ಗುರುವಾರ, ಮಾರ್ಚ್ 15, 2012

ರೈಲ್ವೆ ಯೋಜನೆಗಳು ಮತ್ತು ಕರ್ನಾಟಕಕ್ಕೆ ವಲಸೆ

ಚಿತ್ರ ಕೃಪೆ: ಅಂತರ್ಜಾಲ

ನಿನ್ನೆ ಲೋಕಸಭೆಯಲ್ಲಿ ಮಂಡಿಸಲಾದ 2012-2013 ನೇ ಸಾಲಿನ ರೈಲ್ವೆ ಬಜೆಟ್ ಕರ್ನಾಟಕದ ಪಾಲಿಗೆ ನಿರಾಸೆ ಮೂಡಿಸಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ರೈಲ್ವೆ ಬಜೆಟ್ಟಿನಲ್ಲಿ ಕರ್ನಾಟಕಕ್ಕೆ ಉಪಯೋಗವಾಗುವಂತಹ ಬೆರೆಳೆಣಿಕೆಯಷ್ಟು ಯೋಜನೆಗಳನ್ನು ಬಿಟ್ಟರೆ ಉಳಿದೆಲ್ಲಾ ಯೋಜನೆಗಳು ಹೊರ ರಾಜ್ಯದ ಜನರಿಗೆ ನಮ್ಮ ರಾಜ್ಯಕ್ಕೆ ವಲಸೆ ಬರಲು ಸುಲಭ ಮಾಡಿಕೊಡಲು ಯೋಚಿಸಿದಂತಿದೆ!! ಕೆಳಗಿರುವ ಈ ಪಟ್ಟಿಗಳನ್ನು ನೋಡಿ ೨೦೧೧ ನೇ ಸಾಲಿನ ಹಾಗೂ ೨೦೧೨ ನೇ ಸಾಲಿನಲ್ಲಿ ರಾಜ್ಯಕ್ಕೆ ನೀಡಲಾಗಿರುವ ಹೊಸ ರೈಲುಗಳ ಸಂಚರಿಸುವ ಮಾರ್ಗವನ್ನು ನೀಡಲಾಗಿದೆ.

2011 ರಲ್ಲಿ ಕರ್ನಾಟಕಕಕ್ಕೆ ನೀಡಲಾಗಿರುವ ರೈಲುಗಳು
2012 ರಲ್ಲಿ ಕರ್ನಾಟಕಕಕ್ಕೆ ನೀಡಲಾಗಿರುವ ರೈಲುಗಳು
ಹೌರಾ – ಮೈಸೂರು ಎಕ್ಸ್‘ಪ್ರೆಸ್
ಯಶವಂತಪುರ – ಕುಚುವೇಲಿ
ಮೈಸೂರು – ಚನ್ನೈ ಎಕ್ಸ್‘ಪ್ರೆಸ್
ಚನ್ನೈ – ಬೆಂಗಳೂರು
ಅಹಮದಾಬಾದ್ – ಯಶವಂತಪುರ ಎಕ್ಸ್‘ಪ್ರೆಸ್
ಇಂದೂರ್ – ಯಶವಂತಪುರ
ಗೋರಕ್ಪುರ – ಯಶವಂತಪುರ ಎಕ್ಸ್‘ಪ್ರೆಸ್
ಮೈಸೂರು – ಸಾಯಿನಗರ
ವಾಸ್ಕೋ – ವೆಲಂಕಣಿ ಎಕ್ಸ್‘ಪ್ರೆಸ್
ಸೊಲ್ಲಾಪುರ – ಯಶವಂತಪುರ
ಎರ್ನಾಕುಲಂ – ಬೆಂಗಳೂರು ಎಕ್ಸ್‘ಪ್ರೆಸ್
ಬೀದರ್ – ಸಿಕಂದರಾಬಾದ್
ಹೌರಾ – ಮಂಗಳೂರು ವಿವೇಕ ಎಕ್ಸ್‘ಪ್ರೆಸ್


2012  ರಲ್ಲಿ ಮಾರ್ಗ ವಿಸ್ತರಣೆಯ ರೈಲುಗಳು
ಪಾಲಕ್ಕಾಡ್ – ಮಂಗಳೂರು ಎಕ್ಸ್‘ಪ್ರೆಸ್ ಕೊಯಮುತ್ತೂರುವರೆಗೆ
ದಾದರ್ – ಯಶವಂತಪುರ ಎಕ್ಸ್‘ಪ್ರೆಸ್ – ಪುದುಚೇರಿವರೆಗೂ
ಮಂಗಳೂರು – ತಿರುವನಂತಪುರ ಎಕ್ಸ್‘ಪ್ರೆಸ್ – ನಾಗರಕೊಯಿಲ್ ವರೆಗೂ

ಈ ಹೊಸ ರೈಲು ಯೋಜನೆಗಳು, ವಿಸ್ತರಣೆಗಳು ಎಲ್ಲವೂ ನಮ್ಮ ರಾಜ್ಯದ ಜನರ ಓಡಾಟವನ್ನು ಸುಲಭಗೊಳಿಸುವ ಬದಲು ಹೊರ ರಾಜ್ಯದ ಜನರನ್ನು ನಮ್ಮ ರಾಜ್ಯದ ರಾಜಧಾನಿಗೆ ತಂದಿಳಿಸುವ ಯೋಜನೆಗಳಾಗಿ ಕಾಣುತ್ತವೆ. ಇನ್ನು ನಮ್ಮ ರಾಜ್ಯದ ಯೋಜನೆಗಳ ಪಟ್ಟಿ ನೋಡಿದರೆ ಅಲ್ಲಿ ಇನ್ನು ಗೇಜ್ ಪರಿವರ್ತನೆ, ಮಾರ್ಗಗಳ ಸರ್ವೆ, ಮೇಲ್ಸೇತುವ, ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವಿಕೆ ಯಂತಹ ಸಣ್ಣ ಯೋಜನೆಗಳು ಕಾಣಸುಗುತ್ತವೇ ಹೊರತು ನಮ್ಮ ಜನರ ಸಂಚಾರವನ್ನು ಸುಲಭಗೊಳಿಸುವ ಯೋಜನೆಗಳು ಕಾಣಸಿಗುವುದಿಲ್ಲ. ಈ ಹಿಂದೆ ೨೦೧೧ ನೇ ಸಾಲಿನ ರೈಲ್ವೆ ಬಜೆಟ್ ಸಮಯದಲ್ಲಿ ನಾನು ಮಾಡಿದ್ದ ವಿಶ್ಲೇಷಣೆ ಈ ವರ್ಷಕ್ಕೂ ಅನ್ವಯಿಸಬಹುದು.

ಜನಸಾಂದ್ರತೆ:
ಜನರು ಬೇರೆಡೆಗೆ ವಲಸೆ ಹೋಗಲು ಆಯಾ ರಾಜ್ಯದಲ್ಲಿರುವ ಜನಸಾಂದ್ರತೆಯು ಕಾರಣವಾಗಿರಬಹುದು. ಆಯಾ ರಾಜ್ಯಗಳಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆಯಿಂದಾಗಿ, ಆಲ್ಲಿ ಏರ್ಪಡುವ ಪೈಪೋಟಿಯಿಂದಾಗಿ, ಬದುಕು ಕಂಡುಕೊಳ್ಳಲು ಜನರು ಹೊರ ರಾಜ್ಯಗಳಿಗೆ ವಲಸೆ ಹೋಗುವುದಕ್ಕೆ ಶುರು ಮಾಡುತ್ತಾರೆ. ರೈಲ್ವೆ ಇಲಾಖೆ ತಯಾರಿಸುವ ಇಂತಹ ಯೋಜನೆಗಳು ಜನರಿಗೆ ಕರ್ನಾಟಕದಂತಹ ಕಡಿಮೆ ಜನಸಾಂದ್ರತೆ ಹೊಂದಿರುವ ರಾಜ್ಯಗಳಿಗೆ ವಲಸೆ ಬರಲು ಉತ್ತೇಜನ ನೀಡುವಂತೆ ಕಾಣಿಸುತ್ತವೆ. ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ವಿವಿಧ ರಾಜ್ಯಗಳಲ್ಲಿರುವ ಜನಸಾಂದ್ರತೆಯನ್ನು ನೋಡಿ:

ರಾಜ್ಯ
ಪ್ರತಿ ಚದುರ ಕಿಮಿಗೆ ಇರುವ ಜನಸಾಂದ್ರತೆ
ಬಿಹಾರ್
1102
ಉತ್ತರ ಪ್ರದೇಶ
828
ಪಶ್ಚಿಮ ಬಂಗಾಳ
1030
ತಮಿಳುನಾಡು
555
ಕೇರಳ
859
ಕರ್ನಾಟಕ
319
ಮಾಹಿತಿ: ಮ್ಯಾಪ್ಸ್ ಆಫ್ ಇಂಡಿಯಾ

ರೈಲ್ವೆ ಇಲಾಖೆಯನ್ನು ರಾಜ್ಯಗಳ ಕೈಗೆ ಒಪಿಸಬೇಕು:

ನಮ್ಮ ರಾಜ್ಯದಲ್ಲಿ ಯಾವ ಊರಿಂದ ಊರಿಗೆ ರೈಲುಗಳಿರಬೇಕು, ಎಷ್ಟು ರೈಲುಗಳನ್ನು ಓಡಿಸಬೇಕು ಎಂದು ಈಗ ಕೇಂದ್ರದಲ್ಲಿ ಕುಳಿತಿರುವ ರೈಲ್ವೆ ಮಂಡಳಿ ನಿರ್ಧರಿಸುತ್ತದೆ. ಹಲವು ದಶಕಗಳಿಂದ ಹಲವಾರು ಅವಶ್ಯಕ ಯೋಜನೆಗಳ ಬಗ್ಗೆ ಇಲಾಖೆಗೆ ನಮ್ಮ ಶಾಸಕರು, ಸಂಸದರು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಅವಿನ್ನೂ ಧೂಳು ಹಿಡಿದು ಕೂತಿವೆ. ಯಾವ ಊರಿಂದ ಯಾವ ಊರಿಗೆ ರೈಲು ಮಾರ್ಗ ಇರಬೇಕು, ಇದರ ಒಳಿತು ಕೆಡಕೇನು ಅನ್ನುವುದು ಅವರಿಗಿಂತ ನಮಗೆ ಚೆನ್ನಾಗಿ ಗೊತ್ತಿರುತ್ತದೆ ಅಲ್ಲವೇ? ಆದ್ದರಿಂದ ರೈಲ್ವೆ ಇಲಾಖೆಯನ್ನು ರಾಜ್ಯಗಳ ಕೈಗೆ ಕೇಂದ್ರ ಸರ್ಕಾರ ಒಪ್ಪಿಸಬೇಕು ಇದರಿಂದ ಆಯಾ ರಾಜ್ಯಕ್ಕೆ ಬೇಕಾಗಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಯಾರದೋ ಮರ್ಜಿಗೆ ಕಾಯುವ ಅವಶ್ಯಕತೆ ಇರುವುದಿಲ್ಲ.

ಬುಧವಾರ, ಮಾರ್ಚ್ 14, 2012

ತಮಿಳುನಾಡು ಜನರ ಒಗ್ಗಟ್ಟು ನೋಡಿ


ಇಂದು ಬೆಳಗ್ಗೆ ಪತ್ರಿಕೆಗಳಲ್ಲಿ ಬಂದ ಸುದ್ದಿಯೊಂದು ನನ್ನ ಗಮನ ಸೆಳೆಯಿತು. ಅದೇನೆಂದರೆ ಶ್ರೀಲಂಕಾದಲ್ಲಿರುವ ತಮಿಳರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ತಮಿಳುನಾಡಿನ ಎಲ್ಲಾ ಪಕ್ಷದ ನಾಯಕರುಗಳು ನಿನ್ನೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕೋಲಾಹಲ ಎಬ್ಬಿಸಿ, ಭಾರತ ಸರ್ಕಾರ ಈ ಕ್ರಮವನ್ನು ಖಂಡಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಮುಂದೆ ನಡೆಯಲಿರುವ ಯು.ಎನ್ ಮಾನವ ಹಕ್ಕುಗಳ ಸಮ್ಮೇಳನದಲ್ಲಿ ಶ್ರೀಲಂಕಾದ ವಿರುದ್ಧ ಮತ ಚಲಾಯಿಸಬೇಕು ಎಂದು ತಮಿಳುನಾಡಿನ ನಾಯಕರು ಭಾರತ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅವರ ಈ ಒತ್ತಾಯಕ್ಕೆ ಮಣಿದಿರುವ ಕೇಂದ್ರ ಸರ್ಕಾರ, ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವುದುದಾಗಿ ಭರವಸೆ ನೀಡಿದೆ.

ಕನ್ನಡಿಗರು ಕಲಿಯಬೇಕಿರುವ ಪಾಠ:
ಮೊದಲಿನಿಂದಲೂ ತಮಿಳುನಾಡಿನ ಸರ್ಕಾರ ತಮ್ಮ ಜನರು ಯಾವುದೇ ರಾಜ್ಯ, ದೇಶದಲ್ಲಿರಲಿ ಅವರ ಯೋಗ ಕ್ಷೇಮದ ಬಗ್ಗೆ ತೀವ್ರವಾದ ಕಾಳಜಿಯನ್ನು ತೋರಿಸುತ್ತಲೇ ಬಂದಿದೆ. ಅದು ಶ್ರೀಲಂಕಾದಲ್ಲಿರುವ ತಮಿಳರ ಬಗ್ಗೆ ಇರಬಹುದು ಅಥವಾ ಬೇರಿನ್ನಾವುದೇ ಪ್ರದೇಶದಲ್ಲಿರಬಹುದು. ತಮ್ಮ ಜನರಿಗೆ ಒಳಿತಾಗಬೇಕೆಂದರೆ ಎಲ್ಲಾ ಪಕ್ಷಗಳ ನಾಯಕರು ತಮ್ಮ ಭಿನಾಭಿಪ್ರಾಯವನ್ನು ಮರೆತು ಅವರ ಒಳಿತಿಗೆ ಟೊಂಕ ಕಟ್ಟಿ ನಿಲ್ಲುತ್ತಾರೆ.

ಆದರೆ ಇದೇ ಪರಿಸ್ಥಿತಿ ನಮ್ಮ ರಾಜ್ಯದ ನಾಯಕರುಗಳಿಂದ ನಿರೀಕ್ಷಿಸಲು ಸಾಧ್ಯವೇ? ಇವತ್ತಿನ ಮಟ್ಟಿಗೆ ಖಂಡಿತವಾಗಿಯೂ ಸಾಧ್ಯವಿಲ್ಲ. ನಮ್ಮದೇ ರಾಜ್ಯದ ನೆಲದಲ್ಲಿ ಮಹಾರಾಷ್ಟ್ರದ ನೆಲ ಅಂತ ಬರೆದಿರೋ ಬೋರ್ಡ್ ತೆಗೆಸಲು ಮೀನಾಮೇಷ ಎಣಿಸುತ್ತದೆ ನಮ್ಮ ಸರ್ಕಾರ, ಗೋವಾದಲ್ಲಿರುವ ಕನ್ನಡಿಗರ ಮೇಲೆ ದೌರ್ಜನ್ಯ ನಡೆದಾಗಿ ಎಲ್ಲಾ ಮುಗಿದ ಮೇಲೆ ತೇಪೆ ಸಾರಿಸುವ ಕೆಲಸಕ್ಕೆ ಬರುತ್ತದೆ, ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳ ಕುಡಿಯುವ ನೀರಿನ ಬವಣೆಯನ್ನು ತೀರಿಸಲು ಇರುವ ಕಳಸಾ-ಭಂಡೂರ ನಾಲಾ ಯೋಜನೆಯನ್ನು ಇನ್ನೂ ದಶಕಗಳಿಂದ ಜಾರಿಗೆ ತರದೇ ಹಾಗೆ ಮುಂದೆ ತಳ್ಳುತ್ತಿದೆ, ಇದರ ಅನುಷ್ಠಾನಕ್ಕೆ ಇರುವ ತೊಡರನ್ನು ಬಗೆಹರಿಸಲು ನಮ್ಮ ರಾಜ್ಯದ ರಾಜಕೀಯ ಪಕ್ಷಗಳು ಒಟ್ಟಾಗಿ ಎಂದು ಕೆಲಸ ಮಾಡಲೇ ಇಲ್ಲ, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡಲು ಸಿದ್ಧ ಮಾಡಲಾಗಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರದೇ ೩ ದಶಕಗಳು ಕಳೆದು ಹೋಗಿವೆ... ಹೀಗೆ ಈ ಪಟ್ಟಿ ಹನುಮಪ್ಪನ ಬಾಲದಂತೆ ದೊಡ್ಡದಿದೆ.

ಇದಕೆಲ್ಲ ಮೂಲ ಹುಡುಕ ಹೊರಟರೆ ನಮ್ಮ ರಾಜ್ಯದಲ್ಲಿರುವ ರಾಜಕೀಯ ಪಕ್ಷಗಳು, ಮುನ್ನುಗ್ಗಿ ರಾಜ್ಯಕ್ಕೆ ಯೋಜನೆಗಳನ್ನು ತರಬೇಕು ಎನ್ನುವ ಛಲದ ಕೊರತೆ, ಆ ಪಕ್ಷದಲ್ಲಿರುವ ನಾಯಕರುಗಳ ಹೈಕಮಾಂಡ್ ಗುಲಾಮಗಿರಿ, ತಮ್ಮ ರಾಜ್ಯಕ್ಕೆ ಅನ್ಯಾಯವಾದರೂ ಪರವಾಗಿಲ್ಲ ಹೈಕಮಾಂಡ್ ಹೇಳಿದಂತೆ ಕೇಳಬೇಕು ಎನ್ನುವ ಶಿಸ್ತಿನ ಪಕ್ಷಗಳು!!! ಇವುಗಳು ಎಂದಿಗೂ ನಮ್ಮ ಪಕ್ಷಗಳು ಅನ್ನಿಸಿಯೇ ಇಲ್ಲ! ಇದರ ಜೊತೆಜೊತೆಗೆ ನಮ್ಮ ಕನ್ನಡಿಗರಲ್ಲಿ ಜಾಗೃತಿಯ ಕೊರತೆ... ಇವುಗಳನ್ನೆಲ್ಲ ಒಟ್ಟಾಗಿ ಎದುರಿಸೋಕೆ ನಮ್ಮ ರಾಜ್ಯದಲ್ಲಿ ನಮ್ಮದೇ ಒಂದು ಪ್ರಾದೇಶಿಕ ಪಕ್ಷ ಬೇಕಾಗಿದೆ.

ಮಂಗಳವಾರ, ಮಾರ್ಚ್ 6, 2012

ಅನಿಯಂತ್ರಿತ ವಲಸೆ ಕಡಿವಾಣಕ್ಕೆ ಬೇಕು ಕಾನೂನು


ತಮಿಳುನಾಡು ರಾಜ್ಯದಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಪಾತಕ ಕೃತ್ಯಗಳ ಕಡಿವಾಣಕ್ಕಾಗಿ ಅಲ್ಲಿನ ಸರ್ಕಾರ ಹೊರ ರಾಜ್ಯದಿಂದ ತಮಿಳುನಾಡಿಗೆ ವಲಸೆ ಬಂದಿರುವ ಜನರ ಮಾಹಿತಿಯನ್ನು ಕಲೆ ಹಾಕಲು ತೀರ್ಮಾನಿಸಿದೆ ಹಾಗೂ ಈ ಕಾರ್ಯಕ್ಕೆ ಚಾಲನೆ ನೀಡಿದೆ. ಮಾಹಿತಿ ಕಲೆ ಹಾಕುವಲ್ಲಿ ಮುಖ್ಯವಾಗಿ ಕಟ್ಟಡ ಕಾಮಗಾರಿ, ಗಾರ್ಮೆಂಟ್ಸ್ ಹಾಗೂ ಹೋಟೆಲ್ ಉದ್ಯಮದಂಥಹ ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಈ ಮಾಹಿತಿ ಕಲೆ ಹಾಕುವಿಕೆಯ ಮುಖ್ಯ ಉದ್ದೇಶ ಕೆಲಸ ಅರಸಿ ಬಂದಿರುವ ವಲಸಿಗರನ್ನು ಪಾತಕಿಗಳಿಂದ ಬೇರ್ಪಡಿಸಿ ನೋಡುವುದಕ್ಕೆ ಸುಲಭವಾಗುತ್ತದೆ ಅನ್ನುವ ಕಾರಣಕ್ಕೆ.

ನಮ್ಮ ರಾಜ್ಯದಲ್ಲೂ ಯೋಜನೆ ಜಾರಿಗೆ ಬರಲಿ:

ಈ ಯೋಜನೆ ಕಾನೂನು ವ್ಯವಸ್ಥೆಯನ್ನು ಕಾಪಡುವಲ್ಲಿ ನಿಜಕ್ಕೂ ಒಳ್ಳೆಯ ಹೆಜ್ಜೆಯಾಗಿದೆ. ಬೆಂಗಳೂರು ಸೇರಿದಂತೆ ಹೊರ ರಾಜ್ಯದಿಂದ ಹೆಚ್ಚಾಗಿ ವಲಸೆಯಾಗುತ್ತಿರುವ ನಮ್ಮ ನಗರಗಳಲ್ಲಿ ಈ ಯೋಜನೆ ಜಾರಿಯಾಗಬೇಕಾಗಿರುವುದು ಅವಶ್ಯಕವಾಗಿದೆ. ನಮ್ಮ ಊರುಗಳಿಗೆ ಯಾರು ಬರುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಹಾಗೂ ಅವರ ಪೂರ್ವಾಪರವೇನು ಅನ್ನೋ ಮಾಹಿತಿಗಳು ನಮಗೆ ಗೊತ್ತಿದ್ದರೆ ಒಳ್ಳೆಯದಲ್ಲವೇ? ಬೆಂಗಳೂರಿನಲ್ಲಿ ನಡೆದಿರುವ ಹಲವಾರುಅಪರಾಧ ಪ್ರಕರಣಗಳಲ್ಲಿ ಹೊರ ರಾಜ್ಯದ ಪಾತಕಿಗಳು ಭಾಗಿಯಾಗಿರುವುದು ಕಂಡುಬಂದಿದೆ. ವಲಸೆ ಬಂದಿರುವ ಜನರ ಅಂಕೆ ಸಂಖ್ಯೆಗಳನ್ನು ಹೊಂದಿರುವುದು ಸರ್ಕಾರಕ್ಕೆ ಮುಖ್ಯವಾಗುತ್ತದೆ. ಅನಿಯಂತ್ರಿತ ವಲಸೆಯಿಂದಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿ ಘರ್ಷಣೆಗೆ ಕಾರಣವಾಗಬಹುದು. ಇದಕ್ಕೆ ಸ್ಪಷ್ಟ ಉದಾಹರಣೆ ಮುಂಬೈ ನಗರ.

ಅನಿಯಂತ್ರಿತ ವಲಸೆಯಿಂದಾಗಿ ಒಂದು ರಾಜ್ಯದ Demography ಯೇ ಬದಲಾಗಿ ಹೋಗುವ ಅಪಾಯಕಾರಿ ಪರಿಣಾಮಗಳನ್ನು ಹಲವಾರು ರಾಜ್ಯಗಳು ಇಂದು ಅನುಭವಿಸುತ್ತಿವೆ. ಬೇರೆಲ್ಲೋ ಪಾತಕ ಕೃತ್ಯಗಳಲ್ಲಿ ಭಾಗಿಯಾಗಿರುವ ಜನರು ತಲೆತಪ್ಪಿಸಿಕೊಂಡು ನಮ್ಮ ರಾಜ್ಯಗಳಿಗೆ ಬಂದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸಗಳು ಆಗಬಹುದು. ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾರೆ ಅನ್ನೋ ಕಾರಣಕ್ಕೆ ಹಿಂದಿನ ಪೂರ್ವಾಪರ ತಿಳಿಯದೇ ಕರೆದುಕೊಂಡು ಬರಲಾಗುವ ಇಂತಹ ಜನರನ್ನು ಒಂದೆಡೆ ಮಧ್ಯವರ್ತಿಗಳು ಶೋಷಿಸಿದರೆ, ಇನ್ನೊಂದೆಡೆ ಇಲ್ಲಿಗೆ ವಲಸೆ ಬರುವ ಜನರು ನಮ್ಮ ಸಮಾಜದ ಜೊತೆ ಬೆರೆಯದೇ ತಮ್ಮದೇ ಒಂದು ದ್ವೀಪ ಕಟ್ಟಿಕೊಂಡು ಸಮಾಜದಲ್ಲಿ ಒಡಕು ತರುವ ಕೆಲಸಗಳಿಗೂ ಕಾರಣವಾಗಬಹುದು. ಕಡಿಮೆ ಸಂಬಳದ ನೆಪವೊಡ್ಡಿ ನಮ್ಮ ಕನ್ನಡಿಗರಿಗೆ ಕೆಲಸಗಳು ದೊರಕದಂತಹ ಪರಿಸ್ಥಿತಿ ನಿರ್ಮಾಣವಾದರೆ, ಇಂತಹ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯ ಅಭಿವೃದ್ಧಿ ಕಾಣುತ್ತಿದೆಯಾದರೆ. ನಮ್ಮ ಜನರಿಗೆ ಸರಿಯಾದ ವ್ಯವಸ್ಥೆಯಿಲ್ಲದ, ನಮ್ಮ ಜನರಿಗೆ ಕೆಲಸ ಸಿಗದ ಇಂತಹ ಅಭಿವೃದ್ಧಿ ನಮಗೆ ಬೇಕೆ ಎನ್ನೋ ಪ್ರಶ್ನೆಯನ್ನ ನಾವುಗಳು ಕೇಳಿಕೊಳ್ಳಬೇಕಾಗಿದೆ?

ವಲಸೆಗೆ ಕಾನೂನು ಜಾರಿಯಾಗಬೇಕು:

ಇಂದು ವಲಸೆ ಕೇವಲ ಸಣ್ಣ ಪ್ರಮಾಣದಲ್ಲಿ ಆಗುತ್ತಿಲ್ಲ, ಬದಲಾಗಿ ದಿನದಿಂದ ದಿನಕ್ಕೆ ಇದರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ವಲಸೆಯ ಕಾರಣದಿಂದಾಗಿ ನಮ್ಮ ಜನರೂ ಸಹ ತಮ್ಮ ಕೆಲಸಗಳನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದೊದಗಿದ್ದಾರೆ, ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲೂ ಸಹ ಪೋಲಿಸ್ ಇಲಾಖೆಗೆ ತೊಂದರೆಯಾಗುತ್ತಿದೆ. ಮೂಲ ನಿವಾಸಿಗಳು ಹಾಗೂ ವಲಸಿಗರ ನಡುವೆ ಕಂದಕ ಏರ್ಪಡುತ್ತಿದೆ. ನಮ್ಮ ರಾಜ್ಯಕ್ಕೆ ಎಷ್ಟು ಜನರು ವಲಸೆ ಬರಬೇಕು ಅನ್ನೋ ನೀತಿಯನ್ನ ರೂಪಿಸಲು ನಮ್ಮ ರಾಜ್ಯಕ್ಕೆ ಹಕ್ಕಿರಬೇಕು. ಬಿಹಾರದಿಂದ, ಪಶ್ಚಿಮ ಬಂಗಾಳದಿಂದ ನಮ್ಮ ರಾಜ್ಯಕ್ಕೆ ಎಷ್ಟು ಜನರು ವಲಸೆ ಬರಬೇಕು ಅನ್ನೋ ನಿರ್ಧಾರ ನಮ್ಮ ರಾಜ್ಯಕ್ಕಿದ್ದರೆ, ನಮ್ಮ ರಾಜ್ಯದಿಂದ ಅಥವಾ ಬೇರೆ ರಾಜ್ಯದಿಂದ ಬಿಹಾರಕ್ಕೆ ಎಷ್ಟು ಜನರು ವಲಸೆ ಹೋಗಬೇಕು ಅನ್ನೋ ನಿರ್ಧಾರವನ್ನು ಬಿಹಾರ ಸರಕಾರಕ್ಕೆ ಬಿಡಬೇಕು, ಇದು ಸರಿಯಾದ ದಾರಿ ಕೂಡ.

ಇಂದು ಸಂವಿಧಾನದಲ್ಲಿ ಈ ತರಹದ ಕಾನೂನಿಗೆ ಅವಕಾಶವಿಲ್ಲವಾದರೆ, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಸಲಹೆ ಪಡೆದು ವಲಸೆ ನಿಯಂತ್ರಣದ ಬಗ್ಗೆ ಸಂವಿಧಾನದಲ್ಲಿ ತಿದ್ದುಪಡಿ ತರಬೇಕಾಗಿದೆ. ವಲಸೆಗೆ ಬರುವ ಜನರಿಗೆ ರಾಜ್ಯ ಸರ್ಕಾರದಿಂದ ಪರ್ಮಿಟ್ ಪಡೆದುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಿದೆ. ಇದರ ಮೂಲಕ ವಲಸಿಗರ ಸ್ಥಿತಿಗತಿ, ಅಂಕೆ ಸಂಖ್ಯೆ, ಹಾಗೂ ಇತರೇ ವಿಷಯದಲ್ಲಿ ಸರ್ಕಾರಕ್ಕೆ ತೀರ್ಮಾನ ಕೈಗೊಳ್ಳಲು ಸುಲಭವಾಗುತ್ತದೆ. ವಲಸೆಯನ್ನು ನಿಯಂತ್ರಿಸುವ ಸಲುವಾಗಿ ಆಯಾ ರಾಜ್ಯದಲ್ಲಿ ಹೆಚ್ಚಿನ  ಉದ್ಯೋಗಗಳನ್ನು ಸೃಷ್ಠಿ ಮಾಡಬೇಕಾದ ಅನಿವಾರ್ಯತೆ ಇಂದು ಎಲ್ಲಾ ರಾಜ್ಯಗಳ ಮೇಲಿದೆ. ನಮ್ಮ ರಾಜ್ಯದಲ್ಲೂ ಕೂಡ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ.

ಮಂಗಳವಾರ, ಫೆಬ್ರವರಿ 7, 2012

ಸರೋಜಿನಿ ಮಹಿಷಿ ವರದಿ ಎಂಬ ಕನ್ನಡಿಯೊಳಗಿನ ಗಂಟು


ಇತ್ತೀಚಿಗೆ ನಡೆದ ಸಮಾರಂಭವೊಂದರಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸದಾನಂದ ಗೌಡರು “ಬದಲಾದ ಕಾಲಘಟಕ್ಕೆ ಅನುಗುಣವಾಗಿ ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಣೆ ಮಾಡಬೇಕು ಎಂಬ ಬೇಡಿಕೆ ಇದೆ. ಈ ಸಂಬಂಧ ಸಮಿತಿ ರಚಿಸಲು ಸರ್ಕಾರದ ಚಿಂತನೆ ನಡೆಸಿದೆ” ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳ ನಂತರ ಕನ್ನಡಿಗರಿಗೆ ಉದ್ಯೋಗ ಕೊಡಬೇಕೆಂಬ ವರದಿಯ ಬಗ್ಗೆ ಮಾತಾಡಿರುವದು ನಮ್ಮ ಪುಣ್ಯ!!! ಅದಕ್ಕಾಗಿ ನಮ್ಮ ಮುಖ್ಯಮಂತ್ರಿಗಳಿಗೆ ಶುಭಾಷಯ ಹೇಳೋಣ. ಅದ್ರೆ ಮೂರು ದಶಕಗಳಿಂದ ಧೂಳು ಹಿಡಿದು ಬಿದ್ದಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರುತ್ತೇವೆ ಅನ್ನೋ ಹೇಳಿಕೆ ಬದಲು ಸಮಿತಿ ರಚಿಸಲು ಚಿಂತನೆ ನಡೆಸುತ್ತೇವೆ, ಯೋಚಿಸುತ್ತಿದ್ದೇವೆ, ಜಾರಿ ಮಾಡುತ್ತೇವೆ... ಅನ್ನೋ ಅವರ ಪದ ಪ್ರಯೋಗಗಳು ಗಾಳಿಯಲ್ಲಿ ಗೋಪುರ ಕಟ್ಟುವ ಪ್ರಯತ್ನವಾಗಿ ಕಾಣುತ್ತಿದೆ.
(ಚಿತ್ರಕೃಪೆ: ಅಂತರ್ಜಾಲ)

ಮೂರು ದಶಕಗಳ ಹಿಂದೆ ತಯಾರಿಸಲಾದ ಸರೋಜಿನಿ ಮಹಿಷಿ ವರದಿಯನ್ನು, ಕಳೆದ ೧೫ ವರ್ಷಗಳಲ್ಲಿ ರಾಜ್ಯದಲ್ಲಿ ಆಗಿರುವ ಔದ್ಯೋಗಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಇಂದಿನ ದಿನ ಮಾನಕ್ಕೆ ತಕ್ಕಂತೆ ಶಿಫಾರಸ್ಸುಗಳನ್ನು ಬದಲಾಯಿಸಬೇಕಾಗಿರುವುದು ಇಂದಿನ ಅವಶ್ಯಕತೆ. ಇಷ್ಟರಲ್ಲಾಗಲೇ ಈ ಕೆಲಸ ಮಾಡಬೇಕಾಗಿದ್ದ ಸರ್ಕಾರ ಇನ್ನೂ ಸಮಿತಿ ರಚಿಸುವಲ್ಲಿ, ಚಿಂತನೆ ನಡೆಸುವಲ್ಲಿ, ಬೇಡಿಕೆ ಪರಿಶೀಲಿಸುವುದರಲ್ಲಿ ಮೀನಾಮೇಷ ಎಣಿಸುತ್ತ ಜನರ ಕಿವಿಯ ಮೇಲೆ ಹೂವು ಇಡುತ್ತಿದೆ.

ಸರೋಜಿನಿ ಮಹಿಷಿಯಲ್ಲಿ ಹೇಳಿರುವ ಉದ್ಯೋಗ ಮೀಸಲಾತಿಯ ಬಗ್ಗೆ ನೋಡುತ್ತಿದ್ದಾಗ, ಈ ಯೋಚನೆಯನ್ನ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರ ಮಾಡಿದ್ದಾರೆಯೇ? ಇದರ ಅನುಷ್ಠಾನ ಬಲು ಕಷ್ಟವಾದ ಕ್ರಿಯೆಯೇ? ಈ ತರಹದ ಯೋಜನೆಗಳನ್ನು ಬೇರೆ ರಾಜ್ಯದಲ್ಲಿ ಮಾಡಲಾಗಿದೆಯೆ? ಅಂತ ಕುತೂಹಲದಿಂದ ಹುಡಿಕಿದರೆ ನಮಗೆ ಆಶ್ಚರ್ಯ ಕಾದಿದೆ. ಬಿ.ಜೆ.ಪಿ, ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವ ವಿವಿಧ ರಾಜ್ಯಗಳಲ್ಲಿ ತಮ್ಮ ರಾಜ್ಯದ ಜನರ ಹಿತಾಸಕ್ತಿಗಾಗಿ ಎಲ್ಲಾ ಹಂತದ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಜಾರಿಗೆ ತಂದಿವೆ. ಅಂತಹ ಕೆಲವು ರಾಜ್ಯಗಳ ಮಾಹಿತಿಯನ್ನು ನಾವು ಈಗ ನೋಡೋಣ

ಮಹಾರಾಷ್ಟ್ರ:
ನವೆಂಬರ್ 2008 ರಲ್ಲಿ ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿನ ಎಲ್ಲ ಉದ್ಯೋಗಗಳಲ್ಲೂ 80% ಅಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು ಎಂದು ತೀರ್ಮಾನಿಸಲಾಯಿತು. ಅದರಲ್ಲೂ ಮುಂಬರುವ 140 ಎಸ್..ಜೆಡ್. ಗಳಲ್ಲಿ ಆರಂಭವಾಗು ಎಲ್ಲ ಕಂಪನಿಗಳ ಹುದ್ದೆಗಳಲ್ಲಿ 80% ಸ್ಥಳೀಯರಿಗೆ ಕೊಡಬೇಕು ಎಂದು ಆದೇಶ ಹೊರಡಿಸಿತು. ಇದು, ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಬಗ್ಗೆ 1968 ನಂತರ, ಮಹಾರಾಷ್ಟ್ರ ಸರ್ಕಾರ ಹೊರಡಿಸಿದ 6ನೇ ಸರ್ಕಾರಿ ಆದೇಶ.

ಒರಿಸ್ಸಾ:
ಅಕ್ಟೋಬರ್ 2008 ರಲ್ಲಿ ಒರಿಸ್ಸಾ ಸರ್ಕಾರ ಕೂಡ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಲು ಒರಿಸ್ಸಾದಲ್ಲಿನ ಎಲ್ಲ ಗ್ರೂಪ್ ’ಸಿ ಮತ್ತು ’ಡಿ ಉದ್ಯೋಗಗಳಲ್ಲೂ 90% ಅಷ್ಟು ಹುದ್ದೆಗಳನ್ನು, ಹಾಗೂ ಗ್ರೂಪ್ ’ಎ ಮತ್ತು ’ಬಿ ಹುದ್ದೆಗಳಲ್ಲಿ 65% ಅಷ್ಟು ಸ್ಥಳೀಯರಿಗೆ ಮೀಸಲಿಡಬೇಕು ಎಂದು ತೀರ್ಮಾನಿಸಿತು. ಹೊಸ ಉದ್ಯೋಗ ನೀತಿಗಳನ್ನು ಅಳವಡಿಸಿ, ಕಂಪನಿಗಳೊಡನೆ ಆಗಿದ್ದ ಒಪ್ಪಂದ (MoU) ಗಳನ್ನು ಮರುಪರಿಶೀಲಿಸಿ, ಅವಶ್ಯವೆನಿಸಿದರೆ ತಿದ್ದುಪಡಿ ಮಾಡಲಾಗುವುದು ಎಂದು ಸರ್ಕಾರ ತೀರ್ಮಾನಿಸಿತು.

ತಮಿಳುನಾಡು:
2009ರ ಸರ್ಕಾರಿ ಆದೇಶದಲ್ಲಿ ತಮಿಳುನಾಡಿನಲ್ಲಿ ಸ್ಥಾಪಿಸಲಾಗುವ ಎಲ್ಲಾ ಕಾರ್ಖಾನೆಗಳಲ್ಲಿ ಶೇ 75 ರಷ್ಟು ಉದ್ಯೋಗಗಳನ್ನು ತಮಿಳುನಾಡಿನ ಜನರಿಗೆ ನೀಡಬೇಕೆಂಬ ನಿಯಮ ಮಾಡಿದೆ. ಜೊತೆಗೆ ಈ ನಿಬಂಧನೆಗೆ ಒಪ್ಪಿಕೊಳ್ಳುವ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ವಿವಿಧ ಸವಲತ್ತುಗಳನ್ನು ಒದಗಿಸುತ್ತದೆ. ಈ ಹಿಂದೆ ಸ್ಥಾಪಿಸಲಾಗಿರುವ ಸಂಸ್ಥೆಗಳು ಸಹ ಸರ್ಕಾರಿ ಅದೇಶವನ್ನು ಪಾಲಿಸಿದಲ್ಲಿ ಅವರಿಗೂ ಸಹ ಸವಲತ್ತುಗಳನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿದೆ.

ಗುಜರಾತ:
ಗುಜರಾತ ಸರ್ಕಾರವು ತನ್ನ ಉದ್ಯಮ ನೀತಿಯಲ್ಲಿ, ತನ್ನ ರಾಜ್ಯದಲ್ಲಿ ಸ್ಥಾಪಿಸಲಾಗುವ ಉದ್ಯಮಗಳಿಂದ ಸೃಷ್ಠಿಯಾಗುವ ಉದ್ಯೋಗಗಳಲ್ಲಿ ಹೆಚ್ಚಿನ ಪಾಲು ದೊರಕುವಂತೆ ಮಾಡಲು ಯೋಜನೆಯೊಂದನ್ನು ಸ್ಥಾಪಿಸಿದೆ. ಇದರ ಮೂಲಕ ಸ್ಥಳೀಯರಿಗೆ ಹೆಚ್ಚಿನ ಕೆಲಸ ದೊರಕುವಂತೆ ಮಾಡಿದೆ.

ಈ ಮೇಲಿನ ಉದಾಹರಣೆಗಳನ್ನು ನೋಡಿದಾಗ, ಆಯಾ ರಾಜ್ಯಗಳು ತನ್ನ ರಾಜ್ಯದ ಜನರ ಹಿತಕ್ಕಾಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡಬೇಕೆಂಬ ಕಾನೂನು ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ನಮ್ಮ ಭಾರತ ದೇಶದ ಪ್ರತಿಯೊಂದು ರಾಜ್ಯಗಳು ತಮ್ಮದೇ ಆದ ರಾಜ್ಯ ಸರ್ಕಾರವನ್ನು ಹೊಂದಿವೆ. ಜನರಿಂದ ಆರಿಸಲಾಗುವ ಈ ಸರ್ಕಕಾರಗಳು, ತನ್ನನ್ನು ಆರಿಸಿ ಕಳುಹಿಸಿದ ಜನರಿಗೆ ಸವಲತ್ತುಗಳನ್ನು ಒದಗಿಸುವುದು ಸರಿಯಾದ ಕ್ರಮ, ಇದಲ್ಲದೇ ಆಯಾ ರಾಜ್ಯದಲ್ಲಿ ಸ್ಥಾಪಿಸಲಾಗುವ ಉದ್ಯಮಗಳಿಗೆ ತೆರಿಗೆ ವಿನಾಯಿತಿ, ರಿಯಾಯಿತಿ ದರದಲ್ಲಿ ವಿದ್ಯುತ್, ನೀರು, ಭೂಮಿ ಎಲ್ಲವನ್ನೂ ನೀಡುವಾಗ ಖರ್ಚಾಗುವುದು ಜನರ ತೆರಿಗೆಯ ಹಣ. ಹಾಗಾಗಿ ಅಲ್ಲಿಯ ಜನರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವುದು ಸಹಜ ನ್ಯಾಯವಾಗಿ ಕಾಣುತ್ತದೆ. ನಮ್ಮ ರಾಜ್ಯ ಸರ್ಕಾರವೂ ಪರಿಷ್ಕೃತ ಸರೋಜಿನಿ ಮಹಿಷಿ ವರದಿಯನ್ನು ಒಂದು ಕಾಲಮಿತಿ ಯೋಜನೆಯನ್ನಾಗಿ ಮಾಡಿಕೊಂಡು ಅನುಷ್ಠಾನಕ್ಕೆ ತರಲು ಚಿಂತನ-ಮಂಥನ ಮಾಡುವುದನ್ನು ಬಿಟ್ಟು ಜಾರಿಗೆ ತರಲಿ ಎಂದು ಆಶಿಸೋಣ.

ಮುಗಿಸುವುದಕ್ಕಿಂತ ಮುಂಚೆ: ಫೆಬ್ರವರಿ ತಿಂಗಳಿನಲ್ಲಿ ಜೆ.ಪಿ ನಗರದಲ್ಲಿ ನಡೆದ ಉದ್ಯೋಗ ಮೇಳದ ಜಾಹೀರಾತನ್ನು ಇಂಗ್ಲಿಷಿನಲ್ಲಿ ಹಾಕಲಾಗಿತ್ತು, ಇದನ್ನ ನಾನು ಹಾಗೂ ಕೆಲವು ಗೆಳೆಯರು ಪ್ರಶ್ನಿಸಿದಾಗ, ಜಿ.ಪಿ ನಗರದಲ್ಲಿ ಭಾರತದ ಎಲ್ಲಾ ಜನರು ವಾಸಿಸುತ್ತಾರೆ, ಹಾಗಾಗಿ ಕೆಲಸಗಳನ್ನು ಕೇವಲ ಕನ್ನಡಿಗರಿಗೆ ನೀಡಬೇಕು ಎಂದು ಹೇಳುವುದು ಸಂಕುಚಿತತೆ. ನಾವು ಭಾರತೀಯರಾಗಿ ಯೋಚಿಸೋಣ ಎಂಬ ಸಲಹೆಯನ್ನು ಆಳುತ್ತಿರುವ ಪಕ್ಷದ ವಿಧ್ಯಾರ್ಥಿ ಸಂಘಟನೆಯ ಮುಖಂಡರೊಬ್ಬರು ನಮಗೆ ಸಲಹೆ ನೀಡಿದ್ರು. ಹಾಗಿದ್ರೆ ಈ ಸರ್ಕಾರದಿಂದ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರುವ ಕೆಲಸ ಮಾಡೋಕೆ ಆಗುತ್ತಾ ಅನ್ನೋ ಪ್ರಶ್ನೆ ಸಹ ನಮ್ಮನ್ನ ಈಗ ಕಾಡುತ್ತೆ.

ಕೊನೆಯದಾಗಿ: ನಮಗೆ ಗುಜರಾತ ಸರ್ಕಾರವೇ ಮಾದರಿ ಅಂತ ದಿನಕ್ಕೆ ನೂರು ಬಾರಿ ಹೇಳೋ ರಾಜ್ಯ ಸರ್ಕಾರಕ್ಕೆ ಅಲ್ಲಿ ತುಂಬಾ ಹಿಂದೆಯೇ ಉದ್ಯೋಗ ಮೀಸಲಾತಿಯನ್ನು ಜಾರಿಗೆ ತಂದಿದ್ದಾರೆ ಅನ್ನೋ ಅಂಶ ಗೊತ್ತಿದೆಯೋ ಇಲ್ಲವೋ ಪಾಪ!!!

ಮಂಗಳವಾರ, ಜನವರಿ 24, 2012

ಇಲ್ಲಿ ಕನ್ನಡ ಗೊತ್ತಿಲ್ದಿದ್ರೂ ಕೆಲಸ ಸಿಗುತ್ತೆ!!!


ಜನವರಿ ೨೦ ೨೦೧೨ ರಂದು ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯಲ್ಲಿ ಅಸಂಘಟಿತ ಕೆಲಸಗಾರರ ಅನುಕೂಲಕ್ಕಾಗಿ ಜಾಲತಾಣವೊಂದನ್ನು ಹೊರತರಲಾಗಿದೆ ಎಂಬ ಸುದ್ದಿಯನ್ನು ವರದಿ ಮಾಡಿತ್ತು. ಈ ಯೋಜನೆಯನ್ನು ಕಾನ್ಫೆಡೆರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್(ಸಿ.ಐ.ಐ) ನ ಕರ್ನಾಟಕ ವಿಭಾಗವು ಜಾರಿಗೆ ತಂದಿದೆ, ಈ ಯೋಜನೆಗೆ ಸಿ.ಎಚ್.ಎಫ್ ಇಂಟರ್ ನ್ಯಾಷನಲ್ ಇಂಡಿಯಾ ಎಂಬ ಸಂಸ್ಥೆಯೊಂದು ಈ ಯೋಜನೆಗೆ ಹಣ ಹೂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಿಐಐ ನ ಈ ಚಿಂತನೆ ನಿಜಕ್ಕೂ ಉತ್ತಮವಾಗಿದೆ. ಇವತ್ತಿನ ದಿನಗಳಲ್ಲಿ ಕೆಲಸ ಹುಡುಕುವ ಕಷ್ಟ ಅನುಭವಿಸಿದವರಿಗೆ ಗೊತ್ತು. ಇಂತಹುದರಲ್ಲಿ ಅಂಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಉದ್ಯೋಗಾವಕಾಶಗಳ ಮಾಹಿತಿ ಸಿಗುವುದು ಒಂದು ಪತ್ರಿಕೆಗಳಲ್ಲಿ ಬರುವ ಜಾಹಿರಾತಿನಿಂದ ಅಥವಾ ಉದ್ಯೋಗ ಪತ್ರಿಕೆಗಳಿಂದ ಮಾತ್ರ. ಆದರೆ ಈ ಸಿಐಐ ನ ಯೋಜನೆಯಲ್ಲಿ ಕೆಲಸ ಕೊಡುವವರು ಹಾಗೂ ಕೆಲಸ ಬೇಡುವವರನ್ನು ಒಂದೇ ಸೂರಿನಡಿ ತರುವ ಪ್ರಯತ್ನ ಮಾಡಲಾಗಿದೆ. ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಸಿಗುವ ಭರವಸೆಯನ್ನು ಸಿಐಐ ನೀಡುತ್ತಿದೆ. ಇವರ ಜೊತೆಗೆ ರಾಜ್ಯ ಸರ್ಕಾರ ಕೂಡ ಕೈ ಜೋಡಿಸುವ ಬಗ್ಗೆ ಪತ್ರಿಕೆಯಲ್ಲಿ ಬರೆಯಲಾಗಿದೆ.



ಸಿಐಐ ಸಿದ್ಧಪಡಿಸಿರುವ ಜಾಲತಾಣವನ್ನು ಹೊಕ್ಕು ನೋಡಿದರೆ ಈ ಯೋಜನೆ ಮೊದಲ ಹೆಜ್ಜೆಯಲ್ಲಿಯೇ ಎಡವಿದೆಯೇ ಎಂದು ಅನ್ನಿಸುತ್ತದೆ, ಯಾರಿಗಾಗಿ ಈ ಯೋಜನೆಯನ್ನ ತಯಾರಿಸಲಾಗಿದೆ ಅನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ.

ಕನ್ನಡವೇ ಇಲ್ಲಾ!!!
ಸಿಐಐ ನ ತಾಣವನ್ನು ನಾವು ನೋಡಿದ ತಕ್ಷಣ ಕಣ್ಣಿಗೆ ಕಾಣುವುದು ಬರಿ ಇಂಗ್ಲೀಶ್. ಹೋಗಲಿ ಕನ್ನಡದಲ್ಲೂ ಈ ಜಾಲತಾಣವನ್ನು ತಯಾರು ಮಾಡಿದ್ದಾರೆಯೇ ಅಂತ ನೋಡಿದರೆ ಕನ್ನಡದ ಒಂದಕ್ಷರವೂ ಈ ಜಾಲತಾಣದಲ್ಲಿ ಇಲ್ಲ!!!. ನೋಂದಣಿ ಮಾಡಿಸಿಕೊಳ್ಳಲು ಹೋದರೆ ಅಲ್ಲೂ ಕೂಡ ಇಂಗ್ಲಿಶ್ ಮಾತ್ರ. ಪ್ರಾಥಮಿಕ, ಹೈಸ್ಕೂಲು, ಕಾಲೇಜು, ಏನು ಓದದೇ ಇರುವ ಹಾಗೂ ಬಿ.ಎ, ಬಿ.ಕಾಂ, ಬಿ.ಎಡ್ ಮತ್ತು ಬಿ.ಎಸ್ಸಿ ಪಧವಿಧರರಿಗೆ ಇಲ್ಲಿ ಕೆಲಸದ ಅವಕಾಶಗಳನ್ನು ನೀಡಲಾಗಿದೆ. ಆದ್ರೆ ಇಲ್ಲಿರುವ ಮುಖ್ಯ ಪ್ರಶ್ನೆ ಏನು ಓದದ ಅಥವಾ ಕಾಲೇಜು ಬಿಟ್ಟಿರುವ  ಅಥವಾ ಇಂಗ್ಲಿಶ್ ಅರಿವು ಇಲ್ಲದ ಜನರು ಇಲ್ಲಿ ಹೇಗೆ ನೋಂದಾಯಿಸಿಕೊಳ್ಳಬೇಕು? ಇಂಗ್ಲಿಶ್ ಗೊತ್ತಿದ್ದರೆ ಮಾತ್ರ ಸಿಐಐ ನವರು ಕೆಲಸ ಕೊಡಿಸುತ್ತಾರಾ?

ತರಬೇತಿ ಸಂಸ್ಥೆಗಳು ಇಂಗ್ಲಿಶ್ ಗೊತ್ತಿಲದವರಿಗೆ ಸಹಾಯ ಮಾಡುತ್ತವೆ ಎಂದು ಸಂಸ್ಥೆ ಹೇಳಿದ್ದರೂ ಸಹ ಇದು ಎಷ್ಟರ ಮಟ್ಟಿಗೆ ಪ್ರಯೋಜಕ ಅನ್ನುವ ಪ್ರಶ್ನೆ ಹುಟ್ಟುತ್ತದೆ? ಮುಂದೆ ಈ ಅಭ್ಯರ್ಥಿ ತನ್ನ ವಿವರಗಳನ್ನು ತುಂಬ ಬೇಕಾದಲ್ಲಿ ಅಥವಾ ಬದಲಾಯಿಸಬೇಕಾದಲ್ಲಿ ಯಾರ ಮುಂದೆ ಹೋಗಿ ಕೈಕಟ್ಟಿ ನಿಲ್ಲಬೇಕು? ಹೊಸ ಕೆಲಸದ ಮಾಹಿತಿ ಬೇಕಾದಲ್ಲಿ ಅಥವಾ ತನ್ನ ಊರಿನಲ್ಲಿರುವ ಕೆಲಸ ಹುಡುಕಬೇಕೆಂದಲ್ಲಿ ಯಾರನ್ನ ಕೇಳಿ ಮಾಹಿತಿ ಪಡೆಯಬೇಕು? ಹೀಗೆ ಮೂರನೆಯ ವ್ಯಕ್ತಿಯ ಮೇಲೆ ಅವಲಂಬಿತಾಗುವ ವ್ಯವಸ್ಥೆ ನಿಜಕ್ಕೂ ಪರಿಣಾಮಕಾರಿಯಾಗಲಾರದು. ಸಿಐಐ ನಂಥ ಸಂಸ್ಥೆಗೆ ಮಾರುಕಟ್ಟೆಯಲ್ಲಿ ಭಾಷೆಗಿರುವ ಆಯಾಮದ ಬಗ್ಗೆ ಅರ್ಥ ಆಗದಿರುವುದು ವಿಪರ್ಯಾಸವೇ ಸರಿ. ತನ್ನ ಬಳಿ ಇರುವ ಅಭ್ಯರ್ಥಿಗಳ ಮಾಹಿತಿಯನ್ನು ಹಂಚಿಕೊಳ್ಳುವ ಯೋಜನೆಯಲ್ಲಿರುವ ರಾಜ್ಯ ಸರ್ಕಾರವೂ ಸಹ ಈ ಯೋಜನೆ ಕನ್ನಡದಲ್ಲಿ ಇಲ್ಲದಿರುವ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ.

ಈ ಯೋಜನೆಯಿಂದ ನಮ್ಮ ರಾಜ್ಯಕ್ಕೆ ಆಗುವ ಉಪಯೋಗಕ್ಕಿಂತ ಹೊರಗಿನಿಂದ ವಲಸೆ ಬರುವ ಜನರಿಗೆ ಹೆಚ್ಚು ಉಪಯೋಗವಾಗುತ್ತದೆ ಎಂಬ ಅನುಮಾನ ಕಾಡಲು ಶುರುವಾಗುತ್ತದೆ ಯಾಕಂದ್ರೆ ಈ ತಾಣದಲ್ಲಿ ಕನ್ನಡ ಗೊತಿಲ್ಲದಿದ್ರೂ ನಿಮಗೆ ಕೆಲಸ ಸಿಗುತ್ತೆ. ದಶಕಗಳ ಹಿಂದೆಯೆ ಕನ್ನಡಿಗರಿಗೆ ಉದ್ಯೋಗದಲ್ಲಿ ಸಿಗಬೇಕಾಗಿರುವ ಸ್ಥಾನಮಾನದ ಬಗ್ಗೆ ಹೊರತರಲಾಗಿದ್ದ ಡಾ. ಸರೋಜಿನೆ ಮಹಿಷಿ ವರದಿಯನ್ನು ಇಂದಿಗೂ ಸರ್ಕಾರ ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ಆದರೆ ಸಿಐಐ ನಂತಹ ಸಂಸ್ಥೆಗಳ ಜೊತೆಗೆ ಕೆಲಸ ಮಾಡುವಾಗ ಕರ್ನಾಟಕದಲ್ಲಿನ ಕೆಲಸಗಳು ಕನ್ನಡಿಗರಿಗೆ ದೊರಕುವಂತೆ ಮಾಡಲು ಒಂದು ಸೂತ್ರವನ್ನು ಹೊರತರಬೇಕು. ಇದರ ಜೊತೆಗೆ ನಮ್ಮ ರಾಜ್ಯದಲ್ಲಿ ಸ್ಥಾಪಿಸಲಾಗುವ ಯಾವುದೇ ಉದ್ಯಮದಲ್ಲೂ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎನ್ನುವ ಒಂದು ಸರ್ಕಾರಿ ಆದೇಶವನ್ನು ಹೊರಡಿಸಬೇಕು. ನಮ್ಮ ನಾಡಿನ ಏಳಿಗೆಯಲ್ಲಿ ದುಡಿಮೆ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎನ್ನುವುದನ್ನು ಸರ್ಕಾರ ಮರೆಯಬಾರದು.

ಸಿಐಐ ಸಂಸ್ಥೆ ಮಾಡಿರುವ ತಪ್ಪನ್ನು ತಿದ್ದಿಕೊಂಡು ಈ ಜಾಲತಾಣವನ್ನು ಕನ್ನಡದಲ್ಲಿ ಅಭಿವೃದ್ಧಿ ಪಡಿಸಬೇಕು ಹಾಗೂ ಈ ಮೂಲಕ ಹೆಚ್ಚಿನ ಕನ್ನಡಿಗರಿಗೆ ತಲುಪುವಂತೆ ಮಾಡಬೇಕು. ಈ ಕುರಿತು ನಾವು response@skillconnect.in ಗೆ ಒಂದು ಮಿಂಚೆಯನ್ನು ಬರೆದು, ಕನ್ನಡದಲ್ಲಿ ಈ ಜಾಲಾತಾಣವನ್ನು ಹೊರತರಬೇಕು ಎಂದು ಒತ್ತಾಯಿಸೋಣ. 

ಗುರುವಾರ, ಜನವರಿ 12, 2012

“ಮೊಬೈಲ್ ಆಡಳಿತ” ಜನರನ್ನ ತಲುಪುತ್ತಾ???


(ಚಿತ್ರ ಕೃಪೆ: ಅಂತರ್ಜಾಲ)
ನಿನ್ನೆಯ ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ “ಮೊಬೈಲ್ ಆಡಳಿತ” ವನ್ನು ಜಾರಿಗೆ ತರುವುದರ ಬಗ್ಗೆ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀ ಎಂ. ಎನ್. ವಿದ್ಯಾಶಂಕರ್ ಅವರು ಮಾತನಾಡಿದ್ದಾರೆ. “ಇ-ಆಡಳಿತ ಎನ್ನುವುದು ಈಗ ೧೦ ವರ್ಷಗಳಷ್ಟು ಹಳೆಯದಾಗಿದ್ದು, ಈಗ ಮೊಬೈಲ್ ಸೇವೆ ಮೂಲಕ ಆಡಳಿತವನ್ನು ಇನ್ನಷ್ಟು ವೇಗಗೊಳಿಸಲು ಪ್ರಯತ್ನಿಸಲಾಗುತ್ತಿದೆ...” ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ಹಿಂದಿನಿಂದಲೂ ತಂತ್ರಜ್ಞಾನವನ್ನು ತನ್ನ ಆಡಳಿತದಲ್ಲಿ ಅಳವಡಿಸಿಕೊಳ್ಳುವಲ್ಲಿ ಸದಾ ಮುಂದಿದೆ ಹಾಗೂ ಅದರಲ್ಲಿ ತಕ್ಕ ಮಟ್ಟಿಗೆ ಯಶಸ್ಸು ಸಹ ಪಡೆದಿದೆ. ಹೊಸ ಹೊಸ ತಂತ್ರಜ್ಞಾನಗಳನ್ನ ಬಳಸಿಕೊಂಡು ಆಡಳಿತವನ್ನು ಜನರ ಬಳಿಗೆ ಒಯ್ಯುವ ಸರ್ಕಾರದ ಈ ಕ್ರಮವನ್ನು ನಾವೆಲ್ಲ ತುಂಬು ಹೃದಯದಿಂದ ಸ್ವಾಗತಿಸೋಣ, ಜನರ ಮನೆಗೆ ಆಡಳಿತ ಮುಟ್ಟಬೇಕಾಗಿರುವುದು ಸರಿಯಾದ ದಾರಿಯು ಹೌದು.

ಆದರೆ ಯಾವುದೇ ಯೋಜನೆಯನ್ನು ಜಾರಿಗೆ ತರುವುದಕ್ಕಿಂತ ಮುಂಚೆ ಆ ಯೋಜನೆಯನ್ನ ಜನರಿಗೆ ಸರಿಯಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪಿಸಲು ಬೇಕಾಗಿರುವ ಸಿದ್ಧತೆಗಳ್ಳನ್ನು ಮಾಡಿಕೊಳ್ಳಲಾಗಿದೆಯೇ ಎನ್ನುವುದನ್ನು ಅಧಿಕಾರಿಗಳು ಮೊದಲು ಪರೀಕ್ಷಿಸಬೇಕು. ಅಲ್ಲವೇ? ಹಾಗಿದ್ರೆ ನಮ್ಮ ರಾಜ್ಯ ಮೊಬೈಲ್ ಆಡಳಿತಕ್ಕೆ ಸಜ್ಜಾಗಿದೆಯೇ?

ಪರಿಣಾಮಕಾರಿ ಆಡಳಿತಕ್ಕೆ ಬೇಕು ಕನ್ನಡ ತಂತ್ರಜ್ಞಾನ
ಅಡಳಿತದಲ್ಲಿ ಜನರ ಭಾಷೆ ನೆಲೆಗೊಳ್ಳದೇ ಹೋದಲ್ಲಿ ಎಂತಹುದೇ ತಂತ್ರಜ್ಞಾನದ ಏಳಿಗೆ ಆಡಳಿತವನ್ನು ಜನರ ಬಳಿಗೆ ಪರಿಣಾಮಕಾರಿಯಾಗಿ ಕೊಂಡೊಯ್ಯಲಾರದು ಅನ್ನುವುದು ನಮ್ಮ ಸಮಾಜವನ್ನು ಕಂಡರೆ ಅತ್ಯಂತ ಸ್ಪಷ್ಟವಾಗುವುದು. ಆಡಳಿತಕ್ಕೆ ಚುರುಕು ತರಲೆಂದು ಅಳವಡಿಸಿಕೊಂಡ ಹೆಚ್ಚಿನ ತಂತ್ರಜ್ಞಾನದ ಪರಿಕರಗಳು ಇಂಗ್ಲಿಷಿನಲ್ಲಿದ್ದು, ಜನ ಸಾಮಾನ್ಯರ ನುಡಿಯಾದ ಕನ್ನಡದಿಂದ ದೂರವೇ ಉಳಿದಿವೆ. ಇಂಗ್ಲಿಷ್ ಅನ್ನುವ ತಡೆಗೋಡೆ ತಂತ್ರಜ್ಞಾನದ ಪೂರ್ತಿ ಪ್ರಯೋಜನವನ್ನು ಜನರಿಗೆ ತಲುಪಲಾರದಂತೆ ಮಾಡಿದೆ. ರಾಜ್ಯದ ೬ ಕೋಟಿ ಜನರಲ್ಲಿ ಒಂದು ೭-೮% ಜನರಿಗಷ್ಟೇ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಬಳಸುವ, ಅದರ ಲಾಭ ಪಡೆದುಕೊಳ್ಳಲು ಆಗುತ್ತಿದೆಯೇ ಹೊರತು ಉಳಿದ ೯೨% ಜನರು ಈ ಹೊಸ ವ್ಯವಸ್ಥೆಯ ಕಲ್ಪನೆಯಿಂದ ಆಚೆಯೇ ಉಳಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈ ಆಡಳಿತ ವ್ಯವಸ್ಥೆಯು ಜನರ ಭಾಷೆಯಾದ ಕನ್ನಡದಲ್ಲಿ ಇಲ್ಲದಿರುವುದೇ ಆಗಿದೆ.

ಮೊಬೈಲ್ ಆಡಳಿತ ಜನರನ್ನ ತಲುಪುತ್ತಾ???
ಇತ್ತೀಚಿನ ಒಂದು ಉದಾಹರಣೆಯ ಬಗ್ಗೆ ನಿಮ್ಮ ಗಮನ ಸೆಳೆಯಲು ಇಚ್ಚಿಸುತ್ತೇನೆ. ಟ್ರಾಫಿಕ್ ಪೋಲಿಸರು ಉಪಯೋಗಿಸುವ ಬ್ಲ್ಯಾಕ್ ಬೆರ್ರಿ ಮೊಬೈಲ್ . ಸಂಚಾರ ನಿಯಮ ಉಲ್ಲಂಘನೆ ಅಥವಾ ಇನ್ನಿತರ ತಪ್ಪುಗಳನ್ನು ಮಾಡಿದಾಗ ಪೋಲಿಸರು ನೀಡುವ ರಸೀತಿಗಳು ಇಂಗ್ಲಿಷಿನಲ್ಲಿ ಇರುತ್ತವೆ. ಇದರ ಬಗ್ಗೆ ನನ್ನ ಗೆಳೆಯನೊಬ್ಬ ಹಿರಿಯ ಅಧಿಕಾರಿಗಳ ಗಮನ ಸೆಳೆದಾಗ ಅವರು  ನೀಡಿದ ಉತ್ತರ “ ಸೇವೆ ನೀಡುತ್ತಿರುವ ಖಾಸಗಿ ಸಂಸ್ಥೆ ಪೂರೈಸುವ ಉಪಕರಣ ಹಾಗೂ ತಂತ್ರಾಂಶಗಳು ಕನ್ನಡವನ್ನು ಬೆಂಬಲಿಸುವುದಿಲ್ಲ ಹಾಗಾಗಿ ಕನ್ನಡದಲ್ಲಿ ರಸೀತಿ ನೀಡಲು ಸಾಧ್ಯವಾಗುತ್ತಿಲ್ಲ”.

ಜನರ ಒಳಿತಿಗಾಗಿ ಸರ್ಕಾರ ಮಾಡಿತ್ತಿರುವ ಯೋಜನೆಗಳಿಗೆ ಖರ್ಚಾಗುವುದು ಸಹ ನಮ್ಮ ತರಿಗೆ ಹಣ, ಆದರೂ ಸಹ ನಮ್ಮ ಸರ್ಕಾರಕ್ಕೆ ತನಗೆ ಯಾವ ಭಾಷೆಯಲ್ಲಿ ತಂತ್ರಾಂಶ ಅಥವಾ ಉಪಕರಣಗಳು ಬೇಕು ಎಂದು ಕೇಳಿ ಪಡೆಯುವ ಹೊಣೆಗಾರಿಕೆಯನ್ನು ತೋರಿಸದೇ ಇರುವುದು ಶೋಚನೀಯ. ಮೇಲಿನದು ಕೇವಲ ಒಂದು ಉದಾಹರಣೆ ಯಷ್ಟೇ, ಕೆ. ಎಸ್. ಆರ್. ಟಿ. ಸಿ ಸಂಸ್ಥೆಯಲ್ಲಿ ನೀವು ಟಿಕೆಟ್ ಕಾಯ್ದಿರಿಸದರೆ ನಿಮ್ಮ ಮೊಬೈಲಿಗೆ ಇಂಗ್ಲೀಷಿನಲ್ಲಿ ಮಾಹಿತಿ ಸಿಗುತ್ತದೆ, ರೈಲ್ವೆ ಇಲಾಖೆಯದೂ ಇದೇ ಕತೆ... ಇಂತಹ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ.

ಮೇಲೆ ಹೇಳಿದಂತೆ ಪರಿಣಾಮಕಾರಿ ಆಡಳಿತಕ್ಕಾಗಿ ನಾವು ಯಾವುದೇ ತಂತ್ರಜ್ಞಾನ ಅಳವಡಿಸಿಕೊಂಡರೂ ಸಹ ಜನರ ಭಾಷೆಯಲ್ಲಿ ಸೇವೆ ದೊರೆಯದ ಹೊರತು ಆ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ. ಇಂದಿನ ಬಹುತೇಕ ಮೊಬೈಲುಗಳಲ್ಲಿ ಕನ್ನಡ ಭಾಷೆಯನ್ನ ಓದಲು ಹಾಗೂ ಬರೆಯಲು ಬೇಕಾಗಿರುವ ತಂತ್ರಾಂಶಗಳಾಗಲಿ, ಕೀಲಿಮಣೆಗಳಾಗಲಿ ದೊರಕುವುದಿಲ್ಲ. ಇದರ ಬಗ್ಗೆ ಆಸಕ್ತಿ ವಹಿಸಿ ಕೆಲಸ ಮಾಡಬೇಕಾಗಿದ್ದ ಸರ್ಕಾರವೂ ಸಹ ಇಂಗ್ಲೀಷಿಗೆ ಮಣೆ ಹಾಕಿ ಕುಳಿತಿದೆ, ಸಾಮಾನ್ಯ ನಾಗರೀಕರ ಉಪಯೋಗಕ್ಕಾಗಿ ಆಡಳಿತದಲ್ಲಿ ಕನ್ನಡ ಬಳಸಬೇಕೆಂಬ ಕನಿಷ್ಠ ಪ್ರಜ್ಞೆಯನ್ನ ಸಹ ಮರೆತಿದೆ. ನಮ್ಮ ಭಾಷೆಯಲ್ಲಿ ನಮಗೆ ಸೇವೆ ಸಿಗದ ಹೊರತು ಆಡಳಿತ ಪರಿಣಾಮಕಾರಿಯಾಗಿರಲು ಸಾಧ್ಯವಿಲ್ಲ.

ಸೋಮವಾರ, ಡಿಸೆಂಬರ್ 12, 2011

ಪರಿಣಾಮಕಾರಿ ಆಡಳಿತಕ್ಕಾಗಿ ಕನ್ನಡದಲ್ಲಿ ತಂತ್ರಜ್ಞಾನ

ಆತ್ಮೀಯ ಗೆಳೆಯರೇ,

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನೆರೆವೇರಿದೆ. ಅಲ್ಲಿ ಕಳೆದ ಮೂರು ದಿನಗಳಲ್ಲಿ ಅಲ್ಲಿಯ ಜನರೊಂದಿಗೆ ಹೆಚ್ಚು ಬೆರೆಯಲು ಸಾಧ್ಯವಾಯಿತು. ಇದ್ದಷ್ಟು ದಿನ ಅಲ್ಲಿನ ಜನರ ಜೊತೆ ಬೆರೆತು ಅಲ್ಲಿಯ ಸಾಮಾಜಿಕ ಒಳನೋಟ ಪಡೆಯಲು ಸ್ವಲ್ಪ ಮಟ್ಟಿಗೆ ಸಾಧ್ಯವಾಗಿದೆ. ಇದರ ಜೊತೆಗೆ ಈ ಮೊದಲೇ ತಿಳಿಸಿದಂತೆ “ಆಧುನಿಕ ಜಗತ್ತು ಮತ್ತು ಕನ್ನಡ” ಅನ್ನುವ ವಿಚಾರ ಗೋಷ್ಠಿಯಲ್ಲಿ “ಪರಿಣಾಮಕಾರಿ ಆಡಳಿತಕ್ಕಾಗಿ ಕನ್ನಡ ತಂತ್ರಜ್ಞಾನ” ಅನ್ನುವ ವಿಷಯದ ಕುರಿತು ನನ್ನ ಅನಿಸಿಕೆಗಳನ್ನು ಹಂಚಿಕೊಂಡೆ, ಈ ವಿಷಯಕ್ಕೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು. ನನ್ನ ಭಾಷಣದ ಸಾರಾಂಶವನ್ನು ನಿಮ್ಮ ಜೊತೆಗೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನಾನು ಮಾತನಾಡಿದ್ದು ನನ್ನದೇ ಊರಿನ (ಉತ್ತರ ಕರ್ನಾಟಕ) ಶೈಲಿಯಲ್ಲಿದ್ದರೂ, ಬರಹವನ್ನು ಎಲ್ಲರ ಕನ್ನಡದಲ್ಲಿ ಬರೆದಿದ್ದೇನೆ. ಇದನ್ನ ಓದಿ, ಖಂಡಿತವಾಗಿಯೂ ನಿಮ್ಮ ಅಭಿಪ್ರಾಯವನ್ನು ತಿಳಿಸಿ...












ಆಡಳಿತ ಅಂದರೇನು?

ಒಬ್ಬ ಸಾಮಾನ್ಯ ಮನುಷ್ಯನಿಗೆ ಅವನ ದಿನ ನಿತ್ಯದ ಬದುಕಿನಲ್ಲಿ ಜೀವನದ ಬೇರೆ ಬೇರೆ ಅಗತ್ಯಗಳ ಈಡೇರಿಕೆಗಾಗಿ ಅವನು ಒಡನಾಡುವ ಸರ್ಕಾರಿ ವ್ಯವಸ್ಥೆಗಳು ಆತನ ಬೇಡಿಕೆಗಳನ್ನು ಸಮರ್ಪಕವಾಗಿ ಪೂರೈಸುವಂತಾಗುವುದನ್ನೇ  ಆಡಳಿತ ಎಂದು ಕರೆಯಬಹುದು. ಒಂದು ಚಿಕ್ಕ ಉದಾಹರಣೆಗೆ ಕೊಪ್ಪಳ ಪಕ್ಕದ ಹಳ್ಳಿಯೊಂದರ ಮಲ್ಕಪ್ಪ ಎಂಬ ಸಾಮಾನ್ಯ ರೈತ ಒಂದು ಸಾಮಾನ್ಯ ದಿನದಲ್ಲಿ ವ್ಯವಸ್ಥೆಯ ಜೊತೆ ಹೇಗೆಲ್ಲ ಒಡನಾಡಬಹುದು? ಆತ ಬೆಳಿಗ್ಗೆ ಎದ್ದು ಪಟ್ಟಣಕ್ಕೆ ಬರಲು ಬೇಕಿರುವ ಬಸ್ಸು, ಅಂಚೆ ಇಲ್ಲವೇ ಬ್ಯಾಂಕಿನಲ್ಲಿ ಅವನ ಬೆಳೆಗೆ ಬೇಕಿರುವ ಹಣಕಾಸಿನ ಸೌಲಭ್ಯ, ತಹಶಿಲ್ದಾರ ಕಚೇರಿಯಲ್ಲಿ ಅವನಿಗೆ ಬೇಕಿರುವ ತನ್ನ ಆಸ್ತಿಯ ಖಾತಾ, ಪಡಿತರ ಅಂಗಡಿಯಲ್ಲಿ ಸಿಗಬೇಕಿರುವ ಸೀಮೆ ಎಣ್ಣೆ, ಅಕ್ಕಿ, ಗೋಧಿ, ಕೃಷಿ ಮಾರುಕಟ್ಟೆಯಲ್ಲಿ ಬೆಳೆದ ಬೆಳೆ ಮಾರಲು ಬೇಕಿರುವ ಸಹಾಯ ಹೀಗೆ ಒಂದು ಸಾಮಾನ್ಯ ದಿನದ ಬೇಡಿಕೆಗಳೆಲ್ಲವನ್ನೂ ಅವನಿಗೆ ಸಮಾಧಾನ ತರುವಂತೆ ಪೂರೈಸುವಂತಹ ವ್ಯವಸ್ಥೆಯನ್ನು ಕಟ್ಟುವುದು ಮತ್ತು ಆ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುವಂತೆ ನಿಗಾ ವಹಿಸುವುದನ್ನೇ ಆಡಳಿತ ಎಂದು ಕರೆಯಬಹುದು.

ಪರಿಣಾಮಕಾರಿ ಆಡಳಿತ ಎಂದರೇನು?

ಒಬ್ಬ ಸಾಮಾನ್ಯ ನಾಗರೀಕನ ಬೇಕು ಬೇಡಗಳನ್ನು ಯಾವುದೇ ತಾರತಮ್ಯವಿಲ್ಲದೇ, ಗೊಂದಲಗಳಿಲ್ಲದೇ, ಸರಿಯಾದ ಸಮಯಕ್ಕೆ, ಒಳ್ಳೆಯ ಗುಣಮಟ್ಟ ಮತ್ತು ಹೊಣೆಗಾರಿಕೆಯೊಂದಿಗೆ ಪೂರೈಸುವುದನ್ನೇ ಪರಿಣಾಮಕಾರಿ ಆಡಳಿತ ಅನ್ನಬಹುದು. ಪರಿಣಾಮಕಾರಿ ಆಡಳಿತದಲ್ಲಿ ಜನರೇ ಕೇಂದ್ರ ಬಿಂದು, ಅವರ ಬೇಕು-ಬೇಡಗಳ ಸುತ್ತಲೇ ವ್ಯವಸ್ಥೆಯ ಎಲ್ಲ ಅಂಗಗಳು ರೂಪುಗೊಂಡಿರುತ್ತವೆ. ಆಡಳಿತ ವ್ಯವಸ್ಥೆಯು ನಾಗರೀಕರ ಅನುಕೂಲಕ್ಕಾಗಿ ತನ್ನ ಸೇವೆಗಳನ್ನು ಹಾಗೂ ಸೌಲಭ್ಯಗಳನ್ನು ರೂಪಿಸುವ, ಬದಲಾಯಿಸುವ ಹಾಗೂ ಒದಗಿಸುವ ಪ್ರಾಮಾಣಿಕ ಕೆಲಸ ಮಾಡುತ್ತದೆ. ಈ ಸಂಬಂಧದಲ್ಲಿ ಜನರ ಅಪೇಕ್ಷೆಗಳು ದೃಷ್ಟಿಕೋನಗಳಿಗೆ ಅತೀ ಹೆಚ್ಚಿನ ಮಾನ್ಯತೆಯಿರುತ್ತೆ.  ಸಂಕ್ಷಿಪ್ತವಾಗಿ ಹೇಳುವುದಾದರೆ ಪರಿಣಾಮಕಾರಿ ಆಡಳಿತದ ಮುಖ್ಯ ಗುಣಲಕ್ಷಣಗಳು:
  • ಜನರ ಅಪೇಕ್ಷೆಗಳಿಗೆ ಸ್ಪಂದಿಸುವಂತದ್ದು.
  • ಜನರೆಡೆಗೆ ಉತ್ತರದಾಯಿತ್ವ ಹೊಂದಿರುವಂತದ್ದು
  • ಅತ್ಯಂತ ಚುರುಕಾಗಿ, ಕಡಿಮೆ ಸಮಯಯಲ್ಲಿ ಯಾವುದೇ ಬೇಡಿಕೆಯನ್ನು ಈಡೇರಿಸುವಂತದ್ದು
  • ಎಲ್ಲ ಹಂತದಲ್ಲೂ ಪಾರದರ್ಶಕತೆಯನ್ನು ಕಾಯ್ದುಕೊಂಡಿರುವಂತದ್ದು
  • ವ್ಯವಸ್ಥೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು, ಸಮ ನೆಲೆಯ ಸಂಬಂಧವನ್ನು ಉತ್ತೇಜಿಸುವಂತದ್ದು
  • ಭ್ರಷ್ಟಾಚಾರಕ್ಕೆ ಎಡೆಯಿರದ್ದು
ಮೇಲಿನ ಉದಾಹರಣೆಯಲ್ಲಿ ಹೇಳಿದ ರೈತ ಮಲ್ಕಪ್ಪನಿಗೆ ತನ್ನೆಲ್ಲ ಅಗತ್ಯಗಳನ್ನು ಕಡಿಮೆ ಸಮಯದಲ್ಲಿ, ಪಾರದರ್ಶಕವಾಗಿ, ಒಳ್ಳೆಯ ಗುಣಮಟ್ಟದಲ್ಲಿ ಪಡೆಯುವಂತಾದರೆ ಅಂತಹ ವ್ಯವಸ್ಥೆ ಪರಿಣಾಮಕಾರಿಯಾದ ಆಡಳಿತ ನೀಡುತ್ತಿದೆ ಅನ್ನಬಹುದು. ಯಾವ ವ್ಯವಸ್ಥೆಯ ಸೇವೆಗಳಿಂದ ಒಬ್ಬ ನಾಗರೀಕನಾಗಿ ಆತನಿಗೆ ತನ್ನೆಲ್ಲ ಬದುಕಿನ ಅಗತ್ಯಗಳನ್ನು ಅತ್ಯಂತ ಸುಲಭವಾಗಿ, ತಡೆಯಿಲ್ಲದೇ, ಗೊಂದಲವಿಲ್ಲದೇ ಪೂರೈಸಿಕೊಳ್ಳಲು ಆಗುತ್ತಿದೆಯೋ ಮತ್ತು ಅಂತಹ ವ್ಯವಸ್ಥೆ ಆತನಲ್ಲಿ ತಾನೂ ಕೂಡ ಈ ವ್ಯವಸ್ಥೆಯ ಭಾಗವೆಂಬ ಭಾವವನ್ನು ತುಂಬುತ್ತದೆಯೋ ಅಂತಹ ವ್ಯವಸ್ಥೆ ನಿಜಕ್ಕೂ ಪರಿಣಾಮಕಾರಿಯಾದ ಆಡಳಿತ ನೀಡುತ್ತಿದೆ ಅನ್ನಬಹುದು.

ಪರಿಣಾಮಕಾರಿ ಆಡಳಿತಕ್ಕೆ ತಂತ್ರಜ್ಞಾನ ಹೇಗೆ ಸಹಾಯಕ?(-ಆಡಳಿತ)

ಮೇಲೆ ತಿಳಿಸಿದ ಹಲ ಮಾನದಂಡಗಳ ಅನುಸಾರ ಆಡಳಿತ ನಡೆಸುವಂತಾಗಲು ತಂತ್ರಜ್ಞಾನದಲ್ಲಾಗಿರುವ ಬದಲಾವಣೆಗಳನ್ನು ಅತ್ಯಂತ ಸಮರ್ಥವಾಗಿ ಜಗತ್ತಿನ ಹಲವಾರು ದೇಶಗಳು ಬಳಸಿಕೊಳ್ಳುತ್ತಿವೆ. ನಮ್ಮ ನಾಡಿನ ಉದಾಹರಣೆಯನ್ನೇ ತೆಗೆದುಕೊಂಡರೆ ಸುಮಾರು ೧೦-೧೫ ವರ್ಷಗಳ ಹಿಂದಿನ ಆಡಳಿತ ಯಂತ್ರದೊಡನೆ ಜನರ ಒಡನಾಟದ ಅನುಭವಕ್ಕೂ ತಂತ್ರಜ್ಞಾನದ ಬಳಕೆಯ ಇವತ್ತಿನ ದಿನದ ಅನುಭವಕ್ಕೂ ಗೋಚರಿಸುವಂತಹ ಬದಲಾವಣೆಗಳಿವೆ. ಹಿಂದೆ ಒಂದು ಚಿಕ್ಕ ಕೆಲಸವಾಗಬೇಕಾದರೂ ವಾರಗಟ್ಟಲೆ ಕಾಯುವ ಪ್ರಸಂಗವಿತ್ತು. ಕಳಪೆ ಸೇವೆ, ಭ್ರಷ್ಟಾಚಾರ, ಹೀಗೆ ಸಾಲು ಸಾಲು ಸಮಸ್ಯೆಗಳ ಮಧ್ಯೆ ಆಡಳಿತ ಅನ್ನುವುದು ಜನರನ್ನು ಬಿಟ್ಟು ಕಟ್ಟಿಕೊಂಡ ಕೋಟೆ ಎಂಬಂತಿತ್ತು. ಇದು ಸಂಪೂರ್ಣವಾಗಿ ಬದಲಾಗದಿದ್ದರೂ ೧೦-೧೫ ವರ್ಷಗಳ ಹಿಂದಿಗಿಂತ ಸಾಕಷ್ಟು ಸಹನೀಯವಾಗಿದೆ ಮತ್ತು ಇಂತಹದೊಂದು ಬದಲಾವಣೆಯಲ್ಲಿ ತಂತ್ರಜ್ಞಾನದ ಪಾತ್ರ ಹಿರಿದಿದೆ. ಒಂದಿಷ್ಟು ಉದಾಹರಣೆಯೊಂದಿಗೆ ಇದನ್ನು ನೋಡೊಣ.
  • ಸರ್ಕಾರಿ ಕಚೇರಿಯಿಂದ ರೈತನೊಬ್ಬ ತನ್ನ ಭೂಮಿಗೆ ಸಂಬಂಧಿಸಿದ ಪಹಣಿ ಪತ್ರ ಪಡೆಯಲು ಕಾಯಬೇಕಾದ ಸ್ಥಿತಿ ಇತ್ತು. ಸರ್ಕಾರದ ಭೂಮಿ ಯೋಜನೆಯಿಂದ ಪಹಣಿ ಪತ್ರ ಪಡೆಯುವ ವ್ಯವಸ್ಥೆಯನ್ನು ಗಣಕೀಕರಣ ಮಾಡುವುದರೊಂದಿಗೆ ಎಲ್ಲೆಡೆ ನಿಮಿಷಗಳಲ್ಲೇ ರೈತ ಪಹಣಿ ಪತ್ರ ಪಡೆಯುವಂತಾಗಿದೆ. 
  • ರೇಶನ್ ಕಾರ್ಡ್, ಪಾಸ್-ಪೋರ್ಟ್ ಮುಂತಾದ ಗುರುತಿನ ಪತ್ರಕ್ಕೆ ಅರ್ಜಿ ಸಲ್ಲಿಸಲು ಕಛೇರಿಗಳಿಗೆ ಅಲೆಯಬೇಕಾಗಿದ್ದ ದಿನಗಳಿಂದ ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸುವ ಅನುಕೂಲ ಸಾಧ್ಯವಾಗಿದೆ. 
  • ರೈತ ತನ್ನ ಬೆಳೆಗೆ ಸರಿಯಾದ ಬೆಲೆ ಕಲ್ಪಿಸಿಕೊಳ್ಳಲು ದಲ್ಲಾಳಿಗಳ, ಮಧ್ಯವರ್ತಿಗಳ ಮೊರೆ ಹೋಗಬೇಕಾದ ದಿನಗಳಿಂದ ಕೂತಲ್ಲಿಯೇ ಮೊಬೈಲ್ ಮೂಲಕ ತನ್ನ ಬೆಳೆಗಳಿಗೆ ವಿವಿಧ ಮಾರುಕಟ್ಟೆಯಲ್ಲಿರುವ ಬೆಲೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುವಂತಹ ಬದಲಾವಣೆಯತ್ತ ಸಾಗಿದ್ದೇವೆ.
  • ಈ ಹಿಂದೆ ಬ್ಯಾಂಕೊಂದರಿಂದ ಹಣ ಪಡೆಯಲು, ಹಣ ಹೂಡಲು, ಅಥವಾ ಯಾವುದೇ ಹಣಕಾಸಿಗೆ ಸಂಬಂಧಿಸಿದ ವ್ಯವಹಾರ ಮಾಡಲು ಬ್ಯಾಂಕಿನಲ್ಲಿ ಸಾಲಿನಲ್ಲಿ ನಿಲ್ಲದೇ ವಿಧಿಯಿಲ್ಲ ಅನ್ನುವಂತಿತ್ತು. ಆನ್ ಲೈನ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಎಟಿಎಮ್, ಫೋನ್ ಬ್ಯಾಂಕಿಂಗ್ ನಂತಹ ಸೌಲಭ್ಯಗಳು ಬಂದ ಮೇಲೆ ಯಾವುದೇ ಹೊತ್ತಿನಲ್ಲಿ, ಯಾವುದೇ ತಡೆಯಿಲ್ಲದೇ, ಕಿರಿಕಿರಿಯಿಲ್ಲದೇ ಹಣಕಾಸಿನ ವ್ಯವಹಾರಗಳನ್ನು ಮಾಡುವಂತಾಗಿದೆ. 
  • ಎಸ್.ಎಸ್.ಎಲ್.ಸಿ, ಪಿ.ಯು.ಸಿ  ಮುಂತಾದ ಪರೀಕ್ಷೆಗಳ ಫಲಿತಾಂಶ ಪ್ರಕಟವಾದಾಗ ದೂರದ ಹಳ್ಳಿಯ ವಿಧ್ಯಾರ್ಥಿಗಳು, ಪಾಲಕರು ಫಲಿತಾಂಶಕ್ಕಾಗಿ ಮರುದಿನದವರೆಗೂ ಕಾತರದಿಂದ ಕಾಯುವಂತಹ ದಿನಗಳಿದ್ದವು. ಇವತ್ತು ಮೊಬೈಲಿನಲ್ಲಿ ಒಂದು ಸಂದೇಶದ ಮೂಲಕ ಇಲ್ಲವೇ ಅಂತರ್ಜಾಲ ತಾಣದ ಮೂಲಕ ಫಲಿತಾಂಶ ಪ್ರಕಟಗೊಂಡ ಕೆಲವೇ ನಿಮಿಷಗಳಲ್ಲಿ ತಿಳಿಯುವಂತಹ ಬದಲಾವಣೆ ಸಾಧ್ಯವಾಗಿದೆ.
  • ರೈಲು, ಬಸ್ಸಿನಲ್ಲಿ ಮುಂಗಡ ಟಿಕೇಟ್ ಕಾಯ್ದಿರಿಸಲು ನಿಲ್ದಾಣಕ್ಕೆ ಹೋಗಿ, ಸಾಲಿನಲ್ಲಿ ನಿಂತು ಟಿಕೇಟ್ ಕೊಳ್ಳಬೇಕಾದ ದಿನಗಳಿಂದ ಮೊಬೈಲ್, ಕಂಪ್ಯೂಟರ್, ಇಲ್ಲವೇ ಮನೆಯ ಹತ್ತಿರದ ಕಾಯ್ದಿರಿಸುವ ಅಂಗಡಿಯೊಂದರಿಂದ ಟಿಕೇಟ್ ಕೊಳ್ಳುವ ಆರಾಮದಾಯಕ ಅನುಭವದತ್ತ ಸಾಗಿದ್ದೇವೆ.
  • ಇಂದಿನ ಚುನಾವಣೆಗಳಲ್ಲಿ ಮತಯಂತ್ರಗಳು ಬಳಕೆಗೆ ಬಂದ ನಂತರ ಚುನಾವಣೆಯಲ್ಲಿ ಸುಧಾರಣೆಗಳನ್ನು ಕಾಣಲು ಸಾಧ್ಯವಾಗಿದೆ. ಹಿಂದಿನಂತೆ ಮತದಾನದಲ್ಲಿ ಆಗುತ್ತಿದ್ದ ಮೋಸವನ್ನು ಕಡಿಮೆಗೊಳಿಸಲು ಸಾಧ್ಯವಾಗಿದೆ, ಎಣಿಕೆ ಕಾರ್ಯ ಸುಲಭವಾಗಿದೆ, ಫಲಿತಾಂಶವನ್ನು ಬೇಗನೆ ಜನರಿಗೆ ನೀಡಲು ಸಾಧ್ಯವಾಗಿದೆ.
ತಂತ್ರಜ್ಞಾನದ ಬಳಕೆಯೆನ್ನುವುದು ಮೇಲಿನ ಎಲ್ಲ ಉದಾಹರಣೆಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಆಡಳಿತ ಯಂತ್ರವನ್ನು ಜನರ ಮನೆ, ಮನದತ್ತ ಕೊಂಡೊಯ್ಯುವಲ್ಲಿ ಸಾಕಷ್ಟು ಯಶಸ್ವಿಯಾಗಿವೆ. ಈ ಪ್ರಕ್ರಿಯೆಯಲ್ಲಿ ಸೋರಿಕೆ ಕಡಿಮೆಯಾಗಿದೆ, ಜನರ ಬೇಡಿಕೆಗಳು ಸಾಕಷ್ಟು ವೇಗವಾಗಿ ಪೂರೈಕೆಯಾಗುತ್ತಿವೆ, ಆಡಳಿತ ಅನ್ನುವುದು ಜನರಿಂದ ಬೇರ್ಪಟ್ಟ ವ್ಯವಸ್ಥೆ ಅಂತಾಗದೇ ಜನರ ಸುತ್ತಲೇ, ಜನರಿಗಾಗಿಯೇ ಕಟ್ಟಿಕೊಳ್ಳಬೇಕಾದ ವ್ಯವಸ್ಥೆ ಮತ್ತು ತಂತ್ರಜ್ಞಾನದ ಸರಿಯಾದ ಬಳಕೆಯ ಮೂಲಕ ಆ ಗುರಿಯನ್ನು ಸಾಧಿಸಲುಬಹುದು ಅನ್ನುವುದು ಇತ್ತಿಚಿನ ದಿನಗಳಲ್ಲಿ ತಕ್ಕ ಮಟ್ಟಿಗೆ ಸಾಬೀತಾಗಿದೆ ಒಟ್ಟಾರೆಯಾಗಿ, ಆಡಳಿತದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಆಗುವ ಉಪಯೋಗಗಳನ್ನು ಪಟ್ಟಿ ಮಾಡುವುದಾದರೆ, ಮುಖ್ಯವಾದವು ಇಂತಿವೆ.
  • ದಿನದ ೨೪ ಗಂಟೆಗಳು ಸಹ ಜನರಿಗೆ ತಮಗೆ ಬೇಕಾಗಿರುವ ಮಾಹಿತಿ ಹಾಗೂ ಸೇವೆಗಳು ಬೆರಳ ತುದಿಯಲ್ಲಿ ಲಭ್ಯ
  • ಆಡಳಿತದಲ್ಲಿ ಚುರುಕುತನ
  • ಗುಣಮಟ್ಟದ ಸೇವೆ
  • ಹೆಚ್ಚಿನ ಪಾರದರ್ಶಕತೆ ಮತ್ತು ಉತ್ತರದಾಯಿತ್ವ
ತಂತ್ರಜ್ಞಾನವನ್ನು ಆಡಳಿತದಲ್ಲಿ ಸರಿಯಾಗಿ ತಂದಾಗ ಮೇಲಿನ ಉದಾಹರಣೆಯ ನಮ್ಮ ರೈತ ಮಲ್ಕಪ್ಪ ತನಗೆ ಬೇಕಾಗಿರುವ ಹಲವಾರು ಸೇವೆಗಳನ್ನು ಪಾರದರ್ಶಕವಾಗಿ, ಕಡಿಮೆ ಖರ್ಚಿನಲ್ಲಿ, ಕಡಿಮೆ ಸಮಯದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಉದಾ: ತನ್ನ ಹೊಲದ ಪಹಣಿಯನ್ನು ನಿಮಿಷಗಳಲ್ಲೇ ಪಡೆಯಬಲ್ಲ, ತನ್ನ ಬ್ಯಾಂಕಿನ ವ್ಯವಹಾರವನ್ನ ನಿಮಿಷಗಳಲ್ಲೇ ಮುಗಿಸಿಕೊಳ್ಳಬಲ್ಲ, ವಿದೇಶದಿಂದ ಅವನ ಮಗ ಕಳಿಸುವ ಹಣವನ್ನ ನಿಮಷಗಳಲ್ಲೇ ಪಡೆಯಬಲ್ಲ. ತನ್ನ ಬೆಳೆಗಳನ್ನು ಮಾರಲು ಇರುವ ಒಳ್ಳೆಯ ಬೆಲೆಯ ಬಗ್ಗೆ ಇದ್ದಲೇ ಮಾಹಿತಿ ಪಡೆಯಬಲ್ಲ. ಹೀಗೆ ತಂತ್ರಜ್ಞಾನ ಅವನ ಬದುಕನ್ನು ಸುಲಭವಾಗಿಸಬಲ್ಲದು.

ಪರಿಣಾಮಕಾರಿ ಆಡಳಿತ ನೀಡುವಲ್ಲಿ ಕನ್ನಡ ತಂತ್ರಜ್ಞಾನ ಹೇಗೆ ಸಹಾಯಕ:

ಆಡಳಿತವನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು ತಂತ್ರಜ್ಞಾನ ಹೇಗೆ ಮಹತ್ತರ ಪಾತ್ರವಹಿಸುತ್ತದೆ ಎನ್ನುವುದನ್ನು ತಕ್ಕ ಮಟ್ಟಿಗೆ ಅರಿತುಕೊಂಡ ಮೇಲೆ ಹುಟ್ಟುವ ಪ್ರಶ್ನೆ ಏನೆಂದರೆ “ ಇಷ್ಟೆಲ್ಲ ಅನುಕೂಲಗಳು ತಂತ್ರಜ್ಞಾನದಿಂದ ದೊರಕುತ್ತಿದ್ದರೂ ಯಾಕೆ ಆಡಳಿತ ಯಂತ್ರ ಅಂದುಕೊಂಡ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ, ಯಾಕೆ ಜನರು ತಂತ್ರಜ್ಞಾನ ಕೊಡಮಾಡಿರುವ ಅನುಕೂಲಗಳನ್ನು ವ್ಯಾಪಕವಾಗಿ ಬಳಸುತ್ತಿಲ್ಲ” ಅನ್ನುವುದು. ಇದಕ್ಕೆ ಉತ್ತರ ಅತ್ಯಂತ ಸುಲಭವಾಗಿದೆ. ಅದೇನೆಂದರೆ “ತಂತ್ರಜ್ಞಾನದ ಈ ಬದಲಾವಣೆಗಳು ಆಡಳಿತದಲ್ಲಿ ಜನರ ನುಡಿಯ ಪಾತ್ರವೇನು ಅನ್ನುವುದನ್ನು ಕಡೆಗಣಿಸಿರುವುದು” ಅಡಳಿತದಲ್ಲಿ ಜನರ ಭಾಷೆ ನೆಲೆಗೊಳ್ಳದೇ ಹೋದಲ್ಲಿ ಎಂತಹುದೇ ತಂತ್ರಜ್ಞಾನದ ಏಳಿಗೆ ಆಡಳಿತವನ್ನು ಜನರ ಬಳಿಗೆ ಪರಿಣಾಮಕಾರಿಯಾಗಿ ಕೊಂಡೊಯ್ಯಲಾರದು ಅನ್ನುವುದು ನಮ್ಮ ಸಮಾಜವನ್ನು ಕಂಡರೆ ಅತ್ಯಂತ ಸ್ಪಷ್ಟವಾಗುವುದು. ಆಡಳಿತಕ್ಕೆ ಚುರುಕು ತರಲೆಂದು ಅಳವಡಿಸಿಕೊಂಡ ಹೆಚ್ಚಿನ ತಂತ್ರಜ್ಞಾನದ ಪರಿಕರಗಳು ಇಂಗ್ಲಿಷಿನಲ್ಲಿದ್ದು, ಜನ ಸಾಮಾನ್ಯರ ನುಡಿಯಾದ ಕನ್ನಡದಿಂದ ದೂರವೇ ಉಳಿದಿವೆ. ಇಂಗ್ಲಿಷ್ ಅನ್ನುವ ತಡೆಗೋಡೆ ತಂತ್ರಜ್ಞಾನದ ಪೂರ್ತಿ ಪ್ರಯೋಜನವನ್ನು ಜನರಿಗೆ ತಲುಪಲಾರದಂತೆ ಮಾಡಿದೆ. ಭಾರತದ ಜನಸಂಖ್ಯೆಯಲ್ಲಿ ಇಂಗ್ಲಿಷ್ ಬಲ್ಲವರ ಸಂಖ್ಯೆ ಸುಮಾರು ೧೦ ಕೋಟಿ ಅನ್ನುತ್ತವೆ ಅಂಕಿಅಂಶಗಳು. ಅದರಲ್ಲಿ ಕರ್ನಾಟಕದ ಪಾಲು ೫% ಅಂದರೆ ಸುಮಾರು ೫೦ ಲಕ್ಷ ಅನ್ನಬಹುದು. ಇದರಲ್ಲೂ ಇಂಗ್ಲಿಷ್ ಅನ್ನು ಚೆನ್ನಾಗಿ ತಿಳಿದು, ಇಂಗ್ಲಿಷಿನಲ್ಲಿ ಬರುವ ಎಲ್ಲ ತಂತ್ರಜ್ಞಾನದ ಅನುಕೂಲಗಳನ್ನು ಚೆನ್ನಾಗಿ ಬಳಸಬಲ್ಲಂತವರು ಎಲ್ಲೋ ಕೆಲವರು ಮಾತ್ರ. ರಾಜ್ಯದ ೬ ಕೋಟಿ ಜನರಲ್ಲಿ ಒಂದು ೭-೮% ಜನರಿಗಷ್ಟೇ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಬಳಸುವ, ಅದರ ಲಾಭ ಪಡೆದುಕೊಳ್ಳಲು ಆಗುತ್ತಿದೆಯೇ ಹೊರತು ಉಳಿದ ೯೨% ಜನರು ಈ ಹೊಸ ವ್ಯವಸ್ಥೆಯ ಕಲ್ಪನೆಯಿಂದ ಆಚೆಯೇ ಉಳಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈ ಆಡಳಿತ ವ್ಯವಸ್ಥೆಯು ಜನರ ಭಾಷೆಯಾದ ಕನ್ನಡದಲ್ಲಿ ಇಲ್ಲದಿರುವುದೇ ಆಗಿದೆ.

ನನ್ನ ಗೆಳಯನೊಬ್ಬ ಕೊರಿಯಾ ದೇಶಕ್ಕೆ ಕೆಲಸದ ಮೇಲೆ ಹೋಗಿದ್ದ. ಒಂದು ದಿನ ಅವನು ಯಾವುದೋ ಜಾಗಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಸರಿಯಾದ ಮಾಹಿತಿ ಇರದ ಕಾರಣ ದಾರಿ ತಪ್ಪಿಸಿಕೊಂಡು ಬಿಟ್ಟಿದ್ದ, ಆಗ ದಾರಿಯಲ್ಲಿ ಸಿಕ್ಕ ಅಲ್ಲಿನ ಸ್ಥಳೀಯರೊಬ್ಬರಿಗೆ ತಾನು ಹೋಗಬೇಕಾಗಿರುವ ಜಾಗಕ್ಕೆ ದಾರಿ ಹೇಳಿ ಎಂದು ಕೇಳಿಕೊಂಡಾಗ, ಅವರು ತಮ್ಮಲ್ಲಿದ್ದ ಮೊಬೈಲ್ ನಲ್ಲಿ ಅಂತರ್ಜಾಲ ಬಳಸಿ ಅವನು ಹೋಗಬೇಕಾಗಿದ್ದ ದಾರಿಯನ್ನು ಹುಡುಕಿ, ಹೇಗೆ ಹೋಗಬೇಕೆಂಬ ನಕಾಶೆಯನ್ನು ತೋರಿಸಿದರು. ನನ್ನ ಸ್ನೇಹಿತ ಅವರಿಗೆ ಧನ್ಯವಾದ ಹೇಳಿ ಹೊರಟ, ಅವನು ಗಮನಿಸಿದ ಮುಖ್ಯ ಸಂಗತಿ ಅಲ್ಲಿಯ ಜನರು ಯಾರ ಸಹಾಯವಿಲ್ಲದೇ ತಂತ್ರಜ್ಞಾನದ ಬಳಕೆಯನ್ನು ಸುಲಭವಾಗಿ ಉಪಯೋಗಿಸಲು ಶಕ್ತವಾಗಿದ್ದರು, ಇದಕ್ಕೆ ಕಾರಣ ಆ ತಂತ್ರಜ್ಞಾನವು ಅವರ ನುಡಿಯಾದ ಕೋರಿಯನ್ ಭಾಷೆಯಲ್ಲಿತ್ತು ಎಂಬುದು. ನಮ್ಮ ನಾಡಿನಲ್ಲಿ ಇಂತಹದೊಂದು ಸಾಧ್ಯತೆಯನ್ನು ನಿರೀಕ್ಷಿಸಲೂ ಸಾಧ್ಯವೇ?

ಅದಕ್ಕೆ ಹೋಲುವಂತೆ ನನ್ನ ಮನೆಯಲ್ಲಾದ ಒಂದು ಉದಾಹರಣೆಯನ್ನು ನಿಮ್ಮ ಮುಂದಿಡುತ್ತೇನೆ. ನನ್ನ ಹತ್ತಿರದ ಸಂಬಂಧಿಯೊಬ್ಬರು ತಮ್ಮ ಮೊಬೈಲ್ ಫೋನಿನಲ್ಲಿ ಹಾಕುತ್ತಿದ್ದ ಕರೆನ್ಸಿ ಕರೆ ಮಾಡದಿದ್ದರೂ ಅದು ಹೇಗೊ ಖಾಲಿಯಾಗುತ್ತಿದೆ , ಸ್ವಲ್ಪ ನೋಡು ಎಂದು ನನ್ನ ಕೈಗಿತ್ತರು. ಅದನ್ನು ನೋಡಿದಾಗ ಕಾಣಿಸಿದ್ದು ಅಂದರೆ ಕಾಲರ್ ಟ್ಯೂನ್, ಜೋಕ್ಸ್ ಅದು ಇದು ಅಂತ ಇವರಿಗೆ ಕಳಿಸಿದ್ದ ಸಂದೇಶವಕ್ಕೆಲ್ಲ ಇವರು ತಿಳಿಯದೇ ಏನೋ ಒಂದು ಒತ್ತಿ ಅದಕ್ಕೆಲ್ಲ ಒಪ್ಪಿ ತಮ್ಮ ಹಣ ಕಳೆದುಕೊಳ್ಳುತ್ತಾ ಇದ್ದರು. ಇದನ್ನು ಸರಿ ಪಡಿಸಿಕೊಳ್ಳಲು ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿದರೆ ಅಲ್ಲಿ ಕನ್ನಡವಿಲ್ಲ. ಈ ರಗಳೆ ಬೇಡವೆಂದು ಮೊಬೈಲ್ ಬಳಕೆಯನ್ನೇ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದರು. ದೇವರು ಕೊಟ್ಟರೂ ಪೂಜಾರಿ ಕೊಡ ಅನ್ನುವಂತೆ ತಂತ್ರಜ್ಞಾನ ಅನುಕೂಲಗಳನ್ನು ತಂದರೂ ಇಂಗ್ಲಿಷ್ ಅನ್ನುವ ಭಾಷೆಯ ತಡೆಗೋಡೆ ಈ ಲಾಭ ಜನರಿಗೆ ದೊರಕದಂತೆ ಮಾಡಿದೆ ಅನ್ನಬಹುದು.
    
ಮೇಲಿನ ಎರಡು ಉದಾಹರಣೆಗಳು ಪರಿಣಾಮಕಾರಿ ಆಡಳಿತಕ್ಕೆ ಬಳಸುವ ತಂತ್ರಜ್ಞಾನದಲ್ಲಿ ಭಾಷೆಯ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿಸುತ್ತವೆ. ಇಂತಹ ಸಾವಿರಾರು ಪ್ರಕರಣಗಳು ನಮ್ಮ ಕಣ್ಣ ಮುಂದೆ ನಡೆಯುತ್ತಲೇ ಇರುತ್ತವೆ. ಇದಕ್ಕೆ ಪರಿಹಾರವೆಂದರೆ ಜನಸಾಮಾನ್ಯರಿಗೆ ಎಲ್ಲಾ ಸೇವೆ/ಸೌಲಭ್ಯಗಳು ಕನ್ನಡದಲ್ಲಿ ದೊರೆಯಬೇಕು. ಇದಕ್ಕಾಗಿ ತಂತ್ರಜ್ಞಾನವನ್ನು ಕನ್ನಡದಲ್ಲಿ ತರುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಹಾಗಿದ್ದರೆ ಇವತ್ತಿನ ಸ್ಥಿತಿಗತಿಯೇನು ಅನ್ನುವುದನ್ನು ಕೊಂಚ ನೋಡಬೇಕಿದೆ.

ನಮ್ಮ ಸರ್ಕಾರ ಆಡಳಿತವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ತಂತ್ರಜ್ಞಾನದ ಸಹಾಯದಿಂದ ಕೆಲವು ಯೋಜನೆಗಳನ್ನು ಹೊರತಂದಿದೆ. ಇದರಲ್ಲಿ ಪ್ರಮುಖವಾಗಿ ಭೂಮಿ, ನೆಮ್ಮದಿ, ಈ-ಪ್ರಕ್ಯೂರ್ಮೆಂಟ್, ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್ವರ್ಕ್, ಹ್ಯೂಮನ್ ರಿಸೋರ್ಸ್ ಮ್ಯಾನೇಜ್ ಮೆಂಟ್ ಸಿಸ್ಟಮ್, ಬ್ಯಾಂಗಲೋರ್-ಒನ್, ಕರ್ನಾಟಕ-ಒನ್ ಯೋಜನೆಗಳನ್ನು ಇ-ಆಡಳಿತಕ್ಕೆ ತಂದಿವೆ. ಆದರೆ ಇದರಿಂದ ನಮ್ಮ ರಾಜ್ಯದ ಎಷ್ಟು ಜನರಿಗೆ ಉಪಯೋಗವಾಗುತ್ತಿದೆ?
ಈ ಯೋಜನೆಗಳ ಪಟ್ಟಿಯಲ್ಲಿ ಭೂಮಿಯಂತಹ ಕೆಲವು ಯೋಜನೆಗಳು ಜನರಿಗೆ ಸೇವೆಯನ್ನು ಕನ್ನಡದಲ್ಲಿ ಒದಗಿಸುತ್ತಿವೆ. ಆದರೆ ಮೇಲೆ ಹೇಳಿರುವ ಹೆಚ್ಚಿನ ಯೋಜನೆಗಳ ಅಂತರ್ಜಾಲ ತಾಣಗಳಲ್ಲಿ ಅಥವಾ ಅದರ ತಂತ್ರಾಂಶಗಳಲ್ಲಿ ಕನ್ನಡದ ಬಳಕೆ  ಕಾಣಸಿಗುವುದಿಲ್ಲ.

ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳನ್ನು ಜನರಿಗೆ ತಲುಪಿಸಲೆಂದೇ ಇರುವ ಸರ್ಕಾರದ ಅಧಿಕೃತ ಅಂತರ್ಜಾಲ ತಾಣದಲ್ಲಿ ಕಣ್ಣಾಡಿಸಿದರೆ ಕನ್ನಡದಲ್ಲಿ ತೆರೆದುಕೊಳ್ಳಬೇಕಾಗಿದ್ದ ತಾಣ ಮೊದಲಿಗೆ ಇಂಗ್ಲೀಷಿನಲ್ಲಿ ತೆರೆದುಕೊಳ್ಳುತ್ತದೆ. ಅಲ್ಲಲ್ಲಿ ಕಣ್ಣೊರೆಸಲು ಎಂಬಂತೆ ಕನ್ನಡದಲ್ಲೂ ಚೂರು ಪಾರು ಮಾಹಿತಿ ಇದ್ದರೂ ಆ ಕನ್ನಡ ಪುಟಗಳಿಗೆ ಹೋಗುವುದು ಹೇಗೆ ಎಂದು ತಿಳಿಯಲು ಕೂಡ ನಿಮಗೆ ಇಂಗ್ಲಿಶ್ ಗೊತ್ತಿರಬೇಕು, ಪಡಿತರ ಚೀಟಿ ವಿತರಣೆ ಯೋಜನೆ, ಮುಖ್ಯಮಂತ್ರಿಗಳ ದಿನವಹಿ ಆಡಳಿತವನ್ನು ಜನರಿಗೆ ತೋರಿಸುವ ಯೋಜನೆ, ಶಿಕ್ಷಣ ಕ್ಷೇತ್ರದ ವಿವಿಧ ಇಲಾಖೆಗಳ ತಾಣಗಳು, ಉದ್ಯೋಗಾವಕಾಶಗಳನ್ನು ಒದಗಿಸುವ ಉದ್ಯೋಗ ಹಾಗೂ ತರಬೇತಿ ಕೇಂದ್ರದ ತಾಣ, ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಅಂತರ್ಜಾಲ ತಾಣ, ಪೋಲಿಸ್ ಇಲಾಖೆಯ ತಾಣ, ಕೇಂದ್ರ ಸರ್ಕಾರ ಅಧೀನದಲ್ಲಿರುವ ಅಂಚೆ ಕಛೇರಿ, ವಿಮೆ, ತೆರಿಗೆ ಪಾವತಿ, ರೈಲ್ವೆ ಇಲಾಖೆಯ ತಾಣ ಹೀಗೆ ಜನಸಾಮಾನ್ಯ ದಿನ ನಿತ್ಯ ಒಡನಾಡುವ ಎಲ್ಲ ಸರ್ಕಾರಿ ವ್ಯವಸ್ಥೆಗಳಲ್ಲೂ ಕನ್ನಡ ಸಲ್ಲದಿರುವ ನುಡಿಯಾಗಿದೆ. ಜನಸಾಮಾನ್ಯರು ಪ್ರತಿದಿನ ನೇರವಾಗಿ ಮುಖಾಮುಖಿಯಾಗುವ ಫೋನ್ ಬಿಲ್, ವಿಮೆ, ಅಂಚೆ, ಬ್ಯಾಂಕ್ ಅರ್ಜಿ, ಫಾರ್ಮ್, ಚೆಕ್ಕುಗಳು ಕನ್ನಡದಲ್ಲಿ ಸಿಗುತ್ತಿಲ್ಲ, ಗ್ರಾಹಕ ಸೇವಾ ಕೇಂದ್ರಗಳಲ್ಲಿ ಕನ್ನಡದ ಆಯ್ಕೆಗಳು ಸಿಗುವುದಿಲ್ಲ, ವಿವಿಧ ಬ್ಯಾಂಕ್ ಗಳ ಎಟಿಎಂಗಳಲ್ಲಿ ಕನ್ನಡದ ಆಯ್ಕೆ ಸಮರ್ಪಕವಾಗಿ ಇಲ್ಲ, ಹಾಗೆಯೇ ಸರ್ಕಾರಿ ಕಚೇರಿಯ ಒಳಗಡೆ ಬಳಕೆ ಮಾಡುವಂತಹ ಹೆಚ್ಚಿನ ತಂತ್ರಾಂಶಗಳೆಲ್ಲದರ ಇಂಟರ್ ಫೇಸ್ (ಉಪಯೋಗಿಸುವ ಪರದೆ) ಮತ್ತು ಅದರಿಂದ ಹೊರ ಬರುವ ಔಟ್ ಪುಟ್ (ಕಾರ್ಡು, ಅರ್ಜಿ, ಫಾರಂ) ಹೀಗೆ ಹೆಚ್ಚಿನೆಡೆ ಇಂಗ್ಲಿಷಿಗೆ ಮಣೆ. ಹೀಗಿರುವಾಗ ೯೨% ಕನ್ನಡವೊಂದನ್ನೇ ನೆಚ್ಚಿಕೊಂಡಿರುವ ಜನರಿಗೆ ಪರಿಣಾಮಕಾರಿ ಆಡಳಿತದ ಅನುಭವ ಸಿಗುವುದಾದರೂ ಹೇಗೆ?

ಇನ್ನೂ ಖಾಸಗಿ ವ್ಯವಸ್ಥೆಯನ್ನು ಗಮನಿಸಿದರೆ, ಗ್ರಾಹಕ ಸೇವೆಯಲ್ಲಿ ಭಾಷೆಯ ಮಹತ್ವವನ್ನೇ ಅರಿಯದೇ ಮಾಡಿಕೊಳ್ಳುತ್ತಿರುವ ತಪ್ಪುಗಳಿಂದ ಖಾಸಗಿ ವ್ಯವಸ್ಥೆಯಿಂದ ಪಡೆಯುವ ಸೇವೆಗಳ ವಿಷಯದಲ್ಲೂ ಜನಸಾಮಾನ್ಯರ ಅನುಭವ ಸರ್ಕಾರಿ ವ್ಯವಸ್ಥೆಗಿಂತ ಹೆಚ್ಚೇನು ಬೇರೆಯಾಗಿಲ್ಲ. ಜನರ ನುಡಿಯಲ್ಲಿ ತಮ್ಮೆಲ್ಲ ಸೇವೆಗಳನ್ನು ಕೊಡಿ ಎಂದು ಇವರಿಗೆ ಹೇಳಬೇಕಿದ್ದ ಸರ್ಕಾರವೂ ಈ ಬಗ್ಗೆ ಹೆಚ್ಚು ಗಮನ ಹರಿಸದೇ ಇರುವುದರಿಂದ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಭಾಷೆಯ ತಡೆಗೋಡೆ ದಾಟಿ ಸಾಮಾನ್ಯ ಮನುಷ್ಯನನ್ನು ತಲುಪುವುದು ಮರಿಚೀಕೆಯೇ ಸರಿ ಅಂಬಂತಾಗಿದೆ. ಆದರೆ ಪಕ್ಕದ ತಮಿಳುನಾಡು, ಮಹಾರಾಷ್ಟ್ರದಂತಹ ರಾಜ್ಯಗಳು ಈ ನಿಟ್ಟಿನಲ್ಲಿ ನಮಗಿಂತ ಮುಂದಿದ್ದಾರೆ. ಜಪಾನ್, ಜರ್ಮನಿ, ಕೊರಿಯಾ, ಫ್ರಾನ್ಸ್ ನಂತಹ ಮುಂದುವರಿದ ದೇಶಗಳು ಈ ನಿಟ್ಟಿನಲ್ಲಿ ನಮಗೆ ಆದರ್ಶಪ್ರಾಯರಾಗುವಂತಿವೆ.

ತಂತ್ರಜ್ಞಾನದ ಫಲ ನಮ್ಮ ಭಾಷೆಯಲ್ಲೇ ನಮ್ಮ ಜನರಿಗೆ ದೊರಕದಿದ್ದರೆ ಇವುಗಳಿಂದ ಆಗುವ ಪ್ರಯೋಜನ ಶೂನ್ಯ. ಹಾಗಾಗಿ ಸರ್ಕಾರ ತನ್ನ ಕಾರ್ಯಯೋಜನೆಯಲ್ಲಿ ಸಮಗ್ರವಾದ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ. ಜನರಿಗೆ ನಾವು ಉಪಕಾರ ಮಾಡುತ್ತಿದ್ದೇವೆ ಅನ್ನೋ ಮನೋಭಾವ ಹೋಗಿ ಜನರ ಉಪಯೋಗಕ್ಕಾಗಿ ನಮ್ಮನ್ನು ಇಲ್ಲಿ ಕೂರಿಸಲಾಗಿದೆ ಅನ್ನುವ ಭಾವನೆ ನಮ್ಮ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಬರಬೇಕಾಗಿದೆ.

ಇದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಆಡಳಿತವನ್ನು ಜನರಿಗೆ ಮುಟ್ಟಿಸಲು ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ತಂತ್ರಾಂಶಗಳನ್ನು ಬಳಸುವುದರ ಮೂಲಕ ಗಣಕೀಕರಣಗೊಳಿಸಿ ಕನ್ನಡಿಗರಿಗೆ ಕೊಡುವ ಎಲ್ಲಾ ಸೇವೆಗಳನ್ನು ಕನ್ನಡದಲ್ಲಿ ಸಿಗುವಂತೆ ಮಾಡಬೇಕು. ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಎಲ್ಲ ಅಂತರ್ಜಾಲ ತಾಣಗಳು ಕನ್ನಡದಲ್ಲಿ ದೊರಕುವಂತೆ ಮಾಡಬೇಕು. ಇದಲ್ಲದೇ ಇಂತಹುದೇ ಹತ್ತಾರು ಸೇವೆಗಳನ್ನು ಕೊಡುತ್ತಿರುವ ಖಾಸಗಿ ಸಂಸ್ಥೆಗಳು ಸಹ ಇಂತಹ ತಂತ್ರಜ್ಞಾನದ ಅನುಕೂಲಗಳನ್ನು ಜನರಿಗೆ ಕಲ್ಪಿಸುವಂತೆ ನೀತಿ ನಿಯಮಗಳನ್ನು ಸರ್ಕಾರ ರೂಪಿಸಬೇಕು ಹಾಗೂ ಕನ್ನಡದಲ್ಲಿ ಸೇವೆ ನೀಡದಿರುವುದು ಗ್ರಾಹಕ ಹಕ್ಕುಗಳ ಉಲ್ಲಂಘನೆಯಂತಹ ಕಾನೂನು ಜಾರಿಗೆ ತರಬೇಕು. ಆಡಳಿತದ ಪ್ರತಿಯೊಂದು ಹಂತದಲ್ಲೂ, ಜನರ ಜೊತೆ ವ್ಯವಹರಿಸುವಾಗ, ಪತ್ರ ವ್ಯವಹಾರ ನಡೆಸುವಾಗ, ತಂತ್ರಾಂಶಗಳು ಹಾಗೂ ಅಂತರ್ಜಾಲದಲ್ಲಿ ಕನ್ನಡವನ್ನು ಬಳಸುವ ಬಗ್ಗೆ ಒಂದು ಭಾಷಾನೀತಿಯನ್ನು ಜಾರಿಗೆ ತರಬೇಕು. ಜನರಿಗೆ ಈ ತಂತ್ರಜ್ಞಾನದ ಉಪಯೋಗವನ್ನು ತಿಳಿಸಲು ಕೈಪಿಡಿಗಳನ್ನು, ಸಹಾಯ ಸಾಮಾಗ್ರಿಗಳನ್ನು, ಪ್ರತಿ ಹಳ್ಳಿಗೊಂದರಂತೆ ಕಂಪ್ಯೂಟರ್ ಕೇಂದ್ರ ತೆರೆದು ಶಿಕ್ಷಣ ನೀಡಬೇಕು ಹಾಗೂ ಸಹಾಯಕರನ್ನು ನೇಮಿಸಬೇಕು. ಇವುಗಳ ಜೊತೆಗೆ ನಮ್ಮ ಜನರೂ ಸಹ ತಾವು ಉಪಯೋಗಿಸುವ ಎಲ್ಲಾ ಸೇವೆಗಳನ್ನು ಕನ್ನಡದಲ್ಲೇ ನೀಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಆಗ್ರಹಿಸಬೇಕು.

ಈ ನಾಡಿನ ಆಡಳಿತ ಭಾಷೆಯಾಗಿರುವ ಕನ್ನಡವನ್ನ ಸಂಪೂರ್ಣವಾಗಿ ಆಡಳಿತದಲ್ಲಿ ಹಾಗೂ ತಂತ್ರಜ್ಞಾನದಲ್ಲಿ ಜಾರಿಗೆ ತರದೇ ಹೋದರೆ ಪರಿಣಾಮಕಾರಿಯಾದ ಆಡಳಿತವನ್ನು ಸರ್ಕರಕ್ಕೆ ನೀಡಲು ಸಾಧ್ಯವಿಲ್ಲ ಅನ್ನೋ ಮಾತನ್ನ ಮತ್ತೊಮ್ಮೆ ನೆನಪಿಸಲು ಇಚ್ಚಿಸುತ್ತೇನೆ.

ಮಂಗಳವಾರ, ಡಿಸೆಂಬರ್ 6, 2011

ಸಮ್ಮೇಳನದಲ್ಲಿ ಭೇಟಿಯಾಗೋಣ...

ಗೆಳೆಯರೇ, ಇದೇ ಡಿಸೆಂಬರ್ ೯, ೧೦ ಹಾಗೂ ೧೧ನೇ ತಾರೀಖಿನಂದು ಗಂಗಾವತಿಯಲ್ಲಿ ನಡೆಯುತ್ತಿರುವ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂದಿನ ಅವಶ್ಯಕತೆಯಾಗಿರುವ ತಂತ್ರಜ್ಞಾನ ಹಾಗೂ ಅದರಲ್ಲಿ ಕನ್ನಡದ ಇಂದಿನ ಸ್ಥಿತಿ, ಬಳಕೆ ಹಾಗೂ ಮುಂದಿರುವ ದಾರಿಯ ಬಗ್ಗೆ “ಆಧುನಿಕ ಜಗತ್ತು ಮತ್ತು ಕನ್ನಡ” ಎನ್ನುವ ವಿಚಾರ ಘೋಷ್ಠಿಯೊಂದನ್ನು ೧೦ನೇ ಡಿಸೆಂಬರ್ ಸಂಜೆ ೪.೩೦ ಕ್ಕೆ ಏರ್ಪಡಿಸಲಾಗಿದೆ.

ಈ ಗೋಷ್ಠಿಯಲ್ಲಿ ನಾನು “ಪರಿಣಾಮಕಾರಿ ಆಡಳಿತಕ್ಕಾಗಿ ಕನ್ನಡದಲ್ಲಿ ತಂತ್ರಜ್ಞಾನ” ಅನ್ನುವ ವಿಷಯದ ಕುರಿತು ಮಾತನಾಡುತ್ತಿದ್ದೇನೆ. ಇದರಲ್ಲಿ ಮುಖ್ಯವಾಗಿ ಆಡಳಿತದ ಅಂದರೆ ಏನು? ಪರಿಣಾಮಕಾರಿ ಆಡಳಿತ ಗುಣ ಲಕ್ಷಣಗಳೇನು? ಆಡಳಿತವನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ತಂತ್ರಜ್ಞಾನ ಪಾತ್ರವೇನು? ಹಾಗೂ ಆಡಳಿತವನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ಭಾಷೆಯ ಪ್ರಾಮುಖ್ಯತೆ ಹಾಗೂ ಇದರಿಂದ ನಮ್ಮ ಸಮಾಜದಲ್ಲಿ ತರಬಹುದಾದ ಬದಲಾವಣೆಗಳ ಬಗ್ಗೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ನನ್ನ ಜೊತೆಗೆ ಗೆಳೆಯರಾದ ಓಂಶಿವಪ್ರಕಾಶ್ ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಇಂದು - ಮುಂದು ಅನ್ನೋ ವಿಷಯದ ಕುರಿತು ಮಾತನಾಡಲಿದ್ದಾರೆ, ಶ್ರೀನಿಧಿ ಟಿ.ಜಿ ಅವರು ಆಧುನಿಕ ಜಗತ್ತಿನ ಬೇಡಿಕೆಗಳು ಮತ್ತು ಕನ್ನಡ ತಂತ್ರಜ್ಞಾನ ಅನ್ನೋ ವಿಷಯದ ಕುರಿತು ತನ್ನ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.
ನೀವು ಅಲ್ಲಿಗೆ ಬಂದಿದ್ದರೆ ಖಂಡಿತವಾಗಿ ಈ ಗೋಷ್ಠಿಯಲ್ಲಿ ಭಾಗವಹಿಸಿ ಹಾಗು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

ಗುರುವಾರ, ನವೆಂಬರ್ 17, 2011

ನಮ್ಮ ಸರ್ಕಾರಕ್ಕಿರುವ ಕನ್ನಡ ಕಾಳಜಿ ಎಷ್ಟು???

ಸುಮಾರು ೩.೫ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಹೊಸತರಲ್ಲಿ ಬಿಜೆಪಿ ಸರ್ಕಾರ ತಾನು ರೈತ ಪರ, ಕನ್ನಡ ಪರ, ನಾಡು-ನುಡಿಗೆ ಧಕ್ಕೆಯಾದಲ್ಲಿ ಅದರ ಪರವಾಗಿ ತಾನೆಂದಿಗೂ ಮುಂದೆ ಅನ್ನುವ ರೀತಿಯಲ್ಲಿ ಹೇಳೀಕೆಗಳನ್ನು ನೀಡಿತ್ತು, ಹೊಸ ಸರ್ಕಾರದ ಈ ಮಾತನ್ನ ಜನರು ಸಹ ನಂಬಿದ್ದರು. ಆದರೆ ಅದಾದ ಸ್ವಲ್ಪ ದಿನದಲ್ಲಿಯೇ ಅದು ತನ್ನ ನಿಜವಾದ ಬಣ್ಣವನ್ನು ಬಯಲು ಮಾಡುತ್ತ ಹೊರಟಿತು. ಸರ್ಕಾರ ಮೊದಲಿಗೆ ರೈತರ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಇದಾದ ನಂತರ ಹಲವಾರು ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ತನ್ನ ಬೇಳೆಕಾಳು ಬೇಯಿಸಿಕೊಳ್ಳಲು ಭಾಷಾ ಅಲ್ಪಸಂಖ್ಯಾತರನ್ನು ಓಲೈಸುತ್ತಾ ತನ್ನ ವೋಟ್ ಬ್ಯಾಂಕ್ ರಾಜಕಾರಣವನ್ನು ತೋರಿಸಿತು, ಕನ್ನಡ ಪರ ಸಂಘಟನೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಿತು, ಹೀಗೆ ಹಲವಾರು ವಿಷಯಗಳಲ್ಲಿ ಜನವಿರೋಧಿತನ ತೋರಿಸುತ್ತಲೇ ಬಂದಿರುವ ಬಿಜೆಪಿ ಸರ್ಕಾರ ನಮ್ಮನ್ನು ಆಳುತ್ತಿರುವ ಸರ್ಕಾರ ನಜಕ್ಕೂ ನಮ್ಮದೇ? ಅನ್ನುವ ಪ್ರಶ್ನೆಯನ್ನು ನಮ್ಮಲ್ಲಿ ಹುಟ್ಟು ಹಾಕಿದೆ.

ಇದಕ್ಕೆ ಇತ್ತೀಚಿನ ಉದಾಹರಣೆಯಾಗಿ ನಮ್ಮ ಕಣ್ಣ ಮುಂದಿರುವ ಬೆಳಗಾವಿಯ ಘಟನೆ. ಕರ್ನಾಟಕ ರಾಜ್ಯೋತ್ಸವದ ದಿನದಂದು ನಮ್ಮ ರಾಜ್ಯದ ಬೆಳಗಾವಿ ಜೆಲ್ಲೆಯ ಮಹಾಪೌರರಾಗಿರುವ ಶ್ರೀಮತಿ ಮಂದಾ ಬಾಳೆಕುಂದ್ರಿ ಅವರು ಎಂಇಎಸ್ ನಂತಹ ಪುಂಡ ಸಂಘಟನೆ ಜೊತೆ ಸೇರಿ ನಾಡವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಇದರ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದ ನಂತರವೂ ಸಹ ಸರ್ಕಾರ ಇನ್ನು ತನಿಖೆ ನಡೆಸುತ್ತಲೇ ಇದೆ. ಆದರೆ ಇದನ್ನ ವಿರೋಧಿಸಿ ಕರವೇಯಂತಹ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಇಳಿದರೆ ತಕ್ಷಣವೇ ಬಂಧಿಸಿ ಹಲವಾರು ಆಪಾದನೆಗಳನ್ನು ಹಾಕಿ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತದೆ. ಇದು ನಮ್ಮ ಸರ್ಕಾರದ ಕನ್ನಡ ಪರ ನೀತಿ. ಕೇವಲ ಇದೊಂದೆ ಅಲ್ಲ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ಅಧಿಕಾರಕ್ಕೆ ಬರಲು ನಮ್ಮ ಬಿಜೆಪಿ ಪಕ್ಷ ಎಂಇಎಸ್ ನಂತಹ ಸಂಘಟನೆ ಜೊತೆ ಕೈಜೋಡಿಸಿ ಅಧಿಕಾರಕ್ಕೆ ಬರುತ್ತದೆ. ಒಂದು ಕಡೆಯಲ್ಲಿ ಎಂಇಎಸ್ ಅನ್ನು ವಿರೋಧಿಸುವ ನಾಟಕವಾಡುತ್ತ ಇನ್ನೊಂದು ಕಡೆ ಸಾಮರಸ್ಯದಿಂದ ಬದುಕುತ್ತಿರುವ ಕನ್ನಡ ಹಾಗೂ ಮರಾಠಿಗರ ನಡುವೆ ಹುಳಿ ಹಿಂಡುತ್ತಿರುವ ಎಂಇಎಸ್ ನಂತಹ ಸಂಘಟನೆಯೊಂದಿಗೆ ಜೊತೆ ಕೈಜೋಡಿಸುವ ಬಿಜೆಪಿ ಪಕ್ಷ ಯಾವ ನೈತಿಕತೆಯನ್ನು ಉಳಿಸಿಕೊಂಡಿದೆ? ಕೆಲವು ಸಾವಿರ ಮರಾಠಿ ಮೂಲಭೂತವಾಗಳ ಓಟಿಗಾಗಿ ಕೋಟ್ಯಾಂತರ ಕನ್ನಡಿಗರ ಭಾವನೆಗೆ ಬೆಂಕಿ ಇಡುತ್ತಿರುವ ಬಿಜೆಪಿ ಪಕ್ಷಕ್ಕೆ ಕನ್ನಡಿಗರೆಂದರೆ ಅಸಡ್ಡೆಯೇ?

ಮಹಾರಾಷ್ಟ್ರದಲ್ಲಿ “ಕರ್ನಾಟಕ ರಾಜ್ಯ” ಫಲಕ ಹಾಕಿ:
ಹೀಗೆ ಹೇಳಿದವರು ಬೇರಾರು ಅಲ್ಲ ಸ್ವತ: ಬೆಳಗಾವಿಯನ್ನು ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿರುವ ಬಿಜೆಪಿ ಪಕ್ಷದ ಸಂಸದ ಶ್ರೀ ಸುರೇಶ್ ಅಂಗಡಿಯವರು. ಇಂದಿನ ಕನ್ನಡ ಪ್ರಭದಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಕನ್ನಡ ಪರ ಸಂಘಟನೆಯೊಂದು ಬೆಳಗಾವಿ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿರು ಮಹಾರಾಷ್ಟ್ರ ರಾಜ್ಯ ಅನ್ನುವ ಫಲಕವನ್ನು ತಗೆಸಿ ಎಂದು ಜಿಲ್ಲಾಧಿಕಾರಿಗೆ ಮನವಿ ಕೊಡಲು ಹೋದಾಗ ಅಲ್ಲಿದ್ದ ನಮ್ಮ ಸಂಸದರಿಂದ ಬಂದ ಉತ್ತರ
ನಿಮಗೆ ಧೈರ್ಯವಿದ್ದರೆ ಮಹಾರಾಷ್ಟ್ರಕ್ಕೆ ಹೋಗಿ “ಕರ್ನಾಟಕ ರಾಜ್ಯ” ಎಂಬ ನಾಮ ಫಲಕ ಹಾಕಿರಿ. ಕನ್ನಡಿಗರು ಇಲ್ಲಿ ಗಲಾಟೆ ಮಾಡಿದರೆ ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ತೊಂದರೆ ಆಗುತ್ತಿದೆ. ಮಹಾನಗರ ಪಾಲಿಕೆ ಸೂಪರ್ ಸೀಡ್ ಮಾಡಿದರೆ ಅವರು ಕೋರ್ಟ್ ಗೆ ಹೋಗುತ್ತಾರೆ

ಹಾಗಾದರೆ ನಮ್ಮ ಮಾನ್ಯ ಸಂಸದರಿಗೆ ಎಂಇಎಸ್ ಮಾಡಿದ್ದು ತಪ್ಪಾಗಿ ಕಂಡಿಲ್ಲವೇ? “ಕರ್ನಾಟಕ ರಾಜ್ಯ” ಅನ್ನೋ ನಾಮ ಫಲಕ ಕರ್ನಾಟಕದಲ್ಲಿ ಬಿಟ್ಟು ಮಹಾರಾಷ್ಟ್ರದಲ್ಲಿ ಹಾಕಿದರೆ ಆಗುವ ಉಪಯೋಗವೇನು? ನಮ್ಮ ರಾಜ್ಯದಲ್ಲಿ ಬೇರೆ ರಾಜ್ಯದ ಹೆಸರಿನ ನಾಮ ಫಲಕಗಳಿದ್ದರೆ ಅದನ್ನು ತಗೆಯದೇ ಬಿಡಬೇಕೆ? ಅವರು ಕೋರ್ಟ್ ಗೆ ಹೋಗುತ್ತಾರೆ ಅನ್ನೋ ಕಾರಣಕ್ಕೆ ನಾವು ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದೇ? ಈ ರೀತಿಯ ಉದ್ಧಟತನದ ಕೆಲಸಗಳು ಪದೇ ಪದೇ ಬೆಳಗಾವಿಯಲ್ಲಿ ಆಗುತ್ತಿದ್ದರು ಸಹ ನಮ್ಮ ಸರ್ಕಾರ ಏನು ಕ್ರಮ ಕೈಗೊಂಡಿದೆ? ನಮ್ಮ ಕನ್ನಡ ಪರ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲು ತೋರಿಸುವ ತರಾತುರಿಯನ್ನು ಸರ್ಕಾರ ಈ ನಾಡವಿರೋಧಿಗಳ ಮೇಲೆ ಕ್ರಮಕೈಗೊಳ್ಳಲು ಯಾಕೆ ಮುಂದಾಗುತ್ತಿಲ್ಲ?

ಹುಸಿ ರಾಷ್ಟ್ರೀಯತೆಯ ಸೋಗಿನಲ್ಲಿ ಜನರನ್ನು ಭಾಷೆಯ ಹೆಸರಿನಲ್ಲಿ ಒಡೆದು ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ಈ ರಾಷ್ಟ್ರೀಯ ಪಕ್ಷಗಳಿಂದ ನಮ್ಮ ನಾಡಿಗಾಗುತ್ತಿರುವ ಅವಮಾನ, ನಮ್ಮ ಜನರಿಗೆ ಆಗುತ್ತಿರುವ ನೋವು, ಹಿಂಸೆಗೆ ಕಡಿವಾಣ ಬೀಳಬೇಕಾದಲ್ಲಿ ನಮ್ಮ ನಾಡು-ನುಡಿ-ನಾಡಿಗರನ್ನು ರಕ್ಷಿಸುವಂತಹ ಒಂದು ಪ್ರಾದೇಶಿಕ ಪಕ್ಷ ನಿಜವಾಗಲೂ ಬೇಕು ಅನ್ನುವ ನಮ್ಮ ಆಸೆ ಇಂತಹ ಘಟನೆಗಳಿಂದ ಗಟ್ಟಿಯಾಗುತ್ತಲೇ ಹೋಗುತ್ತಿದೆ.

ಬುಧವಾರ, ನವೆಂಬರ್ 2, 2011

ಮೆಟ್ರೋದಲ್ಲಿ ಸಿಗದ ಉದ್ಯೋಗ – ಕನ್ನಡಿಗರಿಗೆ ಏನ್ ಬಂತು ಉಪಯೋಗ??

ಕನ್ನಡದ ನನ್ನೆಲ್ಲ ಬಂಧುಗಳಿಗೆ ಐವತ್ತಾರನೇ ಕರ್ನಾಟಕ ರಾಜ್ಯೋತ್ಸವದ ಸವಿ ಹಾರೈಕೆಗಳು. ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಕವಿವಾಣಿಯಂತೆ ನಡೆದುಕೊಳ್ಳಬೇಕಾಗಿರುವ ಸಂದರ್ಭ ಹಿಂದೆಂದಿಗಿಂತ ಹೆಚ್ಚು ಪ್ರಸ್ತುತವೆನ್ನಿಸುತ್ತದೆ. ೩ ಪ್ರಾಂತಗಳು ಹಾಗೂ ೧೬ ವಿವಿಧ ಸಂಸ್ಥಾನಗಳಲ್ಲಿ ಹಂಚಿ ಹೋಗಿತ್ತು ನಮ್ಮ ಕನ್ನಡ ನಾಡು, ನಮ್ಮ ನಾಡಿನ ಹಿರಿಯರ ಅವಿರತ ಶ್ರಮ, ತ್ಯಾಗ, ಬಲಿದಾನದ ಫಲವಾಗಿ ಏಕೀಕೃತ ಕರ್ನಾಟಕ ಸ್ಥಾಪಿತವಾಯಿತು. ನಮ್ಮ ಹಿರಿಯರು ಕಂಡ ಸುವರ್ಣ ಕರ್ನಾಟಕದ ಕನಸು ಇನ್ನೂ ನನಸಾಗಿದೆಯೇ? ಖಂಡಿತವಾಗಿಯೂ ಇಲ್ಲಾ. ಈ ಕನಸು ಈಡೇರಬೇಕಾದರೆ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಬೇಕಾಗಿದೆ ಹಾಗೂ ಅದು ಅಗತ್ಯವೂ ಕೂಡ.

ಕಳೆದೆರೆಡು ದಶಕದಲ್ಲಿ ಜಾಗತೀಕರಣದ ಪ್ರಭಾವದಿಂದಾಗಿ ನಮ್ಮ ನಾಡಿಗೆ ಹಲವಾರು ಬೃಹತ್ ಉದ್ಯಮಗಳು ಬಂದವು, ಅದರ ಜೊತೆ ಜೊತೆಗೆ ಹೊರ ರಾಜ್ಯಗಳಿಂದ ವಲಸೆ ಬರುವವರ ಸಂಖ್ಯೆ ಸಹ ಜಾಸ್ತಿಯಾಗುತ್ತಾ ಬಂತು ಹಾಗೂ ಇಂದು ಸಹ ಅದು ಅನಿಯಮಿತವಾಗಿ ನಡೆಯುತ್ತಲೇ ಇದೆ. ಇದರಿಂದಾಗಿ ನಮ್ಮ ನಾಡಿನ ಜನರಿಗೆ ಕೆಲಸಗಳು ದೊರಕದಂತಾಗಿವೆ. ಆದರೆ ಇಂತಹ ಒಂದು ಅನಿಯಮಿತ ವಲಸೆಯಿಂದಾಗಿ ಒಂದು ರಾಜ್ಯದ ಮೇಲೆ ಬೀರಬಹುದಾದ ಪರಿಣಾಮ ಮಾತ್ರ ಭಯಂಕರ. ಇದಕ್ಕೆ ಉದಾಹರಣೆಯಂದರೆ ವಾಣಿಜ್ಯ ನಗರಿ ಮುಂಬಯಿ. ಇಂದು ಅಲ್ಲಿ ವಲಸೆಯಿಂದಾಗಿ ತಮ್ಮ ತಾಯಿನುಡಿಯ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಜನರಿಗೆ ಇಂದು ಇದರ ಪರಿಣಾಮ ಅರ್ಥವಾಗುತ್ತಿದೆ. ಇಂದು ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ಮಹಾರಾಷ್ಟ್ರದಲ್ಲಿ ಅಗಿರುವಂತಹ ಅನಾಹುತ ಆಗಿಲ್ಲ. ಆದರೆ ಸುಮ್ಮನೆ ಇದ್ದರೆ ಇಂತಹ ಅನಾಹುತ ಕಟ್ಟಿಟ್ಟ ಬುತ್ತಿ.

ಮಣ್ಣಿನ ಮಕ್ಕಳಿಗೆ ಹೆಚ್ಚಿನ ಒತ್ತು ಸಿಗಲಿ:


ವಲಸಿಯಿಂದ ಆಗಬಹುದಾದ ಪರಿಣಾಮಕ್ಕೆ ಇತ್ತೀಚಿನ ಉದಾಹರಣೆಯಾಗಿ “ನಮ್ಮ ಮೆಟ್ರೋ”ದಲ್ಲಿ ಆಗಿರುವ ಈ ಪ್ರಕರಣವೇ ಸಾಕ್ಷಿ. ಜನರ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಈ ಮನುಷ್ಯ ಮಾತನಾಡುವ ಧಾಟಿ ನೋಡಿ.... “ಇದು ಹಿಂದುಸ್ಥಾನ, ಹಿಂದುಸ್ಥಾನದ ಭಾಷೆ ಹಿಂದಿಯಾಗಿದೆ, ಅದು ಗೊತ್ತಿದ್ದ ಮೇಲೆ ಕನ್ನಡ ಯಾಕೆ ಕಲಿಯಬೇಕು? ಕನ್ನಡ ಕಲಿಯಲು ನನಗೆ ಇಷ್ಟವಿಲ್ಲ ಯಾಕಂದರೆ ಕನ್ನಡ ಚೆನ್ನಾಗಿಲ್ಲ” ಅಂತ ಹಲ್ಲು ಕಿರಿಯುತ್ತಾ ಹೇಳುತ್ತಿದ್ದಾನೆ. ಇಂತವರಿಂದ ಸಾಮಾನ್ಯ ಜನರಿಗೆ ಯಾವ ತರಹದ ಮಾಹಿತಿ ಸಿಗಲು ಸಾಧ್ಯ? ಯಾವ ರೀತಿಯಿಂದ ಇವನು ಜನರನ್ನು ಸುರಕ್ಷಿತವಾಗಿರಿ ಅಂತ ಹೇಳುತ್ತಾನೆ? ವಲಸೆಯಿಂದ ಆಗಬಹುದಾದ ಪರಿಣಾಮದ ಮೊದಲನೆ ಹೆಜ್ಜೆ ಇದು. ಇದು ಕೇವಲ ಇವನೊಬ್ಬನ ಮಾತಲ್ಲ. ಕೂಲಿ ಮಾಡುವ ಕಾರ್ಮಿಕನಿಂದ ಹಿಡಿದು ದೊಡ್ಡ ದೊಡ್ಡ ಹುದ್ದೆಗಳಲ್ಲಿರುವ ಹೊರ ರಾಜ್ಯದ ಜನರ ಪ್ರತೀಕವಾಗಿ ಇವನು ಕಾಣುತ್ತಾನೆ.

ಬೆಂಗಳೂರಿನ ಹೆಮ್ಮೆಯಾಗಿರುವ ನಮ್ಮ ಮೆಟ್ರೋ ಸಲುವಾಗಿ ಎಷ್ಟೋ ಕುಟುಂಬಗಳು ಇಂದು ಬೀದಿ ಪಾಲಾಗಿವೆ? ದಶಕಗಳಿಂದ ಬಾಳುತ್ತಿದ್ದ ಜನರನ್ನ ಒಕ್ಕಲೆಬ್ಬಿಸಿ ಬೃಹತ್ ಕಟ್ಟಡಗಳನ್ನು ಕಟ್ಟಿರುವ ನಮ್ಮ ಮೆಟ್ರೋ ಸಂಸ್ಥೆಯವರು ಎಷ್ಟು ಕುಟುಂಬಗಳಿಗೆ ಉದ್ಯೋಗಗಳನ್ನು ನೀಡಿದ್ದಾರೆ? ಇಂತವರಿಗೆ ಕೆಲಸ ಕೊಡಬೇಕಾಗಿರುವುದು ಸಂಸ್ಥೆಯ ಕರ್ತವ್ಯವಲ್ಲವೇ? ಒಂದು ಗಾರ್ಡ್ ಕೆಲಸಕ್ಕೂ ಸಹ ನಮ್ಮ ಕನ್ನಡಿಗರು ಅರ್ಹರಲ್ಲವೇ? ನಮ್ಮ ಮೆಟ್ರೋನಲ್ಲಿರುವ ಸುಮಾರು ೮೪೦ ಕೆಲಸಗಳಲ್ಲಿ ಕೇವಲ ೩೨೦ ಹುದ್ದೆಗಳಿಗೆ ಮಾತ್ರ ಕನ್ನಡಿಗರನ್ನ ನೇಮಿಸಲಾಗಿದೆ, ಉಳಿದದ್ದೆಲ್ಲ ಪರಭಾಷಿಕರ ಪಾಲು. ಇದು ಯಾವ ಸೀಮೆಯ ನ್ಯಾಯ? ನಿಜಕ್ಕೂ ನಮ್ಮ ಸರ್ಕಾರಕ್ಕೆ ರಾಜ್ಯದಲ್ಲಿ ಆಗುತ್ತಿರುವ ವಿದ್ಯಮಾನಗಳ ಬಗ್ಗೆ ಗಮನ ಹರಿಸಲು ಸಮಯವಿದೆಯೋ ಇಲ್ಲವೇ ಗೊತ್ತಾಗುತಿಲ್ಲ. ತ್ರಿಭಾಷೆಯ ಮೂಲಕ ಭಾರತದ ಒಗ್ಗೂಡಿಸುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಮೆಟ್ರೋ ಸಂಸ್ಥೆ ನಿಜಕ್ಕೂ ನಮ್ಮದೇ ಅನ್ನುವ ಅನುಮಾನ ಕಾಡಲು ಶುರುವಾಗಿದೆ.

ಸುಮಾರು ದಶಕಗಳಿಂದ ಜಾರಿಗೆ ಬರದೆ ಧೂಳು ಹಿಡಿದು ಕೂತಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತನ್ನಿ ಎಂದು ಪ್ರತಿ ಬಾರಿಯೂ ಬೀದಿಗಿಳಿಯುವ ಕನ್ನಡ ಪರ ಸಂಘಟನೆಗಳ ಆಗ್ರಹಕ್ಕೆ ಸರ್ಕಾರ ಕೊಡುತ್ತಿರುವ ಕಿಮ್ಮತಾದರೂ ಏನು? ಒಂದು ಬಾಗಿಲು ಕಾಯುವ ಕೆಲಸಕ್ಕೂ ಹೊರಗಿನವರನ್ನು ತಂದು ತುಂಬಿದರೆ ಇಲ್ಲಿನ ಮಕ್ಕಳಿಗೆ ಇಲ್ಲಿ ಕೆಲಸ ಸಿಗದೇ ಬೇರೆಲ್ಲಿ ಸಾಧ್ಯ? ಇದಕೆಲ್ಲ ಪರಿಹಾರವೆಂದರೆ ಮೊದಲನೆಯದಾಗಿ ಸರೋಜಿನಿ ಮಹಿಷಿ ವರದಿ ಜಾರಿಗೆ ಬರಬೇಕು. ಮಣ್ಣಿನ ಮಕ್ಕಳಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎನ್ನುವ ನಿಯಮವನ್ನು ಸರ್ಕಾರ ಜಾರಿಗೆ ತರಬೇಕು. ಈಗಾಗಲೇ ಇಂತಹ ವ್ಯವಸ್ಥೆಯನ್ನು ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಒರಿಸ್ಸಾ ಹಾಗೂ ಗುರಜಾತ ದಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಇದರ ಜೊತೆಜೊತೆಗೆ ಉದ್ಯಮಗಳಿಗೆ ತಮ್ಮ ಹೊಲ-ಮನೆಗಳನ್ನು ಕಳೆದುಕೊಳ್ಳುವ ಕುಟುಂಬಗಳಿಗೆ ಸರಿಯಾದ ಪರಿಹಾರದ ಜೊತೆಗೆ ಸ್ಥಾಪಿಸಲಾಗುವ ಉದ್ಯಮದಲ್ಲಿ ಅವರ ವಿಧ್ಯಾರ್ಹತೆಗೆ ತಕ್ಕಂತೆ ಕೆಲಸಗಳನ್ನು ನೀಡಬೇಕು. ರಾಜ್ಯದಲ್ಲಿ ಹೊಸದಾಗಿ ಶುರುವಾಗುವ ಯಾವುದೇ ಉದ್ಯಮವಿದ್ದರೂ ಮೊದಲಿಗ ಇಲ್ಲಿಯ ಜನರಿಗೆ ಕೆಲಸಗಳನ್ನು ನೀಡಬೇಕು ಎಂದು ಸರ್ಕಾರ ಒಪ್ಪಂದ ಮಾಡಿಕೊಳ್ಳಬೇಕು ಹಾಗೂ ಅನಿಯಮಿತವಾಗಿ ಆಗುತ್ತಿರುವ ವಲಸೆಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು.

ಇದೆಲ್ಲಾ ಆಗಬೇಕೆಂದರೆ ನಮ್ಮ ರಾಜಕೀಯ ಪಕ್ಷಗಳಿಗೆ ನಾಡಿಗೆ ಒಳಿತನ್ನು ಮಾಡುವ ಇಚ್ಛಾಶಕ್ತಿ ಇರಬೇಕು. ಆದರೆ ನಿಜಕ್ಕೂ ಈ ಕಾಳಜಿ ಇಂದು ಅಸ್ತಿತ್ವದಲ್ಲಿರುವ ಯಾವುದೇ ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಖಂಡಿತಾ ಇಲ್ಲ. ಕನ್ನಡ, ಕನ್ನಡಿಗ ಹಾಗೂ ಕರ್ನಾಟಕಗಳ ಬಗ್ಗೆ ಕಾಳಜಿ ಇರುವ ಒಂದು ನಿಜವಾದ ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ ಬರಬೇಕು. ಕನ್ನಡಿಗರ ಏಳಿಗೆಯನ್ನೇ ಮೂಲಮಂತ್ರವನ್ನಾಗಿ ಇಟ್ಟುಕೊಂಡು ಕೆಲಸ ಮಾಡುವ ಪಕ್ಷ ನಮಗೆ ಬೇಕು. ಆಗ ಮಾತ್ರ ನಮ್ಮ ಹಿರಿಯರು ನಮಗಾಗಿ ಮಾಡಿರುವ ತ್ಯಾಗ, ಬಲಿದಾನ ಹೋರಾಟ ಸಾರ್ಥಕವಾದಂತೆ. ಏನಂತೀರಿ ಗೆಳೆಯರೇ?