕರ್ತವ್ಯ ಎಂದು ಬುದ್ಧಿಮಾತು ಹೇಳಿದ್ದಾರೆ. ನಮ್ಮ ನಾಡಿನಲ್ಲಿ ಹಿಂದಿಯಲ್ಲಿನ ಆಡಳಿತ ಎಷ್ಟು ಪ್ರಸ್ತುತ ಅನ್ನುವುದು ಅವರೇ ಹೇಳಬೇಕು.

ಈ ಮೇಲಿನ ಎರೆಡು ಘಟನೆಗಳು ಸಾಂಕೇತಿಕ ಮಾತ್ರ. ಇಂತಹ ನೂರಾರು ಘಟನೆಗಳು ನಮ್ಮ ನಾಡಿನಲ್ಲಿ ನಡೆಯುತ್ತವೆ, ನಡೆಯುತ್ತಿರುತ್ತವೆ. ಜನರ ಕಲ್ಯಾಣ ಮುಖ್ಯವಾಗಬೇಕಾಗಿದ್ದ ಈ ಘಟನೆಗಳಲ್ಲಿ ಅದರ ತದ್ವಿರುದ್ಧ ಅಂಶಗಳು ಕಾಣಿಸುತ್ತಿವೆ. ಇಲ್ಲಿ ನಮಗೆ ಕಾಣುತ್ತಿರುವ ಮುಖ್ಯ ಅಂಶ ಪ್ರಜಾಪ್ರಭುತ್ವ ನಮ್ಮ ನಾಡಿನಲ್ಲಿ, ನಮ್ಮ ದೇಶದಲ್ಲಿ ಸರಿಯಾಗಿ ಅನುಷ್ಠಾನಕ್ಕೆ ಬಾರದಿರುವುದು. ಪ್ರಜಾಪ್ರಭುತ್ವದ ಅರ್ಥವನ್ನೇ ನಮ್ಮ ನಾಯಕರುಗಳು ತಿರುಚಿ ಬರೆದುಕೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅರಸನಾಗಬೇಕಾಗಿದ್ದ ಪ್ರಜೆ ಇವತ್ತು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಆಳಾಗಿದ್ದಾನೆ. ಇಂದಿನ ಪರಿಸ್ಥಿತಿಯಲ್ಲಿ ಪ್ರಜೆಗಳು ತಮ್ಮ ಧ್ವನಿಯನ್ನು ಸಹ ಎತ್ತದಿರುವ ಹಾಗೆ ಆಗಿಹೋಗಿದೆ.

ಪ್ರಜಾಪ್ರಭುತ್ವದ ನಿಜವಾದ ಅರ್ಥವೇನು?
ಭಾರತ ದೇಶ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಅನ್ನುವ ಹೆಗ್ಗಳಿಕೆ ಹೊಂದಿದೆ. ಆದರೆ ಅದು ಎಷ್ಟರಮಟ್ಟಿಗೆ ಅನುಷ್ಠಾನದಲ್ಲಿದೆ ಅನ್ನುವುದೇ ಯಕ್ಷ ಪ್ರಶ್ನೆ? ಜನರಿಂದ, ಜನರಿಗಾಗಿ, ಜನರಿಗೋಸ್ಕರ ಅನ್ನುವ ಪ್ರಜಾಪ್ರಭುತ್ವದ ಮೂಲ ಮಂತ್ರವನ್ನ ಎಷ್ಟರಮಟ್ಟಿಗೆ ಆಡಳಿತದಲ್ಲಿ ನಾವುಗಳು ಇಂದು ಕಾಣೋಕೆ ಸಾಧ್ಯ?

ಇಂದಿನ ರಾಜಕೀಯ ವ್ಯವಸ್ಥೆಯನ್ನು ನಾವುಗಳು ನಿಜವಾದ ಪ್ರಜಾಪ್ರಭುತ್ವ ಎಂದು ಒಪ್ಪಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಮೂಲ/ಬುನಾದಿಯೇ ಪ್ರಜೆಗಳು ಅಂದರೆ ನಾವುಗಳು. ನಾವುಗಳು ತಗೆದುಕೊಳ್ಳುವ ನಿರ್ಧಾರವೇ ಅಂತಿಮ. ನಿಜವಾದ ಪ್ರಜಾಪ್ರಭುತ್ವದಲ್ಲಿ ಸರಕಾರದ ಪಾತ್ರ ನಿಜಕ್ಕೂ ಕಡಿಮೆಯಾಗಿರುತ್ತದೆ. ಅಂದರೆ ಸರ್ಕಾರ ಕೇವಲ ಜನರು ಕೈಗೊಳ್ಳುವ ನಿರ್ಧಾರಗಳನ್ನು ಶಿರಸಾವಹಿಸಿ ಪಾಲಿಸುವ ಒಬ್ಬ ನೌಕರನಿದ್ದಂತೆ. ನಾಡಿನ ಪ್ರತಿಯೊಬ್ಬ ಪ್ರಜೆಗೂ ಸಿಗಬೇಕಾದ ಸೌಕರ್ಯವನ್ನು ಒದಗಿಸುವುದೇ ಸರ್ಕಾರದ ಕೆಲಸ. ಸರ್ಕಾರದ ಯಾವುದೇ ನಿರ್ಧಾರಗಳು ಜನರ ಒಪ್ಪಿಗೆ ಇಲ್ಲದೆ ಜಾರಿಗೆ ಬರುವಂತಿಲ್ಲ.

ತನ್ನ ಹಕ್ಕುಗಳನ್ನು ಮರೆತಿರುವ ಪ್ರಜೆ
ಮೇಲೆ ಹೇಳಿದಂತೆ ಇಂದಿನ (ಅ)ವ್ಯವಸ್ಥೆಗೆ ಕೇವಲ ರಾಜಕೀಯ ಪಕ್ಷಗಳು ಅಥವಾ ಜನಪ್ರತಿನಿಧಿಗಳು ಮಾತ್ರ ಕಾರಣವಲ್ಲ, ಬದಲಾಗಿ ಒಂದು ನಾಡಿನ ಸರ್ಕಾರವನ್ನೇ ಆರಿಸುವ ಶಕ್ತಿಯನ್ನ ಹೊಂದಿರುವಂತಹ ಪ್ರಜೆಗಳ ನಿರ್ಲಕ್ಷತನ, ಅಸಡ್ಡೆ, ಬೇಜವಾಬ್ದಾರಿತನವೇ ಕಾರಣ. ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಇರುವುದೇ ಮುಕ್ತ ಚುನಾವಣೆಗಳಲ್ಲಿ. ತನ್ನ ನಾಡಿಗೆ, ತನ್ನ ಕ್ಷೇತ್ರಕ್ಕೆ ಒಳ್ಳೆಯದನ್ನು ಮಾಡಬಹುದಾದ ಪಕ್ಷ ಅಥವಾ ಜನಪ್ರತಿನಿಧಿಯನ್ನ ಆರಿಸುವ ಹೊಣೆ ನಾಗರಿಕನ ಮೇಲಿದೆ.
ಶಿಕ್ಷಣದ ಕೊರತೆಯಿಂದ ಬಳಲುತ್ತಿರುವ ಒಂದು ವರ್ಗದ ಜನರು ಹಣ, ಹೆಂಡಕ್ಕೆ ಮಾರುಹೋಗಿ ತಮ್ಮ ನಿಜವಾದ ಶಕ್ತಿಯನ್ನ ಕಳೆದುಕೊಳ್ಳುತ್ತಿದ್ದಾರೆ, ಇನ್ನೊಂದೆಡೆ ಸುಶಿಕ್ಷಿತರು ಅಂತ ಕರೆಸಿಕೊಳುವ ಸಮುದಾಯ ಸಮಾಜವನ್ನು ತಿರಸ್ಕಾರ ನೋಟದಿಂದ ನೋಡುತ್ತಾ ತಮ್ಮ ನಿಜವಾದ ಕರ್ತವ್ಯವನ್ನೇ ಮರೆತು ಈ ದೇಶದ ಗತಿ ಇಷ್ಟೇ ಅಂತ ಹಲುಬುತ್ತ ಕುಳಿತಿದ್ದಾರೆ.
ಇವೆಲ್ಲರ ಮಧ್ಯೆ ಜನ ಸೇವಕನಾಗಿ ಕೆಲಸ ಮಾಡಬೇಕಾಗಿದ್ದ ಜನಪ್ರತಿನಿಧಿ ಇಂದು ಜನರ ಮೇಲೆ ಸವಾರಿ ಮಾಡುವ ಹಂತ ಬಂದು ತಲುಪಿದ್ದಾನೆ. ಸರ್ಕಾರ ತಾನು ಖರ್ಚು ಮಾಡುವ ಪ್ರತಿಯೊಂದು ರೂಪಾಯಿಗೂ ಜನರ ಮುಂದೆ ಕಾರಣ ಹೇಳಬೇಕು. ಆದರೆ ಇಂದು ನಾವುಗಳು ಸರ್ಕಾರಗಳಿಗೆ ಕಟ್ಟುವ ತೆರಿಗೆ ಹಣ ನಾಡಿನ ಹೊರಗಿರುವ ದೇವಸ್ಥಾನಗಳಿಗೆ ಕೋಟ್ಯಾಂತರ ರೂಪಾಯಿ ದೇಣಿಗೆ ರೂಪದಲ್ಲಿ ಹರಿದು ಹೋಗುತ್ತಿದೆ, ದೇಶದ ಏಕತೆಯಂಬ ಹುಸಿ ನಂಬಿಕೆಯಲ್ಲಿ ನಾಡಿನ ಭಾಷೆಯಾಗಿರದ ಹಿಂದಿಯನ್ನು ಬಲವಂತವಾಗಿ ನಮ್ಮ ಮೇಲೆ ಹಾಗು ಶಿಕ್ಷಣದ ಮೂಲಕ ನಮ್ಮ ಮಕ್ಕಳ ಮೇಲೆ ಹೇರಲಾಗುತ್ತಿದೆ. ಈ ಹೇರಿಕೆಗೆ ಖರ್ಚು ಮಾಡಲಾಗುತ್ತಿರುವ ಕೋಟ್ಯಾಂತರ ರೂಪಾಯಿಗಳು ಸಹ ನಮ್ಮ ತೆರಿಗೆಯ ಹಣವೇ. ಅಭಿವೃದ್ಧಿಗೆ ಮೀಸಲಿರಬೇಕಾಗಿದ್ದ ನಮ್ಮ ತೆರಿಗೆ ಹಣ ಇನ್ನು ಹಲವಾರು ರೀತಿಯಲ್ಲಿ ಪೋಲಾಗಿ ಹೋಗುತ್ತಿದೆ. ಇವಕ್ಕೆಲ್ಲ ಪರಿಹಾರ ಒಂದೇ ನಾವುಗಳೆಲ್ಲ ಜಾಗೃತರಾಗುವುದು. ನಮ್ಮ ಮೇಲಿರುವ ಸಾಮಾಜಿಕ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವುದು. ಆಗಲೇ ನಿಜವಾದ ಪ್ರಜಾಪ್ರಭುತ್ವ ನಮ್ಮದಾಗುತ್ತದೆ.